Anushasana Parva: Chapter 64

ಅನುಶಾಸನ ಪರ್ವ: ದಾನಧರ್ಮ ಪರ್ವ

೬೪

ಕಾಂಚನಾದಿ ದಾನಗಳು

ಸುವರ್ಣ, ಜಲ ಮೊದಲಾದವುಗಳ ದಾನಗಳ ಮಹಿಮೆಗಳು (೧-೧೯).

13064001 ಭೀಷ್ಮ ಉವಾಚ|

13064001a ಸರ್ವಾನ್ಕಾಮಾನ್ಪ್ರಯಚ್ಚಂತಿ ಯೇ ಪ್ರಯಚ್ಚಂತಿ ಕಾಂಚನಮ್|

13064001c ಇತ್ಯೇವಂ ಭಗವಾನತ್ರಿಃ ಪಿತಾಮಹಸುತೋಽಬ್ರವೀತ್||

ಭೀಷ್ಮನು ಹೇಳಿದನು: ““ಕಾಂಚನವನ್ನು ದಾನಮಾಡಿದವನು ಯಾಚಕನ ಸರ್ವಕಾಮನೆಗಳನ್ನೂ ಪೌರೈಸಿದಂತೆ” ಎಂದು ಪಿತಾಮಹ ಬ್ರಹ್ಮನ ಪುತ್ರ ಭಗವಾನ್ ಅತ್ರಿಯು ಹೇಳಿದ್ದಾನೆ.

13064002a ಪವಿತ್ರಂ ಶುಚ್ಯಥಾಯುಷ್ಯಂ ಪಿತೄಣಾಮಕ್ಷಯಂ ಚ ತತ್|

13064002c ಸುವರ್ಣಂ ಮನುಜೇಂದ್ರೇಣ ಹರಿಶ್ಚಂದ್ರೇಣ ಕೀರ್ತಿತಮ್||

“ಸುವರ್ಣವು ಪರಮ ಪವಿತ್ರ. ಆಯುಷ್ಯವನ್ನು ವರ್ಧಿಸುತ್ತದೆ ಮತ್ತು ಪಿತೃಗಳಿಗೆ ಅಕ್ಷಯ ಗತಿಯನ್ನು ಒದಗಿಸುತ್ತದೆ” ಎಂದು ಮನುಜೇಂದ್ರ ಹರಿಶ್ಚಂದ್ರನು ಹೇಳಿದ್ದಾನೆ.

13064003a ಪಾನೀಯದಾನಂ ಪರಮಂ ದಾನಾನಾಂ ಮನುರಬ್ರವೀತ್|

13064003c ತಸ್ಮಾದ್ವಾಪೀಶ್ಚ ಕೂಪಾಂಶ್ಚ ತಡಾಗಾನಿ ಚ ಖಾನಯೇತ್||

“ಪಾನೀಯದಾನವು ದಾನಗಳಲ್ಲಿ ಪರಮ ಶ್ರೇಷ್ಠವಾದುದು” ಎಂದು ಮನುವು ಹೇಳಿದ್ದಾನೆ. ಆದುದರಿಂದ ಕೆರೆ, ಬಾವಿ ಮತ್ತು ಹೊಂಡಗಳನ್ನು ಅಗೆಯಬೇಕು.

13064004a ಅರ್ಧಂ ಪಾಪಸ್ಯ ಹರತಿ ಪುರುಷಸ್ಯೇಹ ಕರ್ಮಣಃ|

13064004c ಕೂಪಃ ಪ್ರವೃತ್ತಪಾನೀಯಃ ಸುಪ್ರವೃತ್ತಶ್ಚ ನಿತ್ಯಶಃ||

ಉತ್ತಮ ನೀರಿರುವ ಮತ್ತು ಬಹುಜನರಿಗೆ ನಿತ್ಯವೂ ಉಪಯುಕ್ತವಾಗುವ ಬಾವಿಯನ್ನು ತೋಡುವ ಮನುಷ್ಯನ ಪಾಪಗಳಲ್ಲಿ ಅರ್ಧವನ್ನು ಅದು ಕಳೆಯುತ್ತದೆ.

13064005a ಸರ್ವಂ ತಾರಯತೇ ವಂಶಂ ಯಸ್ಯ ಖಾತೇ ಜಲಾಶಯೇ|

13064005c ಗಾವಃ ಪಿಬಂತಿ ವಿಪ್ರಾಶ್ಚ ಸಾಧವಶ್ಚ ನರಾಃ ಸದಾ||

ಯಾರು ತೋಡಿದ ಜಲಾಶಯದ ನೀರನ್ನು ಸದಾ ಗೋವುಗಳು, ವಿಪ್ರರು ಮತ್ತು ಸಾಧುಪುರುಷರು ಕುಡಿಯುತ್ತಾರೋ ಅವನ ವಂಶವು ಉದ್ಧಾರವಾಗುತ್ತದೆ.

13064006a ನಿದಾಘಕಾಲೇ ಪಾನೀಯಂ ಯಸ್ಯ ತಿಷ್ಠತ್ಯವಾರಿತಮ್|

13064006c ಸ ದುರ್ಗಂ ವಿಷಮಂ ಕೃಚ್ಚ್ರಂ ನ ಕದಾ ಚಿದವಾಪ್ನುತೇ||

ಬೇಸಗೆ ಕಾಲದಲ್ಲಿಯೂ ನೀರು ಬತ್ತದಂಥಹ ಕೆರೆಯನ್ನು ತೋಡಿದವನು ಎಂದೂ ಅತ್ಯಂತ ಸಂಕಟ-ಕಷ್ಟಗಳಲ್ಲಿ ಬೀಳುವುದಿಲ್ಲ.

13064007a ಬೃಹಸ್ಪತೇರ್ಭಗವತಃ ಪೂಷ್ಣಶ್ಚೈವ ಭಗಸ್ಯ ಚ|

13064007c ಅಶ್ವಿನೋಶ್ಚೈವ ವಹ್ನೇಶ್ಚ ಪ್ರೀತಿರ್ಭವತಿ ಸರ್ಪಿಷಾ||

ತುಪ್ಪವನ್ನು ದಾನಮಾಡುವುದರಿಂದ ಭಗವಾನ್ ಬೃಹಸ್ಪತಿ, ಪೂಷಾ, ಭಗ, ಅಶ್ವಿನೀ ದೇವತೆಗಳು ಮತ್ತು ಅಗ್ನಿದೇವರು ಪ್ರಸನ್ನರಾಗುತ್ತಾರೆ.

13064008a ಪರಮಂ ಭೇಷಜಂ ಹ್ಯೇತದ್ಯಜ್ಞಾನಾಮೇತದುತ್ತಮಮ್|

13064008c ರಸಾನಾಮುತ್ತಮಂ ಚೈತತ್ಫಲಾನಾಂ ಚೈತದುತ್ತಮಮ್||

ತುಪ್ಪವು ಪರಮ ಔಷಧಿ ಮತ್ತು ಯಜ್ಞದಲ್ಲಿ ಉಪಯೋಗಿಸುವ ಸರ್ವಶ್ರೇಷ್ಠ ವಸ್ತುವು. ಇದು ರಸಗಳಲ್ಲಿ ಉತ್ತಮ ರಸವು ಮತ್ತು ಫಲಗಳಲ್ಲಿ ಉತ್ತಮ ಫಲವು.

13064009a ಫಲಕಾಮೋ ಯಶಸ್ಕಾಮಃ ಪುಷ್ಟಿಕಾಮಶ್ಚ ನಿತ್ಯದಾ|

13064009c ಘೃತಂ ದದ್ಯಾದ್ದ್ವಿಜಾತಿಭ್ಯಃ ಪುರುಷಃ ಶುಚಿರಾತ್ಮವಾನ್||

ಫಲವನ್ನು ಬಯಸುವ, ಯಶಸ್ಸನ್ನು ಬಯಸುವ ಮತ್ತು ಸಮೃದ್ಧಿಯನ್ನು ಬಯಸುವ ಪುರುಷನು ನಿತ್ಯವೂ ಆತ್ಮಶುದ್ಧನಾಗಿ ಬ್ರಾಹ್ಮಣರಿಗೆ ತುಪ್ಪವನ್ನು ದಾನಮಾಡಬೇಕು.

13064010a ಘೃತಂ ಮಾಸೇ ಆಶ್ವಯುಜಿ ವಿಪ್ರೇಭ್ಯೋ ಯಃ ಪ್ರಯಚ್ಚತಿ|

13064010c ತಸ್ಮೈ ಪ್ರಯಚ್ಚತೋ ರೂಪಂ ಪ್ರೀತೌ ದೇವಾವಿಹಾಶ್ವಿನೌ||

ಆಶ್ವಯುಜ ಮಾಸದಲ್ಲಿ ತುಪ್ಪವನ್ನು ಬ್ರಾಹ್ಮಣರಿಗೆ ಯಾರು ದಾನಮಾಡುತ್ತಾನೋ ಅವನಿಗೆ ಅಶ್ವಿನೀ ದೇವತೆಗಳು ಪ್ರೀತರಾಗಿ ಸುಂದರ ರೂಪವನ್ನು ನೀಡುತ್ತಾರೆ.

13064011a ಪಾಯಸಂ ಸರ್ಪಿಷಾ ಮಿಶ್ರಂ ದ್ವಿಜೇಭ್ಯೋ ಯಃ ಪ್ರಯಚ್ಚತಿ|

13064011c ಗೃಹಂ ತಸ್ಯ ನ ರಕ್ಷಾಂಸಿ ಧರ್ಷಯಂತಿ ಕದಾ ಚನ||

ತುಪ್ಪವನ್ನು ಸೇರಿಸಿ ಪಾಯಸವನ್ನು ಬ್ರಾಹ್ಮಣರಿಗೆ ದಾನಮಾಡುವವನ ಗೃಹವನ್ನು ರಾಕ್ಷಸರು ಎಂದೂ ಕಾಡುವುದಿಲ್ಲ.

13064012a ಪಿಪಾಸಯಾ ನ ಮ್ರಿಯತೇ ಸೋಪಚ್ಚಂದಶ್ಚ ದೃಶ್ಯತೇ|

13064012c ನ ಪ್ರಾಪ್ನುಯಾಚ್ಚ ವ್ಯಸನಂ ಕರಕಾನ್ಯಃ ಪ್ರಯಚ್ಚತಿ||

ನೀರಿನಿಂದ ತುಂಬಿದ ಕಮಂಡಲುವನ್ನು ದಾನಮಾದುವವನು ಎಂದೂ ಬಾಯಾರಿಕೆಯಿಂದ ಸಾಯುವುದಿಲ್ಲ. ಅವನ ಬಳಿ ಎಲ್ಲ ಪ್ರಕಾರದ ಆವಶ್ಯಕ ಸಾಮಾಗ್ರಿಗಳೂ ಒದಗಿಬರುತ್ತವೆ ಮತ್ತು ಅವನು ಎಂದೂ ವ್ಯಸನವನ್ನು ಹೊಂದುವುದಿಲ್ಲ.

13064013a ಪ್ರಯತೋ ಬ್ರಾಹ್ಮಣಾಗ್ರೇಭ್ಯಃ ಶ್ರದ್ಧಯಾ ಪರಯಾ ಯುತಃ|

13064013c ಉಪಸ್ಪರ್ಶನಷಡ್ಭಾಗಂ ಲಭತೇ ಪುರುಷಃ ಸದಾ||

ಪ್ರಯತನಾಗಿ ಬ್ರಾಹ್ಮಣರ ಮುಂದೆ ನಿಂತು ಪರಮ ಶ್ರದ್ಧೆಯಿಂದ ಸೇವೆಗೈಯುವ ಪುರುಷನು ಸದಾ ದಾನದ ಆರನೆಯ ಒಂದು ಭಾಗವನ್ನು ಪಡೆದುಕೊಳ್ಳುತ್ತಾನೆ.

13064014a ಯಃ ಸಾಧನಾರ್ಥಂ ಕಾಷ್ಠಾನಿ ಬ್ರಾಹ್ಮಣೇಭ್ಯಃ ಪ್ರಯಚ್ಚತಿ|

13064014c ಪ್ರತಾಪಾರ್ಥಂ ಚ ರಾಜೇಂದ್ರ ವೃತ್ತವದ್ಭ್ಯಃ ಸದಾ ನರಃ||

13064015a ಸಿಧ್ಯಂತ್ಯರ್ಥಾಃ ಸದಾ ತಸ್ಯ ಕಾರ್ಯಾಣಿ ವಿವಿಧಾನಿ ಚ|

13064015c ಉಪರ್ಯುಪರಿ ಶತ್ರೂಣಾಂ ವಪುಷಾ ದೀಪ್ಯತೇ ಚ ಸಃ||

ರಾಜೇಂದ್ರ! ಸದಾಚಾರ ಸಂಪನ್ನ ಬ್ರಾಹ್ಮಣನಿಗೆ ಅಡುಗೆ ಮಾಡಿಕೊಳ್ಳಲು ಮತ್ತು ಬೆಚ್ಚಗಾಗಿಸಿಕೊಳ್ಳಲು ಕಟ್ಟಿಗೆಯನ್ನು ಕೊಡುವ ಮನುಷ್ಯನ ಸರ್ವ ಕಾಮನೆಗಳು ಮತ್ತು ವಿವಿಧ ಕಾರ್ಯಗಳು ಸಿದ್ಧಿಯಾಗುತ್ತವೆ. ಅವನ ಶತ್ರುಗಳ ಮೇಲೆಯೇ ಇದ್ದುಕೊಂಡು ತೇಜಸ್ಸಿನಿಂದ ಬೆಳಗುತ್ತಾನೆ.

13064016a ಭಗವಾಂಶ್ಚಾಸ್ಯ ಸುಪ್ರೀತೋ ವಹ್ನಿರ್ಭವತಿ ನಿತ್ಯಶಃ|

13064016c ನ ತಂ ತ್ಯಜಂತೇ ಪಶವಃ ಸಂಗ್ರಾಮೇ ಚ ಜಯತ್ಯಪಿ||

ಅವನ ಮೇಲೆ ಭಗವಾನ್ ಅಗ್ನಿಯು ನಿತ್ಯವು ಸುಪ್ರೀತನಾಗಿರುತ್ತಾನೆ. ಅವನ ಪಶುಗಳಿಗೆ ಹಾನಿಯುಂಟಾಗುವುದಿಲ್ಲ ಮತ್ತು ಅವನು ಸಂಗ್ರಾಮದಲ್ಲಿ ಜಯವನ್ನೇ ಹೊಂದುತ್ತಾನೆ.

13064017a ಪುತ್ರಾನ್ ಶ್ರಿಯಂ ಚ ಲಭತೇ ಯಶ್ಚತ್ರಂ ಸಂಪ್ರಯಚ್ಚತಿ|

13064017c ಚಕ್ಷುರ್ವ್ಯಾಧಿಂ ನ ಲಭತೇ ಯಜ್ಞಭಾಗಮಥಾಶ್ನುತೇ||

ಚತ್ರವನ್ನು ದಾನಮಾಡುವವನಿಗೆ ಪುತ್ರರೂ ಲಕ್ಷ್ಮಿಯೂ ಪ್ರಾಪ್ತವಾಗುತ್ತವೆ. ಅವನ ಕಣ್ಣುಗಳಿಗೆ ಯಾವ ರೋಗವೂ ಬರುವುದಿಲ್ಲ ಮತ್ತು ಅವನಿಗೆ ಯಜ್ಞಭಾಗವು ದೊರೆಯುತ್ತದೆ.

13064018a ನಿದಾಘಕಾಲೇ ವರ್ಷೇ ವಾ ಯಶ್ಚತ್ರಂ ಸಂಪ್ರಯಚ್ಚತಿ|

13064018c ನಾಸ್ಯ ಕಶ್ಚಿನ್ಮನೋದಾಹಃ ಕದಾ ಚಿದಪಿ ಜಾಯತೇ|

13064018e ಕೃಚ್ಚ್ರಾತ್ಸ ವಿಷಮಾಚ್ಚೈವ ವಿಪ್ರ[1] ಮೋಕ್ಷಮವಾಪ್ನುತೇ||

ಬೇಸಗೆಯಲ್ಲಿ ಮತ್ತು ಮಳೆಗಾಲದಲ್ಲಿ ಚತ್ರವನ್ನು ದಾನಮಾಡುವವನ ಮನಸ್ಸಿಗೆ ಎಂದೂ ಸಂತಾಪವುಂಟಾಗುವುದಿಲ್ಲ. ಅವನು ಅತ್ಯಂತ ದೊಡ್ಡ ಕಷ್ಟಗಳಲ್ಲಿಯೂ ಬೇಗನೇ ಪಾರಾಗುತ್ತಾನೆ.

13064019a ಪ್ರದಾನಂ ಸರ್ವದಾನಾನಾಂ ಶಕಟಸ್ಯ ವಿಶಿಷ್ಯತೇ|

13064019c ಏವಮಾಹ ಮಹಾಭಾಗಃ ಶಾಂಡಿಲ್ಯೋ ಭಗವಾನೃಷಿಃ||

“ಸರ್ವದಾನಗಳಲ್ಲಿ ಬಂಡಿಯ ದಾನವು ಹೆಚ್ಚಿನದು” ಎಂದು ಮಹಾಭಾಗ ಭಗವಾನ್ ಶಾಂಡಿಲ್ಯ ಋಷಿಯು ಹೇಳಿದ್ದಾನೆ.”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಚತುಃಷಷ್ಟಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಅರವತ್ನಾಲ್ಕನೇ ಅಧ್ಯಾಯವು.

Image result for flowers against white background

[1] ಕ್ಷಿಪ್ರಂ ಎಂಬ ಪಾಠಾಂತರವಿದೆ.

Comments are closed.