Shanti Parva: Chapter 147

ಶಾಂತಿ ಪರ್ವ: ಆಪದ್ಧರ್ಮ ಪರ್ವ

೧೪೭

ಬ್ರಹ್ಮಹತ್ಯೆಯ ಅಪರಾಧೀ ಜನಮೇಜಯನಿಗೆ ಇಂದ್ರೋತ ಮುನಿಯು ಆಶ್ರಯವನ್ನಿತ್ತಿದುದು (1-22).

12147001 ಭೀಷ್ಮ ಉವಾಚ|

12147001a ಏವಮುಕ್ತಃ ಪ್ರತ್ಯುವಾಚ ತಂ ಮುನಿಂ ಜನಮೇಜಯಃ|

12147001c ಗರ್ಹ್ಯಂ ಭವಾನ್ಗರ್ಹಯತಿ ನಿಂದ್ಯಂ ನಿಂದತಿ ಮಾ ಭವಾನ್||

12147002a ಧಿಕ್ಕಾರ್ಯಂ ಮಾ[1] ಧಿಕ್ಕುರುತೇ ತಸ್ಮಾತ್ತ್ವಾಹಂ ಪ್ರಸಾದಯೇ|

ಭೀಷ್ಮನು ಹೇಳಿದನು: “ಹೀಗೆ ಹೇಳಲು ಜನಮೇಜಯನು ಮುನಿಗೆ ಉತ್ತರಿಸಿದನು: “ತಿರಸ್ಕೃತನನ್ನು ನೀನು ತಿರಸ್ಕರಿಸುತ್ತಿದ್ದೀಯೆ. ನಿಂದನೀಯನನ್ನು ನೀನು ನಿಂದಿಸುತ್ತಿದ್ದೀಯೆ. ಧಿಕ್ಕರಿಸಬೇಡ. ನನ್ನನ್ನು ಧಿಕ್ಕರಿಸುತ್ತಿರುವ ನಿನ್ನನ್ನು ನಾನು ಪ್ರಸನ್ನಗೊಳಿಸ ಬಯಸುತ್ತೇನೆ. 

12147002c ಸರ್ವಂ ಹೀದಂ ಸ್ವಕೃತಂ[2] ಮೇ ಜ್ವಲಾಮ್ಯಗ್ನಾವಿವಾಹಿತಃ||

12147003a ಸ್ವಕರ್ಮಾಣ್ಯಭಿಸಂಧಾಯ ನಾಭಿನಂದತಿ ಮೇ ಮನಃ|

ಇವೆಲ್ಲವೂ ನಾನೇ ಮಾಡಿಕೊಂಡಿದ್ದಾಗಿದೆ. ಇದರಿಂದಾಗಿಯೇ ನನ್ನೊಳಗೆ ಅಗ್ನಿಯನ್ನು ಇಟ್ಟಿದ್ದಾರೋ ಎನ್ನುವಂತೆ ನಾನು ಸುಡುತ್ತಿದ್ದೇನೆ. ನನ್ನದೇ ಕೃತ್ಯಗಳನ್ನು ನೆನಪಿಸಿಕೊಂಡು ನನ್ನ ಮನವು ಪ್ರಸನ್ನವಾಗುತ್ತಿಲ್ಲ.

12147003c ಪ್ರಾಪ್ತಂ ನೂನಂ ಮಯಾ ಘೋರಂ ಭಯಂ ವೈವಸ್ವತಾದಪಿ||

12147004a ತತ್ತು ಶಲ್ಯಮನಿರ್ಹೃತ್ಯ ಕಥಂ ಶಕ್ಷ್ಯಾಮಿ ಜೀವಿತುಮ್|

12147004c ಸರ್ವಮನ್ಯೂನ್ವಿನೀಯ ತ್ವಮಭಿ ಮಾ ವದ ಶೌನಕ||

ನಿಜವಾಗಿಯೂ ನನಗೆ ವೈವಸ್ವತ ಯಮನಿಂದಲೂ ಘೋರ ಭಯವು ಪ್ರಾಪ್ತವಾಗಲಿಕ್ಕಿದೆ. ಈ ಮುಳ್ಳನ್ನು ನನ್ನ ಹೃದಯದಿಂದ ಕಿತ್ತೊಗೆಯದೇ ನಾನು ಹೇಗೆ ತಾನೇ ಜೀವಿಸಿರಬಲ್ಲೆನು? ಶೌನಕ! ಸರ್ವಕ್ರೋಧಗಳನ್ನೂ ತ್ಯಜಿಸಿ ನನ್ನ ಉದ್ಧಾರದ ಯಾವುದಾದರೂ ಉಪಾಯವನ್ನು ಹೇಳು.

12147005a ಮಹಾನಸಂ ಬ್ರಾಹ್ಮಣಾನಾಂ ಭವಿಷ್ಯಾಮ್ಯರ್ಥವಾನ್ಪುನಃ[3]|

12147005c ಅಸ್ತು ಶೇಷಂ ಕುಲಸ್ಯಾಸ್ಯ ಮಾ ಪರಾಭೂದಿದಂ ಕುಲಮ್||

ಭವಿಷ್ಯದಲ್ಲಿ ಪುನಃ ನಾನು ಉದ್ದೇಶಪೂರ್ವಕವಾಗಿ ಬ್ರಾಹ್ಮಣರ ಮಹಾನ್ ಭಕ್ತನಾಗುತ್ತೇನೆ. ನನ್ನ ಈ ಕುಲವು ಸ್ವಲ್ಪವಾದರೂ ಉಳಿದುಕೊಳ್ಳಲಿ. ಈ ಕುಲವು ಸಂಪೂರ್ಣವಾಗಿ ನಾಶವಾಗದಿರಲಿ.

12147006a ನ ಹಿ ನೋ ಬ್ರಹ್ಮಶಪ್ತಾನಾಂ ಶೇಷೋ ಭವಿತುಮರ್ಹತಿ|

12147006c ಶ್ರುತೀರಲಭಮಾನಾನಾಂ ಸಂವಿದಂ ವೇದನಿಶ್ಚಯಾತ್||

12147007a ನಿರ್ವಿದ್ಯಮಾನಃ ಸುಭೃಶಂ ಭೂಯೋ ವಕ್ಷ್ಯಾಮಿ ಸಾಂಪ್ರತಮ್|

12147007c ಭೂಯಶ್ಚೈವಾಭಿನಂಕ್ಷಂತಿ ನಿರ್ಧರ್ಮಾ ನಿರ್ಜಪಾ ಇವ||

ಬ್ರಾಹ್ಮಣರ ಶಾಪದಿಂದ ನಮ್ಮ ಕುಲವು ಸ್ವಲ್ಪವೂ ಉಳಿಯುವುದಿಲ್ಲ. ನನ್ನ ಈ ಪಾಪದ ಕಾರಣದಿಂದ ಸಮಾಜದಲ್ಲಿ ನನಗೆ ಪ್ರಶಂಸೆಯೂ ದೊರೆಯುತ್ತಿಲ್ಲ ಮತ್ತು ಸಜಾತೀಯ ಬಂಧುಗಳೊಂದಿಗೆ ಬೆರೆಯುವಂತೆಯೂ ಇಲ್ಲ. ಆದುದರಿಂದ ಅತ್ಯಂತ ಖೇದ ಮತ್ತು ವಿರಕ್ತಿಯನ್ನು ಹೊಂದಿ ವೇದಗಳ ನಿಶ್ಚಯಾತ್ಮಕ ಜ್ಞಾನವಿರುವ ನಿನ್ನಂಥಹ ಬ್ರಾಹ್ಮಣರಿಗೆ ಪುನಃ ಹೇಳುತ್ತೇನೆ: ನಿರ್ಜನ ಸ್ಥಾನದಲ್ಲಿರುವ ಯೋಗಿಗಳು ಪಾಪಿಪುರುಷರನ್ನು ಹೇಗೆ ರಕ್ಷಿಸುವರೋ ಹಾಗೆ ನೀವೂ ಕೂಡ ನಿಮ್ಮ ದಯೆಯಿಂದ ನನ್ನಂತಹ ದುಃಖೀ ಮನುಷ್ಯನ ರಕ್ಷಣೆಯನ್ನು ಮಾಡಬೇಕು.

12147008a ಅರ್ವಾಕ್ಚ ಪ್ರತಿತಿಷ್ಠಂತಿ ಪುಲಿಂದಶಬರಾ ಇವ|

12147008c ನ ಹ್ಯಯಜ್ಞಾ ಅಮುಂ ಲೋಕಂ ಪ್ರಾಪ್ನುವಂತಿ ಕಥಂ ಚನ||

ತಮ್ಮ ಪಾಪದ ಕಾರಣದಿಂದ ಯಜ್ಞದ ಅಧಿಕಾರದಿಂದ ವಂಚಿತರಾದವರು ಪುಲಿಂದರು ಮತ್ತು ಶಬರರಂತೆ ನರಕದಲ್ಲಿಯೇ ಬಿದ್ದಿರುತ್ತಾರೆ. ಅವರು ಪರಲೋಕದಲ್ಲಿ ಯಾವುದೇ ಉತ್ತಮ ಗತಿಯನ್ನು ಪಡೆಯುವುದಿಲ್ಲ.

12147009a ಅವಿಜ್ಞಾಯೈವ ಮೇ ಪ್ರಜ್ಞಾಂ ಬಾಲಸ್ಯೇವ ಸುಪಂಡಿತಃ|

12147009c ಬ್ರಹ್ಮನ್ ಪಿತೇವ ಪುತ್ರೇಭ್ಯಃ ಪ್ರತಿ ಮಾಂ ವಾಂಚ ಶೌನಕ||

ಬ್ರಹ್ಮನ್! ಶೌನಕ! ನೀನು ಪ್ರಾಜ್ಞ ಮತ್ತು ನಾನು ಮೂರ್ಖ. ನೀನು ನನ್ನ ಬಾಲಬುದ್ಧಿಯನ್ನು ತಿಳಿದುಕೊಂಡು ತಂದೆಯು ಪುತ್ರನ ಮೇಲೆ ಸ್ವಭಾವತಃ ಸಂತುಷ್ಟನಾಗುವಂತೆ ನನ್ನ ಮೇಲೂ ಪ್ರಸನ್ನನಾಗು.”

12147010 ಶೌನಕ ಉವಾಚ |

12147010a ಕಿಮಾಶ್ಚರ್ಯಂ ಯತಃ ಪ್ರಾಜ್ಞೋ ಬಹು ಕುರ್ಯಾದ್ಧಿ ಸಾಂಪ್ರತಮ್[4]|

12147010c ಇತಿ ವೈ ಪಂಡಿತೋ ಭೂತ್ವಾ ಭೂತಾನಾಂ ನೋಪತಪ್ಯತಿ[5]||

ಶೌನಕನು ಹೇಳಿದನು: “ಅತ್ಯಂತ ಪ್ರಾಜ್ಞನಾದವನು ಸಾಂಪ್ರತವಾದುದನ್ನು ಮಾಡಿದರೆ ಅದರಲ್ಲಿ ಆಶ್ಚರ್ಯವೇನಿದೆ? ಇದನ್ನು ತಿಳಿದ ಪಂಡಿತನು ಪ್ರಾಣಿಗಳ ಕುರಿತು ಪರಿತಪಿಸುವುದಿಲ್ಲ.

12147011a ಪ್ರಜ್ಞಾಪ್ರಾಸಾದಮಾರುಹ್ಯ ಅಶೋಚ್ಯಃ ಶೋಚತೇ ಜನಾನ್|

12147011c ಜಗತೀಸ್ಥಾನಿವಾದ್ರಿಸ್ಥಃ ಪ್ರಜ್ಞಯಾ ಪ್ರತಿಪಶ್ಯತಿ[6]||

ವಿಶುದ್ಧ ಬುದ್ಧಿಯ ಅಟ್ಟವನ್ನೇರಿ ಸ್ವಯಂ ಶೋಕರಹಿತನಾಗಿದ್ದುಕೊಂಡು ಇತರ ದುಃಖೀ ಮನುಷ್ಯರಿಗಾಗಿ ಶೋಕಿಸುವವನು ಪರ್ವತ ಶಿಖರವನ್ನೇರಿ ಪರ್ವತದ ಸುತ್ತಲಿರುವ ಎಲ್ಲವನ್ನೂ ನೋಡುವಂತೆ ತನ್ನ ಜ್ಞಾನಬಲದಿಂದ ಎಲ್ಲವನ್ನೂ ತಿಳಿದುಕೊಳ್ಳುತ್ತಾನೆ.

12147012a ನ ಚೋಪಲಭತೇ ತತ್ರ ನ ಚ ಕಾರ್ಯಾಣಿ ಪಶ್ಯತಿ[7]|

12147012c ನಿರ್ವಿಣ್ಣಾತ್ಮಾ ಪರೋಕ್ಷೋ ವಾ ಧಿಕ್ಕೃತಃ ಸರ್ವಸಾಧುಷು[8]||

ಸರ್ವಸಾಧುಗಳಿಂದ ವಿರಕ್ತನಾದ ಮತ್ತು ಅವರ ದೃಷ್ಟಿಪಥದಿಂದ ದೂರವಿರುವ ಅಥವಾ ಅವರಿಂದ ಧಿಕ್ಕರಿಸಲ್ಪಟ್ಟವನಿಗೆ ಜ್ಞಾನವು ಉಪಲಬ್ಧವಾಗುವುದಿಲ್ಲ ಮತ್ತು ಅವನ ಯಾವ ಕಾರ್ಯವೂ ನಡೆಯುವುದಿಲ್ಲ.

12147013a ವಿದಿತ್ವೋಭಯತೋ ವೀರ್ಯಂ ಮಾಹಾತ್ಮ್ಯಂ ವೇದ ಆಗಮೇ|

12147013c ಕುರುಷ್ವೇಹ ಮಹಾಶಾಂತಿಂ ಬ್ರಹ್ಮಾ ಶರಣಮಸ್ತು ತೇ||

ವೇದ ಮತ್ತು ಆಗಮಗಳು ಹೇಳಿರುವ ಬ್ರಾಹ್ಮಣರ ವೀರ್ಯ ಮತ್ತು ಮಹಾತ್ಮೆಗಳನ್ನು ನೀನು ತಿಳಿದಿದ್ದೀಯೆ. ಇಲ್ಲಿ ಮಹಾಶಾಂತಿಯಿಂದ ಬ್ರಾಹ್ಮಣರು ನಿನಗೆ ನೆಲೆಯನ್ನು ನೀಡುವಂತೆ ಪ್ರಯತ್ನಿಸು.

12147014a ತದ್ವೈ ಪಾರತ್ರಿಕಂ ಚಾರು ಬ್ರಾಹ್ಮಣಾನಾಮಕುಪ್ಯತಾಮ್|

12147014c ಅಥ ಚೇತ್ತಪ್ಯಸೇ ಪಾಪೈರ್ಧರ್ಮಂ ಚೇದನುಪಶ್ಯಸಿ||

ಕ್ರೋಧರಹಿತನಾಗಿ ಬ್ರಾಹ್ಮಣರಿಗೆ ಮಾಡುವ ಸೇವೆಯು ಪಾರಲೌಕಿಕ ಲಾಭಕ್ಕೆ ಕಾರಣವಾಗುತ್ತದೆ. ನಿನ್ನ ಪಾಪಗಳಿಗೆ ಪಶ್ಚಾತ್ತಾಪ ಪಡುತ್ತಿರುವೆಯಾದರೆ ನಿನ್ನ ದೃಷ್ಟಿಯು ನಿರಂತರವಾಗಿ ಧರ್ಮದ ಮೇಲೆಯೇ ಇರಲಿ.”

12147015 ಜನಮೇಜಯ ಉವಾಚ |

12147015a ಅನುತಪ್ಯೇ ಚ ಪಾಪೇನ ನ ಚಾಧರ್ಮಂ ಚರಾಮ್ಯಹಮ್|

12147015c ಬುಭೂಷುಂ ಭಜಮಾನಂ ಚ ಪ್ರತಿವಾಂಚಾಮಿ[9] ಶೌನಕ||

ಜನಮೇಜಯನು ಹೇಳಿದನು: “ಶೌನಕ! ನನ್ನ ಪಾಪಗಳಿಗೆ ಪಶ್ಚಾತ್ತಾಪಪಡುತ್ತಿದ್ದೇನೆ. ಅಧರ್ಮದಲ್ಲಿ ನಡೆದುಕೊಳ್ಳುವುದಿಲ್ಲ. ನನ್ನ ಕಲ್ಯಾಣವನ್ನೇ ಬಯಸುತ್ತೇನೆ. ಭರವಸೆಯನ್ನು ನೀಡುತ್ತಿದ್ದೇನೆ.”

12147016 ಶೌನಕ ಉವಾಚ |

12147016a ಚಿತ್ತ್ವಾ ಸ್ತಂಭಂ[10] ಚ ಮಾನಂ ಚ ಪ್ರೀತಿಮಿಚ್ಚಾಮಿ ತೇ ನೃಪ|

12147016c ಸರ್ವಭೂತಹಿತೇ ತಿಷ್ಠ ಧರ್ಮಂ ಚೈವ ಪ್ರತಿಸ್ಮರ||

ಶೌನಕನು ಹೇಳಿದನು: “ನೃಪ! ನಾನು ನಿನ್ನ ನಿಲುವು ಮತ್ತು ಮಾನವನ್ನು ಛೇದಿಸಿ ನಿನಗೆ ಪ್ರಿಯವಾದುದನ್ನು ಮಾಡುತ್ತೇನೆ. ನೀನು ಧರ್ಮವನ್ನು ಸದಾ ಸ್ಮರಿಸುತ್ತಾ ಸರ್ವಭೂತಗಳ ಹಿತದ ಸಾಧನೆಯನ್ನು ಮಾಡು.

12147017a ನ ಭಯಾನ್ನ ಚ ಕಾರ್ಪಣ್ಯಾನ್ನ ಲೋಭಾತ್ತ್ವಾಮುಪಾಹ್ವಯೇ|

12147017c ತಾಂ ಮೇ ದೇವಾ ಗಿರಂ ಸತ್ಯಾಂ ಶೃಣ್ವಂತು ಬ್ರಾಹ್ಮಣೈಃ ಸಹ||

ನಾನು ನಿನ್ನನ್ನು ಭಯದಿಂದಾಗಲೀ ಕಾರ್ಪಣ್ಯದಿಂದಾಗಲೀ ಅಥವಾ ಲೋಭದಿಂದಾಗಲೀ ಸ್ವೀಕರಿಸುತ್ತಿಲ್ಲ. ನೀನು ಈ ಬ್ರಾಹ್ಮಣರೊಂದಿಗೆ ದೈವೀ ವಾಣಿಯಂತಿರುವ ನನ್ನ ಈ ಸತ್ಯಮಾತನ್ನು ಕೇಳು.

12147018a ಸೋಽಹಂ ನ ಕೇನ ಚಿಚ್ಚಾರ್ಥೀ ತ್ವಾಂ ಚ ಧರ್ಮಮುಪಾಹ್ವಯೇ|

12147018c ಕ್ರೋಶತಾಂ ಸರ್ವಭೂತಾನಾಮಹೋ ಧಿಗಿತಿ ಕುರ್ವತಾಮ್||

ನಾನು ನಿನ್ನಿಂದ ಯಾವ ವಸ್ತುವನ್ನೂ ಬಯಸುತ್ತಿಲ್ಲ. ಸರ್ವಭೂತಗಳೂ ನಿನ್ನನ್ನು ಕೂಗಿ ಧಿಕ್ಕರಿಸುತ್ತಿದ್ದರೂ ಕೇವಲ ಧರ್ಮದ ಕಾರಣದಿಂದಾಗಿ ನಿನ್ನನ್ನು ಇಲ್ಲಿ ಸ್ವಾಗತಿಸುತ್ತಿದ್ದೇನೆ.

12147019a ವಕ್ಷ್ಯಂತಿ ಮಾಮಧರ್ಮಜ್ಞಾ ವಕ್ಷ್ಯಂತ್ಯಸುಹೃದೋ ಜನಾಃ|

12147019c ವಾಚಸ್ತಾಃ ಸುಹೃದಃ ಶ್ರುತ್ವಾ ಸಂಜ್ವರಿಷ್ಯಂತಿ ಮೇ ಭೃಶಮ್||

ಜನರು ನನ್ನನ್ನು ಅಧರ್ಮಜ್ಞನೆಂದು ಹೇಳುವರು. ನನ್ನ ಸುಹೃದ್ ಜನರು ನನ್ನನ್ನು ತ್ಯಜಿಸುತ್ತಾರೆ. ನಾನು ನಿನಗೆ ನೀಡುವ ಧರ್ಮೋಪದೇಶವನ್ನು ಕೇಳಿ ನನ್ನ ಸುಹೃದಯರು ಅತ್ಯಂತ ರೋಷದಿಂದ ಉರಿಯುತ್ತಾರೆ.

12147020a ಕೇ ಚಿದೇವ ಮಹಾಪ್ರಾಜ್ಞಾಃ ಪರಿಜ್ಞಾಸ್ಯಂತಿ ಕಾರ್ಯತಾಮ್|

12147020c ಜಾನೀಹಿ ಮೇ ಕೃತಂ ತಾತ ಬ್ರಾಹ್ಮಣಾನ್ ಪ್ರತಿ ಭಾರತ||

ಭಾರತ! ಯಾರಾದರೂ ಮಹಾಪ್ರಾಜ್ಞರೇ ನನ್ನ ಈ ಕಾರ್ಯವನ್ನು ಅರ್ಥಮಾಡಿಕೊಳ್ಳಬಲ್ಲರು. ಬ್ರಾಹ್ಮಣರಿಗೆ ಒಳ್ಳೆಯದನ್ನು ಮಾಡಬೇಕೆನ್ನುವುದೇ ನನ್ನ ಈ ಕಾರ್ಯದ ಉದ್ದೇಶವಾಗಿದೆ. ಇದನ್ನು ನೀನು ಚೆನ್ನಾಗಿ ತಿಳಿದುಕೋ.

12147021a ಯಥಾ ತೇ ಮತ್ಕೃತೇ ಕ್ಷೇಮಂ ಲಭೇರಂಸ್ತತ್ತಥಾ ಕುರು|

12147021c ಪ್ರತಿಜಾನೀಹಿ ಚಾದ್ರೋಹಂ ಬ್ರಾಹ್ಮಣಾನಾಂ ನರಾಧಿಪ||

ಬ್ರಾಹ್ಮಣರು ನನ್ನಲ್ಲಿ ಹೇಗೆ ಕ್ಷೇಮವಾಗಿದ್ದಾರೋ ಹಾಗೆ ನೀನೂ ಅವರ ಕ್ಷೇಮವನ್ನು ನೋಡಿಕೋ. ನರಾಧಿಪ! ಬ್ರಾಹ್ಮಣರ ಕುರಿತು ದ್ರೋಹವನ್ನೆಸಗುವುದಿಲ್ಲ ಎಂದು ಪ್ರತಿಜ್ಞೆಯನ್ನು ಮಾಡು.”

12147022 ಜನಮೇಜಯ ಉವಾಚ |

12147022a ನೈವ ವಾಚಾ ನ ಮನಸಾ ನ ಪುನರ್ಜಾತು ಕರ್ಮಣಾ|

12147022c ದ್ರೋಗ್ಧಾಸ್ಮಿ ಬ್ರಾಹ್ಮಣಾನ್ವಿಪ್ರ ಚರಣಾವೇವ ತೇ ಸ್ಪೃಶೇ||

ಜನಮೇಜಯನು ಹೇಳಿದನು: “ವಿಪ್ರ! ನಿನ್ನ ಚರಣಗಳನ್ನು ಮುಟ್ಟಿ ಶಪಥಮಾಡುತ್ತಿದ್ದೇನೆ – ವಾಚಾ, ಮನಸಾ ಅಥವ ಕರ್ಮಗಳಿಂದ ಬ್ರಾಹ್ಮಣರಿಗೆ ದ್ರೋಹವನ್ನೆಸಗುವುದಿಲ್ಲ!”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಆಪದ್ಧರ್ಮ ಪರ್ವಣಿ ಇಂದ್ರೋತಪಾರಿಕ್ಷಿತೀಯೇ ಸಪ್ತಚತ್ವಾರಿಂಶದಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಆಪದ್ಧರ್ಮ ಪರ್ವದಲ್ಲಿ ಇಂದ್ರೋತಪಾರಿಕ್ಷಿತೀಯ ಎನ್ನುವ ನೂರಾನಲ್ವತ್ತೇಳನೇ ಅಧ್ಯಾಯವು.

[1] ಮಾಂ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[2] ದುಷ್ಕೃತಂ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[3] ಮಹಾನಾಸಂ ಬ್ರಾಹ್ಮಣಾನಾಂ ಭೂಯೋ ವಕ್ಷ್ಯಾಮಿ ಸಾಂಪ್ರತಮ್| ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[4] ಕಿಮಾಶ್ಚರ್ಯಂ ಯದಪ್ರಜ್ಞೋ ಬಹು ಕುರ್ಯಾದಸಾಂಪ್ರತಮ್| ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[5] ನಾನುಕುಪ್ಯತೇ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[6] ಪ್ರತಿಪತ್ಸ್ಯತಿ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[7] ನ ಚೋಲಭ್ಯತೇ ತೇನ ನ ಚಾಶ್ಚರ್ಯಾಣಿ ಕುರ್ವತೇ| ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[8] ಪೂರ್ವಸಾಧುಷು ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[9] ಪ್ರೀತಿಮಾನ್ ಭವ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[10] ದಂಭಂ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

Comments are closed.