Aranyaka Parva: Chapter 275

ಆರಣ್ಯಕ ಪರ್ವ: ದ್ರೌಪದೀಹರಣ ಪರ್ವ

೨೭೫

“ನಾನು ಇಂದು ನಾಯಿನೆಕ್ಕಿದ ಹವಿಸ್ಸನಂತಿರುವ ನಿನ್ನನ್ನು ಭೋಗಿಸಲಾರೆ” ಎಂದು ಹೇಳಿ ರಾಮನು ಸೀತೆಯನ್ನು ತ್ಯಜಿಸಿದ್ದುದು (೧-೧೩). ದುಃಖಿತಳಾದ ಸೀತೆಯು ಪತಿತಳಾಗಿದ್ದರೆ ತನ್ನ ಪ್ರಾಣವು ಹೋಗಲೆಂದು ಹೇಳಲು ವಾಯು, ಅಗ್ನಿ, ವರುಣ, ಬ್ರಹ್ಮ ಮತ್ತು ದಶರಥರು ಕಾಣಿಸಿಕೊಂಡು ಸೀತೆಯ ಪವಿತ್ರತೆಯನ್ನು ತಿಸಿದುದು (೧೪-೩೫). ರಾಮನು ಸೀತೆಯನ್ನು ಸೇರಿ ಪುಷ್ಪಕ ವಿಮಾನದಲ್ಲಿ ಅಯೋಧ್ಯೆಗೆ ಹೋಗಿ ಅಭಿಷಿಕ್ತನಾದುದು (೩೬-೬೯).

03275001 ಮಾರ್ಕಂಡೇಯ ಉವಾಚ|

03275001a ಸ ಹತ್ವಾ ರಾವಣಂ ಕ್ಷುದ್ರಂ ರಾಕ್ಷಸೇಂದ್ರಂ ಸುರದ್ವಿಷಂ|

03275001c ಬಭೂವ ಹೃಷ್ಟಃ ಸಸುಹೃದ್ರಾಮಃ ಸೌಮಿತ್ರಿಣಾ ಸಹ||

ಮಾರ್ಕಂಡೇಯನು ಹೇಳಿದನು: “ಆ ಸುರದ್ವಿಷ, ರಾಕ್ಷಸೇಂದ್ರ ಕ್ಷುದ್ರ ರಾವಣನನ್ನು ಕೊಂದು ಸೌಮಿತ್ರಿಯ ಸಹಿತ ರಾಮನು ತುಂಬಾ ಸಂತೋಷಗೊಂಡನು.

03275002a ತತೋ ಹತೇ ದಶಗ್ರೀವೇ ದೇವಾಃ ಸರ್ಷಿಪುರೋಗಮಾಃ|

03275002c ಆಶೀರ್ಭಿರ್ಜಯಯುಕ್ತಾಭಿರಾನರ್ಚುಸ್ತಂ ಮಹಾಭುಜಂ||

ದಶಗ್ರೀವನು ಹತನಾಗಲು, ಋಷಿಗಳನ್ನು ಮುಂದಿಟ್ಟುಕೊಂಡು ದೇವತೆಗಳು ಆ ಮಹಾಭುಜನಿಗೆ ಆಶೀರ್ವಚನಗಳಿಂದ, ಜಯಯುಕ್ತಿಗಳಿಂದ ಅರ್ಚಿಸಿದರು.

03275003a ರಾಮಂ ಕಮಲಪತ್ರಾಕ್ಷಂ ತುಷ್ಟುವುಃ ಸರ್ವದೇವತಾಃ|

03275003c ಗಂಧರ್ವಾಃ ಪುಷ್ಪವರ್ಷೈಶ್ಚ ವಾಗ್ಭಿಶ್ಚ ತ್ರಿದಶಾಲಯಾಃ||

ಕಮಲಪತ್ರಾಕ್ಷ ರಾಮನನ್ನು ಎಲ್ಲ ದೇವತೆಗಳೂ ಹೊಗಳಿದರು. ಹಾಗೆಯೇ ಗಂಧರ್ವರು ಮತ್ತು ತ್ರಿದಶಾಲಯದವರು ಪುಷ್ಪವೃಷ್ಟಿಗಳಿಂದ ಮತ್ತು ವಾಚನಗಳಿಂದ ಹೊಗಳಿದರು.

03275004a ಪೂಜಯಿತ್ವಾ ಯಥಾ ರಾಮಂ ಪ್ರತಿಜಗ್ಮುರ್ಯಥಾಗತಂ|

03275004c ತನ್ಮಹೋತ್ಸವಸಂಕಾಶಮಾಸೀದಾಕಾಶಮಚ್ಯುತ||

ಹೀಗೆ ರಾಮನನ್ನು ಪೂಜಿಸಿ ಅವರು ಬಂದಂತೆ ಹೊರಟುಹೋದರು. ಅಚ್ಯುತ! ಆ ಆಕಾಶವು ಒಂದು ಮಹಾ ಉತ್ಸವದಂತೆ ತೋರುತ್ತಿತ್ತು.

03275005a ತತೋ ಹತ್ವಾ ದಶಗ್ರೀವಂ ಲಂಕಾಂ ರಾಮೋ ಮಹಾಯಶಾಃ|

03275005c ವಿಭೀಷಣಾಯ ಪ್ರದದೌ ಪ್ರಭುಃ ಪರಪುರಂಜಯಃ||

ಪರಪುರಂಜಯ! ದಶಗ್ರೀವನನ್ನು ಕೊಂದು ಮಹಾಯಶ ಪ್ರಭು ರಾಮನು ಲಂಕೆಯನ್ನು ವಿಭೀಷಣನಿಗಿತ್ತನು.

03275006a ತತಃ ಸೀತಾಂ ಪುರಸ್ಕೃತ್ಯ ವಿಭೀಷಣಪುರಸ್ಕೃತಾಂ|

03275006c ಅವಿಂಧ್ಯೋ ನಾಮ ಸುಪ್ರಜ್ಞೋ ವೃದ್ಧಾಮಾತ್ಯೋ ವಿನಿರ್ಯಯೌ||

03275007a ಉವಾಚ ಚ ಮಹಾತ್ಮಾನಂ ಕಾಕುತ್ಸ್ಥಂ ದೈನ್ಯಮಾಸ್ಥಿತಂ|

03275007c ಪ್ರತೀಚ್ಚ ದೇವೀಂ ಸದ್ವೃತ್ತಾಂಧ ಮಹಾತ್ಮಂ ಜಾನಕೀಮಿತಿ||

ಆಗ ಸೀತೆಯನ್ನು ಮುಂದಿರಿಸಿಕೊಂಡು, ವಿಭೀಷಣನನ್ನೂ ಮುಂದಿರಿಸಿಕೊಂಡು, ಅವಿಂಧ್ಯ ಎಂಬ ಹೆಸರಿನ ಸುಪ್ರಜ್ಞ, ವೃದ್ಧ ಅಮಾತ್ಯನು ಆಗಮಿಸಿ ದೀನನಾಗಿ ನಿಂತಿದ್ದ ಮಹಾತ್ಮ ಕಾಕುತ್ಸ್ಥನಿಗೆ “ಮಹಾತ್ಮ! ಸದಾಚಾರಿಯಾದ ಈ ದೇವಿ ಜಾನಕಿಯನ್ನು ಸ್ವೀಕರಿಸು” ಎಂದು ಹೇಳಿದನು.

03275008a ಏತಚ್ಚ್ರುತ್ವಾ ವಚಸ್ತಸ್ಮಾದವತೀರ್ಯ ರಥೋತ್ತಮಾತ್|

03275008c ಬಾಷ್ಪೇಣಾಪಿಹಿತಾಂ ಸೀತಾಂ ದದರ್ಶೇಕ್ಷ್ವಾಕುನಂದನಃ||

ಈ ಮಾತುಗಳನ್ನು ಕೇಳಿ ಇಕ್ಷ್ವಾಕುನಂದನನು ಉತ್ತಮ ರಥದಿಂದಿಳಿದು, ಕಣ್ಣೀರಿನಲ್ಲಿ ಅಡಗಿದ್ದ ಸೀತೆಯನ್ನು ನೋಡಿದನು.

03275009a ತಾಂ ದೃಷ್ಟ್ವಾ ಚಾರುಸರ್ವಾಂಗೀಂ ಯಾನಸ್ಥಾಂ ಶೋಕಕರ್ಶಿತಾಂ|

03275009c ಮಲೋಪಚಿತಸರ್ವಾಂಗೀಂ ಜಟಿಲಾಂ ಕೃಷ್ಣವಾಸಸಂ||

03275010a ಉವಾಚ ರಾಮೋ ವೈದೇಹೀಂ ಪರಾಮರ್ಶವಿಶಂಕಿತಃ|

03275010c ಗಚ್ಚ ವೈದೇಹಿ ಮುಕ್ತಾ ತ್ವಂ ಯತ್ಕಾರ್ಯಂ ತನ್ಮಯಾ ಕೃತಂ||

ಆ ಚಾರುಸರ್ವಾಂಗೀ, ಶೋಕಕರ್ಶಿತಳಾಗಿ ನಿಂತಿದ್ದ, ಸರ್ವಾಂಗಗಳಲ್ಲಿಯೂ ಕೊಳೆಯಿಂದ ಕೂಡಿದ್ದ, ಜಡೆ ಗಂಟುಕಟ್ಟಿ, ಕಪ್ಪುಬಣ್ಣದ ವಸ್ತ್ರವನ್ನುಟ್ಟಿದ್ದ ಅವಳನ್ನು ನೋಡಿ ರಾಮನು ವೈದೇಹಿಯು ಪರರಿಂದ ಸ್ಪರ್ಶಿತಳಾಗಿದ್ದಾಳೆಂದು ಶಂಕಿಸಿ ಹೇಳಿದನು: “ವೈದೇಹೀ! ಹೋಗು! ನೀನು ಮುಕ್ತಳಾಗಿದ್ದೀಯೆ! ನಾನು ಏನು ಮಾಡಬೇಕಾಗಿತ್ತೋ ಅದನ್ನು ಮಾಡಿದ್ದೇನೆ.

03275011a ಮಾಮಾಸಾದ್ಯ ಪತಿಂ ಭದ್ರೇ ನ ತ್ವಂ ರಾಕ್ಷಸವೇಶ್ಮನಿ|

03275011c ಜರಾಂ ವ್ರಜೇಥಾ ಇತಿ ಮೇ ನಿಹತೋಽಸೌ ನಿಶಾಚರಃ||

ಭದ್ರೇ! ನನ್ನನ್ನು ಪತಿಯನ್ನಾಗಿ ಪಡೆದ ನೀನು ರಾಕ್ಷಸನ ಮನೆಯಲ್ಲಿ ಮುದುಕಿಯಾಗಬಾರದು ಎಂದು ನಾನು ಆ ನಿಶಾಚರನನ್ನು ಕೊಂದೆ.

03275012a ಕಥಂ ಹ್ಯಸ್ಮದ್ವಿಧೋ ಜಾತು ಜಾನನ್ಧರ್ಮವಿನಿಶ್ಚಯಂ|

03275012c ಪರಹಸ್ತಗತಾಂ ನಾರೀಂ ಮುಹೂರ್ತಮಪಿ ಧಾರಯೇತ್||

ಧರ್ಮವಿನಿಶ್ಚಯವನ್ನು ತಿಳಿದಿರುವ ನನ್ನಂಥವನು ಹೇಗೆ ತಾನೇ, ಇನ್ನೊಬ್ಬನ ಕೈಗೆ ಹೋದ ನಾರಿಯನ್ನು ಮುಹೂರ್ತ ಸಮಯಕ್ಕಾದರೂ ಸ್ವೀಕರಿಸಿಯಾನು?

03275013a ಸುವೃತ್ತಾಮಸುವೃತ್ತಾಂ ವಾಪ್ಯಹಂ ತ್ವಾಮದ್ಯ ಮೈಥಿಲಿ|

03275013c ನೋತ್ಸಹೇ ಪರಿಭೋಗಾಯ ಶ್ವಾವಲೀಢಂ ಹವಿರ್ಯಥಾ||

ಮೈಥಿಲಿ! ನೀನು ಸುವೃತ್ತಳಾಗಿದ್ದೀಯೋ ಅಸುವೃತ್ತಳಾಗಿದ್ದೀಯೋ ನಾನು ಇಂದು ನಾಯಿನೆಕ್ಕಿದ ಹವಿಸ್ಸಿನಂತಿರುವ ನಿನ್ನನ್ನು ಭೋಗಿಸಲಾರೆ.”

03275014a ತತಃ ಸಾ ಸಹಸಾ ಬಾಲಾ ತಚ್ಚ್ರುತ್ವಾ ದಾರುಣಂ ವಚಃ|

03275014c ಪಪಾತ ದೇವೀ ವ್ಯಥಿತಾ ನಿಕೃತ್ತಾ ಕದಲೀ ಯಥಾ||

ಆಗ ಆ ದಾರುಣ ಮಾತನ್ನು ಕೇಳಿ ಆ ದೇವಿ ಬಾಲೆಯು ವ್ಯಥಿತಳಾಗಿ ತಕ್ಷಣವೇ ಕತ್ತರಿಸಿದ ಬಾಳೆಯಮರದಂತೆ ಕೆಳಗುರುಳಿ ಬಿದ್ದಳು.

03275015a ಯೋ ಹ್ಯಸ್ಯಾ ಹರ್ಷಸಂಭೂತೋ ಮುಖರಾಗಸ್ತದಾಭವತ್|

03275015c ಕ್ಷಣೇನ ಸ ಪುನರ್ಭ್ರಷ್ಟೋ ನಿಃಶ್ವಾಸಾದಿವ ದರ್ಪಣೇ||

ಹರ್ಷದಿಂದ ಹುಟ್ಟಿದ್ದ ಮುಖದಲ್ಲಿನ ಕೆಂಪು ಒಂದೇ ಕ್ಷಣದಲ್ಲಿ ಕನ್ನಡಿಯ ಮೇಲೆ ಊದಿದಾಗ ಆಗುವಂತೆ ಮುಸುಕಿ ನಷ್ಟವಾಯಿತು.

03275016a ತತಸ್ತೇ ಹರಯಃ ಸರ್ವೇ ತಚ್ಚ್ರುತ್ವಾ ರಾಮಭಾಷಿತಂ|

03275016c ಗತಾಸುಕಲ್ಪಾ ನಿಶ್ಚೇಷ್ಟಾ ಬಭೂವುಃ ಸಹಲಕ್ಷ್ಮಣಾಃ||

ರಾಮನಾಡಿದುದನ್ನು ಕೇಳಿದ ಎಲ್ಲ ಕಪಿಗಳೂ, ಲಕ್ಷ್ಮಣನೂ ಸೇರಿ, ಸ್ಥಬ್ಧರಾಗಿ ನಿಂತುಬಿಟ್ಟರು. ಸತ್ತವರಂತಾದರು.

03275017a ತತೋ ದೇವೋ ವಿಶುದ್ಧಾತ್ಮಾ ವಿಮಾನೇನ ಚತುರ್ಮುಖಃ|

03275017c ಪಿತಾಮಹೋ ಜಗತ್ಸ್ರಷ್ಟಾ ದರ್ಶಯಾಮಾಸ ರಾಘವಂ||

03275018a ಶಕ್ರಶ್ಚಾಗ್ನಿಶ್ಚ ವಾಯುಶ್ಚ ಯಮೋ ವರುಣ ಏವ ಚ|

03275018c ಯಕ್ಷಾಧಿಪಶ್ಚ ಭಗವಾಂಸ್ತಥಾ ಸಪ್ತರ್ಷಯೋಽಮಲಾಃ||

ಆಗ ದೇವ, ವಿಶುದ್ಧಾತ್ಮ, ಚತುರ್ಮುಖ, ಜಗತ್ವಷ್ಟಾ ಬ್ರಹ್ಮನು, ಹಾಗೆಯೇ, ಶಕ್ರ, ಅಗ್ನಿ, ವಾಯು, ಯಮ, ವರುಣ, ಭಗವಾನ್ ಯಕ್ಷಾಧಿಪತಿ, ಮತ್ತು ಅಮಲ ಸಪ್ತರ್ಷಿಗಳೂ ವಿಮಾನದಲ್ಲಿ ರಾಘವನಿಗೆ ಕಾಣಿಸಿಕೊಂಡರು.

03275019a ರಾಜಾ ದಶರಥಶ್ಚೈವ ದಿವ್ಯಭಾಸ್ವರಮೂರ್ತಿಮಾನ್|

03275019c ವಿಮಾನೇನ ಮಹಾರ್ಹೇಣ ಹಂಸಯುಕ್ತೇನ ಭಾಸ್ವತಾ||

ದಿವ್ಯವಾದ ಮೂರ್ತಿಯಂತೆ ಹೊಳೆಯುತ್ತಿದ್ದ ರಾಜಾ ದಶರಥನೂ ಕೂಡ ಹಂಸಗಳನ್ನು ಕಟ್ಟಿದ್ದ, ಮಹಾಬೆಲೆಯ, ಹೊಳೆಯುತ್ತಿದ್ದ, ವಿಮಾನದಲ್ಲಿ ಕಾಣಿಸಿಕೊಂಡನು.

03275020a ತತೋಽಂತರಿಕ್ಷಂ ತತ್ಸರ್ವಂ ದೇವಗಂಧರ್ವಸಂಕುಲಂ|

03275020c ಶುಶುಭೇ ತಾರಕಾಚಿತ್ರಂ ಶರದೀವ ನಭಸ್ತಲಂ||

ಆಗ ಅಂತರಿಕ್ಷವು ಆ ಎಲ್ಲ ದೇವಗಂಧರ್ವಸಂಕುಲಗಳಿಂದ ಕೂಡಿ ಶರದೃತುವಿನಲ್ಲಿ ತಾರೆಗಳಿಂದ ಕೂಡಿದ ನಭಸ್ಥಲದಂತೆ ಶೋಭಿಸಿತು.

03275021a ತತ ಉತ್ಥಾಯ ವೈದೇಹಿ ತೇಷಾಂ ಮಧ್ಯೇ ಯಶಸ್ವಿನೀ|

03275021c ಉವಾಚ ವಾಕ್ಯಂ ಕಲ್ಯಾಣೀ ರಾಮಂ ಪೃಥುಲವಕ್ಷಸಂ||

ಆಗ ಅವರ ಮಧ್ಯೆ ಯಶಸ್ವಿನೀ ಕಲ್ಯಾಣೀ ವೈದೇಹಿಯು ಎದ್ದು ವಿಶಾಲ ವಕ್ಷಸ ರಾಮನಿಗೆ ಈ ಮಾತುಗಳನ್ನಾಡಿದಳು.

03275022a ರಾಜಪುತ್ರ ನ ತೇ ಕೋಪಂ ಕರೋಮಿ ವಿದಿತಾ ಹಿ ಮೇ|

03275022c ಗತಿಃ ಸ್ತ್ರೀಣಾಂ ನರಾಣಾಂ ಚ ಶೃಣು ಚೇದಂ ವಚೋ ಮಮ||

“ರಾಜಪುತ್ರ! ನಾನು ನಿನ್ನ ಮೇಲೆ ಕೋಪಮಾಡುತ್ತಿಲ್ಲ! ಸ್ತ್ರೀ ಮತ್ತು ಪುರುಷರ ಗತಿಯು ನನಗೆ ತಿಳಿದೇ‌ಇದೆ. ನನ್ನ ಈ ಮಾತುಗಳನ್ನು ಕೇಳು.

03275023a ಅಂತಶ್ಚರತಿ ಭೂತಾನಾಂ ಮಾತರಿಶ್ವಾ ಸದಾಗತಿಃ|

03275023c ಸ ಮೇ ವಿಮುಂಚತು ಪ್ರಾಣಾನ್ಯದಿ ಪಾಪಂ ಚರಾಮ್ಯಹಂ||

ನಾನೇದರೂ ಪಾಪವನ್ನು ಮಾಡಿದ್ದರೆ ಇರುವವುಗಳ ಒಳಗೆ ಚರಿಸುತ್ತಿರುವ, ಸದಾ ಚಂಚಲವಾಗಿ ಚಲಿಸುತ್ತಲೇ ಇರುವ ಪ್ರಾಣವು ನನ್ನನ್ನು ಈಗಲೇ ತೊರೆಯಲಿ!

03275024a ಅಗ್ನಿರಾಪಸ್ತಥಾಕಾಶಂ ಪೃಥಿವೀ ವಾಯುರೇವ ಚ|

03275024c ವಿಮುಂಚಂತು ಮಮ ಪ್ರಾಣಾನ್ಯದಿ ಪಾಪಂ ಚರಾಮ್ಯಹಂ||

ನಾನೇದರೂ ಪಾಪವನ್ನು ಮಾಡಿದ್ದರೆ, ಅಗ್ನಿ, ಆಪ, ಆಕಾಶ, ಪೃಥ್ವಿ ಮತ್ತು ವಾಯುವೂ ಕೂಡ ನನ್ನ ಪ್ರಾಣವನ್ನು ತೊರೆಯಲಿ!”

03275025a ತತೋಽಂತರಿಕ್ಷೇ ವಾಗಾಸೀತ್ಸರ್ವಾ ವಿಶ್ರಾವಯನ್ದಿಶಃ|

03275025c ಪುಣ್ಯಾ ಸಂಹರ್ಷಣೀ ತೇಷಾಂ ವಾನರಾಣಾಂ ಮಹಾತ್ಮನಾಂ||

ಆಗ ಅಂತರಿಕ್ಷದಲ್ಲಿ ಎಲ್ಲ ದಿಕ್ಕುಗಳಲ್ಲಿಯೂ ಮೊಳಗುತ್ತಾ, ಪುಣ್ಯವೂ ಆ ಮಹಾತ್ಮ ವಾನರರಿಗೆ ಸಂಹರ್ಷವನ್ನುತರುವ ಒಂದು ವಾಣಿಯಾಯಿತು.

03275026 ವಾಯುರುವಾಚ|

03275026a ಭೋ ಭೋ ರಾಘವ ಸತ್ಯಂ ವೈ ವಾಯುರಸ್ಮಿ ಸದಾಗತಿಃ|

03275026c ಅಪಾಪಾ ಮೈಥಿಲೀ ರಾಜನ್ಸಂಗಚ್ಚ ಸಹ ಭಾರ್ಯಯಾ||

ವಾಯುವು ಹೇಳಿದನು: “ಭೋ ಭೋ ರಾಘವ! ಇದು ಸತ್ಯ! ನಾನು ಸದಾಗತಿಯಲ್ಲಿರುವ ವಾಯು! ಮೈಥಿಲಿಯು ಅಪಾಪೀ! ರಾಜನ್! ಭಾರ್ಯೆಯೊಂದಿಗೆ ಕೂಡು.”

03275027 ಅಗ್ನಿರುವಾಚ|

03275027a ಅಹಮಂತಃಶರೀರಸ್ಥೋ ಭೂತಾನಾಂ ರಘುನಂದನ|

03275027c ಸುಸೂಕ್ಷ್ಮಮಪಿ ಕಾಕುತ್ಸ್ಥ ಮೈಥಿಲೀ ನಾಪರಾಧ್ಯತಿ||

ಅಗ್ನಿಯು ಹೇಳಿದನು: “ರಘುನಂದನ! ಇರುವವುಗಳ ಶರೀರದೊಳಗಿರುವವನು ನಾನು!  ಕಾಕುತ್ಸ್ಥ! ಮೈಥಿಲಿಯು ಅತಿ ಸೂಕ್ಷವಾದ ಅಪರಾಧವನ್ನೂ ಎಸಗಿಲ್ಲ!”

03275028 ವರುಣ ಉವಾಚ|

03275028a ರಸಾ ವೈ ಮತ್ಪ್ರಸೂತಾ ಹಿ ಭೂತದೇಹೇಷು ರಾಘವ|

03275028c ಅಹಂ ವೈ ತ್ವಾಂ ಪ್ರಬ್ರವೀಮಿ ಮೈಥಿಲೀ ಪ್ರತಿಗೃಹ್ಯತಾಂ||

ವರುಣನು ಹೇಳಿದನು: “ರಾಘವ! ಇರುವವುಗಳ ದೇಹಗಳಲ್ಲಿರುವ ರಸವು ನನ್ನಿಂದಲೇ ಬಂದಿರುವುದು. ನಾನು ನಿನಗೆ ಹೇಳುತ್ತಿದ್ದೇನೆ. ಮೈಥಿಲಿಯನ್ನು ಹಿಂದೆ ತೆಗೆದುಕೋ!”

03275029 ಬ್ರಹ್ಮೋವಾಚ|

03275029a ಪುತ್ರ ನೈತದಿಹಾಶ್ಚರ್ಯಂ ತ್ವಯಿ ರಾಜರ್ಷಿಧರ್ಮಿಣಿ|

03275029c ಸಾಧೋ ಸದ್ವೃತ್ತಮಾರ್ಗಸ್ಥೇ ಶೃಣು ಚೇದಂ ವಚೋ ಮಮ||

ಬ್ರಹ್ಮನು ಹೇಳಿದನು: “ಪುತ್ರ! ಸಾಧು! ರಾಜರ್ಷಿಯೂ ಧರ್ಮಿಣಿಯೂ, ಒಳ್ಳೆಯ ಮಾರ್ಗದಲ್ಲಿ ನಡೆಯುವವನೂ ಆದ ನಿನ್ನಿಂದ ಇದು ಆಶ್ಚರ್ಯವೇನಲ್ಲ! ಆದರೂ ನನ್ನ ಈ ಮಾತುಗಳನ್ನು ಕೇಳು.

03275030a ಶತ್ರುರೇಷ ತ್ವಯಾ ವೀರ ದೇವಗಂಧರ್ವಭೋಗಿನಾಂ|

03275030c ಯಕ್ಷಾಣಾಂ ದಾನವಾನಾಂ ಚ ಮಹರ್ಷೀಣಾಂ ಚ ಪಾತಿತಃ||

ವೀರ! ನೀನು ದೇವ, ಗಂಧರ್ವ, ನಾಗ, ಯಕ್ಷ, ದಾನವ ಮತ್ತು ಮಹರ್ಷಿಗಳ ಶತ್ರುವನ್ನು ಕೆಳಗುರುಳಿಸಿದ್ದೀಯೆ.

03275031a ಅವಧ್ಯಃ ಸರ್ವಭೂತಾನಾಂ ಮತ್ಪ್ರಸಾದಾತ್ಪುರಾಭವತ್|

03275031c ಕಸ್ಮಾಚ್ಚಿತ್ಕಾರಣಾತ್ಪಾಪಃ ಕಂ ಚಿತ್ಕಾಲಮುಪೇಕ್ಷಿತಃ||

ಹಿಂದೆ ನನ್ನ ಪ್ರಸಾದದಿಂದ ಸರ್ವಭೂತಗಳಿಗೂ ಅವಧ್ಯನಾಗಿರುವ ಈ ಪಾಪಕರ್ಮಿಯನ್ನು ಯಾವುದೋ ಕಾರಣದಿಂದ ಕೆಲ ಕಾಲ ಉಪೇಕ್ಷಿಸಿಯಾಗಿತ್ತು.

03275032a ವಧಾರ್ಥಮಾತ್ಮನಸ್ತೇನ ಹೃತಾ ಸೀತಾ ದುರಾತ್ಮನಾ|

03275032c ನಲಕೂಬರಶಾಪೇನ ರಕ್ಷಾ ಚಾಸ್ಯಾಃ ಕೃತಾ ಮಯಾ||

ಅನಂತರ ಆ ದುರಾತ್ಮನು ತನ್ನದೇ ವಧೆಗೆ ಕಾರಣಳಾದ ಸೀತೆಯನ್ನು ಅಪಹರಿಸಿದನು. ಅವಳನ್ನು ನಾನು ನಲಕೂಬರನ ಶಾಪದಿಂದ ರಕ್ಷಿಸಿದೆನು.

03275033a ಯದಿ ಹ್ಯಕಾಮಾಮಾಸೇವೇತ್ಸ್ತ್ರಿಯಮನ್ಯಾಮಪಿ ಧ್ರುವಂ|

03275033c ಶತಧಾಸ್ಯ ಫಲೇದ್ದೇಹ ಇತ್ಯುಕ್ತಃ ಸೋಽಭವತ್ಪುರಾ||

ಹಿಂದೆ ಅವನಿಗೆ ಹೇಳಲಾಗಿತ್ತು ತನ್ನನ್ನು ಬಯಸದೇ ಇದ್ದ ಯಾವ ಸ್ತ್ರೀಯನ್ನು ಕಾಮಿಸಿದರೂ ಅವನ ದೇಹವು ನೂರು ತುಂಡಾಗುತ್ತದೆ.

03275034a ನಾತ್ರ ಶಂಕಾ ತ್ವಯಾ ಕಾರ್ಯಾ ಪ್ರತೀಚ್ಚೇಮಾಂ ಮಹಾದ್ಯುತೇ|

03275034c ಕೃತಂ ತ್ವಯಾ ಮಹತ್ಕಾರ್ಯಂ ದೇವಾನಾಮಮರಪ್ರಭ||

ಮಹಾದ್ಯುತೇ! ಇದರಲ್ಲಿ ಶಂಕೆಪಡಬೇಡ! ಇವಳನ್ನು ಸ್ವೀಕರಿಸುವ ಕಾರ್ಯಮಾಡು. ಅಮರಪ್ರಭನಾದ ನೀನು ದೇವತೆಗಳ ಮಹಾಕಾರ್ಯವನ್ನು ಎಸಗಿದ್ದೀಯೆ.”

03275035 ದಶರಥ ಉವಾಚ|

03275035a ಪ್ರೀತೋಽಸ್ಮಿ ವತ್ಸ ಭದ್ರಂ ತೇ ಪಿತಾ ದಶರಥೋಽಸ್ಮಿ ತೇ|

03275035c ಅನುಜಾನಾಮಿ ರಾಜ್ಯಂ ಚ ಪ್ರಶಾಧಿ ಪುರುಷೋತ್ತಮ||

ದಶರಥನು ಹೇಳಿದನು: “ಸಂತೋಷಗೊಂಡಿದ್ದೇನೆ. ವತ್ಸ! ನಿನಗೆ ಮಂಗಳವಾಗಲಿ! ನಾನು ನಿನ್ನ ತಂದೆ ದಶರಥ! ಪುರುಷೋತ್ತಮ! ಅನುಮತಿಯನ್ನು ನೀಡುತ್ತಿದ್ದೇನೆ. ರಾಜ್ಯವನ್ನಾಳು!”

03275036 ರಾಮ ಉವಾಚ|

03275036a ಅಭಿವಾದಯೇ ತ್ವಾಂ ರಾಜೇಂದ್ರ ಯದಿ ತ್ವಂ ಜನಕೋ ಮಮ|

03275036c ಗಮಿಷ್ಯಾಮಿ ಪುರೀಂ ರಮ್ಯಾಮಯೋಧ್ಯಾಂ ಶಾಸನಾತ್ತವ||

ರಾಮನು ಹೇಳಿದನು: “ರಾಜೇಂದ್ರ! ನನ್ನ ಜನಕನಾಗಿದ್ದರೆ ನಿನಗೆ ಅಭಿವಾದನೆಗಳು. ನಿನ್ನ ಶಾಸನದಂತೆ ನಾನು ರಮ್ಯ ಅಯೋಧ್ಯಾಪುರಿಗೆ ಹೋಗುತ್ತೇನೆ.””

03275037 ಮಾರ್ಕಂಡೇಯ ಉವಾಚ|

03275037a ತಮುವಾಚ ಪಿತಾ ಭೂಯಃ ಪ್ರಹೃಷ್ಟೋ ಮನುಜಾಧಿಪ|

03275037c ಗಚ್ಚಾಯೋಧ್ಯಾಂ ಪ್ರಶಾಧಿ ತ್ವಂ ರಾಮ ರಕ್ತಾಂತಲೋಚನ||

ಮಾರ್ಕಂಡೇಯನು ಹೇಳಿದನು: “ಮನುಜಾಧಿಪ! ಸಂತೋಷಗೊಂಡ ತಂದೆಯು ಅವನಿಗೆ ಹೇಳಿದನು: “ರಕ್ತಾಂತಲೋಚನ ರಾಮ! ಹೋಗಿ ಅಯೋಧ್ಯೆಯನ್ನು ಆಳು!”

03275038a ತತೋ ದೇವಾನ್ನಮಸ್ಕೃತ್ಯ ಸುಹೃದ್ಭಿರಭಿನಂದಿತಃ|

03275038c ಮಹೇಂದ್ರ ಇವ ಪೌಲೋಮ್ಯಾ ಭಾರ್ಯಯಾ ಸ ಸಮೇಯಿವಾನ್||

ಆಗ ದೇವತೆಗಳಿಗೆ ನಮಸ್ಕರಿಸಿ, ಸುಹೃದಯರಿಂದ ಅಭಿನಂದಿತನಾಗಿ ಪೌಲೋಮೆಯೊಂದಿಗೆ ಇಂದ್ರನು ಹೇಗೋ ಹಾಗೆ ಭಾರ್ಯೆಯನ್ನು ಕೂಡಿದನು.

03275039a ತತೋ ವರಂ ದದೌ ತಸ್ಮೈ ಅವಿಂಧ್ಯಾಯ ಪರಂತಪಃ|

03275039c ತ್ರಿಜಟಾಂ ಚಾರ್ಥಮಾನಾಭ್ಯಾಂ ಯೋಜಯಾಮಾಸ ರಾಕ್ಷಸೀಂ||

ಅನಂತರ ಪರಂತಪನು ಅವಿಂಧ್ಯನಿಗೆ ವರವನ್ನಿತ್ತನು ಮತ್ತು ರಾಕ್ಷಸೀ ತ್ರಿಜಟೆಗೆ ಸಂಪತ್ತು ಗೌರವಗಳನ್ನಿತ್ತನು.

03275040a ತಮುವಾಚ ತತೋ ಬ್ರಹ್ಮಾ ದೇವೈಃ ಶಕ್ರಮುಖೈರ್ವೃತಃ|

03275040c ಕೌಸಲ್ಯಾಮಾತರಿಷ್ಟಾಂಸ್ತೇ ವರಾನದ್ಯ ದದಾನಿ ಕಾನ್||

ಶಕ್ರಪ್ರಮುಖ ದೇವತೆಗಳಿಂದ ಆವೃತನಾದ ಬ್ರಹ್ಮನು ಹೇಳಿದನು: “ಕೌಸಲ್ಯೆಯ ಮಗನೇ! ನೀನು ಬಯಸುವ ಯಾವ ವರವನ್ನು ಇಂದು ನಾನು ನಿನಗೆ ಕೊಡಲಿ?”

03275041a ವವ್ರೇ ರಾಮಃ ಸ್ಥಿತಿಂ ಧರ್ಮೇ ಶತ್ರುಭಿಶ್ಚಾಪರಾಜಯಂ|

03275041c ರಾಕ್ಷಸೈರ್ನಿಹತಾನಾಂ ಚ ವಾನರಾಣಾಂ ಸಮುದ್ಭವಂ||

ರಾಮನು ಧರ್ಮದಲ್ಲಿ ನೆಲೆಯಾಗಿರುವಂತೆ, ಶತ್ರುಗಳ ಮೇಲೆ ಜಯ, ಮತ್ತು ರಾಕ್ಷಸರಿಂದ ಹತರಾದ ವಾನರರ ಪುನರ್ಜೀವವನ್ನು ವರಗಳಾಗಿ ವರಿಸಿದನು.

03275042a ತತಸ್ತೇ ಬ್ರಹ್ಮಣಾ ಪ್ರೋಕ್ತೇ ತಥೇತಿ ವಚನೇ ತದಾ|

03275042c ಸಮುತ್ತಸ್ಥುರ್ಮಹಾರಾಜ ವಾನರಾ ಲಬ್ಧಚೇತಸಃ||

ಹಾಗೆಯೇ ಆಗಲೆಂದು ಬ್ರಹ್ಮನು ಹೇಳಲು, ಮಹಾರಾಜ! ವಾನರರು ಚೇತನವನ್ನು ಪಡೆದು ಮೇಲೆದ್ದರು.

03275043a ಸೀತಾ ಚಾಪಿ ಮಹಾಭಾಗಾ ವರಂ ಹನುಮತೇ ದದೌ|

03275043c ರಾಮಕೀರ್ತ್ಯಾ ಸಮಂ ಪುತ್ರ ಜೀವಿತಂ ತೇ ಭವಿಷ್ಯತಿ||

ಮಹಾಭಾಗೆ ಸೀತೆಯೂ ಕೂಡ ಹನುಮತನಿಗೆ ವರವನ್ನಿತ್ತಳು: “ಮಗನೇ! ರಾಮನ ಕೀರ್ತಿಯಿರುವವರೆಗೆ ನೀನು ಜೀವಿಸಿರುತ್ತೀಯೆ!

03275044a ದಿವ್ಯಾಸ್ತ್ವಾಮುಪಭೋಗಾಶ್ಚ ಮತ್ಪ್ರಸಾದಕೃತಾಃ ಸದಾ|

03275044c ಉಪಸ್ಥಾಸ್ಯಂತಿ ಹನುಮನ್ನಿತಿ ಸ್ಮ ಹರಿಲೋಚನ||

ಹರಿಲೋಚನ ಹನುಮ! ನನ್ನ ಪ್ರಸಾದದಿಂದ ಸದಾ ದಿವ್ಯ ಉಪಭೋಗಗಳು ನಿನಗೆ ಕಾಯುತ್ತಿರುತ್ತವೆ!”

03275045a ತತಸ್ತೇ ಪ್ರೇಕ್ಷಮಾಣಾನಾಂ ತೇಷಾಮಕ್ಲಿಷ್ಟಕರ್ಮಣಾಂ|

03275045c ಅಂತರ್ಧಾನಂ ಯಯುರ್ದೇವಾಃ ಸರ್ವೇ ಶಕ್ರಪುರೋಗಮಾಃ||

ಆಗ ಅವರು ಆ ಅಕ್ಲಿಷ್ಟಕರ್ಮಿಗಳನ್ನು ನೋಡುತ್ತಿರಲು ಶಕ್ರನನ್ನು ಮುಂದಿಟ್ಟುಕೊಂಡು ಎಲ್ಲ ದೇವತೆಗಳೂ ಅಂತರ್ಧಾನರಾದರು.

03275046a ದೃಷ್ಟ್ವಾ ತು ರಾಮಂ ಜಾನಕ್ಯಾ ಸಮೇತಂ ಶಕ್ರಸಾರಥಿಃ|

03275046c ಉವಾಚ ಪರಮಪ್ರೀತಃ ಸುಹೃನ್ಮಧ್ಯ ಇದಂ ವಚಃ||

ಸುಹೃದಯರ ಮಧ್ಯೆ ಜಾನಕಿಯ ಜೊತೆಗಿದ್ದ ರಾಮನನ್ನು ನೋಡಿ ಪರಮಪ್ರೀತನಾದ ಶಕ್ರಸಾರಥಿಯು ಹೀಗೆ ಹೇಳಿದನು:

03275047a ದೇವಗಂಧರ್ವಯಕ್ಷಾಣಾಂ ಮಾನುಷಾಸುರಭೋಗಿನಾಂ|

03275047c ಅಪನೀತಂ ತ್ವಯಾ ದುಃಖಮಿದಂ ಸತ್ಯಪರಾಕ್ರಮ||

“ಸತ್ಯಪರಾಕ್ರಮಿ! ದೇವತೆಗಳ, ಗಂಧರ್ವರ, ಯಕ್ಷರ, ಮನುಷ್ಯರ, ಅಸುರರ ಮತ್ತು ನಾಗಗಳ ದುಃಖವನ್ನು ಇಂದು ನೀನು ಕಳೆದಿದ್ದೀಯೆ!

03275048a ಸದೇವಾಸುರಗಂಧರ್ವಾ ಯಕ್ಷರಾಕ್ಷಸಪನ್ನಗಾಃ|

03275048c ಕಥಯಿಷ್ಯಂತಿ ಲೋಕಾಸ್ತ್ವಾಂ ಯಾವದ್ಭೂಮಿರ್ಧರಿಷ್ಯತಿ||

ದೇವ, ಅಸುರ, ಗಂಧರ್ವ, ಯಕ್ಷ, ರಾಕ್ಷಸ, ಪನ್ನಗಳೊಂದಿಗೆ ಲೋಕಗಳು ಭೂಮಿಯಿರುವವರೆಗೆ ನಿನ್ನ ಕಥೆಯನ್ನು ಹೇಳುತ್ತಿರುತ್ತಾರೆ.”

03275049a ಇತ್ಯೇವಮುಕ್ತ್ವಾನುಜ್ಞಾಪ್ಯ ರಾಮಂ ಶಸ್ತ್ರಭೃತಾಂ ವರಂ|

03275049c ಸಂಪೂಜ್ಯಾಪಾಕ್ರಮತ್ತೇನ ರಥೇನಾದಿತ್ಯವರ್ಚಸಾ||

ಹೀಗೆ ಹೇಳಿ ಶಸ್ತ್ರಭೃತರಲ್ಲಿ ಶ್ರೇಷ್ಠ ರಾಮನಿಂದ ಆಜ್ಞೆಪಡೆದು ಸಂಪೂಜಿಸಿ ಆದಿತ್ಯವರ್ಚಸ ರಥದಲ್ಲಿ ಹೊರಟುಹೋದನು.

03275050a ತತಃ ಸೀತಾಂ ಪುರಸ್ಕೃತ್ಯ ರಾಮಃ ಸೌಮಿತ್ರಿಣಾ ಸಹ|

03275050c ಸುಗ್ರೀವಪ್ರಮುಖೈಶ್ಚೈವ ಸಹಿತಃ ಸರ್ವವಾನರೈಃ||

03275051a ವಿಧಾಯ ರಕ್ಷಾಂ ಲಂಕಾಯಾಂ ವಿಭೀಷಣಪುರಸ್ಕೃತಃ|

03275051c ಸಂತತಾರ ಪುನಸ್ತೇನ ಸೇತುನಾ ಮಕರಾಲಯಂ||

03275052a ಪುಷ್ಪಕೇಣ ವಿಮಾನೇನ ಖೇಚರೇಣ ವಿರಾಜತಾ|

03275052c ಕಾಮಗೇನ ಯಥಾ ಮುಖ್ಯೈರಮಾತ್ಯೈಃ ಸಂವೃತೋ ವಶೀ||

ಆಗ ರಾಮನು ಸೀತೆಯನ್ನು ಮುಂದಿರಿಸಿಕೊಂಡು ಸೌಮಿತ್ರಿಯೊಡನೆ ಸುಗ್ರೀವಪ್ರಮುಖರಿಂದೊಡಗೂಡಿದ ಸರ್ವ ವಾನರರೊಂದಿಗೆ ಲಂಕೆಯ ರಕ್ಷಣೆಯನ್ನು ಏರ್ಪಡಿಸಿ, ವಿಭೀಷಣನನ್ನು ಮುಂದಿಟ್ಟುಕೊಂಡು, ಸೇತುವಿನ ಮೂಲಕ, ಆಕಾಶದಲ್ಲಿ ಹೋಗುವ ಬೇಕಾದರಲ್ಲಿ ಹೋಗಬಲ್ಲ ವಿರಾಜಿಸುವ ಪುಷ್ಪಕವಿಮಾನದಲ್ಲಿ, ಅಮಾತ್ಯರಿಂದ ಸಂವೃತನಾದ ಮುಖ್ಯನಂತೆ, ಪುನಃ ಆ ಮಕರಾಲಯವನ್ನು ದಾಟಿದನು.

03275053a ತತಸ್ತೀರೇ ಸಮುದ್ರಸ್ಯ ಯತ್ರ ಶಿಶ್ಯೇ ಸ ಪಾರ್ಥಿವಃ|

03275053c ತತ್ರೈವೋವಾಸ ಧರ್ಮಾತ್ಮಾ ಸಹಿತಃ ಸರ್ವವಾನರೈಃ||

ಎಲ್ಲಿ ಪಾರ್ಥಿವನು ಉಳಿದಿದ್ದನೋ ಅದೇ ಸಮುದ್ರತೀರದಲ್ಲಿ ಧರ್ಮಾತ್ಮನು ಸರ್ವ ವಾನರರ ಸಹಿತ ಉಳಿದುಕೊಂಡನು.

03275054a ಅಥೈನಾನ್ರಾಘವಃ ಕಾಲೇ ಸಮಾನೀಯಾಭಿಪೂಜ್ಯ ಚ|

03275054c ವಿಸರ್ಜಯಾಮಾಸ ತದಾ ರತ್ನೈಃ ಸಂತೋಷ್ಯ ಸರ್ವಶಃ||

ಸರಿಯಾದ ಸಮಯದಲ್ಲಿ ರಾಘವನು ಅವರನ್ನು ಒಟ್ಟುಗೂಡಿಸಿ, ಗೌರವಿಸಿ ರತ್ನಗಳಿಂದ ಎಲ್ಲರನ್ನೂ ಸಂತೋಷಗೊಳಿಸಿ ಕಳುಹಿಸಿಕೊಟ್ಟನು.

03275055a ಗತೇಷು ವಾನರೇಂದ್ರೇಷು ಗೋಪುಚ್ಚರ್ಕ್ಷೇಷು ತೇಷು ಚ|

03275055c ಸುಗ್ರೀವಸಹಿತೋ ರಾಮಃ ಕಿಷ್ಕಿಂಧಾಂ ಪುನರಾಗಮತ್||

ಆ ವಾನರೇಂದ್ರರು, ಗೋಪುಚ್ಛರು ಮತ್ತು ಕರಡಿಗಳು ಹೋದನಂತರ, ರಾಮನು ಸುಗ್ರೀವನ ಸಹಿತ ಕಿಷ್ಕಿಂಧೆಗೆ ಮರಳಿ ಆಗಮಿಸಿದನು.

03275056a ವಿಭೀಷಣೇನಾನುಗತಃ ಸುಗ್ರೀವಸಹಿತಸ್ತದಾ|

03275056c ಪುಷ್ಪಕೇಣ ವಿಮಾನೇನ ವೈದೇಹ್ಯಾ ದರ್ಶಯನ್ವನಂ||

ಸುಗ್ರೀವನ ಸಹಿತ ವಿಭೀಷಣನು ಅನುಸರಿಸಿ ಬರುತ್ತಿರಲು ಪುಷ್ಪಕ  ವಿಮಾನದಿಂದ ವೈದೇಹಿಗೆ ವನವನ್ನು ತೋರಿಸಿದನು.

03275057a ಕಿಷ್ಕಿಂಧಾಂ ತು ಸಮಾಸಾದ್ಯ ರಾಮಃ ಪ್ರಹರತಾಂ ವರಃ|

03275057c ಅಂಗದಂ ಕೃತಕರ್ಮಾಣಂ ಯೌವರಾಜ್ಯೇಽಭ್ಯಷೇಚಯತ್||

ಪ್ರಹರಿಗಳಲ್ಲಿ ಶ್ರೇಷ್ಠ ರಾಮನು ಕಿಷ್ಕಿಂಧೆಯನ್ನು ತಲುಪಿ ಕೃತಕರ್ಮಿಣಿ ಅಂಗದನನ್ನು ಯುವರಾಜನನ್ನಾಗಿ ಅಭಿಷೇಕಿಸಿದನು.

03275058a ತತಸ್ತೈರೇವ ಸಹಿತೋ ರಾಮಃ ಸೌಮಿತ್ರಿಣಾ ಸಹ|

03275058c ಯಥಾಗತೇನ ಮಾರ್ಗೇಣ ಪ್ರಯಯೌ ಸ್ವಪುರಂ ಪ್ರತಿ||

ಅವರ ಸಹಿತ ಮತ್ತು ಸೌಮಿತ್ರಿಯನ್ನು ಕೂಡಿಕೊಂಡು ರಾಮನು ಹೋದಮಾರ್ಗದಿಂದಲೇ ತನ್ನ ಪುರದ ಕಡೆ ಪ್ರಯಾಣಿಸಿದನು.

03275059a ಅಯೋಧ್ಯಾಂ ಸ ಸಮಾಸಾದ್ಯ ಪುರೀಂ ರಾಷ್ಟ್ರಪತಿಸ್ತತಃ|

03275059c ಭರತಾಯ ಹನೂಮಂತಂ ದೂತಂ ಪ್ರಸ್ಥಾಪಯತ್ತದಾ||

ಅಯೋಧ್ಯಾಪುರಿಯನ್ನು ತಲುಪಿ ರಾಷ್ಟ್ರಪತಿಯು ಭರತನಿಗೆ ದೂತನಾಗಿ ಹನೂಮಂತನನ್ನು ಕಳುಹಿಸಿದನು.

03275060a ಲಕ್ಷಯಿತ್ವೇಂಗಿತಂ ಸರ್ವಂ ಪ್ರಿಯಂ ತಸ್ಮೈ ನಿವೇದ್ಯ ಚ|

03275060c ವಾಯುಪುತ್ರೇ ಪುನಃ ಪ್ರಾಪ್ತೇ ನಂದಿಗ್ರಾಮಮುಪಾಗಮತ್||

ಎಲ್ಲ ಇಂಗಿತಗಳನ್ನೂ ಲಕ್ಷಿಸಿ ಅವನಿಗೆ ಪ್ರಿಯವಿಷಯವನ್ನು ತಿಳಿಸಿ ವಾಯುಪುತ್ರನು ಪುನಃ ಬರಲು ನಂದೀಗ್ರಾಮಕ್ಕೆ ಬಂದನು.

03275061a ಸ ತತ್ರ ಮಲದಿಗ್ಧಾಂಗಂ ಭರತಂ ಚೀರವಾಸಸಂ|

03275061c ಅಗ್ರತಃ ಪಾದುಕೇ ಕೃತ್ವಾ ದದರ್ಶಾಸೀನಮಾಸನೇ||

ಅವನು ಅಲ್ಲಿ ಮಲಿನಾಂಗನಾದ ಚೀರವಸ್ತ್ರಗಳನ್ನು ಧರಿಸಿ ಅಗ್ರಜನ ಪಾದುಕೆಗಳ ಎದುರು ಆಸನದಲ್ಲಿ ಕುಳಿತಿದ್ದ ಭರತನನ್ನು ಕಂಡನು.

03275062a ಸಮೇತ್ಯ ಭರತೇನಾಥ ಶತ್ರುಘ್ನೇನ ಚ ವೀರ್ಯವಾನ್|

03275062c ರಾಘವಃ ಸಹಸೌಮಿತ್ರಿರ್ಮುಮುದೇ ಭರತರ್ಷಭ||

ಭರತರ್ಷಭ! ಆಗ ಭರತ ಮತ್ತು ವೀರ್ಯವಾನ್ ಶತ್ರುಘ್ರನನ್ನು ಸೇರಿ ಸೌಮಿತ್ರಿಯೊಡನೆ ರಾಘವನು ಸಂತೋಷಗೊಂಡನು.

03275063a ತಥಾ ಭರತಶತ್ರುಘ್ನೌ ಸಮೇತೌ ಗುರುಣಾ ತದಾ|

03275063c ವೈದೇಹ್ಯಾ ದರ್ಶನೇನೋಭೌ ಪ್ರಹರ್ಷಂ ಸಮವಾಪತುಃ||

ಹಾಗೆಯೇ ಭರತ-ಶತ್ರುಘ್ನರೂ ಅವರಿಬ್ಬರನ್ನೂ ಗುರುಗಳ ಸಹಿತ ವೈದೇಹಿಯನ್ನೂ ಕಂಡು ಹರ್ಷಿತರಾದರು.

03275064a ತಸ್ಮೈ ತದ್ಭರತೋ ರಾಜ್ಯಮಾಗತಾಯಾಭಿಸತ್ಕೃತಂ|

03275064c ನ್ಯಾಸಂ ನಿರ್ಯಾತಯಾಮಾಸ ಯುಕ್ತಃ ಪರಮಯಾ ಮುದಾ||

ಆಗ ಭರತನು ಸತ್ಕೃತವಾದ ನ್ಯಾಸವಾಗಿಟ್ಟುಕೊಂಡಿದ್ದ ರಾಜ್ಯವನ್ನು ಪರಮ ಮುದದಿಂದ ಅವನಿಗೆ ಹಿಂದಿರುಗಿಸಿದನು.

03275065a ತತಸ್ತಂ ವೈಷ್ಣವೇ ಶೂರಂ ನಕ್ಷತ್ರೇಽಭಿಮತೇಽಹನಿ|

03275065c ವಸಿಷ್ಠೋ ವಾಮದೇವಶ್ಚ ಸಹಿತಾವಭ್ಯಷಿಂಚತಾಂ||

ಅನಂತರ ವೈಷ್ಣವ ನಕ್ಷತ್ರದ ಮಂಗಳ ಮುಹೂರ್ತದಲ್ಲಿ ವಸಿಷ್ಠ ವಾಮದೇವರು ಜೊತೆಗೂಡಿ ಆ ಶೂರನನ್ನು ಅಭಿಷೇಕಿಸಿದರು.

03275066a ಸೋಽಭಿಷಿಕ್ತಃ ಕಪಿಶ್ರೇಷ್ಠಂ ಸುಗ್ರೀವಂ ಸಸುಹೃಜ್ಜನಂ|

03275066c ವಿಭೀಷಣಂ ಚ ಪೌಲಸ್ತ್ಯಮನ್ವಜಾನಾದ್ಗೃಹಾನ್ಪ್ರತಿ||

03275067a ಅಭ್ಯರ್ಚ್ಯ ವಿವಿಧೈ ರತ್ನೈಃ ಪ್ರೀತಿಯುಕ್ತೌ ಮುದಾ ಯುತೌ|

03275067c ಸಮಾಧಾಯೇತಿಕರ್ತವ್ಯಂ ದುಃಖೇನ ವಿಸಸರ್ಜ ಹ||

ಅಭಿಷಿಕ್ತನಾದ ಅವನು ಸುಹೃಜ್ಜನರೊಂದಿಗೆ ಕಪಿಶ್ರೇಷ್ಠ ಸುಗ್ರೀವನನ್ನೂ ಪೌಲಸ್ತ್ಯ ವಿಭೀಷಣನನ್ನೂ ಅನ್ಯರನ್ನೂ ಮನೆಗಳ ಕಡೆ, ವಿವಿಧರತ್ನಗಳಿಂದ ಅಭ್ಯರ್ಚಿಸಿ, ಸಂತೋಷಗೊಳಿಸಿ, ತನ್ನ ಕರ್ತವ್ಯದ  ಕುರಿತು ಯೋಚಿಸಿ ದುಃಖದಿಂದ ಕಳುಹಿಸಿಕೊಟ್ಟನು.

03275068a ಪುಷ್ಪಕಂ ಚ ವಿಮಾನಂ ತತ್ಪೂಜಯಿತ್ವಾ ಸ ರಾಘವಃ|

03275068c ಪ್ರಾದಾದ್ವೈಶ್ರವಣಾಯೈವ ಪ್ರೀತ್ಯಾ ಸ ರಘುನಂದನಃ||

ಪುಷ್ಪಕ ವಿಮಾನವನ್ನೂ ಕೂಡ ಪೂಜಿಸಿ ಪ್ರೀತಿಯಿಂದ ರಾಘವ ರಘುನಂದನನು ವೈಶ್ರವಣನಿಗೆ ನೀಡಿದನು.

03275069a ತತೋ ದೇವರ್ಷಿಸಹಿತಃ ಸರಿತಂ ಗೋಮತೀಮನು|

03275069c ದಶಾಶ್ವಮೇಧಾನಾಜಹ್ರೇ ಜಾರೂಥ್ಯಾನ್ಸ ನಿರರ್ಗಲಾನ್||

ಅನಂತರ ದೇವರ್ಷಿಗಳ ಸಹಿತ ಗೋಮತೀ ನದಿಯ ತೀರದಲ್ಲಿ ನಿರರ್ಗಲ ಮೂರು ರೀತಿಯ ದಕ್ಷಿಣೆಗಳನ್ನಿತ್ತು ಹತ್ತು ಅಶ್ವಮೇಧಯಾಗಗಳನ್ನು ನಡೆಸಿದನು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ರಾಮೋಪಾಖ್ಯಾನೇ ಶ್ರೀರಾಮಾಭಿಷೇಕೇ ಪಂಚಸಪ್ತತ್ಯಧಿಕದ್ವಿಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ರಾಮೋಪಾಖ್ಯಾನದಲ್ಲಿ ಶ್ರೀರಾಮಾಭಿಷೇಕದಲ್ಲಿ ಇನ್ನೂರಾಎಪ್ಪತ್ತೈದನೆಯ ಅಧ್ಯಾಯವು.

Related image

Kannada translation of Draupadiharana Parva, by Chapter:
  1. ಜಯದ್ರಥಾಗಮನ
  2. ಕೋಟಿಕಾಸ್ಯಪ್ರಶ್ನಃ
  3. ದ್ರೌಪದೀವಾಕ್ಯ
  4. ಜಯದ್ರಥದ್ರೌಪದೀಸಂವಾದ
  5. ದ್ರೌಪದೀಹರಣ
  6. ಪಾರ್ಥಾಗಮನ
  7. ದ್ರೌಪದೀವಾಕ್ಯ
  8. ಜಯದ್ರಥಪಲಾಯನ
  9. ಜಯದ್ರಥವಿಮೋಕ್ಷಣ
  10. ರಾಮೋಪಾಖ್ಯಾನ-ಯುಧಿಷ್ಠಿರಪ್ರಶ್ನಃ
  11. ರಾಮೋಪಾಖ್ಯಾನ-ರಾಮರಾವಣಯೋರ್ಜನ್ಮಕಥನ
  12. ರಾಮೋಪಾಖ್ಯಾನ-ರಾವಣಾದಿವರಪ್ರಾಪ್ತಿಃ
  13. ರಾಮೋಪಾಖ್ಯಾನ-ವಾನರಾದ್ಯುತ್ಪತ್ತಿಃ
  14. ರಾಮೋಪಾಖ್ಯಾನ-ರಾಮವನಾಭಿಗಮನ
  15. ರಾಮೋಪಾಖ್ಯಾನ-ಮಾರೀಚವಧ-ಸೀತಾಪಹರಣ
  16. ರಾಮೋಪಾಖ್ಯಾನ-ಕಬಂಧಹನನ
  17. ರಾಮೋಪಾಖ್ಯಾನ-ತ್ರಿಜಟಾಕೃತಸೀತಾಸಂವಾದಃ
  18. ರಾಮೋಪಾಖ್ಯಾನ-ಸೀತಾರಾವಣಸಂವಾದಃ
  19. ರಾಮೋಪಾಖ್ಯಾನ-ಹನುಮಪ್ರತ್ಯಾಗಮನ
  20. ರಾಮೋಪಾಖ್ಯಾನ-ಸೇತುಬಂಧನ
  21. ರಾಮೋಪಾಖ್ಯಾನ-ಲಂಕಾಪ್ರವೇಶ
  22. ರಾಮೋಪಾಖ್ಯಾನ-ರಾಮರಾವಣದ್ವಂದ್ವಯುದ್ಧಃ
  23. ರಾಮೋಪಾಖ್ಯಾನ-ಕುಂಭಕರ್ಣನಿರ್ಗಮನ
  24. ರಾಮೋಪಾಖ್ಯಾನ-ಕುಂಬಕರ್ಣಾದಿವಧಃ
  25. ರಾಮೋಪಾಖ್ಯಾನ-ಇಂದ್ರಜಿದ್ಯುದ್ಧಃ
  26. ರಾಮೋಪಾಖ್ಯಾನ-ಇಂದ್ರಜಿದ್ವಧಃ
  27. ರಾಮೋಪಾಖ್ಯಾನ-ರಾವಣವಧಃ
  28. ರಾಮೋಪಾಖ್ಯಾನ-ಶ್ರೀರಾಮಾಭಿಷೇಕ
  29. ರಾಮೋಪಾಖ್ಯಾನ-ಯುಧಿಷ್ಠಿರಾಶ್ವಾಸನ
  30. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೧
  31. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೨
  32. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೩
  33. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೪
  34. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೫
  35. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೬
  36. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೭

Comments are closed.