Aranyaka Parva: Chapter 233

ಆರಣ್ಯಕ ಪರ್ವ: ಘೋಷಯಾತ್ರಾ ಪರ್ವ

೨೩೩

ಭೀಮನನ್ನು ಮುಂದಿಟ್ಟುಕೊಂಡು ಬಂದ ನಾಲ್ವರು ಪಾಂಡವರೂ ಗಂಧರ್ವರೊಂದಿಗೆ ಹೋರಾಡಿದುದು (೧-೧೦). ಅರ್ಜುನ ಮತ್ತು ಗಂಧರ್ವರ ನಡುವೆ ಭೀಕರ ಯುದ್ಧ (೧೧-೨೧).

03233001 ವೈಶಂಪಾಯನ ಉವಾಚ|

03233001a ಯುಧಿಷ್ಠಿರವಚಃ ಶ್ರುತ್ವಾ ಭೀಮಸೇನಪುರೋಗಮಾಃ|

03233001c ಪ್ರಹೃಷ್ಟವದನಾಃ ಸರ್ವೇ ಸಮುತ್ತಸ್ಥುರ್ನರರ್ಷಭಾಃ||

ವೈಶಂಪಾಯನನು ಹೇಳಿದನು: “ಯುಧಿಷ್ಠಿರನ ಮಾತನ್ನು ಕೇಳಿ ಭೀಮಸೇನನನ್ನು ಮುಂದಿಟ್ಟುಕೊಂಡ ನರರ್ಷಭರೆಲ್ಲರೂ ಸಂತೋಷವದನರಾಗಿ ಮೇಲೆದ್ದರು.

03233002a ಅಭೇದ್ಯಾನಿ ತತಃ ಸರ್ವೇ ಸಮನಹ್ಯಂತ ಭಾರತ|

03233002c ಜಾಂಬೂನದವಿಚಿತ್ರಾಣಿ ಕವಚಾನಿ ಮಹಾರಥಾಃ||

ಭಾರತ! ಆಗ ಆ ಎಲ್ಲ ಮಹಾರಥರೂ ಬಂಗಾರದಂತೆ ಹೊಳೆಯುತ್ತಿದ್ದ ಬಣ್ಣದ ಅಭೇದ್ಯ ಕವಚಗಳನ್ನು ಧರಿಸಿದರು.

03233003a ತೇ ದಂಶಿತಾ ರಥೈಃ ಸರ್ವೇ ಧ್ವಜಿನಃ ಸಶರಾಸನಾಃ|

03233003c ಪಾಂಡವಾಃ ಪ್ರತ್ಯದೃಶ್ಯಂತ ಜ್ವಲಿತಾ ಇವ ಪಾವಕಾಃ||

ರಥವನ್ನೇರಿದ, ಧ್ವಜಗಳೊಂದಿಗೆ ಬಿಲ್ಲು ಬಾಣಗಳನ್ನು ಹಿಡಿದಿದ್ದ ಆ ಪಾಂಡವರೆಲ್ಲರೂ ಅಗ್ನಿಯಂತೆ ಪ್ರಜ್ವಲಿಸುತ್ತಿದ್ದರು.

03233004a ತಾನ್ರಥಾನ್ಸಾಧು ಸಂಪನ್ನಾನ್ಸಂಯುಕ್ತಾಂ ಜವನೈರ್ಹಯೈಃ|

03233004c ಆಸ್ಥಾಯ ರಥಶಾರ್ದೂಲಾಃ ಶೀಘ್ರಮೇವ ಯಯುಸ್ತತಃ|

ಸುಸಜ್ಜಿತವಾದ, ವೇಗವಾಗಿ ಹೋಗಬಲ್ಲ ಕುದುರೆಗಳನ್ನು ಕಟ್ಟಿದ್ದ ರಥಗಳಲ್ಲಿ ನಿಂತು ಆ ರಥಶಾರ್ದೂಲರು ಶೀಘ್ರದಲ್ಲಿಯೇ ಅಲ್ಲಿಂದ ಹೊರಟರು.

03233005a ತತಃ ಕೌರವಸೈನ್ಯಾನಾಂ ಪ್ರಾದುರಾಸೀನ್ಮಹಾಸ್ವನಃ|

03233005c ಪ್ರಯಾತಾನ್ಸಹಿತಾನ್ದೃಷ್ಟ್ವಾ ಪಾಂಡುಪುತ್ರಾನ್ಮಹಾರಥಾನ್||

ಮಹಾರಥಿ ಪಾಂಡುಪುತ್ರರು ಒಟ್ಟಿಗೇ ಹೊರಟಿದ್ದುದನ್ನು ನೋಡಿ ಕೌರವ ಸೇನೆಯಲ್ಲಿ ಮಹಾ ಘೋಷವು ಉದ್ಭವಿಸಿತು.

03233006a ಜಿತಕಾಶಿನಶ್ಚ ಖಚರಾಸ್ತ್ವರಿತಾಶ್ಚ ಮಹಾರಥಾಃ|

03233006c ಕ್ಷಣೇನೈವ ವನೇ ತಸ್ಮಿನ್ಸಮಾಜಗ್ಮುರಭೀತವತ್||

ಕ್ಷಣದಲ್ಲಿಯೇ ಜಯದಿಂದ ಉಬ್ಬಿದ್ದ ಗಂಧರ್ವರೂ ಮತ್ತು ವೇಗದಿಂದ ಬರುತ್ತಿದ್ದ ಆ ಮಹಾರಥಿಗಳೂ ನಿರ್ಭೀತರಾಗಿ ವನದಲ್ಲಿ ಪರಸ್ಪರರ ಎದುರಾದರು.

03233007a ನ್ಯವರ್ತಂತ ತತಃ ಸರ್ವೇ ಗಂಧರ್ವಾ ಜಿತಕಾಶಿನಃ|

03233007c ದೃಷ್ಟ್ವಾ ರಥಗತಾನ್ವೀರಾನ್ಪಾಂಡವಾಂಶ್ಚತುರೋ ರಣೇ||

ವಿಜಯದಿಂದ ಉಬ್ಬಿದ್ದ ಗಂಧರ್ವರೆಲ್ಲರೂ ರಥಗಳಲ್ಲಿ ಕುಳಿತು ರಣಕ್ಕೆ ಬರುತ್ತಿದ್ದ ವೀರ ಪಾಂಡವ ನಾಲ್ವರನ್ನು ನೋಡಿ ಹಿಂದಿರುಗಿದರು.

03233008a ತಾಂಸ್ತು ವಿಭ್ರಾಜತೋ ದೃಷ್ಟ್ವಾ ಲೋಕಪಾಲಾನಿವೋದ್ಯತಾನ್|

03233008c ವ್ಯೂಢಾನೀಕಾ ವ್ಯತಿಷ್ಠಂತ ಗಂಧಮಾದನವಾಸಿನಃ||

ಲೋಕಪಾಲರಂತೆ ಸಿದ್ಧರಾಗಿ ಬೆಳಗುತ್ತಿರುವ ಅವರನ್ನು ನೋಡಿ ಗಂಧಮಾದನವಾಸಿಗಳು ವ್ಯೂಹವನ್ನು ರಚಿಸಿ ನಿಂತರು.

03233009a ರಾಜ್ಞಸ್ತು ವಚನಂ ಶ್ರುತ್ವಾ ಧರ್ಮರಾಜಸ್ಯ ಧೀಮತಃ|

03233009c ಕ್ರಮೇಣ ಮೃದುನಾ ಯುದ್ಧಮುಪಕ್ರಾಮಂತ ಭಾರತ||

ಭಾರತ! ಧೀಮಂತ ರಾಜ ಧರ್ಮರಾಜನ ಮಾತಿನಂತೆ ಪಾಂಡವರು ಕ್ರಮವಾಗಿ ಮೊದಲು ಮೃದು ಯುದ್ಧದಲ್ಲಿ ತೊಡಗಿದರು.

03233010a ನ ತು ಗಂಧರ್ವರಾಜಸ್ಯ ಸೈನಿಕಾ ಮಂದಚೇತಸಃ|

03233010c ಶಕ್ಯಂತೇ ಮೃದುನಾ ಶ್ರೇಯಃ ಪ್ರತಿಪಾದಯಿತುಂ ತದಾ||

ಆದರೆ ಗಂಧರ್ವರಾಜನ ಮಂದಚೇತಸ ಸೈನಿಕರು ಮೃದುತ್ವದಿಂದ ಅವರಿಗೆ ಏನು ಶ್ರೇಯಸ್ಸಾಗಬಹುದು ಎನ್ನುವುದನ್ನು ತಿಳಿಯಲು ಅಶಕ್ಯರಾದರು.

03233011a ತತಸ್ತಾನ್ಯುಧಿ ದುರ್ಧರ್ಷಃ ಸವ್ಯಸಾಚೀ ಪರಂತಪಃ|

03233011c ಸಾಂತ್ವಪೂರ್ವಮಿದಂ ವಾಕ್ಯಮುವಾಚ ಖಚರಾನ್ರಣೇ||

ಆಗ ಯುದ್ಧದಲ್ಲಿ ದುರ್ಧರ್ಷ ಪರಂತಪ ಸವ್ಯಸಾಚಿಯು ಸಾಂತ್ವಪೂರ್ವಕವಾದ ಈ ಮಾತನ್ನು ರಣದಲ್ಲಿದ್ದ ಆಕಾಶಗಾಮಿಗಳಿಗೆ ಹೇಳಿದನು.

03233012a ನೈತದ್ಗಂಧರ್ವರಾಜಸ್ಯ ಯುಕ್ತಂ ಕರ್ಮ ಜುಗುಪ್ಸಿತಂ|

03233012c ಪರದಾರಾಭಿಮರ್ಶಶ್ಚ ಮಾನುಷೈಶ್ಚ ಸಮಾಗಮಃ||

“ಪರದಾರೆಯರನ್ನು ಕಾಡಿಸುವ ಮತ್ತು ಮನುಷ್ಯರೊಂದಿಗೆ ಒಡನಾಡುವ ಈ ಜಿಗುಪ್ಸೆಯ ಕೆಲಸವು ಗಂಧರ್ವರಾಜನಿಗೆ ಸರಿಯಾದುದಲ್ಲ.

03233013a ಉತ್ಸೃಜಧ್ವಂ ಮಹಾವೀರ್ಯಾನ್ಧೃತರಾಷ್ಟ್ರಸುತಾನಿಮಾನ್|

03233013c ದಾರಾಂಶ್ಚೈಷಾಂ ವಿಮುಂಚಧ್ವಂ ಧರ್ಮರಾಜಸ್ಯ ಶಾಸನಾತ್||

ಧರ್ಮರಾಜನ ಶಾಸನದಂತೆ ಈ ಮಹಾವೀರ ಧೃತರಾಷ್ಟ್ರಸುತರನ್ನೂ ಅವರ ಪತ್ನಿಯರನ್ನೂ ಬಿಟ್ಟುಬಿಡಿ!”

03233014a ಏವಮುಕ್ತಾಸ್ತು ಗಂಧರ್ವಾಃ ಪಾಂಡವೇನ ಯಶಸ್ವಿನಾ|

03233014c ಉತ್ಸ್ಮಯಂತಸ್ತದಾ ಪಾರ್ಥಮಿದಂ ವಚನಮಬ್ರುವನ್||

ಯಶಸ್ವಿನಿ ಪಾಂಡವನು ಹೀಗೆ ಹೇಳಲು ಗಂಧರ್ವರು ಮುಗುಳ್ನಕ್ಕು ಪಾರ್ಥನಿಗೆ ಈ ಮಾತನ್ನಾಡಿದರು.

03233015a ಏಕಸ್ಯೈವ ವಯಂ ತಾತ ಕುರ್ಯಾಮ ವಚನಂ ಭುವಿ|

03233015c ಯಸ್ಯ ಶಾಸನಮಾಜ್ಞಾಯ ಚರಾಮ ವಿಗತಜ್ವರಾಃ||

“ಅಯ್ಯಾ! ಭೂಮಿಯಲ್ಲಿ ನಾವು ಒಬ್ಬನದೇ ಮಾತಿನಂತೆ ನಡೆದುಕೊಳ್ಳುತ್ತೇವೆ. ಅವನ ಶಾಸನವನ್ನು ತಿಳಿದುಕೊಂಡು ವಿಗತಜ್ವರರಾಗಿ ವಿಹರಿಸುತ್ತೇವೆ.

03233016a ತೇನೈಕೇನ ಯಥಾದಿಷ್ಟಂ ತಥಾ ವರ್ತಾಮ ಭಾರತ|

03233016c ನ ಶಾಸ್ತಾ ವಿದ್ಯತೇಽಸ್ಮಾಕಮನ್ಯಸ್ತಸ್ಮಾತ್ಸುರೇಶ್ವರಾತ್||

ಭಾರತ! ಅವನೊಬ್ಬನ ಇಷ್ಟದಂತೆ ಮಾತ್ರ ನಾವು ನಡೆದುಕೊಳ್ಳುತ್ತೇವೆ. ಸುರೇಶ್ವರನ ಹೊರತಾಗಿ ಅನ್ಯರು ಯಾರೂ ನಮ್ಮನ್ನು ಆಳುವುದಿಲ್ಲ.”

03233017a ಏವಮುಕ್ತಸ್ತು ಗಂಧರ್ವೈಃ ಕುಂತೀಪುತ್ರೋ ಧನಂಜಯಃ|

03233017c ಗಂಧರ್ವಾನ್ಪುನರೇವೇದಂ ವಚನಂ ಪ್ರತ್ಯಭಾಷತ||

ಗಂಧರ್ವರು ಹೀಗೆ ಹೇಳಲು ಕುಂತೀಪುತ್ರ ಧನಂಜಯನು ಗಂಧರ್ವರಿಗೆ ಪುನಃ ಈ ಮಾತುಗಳಿಂದ ಉತ್ತರಿಸಿದನು.

03233018a ಯದಿ ಸಾಮ್ನಾ ನ ಮೋಕ್ಷಧ್ವಂ ಗಂಧರ್ವಾ ಧೃತರಾಷ್ಟ್ರಜಂ|

03233018c ಮೋಕ್ಷಯಿಷ್ಯಾಮಿ ವಿಕ್ರಮ್ಯ ಸ್ವಯಮೇವ ಸುಯೋಧನಂ||

“ಗಂಧರ್ವರೇ! ಸಾಮದಿಂದ ಧೃತರಾಷ್ಟ್ರಜನನ್ನು ಬಿಡದಿದ್ದರೆ ವಿಕ್ರಮದಿಂದ ನಾನೇ ಸುಯೋಧನನನ್ನು ಬಿಡುಗಡೆಗೊಳಿಸುತ್ತೇನೆ.”

03233019a ಏವಮುಕ್ತ್ವಾ ತತಃ ಪಾರ್ಥಃ ಸವ್ಯಸಾಚೀ ಧನಂಜಯಃ|

03233019c ಸಸರ್ಜ ನಿಶಿತಾನ್ಬಾಣಾನ್ಖಚರಾನ್ಖಚರಾನ್ಪ್ರತಿ||

ಹೀಗೆ ಹೇಳಿ ಸವ್ಯಸಾಚೀ ಧನಂಜಯನು ಆಕಾಶದಲ್ಲಿ ಹಾರುವ ಹರಿತ ಬಾಣಗಳನ್ನು ಆಕಾಶದಲ್ಲಿ ಸಂಚರಿಸುವ ಅವರ ಮೇಲೆ ಪ್ರಯೋಗಿಸಿದನು.

03233020a ತಥೈವ ಶರವರ್ಷೇಣ ಗಂಧರ್ವಾಸ್ತೇ ಬಲೋತ್ಕಟಾಃ|

03233020c ಪಾಂಡವಾನಭ್ಯವರ್ತಂತ ಪಾಂಡವಾಶ್ಚ ದಿವೌಕಸಃ||

ಹಾಗೆಯೇ ಬಲೋತ್ಕಟ ಗಂಧರ್ವರು ಪಾಂಡವರ ಮೇಲೆ ಮತ್ತು ಪಾಂಡವರು ದಿವೌಕಸರ ಮೇಲೆ ಶರಗಳ ಮಳೆಯನ್ನು ಸುರಿಸಿದರು.

03233021a ತತಃ ಸುತುಮುಲಂ ಯುದ್ಧಂ ಗಂಧರ್ವಾಣಾಂ ತರಸ್ವಿನಾಂ|

03233021c ಬಭೂವ ಭೀಮವೇಗಾನಾಂ ಪಾಂಡವಾನಾಂ ಚ ಭಾರತ||

ಭಾರತ! ಆಗ ತರಸ್ವಿ ಗಂಧರ್ವರ ಮತ್ತು ಭೀಮವೇಗಿ ಪಾಂಡವರ ನಡುವೆ ಯುದ್ಧವು ನಡೆಯಿತು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಘೋಷಯಾತ್ರಾ ಪರ್ವಣಿ ಪಾಂಡವಗಂಧರ್ವಯುದ್ಧೇ ತ್ರ್ಯಸ್ತ್ರಿಂಶದಧಿಕದ್ವಿಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಘೋಷಯಾತ್ರಾ ಪರ್ವದಲ್ಲಿ ಪಾಂಡವಗಂಧರ್ವಯುದ್ಧದಲ್ಲಿ ಇನ್ನೂರಾಮೂವತ್ಮೂರನೆಯ ಅಧ್ಯಾಯವು.

Related image

Comments are closed.