Ashramavasika Parva: Chapter 21

ಆಶ್ರಮವಾಸಿಕ ಪರ್ವ: ಆಶ್ರಮವಾಸ ಪರ್ವ

೨೧

ಧೃತರಾಷ್ಟ್ರನ ವನಗಮನ (೧-೧೩)

15021001 ವೈಶಂಪಾಯನ ಉವಾಚ|

15021001a ತತಃ ಪ್ರಭಾತೇ ರಾಜಾ ಸ ಧೃತರಾಷ್ಟ್ರೋಽಂಬಿಕಾಸುತಃ|

15021001c ಆಹೂಯ ಪಾಂಡವಾನ್ವೀರಾನ್ವನವಾಸಕೃತಕ್ಷಣಃ||

ವೈಶಂಪಾಯನನು ಹೇಳಿದನು: “ಮರುದಿನ ಬೆಳಿಗ್ಗೆ ಅಂಬಿಕಾಸುತ ಧೃತರಾಷ್ಟ್ರನು ವನವಾಸಕ್ಕೆ ಹೊರಡಲು ಸಿದ್ಧನಾಗಿ ವೀರ ಪಾಂಡವರನ್ನು ಕರೆಯಿಸಿದನು.

15021002a ಗಾಂಧಾರೀಸಹಿತೋ ಧೀಮಾನಭಿನಂದ್ಯ ಯಥಾವಿಧಿ|

15021002c ಕಾರ್ತ್ತಿಕ್ಯಾಂ ಕಾರಯಿತ್ವೇಷ್ಟಿಂ ಬ್ರಾಹ್ಮಣೈರ್ವೇದಪಾರಗೈಃ||

ಗಾಂಧಾರಿಯ ಸಹಿತನಾಗಿ ಆ ಧೀಮಂತನು ಯಥಾವಿಧಿಯಾಗಿ ಅವರನ್ನು ಅಭಿನಂದಿಸಿ, ವೇದಪಾರಗ ಬ್ರಾಹ್ಮಣರಿಂದ ಕಾರ್ತೀಕದ ಹುಣ್ಣಿಮೆಯಂದು ಇಷ್ಟಿಯನ್ನು ನೆರವೇರಿಸಿದನು.

15021003a ಅಗ್ನಿಹೋತ್ರಂ ಪುರಸ್ಕೃತ್ಯ ವಲ್ಕಲಾಜಿನಸಂವೃತಃ|

15021003c ವಧೂಪರಿವೃತೋ ರಾಜಾ ನಿರ್ಯಯೌ ಭವನಾತ್ತತಃ||

ಅಗ್ನಿಹೋತ್ರವನ್ನು ಮುಂದೆಮಾಡಿಕೊಂಡು, ವಲ್ಕಲ-ಜಿನವಸ್ತ್ರಗಳನ್ನು ಧರಿಸಿ, ಸೊಸೆಯರಿಂದ ಪರಿವೃತನಾಗಿ ರಾಜನು ತನ್ನ ಭವನದಿಂದ ಹೊರಟನು.

15021004a ತತಃ ಸ್ತ್ರಿಯಃ ಕೌರವಪಾಂಡವಾನಾಂ

ಯಾಶ್ಚಾಪ್ಯನ್ಯಾಃ ಕೌರವರಾಜವಂಶ್ಯಾಃ|

15021004c ತಾಸಾಂ ನಾದಃ ಪ್ರಾದುರಾಸೀತ್ತದಾನೀಂ

ವೈಚಿತ್ರವೀರ್ಯೇ ನೃಪತೌ ಪ್ರಯಾತೇ||

ವಿಚಿತ್ರವೀರ್ಯನ ಮಗ ನೃಪತಿಯು ಹೊರಟ ಆ ಸಮಯದಲ್ಲಿ ಕೌರವ-ಪಾಂಡವರ ಸ್ತ್ರೀಯರ ಮತ್ತು ಕೌರವ ರಾಜ ವಂಶಜರ ಆರ್ತನಾದಗಳು ಎಲ್ಲ ಕಡೆಗಳಿಂದಲೂ ಕೇಳಿ ಬರುತ್ತಿದ್ದವು.

15021005a ತತೋ ಲಾಜೈಃ ಸುಮನೋಭಿಶ್ಚ ರಾಜಾ

ವಿಚಿತ್ರಾಭಿಸ್ತದ್ಗೃಹಂ ಪೂಜಯಿತ್ವಾ|

15021005c ಸಂಯೋಜ್ಯಾರ್ಥೈರ್ಭೃತ್ಯಜನಂ ಚ ಸರ್ವಂ

ತತಃ ಸಮುತ್ಸೃಜ್ಯ ಯಯೌ ನರೇಂದ್ರಃ||

ಅನಂತರ ನರೇಂದ್ರನು ಸುಮನೋಹರ ಅರಳಿನಿಂದಲೂ ವಿಚಿತ್ರ ಪುಷ್ಪಗಳಿಂದಲೂ ತನ್ನ ಅರಮನೆಯನ್ನು ಪೂಜಿಸಿ, ಸೇವಕವರ್ಗದ ಜನರೆಲ್ಲರನ್ನು ಸತ್ಕರಿಸಿ, ಎಲ್ಲವನ್ನೂ ಬಿಟ್ಟು ಹೊರಟನು.

15021006a ತತೋ ರಾಜಾ ಪ್ರಾಂಜಲಿರ್ವೇಪಮಾನೋ

ಯುಧಿಷ್ಠಿರಃ ಸಸ್ವನಂ ಬಾಷ್ಪಕಂಠಃ|

15021006c ವಿಲಪ್ಯೋಚ್ಚೈರ್ಹಾ ಮಹಾರಾಜ ಸಾಧೋ

ಕ್ವ ಗಂತಾಸೀತ್ಯಪತತ್ತಾತ ಭೂಮೌ||

ಆಗ ರಾಜಾ ಯುಧಿಷ್ಠಿರನು ಕೈಮುಗಿದು ನಡುಗುತ್ತಾ ಕಣ್ಣೀರಿನಿಂದ ಗಂಟಲು ಕಟ್ಟಿದವನಾಗಿ “ಸತ್ಪುರುಷನೇ! ಮಹಾರಾಜ! ಎಲ್ಲಿಗೆ ಹೋಗುತ್ತಿರುವೆ?” ಎಂದು ಜೋರಾಗಿ ಕೂಗಿಕೊಳ್ಳುತ್ತಾ ಭೂಮಿಯ ಮೇಲೆ ಬಿದ್ದನು.

15021007a ತಥಾರ್ಜುನಸ್ತೀವ್ರದುಃಖಾಭಿತಪ್ತೋ

ಮುಹುರ್ಮುಹುರ್ನಿಃಶ್ವಸನ್ಭಾರತಾಗ್ರ್ಯಃ|

15021007c ಯುಧಿಷ್ಠಿರಂ ಮೈವಮಿತ್ಯೇವಮುಕ್ತ್ವಾ

ನಿಗೃಹ್ಯಾಥೋದೀಧರತ್ಸೀದಮಾನಃ||

ಆಗ ತೀವ್ರ ದುಃಖದಿಂದ ಪರಿತಪಿಸುತ್ತಿದ್ದ ಭಾರತಾಗ್ರ್ಯ ಅರ್ಜುನನು ಪುನಃ ಪುನಃ ನಿಟ್ಟುಸಿರು ಬಿಡುತ್ತಾ ಯುಧಿಷ್ಠಿರನಿಗೆ “ನೀನು ಹೀಗೆ ಅಧೀರನಾಗಬಾರದು!” ಎಂದು ಹೇಳುತ್ತಾ ತಾನೂ ಎದೆಗುಂದಿದನು.

15021008a ವೃಕೋದರಃ ಫಲ್ಗುನಶ್ಚೈವ ವೀರೌ

ಮಾದ್ರೀಪುತ್ರೌ ವಿದುರಃ ಸಂಜಯಶ್ಚ|

15021008c ವೈಶ್ಯಾಪುತ್ರಃ ಸಹಿತೋ ಗೌತಮೇನ

ಧೌಮ್ಯೋ ವಿಪ್ರಾಶ್ಚಾನ್ವಯುರ್ಬಾಷ್ಪಕಂಠಾಃ||

ವೃಕೋದರ, ಫಲ್ಗುನ, ವೀರ ಮಾದ್ರೀಪುತ್ರರು, ವಿದುರ, ಸಂಜಯ, ವೈಶ್ಯಾಪುತ್ರ ಯುಯುತ್ಸು, ಮತ್ತು ಧೌಮ್ಯನೊಡನೆ ವಿಪ್ರ ಗೌತಮ ಕೃಪರು ಬಾಷ್ಪಗದ್ಗದ ಕಂಠಗಳಿಂದ ಕೂಡಿದವರಾಗಿ ರಾಜನನ್ನು ಅನುಸರಿಸಿ ಹೋದರು.

15021009a ಕುಂತೀ ಗಾಂಧಾರೀಂ ಬದ್ಧನೇತ್ರಾಂ ವ್ರಜಂತೀಂ

ಸ್ಕಂಧಾಸಕ್ತಂ ಹಸ್ತಮಥೋದ್ವಹಂತೀ|

15021009c ರಾಜಾ ಗಾಂಧಾರ್ಯಾಃ ಸ್ಕಂಧದೇಶೇಽವಸಜ್ಯ

ಪಾಣಿಂ ಯಯೌ ಧೃತರಾಷ್ಟ್ರಃ ಪ್ರತೀತಃ||

ಕುಂತಿಯು ಕಣ್ಣುಗಳನ್ನು ಕಟ್ಟಿಕೊಂಡಿದ್ದ ಗಾಂಧಾರಿಯ ಎಡತೋಳನ್ನು ತನ್ನ ಹೆಗಲ ಮೇಲೆ ಇಟ್ಟುಕೊಂಡು ಹೋಗುತ್ತಿದ್ದಳು. ರಾಜಾ ಧೃತರಾಷ್ಟ್ರನು ಗಾಂಧಾರಿಯ ಹೆಗಲಿನ ಮೇಲೆ ಕೈಯನ್ನಿಟ್ಟು ನಿಶ್ಚಿಂತನಾಗಿ ಹೋಗುತ್ತಿದ್ದನು.

15021010a ತಥಾ ಕೃಷ್ಣಾ ದ್ರೌಪದೀ ಯಾದವೀ ಚ

ಬಾಲಾಪತ್ಯಾ ಚೋತ್ತರಾ ಕೌರವೀ ಚ|

15021010c ಚಿತ್ರಾಂಗದಾ ಯಾಶ್ಚ ಕಾಶ್ಚಿತ್ ಸ್ತ್ರಿಯೋಽನ್ಯಾಃ

ಸಾರ್ಧಂ ರಾಜ್ಞಾ ಪ್ರಸ್ಥಿತಾಸ್ತಾ ವಧೂಭಿಃ||

ಹಾಗೆಯೇ ದ್ರೌಪದೀ ಕೃಷ್ಣೆ, ಯಾದವೀ ಸುಭದ್ರೆ, ಮಗುವನ್ನೆತ್ತಿಕೊಂಡಿದ್ದ ಕೌರವೀ ಉತ್ತರೆ, ಚಿತ್ರಾಂಗದಾ ಮತ್ತು ಇತರ ಸ್ತ್ರೀಯರು ಎಲ್ಲರೂ ಒಟ್ಟಾಗಿ ರಾಜ ಧೃತರಾಷ್ಟ್ರನೊಡನೆ ಹೋಗುತ್ತಿದ್ದರು.

15021011a ತಾಸಾಂ ನಾದೋ ರುದತೀನಾಂ ತದಾಸೀದ್

ರಾಜನ್ದುಃಖಾತ್ಕುರರೀಣಾಮಿವೋಚ್ಚೈಃ|

15021011c ತತೋ ನಿಷ್ಪೇತುರ್ಬ್ರಾಹ್ಮಣಕ್ಷತ್ರಿಯಾಣಾಂ

ವಿಟ್ಶೂದ್ರಾಣಾಂ ಚೈವ ನಾರ್ಯಃ ಸಮಂತಾತ್||

ರಾಜನ್! ಆಗ ಅವರೆಲ್ಲರ ರೋದನವು ದುಃಖದಲ್ಲಿರುವ ಕಡಲಹದ್ದುಗಳ ಕೂಗಿನಂತೆ ಕೇಳಿಬರುತ್ತಿತ್ತು. ಅದನ್ನು ಕೇಳಿ ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರ ನಾರಿಯರು ಅಲ್ಲಿಗೆ ಎಲ್ಲಕಡೆಗಳಿಂದ ಬಂದು ಸೇರಿದರು.

15021012a ತನ್ನಿರ್ಯಾಣೇ ದುಃಖಿತಃ ಪೌರವರ್ಗೋ

ಗಜಾಹ್ವಯೇಽತೀವ ಬಭೂವ ರಾಜನ್|

15021012c ಯಥಾ ಪೂರ್ವಂ ಗಚ್ಚತಾಂ ಪಾಂಡವಾನಾಂ

ದ್ಯೂತೇ ರಾಜನ್ಕೌರವಾಣಾಂ ಸಭಾಯಾಮ್||

ರಾಜನ್! ಹಿಂದೆ ದ್ಯೂತದ ಸಮಯದಲ್ಲಿ ಕೌರವರ ಸಭೆಯಿಂದ ಪಾಂಡವರು ಹೊರಟಿದ್ದಾಗ ಹೇಗೋ ಹಾಗೆ ಧೃತರಾಷ್ಟ್ರನು ಹೊರಡುವಾಗಲೂ ಕೂಡ ಹಸ್ತಿನಾಪುರದ ಪೌರವರ್ಗವು ಅತೀವ ದುಃಖಿತಗೊಂಡಿತ್ತು.

15021013a ಯಾ ನಾಪಶ್ಯಚ್ಚಂದ್ರಮಾ ನೈವ ಸೂರ್ಯೋ

ರಾಮಾಃ ಕದಾ ಚಿದಪಿ ತಸ್ಮಿನ್ನರೇಂದ್ರೇ|

15021013c ಮಹಾವನಂ ಗಚ್ಚತಿ ಕೌರವೇಂದ್ರೇ

ಶೋಕೇನಾರ್ತಾ ರಾಜಮಾರ್ಗಂ ಪ್ರಪೇದುಃ||

ಯಾವ ರಮಣೀಯರು ಸೂರ್ಯ-ಚಂದ್ರರನ್ನು ನೋಡಲೂ ಕೂಡ ಹೊರಗೆ ಬರುತ್ತಿರಲಿಲ್ಲವೋ ಅಂಥವರೆಲ್ಲರೂ ಕೌರವೇಂದ್ರನು ಮಹಾವನಕ್ಕೆ ಹೊರಡುವಾಗ ಶೋಕಾರ್ತರಾಗಿ ರಾಜಬೀದಿಗೆ ಬಂದರು.”

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಧೃತರಾಷ್ಟ್ರನಿರ್ಯಾಣೇ ಏಕವಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಧೃತರಾಷ್ಟ್ರನಿರ್ಯಾಣ ಎನ್ನುವ ಇಪ್ಪತ್ತೊಂದನೇ ಅಧ್ಯಾಯವು.

Image result for indian motifs

Comments are closed.