Karna Parva: Chapter 1

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಕರ್ಣ ಪರ್ವ

ದ್ರೋಣನು ಹತನಾದ ನಂತರ ಕೌರವ ಪ್ರಮುಖ ನೃಪರು ಅಶ್ವತ್ಥಾಮ-ಕೃಪರನ್ನು ಸಮಾಧಾನಗೊಳಿಸಿ ತಮ್ಮ ತಮ್ಮ ಶಿಬಿರಗಳಿಗೆ ತೆರಳಿದುದು (೧-೩). ಕರ್ಣ, ದುರ್ಯೋಧನ, ದುಃಶಾಸನ, ಶಕುನಿಯರು ಒಟ್ಟಿಗೇ ದುರ್ಯೋಧನನ ಬಿಡಾರದಲ್ಲಿ ನಿದ್ದೆಯಿಲ್ಲದೇ ರಾತ್ರಿಯನ್ನು ಕಳೆದುದು (೪-೮). ಎರಡು ದಿವಸಗಳು ನಡೆದ ತುಮುಲ ಯುದ್ಧದಲ್ಲಿ ಕರ್ಣನು ಅರ್ಜುನನಿಂದ ಹತನಾದುದು ಮತ್ತು ಸಂಜಯನು ಹಸ್ತಿನಾಪುರಕ್ಕೆ ಹೋಗಿ ಧೃತರಾಷ್ಟ್ರನಿಗೆ ನಡೆದ ಸಂಗತಿಯನ್ನು ವರದಿಮಾಡಿದುದು (೯-೧೭). ಕರ್ಣನು ಹತನಾದ ವಿಷಯವನ್ನು ತಿಳಿದ ಧೃತರಾಷ್ಟ್ರನು ಶೋಕಪಟ್ಟು, ವಿಷಯವನ್ನು ವಿವರವಾಗಿ ಹೇಳುವಂತೆ ಪ್ರಶ್ನಿಸುವುದು (೧೮-೪೯).

08001001 ವೈಶಂಪಾಯನ ಉವಾಚ|

08001001a ತತೋ ದ್ರೋಣೇ ಹತೇ ರಾಜನ್ದುರ್ಯೋಧನಮುಖಾ ನೃಪಾಃ|

08001001c ಭೃಶಮುದ್ವಿಗ್ನಮನಸೋ ದ್ರೋಣಪುತ್ರಮುಪಾಗಮನ್||

ವೈಶಂಪಾಯನನು ಹೇಳಿದನು: “ರಾಜನ್! ದ್ರೋಣನು ಹತನಾಗಲು ದುರ್ಯೋಧನ ಪ್ರಮುಖ ನೃಪರು ತುಂಬಾ ಉದ್ವಿಗ್ನಮನಸ್ಕರಾಗಿ ದ್ರೋಣಪುತ್ರನ ಬಳಿ ಬಂದರು.

08001002a ತೇ ದ್ರೋಣಮುಪಶೋಚಂತಃ ಕಶ್ಮಲಾಭಿಹತೌಜಸಃ|

08001002c ಪರ್ಯುಪಾಸಂತ ಶೋಕಾರ್ತಾಸ್ತತಃ ಶಾರದ್ವತೀಸುತಂ||

ದ್ರೋಣನ ಕುರಿತು ಶೋಕಿಸುತ್ತಿದ್ದ, ದುಃಖದಿಂದ ತೇಜಸ್ಸನ್ನು ಕಳೆದುಕೊಂಡಿದ್ದ, ಶೋಕಾರ್ತರಾದ ಅವರು ಶಾರದ್ವತೀಸುತ ಕೃಪನನ್ನು ಸುತ್ತುವರೆದು ಕುಳಿತುಕೊಂಡರು.

08001003a ಮುಹೂರ್ತಂ ತೇ ಸಮಾಶ್ವಾಸ್ಯ ಹೇತುಭಿಃ ಶಾಸ್ತ್ರಸಮ್ಮಿತೈಃ|

08001003c ರಾತ್ರ್ಯಾಗಮೇ ಮಹೀಪಾಲಾಃ ಸ್ವಾನಿ ವೇಶ್ಮಾನಿ ಭೇಜಿರೇ||

ಸ್ವಲ್ಪಹೊತ್ತು ಅವನನ್ನು ಶಾಸ್ತ್ರಸಮ್ಮತ ಹೇತುವಾದಗಳಿಂದ ಸಮಾಧಾನಪಡಿಸುತ್ತಿದ್ದು, ರಾತ್ರಿಯಾಗಲು ಮಹೀಪಾಲರು ತಮ್ಮ ತಮ್ಮ ಬಿಡಾರಗಳಿಗೆ ತೆರಳಿದರು.

08001004a ವಿಶೇಷತಃ ಸೂತಪುತ್ರೋ ರಾಜಾ ಚೈವ ಸುಯೋಧನಃ|

08001004c ದುಃಶಾಸನೋಽಥ ಶಕುನಿರ್ನ ನಿದ್ರಾಮುಪಲೇಭಿರೇ||

ವಿಶೇಷವಾಗಿ ಸೂತಪುತ್ರ, ರಾಜಾ ಸುಯೋಧನ, ದುಃಶಾಸನ ಮತ್ತು ಶಕುನಿಯರಿಗೆ ನಿದ್ರೆಯೇ ಬರಲಿಲ್ಲ.

08001005a ತೇ ವೇಶ್ಮಸ್ವಪಿ ಕೌರವ್ಯ ಪೃಥ್ವೀಶಾ ನಾಪ್ನುವನ್ಸುಖಂ|

08001005c ಚಿಂತಯಂತಃ ಕ್ಷಯಂ ತೀವ್ರಂ ನಿದ್ರಾಂ ನೈವೋಪಲೇಭಿರೇ||

ಅವರು ಪೃಥ್ವೀಶ ಕೌರವ್ಯನ ಬಿಡಾರದಲ್ಲಿಯೇ ಉಳಿದುಕೊಂಡಿದ್ದರೂ ಸುಖವನ್ನು ಹೊಂದಲಿಲ್ಲ. ತಮಗಾದ ತೀವ್ರ ನಷ್ಟದ ಕುರಿತು ಚಿಂತಿಸುತ್ತಿದ್ದ ಅವರಿಗೆ ನಿದ್ರೆಯೇ ಬರಲಿಲ್ಲ.

08001006a ಸಹಿತಾಸ್ತೇ ನಿಶಾಯಾಂ ತು ದುರ್ಯೋಧನನಿವೇಶನೇ|

08001006c ಅತಿಪ್ರಚಂಡಾದ್ವಿದ್ವೇಷಾತ್ಪಾಂಡವಾನಾಂ ಮಹಾತ್ಮನಾಂ||

ದುರ್ಯೋಧನನ ಬಿಡಾರದಲ್ಲಿ ಅವರು ಒಟ್ಟಿಗೇ ಆ ರಾತ್ರಿ ಮಹಾತ್ಮ ಪಾಂಡವರೊಡನಿರುವ ಅತಿಪ್ರಚಂಡ ದ್ವೇಷದ ಕುರಿತು ಯೋಚಿಸಿದರು.

08001007a ಯತ್ತದ್ದ್ಯೂತಪರಿಕ್ಲಿಷ್ಟಾಂ ಕೃಷ್ಣಾಮಾನಿನ್ಯಿರೇ ಸಭಾಂ|

08001007c ತತ್ಸ್ಮರಂತೋಽನ್ವತಪ್ಯಂತ ಭೃಶಮುದ್ವಿಗ್ನಚೇತಸಃ||

ದ್ಯೂತದ ಸಮಯದಲ್ಲಿ ಕೃಷ್ಣೆಯನ್ನು ಸಭೆಗೆ ಸೆಳೆದು ತಂದುದು ಮತ್ತು ಅವಳಿಗಿತ್ತ ಅತ್ಯಂತ ಘೋರ ಕಷ್ಟಗಳನ್ನು ಸ್ಮರಿಸಿಕೊಂಡು ಉದ್ವಿಗ್ನಮನಸ್ಕರಾಗಿ ತುಂಬಾ ಪರಿತಪಿಸಿದರು.

08001008a ಚಿಂತಯಂತಶ್ಚ ಪಾರ್ಥಾನಾಂ ತಾನ್ಕ್ಲೇಶಾನ್ದ್ಯೂತಕಾರಿತಾನ್|

08001008c ಕೃಚ್ಚ್ರೇಣ ಕ್ಷಣದಾಂ ರಾಜನ್ನಿನ್ಯುರಬ್ದಶತೋಪಮಾಂ||

ರಾಜನ್! ದ್ಯೂತದಿಂದಾಗಿ ಪಾರ್ಥರಿಗಿತ್ತ ಆ ಕ್ಲೇಶಗಳ ಕುರಿತು ಚಿಂತಿಸುತ್ತಿದ್ದ ಅವರು ಆ ರಾತ್ರಿಯ ಕ್ಷಣಗಳನ್ನು ನೂರು ವರ್ಷಗಳನ್ನು ಕಳೆದಂತೆ ಕಳೆದರು.

08001009a ತತಃ ಪ್ರಭಾತೇ ವಿಮಲೇ ಸ್ಥಿತಾ ದಿಷ್ಟಸ್ಯ ಶಾಸನೇ|

08001009c ಚಕ್ರುರಾವಶ್ಯಕಂ ಸರ್ವೇ ವಿಧಿದೃಷ್ಟೇನ ಕರ್ಮಣಾ||

ಅನಂತರ ನಿರ್ಮಲ ಪ್ರಭಾತಕಾಲವು ಪ್ರಾಪ್ತವಾಗಲು ದೈವಸಂಕಲ್ಪಕ್ಕೆ ಅಧೀನರಾಗಿದ್ದ ಆ ಎಲ್ಲ ಕೌರವರೂ ಅವಶ್ಯವಾಗಿ ಮಾಡಲೇಬೇಕಾಗಿದ್ದ ಶೌಚ-ಸ್ನಾನ-ಸಂಧ್ಯಾವಂದನಾದಿ ಕರ್ಮಗಳನ್ನು ಯಥಾವಿಧಿಯಾಗಿ ಪೂರೈಸಿದರು.

08001010a ತೇ ಕೃತ್ವಾವಶ್ಯಕಾರ್ಯಾಣಿ ಸಮಾಶ್ವಸ್ಯ ಚ ಭಾರತ|

08001010c ಯೋಗಮಾಜ್ಞಾಪಯಾಮಾಸುರ್ಯುದ್ಧಾಯ ಚ ವಿನಿರ್ಯಯುಃ||

ಭಾರತ! ಹೀಗೆ ಅವಶ್ಯಕರ್ಮಗಳನ್ನು ಮುಗಿಸಿ ಸಮಾಧಾನಹೊಂದಿದವರಾಗಿ ಯುದ್ಧಕ್ಕೆ ಸಜ್ಜಾಗಿ ಹೊರಡುವಂತೆ ಸೇನೆಗಳಿಗೆ ಆಜ್ಞಾಪಿಸಿದರು.

08001011a ಕರ್ಣಂ ಸೇನಾಪತಿಂ ಕೃತ್ವಾ ಕೃತಕೌತುಕಮಂಗಲಾಃ|

08001011c ವಾಚಯಿತ್ವಾ ದ್ವಿಜಶ್ರೇಷ್ಠಾನ್ದಧಿಪಾತ್ರಘೃತಾಕ್ಷತೈಃ||

08001012a ನಿಷ್ಕೈರ್ಗೋಭಿರ್ಹಿರಣ್ಯೇನ ವಾಸೋಭಿಶ್ಚ ಮಹಾಧನೈಃ|

08001012c ವರ್ಧ್ಯಮಾನಾ ಜಯಾಶೀರ್ಭಿಃ ಸೂತಮಾಗಧಬಂದಿಭಿಃ||

ಸಾಂಪ್ರದಾಯಿಕ ಮಂಗಲಕಾರ್ಯಗಳನ್ನು ಮುಗಿಸಿಕೊಂಡು ಕರ್ಣನನ್ನು ಸೇನಾಪತಿಯನ್ನಾಗಿ ಮಾಡಿಕೊಂಡು ಮೊಸರಿನಪಾತ್ರೆ, ತುಪ್ಪ, ಅಕ್ಷತೆ, ಗೋವು, ಕುದುರೆ, ಕಂಠಾಭರಣ, ಮತ್ತು ಬಹುಮೂಲ್ಯ ವಸ್ತ್ರ ಇವೇ ಮುಂತಾದವುಗಳಿಂದ ಬ್ರಾಹ್ಮಣರನ್ನು ಸತ್ಕರಿಸಿ, ಅವರಿಂದ ಆಶೀರ್ವಚನಗಳನ್ನು ಪಡೆದು, ಸೂತಮಾಗಧರಿಂದ ಪ್ರಶಂಸಿಸಲ್ಪಡುತ್ತಾ ರಣಾಂಗಣವನ್ನು ಸೇರಿದರು.

08001013a ತಥೈವ ಪಾಂಡವಾ ರಾಜನ್ಕೃತಸರ್ವಾಹ್ಣಿಕಕ್ರಿಯಾಃ|

08001013c ಶಿಬಿರಾನ್ನಿರ್ಯಯೂ ರಾಜನ್ಯುದ್ಧಾಯ ಕೃತನಿಶ್ಚಯಾಃ||

ರಾಜನ್! ಹಾಗೆಯೇ ಪಾಂಡವರೂ ಕೂಡ ಸರ್ವ ಆಹ್ನಿಕಕ್ರಿಯೆಗಳನ್ನು ಮಾಡಿ, ಯುದ್ಧಮಾಡಲು ನಿಶ್ಚಯಿಸಿದವರಾಗಿ ಶಿಬಿರಗಳಿಂದ ಹೊರಟರು.

08001014a ತತಃ ಪ್ರವವೃತೇ ಯುದ್ಧಂ ತುಮುಲಂ ರೋಮಹರ್ಷಣಂ|

08001014c ಕುರೂಣಾಂ ಪಾಂಡವಾನಾಂ ಚ ಪರಸ್ಪರವಧೈಷಿಣಾಂ||

ಆಗ ಪರಸ್ಪರರನ್ನು ವಧಿಸಲು ಬಯಸಿದ್ದ ಕುರು ಮತ್ತು ಪಾಂಡವರ ನಡುವೆ ರೋಮಾಂಚಕ ತುಮುಲಯುದ್ಧವು ನಡೆಯಿತು.

08001015a ತಯೋರ್ದ್ವೇ ದಿವಸೇ ಯುದ್ಧಂ ಕುರುಪಾಂಡವಸೇನಯೋಃ|

08001015c ಕರ್ಣೇ ಸೇನಾಪತೌ ರಾಜನ್ನಭೂದದ್ಭುತದರ್ಶನಂ||

ರಾಜನ್! ಕರ್ಣನ ಸೇನಾಪತಿತ್ವದಲ್ಲಿ ಕುರು-ಪಾಂಡವ ಸೇನೆಗಳ ನಡುವೆ ಎರಡು ದಿವಸಗಳ ನೋಡಲು ಅದ್ಭುತವಾಗಿದ್ದ ಯುದ್ಧವು ನಡೆಯಿತು.

08001016a ತತಃ ಶತ್ರುಕ್ಷಯಂ ಕೃತ್ವಾ ಸುಮಹಾಂತಂ ರಣೇ ವೃಷಃ|

08001016c ಪಶ್ಯತಾಂ ಧಾರ್ತರಾಷ್ಟ್ರಾಣಾಂ ಫಲ್ಗುನೇನ ನಿಪಾತಿತಃ||

ರಣದಲ್ಲಿ ಮಹತ್ತರ ಶತ್ರುಕ್ಷಯವನ್ನುಂಟುಮಾಡಿ ವೃಷಸೇನ ಕರ್ಣನು ಧಾರ್ತರಾಷ್ಟ್ರರು ನೋಡುತ್ತಿದ್ದಂತೆಯೇ ಫಲ್ಗುನನಿಂದ ಕೆಳಕ್ಕುರುಳಿಸಲ್ಪಟ್ಟನು.

08001017a ತತಸ್ತತ್ಸಂಜಯಃ ಸರ್ವಂ ಗತ್ವಾ ನಾಗಾಹ್ವಯಂ ಪುರಂ|

08001017c ಆಚಖ್ಯೌ ಧೃತರಾಷ್ಟ್ರಾಯ ಯದ್ವೃತ್ತಂ ಕುರುಜಾಂಗಲೇ||

ಅನಂತರ ಸಂಜಯನು ನಾಗಾಹ್ವಯ ಪುರಕ್ಕೆ ಹೋಗಿ ಧೃತರಾಷ್ಟ್ರನಿಗೆ ಕುರುಜಾಂಗಲದಲ್ಲಿ ನಡೆದ ಎಲ್ಲವನ್ನೂ ಹೇಳಿದನು.”

08001018 ಜನಮೇಜಯ ಉವಾಚ|

08001018a ಆಪಗೇಯಂ ಹತಂ ಶ್ರುತ್ವಾ ದ್ರೋಣಂ ಚ ಸಮರೇ ಪರೈಃ|

08001018c ಯೋ ಜಗಾಮ ಪರಾಮಾರ್ತಿಂ ವೃದ್ಧೋ ರಾಜಾಂಬಿಕಾಸುತಃ||

ಜನಮೇಜಯನು ಹೇಳಿದನು: “ಆಪಗೇಯ ಭೀಷ್ಮ ಮತ್ತು ದ್ರೋಣರು ಸಮರದಲ್ಲಿ ಶತ್ರುಗಳಿಂದ ಹತರಾದರೆನ್ನುವುದನ್ನು ಕೇಳಿದ ರಾಜಾ ಅಂಬಿಕಾಸುತನು ಪರಮ ದುಃಖಿತನಾಗಿದ್ದನು.

08001019a ಸ ಶ್ರುತ್ವಾ ನಿಹತಂ ಕರ್ಣಂ ದುರ್ಯೋಧನಹಿತೈಷಿಣಂ|

08001019c ಕಥಂ ದ್ವಿಜವರ ಪ್ರಾಣಾನಧಾರಯತ ದುಃಖಿತಃ||

ದ್ವಿಜವರ! ಈಗ ದುರ್ಯೋಧನನ ಹಿತೈಷಿಣಿ ಕರ್ಣನು ಹತನಾದುದನ್ನು ಕೇಳಿ ದುಃಖಿತನಾದ ಅವನು ಹೇಗೆ ಪ್ರಾಣಗಳನ್ನು ಉಳಿಸಿಕೊಂಡಿದ್ದನು?

08001020a ಯಸ್ಮಿಂ ಜಯಾಶಾಂ ಪುತ್ರಾಣಾಮಮನ್ಯತ ಸ ಪಾರ್ಥಿವಃ|

08001020c ತಸ್ಮಿನ್ ಹತೇ ಸ ಕೌರವ್ಯಃ ಕಥಂ ಪ್ರಾಣಾನಧಾರಯತ್||

ರಾಜನು ತನ್ನ ಪುತ್ರರ ಜಯದ ಆಸೆಯನ್ನು ಯಾರಮೇಲೆ ಇರಿಸಿದ್ದನೋ ಅವನೇ ಹತನಾದನೆಂದಾಗ ಆ ಕೌರವ್ಯನು ಹೇಗೆ ಪ್ರಾಣಗಳನ್ನುಳಿಸಿಕೊಂಡಿದ್ದನು?

08001021a ದುರ್ಮರಂ ಬತ ಮನ್ಯೇಽಹಂ ನೃಣಾಂ ಕೃಚ್ಚ್ರೇಽಪಿ ವರ್ತತಾಂ|

08001021c ಯತ್ರ ಕರ್ಣಂ ಹತಂ ಶ್ರುತ್ವಾ ನಾತ್ಯಜಚ್ಜೀವಿತಂ ನೃಪಃ||

ಕರ್ಣನು ಹತನಾದುದನ್ನು ಕೇಳಿಯೂ ರಾಜನು ಜೀವವನ್ನು ತೊರೆಯಲಿಲ್ಲವೆಂದರೆ ಅತಿ ದಾರುಣ ಕಷ್ಟದಲ್ಲಿ ಸಿಲುಕಿ ನರಳುತ್ತಿದ್ದರೂ ಮನುಷ್ಯನಿಗೆ ಪ್ರಾಣಪರಿತ್ಯಾಗವು ಅಶಕ್ಯವೆಂದು ನನಗನ್ನಿಸುತ್ತದೆ.

08001022a ತಥಾ ಶಾಂತನವಂ ವೃದ್ಧಂ ಬ್ರಹ್ಮನ್ಬಾಹ್ಲಿಕಮೇವ ಚ|

08001022c ದ್ರೋಣಂ ಚ ಸೋಮದತ್ತಂ ಚ ಭೂರಿಶ್ರವಸಮೇವ ಚ||

08001023a ತಥೈವ ಚಾನ್ಯಾನ್ಸುಹೃದಃ ಪುತ್ರಪೌತ್ರಾಂಶ್ಚ ಪಾತಿತಾನ್|

08001023c ಶ್ರುತ್ವಾ ಯನ್ನಾಜಹಾತ್ಪ್ರಾಣಾಂಸ್ತನ್ಮನ್ಯೇ ದುಷ್ಕರಂ ದ್ವಿಜ||

ಬ್ರಹ್ಮನ್! ದ್ವಿಜ! ಹಾಗೆಯೇ ವೃದ್ಧ ಶಾಂತನವ ಭೀಷ್ಮ, ಬಾಹ್ಲೀಕ, ದ್ರೋಣ, ಸೋಮದತ್ತ, ಭೂರಿಶ್ರವ, ಮತ್ತು ಇನ್ನೂ ಇತರ ಸುಹೃದಯರು, ಪುತ್ರ ಪೌತ್ರರು ಹತರಾದುದನ್ನು ಕೇಳಿಯೂ ಅವನು ಪ್ರಾಣಗಳನ್ನು ತೊರೆಯಲಿಲ್ಲವೆಂದರೆ ತಾನಾಗಿಯೇ ಪ್ರಾಣವನ್ನು ತೊರೆಯುವುದು ದುಷ್ಕರವೆಂದು ನನಗನ್ನಿಸುತ್ತದೆ.

08001024a ಏತನ್ಮೇ ಸರ್ವಮಾಚಕ್ಷ್ವ ವಿಸ್ತರೇಣ ತಪೋಧನ|

08001024c ನ ಹಿ ತೃಪ್ಯಾಮಿ ಪೂರ್ವೇಷಾಂ ಶೃಣ್ವಾನಶ್ಚರಿತಂ ಮಹತ್[1]||

ತಪೋಧನ! ಇವೆಲ್ಲವನ್ನೂ ನನಗೆ ವಿಸ್ತಾರವಾಗಿ ಹೇಳು. ಪೂರ್ವಜರ ಮಹಾ ಚರಿತ್ರೆಯನ್ನು ಕೇಳಿ ನನಗೆ ಇನ್ನೂ ತೃಪ್ತಿಯೇ ಆಗಿಲ್ಲ!”

08001025 ವೈಶಂಪಾಯನ ಉವಾಚ|

08001025a ಹತೇ ಕರ್ಣೇ ಮಹಾರಾಜ ನಿಶಿ ಗಾವಲ್ಗಣಿಸ್ತದಾ|

08001025c ದೀನೋ ಯಯೌ ನಾಗಪುರಮಶ್ವೈರ್ವಾತಸಮೈರ್ಜವೇ||

ವೈಶಂಪಾಯನನು ಹೇಳಿದನು: “ಮಹಾರಾಜ! ಕರ್ಣನು ಹತನಾಗಲು ಆ ರಾತ್ರಿಯೇ ದೀನ ಗಾವಲ್ಗಣಿಯು ವಾಯುವೇಗ ಸಮಾನ ಕುದುರೆಗಳನ್ನು ಕಟ್ಟಿದ್ದ ರಥದಲ್ಲಿ ಕುಳಿತು ನಾಗಪುರಕ್ಕೆ ಹೊರಟನು.

08001026a ಸ ಹಾಸ್ತಿನಪುರಂ ಗತ್ವಾ ಭೃಶಮುದ್ವಿಗ್ನಮಾನಸಃ|

08001026c ಜಗಾಮ ಧೃತರಾಷ್ಟ್ರಸ್ಯ ಕ್ಷಯಂ ಪ್ರಕ್ಷೀಣಬಾಂದವಂ||

ಹಸ್ತಿನಾಪುರಕ್ಕೆ ಹೋಗಿ ತುಂಬಾ ಉದ್ವಿಗ್ನಮಾನಸನಾದ ಅವನು ಬಾಂಧವಶೂನ್ಯ ಧೃತರಾಷ್ಟ್ರನ ಬಳಿ ಹೋದನು.

08001027a ಸ ಸಮುದ್ವೀಕ್ಷ್ಯ ರಾಜಾನಂ ಕಶ್ಮಲಾಭಿಹತೌಜಸಂ|

08001027c ವವಂದೇ ಪ್ರಾಂಜಲಿರ್ಭೂತ್ವಾ ಮೂರ್ಧ್ನಾ ಪಾದೌ ನೃಪಸ್ಯ ಹ||

ಅತ್ಯಂತ ದುಃಖದಿಂದ ಕಳೆಗುಂದಿದ್ದ ರಾಜನನ್ನು ಸ್ವಲ್ಪಹೊತ್ತು ನೋಡಿ ಅವನು ರಾಜನ ಪಾದಗಳಲ್ಲಿ ತಲೆಯನ್ನಿಟ್ಟು ಕೈಮುಗಿದು ವಂದಿಸಿದನು.

08001028a ಸಂಪೂಜ್ಯ ಚ ಯಥಾನ್ಯಾಯಂ ಧೃತರಾಷ್ಟ್ರಂ ಮಹೀಪತಿಂ|

08001028c ಹಾ ಕಷ್ಟಮಿತಿ ಚೋಕ್ತ್ವಾ ಸ ತತೋ ವಚನಮಾದದೇ||

ಯಥಾನ್ಯಾಯವಾಗಿ ಮಹೀಪತಿ ಧೃತರಾಷ್ಟ್ರನನ್ನು ಗೌರವಿಸಿ “ಅಯ್ಯೋ ಕಷ್ಟವೇ!” ಎಂದು ಹೇಳಿ ಅನಂತರ ಈ ಮಾತುಗಳನ್ನಾಡಿದನು:

08001029a ಸಂಜಯೋಽಹಂ ಕ್ಷಿತಿಪತೇ ಕಚ್ಚಿದಾಸ್ತೇ ಸುಖಂ ಭವಾನ್|

08001029c ಸ್ವದೋಷೇಣಾಪದಂ ಪ್ರಾಪ್ಯ ಕಚ್ಚಿನ್ನಾದ್ಯ ವಿಮುಹ್ಯಸಿ||

“ಕ್ಷಿತಿಪತೇ! ನಾನು ಸಂಜಯ! ನೀನು ಸುಖದಿಂದಿರುವೆಯಷ್ಟೇ? ನಿನ್ನದೇ ದೋಷದಿಂದ ಆಪತ್ತನ್ನು ತಂದುಕೊಂಡು ವಿಮೋಹಿತನಾಗಿಲ್ಲ ತಾನೇ?

08001030a ಹಿತಾನ್ಯುಕ್ತಾನಿ ವಿದುರದ್ರೋಣಗಾಂಗೇಯಕೇಶವೈಃ|

08001030c ಅಗೃಹೀತಾನ್ಯನುಸ್ಮೃತ್ಯ ಕಚ್ಚಿನ್ನ ಕುರುಷೇ ವ್ಯಥಾಂ||

ವಿದುರ, ದ್ರೋಣ, ಗಾಂಗೇಯ ಮತ್ತು ಕೇಶವರು ಹೇಳಿದ್ದ ಹಿತ ಮಾತುಗಳನ್ನು ಸ್ವೀಕರಿಸದೇ ಇದ್ದುದನ್ನು ನೆನಪಿಸಿಕೊಂಡು ನೀನು ಈಗ ವ್ಯಥೆಪಡುತ್ತಿಲ್ಲ ತಾನೇ?

08001031a ರಾಮನಾರದಕಣ್ವೈಶ್ಚ ಹಿತಮುಕ್ತಂ ಸಭಾತಲೇ|

08001031c ನಗೃಹೀತಮನುಸ್ಮೃತ್ಯ ಕಚ್ಚಿನ್ನ ಕುರುಷೇ ವ್ಯಥಾಂ||

ಪರಶುರಾಮ, ನಾರದ, ಮತ್ತು ಕಣ್ವರು ಸಭಾಂಗಣದಲ್ಲಿ ಹೇಳಿದ್ದ ಹಿತಮಾತುಗಳನ್ನು ಸ್ವೀಕರಿಸದೇ ಇದ್ದುದನ್ನು ಸ್ಮರಿಸಿಕೊಂಡು ಈಗ ನೀನು ವ್ಯಥೆಪಡುತ್ತಿಲ್ಲ ತಾನೇ?

08001032a ಸುಹೃದಸ್ತ್ವದ್ಧಿತೇ ಯುಕ್ತಾನ್ಭೀಷ್ಮದ್ರೋಣಮುಖಾನ್ಪರೈಃ|

08001032c ನಿಹತಾನ್ಯುಧಿ ಸಂಸ್ಮೃತ್ಯ ಕಚ್ಚಿನ್ನ ಕುರುಷೇ ವ್ಯಥಾಂ||

ನಿನ್ನದೇ ಹಿತವನ್ನು ಬಯಸುತ್ತಿದ್ದ ಸುಹೃದಯ ಭೀಷ್ಮ ಮತ್ತು ದ್ರೋಣಾದಿಗಳು ಶತ್ರುಗಳಿಂದ ಯುದ್ಧದಲ್ಲಿ ಹತರಾದರೆನ್ನುವುದನ್ನು ನೆನಪಿಸಿಕೊಳ್ಳುತ್ತಾ ನೀನು ವ್ಯಥೆಪಡುತ್ತಿಲ್ಲ ತಾನೇ?”

08001033a ತಮೇವಂವಾದಿನಂ ರಾಜಾ ಸೂತಪುತ್ರಂ ಕೃತಾಂಜಲಿಂ|

08001033c ಸುದೀರ್ಘಮಭಿನಿಃಶ್ವಸ್ಯ ದುಃಖಾರ್ತ ಇದಮಬ್ರವೀತ್||

ಅಂಜಲೀ ಬದ್ಧನಾಗಿ ಈ ರೀತಿ ಹೇಳುತ್ತಿದ್ದ ಸೂತಪುತ್ರನಿಗೆ ರಾಜನು ದುಃಖಾರ್ತನಾಗಿ ದೀರ್ಘ ನಿಟ್ಟುಸಿರು ಬಿಡುತ್ತಾ ಹೇಳಿದನು:

08001034a ಗಾಂಗೇಯೇ ನಿಹತೇ ಶೂರೇ ದಿವ್ಯಾಸ್ತ್ರವತಿ ಸಂಜಯ|

08001034c ದ್ರೋಣೇ ಚ ಪರಮೇಷ್ವಾಸೇ ಭೃಶಂ ಮೇ ವ್ಯಥಿತಂ ಮನಃ||

“ಸಂಜಯ! ದಿವ್ಯಾಸ್ತ್ರಗಳನ್ನು ಹೊಂದಿದ್ದ ಶೂರ ಗಾಂಗೇಯ ಮತ್ತು ಪರಮೇಷ್ವಾಸ ದ್ರೋಣರು ಹತರಾಗಲು ನನ್ನ ಮನಸ್ಸಿಗೆ ಬಹಳ ವ್ಯಥೆಯುಂಟಾಗಿತ್ತು.

08001035a ಯೋ ರಥಾನಾಂ ಸಹಸ್ರಾಣಿ ದಂಶಿತಾನಾಂ ದಶೈವ ಹಿ|

08001035c ಅಹನ್ಯಹನಿ ತೇಜಸ್ವೀ ನಿಜಘ್ನೇ ವಸುಸಂಭವಃ||

08001036a ಸ ಹತೋ ಯಜ್ಞಸೇನಸ್ಯ ಪುತ್ರೇಣೇಹ ಶಿಖಂಡಿನಾ|

08001036c ಪಾಂಡವೇಯಾಭಿಗುಪ್ತೇನ ಭೃಶಂ ಮೇ ವ್ಯಥಿತಂ ಮನಃ||

ಹತ್ತುದಿನಗಳ ಪರ್ಯಂತವಾಗಿ ಪ್ರತಿದಿನವೂ ಸಹಸ್ರಾರು ಕವಚಧಾರಿ ಮಹಾರಥರನ್ನು ಸಂಹರಿಸಿದ ತೇಜಸ್ವೀ ವಸುಸಂಭವನನ್ನು ಯಜ್ಞಸೇನನ ಮಗ ಶಿಖಂಡಿಯಿಂದ ರಕ್ಷಿಸಲ್ಪಟ್ಟ ಪಾಂಡವೇಯನು ಸಂಹರಿಸಿದನು ಎಂದು ಕೇಳಿ ನನ್ನ ಮನಸ್ಸಿಗೆ ಬಹಳ ವ್ಯಥೆಯುಂಟಾಯಿತು.

08001037a ಭಾರ್ಗವಃ ಪ್ರದದೌ ಯಸ್ಮೈ ಪರಮಾಸ್ತ್ರಂ ಮಹಾತ್ಮನೇ|

08001037c ಸಾಕ್ಷಾದ್ರಾಮೇಣ ಯೋ ಬಾಲ್ಯೇ ಧನುರ್ವೇದ ಉಪಾಕೃತಃ||

08001038a ಯಸ್ಯ ಪ್ರಸಾದಾತ್ಕೌಂತೇಯಾ ರಾಜಪುತ್ರಾ ಮಹಾಬಲಾಃ|

08001038c ಮಹಾರಥತ್ವಂ ಸಂಪ್ರಾಪ್ತಾಸ್ತಥಾನ್ಯೇ ವಸುಧಾಧಿಪಾಃ||

08001039a ತಂ ದ್ರೋಣಂ ನಿಹತಂ ಶ್ರುತ್ವಾ ಧೃಷ್ಟದ್ಯುಮ್ನೇನ ಸಂಯುಗೇ|

08001039c ಸತ್ಯಸಂಧಂ ಮಹೇಷ್ವಾಸಂ ಭೃಶಂ ಮೇ ವ್ಯಥಿತಂ ಮನಃ||

ಯಾವ ಮಹಾತ್ಮನಿಗೆ ಭಾರ್ಗವನು ಪರಮಾಸ್ತ್ರವನ್ನು ನೀಡಿದ್ದನೋ, ಯಾರು ಸಾಕ್ಷಾದ್ ಪರಶುರಾಮನಿಂದ ಬಾಲ್ಯದಲ್ಲಿಯೇ ಧನುರ್ವೇದವನ್ನು ಪಡೆದುಕೊಂಡನೋ, ಯಾರ ಪ್ರಸಾದದಿಂದ ಮಹಾಬಲಶಾಲಿ ರಾಜಪುತ್ರ ಕೌಂತೇಯರು ಮತ್ತು ಅನ್ಯ ವಸುಧಾಧಿಪರು ಮಹಾರಥತ್ವವನ್ನು ಹೊಂದಿದರೋ ಆ ಸತ್ಯಸಂಧ ಮಹೇಷ್ವಾಸ ದ್ರೋಣನನ್ನು ಯುದ್ಧದಲ್ಲಿ ಧೃಷ್ಟದ್ಯುಮ್ನನು ಸಂಹರಿಸಿದನು ಎನ್ನುವುದನ್ನು ಕೇಳಿ ನನ್ನ ಮನಸ್ಸಿಗೆ ಬಹಳ ವ್ಯಥೆಯುಂಟಾಯಿತು[2].

08001040a ತ್ರೈಲೋಕ್ಯೇ ಯಸ್ಯ ಶಾಸ್ತ್ರೇಷು ನ ಪುಮಾನ್ವಿದ್ಯತೇ ಸಮಃ|

08001040c ತಂ ದ್ರೋಣಂ ನಿಹತಂ ಶ್ರುತ್ವಾ ಕಿಮಕುರ್ವತ ಮಾಮಕಾಃ||

ಅಸ್ತ್ರವಿದ್ಯೆಯಲ್ಲಿ ಮೂರುಲೋಕಗಳಲ್ಲಿಯೂ ಯಾರ ಸಮಾನ ಯಾವ ಪುರುಷನೂ ಇಲ್ಲವೋ ಅಂತಹ ದ್ರೋಣನು ಹತನಾದುದನ್ನು ಕೇಳಿ ನನ್ನವರು ಏನು ಮಾಡಿದರು?

08001041a ಸಂಶಪ್ತಕಾನಾಂ ಚ ಬಲೇ ಪಾಂಡವೇನ ಮಹಾತ್ಮನಾ|

08001041c ಧನಂಜಯೇನ ವಿಕ್ರಮ್ಯ ಗಮಿತೇ ಯಮಸಾದನಂ||

08001042a ನಾರಾಯಣಾಸ್ತ್ರೇ ನಿಹತೇ ದ್ರೋಣಪುತ್ರಸ್ಯ ಧೀಮತಃ|

08001042c ಹತಶೇಷೇಷ್ವನೀಕೇಷು ಕಿಮಕುರ್ವತ ಮಾಮಕಾಃ||

ಸಂಶಪ್ತಕ ಸೇನೆಯನ್ನು ಮಹಾತ್ಮ ಪಾಂಡವ ಧನಂಜಯನು ವಿಕ್ರಮದಿಂದ ಯಮಸಾದನಕ್ಕೆ ಕಳುಹಿಸಲು, ಧೀಮತ ದ್ರೋಣಪುತ್ರನ ನಾರಾಯಣಾಸ್ತ್ರವೂ ನಾಶಗೊಳ್ಳಲು, ಅಳಿದುಳಿದ ಸೇನೆಗಳೊಂದಿಗೆ ನನ್ನವರು ಏನು ಮಾಡಿದರು?

08001043a ವಿಪ್ರದ್ರುತಾನಹಂ ಮನ್ಯೇ ನಿಮಗ್ನಃ ಶೋಕಸಾಗರೇ|

08001043c ಪ್ಲವಮಾನಾನ್ ಹತೇ ದ್ರೋಣೇ ಸನ್ನನೌಕಾನಿವಾರ್ಣವೇ||

ದ್ರೋಣನು ಹತನಾದ ನಂತರ ನನ್ನವರು ಪಲಾಯನ ಮಾಡಿ ಸಾಗರದ ಮಧ್ಯೆ ನೌಕೆಯನ್ನು ಕಳೆದುಕೊಂಡವರಂತೆ ಶೋಕಸಾಗರದಲ್ಲಿ ಮುಳುಗಿಹೋಗಿರಬಹುದೆಂದು ನಾನು ಭಾವಿಸುತ್ತೇನೆ.

08001044a ದುರ್ಯೋಧನಸ್ಯ ಕರ್ಣಸ್ಯ ಭೋಜಸ್ಯ ಕೃತವರ್ಮಣಃ|

08001044c ಮದ್ರರಾಜಸ್ಯ ಶಲ್ಯಸ್ಯ ದ್ರೌಣೇಶ್ಚೈವ ಕೃಪಸ್ಯ ಚ||

08001045a ಮತ್ಪುತ್ರಶೇಷಸ್ಯ ತಥಾ ತಥಾನ್ಯೇಷಾಂ ಚ ಸಂಜಯ|

08001045c ವಿಪ್ರಕೀರ್ಣೇಷ್ವನೀಕೇಷು ಮುಖವರ್ಣೋಽಭವತ್ಕಥಂ||

ಸಂಜಯ! ಸೇನೆಗಳು ಚೆಲ್ಲಾಪಿಲ್ಲಿಯಾಗಿ ಓಡಿ ಹೋಗುತ್ತಿರಲು ದುರ್ಯೋಧನ, ಕರ್ಣ, ಭೋಜ ಕೃತವರ್ಮ, ಮದ್ರರಾಜ ಶಲ್ಯ, ದ್ರೌಣಿ, ಕೃಪ, ಮತ್ತು ನನ್ನ ಉಳಿದ ಪುತ್ರರ ಮತ್ತು ಅನ್ಯರ ಮುಖಕಾಂತಿಯು ಹೇಗಿದ್ದಿತು?

08001046a ಏತತ್ಸರ್ವಂ ಯಥಾ ವೃತ್ತಂ ತತ್ತ್ವಂ ಗಾವಲ್ಗಣೇ ರಣೇ|

08001046c ಆಚಕ್ಷ್ವ ಪಾಂಡವೇಯಾನಾಂ ಮಾಮಕಾನಾಂ ಚ ಸರ್ವಶಃ||

ಗಾವಲ್ಗಣೇ! ರಣದಲ್ಲಿ ಪಾಂಡವರು ಮತ್ತು ನನ್ನವರ ನಡುವೆ ಏನೆಲ್ಲ ನಡೆಯಿತೋ ಅವೆಲ್ಲವನ್ನೂ ನಡೆದಂತೆಯೇ ನನಗೆ ಹೇಳು!”

08001047 ಸಂಜಯ ಉವಾಚ|

08001047a ಪಾಂಡವೇಯೈರ್ಹಿ ಯದ್ವೃತ್ತಂ ಕೌರವೇಯೇಷು ಮಾರಿಷ|

08001047c ತಚ್ಚ್ರುತ್ವಾ ಮಾ ವ್ಯಥಾಂ ಕಾರ್ಷೀದಿಷ್ಟೇ ನ ವ್ಯಥತೇ ಮನಃ||

ಸಂಜಯನು ಹೇಳಿದನು: “ಮಾರಿಷ! ಪಾಂಡವ ಕೌರವರ ನಡುವೆ ಏನು ನಡೆಯಿತೆನ್ನುವುದನ್ನು ಕೇಳಿ ವ್ಯಥೆಪಡಬಾರದು. ಏಕೆಂದರೆ ದೈವದಿಂದಲೇ ದುಃಖವು ಪ್ರಾಪ್ತವಾದಾಗ ತಿಳಿದವನು ವ್ಯಥೆಪಡುವುದಿಲ್ಲ.

08001048a ಯಸ್ಮಾದಭಾವೀ ಭಾವೀ ವಾ ಭವೇದರ್ಥೋ ನರಂ ಪ್ರತಿ|

08001048c ಅಪ್ರಾಪ್ತೌ ತಸ್ಯ ವಾ ಪ್ರಾಪ್ತೌ ನ ಕಶ್ಚಿದ್ವ್ಯಥತೇ ಬುಧಃ||

ಮನುಷ್ಯನಿಗೆ ನಡೆಯಬಾರದ್ದುದು ನಡೆಯಬಹುದು ಅಥವಾ ಒಳ್ಳೆಯದೇ ಆಗಬಹುದು. ಪ್ರಾಪ್ತವಾಗಿದ್ದುದಕ್ಕೆ ಅಥವಾ ಪ್ರಾಪ್ತವಾಗದೇ ಇದ್ದುದಕ್ಕೆ ತಿಳಿದವನು ವ್ಯಥೆಪಡುವುದಿಲ್ಲ.”

08001049 ಧೃತರಾಷ್ಟ್ರ ಉವಾಚ|

08001049a ನ ವ್ಯಥಾ ಶೃಣ್ವತಃ ಕಾ ಚಿದ್ವಿದ್ಯತೇ ಮಮ ಸಂಜಯ|

08001049c ದಿಷ್ಟಂ ಏತತ್ಪುರಾ ಮನ್ಯೇ ಕಥಯಸ್ವ ಯಥೇಚ್ಚಕಂ||

ಧೃತರಾಷ್ಟ್ರನು ಹೇಳಿದನು: “ಸಂಜಯ! ಇವೆಲ್ಲವೂ ದೈವೇಚ್ಛೆಯಿಂದ ನಡೆಯುತ್ತಿದೆಯೆಂದು ನನಗೆ ಮೊದಲೇ ತಿಳಿದಿದ್ದುದರಿಂದ ಏನನ್ನು ಕೇಳಿದರೂ ನನ್ನ ಮನಸ್ಸು ವ್ಯಥೆಗೊಳ್ಳುವುದಿಲ್ಲ. ನಿನಗಿಷ್ಟವಾದಂತೆ ಹೇಳುತ್ತಾ ಹೋಗು!”

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಧೃತರಾಷ್ಟ್ರಸಂಜಯಸಂವಾದೇ ಪ್ರಥಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಧೃತರಾಷ್ಟ್ರಸಂಜಯಸಂವಾದ ಎನ್ನುವ ಮೊದಲನೇ ಅಧ್ಯಾಯವು.

[1] ಗೋರಖಪುರಸಂಪುಟದಲ್ಲಿ ಇಲ್ಲಿಗೆ ಕರ್ಣಪರ್ವದ ಮೊದಲನೆಯ ಅಧ್ಯಾಯವು ಮುಗಿಯುತ್ತದೆ.

[2] ಯಯೋರ್ಲೋಕೇ ಪುಮಾನಸ್ತ್ರೇ ನ ಸಮೋಽತಿ ಚತುರ್ವಿಧೇ| ತೌ ದ್ರೋಣಭೀಷ್ಮೋ ಶ್ರುತ್ವಾ ತು ಹತೌ ಮೇ ವ್ಯಥಿತಂ ಮನಃ|| (ಗೋರಖಪುರ ಸಂಪುಟ).

Kannada Translation of Karna Parva, by Chapter:
  1. ಧೃತರಾಷ್ಟ್ರಸಂಜಯಸಂವಾದ
  2. ಸಂಜಯವಾಕ್ಯ
  3. ಧೃತರಾಷ್ಟ್ರಶೋಕ
  4. ಸಂಜಯವಾಕ್ಯ
  5. ಧೃತರಾಷ್ಟ್ರಪ್ರಶ್ನೆ
  6. ಕರ್ಣಾಭಿಷೇಕ
  7. ವ್ಯೂಹನಿರ್ಮಾಣ
  8. ಕ್ಷೇಮಧೂರ್ತಿವಧ
  9. ವಿಂದಾನುವಿಂದವಧ
  10. ಚಿತ್ರವಧ
  11. ಅಶ್ವತ್ಥಾಮಭೀಮಸೇನಯೋರ್ಯುದ್ಧ
  12. ಅಶ್ವತ್ಥಾಮಪರಾಜಯ
  13. ದಂಡವಧ
  14. ಸಂಕುಲಯುದ್ಧ
  15. ಪಾಂಡ್ಯವಧ
  16. ಸಂಕುಲಯುದ್ಧ
  17. ಕರ್ಣಯುದ್ಧ
  18. ಸಂಕುಲಯುದ್ಧ
  19. ಸಂಕುಲಯುದ್ಧ
  20. ಸಂಕುಲಯುದ್ಧ
  21. ಪ್ರಥಮಯುದ್ಧದಿವಸಾವಹಾರ
  22. ಕರ್ಣದುರ್ಯೋಧನಸಂವಾದ
  23. ಶಲ್ಯಸಾರಥ್ಯ
  24. ತ್ರಿಪುರವಧೋಪಾಖ್ಯಾನ
  25. ಶಲ್ಯಸಾರಥ್ಯಸ್ವೀಕಾರ
  26. ಕರ್ಣಶಲ್ಯಸಂವಾದ
  27. ಕರ್ಣಮದ್ರಾಧಿಪಸಂವಾದ
  28. ಕರ್ಣಶಲ್ಯಸಂವಾದೇ ಹಂಸಕಾಕೀಯೋಪಾಖ್ಯಾನ
  29. ಕರ್ಣಶಲ್ಯಸಂವಾದ
  30. ಕರ್ಣಶಲ್ಯಸಂವಾದ
  31. ಕರ್ಣಶಲ್ಯಸಂವಾದ
  32. ಸಂಕುಲಯುದ್ಧ
  33. ಸಂಕುಲಯುದ್ಧ
  34. ಕರ್ಣಾಪಯಾನ
  35. ಸಂಕುಲಯುದ್ಧ
  36. ಸಂಕುಲಯುದ್ಧ
  37. ಸಂಕುಲಯುದ್ಧ
  38. ಸಂಕುಲಯುದ್ಧ
  39. ಪಾರ್ಥಾಪಯಾನ
  40. ಸಂಕುಲಯುದ್ಧ
  41. ಅಶ್ವತ್ಥಾಮಪ್ರತಿಜ್ಞೆ
  42. ದ್ರೌಣ್ಯಪಯಾನ
  43. ಕೃಷ್ಣಾರ್ಜುನಸಂವಾದ
  44. ಸಂಕುಲಯುದ್ಧ
  45. ಧರ್ಮರಾಜಶೋಧನ
  46. ಯುಧಿಷ್ಠಿರವಾಕ್ಯ
  47. ಅರ್ಜುನವಾಕ್ಯ
  48. ಯುಧಿಷ್ಠಿರಕ್ರೋಧವಾಕ್ಯ
  49. ಯುಧಿಷ್ಠಿರಸಮಾಶ್ವಾಸನ
  50. ಕರ್ಣಾರ್ಜುನಸಂವಾದ
  51. ಶ್ರೀಕೃಷ್ಣವಾಕ್ಯ
  52. ಅರ್ಜುನವಾಕ್ಯ
  53. ಸಂಕುಲದ್ವಂದ್ವಯುದ್ಧ
  54. ಭೀಮಸೇನವಿಶೋಕಸಂವಾದ
  55. ಶಕುನಿಪರಾಜಯ
  56. ಸಂಕುಲಯುದ್ಧ
  57. ಸಂಕುಲಯುದ್ಧ
  58. ಸಂಕುಲಯುದ್ಧ
  59. ಸಂಕುಲಯುದ್ಧ
  60. ದುಃಶಾಸನಭೀಮಸೇನಯುದ್ಧ
  61. ದುಃಶಾಸನವಧ
  62. ವೃಷಸೇನವಧ
  63. ಕರ್ಣಾರ್ಜುನಸಮಾಗಮೇ ದ್ವೈರಥ
  64. ಅಶ್ವತ್ಥಾಮವಾಕ್ಯ
  65. ಕರ್ಣಾರ್ಜುನದ್ವೈರಥ
  66. ಕರ್ಣರಥಚಕ್ರಗ್ರಸನ
  67. ಕರ್ಣವಧ
  68. ರಣಭೂಮಿವರ್ಣನ
  69. ಯುಧಿಷ್ಠಿರಹರ್ಷ

Comments are closed.