ಆರಣ್ಯಕ ಪರ್ವ: ಯಕ್ಷಯುದ್ಧ ಪರ್ವ
೧೬೧
ಅರ್ಜನನು ಇಂದ್ರಲೋಕದಿಂದ ಹಿಂದಿರುಗಿದುದು
ಯುಧಿಷ್ಠಿರಾದಿಗಳು ಗಂಧಮಾದನ ಪರ್ವತದ ಮೇಲೆ ಅರ್ಜುನನ ನಿರೀಕ್ಷೆಯಲ್ಲಿ ಒಂದು ತಿಂಗಳು ಕಳೆದುದು (೧-೧೬). ಇಂದ್ರರಥದಲ್ಲಿ ಅರ್ಜುನನನ್ನು ಕರೆತಂದು ಮಾತಲಿಯು ಹಿಂದಿರುಗಿದುದು (೧೭-೨೫). ಸಂತೋಷದಿಂದ ನಡೆದುದೆಲ್ಲವನ್ನೂ ಹೇಳಿ ಅರ್ಜುನನು ರಾತ್ರಿಯನ್ನು ಕಳೆದುದು (೨೬-೨೯).
03161001a ತಸ್ಮಿನ್ನಗೇಂದ್ರೇ ವಸತಾಂ ತು ತೇಷಾಂ|
ಮಹಾತ್ಮನಾಂ ಸದ್ವ್ರತಮಾಸ್ಥಿತಾನಾಂ|
03161001c ರತಿಃ ಪ್ರಮೋದಶ್ಚ ಬಭೂವ ತೇಷಾಂ|
ಆಕಾಂಕ್ಷತಾಂ ದರ್ಶನಮರ್ಜುನಸ್ಯ||
ವೈಶಂಪಾಯನನು ಹೇಳಿದನು: “ಅರ್ಜುನನನ್ನು ನೋಡುವ ಆಕ್ಷಾಂಕ್ಷೆಯಿಂದ ಆ ಮಹಾತ್ಮ ಸದ್ವ್ರತ ನಿರತರೆಲ್ಲರೂ ಸುಖ ಸಂತೋಷದಿಂದ ಆ ಪರ್ವತದ ಮೇಲೆ ವಾಸಿಸಿದರು.
03161002a ತಾನ್ವೀರ್ಯಯುಕ್ತಾನ್ಸುವಿಶುದ್ಧಸತ್ತ್ವಾಂಸ್|
ತೇಜಸ್ವಿನಃ ಸತ್ಯಧೃತಿಪ್ರಧಾನಾನ್|
03161002c ಸಂಪ್ರೀಯಮಾಣಾ ಬಹವೋಽಭಿಜಗ್ಮುರ್|
ಗಂಧರ್ವಸಂಘಾಶ್ಚ ಮಹರ್ಷಯಶ್ಚ||
ಆ ವೀರ್ಯಯುಕ್ತರನ್ನು ಸುವಿಶುದ್ಧ ಸತ್ವವುಳ್ಳ ತೇಜಸ್ವಿ ಸತ್ಯಧೃತಿಯುಕ್ತರನ್ನು ಬಹಳಷ್ಟು ಗಂದರ್ವ ಮತ್ತು ಮಹರ್ಷಿಗಣಗಳು ಕಾಣಲು ಬಂದರು.
03161003a ತಂ ಪಾದಪೈಃ ಪುಷ್ಪಧರೈರುಪೇತಂ|
ನಗೋತ್ತಮಂ ಪ್ರಾಪ್ಯ ಮಹಾರಥಾನಾಂ|
03161003c ಮನಃಪ್ರಸಾದಃ ಪರಮೋ ಬಭೂವ|
ಯಥಾ ದಿವಂ ಪ್ರಾಪ್ಯ ಮರುದ್ಗಣಾನಾಂ||
ಸ್ವರ್ಗವನ್ನು ಸೇರಿದ ಮರುತ್ಗಣಗಳಂತೆ ಆ ಮಹಾರಥಿಗಳು ಹೂಬಿಡುವ ಮರಗಳಿಂದ ಶೋಭಿತವಾದ ಆ ಉತ್ತಮ ಪರ್ವತವನ್ನು ಸೇರಿ ಪರಮ ಪ್ರಶಾಂತ ಮನಸ್ಸನ್ನು ಹೊಂದಿದರು.
03161004a ಮಯೂರಹಂಸಸ್ವನನಾದಿತಾನಿ|
ಪುಷ್ಪೋಪಕೀರ್ಣಾನಿ ಮಹಾಚಲಸ್ಯ|
03161004c ಶೃಂಗಾಣಿ ಸಾನೂನಿ ಚ ಪಶ್ಯಮಾನಾ|
ಗಿರೇಃ ಪರಂ ಹರ್ಷಮವಾಪ್ಯ ತಸ್ಥುಃ||
ನವಿಲು ಮತ್ತು ಹಂಸಗಳ ಧ್ವನಿಗಳಿಂದ ತುಂಬಿದ್ದ, ಕುಸುಮಗಳು ಹಾಸಿಗೆಯಂತೆ ಹರಡಿದ್ದ ಆ ಮಹಾಗಿರಿಯ ಶಿಖರಗಳನ್ನೂ ಕಣಿವೆಗಳನ್ನೂ ನೋಡಿ ಅವರು ಪರಮ ಹರ್ಷಿತರಾದರು.
03161005a ಸಾಕ್ಷಾತ್ಕುಬೇರೇಣ ಕೃತಾಶ್ಚ ತಸ್ಮಿನ್|
ನಗೋತ್ತಮೇ ಸಂವೃತಕೂಲರೋಧಸಃ|
03161005c ಕಾದಂಬಕಾರಂಡವಹಂಸಜುಷ್ಟಾಃ|
ಪದ್ಮಾಕುಲಾಃ ಪುಷ್ಕರಿಣೀರಪಶ್ಯನ್||
ಸಾಕ್ಷಾತ್ ಕುಬೇರನ ಆತಿಥ್ಯವನ್ನು ಪಡೆದ ಅವರು ಆ ಉತ್ತಮ ಪರ್ವತದಮೇಲೆ ಪರ್ವತದಿಂದ ಹರಿಯುವ ನದಿಗಳನ್ನೂ ಅವಕ್ಕೆ ದಡವಾಗಿ ನಿಂತಿದ್ದ ವನಗಳನ್ನೂ, ಕಾಡಂಬ, ಕಾರಂಡ ಮತ್ತು ಹಂಸಗಳು ಆಡುತ್ತಿರುವ ತಾವರೆಯ ಹೂಗುಚ್ಛಗಳಿಂದ ಕೂಡಿದ ತಾವರೆಯ ಕೊಳಗಳನ್ನೂ ನೋಡಿದರು.
03161006a ಕ್ರೀಡಾಪ್ರದೇಶಾಂಶ್ಚ ಸಮೃದ್ಧರೂಪಾನ್|
ಸುಚಿತ್ರಮಾಲ್ಯಾವೃತಜಾತಶೋಭಾನ್|
03161006c ಮಣಿಪ್ರವೇಕಾನ್ಸುಮನೋಹರಾಂಶ್ಚ|
ಯಥಾ ಭವೇಯುರ್ಧನದಸ್ಯ ರಾಜ್ಞಃ||
ಕ್ರೀಡಾಪ್ರದೇಶಗಳನ್ನೂ, ಸಮೃದ್ಧರೂಪದ ಬಣ್ಣಬಣ್ಣದ ಮಾಲೆಗಳಿಂದ ಸುತ್ತುವರೆಯಲ್ಪಟ್ಟು ಶೋಭಿಸುವ, ಸುಮನೋಹರವಾದ ಆರಿಸಿದ ಮಣಿಗಳನ್ನೂ, ರಾಜ ಧನದನ ಬಳಿಯಲ್ಲಿ ಏನಿವೆಯೋ ಅವೆಲ್ಲವನ್ನೂ ನೋಡಿದರು.
03161007a ಅನೇಕವರ್ಣೈಶ್ಚ ಸುಗಂಧಿಭಿಶ್ಚ|
ಮಹಾದ್ರುಮೈಃ ಸಂತತಮಭ್ರಮಾಲಿಭಿಃ|
03161007c ತಪಃಪ್ರಧಾನಾಃ ಸತತಂ ಚರಂತಃ|
ಶೃಂಗಂ ಗಿರೇಶ್ಚಿಂತಯಿತುಂ ನ ಶೇಕುಃ||
ತಪಸ್ಸನ್ನೇ ಪ್ರಧಾನವಾಗಿಟ್ಟುಕೊಂಡಿದ್ದ ಅವರು ಸತತವೂ ತಿರುಗಾಡುತ್ತಿರುವಾಗ ಅನೇಕ ವರ್ಣಗಳು ಮತ್ತು ಸುಗಂಧಗಳಿದ್ದ ಮೋಡಗಳನ್ನು ಮುಟ್ಟುವಂತಿರುವ ಮಹಾವೃಕ್ಷಗಳನ್ನು ನೋಡಿ ಪರ್ವತದ ಶಿಖರವನ್ನೇ ಕಾಣದಂತಾದರು.
03161008a ಸ್ವತೇಜಸಾ ತಸ್ಯ ನಗೋತ್ತಮಸ್ಯ|
ಮಹೌಷಧೀನಾಂ ಚ ತಥಾ ಪ್ರಭಾವಾತ್|
03161008c ವಿಭಕ್ತಭಾವೋ ನ ಬಭೂವ ಕಶ್ಚಿದ್|
ಅಹರ್ನಿಶಾನಾಂ ಪುರುಷಪ್ರವೀರ||
ಪುರುಷಪ್ರವೀರ! ಆ ನಗೋತ್ತಮನ ಸ್ವತೇಜಸ್ಸಿನಿಂದ ಮತ್ತು ಮಹೌಷಧಿಗಳ ಪ್ರಭಾವದಿಂದ ಅಲ್ಲಿ ಹಗಲು ಮತ್ತು ರಾತ್ರಿಗಳನ್ನು ಬೇರಾಗಿಸಲು ಸಾಧ್ಯವಾಗುತ್ತಿರಲಿಲ್ಲ.
03161009a ಯಮಾಸ್ಥಿತಃ ಸ್ಥಾವರಜಂಗಮಾನಿ|
ವಿಭಾವಸುರ್ಭಾವಯತೇಽಮಿತೌಜಾಃ|
03161009c ತಸ್ಯೋದಯಂ ಚಾಸ್ತಮಯಂ ಚ ವೀರಾಸ್|
ತತ್ರ ಸ್ಥಿತಾಸ್ತೇ ದದೃಶುರ್ನೃಸಿಂಹಾಃ||
ಅಮಿತೌಜಸ ವಿಭಾವಸುವು ಅಲ್ಲಿಯೇ ನಿಂತು ಸ್ಥಾವರಜಂಗಮಗಳಿಗೆ ಆಧಾರನಾಗಿದ್ದಾನೆ. ಆ ವೀರರು ಅಲ್ಲಿ ಉಳಿದುಕೊಂಡಿರುವಾಗ ಅವನ ಉದಯ ಮತ್ತು ಅಸ್ತಗಳನ್ನು ನೋಡುತ್ತಿದ್ದರು.
03161010a ರವೇಸ್ತಮಿಸ್ರಾಗಮನಿರ್ಗಮಾಂಸ್ತೇ|
ತಥೋದಯಂ ಚಾಸ್ತಮಯಂ ಚ ವೀರಾಃ|
03161010c ಸಮಾವೃತಾಃ ಪ್ರೇಕ್ಷ್ಯ ತಮೋನುದಸ್ಯ|
ಗಭಸ್ತಿಜಾಲೈಃ ಪ್ರದಿಶೋ ದಿಶಶ್ಚ||
ಆ ವೀರರು ಸೂರ್ಯನ ಉದಯದೊಂದಿಗೆ ರಾತ್ರಿಯು ಹೇಗೆ ಓಡಿಹೋಯಿತು ಮತ್ತು ಅವನು ಮುಳುಗುವ ಜೊತೆ ಪುನಃ ಬಂದಿತು ಎನ್ನುವುದನ್ನು ನೋಡಿದರು. ಮತ್ತು ಅವರು ಅವನ ಕಿರಣಗಳು ಎಲ್ಲ ದಿಕ್ಕುಗಳನ್ನೂ ಜಾಲಗಳಂತೆ ಪಸರಿಸುವುದನ್ನು ನೋಡಿದರು.
03161011a ಸ್ವಾಧ್ಯಾಯವಂತಃ ಸತತಕ್ರಿಯಾಶ್ಚ|
ಧರ್ಮಪ್ರಧಾನಾಶ್ಚ ಶುಚಿವ್ರತಾಶ್ಚ|
03161011c ಸತ್ಯೇ ಸ್ಥಿತಾಸ್ತಸ್ಯ ಮಹಾರಥಸ್ಯ|
ಸತ್ಯವ್ರತಸ್ಯಾಗಮನಪ್ರತೀಕ್ಷಾಃ||
ಆ ಮಹಾರಥರು ಸ್ವಾಧ್ಯಾಯಮಾಡುತ್ತಿದ್ದರು. ನಿತ್ಯಕರ್ಮಗಳನ್ನು ಮಾಡುತ್ತಿದ್ದರು. ಧರ್ಮವನ್ನೇ ಪ್ರಧಾನವನ್ನಾಗಿರಿಸಿಕೊಂಡಿದ್ದರು. ಶುಚಿವ್ರತರಾಗಿದ್ದರು. ಸತ್ಯದಲ್ಲಿ ನೆಲೆಸಿದ್ದರು. ಮತ್ತು ಸತ್ಯವ್ರತನ ಆಗಮನವನ್ನು ಕಾಯುತ್ತಿದ್ದರು.
03161012a ಇಹೈವ ಹರ್ಷೋಽಸ್ತು ಸಮಾಗತಾನಾಂ|
ಕ್ಷಿಪ್ರಂ ಕೃತಾಸ್ತ್ರೇಣ ಧನಂಜಯೇನ|
03161012c ಇತಿ ಬ್ರುವಂತಃ ಪರಮಾಶಿಷಸ್ತೇ|
ಪಾರ್ಥಾಸ್ತಪೋಯೋಗಪರಾ ಬಭೂವುಃ||
“ಇಲ್ಲಿಯೇ ಶೀಘ್ರದಲ್ಲಿ ನಾವು ಅಸ್ತ್ರಗಳನ್ನು ಕಲಿತುಕೊಂಡು ಬರುವ ಧನಂಜಯನನ್ನು ಸೇರುವ ಹರ್ಷವನ್ನು ಪಡೆಯುವವರಿದ್ದೇವೆ!” ಎಂದು ಹೇಳಿಕೊಳ್ಳುತ್ತಾ ಆ ಪಾರ್ಥರು ಪರಮ ಆಶೀರ್ವಾದಗಳಿಂದ ತಪಸ್ಸು ಮತ್ತು ಯೋಗದಲ್ಲಿ ನಿರತರಾದರು.
03161013a ದೃಷ್ಟ್ವಾ ವಿಚಿತ್ರಾಣಿ ಗಿರೌ ವನಾನಿ|
ಕಿರೀಟಿನಂ ಚಿಂತಯತಾಮಭೀಕ್ಷ್ಣಂ|
03161013c ಬಭೂವ ರಾತ್ರಿರ್ದಿವಸಶ್ಚ ತೇಷಾಂ|
ಸಂವತ್ಸರೇಣೈವ ಸಮಾನರೂಪಃ||
ಆ ವಿಚಿತ್ರ ಗಿರಿಗಳನ್ನೂ ವನಗಳನ್ನೂ ನೋಡಿ ಅವರು ಸದಾ ಕಿರೀಟಿಯ ಕುರಿತು ಚಿಂತಿಸಿದರು. ಅವರ ದಿನ-ರಾತ್ರಿಗಳು ಒಂದೊಂದು ವರುಷದ ಸಮಾನವಾಗಿ ತೋರುತ್ತಿದ್ದವು.
03161014a ಯದೈವ ಧೌಮ್ಯಾನುಮತೇ ಮಹಾತ್ಮಾ|
ಕೃತ್ವಾ ಜಟಾಃ ಪ್ರವ್ರಜಿತಃ ಸ ಜಿಷ್ಣುಃ|
03161014c ತದೈವ ತೇಷಾಂ ನ ಬಭೂವ ಹರ್ಷಃ|
ಕುತೋ ರತಿಸ್ತದ್ಗತಮಾನಸಾನಾಂ||
ಮಹಾತ್ಮ ಧೌಮ್ಯನ ಅನುಮತಿಯಂತೆ ಜಟೆಯನ್ನು ಧರಿಸಿ ಜಿಷ್ಣುವು ಎಂದು ಪ್ರವ್ರಾಜಿತನಾದನೋ, ಅವನನ್ನೇ ಅನುಸರಿಸಿದ್ದನೋ, ಅಂದಿನಿಂದ ಅವರು ಸಂತೋಷವನ್ನೇ ಪಡೆದಿರಲಿಲ್ಲ. ಅವನನ್ನು ಅನುಸರಿಸಿ ಹೋದ ಮನಸ್ಸುಳ್ಳವರು ಹೇಗೆ ತಾನೆ ಸಂತೋಷಪಟ್ಟಾರು?
03161015a ಭ್ರಾತುರ್ನಿಯೋಗಾತ್ತು ಯುಧಿಷ್ಠಿರಸ್ಯ|
ವನಾದಸೌ ವಾರಣಮತ್ತಗಾಮೀ|
03161015c ಯತ್ಕಾಮ್ಯಕಾತ್ಪ್ರವ್ರಜಿತಃ ಸ ಜಿಷ್ಣುಸ್|
ತದೈವ ತೇ ಶೋಕಹತಾ ಬಭೂವುಃ||
ಮತ್ತ ಗಜಗಾಮಿ ಜಿಷ್ಣುವು ತನ್ನ ಅಣ್ಣ ಯುಧಿಷ್ಠಿರನ ಆದೇಶದಂತೆ ಕಾಮ್ಯಕವನ್ನು ಬಿಟ್ಟು ಹೋದಾಗಿನಿಂದ ಅವರು ಶೋಕಹತರಾಗಿದ್ದರು.
03161016a ತಥಾ ತು ತಂ ಚಿಂತಯತಾಂ ಸಿತಾಶ್ವಂ|
ಅಸ್ತ್ರಾರ್ಥಿನಂ ವಾಸವಮಭ್ಯುಪೇತಂ|
03161016c ಮಾಸೋಽಥ ಕೃಚ್ಚ್ರೇಣ ತದಾ ವ್ಯತೀತಸ್|
ತಸ್ಮಿನ್ನಗೇ ಭಾರತ ಭಾರತಾನಾಂ||
ಹೀಗೆ ಶ್ವೇತಾಶ್ವಗಳನ್ನು ಓಡಿಸುವ, ವಾಸವನಲ್ಲಿ ಅಸ್ತ್ರಾರ್ಥಿಯಾಗಿ ಹೋಗಿದ್ದ ಭಾರತನ ಕುರಿತು ಚಿಂತಿಸುತ್ತಾ ಆ ಭಾರತರು ಅಲ್ಲಿ ಕಷ್ಟದಿಂದ ಒಂದು ತಿಂಗಳು ಕಳೆದರು.
03161017a ತತಃ ಕದಾ ಚಿದ್ಧರಿಸಂಪ್ರಯುಕ್ತಂ|
ಮಹೇಂದ್ರವಾಹಂ ಸಹಸೋಪಯಾತಂ|
03161017c ವಿದ್ಯುತ್ಪ್ರಭಂ ಪ್ರೇಕ್ಷ್ಯ ಮಹಾರಥಾನಾಂ|
ಹರ್ಷೋಽರ್ಜುನಂ ಚಿಂತಯತಾಂ ಬಭೂವ||
ಆಗ ಒಂದುದಿನ ಆ ಮಹಾರಥಿಗಳು ಒಮ್ಮೆಲೇ ವಿದ್ಯುತ್ತಿನ ಪ್ರಭೆಯನ್ನು ಹೊಂದಿದ ಇಂದ್ರನ ಕುದುರೆಗಳಿಂದ ಎಳೆಯಲ್ಪಟ್ಟ ಯಾನವನ್ನು ನೋಡಿದರು ಮತ್ತು ಅರ್ಜುನನ ಕುರಿತು ಯೋಚಿಸುತ್ತಾ ಹರ್ಷಿತರಾದರು.
03161018a ಸ ದೀಪ್ಯಮಾನಃ ಸಹಸಾಂತರಿಕ್ಷಂ|
ಪ್ರಕಾಶಯನ್ಮಾತಲಿಸಂಗೃಹೀತಃ|
03161018c ಬಭೌ ಮಹೋಲ್ಕೇವ ಘನಾಂತರಸ್ಥಾ|
ಶಿಖೇವ ಚಾಗ್ನೇರ್ಜ್ವಲಿತಾ ವಿಧೂಮಾ||
ಮಾತಲಿಯಿಂದ ನಡೆಸಲ್ಪಟ್ಟ ಚೆನ್ನಾಗಿ ಉರಿಯುತ್ತಿರುವ ಬೆಂಕಿಯ ಹೊಗೆಯಿಲ್ಲದ ಜ್ವಾಲೆಯಂತೆ ಬೆಳಗುತ್ತಿದ್ದ ಆ ರಥವು ಘನ ಆಕಾಶದಲ್ಲಿ ಮಹಾ ಉಲ್ಕೆಯಂತೆ ಅಂತರಿಕ್ಷವನ್ನು ಬೆಳಗಿಸುತ್ತಿತ್ತು.
03161019a ತಮಾಸ್ಥಿತಃ ಸಂದದೃಶೇ ಕಿರೀಟೀ|
ಸ್ರಗ್ವೀ ವರಾಣ್ಯಾಭರಣಾನಿ ಬಿಭ್ರತ್|
03161019c ಧನಂಜಯೋ ವಜ್ರಧರಪ್ರಭಾವಃ|
ಶ್ರಿಯಾ ಜ್ವಲನ್ಪರ್ವತಮಾಜಗಾಮ||
ಅದರಲ್ಲಿ ವಜ್ರಧರನ ಪ್ರಭಾವದಿಂದ ಶ್ರೇಷ್ಠ ಆಭರಣ ಮತ್ತು ಮಾಲೆಗಳಿಂದ ಕಾಂತಿಯುಕ್ತನಾಗಿ, ಕಾಂತಿಯಿಂದ ಬೆಳಗುತ್ತಾ ಕುಳಿತಿದ್ದ ಕಿರೀಟಿ ಧನಂಜಯನು ಕಾಣುತ್ತಿದ್ದಂತೆಯೇ ಪರ್ವತದ ಮೇಲೆ ಬಂದಿಳಿಯಿತು.
03161020a ಸ ಶೈಲಮಾಸಾದ್ಯ ಕಿರೀಟಮಾಲೀ|
ಮಹೇಂದ್ರವಾಹಾದವರುಃಯ ತಸ್ಮಾತ್|
03161020c ಧೌಮ್ಯಸ್ಯ ಪಾದಾವಭಿವಾದ್ಯ ಪೂರ್ವಂ|
ಅಜಾತಶತ್ರೋಸ್ತದನಂತರಂ ಚ||
ಆ ಶೈಲವನ್ನು ತಲುಪಿ ಕಿರೀಟಮಾಲಿಯು ಆ ಮಹೇಂದ್ರನ ರಥದಿಂದ ಕೆಳಗಿಳಿದು ಮೊದಲು ಧೌಮ್ಯನ ಪಾದಗಳಿಗೆ ವಂದಿಸಿ ಅನಂತರ ಅಜಾತಶತ್ರುವಿನ ಪಾದಗಳಿಗೆ ವಂದಿಸಿದನು.
03161021a ವೃಕೋದರಸ್ಯಾಪಿ ವವಂದ ಪಾದೌ|
ಮಾದ್ರೀಸುತಾಭ್ಯಾಮಭಿವಾದಿತಶ್ಚ|
03161021c ಸಮೇತ್ಯ ಕೃಷ್ಣಾಂ ಪರಿಸಾಂತ್ವ್ಯ ಚೈನಾಂ|
ಪ್ರಹ್ವೋಽಭವದ್ಭ್ರಾತುರುಪಹ್ವರೇ ಸಃ||
ಅವನು ವೃಕೋದರನ ಪಾದಗಳಿಗೂ ವಂದಿಸಿದನು ಮತ್ತು ಮಾದ್ರೀಸುತರನ್ನು ಅಭಿವಾದಿಸಿದನು. ಕೃಷ್ಣೆಯನ್ನು ಸೇರಿ ಅವಳನ್ನು ಪರಿಸಂಚಿಸಿದನು ಮತ್ತು ತಲೆಬಾಗಿ ತನ್ನ ಅಣ್ಣನ ಕೆಳಗೆ ನಿಂತುಕೊಂಡನು.
03161022a ಬಭೂವ ತೇಷಾಂ ಪರಮಃ ಪ್ರಹರ್ಷಸ್|
ತೇನಾಪ್ರಮೇಯೇಣ ಸಮಾಗತಾನಾಂ|
03161022c ಸ ಚಾಪಿ ತಾನ್ಪ್ರೇಕ್ಷ್ಯ ಕಿರೀಟಮಾಲೀ|
ನನಂದ ರಾಜಾನಮಭಿಪ್ರಶಂಸನ್||
ಆ ಅಪ್ರಮೇಯನ ಮಿಲನದಿಂದ ಅವರಿಗೆ ಪರಮ ಪ್ರಹರ್ಷವಾಯಿತು. ಆ ಕಿರೀಟಮಾಲಿಯೂ ಕೂಡ ಅವರನ್ನು ಕಂಡು, ರಾಜನನ್ನು ಪ್ರಶಂಸಿಸಿ ಆನಂದಿಸಿದನು.
03161023a ಯಮಾಸ್ಥಿತಃ ಸಪ್ತ ಜಘಾನ ಪೂಗಾನ್|
ದಿತೇಃ ಸುತಾನಾಂ ನಮುಚೇರ್ನಿಹಂತಾ|
03161023c ತಮಿಂದ್ರವಾಹಂ ಸಮುಪೇತ್ಯ ಪಾರ್ಥಾಃ|
ಪ್ರದಕ್ಷಿಣಂ ಚಕ್ರುರದೀನಸತ್ತ್ವಾಃ||
ಯಾವುದರಲ್ಲಿ ಕುಳಿತು ದಿತಿಯ ಮಕ್ಕಳ ಏಳು ಪಂಗಡಗಳನ್ನು ನಮೂಚಿಹಂತಕ ಇಂದ್ರನು ಸಂಹರಿಸಿದ್ದನೋ ಆ ಇಂದ್ರವಾಹನವನ್ನು ಸಮೀಪಿಸಿ ಪ್ರದಕ್ಷಿಣೆ ಮಾಡಿ ಆ ಪಾರ್ಥರ ಹೃದಯಗಳು ಸಂತೋಷ ಭರಿತವಾದವು.
03161024a ತೇ ಮಾತಲೇಶ್ಚಕ್ರುರತೀವ ಹೃಷ್ಟಾಃ|
ಸತ್ಕಾರಮಗ್ರ್ಯಂ ಸುರರಾಜತುಲ್ಯಂ|
03161024c ಸರ್ವಂ ಯಥಾವಚ್ಚ ದಿವೌಕಸಸ್ತಾನ್|
ಪಪ್ರಚ್ಚುರೇನಂ ಕುರುರಾಜಪುತ್ರಾಃ||
ಅತೀವ ಹೃಷ್ಟರಾದ ಅವರು ಮಾತಲಿಗೆ ಸುರರಾಜನಿಗೆ ಸಮನಾದ ಸತ್ಕಾರವನ್ನಿತ್ತರು ಮತ್ತು ಎಲ್ಲ ಕುರುರಾಜಪುತ್ರರೂ ಯಥಾವತ್ತಾಗಿ ದಿವೌಕಸರ ಕುರಿತು ಕೇಳಿದರು.
03161025a ತಾನಪ್ಯಸೌ ಮಾತಲಿರಭ್ಯನಂದತ್|
ಪಿತೇವ ಪುತ್ರಾನನುಶಿಷ್ಯ ಚೈನಾನ್|
03161025c ಯಯೌ ರಥೇನಾಪ್ರತಿಮಪ್ರಭೇಣ|
ಪುನಃ ಸಕಾಶಂ ತ್ರಿದಿವೇಶ್ವರಸ್ಯ||
ಮಾತಲಿಯೂ ಕೂಡ ಪಿತನು ಪುತ್ರರಿಗೆ ಹೇಗೋ ಹಾಗೆ ಅವರನ್ನು ಅಭಿನಂದಿಸಿದನು ಮತ್ತು ಉಪದೇಶಿಸಿದನು. ಅನಂತರ ಅವನು ಆ ಅಪ್ರತಿಮ ರಥದಲ್ಲಿ ಮರಳಿ ತ್ರಿದೇವೇಶ್ವರನ ಬಳಿ ಹೋದನು.
03161026a ಗತೇ ತು ತಸ್ಮಿನ್ವರದೇವವಾಹೇ|
ಶಕ್ರಾತ್ಮಜಃ ಸರ್ವರಿಪುಪ್ರಮಾಥೀ|
03161026c ಶಕ್ರೇಣ ದತ್ತಾನಿ ದದೌ ಮಹಾತ್ಮಾ|
ಮಹಾಧನಾನ್ಯುತ್ತಮರೂಪವಂತಿ||
03161026e ದಿವಾಕರಾಭಾಣಿ ವಿಭೂಷಣಾನಿ|
ಪ್ರೀತಃ ಪ್ರಿಯಾಯೈ ಸುತಸೋಮಮಾತ್ರೇ||
ಆ ವರದೇವನ ಯಾನವು ಹೊರಟುಹೋಗಲು, ಶಕ್ರಾತ್ಮಜ, ಸರ್ವರಿಪುಪ್ರಮಥಿಯು ಮಹಾತ್ಮ ಶಕ್ರನು ನೀಡಿದ್ದ ಮಹಾಧನವನ್ನೂ, ಉತ್ತಮ ರೂಪಗಳನ್ನೂ, ದಿವಾಕರನಂತೆ ಹೊಳೆಯುತ್ತಿರುವ ವಿಭೂಷಣಗಳನ್ನೂ ಪ್ರೀತಿಯಿಂದ ಆ ಸುತಸೋಮನ ತಾಯಿ ದ್ರೌಪದಿಗೆ ಕೊಟ್ಟನು.
03161027a ತತಃ ಸ ತೇಷಾಂ ಕುರುಪುಂಗವಾನಾಂ|
ತೇಷಾಂ ಚ ಸೂರ್ಯಾಗ್ನಿಸಮಪ್ರಭಾಣಾಂ|
03161027c ವಿಪ್ರರ್ಷಭಾಣಾಮುಪವಿಶ್ಯ ಮಧ್ಯೇ|
ಸರ್ವಂ ಯಥಾವತ್ಕಥಯಾಂ ಬಭೂವ||
ಅನಂತರ ಅವನು ಆ ಕುರುಪುಂಗವರ ಮತ್ತು ಸೂರ್ಯಾಗ್ನಿ ಸಮಪ್ರಭೆಯನ್ನು ಹೊಂದಿದ್ದ ವಿಪ್ರರ್ಷಿಭರ ಮಧ್ಯೆ ಕುಳಿದು ಅವರಿಗೆ ನಡೆದುದೆಲ್ಲವನ್ನೂ ಹೇಳಿದನು.
03161028a ಏವಂ ಮಯಾಸ್ತ್ರಾಣ್ಯುಪಶಿಕ್ಷಿತಾನಿ|
ಶಕ್ರಾಚ್ಚ ವಾತಾಚ್ಚ ಶಿವಾಚ್ಚ ಸಾಕ್ಷಾತ್|
03161028c ತಥೈವ ಶೀಲೇನ ಸಮಾಧಿನಾ ಚ|
ಪ್ರೀತಾಃ ಸುರಾ ಮೇ ಸಹಿತಾಃ ಸಹೇಂದ್ರಾಃ||
“ಹೀಗೆ ನಾನು ಶಕ್ರನಿಂದ, ವಾಯುವಿನಿಂದ ಮತ್ತು ಸಾಕ್ಷಾತ್ ಶಿವನಿಂದ ಅಸ್ತ್ರಗಳ ಶಿಕ್ಷಣವನ್ನು ಪಡೆದೆನು. ಇಂದ್ರನೂ ಸೇರಿದ ಆ ದೇವತೆಗಳಾದರೋ ನನ್ನ ಶೀಲ ಮತ್ತು ಸಮಾಧಿಗಳಿಂದ ಪ್ರೀತರಾದರು.”
03161029a ಸಂಕ್ಷೇಪತೋ ವೈ ಸ ವಿಶುದ್ಧಕರ್ಮಾ|
ತೇಭ್ಯಃ ಸಮಾಖ್ಯಾಯ ದಿವಿ ಪ್ರವೇಶಂ|
03161029c ಮಾದ್ರೀಸುತಾಭ್ಯಾಂ ಸಹಿತಃ ಕಿರೀಟೀ|
ಸುಷ್ವಾಪ ತಾಮಾವಸತಿಂ ಪ್ರತೀತಃ||
ಆ ವಿಶುದ್ಧಕರ್ಮ ಕಿರೀಟಿಯು ಸಂಕ್ಷೇಪವಾಗಿ ಅವರಿಗೆ ಸ್ವರ್ಗವನ್ನು ಪ್ರವೇಶಿಸುದದರ ಕುರಿತು ಹೇಳಿ ಆ ರಾತ್ರಿ ಪ್ರತೀತನಾಗಿ ಮಾದ್ರೀಸುತರೊಡನೆ ಮಲಗಿದನು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಯಕ್ಷಯುದ್ಧಪರ್ವಣಿ ನಿವಾತಕವಚಯುದ್ಧೇ ಅರ್ಜುನಸಮಾಗಮೇ ಏಕಷಷ್ಟ್ಯಧಿಕಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಯಕ್ಷಯುದ್ಧಪರ್ವದಲ್ಲಿ ನಿವಾತಕವಚಯುದ್ಧದಲ್ಲಿ ಅರ್ಜುನಸಮಾಗಮದಲ್ಲಿ ನೂರಾಅರವತ್ತೊಂದನೆಯ ಅಧ್ಯಾಯವು.
[1]ಗೋರಖಪುರ ಸಂಪುಟದಲ್ಲಿ ಈ ಅಧ್ಯಾಯವನ್ನು ಯಕ್ಷಯುದ್ಧ ಪರ್ವದ ಕೊನೆಯ ಅಧ್ಯಾಯವನ್ನಾಗಿ ಕೊಟ್ಟಿದ್ದಾರೆ.