Ashramavasika Parva: Chapter 32

ಆಶ್ರಮವಾಸಿಕ ಪರ್ವ: ಆಶ್ರಮವಾಸ ಪರ್ವ

೩೨

ಪಾಂಡವವರ್ಣನ

ಋಷಿ-ಮುನಿಗಳಿಗೆ ಸಂಜಯನು ಪಾಂಡವರು ಮತ್ತು ಕುರುಸ್ತ್ರೀಯರ ಪರಿಚಯವನ್ನು ಮಾಡಿಕೊಡುವುದು (೧-೧೮).

15032001 ವೈಶಂಪಾಯನ ಉವಾಚ|

15032001a ಸ ತೈಃ ಸಹ ನರವ್ಯಾಘ್ರೈರ್ಭ್ರಾತೃಭಿರ್ಭರತರ್ಷಭ|

15032001c ರಾಜಾ ರುಚಿರಪದ್ಮಾಕ್ಷೈರಾಸಾಂ ಚಕ್ರೇ ತದಾಶ್ರಮೇ||

ವೈಶಂಪಾಯನನು ಹೇಳಿದನು: “ಭರತರ್ಷಭ! ಆ ಆಶ್ರಮದಲ್ಲಿ ರಾಜಾ ಧೃತರಾಷ್ಟ್ರನು ಸುಂದರ ಕಮಲಗಳಂತಹ ಕಣ್ಣುಗಳುಳ್ಳ ನರವ್ಯಾಘ್ರ ಸಹೋದರರೊಂದಿಗೆ ಕುಳಿತುಕೊಂಡನು.

15032002a ತಾಪಸೈಶ್ಚ ಮಹಾಭಾಗೈರ್ನಾನಾದೇಶಸಮಾಗತೈಃ|

15032002c ದ್ರಷ್ಟುಂ ಕುರುಪತೇಃ ಪುತ್ರಾನ್ಪಾಂಡವಾನ್ಪೃಥುವಕ್ಷಸಃ||

ಮಹಾಭಾಗ ತಾಪಸರು ಕೂಡ ಪೃಥುವಕ್ಷಸ ಕುರುಪತಿಯ ಪುತ್ರರಾದ ಪಾಂಡವರನ್ನು ನೋಡಲು ನಾನಾದೇಶಗಳಿಂದ ಬಂದು ಸೇರಿದ್ದರು.

15032003a ತೇಽಬ್ರುವನ್ ಜ್ಞಾತುಮಿಚ್ಚಾಮಃ ಕತಮೋಽತ್ರ ಯುಧಿಷ್ಠಿರಃ|

15032003c ಭೀಮಾರ್ಜುನಯಮಾಶ್ಚೈವ ದ್ರೌಪದೀ ಚ ಯಶಸ್ವಿನೀ||

ಅವರು – “ಇವರಲ್ಲಿ ಯುಧಿಷ್ಠಿರನು ಯಾರು? ಭೀಮಾರ್ಜುನ-ಯಮಳರು ಯಾರು ಮತ್ತು ಯಶಸ್ವಿನೀ ದ್ರೌಪದಿಯು ಯಾರು ಎಂದು ತಿಳಿಯಲು ಬಯಸುತ್ತೇವೆ” – ಎಂದು ಕೇಳಿಕೊಂಡರು.

15032004a ತಾನಾಚಖ್ಯೌ ತದಾ ಸೂತಃ ಸರ್ವಾನ್ನಾಮಾಭಿನಾಮತಃ|

15032004c ಸಂಜಯೋ ದ್ರೌಪದೀಂ ಚೈವ ಸರ್ವಾಶ್ಚಾನ್ಯಾಃ ಕುರುಸ್ತ್ರಿಯಃ||

ಆಗ ಸೂತ ಸಂಜಯನು ಅವರಿಗೆ ದ್ರೌಪದಿ ಮತ್ತು ಸರ್ವ ಕುರುಸ್ತ್ರೀಯರನ್ನೂ ಸೇರಿಸಿ ಎಲ್ಲರ ಹೆಸರುಗಳನ್ನು ಹೇಳುತ್ತಾ ಪರಿಚಯ ಮಾಡಿಕೊಟ್ಟನು.

15032005a ಯ ಏಷ ಜಾಂಬೂನದಶುದ್ಧಗೌರ

ತನುರ್ಮಹಾಸಿಂಹ ಇವ ಪ್ರವೃದ್ಧಃ|

15032005c ಪ್ರಚಂಡಘೋಣಃ ಪೃಥುದೀರ್ಘನೇತ್ರಸ್

ತಾಮ್ರಾಯತಾಸ್ಯಃ ಕುರುರಾಜ ಏಷಃ||

“ಶುದ್ಧ ಚಿನ್ನದಂತೆ ಗೌರಾಂಗನಾಗಿರುವ, ಮಹಾಸಿಂಹದಂತೆ ಬೆಳೆದ ಶರೀರವುಳ್ಳ, ತೀಕ್ಷ್ಣವಾದ ಮೂಗಿರುವ, ವಿಶಾಲವಾಗಿಯೂ, ತೀಕ್ಷ್ಣವಾಗಿಯೂ ಮತ್ತು ಕೆಂಪಾಗಿಯೂ ಇರುವ ಕಣ್ಣುಗಳುಳ್ಳ ಇವನೇ ಕುರುರಾಜ ಯುಧಿಷ್ಠಿರನು!

15032006a ಅಯಂ ಪುನರ್ಮತ್ತಗಜೇಂದ್ರಗಾಮೀ

ಪ್ರತಪ್ತಚಾಮೀಕರಶುದ್ಧಗೌರಃ|

15032006c ಪೃಥ್ವಾಯತಾಂಸಃ ಪೃಥುದೀರ್ಘಬಾಹುರ್

ವೃಕೋದರಃ ಪಶ್ಯತ ಪಶ್ಯತೈನಮ್||

ಮದಿಸಿದ ಗಜರಾಜನ ನಡುಗೆಯುಳ್ಳ, ಪುಟಕ್ಕೆ ಹಾಕಿದ ಚಿನ್ನದಂತೆ ಶುದ್ಧ ಗೌರವರ್ಣದ, ವಿಶಾಲವಾದ ಮತ್ತು ದಷ್ಟಪುಷ್ಟವಾದ ಹೆಗಲುಗಳುಳ್ಳ, ದಪ್ಪವಾಗಿಯೂ ನೀಳವಾಗಿಯೂ ಇರುವ ತೋಳುಗಳುಳ್ಳ ಇವನೇ ವೃಕೋದರನು. ಇವನನ್ನು ಚೆನ್ನಾಗಿ ನೋಡಿರಿ!

15032007a ಯಸ್ತ್ವೇಷ ಪಾರ್ಶ್ವೇಽಸ್ಯ ಮಹಾಧನುಷ್ಮಾನ್

ಶ್ಯಾಮೋ ಯುವಾ ವಾರಣಯೂಥಪಾಭಃ|

15032007c ಸಿಂಹೋನ್ನತಾಂಸೋ ಗಜಖೇಲಗಾಮೀ

ಪದ್ಮಾಯತಾಕ್ಷೋಽರ್ಜುನ ಏಷ ವೀರಃ||

ಇವನ ಪಕ್ಕದಲ್ಲಿಯೇ ಇರುವ ಶ್ಯಾಮಲ ವರ್ಣದ, ಯುವಕ, ಗಜಗಣಗಳ ಪತಿ ಸಲಗದಂತೆ ಪ್ರಕಾಶಿಸುತ್ತಿರುವ, ಸಿಂಹದ ಹೆಗಲಿನಂತೆ ವಿಸ್ತಾರವಾದ ಹೆಗಲುಳ್ಳ, ಗಜಕ್ರೀಡೆಯಂಥಹ ನಡುಗೆಯುಳ್ಳ, ಕಮಲದಂತೆ ವಿಶಾಲ ಕಣ್ಣುಗಳುಳ್ಳ ಮಹಾಧನುಷ್ಮಂತನಾದ ಇವನೇ ವೀರ ಅರ್ಜುನ!

15032008a ಕುಂತೀಸಮೀಪೇ ಪುರುಷೋತ್ತಮೌ ತು

ಯಮಾವಿಮೌ ವಿಷ್ಣುಮಹೇಂದ್ರಕಲ್ಪೌ|

15032008c ಮನುಷ್ಯಲೋಕೇ ಸಕಲೇ ಸಮೋಽಸ್ತಿ

ಯಯೋರ್ನ ರೂಪೇ ನ ಬಲೇ ನ ಶೀಲೇ||

ಕುಂತಿಯ ಸಮೀಪದಲ್ಲಿ ಕುಳಿತಿರುವ, ವಿಷ್ಣು-ಮಹೇಂದ್ರ ಸದೃಶರಾದ, ಪುರುಷೋತ್ತಮರೀರ್ವರು, ಅವಳೀ ಮಕ್ಕಳಾದ ಇವರೇ ನಕುಲ ಸಹದೇವರು. ಮನುಷ್ಯಲೋಕದಲ್ಲಿ ರೂಪದಲ್ಲಾಗಲೀ, ಬಲದಲ್ಲಾಗಲೀ ಅಥವಾ ಶೀಲದಲ್ಲಾಗಲೀ ಇವರಿಗೆ ಸಮನಾದವರು ಬೇರೆ ಯಾರೂ ಇಲ್ಲ!

15032009a ಇಯಂ ಪುನಃ ಪದ್ಮದಲಾಯತಾಕ್ಷೀ

ಮಧ್ಯಂ ವಯಃ ಕಿಂ ಚಿದಿವ ಸ್ಪೃಶಂತೀ|

15032009c ನೀಲೋತ್ಪಲಾಭಾ ಪುರದೇವತೇವ

ಕೃಷ್ಣಾ ಸ್ಥಿತಾ ಮೂರ್ತಿಮತೀವ ಲಕ್ಷ್ಮೀಃ||

ಮಧ್ಯ ವಯಸ್ಸಿನ ಈ ಪದ್ಮದಳಾಯತಾಕ್ಷೀ, ನೀಲಕಮಲದ ಕಾಂತಿಯಂಥ ಶ್ಯಾಮಲ ವರ್ಣದವಳು, ದೇವತೆಗಳಿಗೂ ದೇವಿಯಂತಿರುವ, ಮೂರ್ತಿಮತ್ತಾಗಿ ಬಂದಿರುವ ಲಕ್ಷ್ಮಿಯಂತೆ ನಿಂತಿರುವ ಇವಳೇ ಕೃಷ್ಣೆ ದ್ರೌಪದೀ.

15032010a ಅಸ್ಯಾಸ್ತು ಪಾರ್ಶ್ವೇ ಕನಕೋತ್ತಮಾಭಾ

ಯೈಷಾ ಪ್ರಭಾ ಮೂರ್ತಿಮತೀವ ಗೌರೀ|

15032010c ಮಧ್ಯೇ ಸ್ಥಿತೈಷಾ ಭಗಿನೀ ದ್ವಿಜಾಗ್ರ್ಯಾ

ಚಕ್ರಾಯುಧಸ್ಯಾಪ್ರತಿಮಸ್ಯ ತಸ್ಯ||

ದ್ವಿಜಾಗ್ರರೇ! ಅವಳ ಪಕ್ಕದಲ್ಲಿ ಸ್ತ್ರೀಯರ ಮಧ್ಯದಲ್ಲಿ ಕುಳಿತಿರುವ, ಚಿನ್ನಕ್ಕೂ ಹೆಚ್ಚಿನ ಕಾಂತಿಯುಳ್ಳ, ಮೂರ್ತಿಮತ್ತಾಗಿ ಬಂದಿರುವ ಗೌರಿಯಂತೆಯೇ ಇರುವ, ಅವಳೇ ಅಪ್ರತಿಮ ಚಕ್ರಾಯುಧ ಕೃಷ್ಣನ ತಂಗಿ ಸುಭದ್ರೆ.

[1]15032011a ಇಯಂ ಸ್ವಸಾ ರಾಜಚಮೂಪತೇಸ್ತು

ಪ್ರವೃದ್ಧನೀಲೋತ್ಪಲದಾಮವರ್ಣಾ|

15032011c ಪಸ್ಪರ್ಧ ಕೃಷ್ಣೇನ ನೃಪಃ ಸದಾ ಯೋ

ವೃಕೋದರಸ್ಯೈಷ ಪರಿಗ್ರಹೋಽಗ್ರ್ಯಃ||

ಬೆಳೆದ ನೀಲಕಮಲದ ಹಾರದ ಬಣ್ಣದಂತೆ ಶ್ಯಾಮಲವರ್ಣವುಳ್ಳ ಇವಳು – ಶ್ರೀ ಕೃಷ್ಣನೊಡನೆ ಸಾರಥ್ಯದ ಕೌಶಲ್ಯದಲ್ಲಿ ಸದಾ ಸ್ಪರ್ಧಿಸುತ್ತಿದ್ದ ಮತ್ತು ದುರ್ಯೋಧನನ ಸೇನಾ ನಾಯಕನಾಗಿದ್ದ ಶಲ್ಯನ ತಂಗಿ ಮತ್ತು ಭೀಮಸೇನನ ಶ್ರೇಷ್ಠ ಭಾರ್ಯೆಯು.

15032012a ಇಯಂ ಚ ರಾಜ್ಞೋ ಮಗಧಾಧಿಪಸ್ಯ

ಸುತಾ ಜರಾಸಂಧ ಇತಿ ಶ್ರುತಸ್ಯ|

15032012c ಯವೀಯಸೋ ಮಾದ್ರವತೀಸುತಸ್ಯ

ಭಾರ್ಯಾ ಮತಾ ಚಂಪಕದಾಮಗೌರೀ||

ಸಂಪಿಗೆ ಹೂವಿನ ಮಾಲೆಯಂತೆ ಗೌರವರ್ಣವುಳ್ಳ, ಮಗಧಾಧಿಪನೆಂದು ಖ್ಯಾತನಾದ ಜರಾಸಂಧನ ಮಗಳು ಇವಳು ಮಾದ್ರಿಯ ಕಡೆಯ ಮಗ ಸಹದೇವನ ಭಾರ್ಯೆ.

15032013a ಇಂದೀವರಶ್ಯಾಮತನುಃ ಸ್ಥಿತಾ ತು

ಯೈಷಾಪರಾಸನ್ನಮಹೀತಲೇ ಚ|

15032013c ಭಾರ್ಯಾ ಮತಾ ಮಾದ್ರವತೀಸುತಸ್ಯ

ಜ್ಯೇಷ್ಠಸ್ಯ ಸೇಯಂ ಕಮಲಾಯತಾಕ್ಷೀ||

ಅವಳ ಸಮೀಪದಲ್ಲಿ ನೆಲದ ಮೇಲೆ ಕುಳಿತುಕೊಂಡಿರುವ, ಇಂದೀವರದಂತೆ ಶ್ಯಾಮಲ ವರ್ಣದ ಶರೀರವುಳ್ಳ, ಕಮಲಾಯತಾಕ್ಷಿಯು ಜ್ಯೇಷ್ಠ ಮಾದ್ರೀ ಸುತ ನಕುಲನ ಭಾರ್ಯೆಯು.

15032014a ಇಯಂ ತು ನಿಷ್ಟಪ್ತಸುವರ್ಣಗೌರೀ

ರಾಜ್ಞೋ ವಿರಾಟಸ್ಯ ಸುತಾ ಸಪುತ್ರಾ|

15032014c ಭಾರ್ಯಾಭಿಮನ್ಯೋರ್ನಿಹತೋ ರಣೇ ಯೋ

ದ್ರೋಣಾದಿಭಿಸ್ತೈರ್ವಿರಥೋ ರಥಸ್ಥೈಃ||

ಪುಟಕ್ಕೆ ಹಾಕಿದ ಚಿನ್ನದಂತೆ ಗೌರವರ್ಣವುಳ್ಳ, ಮಗನೊಂದಿಗಿರುವ ಇವಳು ರಾಜ ವಿರಾಟನ ಮಗಳು ಮತ್ತು ವಿರಥನಾಗಿದ್ದಾಗ ರಥಸ್ಥರಾಗಿದ್ದ ದ್ರೋಣಾದಿಗಳು ರಣದಲ್ಲಿ ಸಂಹರಿಸಿದ ಆ ಅಭಿಮನ್ಯುವಿನ ಭಾರ್ಯೆಯು.

15032015a ಏತಾಸ್ತು ಸೀಮಂತಶಿರೋರುಹಾ ಯಾಃ

ಶುಕ್ಲೋತ್ತರೀಯಾ ನರರಾಜಪತ್ನ್ಯಃ|

15032015c ರಾಜ್ಞೋಽಸ್ಯ ವೃದ್ಧಸ್ಯ ಪರಂಶತಾಖ್ಯಾಃ

ಸ್ನುಷಾ ವಿವೀರಾ ಹತಪುತ್ರನಾಥಾಃ||

ಬಿಳಿಯ ಉತ್ತರೀಯವನ್ನು ಹೊದೆದಿರುವ ಮತ್ತು ಬೈತಲೆಗಳಲ್ಲಿ ಕುಂಕುಮಗಳಿಲ್ಲದಿರುವ ಇವರು ನರರಾಜ ದುರ್ಯೋಧನನ ಮತ್ತು ಅವನ ತಮ್ಮಂದಿರ ಪತ್ನಿಯರು. ವೃದ್ಧ ರಾಜನ ನೂರಕ್ಕು ಹೆಚ್ಚಿನ ಸಂಖ್ಯೆಯ ಈ ಸೊಸೆಯಂದಿರು ನರವೀರರಾದ ಪತಿ-ಪುತ್ರರನ್ನು ಕಳೆದುಕೊಂಡಿದ್ದಾರೆ.

15032016a ಏತಾ ಯಥಾಮುಖ್ಯಮುದಾಹೃತಾ ವೋ

ಬ್ರಾಹ್ಮಣ್ಯಭಾವಾದೃಜುಬುದ್ಧಿಸತ್ತ್ವಾಃ|

15032016c ಸರ್ವಾ ಭವದ್ಭಿಃ ಪರಿಪೃಚ್ಚ್ಯಮಾನಾ

ನರೇಂದ್ರಪತ್ನ್ಯಃ ಸುವಿಶುದ್ಧಸತ್ತ್ವಾಃ||

ಭಾವದಲ್ಲಿ ಸರಳತೆಯನ್ನೂ ಬುದ್ಧಿಗಳಲ್ಲಿ ಸತ್ತ್ವಗಳನ್ನೂ ಪಡೆದಿರುವ ಬ್ರಾಹ್ಮಣರೇ! ನೀವುಗಳೆಲ್ಲ ಕೇಳಿದುದಕ್ಕೆ ನಾನು ಮುಖ್ಯರಾದವರ ಪರಿಚಯ ಮಾಡಿಕೊಟ್ಟಿದ್ದೇನೆ. ಈ ಎಲ್ಲ ನರೇಂದ್ರಪತ್ನಿಯರೂ ವಿಶುದ್ಧಸತ್ತ್ವರು.”

15032017a ಏವಂ ಸ ರಾಜಾ ಕುರುವೃದ್ಧವರ್ಯಃ

ಸಮಾಗತಸ್ತೈರ್ನರದೇವಪುತ್ರೈಃ|

15032017c ಪಪ್ರಚ್ಚ ಸರ್ವಾನ್ಕುಶಲಂ ತದಾನೀಂ

ಗತೇಷು ಸರ್ವೇಷ್ವಥ ತಾಪಸೇಷು||

ಸರ್ವ ತಾಪಸರು ಹೊರಟುಹೋದ ನಂತರ ಕುರುವೃದ್ಧವರ್ಯ ರಾಜನು ಸೇರಿರುವ ನರದೇವಪುತ್ರರೆಲ್ಲರ ಕುಶಲವನ್ನು ಪ್ರಶ್ನಿಸಿದನು.

15032018a ಯೋಧೇಷು ಚಾಪ್ಯಾಶ್ರಮಮಂಡಲಂ ತಂ

ಮುಕ್ತ್ವಾ ನಿವಿಷ್ಟೇಷು ವಿಮುಚ್ಯ ಪತ್ರಮ್|

15032018c ಸ್ತ್ರೀವೃದ್ಧಬಾಲೇ ಚ ಸುಸಂನಿವಿಷ್ಟೇ

ಯಥಾರ್ಹತಃ ಕುಶಲಂ ಪರ್ಯಪೃಚ್ಚತ್||

ಯೋಧರು ಆಶ್ರಮಮಂಡಲದ ಗಡಿಯಲ್ಲಿಯೇ ವಾಹನಗಳನ್ನು ಬಿಚ್ಚಿ ಅಲ್ಲಿಯೇ ಸ್ತ್ರೀ-ವೃದ್ಧ-ಬಾಲಕರಿಗೆ ಉಳಿಯಲು ವ್ಯವಸ್ಥೆಮಾಡಿದರು. ಆಗ ಧೃತರಾಷ್ಟ್ರನು ಯಥಾರ್ಹವಾಗಿ ಕುಶಲ ಪ್ರಶ್ನೆಗಳನ್ನು ಕೇಳಿದನು.

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಋಷೀನ್ ಪ್ರತಿ ಯುಧಿಷ್ಠಿರಾದಿಕಥನೇ ದ್ವಿತ್ರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಋಷಿನ್ ಪ್ರತಿ ಯುಧಿಷ್ಠಿರಾದಿಕಥನ ಎನ್ನುವ ಮೂವತ್ತೆರಡನೇ ಅಧ್ಯಾಯವು.

Related image

[1] ಇದಕ್ಕೆ ಮೊದಲು ಭಾರತದರ್ಶನದಲ್ಲಿ ಈ ಶ್ಲೋಕವಿದೆ: ಇಯಂ ಚ ಜಾಂಬೂನದಶುದ್ಧಗೌರೀ ಪಾರ್ಥಸ್ಯ ಭಾರ್ಯಾ ಭುಜಗೇಂದ್ರಕನ್ಯಾ| ಚಿತ್ರಾಂಗದಾ ಚೈವ ನರೇಂದ್ರಕನ್ಯಾ ಯೈಷಾ ಸವರ್ಣಾರ್ದ್ರಮಧೂಕಪುಷ್ಪಃ|| ಅರ್ಥಾತ್ ವಿಶುದ್ಧ ಚಿನ್ನದಂತೆ ಗೌರಾಂಗಳಾಗಿರುವ, ಭುಜಗೇಂದ್ರನ ಮಗಳು ಅರ್ಜುನನ ಭಾರ್ಯೆ ಇವಳೇ ಉಲೂಪಿಯು. ಅರಳಿದ ಹಿಪ್ಪೇ ಹೂಗಳ ವರ್ಣಕ್ಕೆ ಸಮಾನ ವರ್ಣವುಳ್ಳ ರಾಜಕುಮಾರಿ ಇವಳೇ ಅರ್ಜುನನ ಮತ್ತೊಬ್ಬ ಪತ್ನಿ ಚಿತ್ರಾಂಗದೆಯು.

Comments are closed.