ಆರಣ್ಯಕ ಪರ್ವ: ಘೋಷಯಾತ್ರಾ ಪರ್ವ
Contents
Toggle೨೩೨
ಪಾಂಡವರು ಕೌರವರನ್ನು ಗಂಧರ್ವರ ಸೆರೆಯಿಂದ ಬಿಡುಗಡೆಗೊಳಿಸಿದ್ದುದು
ಗಡುಸಾಗಿ ಮಾತನಾಡಬಾರದೆಂದು ಭೀಮನಿಗೆ ಹೇಳಿ ಯುಧಿಷ್ಠಿರನು ತಮ್ಮಂದಿರಿಗೆ ದುರ್ಯೋಧನಾದಿಗಳನ್ನು ಗಂಧರ್ವರ ಸೆರೆಯಿಂದ ಬಿಡಿಸಿಕೊಂಡು ಬರಲು ಆದೇಶಿಸಿದುದು (೧-೧೮). ಅರ್ಜುನನು ಕೌರವರನ್ನು ಬಿಡುಗಡೆಗೊಳಿಸುವ ಪ್ರತಿಜ್ಞೆಮಾಡಿದುದು (೧೯-೨೧).
03232001 ಯುಧಿಷ್ಠಿರ ಉವಾಚ|
03232001a ಅಸ್ಮಾನಭಿಗತಾಂಸ್ತಾತ ಭಯಾರ್ತಾಂ ಶರಣೈಷಿಣಃ|
03232001c ಕೌರವಾನ್ವಿಷಮಪ್ರಾಪ್ತಾನ್ಕಥಂ ಬ್ರೂಯಾಸ್ತ್ವಮೀದೃಶಂ||
ಯುಧಿಷ್ಠಿರನು ಹೇಳಿದನು: “ಕಷ್ಟದಲ್ಲಿರುವ, ಭಯಾರ್ತರಾಗಿ ನಮ್ಮ ಶರಣು ಬಂದಿರುವ ಇವರಿಗೆ ನೀನು ಏಕೆ ಈ ರೀತಿ ಮಾತನಾಡಬೇಕು ಮಗೂ!
03232002a ಭವಂತಿ ಭೇದಾ ಜ್ಞಾತೀನಾಂ ಕಲಹಾಶ್ಚ ವೃಕೋದರ|
03232002c ಪ್ರಸಕ್ತಾನಿ ಚ ವೈರಾಣಿ ಜ್ಞಾತಿಧರ್ಮೋ ನ ನಶ್ಯತಿ||
ವೃಕೋದರ! ದಾಯಾದಿಗಳಲ್ಲಿ ಭೇದ ಕಲಹಗಳು ನಡೆಯುತ್ತವೆ. ವೈರತ್ವವು ಮುಂದುವರೆದರೂ ಕುಟುಂಬ ಧರ್ಮವು ನಶಿಸುವುದಿಲ್ಲ.
03232003a ಯದಾ ತು ಕಶ್ಚಿಜ್ಞಾತೀನಾಂ ಬಾಹ್ಯಃ ಪ್ರಾರ್ಥಯತೇ ಕುಲಂ|
03232003c ನ ಮರ್ಷಯಂತಿ ತತ್ಸಂತೋ ಬಾಹ್ಯೇನಾಭಿಪ್ರಮರ್ಷಣಂ||
ಆದರೆ ಹೊರಗಿನವರು ಯಾರಾದರೂ ಕುಲದವರನ್ನು ಆಕ್ರಮಿಸಿದರೆ ಸಂತರು ಆ ಹೊರಗಿನವರ ಉದ್ಧಟತನವನ್ನು ಸಹಿಸುವುದಿಲ್ಲ.
03232004a ಜಾನಾತಿ ಹ್ಯೇಷ ದುರ್ಬುದ್ಧಿರಸ್ಮಾನಿಹ ಚಿರೋಷಿತಾನ್|
03232004c ಸ ಏಷ ಪರಿಭೂಯಾಸ್ಮಾನಕಾರ್ಷೀದಿದಮಪ್ರಿಯಂ||
ಈ ದುರ್ಬುದ್ಧಿ ಗಂಧರ್ವನು ನಾವು ಇಲ್ಲಿ ಬಹುಕಾಲದಿಂದ ಉಳಿದುಕೊಂಡಿದ್ದೇವೆ ಎಂದು ತಿಳಿದಿದ್ದಾನೆ. ಆದರೂ ಅವನು ನಮ್ಮನ್ನು ನಿರ್ಲಕ್ಷಿಸಿ ನಮಗೆ ಅಪ್ರಿಯವಾದುದನ್ನು ಮಾಡಿದ್ದಾನೆ.
03232005a ದುರ್ಯೋಧನಸ್ಯ ಗ್ರಹಣಾದ್ಗಂಧರ್ವೇಣ ಬಲಾದ್ರಣೇ|
03232005c ಸ್ತ್ರೀಣಾಂ ಬಾಹ್ಯಾಭಿಮರ್ಶಾಚ್ಚ ಹತಂ ಭವತಿ ನಃ ಕುಲಂ||
ಗಂಧರ್ವರು ರಣದಲ್ಲಿ ಬಲವನ್ನುಪಯೋಗಿಸಿ ದುರ್ಯೋಧನನನ್ನು ಸೆರೆಹಿಡಿದುದರಿಂದ ಮತ್ತು ಹೊರಗಿನವರು ಸ್ತ್ರೀಯರನ್ನು ಅತಿಕ್ರಮಿಸಿರುವುದರಿಂದ ನಮ್ಮ ಕುಲಕ್ಕೆ ಪೆಟ್ಟು ಕೊಟ್ಟ ಹಾಗೆ ಆಗಲಿಲ್ಲವೇ?
03232006a ಶರಣಂ ಚ ಪ್ರಪನ್ನಾನಾಂ ತ್ರಾಣಾರ್ಥಂ ಚ ಕುಲಸ್ಯ ನಃ|
03232006c ಉತ್ತಿಷ್ಠಧ್ವಂ ನರವ್ಯಾಘ್ರಾಃ ಸಜ್ಜೀಭವತ ಮಾಚಿರಂ||
ಶರಣು ಬಂದಿರುವವರನ್ನು ರಕ್ಷಿಸಲು ಮತ್ತು ಕುಲವನ್ನು ಉಳಿಸಲು ಎದ್ದೇಳು! ನರವ್ಯಾಘ್ರ! ಬೇಗನೇ ಸಿದ್ಧನಾಗು!
03232007a ಅರ್ಜುನಶ್ಚ ಯಮೌ ಚೈವ ತ್ವಂ ಚ ಭೀಮಾಪರಾಜಿತಃ|
03232007c ಮೋಕ್ಷಯಧ್ವಂ ಧಾರ್ತರಾಷ್ಟ್ರಂ ಹ್ರಿಯಮಾಣಂ ಸುಯೋಧನಂ||
ಅರ್ಜುನ, ಯಮಳರು ಮತ್ತು ಅಪರಾಜಿತ ಭೀಮ ನೀನೂ ಕೂಡ ಧಾರ್ತರಾಷ್ಟ್ರ ಸುಯೋಧನನನ್ನು ಸೆರೆಯಿಂದ ಬಿಡುಗಡೆ ಮಾಡಿಸಬೇಕು.
03232008a ಏತೇ ರಥಾ ನರವ್ಯಾಘ್ರಾಃ ಸರ್ವಶಸ್ತ್ರಸಮನ್ವಿತಾಃ|
03232008c ಇಂದ್ರಸೇನಾದಿಭಿಃ ಸೂತೈಃ ಸಮ್ಯತಾಃ ಕನಕಧ್ವಜಾಃ||
ನರವ್ಯಾಘ್ರರೇ! ಇಗೋ ಸರ್ವ ಶಸ್ತ್ರಗಳನ್ನೊಡಗೂಡಿದ, ಕನಕ ಧ್ವಜಗಳನ್ನು ಹೊಂದಿದ, ಇಂದ್ರಸೇನನೇ ಮೊದಲಾದ ಸೂತರು ನಡೆಸುವ ರಥಗಳಿವೆ.
03232009a ಏತಾನಾಸ್ಥಾಯ ವೈ ತಾತ ಗಂಧರ್ವಾನ್ಯೋದ್ಧುಮಾಹವೇ|
03232009c ಸುಯೋಧನಸ್ಯ ಮೋಕ್ಷಾಯ ಪ್ರಯತಧ್ವಮತಂದ್ರಿತಾಃ||
ತಮ್ಮಂದಿರೇ! ಇವುಗಳನ್ನು ಏರಿ ಗಂಧರ್ವರೊಡನೆ ಯುದ್ಧಮಾಡಿ ಸುಯೋಧನನನ್ನು ಬಿಡುಗಡೆಗೊಳಿಸಲು ಎಡೆಬಿಡದೆ ಪ್ರಯತ್ನಿಸಿ.
03232010a ಯ ಏವ ಕಶ್ಚಿದ್ರಾಜನ್ಯಃ ಶರಣಾರ್ಥಮಿಹಾಗತಂ|
03232010c ಪರಂ ಶಕ್ತ್ಯಾಭಿರಕ್ಷೇತ ಕಿಂ ಪುನಸ್ತ್ವಂ ವೃಕೋದರ||
ವೃಕೋದರ! ರಾಜನು ಯಾರೇ ಆದರೂ ಶರಣಾರ್ತಿಯಾಗಿ ಬಂದಿರುವವರನ್ನು ರಕ್ಷಿಸುವಾಗ ಪರಮ ಶಕ್ತಿಯುತನಾಗಿರುವ ನೀನು ಏಕೆ ರಕ್ಷಿಸುವುದಿಲ್ಲ?
03232011a ಕ ಇಹಾನ್ಯೋ ಭವೇತ್ತ್ರಾಣಮಭಿಧಾವೇತಿ ಚೋದಿತಃ|
03232011c ಪ್ರಾಂಜಲಿಂ ಶರಣಾಪನ್ನಂ ದೃಷ್ಟ್ವಾ ಶತ್ರುಮಪಿ ಧ್ರುವಂ||
ಇಲ್ಲಿರುವ ಯಾರು ತಾನೇ ಬಿಡುಗಡೆ ಮಾಡು ಎಂದು ಪ್ರಚೋದನೆಗೊಳಪಟ್ಟು, ಅವನು ಹಿಂದೆ ಶತ್ರುವೇ ಆಗಿರಲಿ, ಈಗ ಕೈಮುಗಿದು ಶರಣು ಬಂದಾಗ, ಬೇರೆ ಮಾಡಿಯಾನು?
03232012a ವರಪ್ರದಾನಂ ರಾಜ್ಯಂ ಚ ಪುತ್ರಜನ್ಮ ಚ ಪಾಂಡವ|
03232012c ಶತ್ರೋಶ್ಚ ಮೋಕ್ಷಣಂ ಕ್ಲೇಶಾತ್ತ್ರೀಣಿ ಚೈಕಂ ಚ ತತ್ಸಮಂ||
ಪಾಂಡವ! ವರಪ್ರದಾನ, ರಾಜ್ಯ, ಪುತ್ರಜನ್ಮ, ಶತ್ರುವನ್ನು ಕಷ್ಟದಿಂದ ಬಿಡುಗಡೆಮಾಡುವುದು ಇವುಗಳಲ್ಲಿ ಕೊನೆಯದು ಮೊದಲ ಮೂರಕ್ಕೆ ಸಮನಾದದ್ದು.
03232013a ಕಿಂ ಹ್ಯಭ್ಯಧಿಕಮೇತಸ್ಮಾದ್ಯದಾಪನ್ನಃ ಸುಯೋಧನಃ|
03232013c ತ್ವದ್ಬಾಹುಬಲಮಾಶ್ರಿತ್ಯ ಜೀವಿತಂ ಪರಿಮಾರ್ಗತಿ||
ಸುಯೋಧನನು ಸಹಾಯವನ್ನು ಕೇಳುತ್ತಿದ್ದಾನೆ ಮತ್ತು ಅವನು ಜೀವಂತನಾಗಿರಲು ನಿನ್ನ ಬಾಹುಬಲವನ್ನು ಆಶ್ರಯಿಸಿದ್ದಾನೆ ಎನ್ನುವುದಕ್ಕಿಂದ ಹೆಚ್ಚಿನದು ಏನಿದೆ?
03232014a ಸ್ವಯಮೇವ ಪ್ರಧಾವೇಯಂ ಯದಿ ನ ಸ್ಯಾದ್ವೃಕೋದರ|
03232014c ವಿತತೋಽಯಂ ಕ್ರತುರ್ವೀರ ನ ಹಿ ಮೇಽತ್ರ ವಿಚಾರಣಾ||
ವೃಕೋದರ! ವೀರ! ಈ ಯಜ್ಞವು ನಡೆಯದೇ ಇರುತ್ತಿದ್ದರೆ ಸ್ವಯಂ ನಾನೇ ಅವಸರಮಾಡಿ ಹೋಗುತ್ತಿದ್ದೆ. ಅದರಲ್ಲಿ ವಿಚಾರಮಾಡುವುದು ಏನೂ ಇಲ್ಲ.
03232015a ಸಾಮ್ನೈವ ತು ಯಥಾ ಭೀಮ ಮೋಕ್ಷಯೇಥಾಃ ಸುಯೋಧನಂ|
03232015c ತಥಾ ಸರ್ವೈರುಪಾಯೈಸ್ತ್ವಂ ಯತೇಥಾಃ ಕುರುನಂದನ||
ಭೀಮ! ಕುರುನಂದನ! ಸಾಮದಿಂದಲೇ ಸುಯೋಧನನನ್ನು ಬಿಡುಗಡೆಗೊಳಿಸಲು ಎಲ್ಲ ಉಪಾಯಗಳನ್ನೂ ಬಳಸು.
03232016a ನ ಸಾಮ್ನಾ ಪ್ರತಿಪದ್ಯೇತ ಯದಿ ಗಂಧರ್ವರಾಡಸೌ|
03232016c ಪರಾಕ್ರಮೇಣ ಮೃದುನಾ ಮೋಕ್ಷಯೇಥಾಃ ಸುಯೋಧನಂ||
ಆದರೆ ಸಾಮದಿಂದ ಗಂಧರ್ವರಾಜನು ಅವನನ್ನು ಹಿಂದಿರುಗಿಸದೇ ಇದ್ದರೆ ಮೃದುವಾದ ಪರಾಕ್ರಮವನ್ನು ಉಪಯೋಗಿಸಿ ಸುಯೋಧನನನ್ನು ಬಿಡುಗಡೆಗೊಳಿಸು.
03232017a ಅಥಾಸೌ ಮೃದುಯುದ್ಧೇನ ನ ಮುಂಚೇದ್ಭೀಮ ಕೌರವಾನ್|
03232017c ಸರ್ವೋಪಾಯೈರ್ವಿಮೋಚ್ಯಾಸ್ತೇ ನಿಗೃಹ್ಯ ಪರಿಪಂಥಿನಃ||
ಭೀಮ! ಮೃದು ಯುದ್ಧಕ್ಕೂ ಅವನು ಕೌರವನನ್ನು ಬಿಡುಗಡೆಗೊಳಿಸದೇ ಇದ್ದರೆ ಸರ್ವ ಉಪಾಯಗಳಿಂದ ಶತ್ರುವನ್ನು ನಿಗ್ರಹಿಸಿ ಅವನನ್ನು ಬಿಡುಗಡೆಮಾಡಿ ಬಾ.
03232018a ಏತಾವದ್ಧಿ ಮಯಾ ಶಕ್ಯಂ ಸಂದೇಷ್ಟುಂ ವೈ ವೃಕೋದರ|
03232018c ವೈತಾನೇ ಕರ್ಮಣಿ ತತೇ ವರ್ತಮಾನೇ ಚ ಭಾರತ||
ವೃಕೋದರ! ಭಾರತ! ನನ್ನ ಈ ಕರ್ಮಗಳು ನಡೆಯುವವರೆಗೆ ನಾನು ಈ ಆದೇಶವನ್ನು ನಿನಗೆ ಕೊಡಬಲ್ಲೆ.””
03232019 ವೈಶಂಪಾಯನ ಉವಾಚ|
03232019a ಅಜಾತಶತ್ರೋರ್ವಚನಂ ತಚ್ಚ್ರುತ್ವಾ ತು ಧನಂಜಯಃ|
03232019c ಪ್ರತಿಜಜ್ಞೇ ಗುರೋರ್ವಾಕ್ಯಂ ಕೌರವಾಣಾಂ ವಿಮೋಕ್ಷಣಂ||
ವೈಶಂಪಾಯನನು ಹೇಳಿದನು: “ಅಜಾತಶತ್ರುವಿನ ಆ ಮಾತನ್ನು ಕೇಳಿದ ಧನಂಜಯನು ಕೌರವರನ್ನು ಬಿಡುಗಡೆಗೊಳಿಸುವ ಆ ಗುರುವಾಕ್ಯದಂತೆ ಈ ಪ್ರತಿಜ್ಞೆಯನ್ನು ಮಾಡಿದನು.
03232020 ಅರ್ಜುನ ಉವಾಚ|
03232020a ಯದಿ ಸಾಮ್ನಾ ನ ಮೋಕ್ಷ್ಯಂತಿ ಗಂಧರ್ವಾ ಧೃತರಾಷ್ಟ್ರಜಾನ್|
03232020c ಅದ್ಯ ಗಂಧರ್ವರಾಜಸ್ಯ ಭೂಮಿಃ ಪಾಸ್ಯತಿ ಶೋಣಿತಂ||
ಅರ್ಜುನನು ಹೇಳಿದನು: “ಒಂದುವೇಳೆ ಗಂಧರ್ವನು ಸಾಮದಿಂದ ಧೃತರಾಷ್ಟ್ರನ ಮಕ್ಕಳನ್ನು ಬಿಡುಗಡೆ ಮಾಡದೇ ಇದ್ದರೆ ಇಂದು ಗಂಧರ್ವರಾಜನ ರಕ್ತವು ಭೂಮಿಯ ಮೇಲೆ ಬೀಳುತ್ತದೆ!””
03232021 ವೈಶಂಪಾಯನ ಉವಾಚ|
03232021a ಅರ್ಜುನಸ್ಯ ತು ತಾಂ ಶ್ರುತ್ವಾ ಪ್ರತಿಜ್ಞಾಂ ಸತ್ಯವಾದಿನಃ|
03232021c ಕೌರವಾಣಾಂ ತದಾ ರಾಜನ್ಪುನಃ ಪ್ರತ್ಯಾಗತಂ ಮನಃ||
ವೈಶಂಪಾಯನನು ಹೇಳಿದನು: “ರಾಜನ್! ಸತ್ಯವಾದಿ ಅರ್ಜುನನ ಈ ಪ್ರತಿಜ್ಞೆಯನ್ನು ಕೇಳಿ ಕೌರವರ ಮನಸ್ಸು ಪುನಃ ಹಿಂದಿರುಗಿತು.”
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಘೋಷಯಾತ್ರಾ ಪರ್ವಣಿ ದುರ್ಯೋಧನಮೋಚನಾನುಜ್ಞಾಯಾಯಾಂ ದ್ವಿತ್ರಿಂಶದಧಿಕದ್ವಿಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಘೋಷಯಾತ್ರಾ ಪರ್ವದಲ್ಲಿ ದುರ್ಯೋಧನಮೋಚನಾನುಜ್ಞೆಯಲ್ಲಿ ಇನ್ನೂರಾಮೂವತ್ತೆರಡನೆಯ ಅಧ್ಯಾಯವು.
