Shanti Parva: Chapter 169

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೧೬೯

ಪಿತಾಪುತ್ರಸಂವಾದ

ಕಲ್ಯಾಣವನ್ನು ಬಯಸುವವನು ಏನು ಮಾಡಬೇಕು ಎನ್ನುವುದರ ಕುರಿತು ಮಗನು ತಂದೆಗಿತ್ತ ಉಪದೇಶ[1] (೧-೩೭).

12169001 ಯುಧಿಷ್ಠಿರ ಉವಾಚ|

12169001a ಅತಿಕ್ರಾಮತಿ ಕಾಲೇಽಸ್ಮಿನ್ಸರ್ವಭೂತಕ್ಷಯಾವಹೇ|

12169001c ಕಿಂ ಶ್ರೇಯಃ ಪ್ರತಿಪದ್ಯೇತ ತನ್ಮೇ ಬ್ರೂಹಿ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಸರ್ವಭೂತಗಳನ್ನೂ ಕ್ಷಯಗೊಳಿಸುವ ಈ ಕಾಲವು ಕಳೆಯುತ್ತಲೇ ಇರುತ್ತದೆ. ಹೀಗಿರುವಾಗ ಮನುಷ್ಯನು ಶ್ರೇಯಸ್ಸಿಗಾಗಿ ಏನನ್ನು ಮಾಡಬಹುದು? ಅದನ್ನು ನನಗೆ ಹೇಳು.”

12169002 ಭೀಷ್ಮ ಉವಾಚ|

12169002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

12169002c ಪಿತುಃ ಪುತ್ರೇಣ ಸಂವಾದಂ ತನ್ನಿಬೋಧ ಯುಧಿಷ್ಠಿರ||

ಭೀಷ್ಮನು ಹೇಳಿದನು: “ಇದಕ್ಕೆ ಸಂಬಂಧಿಸಿದಂತೆ ಈ ಒಂದು ಪುರಾತನ ಇತಿಹಾಸವಾದ ತಂದೆ-ಮಗನ ಸಂವಾದವನ್ನು ಉದಾಹರಿಸುತ್ತಾರೆ. ಅದನ್ನು ಕೇಳು.

12169003a ದ್ವಿಜಾತೇಃ ಕಸ್ಯ ಚಿತ್ಪಾರ್ಥ ಸ್ವಾಧ್ಯಾಯನಿರತಸ್ಯ ವೈ|

12169003c ಬಭೂವ ಪುತ್ರೋ ಮೇಧಾವೀ ಮೇಧಾವೀ ನಾಮ ನಾಮತಃ||

ಪಾರ್ಥ! ಸ್ವಾಧ್ಯಾಯನಿರತನಾದ ಓರ್ವ ಬ್ರಾಹ್ಮಣನಿದ್ದನು. ಅವನಿಗೆ ಮೇಧಾವೀ ಎಂಬ ಹೆಸರಿನ ಓರ್ವ ಮೇಧಾವೀ ಪುತ್ರನಾದನು.

12169004a ಸೋಽಬ್ರವೀತ್ಪಿತರಂ ಪುತ್ರಃ ಸ್ವಾಧ್ಯಾಯಕರಣೇ ರತಮ್|

12169004c ಮೋಕ್ಷಧರ್ಮಾರ್ಥಕುಶಲೋ ಲೋಕತತ್ತ್ವವಿಚಕ್ಷಣಃ||

ಮೋಕ್ಷಧರ್ಮಾರ್ಥಗಳಲ್ಲಿ ಕುಶಲನಾಗಿದ್ದ ಮತ್ತು ಲೋಕತತ್ತ್ವಗಳನ್ನು ಅರಿತಿದ್ದ ಆ ಪುತ್ರನು ಸ್ವಾಧ್ಯಾಯದಲ್ಲಿ ನಿರತನಾಗಿದ್ದ ತನ್ನ ತಂದೆಗೆ ಹೇಳಿದನು:

12169005a ಧೀರಃ ಕಿಂ ಸ್ವಿತ್ತಾತ ಕುರ್ಯಾತ್ ಪ್ರಜಾನನ್

ಕ್ಷಿಪ್ರಂ ಹ್ಯಾಯುರ್ಭ್ರಶ್ಯತೇ ಮಾನವಾನಾಮ್|

12169005c ಪಿತಸ್ತದಾಚಕ್ಷ್ವ ಯಥಾರ್ಥಯೋಗಂ

ಮಮಾನುಪೂರ್ವ್ಯಾ ಯೇನ ಧರ್ಮಂ ಚರೇಯಮ್||

“ಅಪ್ಪಾ! ಮನುಷ್ಯನ ಆಯುಸ್ಸು ತೀವ್ರ ಗತಿಯಲ್ಲಿ ಕಳೆದುಹೋಗುತ್ತಿದೆ. ಇದನ್ನು ತಿಳಿದೂ ಧೀರನಾದವನು ಏನು ಮಾಡಬಲ್ಲನು? ತಂದೆಯೇ! ನನಗೆ ಆ ಉಪಾಯವನ್ನು ಯಥಾರ್ಥವಾಗಿ ಉಪದೇಶಿಸು. ಅದರಂತೆ ನಾನು ಧರ್ಮಾಚರಣೆಯನ್ನು ಮಾಡಬಹುದು.”

12169006 ಪಿತೋವಾಚ|

12169006a ವೇದಾನಧೀತ್ಯ ಬ್ರಹ್ಮಚರ್ಯೇಣ ಪುತ್ರ

ಪುತ್ರಾನಿಚ್ಚೇತ್ಪಾವನಾರ್ಥಂ ಪಿತೃಣಾಮ್|

12169006c ಅಗ್ನೀನಾಧಾಯ ವಿಧಿವಚ್ಚೇಷ್ಟಯಜ್ಞೋ

ವನಂ ಪ್ರವಿಶ್ಯಾಥ ಮುನಿರ್ಬುಭೂಷೇತ್||

ತಂದೆಯು ಹೇಳಿದನು: “ಪುತ್ರ! ಬ್ರಹ್ಮಚರ್ಯದಲ್ಲಿದ್ದುಕೊಂಡು ವೇದಗಳನ್ನು ಅಧ್ಯಯನ ಮಾಡಿ ಪಿತೃಗಳನ್ನು ಪಾವನಗೊಳಿಸಲು ಪುತ್ರರನ್ನು ಬಯಸಬೇಕು. ವಿಧಿವತ್ತಾಗಿ ಅಗ್ನಿಯನ್ನು ಸ್ಥಾಪಿಸಿ ಯಜ್ಞಗಳನ್ನು ಮಾಡಬೇಕು. ಅನಂತರ ವನವನ್ನು ಪ್ರವೇಶಿಸಿ ಮುನಿಯಾಗಿರಬೇಕು.”

12169007 ಪುತ್ರ ಉವಾಚ|

12169007a ಏವಮಭ್ಯಾಹತೇ ಲೋಕೇ ಸಮಂತಾತ್ಪರಿವಾರಿತೇ|

12169007c ಅಮೋಘಾಸು ಪತಂತೀಷು ಕಿಂ ಧೀರ ಇವ ಭಾಷಸೇ||

ಮಗನು ಹೇಳಿದನು: “ಈ ಲೋಕವೇ ಆಕ್ರಮಣಕ್ಕೊಳಗಾಗಿರುವಾಗ, ಎಲ್ಲಕಡೆಗಳಿಂದ ಮುತ್ತಿಗೆಗೆ ಸಿಲುಕಿರುವಾಗ, ಯಶಸ್ವಿಯು ಕಡಿಮೆಯಾಗುತ್ತಿರುವಾಗ ನೀನು ಧೀರನಂತೆ ಎಂಥಹ ಮಾತುಗಳನ್ನಾಡುತ್ತಿರುವೆ!”

12169008 ಪಿತೋವಾಚ|

12169008a ಕಥಮಭ್ಯಾಹತೋ ಲೋಕಃ ಕೇನ ವಾ ಪರಿವಾರಿತಃ|

12169008c ಅಮೋಘಾಃ ಕಾಃ ಪತಂತೀಹ ಕಿಂ ನು ಭೀಷಯಸೀವ ಮಾಮ್||

ತಂದೆಯು ಹೇಳಿದನು: “ನೀನು ನನ್ನನ್ನು ಏಕೆ ಹೆದರಿಸುತ್ತಿದ್ದೀಯೆ? ಈ ಲೋಕವು ಯಾರ ಆಕ್ರಮಣಕ್ಕೊಳಪಟ್ಟಿದೆ? ಯಾರು ಇದನ್ನು ಮುತ್ತಿಗೆ ಹಾಕಿದ್ದಾರೆ? ಮತ್ತು ತನ್ನ ಕೆಲಸವನ್ನು ಚೆನ್ನಾಗಿ ಪೂರೈಸಿ ಯಾರು ತಾನೇ ಕಡಿಮೆಯಾಗುತ್ತಿದ್ದಾನೆ?”

12169009 ಪುತ್ರ ಉವಾಚ|

12169009a ಮೃತ್ಯುನಾಭ್ಯಾಹತೋ ಲೋಕೋ ಜರಯಾ ಪರಿವಾರಿತಃ|

12169009c ಅಹೋರಾತ್ರಾಃ ಪತಂತ್ಯೇತೇ ನನು ಕಸ್ಮಾನ್ನ ಬುಧ್ಯಸೇ||

ಮಗನು ಹೇಳಿದನು: “ಈ ಲೋಕವು ಮೃತ್ಯುವಿನಿಂದ ಆಕ್ರಮಣಿಸಲ್ಪಟ್ಟಿದೆ. ಮುಪ್ಪಿನಿಂದ ಮುತ್ತಲ್ಪಟ್ಟಿದೆ. ಹಗಲು-ರಾತ್ರಿಗಳು ಕಳೆದು ಹೋಗುತ್ತಿವೆ. ಇದನ್ನು ನೀನು ಏಕೆ ಅರಿಯುತ್ತಿಲ್ಲ?

[2]12169010a ಯದಾಹಮೇತಜ್ಜಾನಾಮಿ ನ ಮೃತ್ಯುಸ್ತಿಷ್ಠತೀತಿ ಹ|

12169010c ಸೋಽಹಂ ಕಥಂ ಪ್ರತೀಕ್ಷಿಷ್ಯೇ ಜಾಲೇನಾಪಿಹಿತಶ್ಚರನ್||

ಮೃತ್ಯುವು ಒಂದು ಕ್ಷಣವೂ ನಿಲ್ಲುವುದಿಲ್ಲ ಮತ್ತು ನಾನು ಅದರ ಜಾಲದಲ್ಲಿ ಸಿಲುಕಿಕೊಂಡು ಅಲೆದಾಡುತ್ತಿದ್ದೇನೆ ಎಂದು ತಿಳಿದೂ ನಾನು ಸ್ವಲ್ಪ ಸಮಯವಾದರೂ ಹೇಗೆ ಕಾಯಬಲ್ಲೆನು?

12169011a ರಾತ್ರ್ಯಾಂ ರಾತ್ರ್ಯಾಂ ವ್ಯತೀತಾಯಾಮಾಯುರಲ್ಪತರಂ ಯದಾ|

12169011c ಗಾಧೋದಕೇ ಮತ್ಸ್ಯ ಇವ ಸುಖಂ ವಿಂದೇತ ಕಸ್ತದಾ|

12169011e ತದೇವ ವಂಧ್ಯಂ ದಿವಸಮಿತಿ ವಿದ್ಯಾದ್ವಿಚಕ್ಷಣಃ||

ಒಂದೊಂದು ರಾತ್ರಿಯೂ ಕಳೆಯಲು ಅದರೊಂದಿಗೆ ಆಯುಸ್ಸು ಕೂಡ ಕಡಿಮೆಯಾಗುತ್ತಿರುವಾಗ ಕಡಿಮೆಯಾಗುತ್ತಿರುವ ನೀರಿನಲ್ಲಿ ವಾಸಿಸುತ್ತಿರುವ ಮೀನಿನಂತೆ ನಾನು ಹೇಗೆ ತಾನೇ ಸುಖವನ್ನು ಹೊಂದಬಲ್ಲೆನು?

[3]12169012a ಅನವಾಪ್ತೇಷು ಕಾಮೇಷು ಮೃತ್ಯುರಭ್ಯೇತಿ ಮಾನವಮ್|

12169012c ಶಷ್ಪಾಣೀವ ವಿಚಿನ್ವಂತಮನ್ಯತ್ರಗತಮಾನಸಮ್|

12169012e ವೃಕೀವೋರಣಮಾಸಾದ್ಯ ಮೃತ್ಯುರಾದಾಯ ಗಚ್ಚತಿ||

ಮಾನವನು ತನ್ನ ಕಾಮಗಳನ್ನು ಪೂರೈಸುವುದರೊಳಗೆ ಮೃತ್ಯುವು ಬಂದುಬಿಡುತ್ತದೆ. ಮೇಯುತ್ತಿದ್ದ ಆಡಿನ ಬಳಿ ಅಕಸ್ಮಾತ್ತಾಗಿ ಹುಲಿಯು ಬಂದು ಅದನ್ನು ದೋಚಿಕೊಂಡು ಹೋಗುವಂತೆ ಮನುಷ್ಯನ ಮನಸ್ಸು ಬೇರೊಂದು ವಿಷಯದಲ್ಲಿ ಮಗ್ನವಾಗಿರುವಾಗ ಒಮ್ಮಿಂದೊಮ್ಮೆಲೇ ಮೃತ್ಯುವು ಬಂದು ಅವನನ್ನು ಎತ್ತಿಕೊಂಡು ಹೋಗಿಬಿಡುತ್ತದೆ.

12169013a ಅದ್ಯೈವ ಕುರು ಯಚ್ಚ್ರೇಯೋ ಮಾ ತ್ವಾ ಕಾಲೋಽತ್ಯಗಾದಯಮ್|

12169013c ಅಕೃತೇಷ್ವೇವ ಕಾರ್ಯೇಷು ಮೃತ್ಯುರ್ವೈ ಸಂಪ್ರಕರ್ಷತಿ||

ಆದುದರಿಂದ ಶ್ರೇಯ ಕಾರ್ಯವನ್ನು ಇಂದೇ ಮಾಡು. ಈ ಕಾಲವು ತಪ್ಪಿ ಹೋಗದಿರಲಿ. ಏಕೆಂದರೆ ಮೃತ್ಯುವು ನಿನ್ನನ್ನು ಎಳೆದುಕೊಂಡು ಹೋಗುವಾಗ ಎಲ್ಲ ಕೆಲಸಗಳೂ ಅರ್ಧದಲ್ಲಿಯೇ ನಿಂತುಬಿಡುತ್ತವೆ.

12169014a ಶ್ವಃಕಾರ್ಯಮದ್ಯ ಕುರ್ವೀತ ಪೂರ್ವಾಹ್ಣೇ ಚಾಪರಾಹ್ಣಿಕಮ್|

12169014c ನ ಹಿ ಪ್ರತೀಕ್ಷತೇ ಮೃತ್ಯುಃ ಕೃತಂ ವಾಸ್ಯ ನ ವಾ ಕೃತಮ್|

12169014e ಕೋ ಹಿ ಜಾನಾತಿ ಕಸ್ಯಾದ್ಯ ಮೃತ್ಯುಸೇನಾ ನಿವೇಕ್ಷ್ಯತೇ[4]||

ನಾಳೆ ಮಾಡಬೇಕೆಂದಿದ್ದ ಕಾರ್ಯವನ್ನು ಇಂದೇ ಮಾಡಬೇಕು. ಸಾಯಂಕಾಲ ಮಾಡುತ್ತೇನೆ ಎಂದಿದ್ದ ಕಾರ್ಯವನ್ನು ಬೆಳಿಗ್ಗೆಯೇ ಮಾಡಬೇಕು. ಏಕೆಂದರೆ ಮೃತ್ಯುವು ಯಾರ ಕೆಲಸವು ಮುಗಿದಿದೆ ಮತ್ತು ಯಾರ ಕೆಲಸವು ಮುಗಿದಿಲ್ಲ ಎನ್ನುವುದನ್ನು ನೋಡಿ ಕಾಯುವುದಿಲ್ಲ. ಮೃತ್ಯುವಿನ ಕಾಲವು ಇಂದೇ ಎಂದು ಯಾರಿಗೆ ತಿಳಿದಿರುತ್ತದೆ?

12169015a ಯುವೈವ ಧರ್ಮಶೀಲಃ ಸ್ಯಾದನಿಮಿತ್ತಂ ಹಿ ಜೀವಿತಮ್|

12169015c ಕೃತೇ ಧರ್ಮೇ ಭವೇತ್ಕೀರ್ತಿರಿಹ ಪ್ರೇತ್ಯ ಚ ವೈ ಸುಖಮ್||

ಆದುದರಿಂದ ಯುವಾವಸ್ಥೆಯಲ್ಲಿಯೇ ಎಲ್ಲರಿಗೂ ಧರ್ಮಾಚರಣೆಯನ್ನು ಮಾಡಬೇಕು. ಏಕೆಂದರೆ ನಿಸ್ಸಂದೇಹವಾಗಿ ಜೀವನವು ಅನಿತ್ಯವು. ಧರ್ಮಾಚರಣೆಯಿಂದ ಈ ಲೋಕದಲ್ಲಿ ಮನುಷ್ಯನ ಕೀರ್ತಿಯು ವಿಸ್ತಾರವಾಗುತ್ತದೆ ಮತ್ತು ಪರಲೋಕದಲ್ಲಿಯೂ ಅವನಿಗೆ ಸುಖವು ದೊರೆಯುತ್ತದೆ.

12169016a ಮೋಹೇನ ಹಿ ಸಮಾವಿಷ್ಟಃ ಪುತ್ರದಾರಾರ್ಥಮುದ್ಯತಃ|

12169016c ಕೃತ್ವಾ ಕಾರ್ಯಮಕಾರ್ಯಂ ವಾ ಪುಷ್ಟಿಮೇಷಾಂ ಪ್ರಯಚ್ಚತಿ||

ಮೋಹದಿಂದ ಸಮಾವಿಷ್ಟನಾದವನು ಪುತ್ರ-ಪತ್ನಿಯರಿಗಾಗಿ ಉದ್ಯೋಗಶೀಲನಾಗುತ್ತಾನೆ ಮತ್ತು ಮಾಡಬೇಕಾದುದನ್ನು ಮತ್ತು ಮಾಡಬಾರದುದನ್ನು ಮಾಡಿ ಅವರ ಪಾಲನ-ಪೋಷಣೆಗೆ ಪ್ರಯತ್ನಿಸುತ್ತಾನೆ.

12169017a ತಂ ಪುತ್ರಪಶುಸಂಮತ್ತಂ ವ್ಯಾಸಕ್ತಮನಸಂ ನರಮ್|

12169017c ಸುಪ್ತಂ ವ್ಯಾಘ್ರಂ ಮಹೌಘೋ ವಾ ಮೃತ್ಯುರಾದಾಯ ಗಚ್ಚತಿ||

ಮಲಗಿದ್ದ ಪ್ರಾಣಿಯನ್ನು ಹುಲಿಯು ಎತ್ತಿಕೊಂಡು ಹೋಗುವಂತೆ ಪುತ್ರ-ಪಶುಸಂಪನ್ನನಾಗಿದ್ದ ಮತ್ತು ಅವರಲ್ಲಿಯೇ ಮನಸ್ಸಿನ ಆಸಕ್ತಿಯನ್ನಿಟ್ಟುಕೊಂಡಿದ್ದವನನ್ನು ಒಂದು ದಿನ ಮೃತ್ಯುವು ಎತ್ತಿಕೊಂಡು ಹೋಗಿಬಿಡುತ್ತದೆ.

12169018a ಸಂಚಿನ್ವಾನಕಮೇವೈಕಂ ಕಾಮಾನಾಮವಿತೃಪ್ತಕಮ್|

12169018c ವ್ಯಾಘ್ರಃ ಪಶುಮಿವಾದಾಯ ಮೃತ್ಯುರಾದಾಯ ಗಚ್ಚತಿ||

ಹುಲಿಯು ಪಶುವನ್ನು ಹೇಗೋ ಹಾಗೆ ಮೃತ್ಯುವು ಕೇವಲ ಸಂಗ್ರಹಿಸುವುದರಲ್ಲಿಯೇ ತೊಡಗಿರುವ ಮತ್ತು ಕಾಮನೆಗಳ ತೃಪ್ತಿಯಿಲ್ಲದವನನ್ನು ಎತ್ತಿಕೊಂಡು ಹೋಗುತ್ತದೆ.

12169019a ಇದಂ ಕೃತಮಿದಂ ಕಾರ್ಯಮಿದಮನ್ಯತ್ ಕೃತಾಕೃತಮ್|

12169019c ಏವಮೀಹಾಸುಖಾಸಕ್ತಂ ಕೃತಾಂತಃ ಕುರುತೇ ವಶೇ||

ಇದನ್ನು ಮಾಡಿಯಾಯಿತು, ಇದನ್ನು ಇನ್ನೂ ಮಾಡಬೇಕು ಮತ್ತು ಇದು ಅರ್ಧದಲ್ಲಿಯೇ ನಿಂತುಹೋಯಿತು ಇವೇ ಮೊದಲಾಗಿ ಈಹಾಸುಖಾಸಕ್ತನಾದವನ್ನು ಕೃತಾಂತ ಕಾಲನು ವಶಮಾಡಿಕೊಳ್ಳುತ್ತಾನೆ.

12169020a ಕೃತಾನಾಂ ಫಲಮಪ್ರಾಪ್ತಂ ಕರ್ಮಣಾಂ ಫಲಸಂಗಿನಮ್|

12169020c ಕ್ಷೇತ್ರಾಪಣಗೃಹಾಸಕ್ತಂ ಮೃತ್ಯುರಾದಾಯ ಗಚ್ಚತಿ||

ಮನುಷ್ಯನು ತನ್ನ ಹೊಲ, ಅಂಗಡಿ ಮತ್ತು ಮನೆಗಳಲ್ಲಿಯೇ ಸಿಲುಕಿಕೊಂಡಿರುತ್ತಾನೆ ಮತ್ತು ತನ್ನ ಕರ್ಮಗಳ ಫಲವು ದೊರಕುವ ಮೊದಲೇ ಆ ಕರ್ಮಾಸಕ್ತನನ್ನು ಮೃತ್ಯುವು ಎತ್ತಿಕೊಂಡು ಹೋಗುತ್ತದೆ.

[5]12169021a ಮೃತ್ಯುರ್ಜರಾ ಚ ವ್ಯಾಧಿಶ್ಚ ದುಃಖಂ ಚಾನೇಕಕಾರಣಮ್|

12169021c ಅನುಷಕ್ತಂ ಯದಾ ದೇಹೇ ಕಿಂ ಸ್ವಸ್ಥ ಇವ ತಿಷ್ಠಸಿ||

ಈ ಶರೀರದ ಮೇಲೆ ಮೃತ್ಯು, ಮುಪ್ಪು, ವ್ಯಾಧಿ ಮತ್ತು ಅನೇಕ ಕಾರಣಗಳಿಂದುಂಟಾಗುವ ದುಃಖ ಇವುಗಳ ಆಕ್ರಮಣವು ನಡೆಯುತ್ತಿರುವಾಗ ನೀನು ಹೇಗೆ ತಾನೇ ಸ್ವಸ್ಥನಾಗಿ ಕುಳಿತುಕೊಳ್ಳಬಹುದು?

12169022a ಜಾತಮೇವಾಂತಕೋಽಂತಾಯ ಜರಾ ಚಾನ್ವೇತಿ ದೇಹಿನಮ್|

12169022c ಅನುಷಕ್ತಾ ದ್ವಯೇನೈತೇ ಭಾವಾಃ ಸ್ಥಾವರಜಂಗಮಾಃ||

ದೇಹಧಾರೀ ಜೀವವು ಜನ್ಮವೆತ್ತುತ್ತಲೇ ಅಂತ್ಯಗೊಳಿಸಲು ಮೃತ್ಯು ಮತ್ತು ಮುಪ್ಪುಗಳು ಅದರ ಹಿಂದೆ ಬಿದ್ದಿರುತ್ತವೆ. ಈ ಸಮಸ್ತ ಸ್ಥಾವರ-ಜಂಗಮಗಳೂ ಇವೆರಡರಿಂದ ಬಂಧಿಸಲ್ಪಟ್ಟಿವೆ.

12169023a ಮೃತ್ಯೋರ್ವಾ ಗೃಹಮೇವೈತದ್ಯಾ ಗ್ರಾಮೇ ವಸತೋ ರತಿಃ|

12169023c ದೇವಾನಾಮೇಷ ವೈ ಗೋಷ್ಠೋ ಯದರಣ್ಯಮಿತಿ ಶ್ರುತಿಃ||

ಗ್ರಾಮ-ನಗರಗಳಲ್ಲಿದ್ದುಕೊಂಡು ಮನೆಯಲ್ಲಿ ಪತ್ನೀ-ಪುತ್ರರಲ್ಲಿ ಆಸಕ್ತನಾಗಿರುವುದೇ ಮೃತ್ಯುವು. ವನದಲ್ಲಿರುವವನು ಈ ಇಂದ್ರಿಯರೂಪೀ ಗೋವುಗಳನ್ನು ಕಟ್ಟಲಿರುವ ಗೂಟದಂತೆ ಎಂದು ಶ್ರುತಿಗಳು ಹೇಳುತ್ತವೆ.

12169024a ನಿಬಂಧನೀ ರಜ್ಜುರೇಷಾ ಯಾ ಗ್ರಾಮೇ ವಸತೋ ರತಿಃ|

12169024c ಚಿತ್ತ್ವೈನಾಂ ಸುಕೃತೋ ಯಾಂತಿ ನೈನಾಂ ಚಿಂದಂತಿ ದುಷ್ಕೃತಃ||

ಗ್ರಾಮ-ನಗರದಲ್ಲಿ ಇರುವುದರಿಂದ ಅಲ್ಲಿಯ ಪತ್ನಿ-ಪುತ್ರ ಮೊದಲಾದ ವಿಷಯಗಳಲ್ಲಿ ಇರುವ ಆಸಕ್ತಿಯೇ ಜೀವನನ್ನು ಬಂಧಿಸುವ ಹಗ್ಗವು. ಪುಣ್ಯಾತ್ಮನೇ ಇದನ್ನು ತುಂಡರಿಸಿ ಬಿಡುಗಡೆಹೊಂದಬಲ್ಲನು. ಪಾಪಿಗಳಿಗೆ ಇದನ್ನು ತುಂಡರಿಸಲು ಸಾಧ್ಯವಾಗುವುದಿಲ್ಲ.

12169025a ನ ಹಿಂಸಯತಿ ಯಃ ಪ್ರಾಣಾನ್ಮನೋವಾಕ್ಕಾಯಹೇತುಭಿಃ|

12169025c ಜೀವಿತಾರ್ಥಾಪನಯನೈಃ ಕರ್ಮಭಿರ್ನ ಸ ಬಧ್ಯತೇ[6]||

ಮನಸ್ಸು, ಮಾತು ಮತ್ತು ಶರೀರಗಳಿಂದ ಯಾರು ಪ್ರಾಣಿಗಳನ್ನು ಹಿಂಸಿಸುವುದಿಲ್ಲವೋ ಅವನ ಜೀವಿತಾರ್ಥ ಕರ್ಮಗಳು ಅವನನ್ನು ಬಂಧಿಸುವುದಿಲ್ಲ.

12169026a ನ ಮೃತ್ಯುಸೇನಾಮಾಯಾಂತೀಂ ಜಾತು ಕಶ್ಚಿತ್ ಪ್ರಬಾಧತೇ|

12169026c ಋತೇ ಸತ್ಯಮಸಂತ್ಯಾಜ್ಯಂ ಸತ್ಯೇ ಹ್ಯಮೃತಮಾಶ್ರಿತಮ್||

ಸತ್ಯವಂತನಲ್ಲದೇ ಬೇರೆ ಯಾವ ಮನುಷ್ಯನೂ ಎದುರಾಗಿ ಬರುವ ಮೃತ್ಯುಸೇನೆಯನನ್ನು ಎದುರಿಸಲಾರನು. ಆದುದರಿಂದ ಅಸತ್ಯವನ್ನು ತ್ಯಜಿಸಬೇಕು. ಅಮೃತತ್ವವು ಸತ್ಯದಲ್ಲಿಯೇ ಸ್ಥಿತವಾಗಿದೆ.

12169027a ತಸ್ಮಾತ್ಸತ್ಯವ್ರತಾಚಾರಃ ಸತ್ಯಯೋಗಪರಾಯಣಃ|

12169027c ಸತ್ಯಾರಾಮಃ ಸಮೋ ದಾಂತಃ[7] ಸತ್ಯೇನೈವಾಂತಕಂ ಜಯೇತ್||

ಆದುದರಿಂದ ಸತ್ಯವ್ರತವನ್ನು ಆಚರಿಸಬೇಕು. ಸತ್ಯಯೋಗಪರಾಯಣನಾಗಿರಬೇಕು. ಸತ್ಯದಲ್ಲಿಯೇ ರಮಿಸಬೇಕು. ಸಮನಾಗಿರುವ, ದಾಂತನಾಗಿರುವ ಮತ್ತು ಸತ್ಯವಂತನಾಗಿರುವವನು ಅಂತಕನನ್ನು ಜಯಿಸಬಲ್ಲನು.

12169028a ಅಮೃತಂ ಚೈವ ಮೃತ್ಯುಶ್ಚ ದ್ವಯಂ ದೇಹೇ ಪ್ರತಿಷ್ಠಿತಮ್|

12169028c ಮೃತ್ಯುಮಾಪದ್ಯತೇ ಮೋಹಾತ್ಸತ್ಯೇನಾಪದ್ಯತೇಽಮೃತಮ್||

ಅಮೃತ ಮತ್ತು ಮೃತ್ಯು ಇವೆರಡೂ ಈ ದೇಹದಲ್ಲಿಯೇ ನೆಲೆಸಿವೆ. ಮೋಹದಿಂದ ಮೃತ್ಯುವನ್ನು ಮತ್ತು ಸತ್ಯದಿಂದ ಅಮೃತವನ್ನು ಪಡೆದುಕೊಳ್ಳುತ್ತೇವೆ[8].

12169029a ಸೋಽಹಂ ಹ್ಯಹಿಂಸ್ರಃ ಸತ್ಯಾರ್ಥೀ ಕಾಮಕ್ರೋಧಬಹಿಷ್ಕೃತಃ|

12169029c ಸಮದುಃಖಸುಖಃ ಕ್ಷೇಮೀ ಮೃತ್ಯುಂ ಹಾಸ್ಯಾಮ್ಯಮರ್ತ್ಯವತ್||

ಆದುದರಿಂದ ಈಗ ನಾನು ಹಿಂಸೆಯನ್ನು ತೊರೆದು ಸತ್ಯಾರ್ಥಿಯಾಗುತ್ತೇನೆ. ಕ್ರಾಮಕ್ರೋಧಗಳನ್ನು ಹೊರಗೆ ಹಾಕಿ ದುಃಖ ಮತ್ತು ಸುಖಗಳಲ್ಲಿ ಸಮಾನ ಭಾವವನ್ನು ತಾಳುತ್ತೇನೆ. ಎಲ್ಲರೊಂದಿಗೂ ಕಲ್ಯಾಣಕರನಾಗಿದ್ದುಕೊಂಡು ದೇವತೆಗಳಂತೆ ಮೃತ್ಯುಭಯದಿಂದ ಮುಕ್ತನಾಗುತ್ತೇನೆ.

12169030a ಶಾಂತಿಯಜ್ಞರತೋ ದಾಂತೋ ಬ್ರಹ್ಮಯಜ್ಞೇ ಸ್ಥಿತೋ ಮುನಿಃ|

12169030c ವಾಙ್ಮನಃಕರ್ಮಯಜ್ಞಶ್ಚ ಭವಿಷ್ಯಾಮ್ಯುದಗಾಯನೇ||

ನಾನು ನಿವೃತ್ತಿಪರನಾಗಿ ಶಾಂತಿಮಯ ಯಜ್ಞದಲ್ಲಿ ತೊಡಗುತ್ತೇನೆ. ಇಂದ್ರಿಯಗಳು ಮತ್ತು ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು ಬ್ರಹ್ಮಯಜ್ಞದಲ್ಲಿ ತೊಡಗುತ್ತೇನೆ. ಉತ್ತರಾಯಣದ ಮಾರ್ಗದಲ್ಲಿ ಹೋಗಲು ನಾನು ಜಪ ಮತ್ತು ಸ್ವಾಧ್ಯಾಯರೂಪೀ ವಾಗ್ಯಜ್ಞ, ಧ್ಯಾನರೂಪೀ ಮನೋಯಜ್ಞ ಮತ್ತು ಅಗ್ನಿಹೋತ್ರವೇ ಮೊದಲಾದ ಗುರುಶುಶ್ರೂಷಾದಿರೂಪೀ ಕರ್ಮಯಜ್ಞವನ್ನು ಅನುಷ್ಠಾನಮಾಡುತ್ತೇನೆ.

12169031a ಪಶುಯಜ್ಞೈಃ ಕಥಂ ಹಿಂಸ್ರೈರ್ಮಾದೃಶೋ ಯಷ್ಟುಮರ್ಹತಿ|

12169031c ಅಂತವದ್ಭಿರುತ ಪ್ರಾಜ್ಞಃ ಕ್ಷತ್ರಯಜ್ಞೈಃ[9] ಪಿಶಾಚವತ್||

ನನ್ನಂತಹ ಪ್ರಾಜ್ಞನು ಹಿಂಸಾಯುಕ್ತವಾದ ಪಶುಯಜ್ಞ ಮತ್ತು ಪಿಶಾಚಿಯಂತೆ ತನ್ನ ರಕ್ತ-ಮಾಂಸದಿಂದಲೇ ಮಾಡುವ ಕ್ಷತ್ರಯಜ್ಞವನ್ನು ಹೇಗೆ ತಾನೇ ಮಾಡಬಲ್ಲನು?

12169032a ಯಸ್ಯ ವಾಙ್ಮನಸೀ ಸ್ಯಾತಾಂ ಸಮ್ಯಕ್ ಪ್ರಣಿಹಿತೇ ಸದಾ|

12169032c ತಪಸ್ತ್ಯಾಗಶ್ಚ ಯೋಗಶ್ಚ ಸ ವೈ ಸರ್ವಮವಾಪ್ನುಯಾತ್||

ಯಾರ ಮಾತು ಮತ್ತು ಮನಸ್ಸುಗಳು ಸರಿಯಾದ ಏಕಾಗ್ರತೆಯಲ್ಲಿರುವವೋ ಮತ್ತು ಯಾರು ತ್ಯಾಗ, ತಪಸ್ಸು ಮತ್ತು ಸತ್ಯಸಂಪನ್ನರಾಗಿರುವರೋ ಅವರು ನಿಶ್ಚಯವಾಗಿಯೂ ಎಲ್ಲವನ್ನೂ ಪಡೆದುಕೊಳ್ಳುತ್ತಾರೆ.

12169033a ನಾಸ್ತಿ ವಿದ್ಯಾಸಮಂ ಚಕ್ಷುರ್ನಾಸ್ತಿ ವಿದ್ಯಾಸಮಂ ಬಲಮ್|

12169033c ನಾಸ್ತಿ ರಾಗಸಮಂ ದುಃಖಂ ನಾಸ್ತಿ ತ್ಯಾಗಸಮಂ ಸುಖಮ್[10]||

ವಿದ್ಯೆಗೆ ಸಮನಾದ ಕಣ್ಣಿಲ್ಲ; ವಿದ್ಯೆಗೆ ಸಮನಾದ ಬಲವಿಲ್ಲ. ಬಯಕೆಯ ಸಮನಾದ ದುಃಖವಿಲ್ಲ ಮತ್ತು ತ್ಯಾಗಕ್ಕೆ ಸಮನಾದ ಸುಖವಿಲ್ಲ.

12169034a ಆತ್ಮನ್ಯೇವಾತ್ಮನಾ ಜಾತ ಆತ್ಮನಿಷ್ಠೋಽಪ್ರಜೋಽಪಿ ವಾ|

12169034c ಆತ್ಮನ್ಯೇವ ಭವಿಷ್ಯಾಮಿ ನ ಮಾಂ ತಾರಯತಿ ಪ್ರಜಾ||

ನಾನು ಸಂತಾನರಹಿತನಾದರೂ ಪರಮಾತ್ಮನಲ್ಲಿಯೇ ಪರಮಾತ್ಮನಿಂದ ಉತ್ಪನ್ನನಾಗಿದ್ದೇನೆ. ಪರಮಾತ್ಮನಲ್ಲಿಯೇ ಸ್ಥಿತನಾಗಿದ್ದೇನೆ. ಮುಂದೆಯೂ ಕೂಡ ಆತ್ಮನಲ್ಲಿಯೇ ಲೀನನಾಗುತ್ತೇನೆ. ಸಂತಾನವು ನನ್ನನ್ನು ಪಾರುಮಾಡುವುದಿಲ್ಲ.

12169035a ನೈತಾದೃಶಂ ಬ್ರಾಹ್ಮಣಸ್ಯಾಸ್ತಿ ವಿತ್ತಂ

ಯಥೈಕತಾ ಸಮತಾ ಸತ್ಯತಾ ಚ|

12169035c ಶೀಲೇ ಸ್ಥಿತಿರ್ದಂಡನಿಧಾನಮಾರ್ಜವಂ

ತತಸ್ತತಶ್ಚೋಪರಮಃ ಕ್ರಿಯಾಭ್ಯಃ||

ಪರಮಾತ್ಮನೊಂದಿಗೆ ಏಕತೆ ಮತ್ತು ಸಮತೆ, ಸತ್ಯಭಾಷೆ, ಸದಾಚಾರ, ಬ್ರಹ್ಮನಿಷ್ಠೆ, ಅಹಿಂಸೆ, ಸರಳತೆ ಮತ್ತು ಎಲ್ಲ ರೀತಿಯ ಸಕಾಮ ಕರ್ಮಗಳಿಂದ ನಿವೃತ್ತಿ – ಇವುಗಳಂಥಹ ಬೇರೆ ಯಾವ ಧನವೂ ಬ್ರಾಹ್ಮಣನಲ್ಲಿರುವುದಿಲ್ಲ.

12169036a ಕಿಂ ತೇ ಧನೈರ್ಬಾಂಧವೈರ್ವಾಪಿ ಕಿಂ ತೇ

ಕಿಂ ತೇ ದಾರೈರ್ಬ್ರಾಹ್ಮಣ ಯೋ ಮರಿಷ್ಯಸಿ|

12169036c ಆತ್ಮಾನಮನ್ವಿಚ್ಚ ಗುಹಾಂ ಪ್ರವಿಷ್ಟಂ

ಪಿತಾಮಹಸ್ತೇ ಕ್ವ ಗತಃ ಪಿತಾ ಚ||

ಬ್ರಾಹ್ಮಣ ತಂದೆಯೇ! ನೀನು ಒಂದಲ್ಲ ಒಂದು ದಿನ ಸತ್ತುಹೋಗುತ್ತೀಯಾದುದುದರಿಂದ ಈ ಧನದ ಪ್ರಯೋಜನವಾದರೂ ಏನು ಅಥವಾ ಬಂಧು-ಬಾಂಧವರೊಂದಿಗೆ ನಿನಗಿರುವ ಕೆಲಸವಾದರೂ ಏನು ಮತ್ತು ಪತ್ನೀ-ಪುತ್ರರಿಂದ ನಿನಗೆ ದೊರೆಯುವ ಲಾಭವಾದರೂ ಏನು? ನಿನ್ನ ಹೃದಯರೂಪೀ ಗುಹೆಯಲ್ಲಿರುವ ಪರಮಾತ್ಮನನ್ನು ಹುಡುಕು. ನಿನ್ನ ಪಿತ-ಪಿತಾಮಹರು ಎಲ್ಲಿ ಹೋದರು ಎನ್ನುವುದನ್ನಾದರೂ ಯೋಚಿಸು!””

12169037 ಭೀಷ್ಮ ಉವಾಚ|

12169037a ಪುತ್ರಸ್ಯೈತದ್ವಚಃ ಶ್ರುತ್ವಾ ತಥಾಕಾರ್ಷೀತ್ಪಿತಾ ನೃಪ|

12169037c ತಥಾ ತ್ವಮಪಿ ವರ್ತಸ್ವ ಸತ್ಯಧರ್ಮಪರಾಯಣಃ||

ಭೀಷ್ಮನು ಹೇಳಿದನು: “ನೃಪ! ಮಗನ ಆ ಮಾತನ್ನು ಕೇಳಿ ತಂದೆಯು ಯಾವ ಸತ್ಯಧರ್ಮದ ಪಾಲನೆಯಲ್ಲಿ ನಿರತನಾಗಿದ್ದನೋ ಹಾಗೆ ನೀನೂ ಕೂಡ ಸತ್ಯಧರ್ಮನಿರತನಾಗಿರು.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಪಿತಾಪುತ್ರಸಂವಾದಕಥನೇ ಏಕೋನಸಪ್ತತ್ಯಧಿಕಶತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಪಿತಾಪುತ್ರಸಂವಾದಕಥನ ಎನ್ನುವ ನೂರಾಅರವತ್ತೊಂಭತ್ತನೇ ಅಧ್ಯಾಯವು.

[1] ಮಗನು ತಂದೆಗೆ ಉಪದೇಶಿಸುವುದೇ ಈ ಅಧ್ಯಾಯದ ವಿಶೇಷತೆ.

[2] ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ಅಮೋಘಾ ರಾತ್ರಯಶ್ಚಾಪಿ ನಿತ್ಯಮಾಯಂತಿ ಯಾಂತಿ ಚ| ಅರ್ಥಾತ್: ಈ ಅಮೋಘ ರಾತ್ರಿಗಳು ನಿತ್ಯವೂ ಬರುತ್ತಿರುತ್ತವೆ ಮತ್ತು ಹೋಗಿಬಿಡುತ್ತವೆ (ಗೀತಾ ಪ್ರೆಸ್).

[3] ಇದಕ್ಕೆ ಮೊದಲು ಈ ಒಂದು ಶ್ಲೋಕವಿದೆ: ಯಸ್ಯಾಂ ರಾತ್ರ್ಯಾಂ ವ್ಯತೀತಾಯಾಂ ನ ಕಿಂಚಿಚ್ಛುಭಮಾಚರೇತ್| ತದೈವ ವಂಧ್ಯಂ ದಿವಸಮಿತಿ ವಿದ್ಯಾದ್ವಿಚಕ್ಷಣಃ|| ಅರ್ಥಾತ್: ಯಾವುದೇ ಶುಭ ಕರ್ಮಗಳನ್ನು ಮಾಡದೇ ರಾತ್ರಿಯು ಕಳೆದುಹೋದರೆ ಆ ದಿನವನ್ನು ವಿದ್ವಾಂಸನು ವ್ಯರ್ಥವಾಯಿತೆಂದೇ ತಿಳಿಯುತ್ತಾನೆ (ಗೀತಾ ಪ್ರೆಸ್).

[4] ಇದರ ನಂತರ ಈ ಒಂದು ಶ್ಲೋಕಾರ್ಧವಿದೆ: ನ ಮೃತ್ಯುರಾಮಂತ್ರಯತೇ ಹರ್ತುಕಾಮೋ ಜಗತ್ಪ್ರಭುಃ|| ಅರ್ಥಾತ್: ಜಗತ್ಪ್ರಭು ಮೃತ್ಯುವು ಯಾರನ್ನಾದರೂ ಅಪಹರಿಸಿಕೊಂಡು ಹೋಗಬೇಕೆಂದರೆ ಅವರಿಗೆ ನಿಮಂತ್ರಣವನ್ನಿತ್ತು ಬರುವುದಿಲ್ಲ (ಗೀತಾ ಪ್ರೆಸ್).

[5] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ದುರ್ಬಲಂ ಬಲವಂತಂ ಚ ಶೂರಂ ಭೀರುಂ ಜಡಂ ಕವಿಮ್| ಅಪ್ರಾಪ್ತಂ ಸರ್ವಕಾಮಾರ್ಥಾನ್ ಮೃತ್ಯುರಾದಾಯ ಗಚ್ಛತಿ|| ಅರ್ಥಾತ್: ದುರ್ಬಲನಾಗಿರಲೀ ಅಥವಾ ಬಲಶಾಲಿಯಾಗಿರಲಿ, ಶೂರನಾಗಿರಲೀ ಅಥವಾ ಹೇಡಿಯಾಗಿರಲಿ, ಮೂರ್ಖನಾಗಿರಲಿ ಅಥವಾ ವಿದ್ವಾನನಾಗಿರಲಿ ಮೃತ್ಯುವು ಅವನ ಸಮಸ್ತ ಕಾಮನೆಗಳು ಪೂರ್ಣವಾಗುವುದರ ಮೊದಲೇ ಅವನನ್ನು ಎತ್ತಿಕೊಂಡು ಹೋಗುತ್ತದೆ (ಗೀತಾ ಪ್ರೆಸ್).

[6] ಜೀವಿತಾರ್ಥಾಪನಯನೈಃ ಪ್ರಾಣಿಭಿರ್ನ ಸ ಹಿಂಸ್ಯತೇ|| (ಗೀತಾ ಪ್ರೆಸ್).

[7] ಸತ್ಯಾಗಮಃ ಸದಾ ದಾಂತಃ (ಗೀತಾ ಪ್ರೆಸ್).

[8] ಪ್ರಮಾದವೇ ಮೃತ್ಯುವೆಂದೂ ಅಪ್ರಮಾದವೇ ಅಮೃತತ್ವವೆಂದೂ ಸನತ್ಸುಜಾತನ ಪ್ರತಿಪಾದನೆಯಿದೆ: ಪ್ರಮಾದಂ ವೈ ಮೃತ್ಯುಮಹಂ ಬ್ರವೀಮಿ| ಸದಾಪ್ರಮಾದಮಮೃತತ್ವಂ ಬ್ರವೀಮಿ|| (ಉದ್ಯೋಗ ಪರ್ವ, ಸನತ್ಸುಜಾತ ಪರ್ವ, ಅಧ್ಯಾಯ ೪೨).

[9] ಕ್ಷೇತ್ರಯಜ್ಞೈಃ (ಗೀತಾ ಪ್ರೆಸ್).

[10] ಇದೇ ಶ್ಲೋಕವು ಪುನಃ ಮುಂದೆ ಶಾಂತಿಪರ್ವದ ಅಧ್ಯಾಯ ೩೧೬ ರಲ್ಲಿ (ಶ್ಲೋಕ ೬) ನಾರದನು ಶುಕನಿಗೆ ಮಾಡುವ ಉಪದೇಶದಲ್ಲಿ ಸನತ್ಕುಮಾರನ ಈ ಮಾತುಗಳನ್ನು ಹೇಳುವಾಗಲೂ ಬರುತ್ತದೆ.

Comments are closed.