Virata Parva: Chapter 40

ವಿರಾಟ ಪರ್ವ: ಗೋಹರಣ ಪರ್ವ

೪೦

ಉತ್ತರನು ಅರ್ಜುನನ ಸಾರಥಿಯಾದುದು

ಅರ್ಜುನನಿಗೆ ನಪುಂಸಕತ್ವವು ಹೇಗುಂಟಾಯಿತೆಂದು ಉತ್ತರನು ಕೇಳಲು ತಾನು ಅಣ್ಣನ ಆಜ್ಞೆಯಂತೆ ಧರ್ಮಯುಕ್ತನಾಗಿ ಒಂದು ವರ್ಷದ ಬ್ರಹ್ಮಚರ್ಯವ್ರತವನ್ನು ಕೈಗೊಂಡಿರುವವನೆಂದು ಅರ್ಜುನನು ಹೇಳುವುದು (೧-೧೩). ಅರ್ಜುನನು ಯುದ್ಧ ಸನ್ನದ್ಧನಾಗಿ ಗಾಂಡೀವವನ್ನು ಟೇಂಕರಿಸುವುದು (೧೪-೨೭).

04040001 ಉತ್ತರ ಉವಾಚ|

04040001a ಆಸ್ಥಾಯ ವಿಪುಲಂ ವೀರ ರಥಂ ಸಾರಥಿನಾ ಮಯಾ|

04040001c ಕತಮಂ ಯಾಸ್ಯಸೇಽನೀಕಮುಕ್ತೋ ಯಾಸ್ಯಾಮ್ಯಹಂ ತ್ವಯಾ||

ಉತ್ತರನು ಹೇಳಿದನು: “ವೀರ! ನಾನು ಸಾರಥಿಯಾಗಿರುವ ಈ ದೊಡ್ಡ ರಥದಲ್ಲಿ ಕುಳಿತು ನೀನು ಯಾವ ಸೈನ್ಯದತ್ತ ಹೋಗಬಯಸಿ ಹೇಳುತ್ತೀಯೋ ಅಲ್ಲಿಗೆ ನಿನ್ನನ್ನು ಒಯ್ಯುತ್ತೇನೆ.”

04040002 ಅರ್ಜುನ ಉವಾಚ|

04040002aಪ್ರೀತೋಽಸ್ಮಿ ಪುರುಷವ್ಯಾಘ್ರ ನ ಭಯಂ ವಿದ್ಯತೇ ತವ|

04040002c ಸರ್ವಾನ್ನುದಾಮಿ ತೇ ಶತ್ರೂನ್ರಣೇ ರಣವಿಶಾರದ||

ಅರ್ಜುನನು ಹೇಳಿದನು: “ಪುರುಷಶ್ರೇಷ್ಠ! ನಿನ್ನ ವಿಷಯದಲ್ಲಿ ಸಂತುಷ್ಟನಾಗಿದ್ದೇನೆ. ನಿನಗಿನ್ನು ಭಯವಿಲ್ಲ. ಯುದ್ಧವಿಶಾರದನೇ! ರಣದಲ್ಲಿ ನಿನ್ನ ವೈರಿಗಳನ್ನು ಓಡಿಸಿಬಿಡುತ್ತೇನೆ.

04040003a ಸ್ವಸ್ಥೋ ಭವ ಮಹಾಬುದ್ಧೇ ಪಶ್ಯ ಮಾಂ ಶತ್ರುಭಿಃ ಸಹ|

04040003c ಯುಧ್ಯಮಾನಂ ವಿಮರ್ದೇಽಸ್ಮಿನ್ಕುರ್ವಾಣಂ ಭೈರವಂ ಮಹತ್||

ಮಹಾಬುದ್ಧಿಶಾಲಿ! ಸ್ವಸ್ಥನಾಗಿರು. ನಾನು ಈ ಯುದ್ಧದಲ್ಲಿ ಬಯಂಕರವೂ ಮಹತ್ತೂ ಆದುದನ್ನು ಸಾಧಿಸುತ್ತಾ ಶತ್ರುಗಳೊಡನೆ ಹೋರಾಡುವುದನ್ನು ನೋಡು.

04040004a ಏತಾನ್ಸರ್ವಾನುಪಾಸಂಗಾನ್ ಕ್ಷಿಪ್ರಂ ಬಧ್ನೀಹಿ ಮೇ ರಥೇ|

04040004c ಏತಂ ಚಾಹರ ನಿಸ್ತ್ರಿಂಶಂ ಜಾತರೂಪಪರಿಷ್ಕೃತಂ|

04040004e ಅಹಂ ವೈ ಕುರುಭಿರ್ಯೋತ್ಸ್ಯಾಮ್ಯವಜೇಷ್ಯಾಮಿ ತೇ ಪಶೂನ್||

ಈ ಎಲ್ಲ ಬತ್ತಳಿಕೆಗಳನ್ನೂ ನನ್ನ ರಥಕ್ಕೆ ಬೇಗ ಬಿಗಿ. ಈ ಸುವರ್ಣಖಚಿತ ಕತ್ತಿಯನ್ನು ತೆಗೆದುಕೋ. ನಾನು ಕುರುಗಳೊಡನೆ ಹೋರಾಡುತ್ತೇನೆ. ನಿನ್ನ ಗೋವುಗಳನ್ನು ಗೆದ್ದು ಕೊಡುತ್ತೇನೆ.

04040005a ಸಂಕಲ್ಪಪಕ್ಷವಿಕ್ಷೇಪಂ ಬಾಹುಪ್ರಾಕಾರತೋರಣಂ|

04040005c ತ್ರಿದಂಡತೂಣಸಂಬಾಧಮನೇಕಧ್ವಜಸಂಕುಲಂ||

04040006a ಜ್ಯಾಕ್ಷೇಪಣಂ ಕ್ರೋಧಕೃತಂ ನೇಮೀನಿನದದುಂದುಭಿ|

04040006c ನಗರಂ ತೇ ಮಯಾ ಗುಪ್ತಂ ರಥೋಪಸ್ಥಂ ಭವಿಷ್ಯತಿ||

ನಿನ್ನ ನಗರವು ಈ ರಥದ ಮಧ್ಯಭಾಗದಲ್ಲಿ ಇದೆಯೋ ಎಂಬಂತೆ ನನ್ನಿಂದ ರಕ್ಷಿತವಾಗಿದೆ. ನನ್ನ ಸಂಕಲ್ಪವೇ ನಗರದ ದಾರಿಗಳು ಮತ್ತು ಓಣಿಗಳು. ಬಾಹುಗಳೇ ಕೋಟೆ ಮತ್ತು ಹೆಬ್ಬಾಗಿಲುಗಳು. ರಥದ ಮೂರು ದಂಡಗಳೇ ಮೂರುಬಗೆಯ ಸೇನೆಗಳು. ಬತ್ತಳಿಕೆಯೇ ರಕ್ಷಣಸಾಮಗ್ರಿ. ನನ್ನ ಈ ಧ್ವಜವೇ ನಗರದ ಧ್ವಜಸಮೂಹ. ಈ ನನ್ನ ಬಿಲ್ಲಿನ ಹೆದೆಯೇ ನಗರ ರಕ್ಷಣೆಯ ಫಿರಂಗಿ. ಶತ್ರುನಾಶಕ ಕೋಪವೇ ದೃಢಚಿತ್ತ ಕಾರ್ಯ. ರಥಚಕ್ರದ ಶಬ್ಧವೇ ನಗರದ ದುಂದುಭಿಗಳು.

04040007a ಅಧಿಷ್ಠಿತೋ ಮಯಾ ಸಂಖ್ಯೇ ರಥೋ ಗಾಂಡೀವಧನ್ವನಾ|

04040007c ಅಜೇಯಃ ಶತ್ರುಸೈನ್ಯಾನಾಂ ವೈರಾಟೇ ವ್ಯೇತು ತೇ ಭಯಂ||

ವಿರಾಟಪುತ್ರ! ಗಾಂಡೀವ ಧನುವನ್ನುಳ್ಳ ನಾನು ಕುಳಿತಿರುವ ಈ ರಥವು ಯುದ್ಧದಲ್ಲಿ ಶತ್ರುಸೇನೆಗೆ ಅಜೇಯವಾದುದು. ನಿನ್ನ ಹೆದರಿಕೆಯು ತೊಲಗಲಿ.”

04040008 ಉತ್ತರ ಉವಾಚ|

04040008a ಬಿಭೇಮಿ ನಾಹಮೇತೇಷಾಂ ಜಾನಾಮಿ ತ್ವಾಂ ಸ್ಥಿರಂ ಯುಧಿ|

04040008c ಕೇಶವೇನಾಪಿ ಸಂಗ್ರಾಮೇ ಸಾಕ್ಷಾದಿಂದ್ರೇಣ ವಾ ಸಮಂ||

ಉತ್ತರನು ಹೇಳಿದನು: “ಇವರಿಗೆ ನಾನು ಇನ್ನು ಹೆದರುವುದಿಲ್ಲ. ಯುದ್ಧದಲ್ಲಿ ನೀನು ಸ್ಥಿರನೆಂಬುವುದನ್ನು ನಾನು ಬಲ್ಲೆ. ಸಂಗ್ರಾಮದಲ್ಲಿ ನೀನು ಸಾಕ್ಷಾತ್ ಕೇಶವನಿಗೆ ಅಥವಾ ಇಂದ್ರನಿಗೆ ಸಮಾನನೆಂದೂ ಬಲ್ಲೆ.

04040009a ಇದಂ ತು ಚಿಂತಯನ್ನೇವ ಪರಿಮುಹ್ಯಾಮಿ ಕೇವಲಂ|

04040009c ನಿಶ್ಚಯಂ ಚಾಪಿ ದುರ್ಮೇಧಾ ನ ಗಚ್ಛಾಮಿ ಕಥಂ ಚನ||

ಆದರೆ ಇದನ್ನು ಆಲೋಚಿಸುತ್ತ ನಾನು ಸಂಪೂರ್ಣ ದಿಗ್ಭ್ರಾಂತನಾಗುತ್ತಿದ್ದೇನೆ. ಮಂದ ಬುದ್ಧಿಯವನಾದ ನಾನು ಯಾವುದೇ ನಿರ್ಧಾರಕ್ಕೆ ಬರಲಾರದವನಾಗಿದ್ದೇನೆ.

04040010a ಏವಂ ವೀರಾಂಗರೂಪಸ್ಯ ಲಕ್ಷಣೈರುಚಿತಸ್ಯ ಚ|

04040010c ಕೇನ ಕರ್ಮವಿಪಾಕೇನ ಕ್ಲೀಬತ್ವಮಿದಮಾಗತಂ||

ಇಂಥಹ ವೀರಾಂಗಗಳಿಂದ ಕೂಡಿದ ರೂಪವುಳ್ಳ ಮತ್ತು ಸುಲಕ್ಷಣಗಳಿಂದ ಶ್ಲಾಘ್ಯನಾದ ನಿನಗೆ ಯಾವ ಕರ್ಮವಿಪಾಕದಿಂದ ಈ ನಪುಂಸಕತ್ವವು ಉಂಟಾಯಿತು?

04040011a ಮನ್ಯೇ ತ್ವಾಂ ಕ್ಲೀಬವೇಷೇಣ ಚರಂತಂ ಶೂಲಪಾಣಿನಂ|

04040011c ಗಂಧರ್ವರಾಜಪ್ರತಿಮಂ ದೇವಂ ವಾಪಿ ಶತಕ್ರತುಂ||

ನಪುಂಸಕ ವೇಶದಲ್ಲಿ ಸಂಚರಿಸುವ ಶೂಲಪಾಣಿಯೆಂದು, ಗಂಧರ್ವರಾಜಸಮಾನನೆಂದು ಅಥವಾ ದೇವೇಂದ್ರನೆಂದು ನಿನ್ನನ್ನು ತಿಳಿಯುತ್ತೇನೆ.”

04040012 ಅರ್ಜುನ ಉವಾಚ|

04040012a ಭ್ರಾತುರ್ನಿಯೋಗಾಜ್ಜ್ಯೇಷ್ಠಸ್ಯ ಸಂವತ್ಸರಮಿದಂ ವ್ರತಂ|

04040012c ಚರಾಮಿ ಬ್ರಹ್ಮಚರ್ಯಂ ವೈ ಸತ್ಯಮೇತದ್ಬ್ರವೀಮಿ ತೇ||

ಅರ್ಜುನನು ಹೇಳಿದನು: “ಇದೋ ನಾನು ನಿನಗೆ ಹೇಳುತ್ತಿರುವುದು ಸತ್ಯ. ಅಣ್ಣನ ಆಜ್ಞೆಯಂತೆ ಈ ಬ್ರಹ್ಮಚರ್ಯವ್ರತವನ್ನು ಒಂದು ವರ್ಷಕಾಲ ಆಚರಿಸುತ್ತಿದ್ದೇನೆ.

04040013a ನಾಸ್ಮಿ ಕ್ಲೀಬೋ ಮಹಾಬಾಹೋ ಪರವಾನ್ಧರ್ಮಸಮ್ಯುತಃ|

04040013c ಸಮಾಪ್ತವ್ರತಮುತ್ತೀರ್ಣಂ ವಿದ್ಧಿ ಮಾಂ ತ್ವಂ ನೃಪಾತ್ಮಜ||

ಮಹಾಬಾಹೋ! ನಾನು ನಪುಂಸಕನಲ್ಲ. ಪರಾಧೀನನಾಗಿ, ಧರ್ಮಯುಕ್ತನಾಗಿ ವ್ರತವನ್ನು ಮುಗಿಸಿ ದಡಮುಟ್ಟಿದ ರಾಜಪುತ್ರನೆಂದು ನೀನು ನನ್ನನ್ನು ತಿಳಿ.”

04040014 ಉತ್ತರ ಉವಾಚ|

04040014a ಪರಮೋಽನುಗ್ರಹೋ ಮೇಽದ್ಯ ಯತ್ಪ್ರತರ್ಕೋ ನ ಮೇ ವೃಥಾ|

04040014c ನ ಹೀದೃಶಾಃ ಕ್ಲೀಬರೂಪಾ ಭವಂತೀಹ ನರೋತ್ತಮಾಃ||

ಉತ್ತರನು ಹೇಳಿದನು: “ನನಗೆ ನೀನಿಂದು ಪರಮಾನುಗ್ರವನ್ನುಂಟುಮಾಡಿರುವೆ. ನನ್ನ ತರ್ಕ ವ್ಯರ್ಥವಾಗಲಿಲ್ಲ. ಇಂತಹ ನರೋತ್ತಮರು ಲೋಕದಲ್ಲಿ ನಪುಂಸಕರೂಪದಲ್ಲಿರುವುದಿಲ್ಲ.

04040015a ಸಹಾಯವಾನಸ್ಮಿ ರಣೇ ಯುಧ್ಯೇಯಮಮರೈರಪಿ|

04040015c ಸಾಧ್ವಸಂ ತತ್ಪ್ರನಷ್ಟಂ ಮೇ ಕಿಂ ಕರೋಮಿ ಬ್ರವೀಹಿ ಮೇ||

ಯುದ್ಧದಲ್ಲಿ ನನಗೆ ನೀನು ಸಹಾಯಮಾಡುತ್ತೀಯೆ. ಈಗ ನಾನು ದೇವತೆಗಳೊಡನೆ ಕೂಡ ಹೋರಾಡಬಲ್ಲೆ. ಆ ನನ್ನ ಹೆದರಿಕೆಯು ಅಳಿದುಹೋಯಿತು. ಮುಂದೆ ಏನು ಮಾಡಲಿ? ನನಗೆ ಹೇಳು.

04040016a ಅಹಂ ತೇ ಸಂಗ್ರಹೀಷ್ಯಾಮಿ ಹಯಾಂ ಶತ್ರುರಥಾರುಜಃ|

04040016c ಶಿಕ್ಷಿತೋ ಹ್ಯಸ್ಮಿ ಸಾರಥ್ಯೇ ತೀರ್ಥತಃ ಪುರುಷರ್ಷಭ||

ಶತ್ರುರಥಗಳನ್ನು ಮುರಿಯಬಲ್ಲ ನಿನ್ನ ಕುದುರೆಗಳನ್ನು ನಾನು ಹಿಡಿದುಕೊಳ್ಳುತ್ತೇನೆ. ಪುರುಷಶ್ರೇಷ್ಠ! ಸಾರಥ್ಯದಲ್ಲಿ ನಾನು ಆಚಾರ್ಯನಿಂದ ಶಿಕ್ಷಣ ಪಡೆದಿದ್ದೇನೆ.

04040017a ದಾರುಕೋ ವಾಸುದೇವಸ್ಯ ಯಥಾ ಶಕ್ರಸ್ಯ ಮಾತಲಿಃ|

04040017c ತಥಾ ಮಾಂ ವಿದ್ಧಿ ಸಾರಥ್ಯೇ ಶಿಕ್ಷಿತಂ ನರಪುಂಗವ||

ನರಶ್ರೇಷ್ಠ! ಸಾರಥ್ಯದಲ್ಲಿ ವಾಸುದೇವನಿಗೆ ದಾರುಕನು ಹೇಗೋ ಇಂದ್ರನಿಗೆ ಮಾತಲಿಯು ಹೇಗೋ ಹಾಗೆ ನಾನು ನಿನಗೆ ಸುಶಿಕ್ಷಿತ ಸಾರಥಿ ಎಂದು ತಿಳಿದುಕೋ.

04040018a ಯಸ್ಯ ಯಾತೇ ನ ಪಶ್ಯಂತಿ ಭೂಮೌ ಪ್ರಾಪ್ತಂ ಪದಂ ಪದಂ|

04040018c ದಕ್ಷಿಣಂ ಯೋ ಧುರಂ ಯುಕ್ತಃ ಸುಗ್ರೀವಸದೃಶೋ ಹಯಃ||

ಬಲಗಡೆಯಲ್ಲಿ ನೊಗಕ್ಕೆ ಕಟ್ಟಿದ ಕುದುರೆ ಸುಗ್ರೀವದಂತಿದೆ. ಅದು ಚಲಿಸುವಾಗ ಹೆಜ್ಜೆಗಳು ಭೂಮಿಯನ್ನು ಸೋಕಿದ್ದು ಕಾಣುವುದಿಲ್ಲ.

04040019a ಯೋಽಯಂ ಧುರಂ ಧುರ್ಯವರೋ ವಾಮಂ ವಹತಿ ಶೋಭನಃ|

04040019c ತಂ ಮನ್ಯೇ ಮೇಘಪುಷ್ಪಸ್ಯ ಜವೇನ ಸದೃಶಂ ಹಯಂ||

ರಥದ ಎಡಗಡೆಯ ನೊಗಕ್ಕೆ ಕಟ್ಟಿದ ಸುಂದರವೂ ಕುದುರೆಗಳಲ್ಲಿ ಶ್ರೇಷ್ಠವೂ ಆದ ಇನ್ನೊಂದು ಕುದುರೆ ವೇಗದಲ್ಲಿ ಮೇಘಪುಷ್ಪಕ್ಕೆ ಸಮಾನವಾಗಿದೆಯೆಂದು ಭಾವಿಸುತ್ತೇನೆ.

04040020a ಯೋಽಯಂ ಕಾಂಚನಸನ್ನಾಹಃ ಪಾರ್ಷ್ಣಿಂ ವಹತಿ ಶೋಭನಃ|

04040020c ವಾಮಂ ಸೈನ್ಯಸ್ಯ ಮನ್ಯೇ ತಂ ಜವೇನ ಬಲವತ್ತರಂ||

ಸುಂದರ ಚಿನ್ನದ ಕವಚವನ್ನುಳ್ಳ, ಹಿಂಬಾಗದಲ್ಲಿ ಎಡಗಡೆಯಿರುವ ವೇಗದಲ್ಲಿ ಬಲವತ್ತರವಾದ ಈ ಮತ್ತೊಂದು ಕುದುರೆಯನ್ನು ಸೈನ್ಯ ಎಂದು ತಿಳಿಯುತ್ತೇನೆ.

04040021a ಯೋಽಯಂ ವಹತಿ ತೇ ಪಾರ್ಷ್ಣಿಂ ದಕ್ಷಿಣಾಮಂಚಿತೋದ್ಯತಃ|

04040021c ಬಲಾಹಕಾದಪಿ ಮತಃ ಸ ಜವೇ ವೀರ್ಯವತ್ತರಃ||

ಹಿಂಬಾಗದಲ್ಲಿ ಬಲಗಡೆಯಿರುವ ಈ ಕುದುರೆ ವೇಗದಲ್ಲಿ ಬಲಾಹಕಕ್ಕಿಂತ ಬಲವತ್ತರವಾದುದೆಂದು ನನ್ನ ಅಭಿಪ್ರಾಯ.

04040022a ತ್ವಾಮೇವಾಯಂ ರಥೋ ವೋಢುಂ ಸಂಗ್ರಾಮೇಽರ್ಹತಿ ಧನ್ವಿನಂ|

04040022c ತ್ವಂ ಚೇಮಂ ರಥಮಾಸ್ಥಾಯ ಯೋದ್ಧುಮರ್ಹೋ ಮತೋ ಮಮ||

ಯುದ್ಧದಲ್ಲಿ ಧನುರ್ಧರನಾದ ನಿನ್ನನ್ನೇ ಹೊರಲು ಈ ರಥ ತಕ್ಕುದಾಗಿದೆ. ನೀನು ಕೂಡ ಈ ರಥದಲ್ಲಿ ಕುಳಿತು ಯುದ್ಧಮಾಡಲು ತಕ್ಕವನೆಂದು ನನ್ನ ಅಭಿಪ್ರಾಯ.””

04040023 ವೈಶಂಪಾಯನ ಉವಾಚ|

04040023a ತತೋ ನಿರ್ಮುಚ್ಯ ಬಾಹುಭ್ಯಾಂ ವಲಯಾನಿ ಸ ವೀರ್ಯವಾನ್|

04040023c ಚಿತ್ರೇ ದುಂದುಭಿಸಂನಾದೇ ಪ್ರತ್ಯಮುಂಚತ್ತಲೇ ಶುಭೇ||

ವೈಶಂಪಾಯನನು ಹೇಳಿದನು: “ಬಳಿಕ ಆ ಸತ್ವಶಾಲಿ ಅರ್ಜುನನು ತೋಳುಗಳಿಂದ ಬಳೆಗಳನ್ನು ಕಳಚಿ, ಸುಂದರವಾಗಿ ಹೊಳೆಯುವ ದುಂದುಭಿಯಂತೆ ಧ್ವನಿಮಾಡುವ ಕೈಗಾಪುಗಳನ್ನು ತೊಟ್ಟುಕೊಂಡನು.

04040024a ಕೃಷ್ಣಾನ್ಭಂಗೀಮತಃ ಕೇಶಾಂ ಶ್ವೇತೇನೋದ್ಗ್ರಥ್ಯ ವಾಸಸಾ|

04040024c ಅಧಿಜ್ಯಂ ತರಸಾ ಕೃತ್ವಾ ಗಾಂಡೀವಂ ವ್ಯಾಕ್ಷಿಪದ್ಧನುಃ||

ಅನಂತರ ಅವನು ಸುರುಳಿ ಸುರುಳಿಯಾಗಿರುವ ಕಪ್ಪುಗೂದಲನ್ನು ಬಿಳಿಯ ಬಟ್ಟೆಯಿಂದ ಮೇಲೆತ್ತಿ ಕಟ್ಟಿ, ಗಾಂಡೀವ ಧನುಸ್ಸಿಗೆ ಬೇಗ ಹೆದೆಯೇರಿಸಿ ಅದನ್ನು ಮಿಡಿದನು.

04040025a ತಸ್ಯ ವಿಕ್ಷಿಪ್ಯಮಾಣಸ್ಯ ಧನುಷೋಽಭೂನ್ಮಹಾಸ್ವನಃ|

04040025c ಯಥಾ ಶೈಲಸ್ಯ ಮಹತಃ ಶೈಲೇನೈವಾಭಿಜಘ್ನುಷಃ||

ಮಹಾಪರ್ವತವು ಮಹಾಪರ್ವತಕ್ಕೆ ತಾಗಿದಂತೆ ಅವನಿಂದ ಠೇಂಕಾರಗೊಂಡ ಆ ಬಿಲ್ಲು ಮಹಾಧ್ವನಿಯನ್ನುಂಟುಮಾಡಿತು.

04040026a ಸನಿರ್ಘಾತಾಭವದ್ಭೂಮಿರ್ದಿಕ್ಷು ವಾಯುರ್ವವೌ ಭೃಶಂ|

04040026c ಭ್ರಾಂತದ್ವಿಜಂ ಖಂ ತದಾಸೀತ್ಪ್ರಕಂಪಿತಮಹಾದ್ರುಮಂ||

ಆಗ ಭೂಮಿಯು ನಡುಗಿತು. ದಿಕ್ಕುದಿಕ್ಕುಗಳಲ್ಲಿ ಗಾಳಿ ಬಲವಾಗಿ ಬೀಸಿತು. ಆಗಸದಲ್ಲಿ ಹಕ್ಕಿಗಳು ದಿಕ್ಕುಗೆಟ್ಟವು. ಮಹಾವೃಕ್ಷಗಳು ನಡುಗಿದವು.

04040027a ತಂ ಶಬ್ದಂ ಕುರವೋಽಜಾನನ್ವಿಸ್ಫೋಟಮಶನೇರಿವ|

04040027c ಯದರ್ಜುನೋ ಧನುಃಶ್ರೇಷ್ಠಂ ಬಾಹುಭ್ಯಾಮಾಕ್ಷಿಪದ್ರಥೇ||

ಅರ್ಜುನನು ರಥದಲ್ಲಿ ಕುಳಿತು ಶ್ರೇಷ್ಠವಾದ ಧನುವನ್ನು ತೋಳುಗಳಿಂದ ಮಿಡಿದುದರಿಂದ ಉಂಟಾದ ಆ ಶಬ್ಧವನ್ನು ಸಿಡಿಲಿನ ಆಸ್ಪೋಟವೆಂದು ಕೌರವರು ಭಾವಿಸಿದರು.”

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಉತ್ತರಾರ್ಜುನವಾಕ್ಯೇ ಚತ್ವಾರಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಉತ್ತರಾರ್ಜುನವಾಕ್ಯದಲ್ಲಿ ನಲ್ವತ್ತನೆಯ ಅಧ್ಯಾಯವು.

Image result for flowers against white background

Comments are closed.