ಉದ್ಯೋಗ ಪರ್ವ: ಸಂಜಯಯಾನ ಪರ್ವ
೨೮
ಯುಧಿಷ್ಠಿರ ವಾಕ್ಯ
ತಾನು ನಡೆಯುತ್ತಿರುವ ಮಾರ್ಗವು ಧರ್ಮವೋ ಅಧರ್ಮವೋ ಎಂದು ತಿಳಿಯದೇ ದೂರಬಾರದೆಂದೂ, ಕ್ಷತ್ರಿಯನಾದ ತನಗೆ ಇರುವ ಧರ್ಮಮಾರ್ಗದಲ್ಲಿಯೇ ತಾನು ನಡೆಯುತ್ತಿದ್ದೇನೆಂದೂ, ಕೃಷ್ಣನ ಮಾತನ್ನು ತಾನು ಮೀರುವುದಿಲ್ಲವೆಂದೂ ಯುಧಿಷ್ಠಿರನು ಸಂಜಯನಿಗೆ ಹೇಳಿದುದು (೧-೧೪).
05028001 ಯುಧಿಷ್ಠಿರ ಉವಾಚ|
05028001a ಅಸಂಶಯಂ ಸಂಜಯ ಸತ್ಯಮೇತದ್
ಧರ್ಮೋ ವರಃ ಕರ್ಮಣಾಂ ಯತ್ತ್ವಮಾತ್ಥ|
05028001c ಜ್ಞಾತ್ವಾ ತು ಮಾಂ ಸಂಜಯ ಗರ್ಹಯೇಸ್ತ್ವಂ
ಯದಿ ಧರ್ಮಂ ಯದ್ಯಧರ್ಮಂ ಚರಾಮಿ||
ಯುಧಿಷ್ಠಿರನು ಹೇಳಿದನು: “ಸಂಜಯ! ನೀನು ಹೇಳಿದಂತೆ ಧರ್ಮವೇ ಎಲ್ಲಕ್ಕಿಂತ ಶ್ರೇಷ್ಠವಾದ ಕರ್ಮ. ಅದರಲ್ಲಿ ಸಂಶಯವೇ ಇಲ್ಲ. ಆದರೆ, ಸಂಜಯ! ನಾನು ನಡೆಯುತ್ತಿರುವುದು ಧರ್ಮದಲ್ಲಿಯೋ ಅಥವಾ ಅಧರ್ಮದಲ್ಲಿಯೋ ಎಂದು ತಿಳಿಯದೇ ನೀನು ನನ್ನನ್ನು ದೂರಬಾರದು.
05028002a ಯತ್ರಾಧರ್ಮೋ ಧರ್ಮರೂಪಾಣಿ ಬಿಭ್ರದ್
ಧರ್ಮಃ ಕೃತ್ಸ್ನೋ ದೃಶ್ಯತೇಽಧರ್ಮರೂಪಃ|
05028002c ತಥಾ ಧರ್ಮೋ ಧಾರಯನ್ಧರ್ಮರೂಪಂ
ವಿದ್ವಾಂಸಸ್ತಂ ಸಂಪ್ರಪಶ್ಯಂತಿ ಬುದ್ಧ್ಯಾ||
ಅಧರ್ಮವು ಧರ್ಮರೂಪಗಳಲ್ಲಿ ಕಾಣುವಾಗ ಅಥವಾ ಧರ್ಮವು ಅಧರ್ಮರೂಪದಲ್ಲಿ ಕಾಣುವಾಗ ಧರ್ಮವು ಧರ್ಮದ ರೂಪವನ್ನೇ ಧರಿಸಿದೆಯೋ ಇಲ್ಲವೋ ಎನ್ನುವುದನ್ನು ವಿದ್ವಾಂಸರು ಬುದ್ಧಿಯಿಂದ ಕಂಡುಕೊಳ್ಳುತ್ತಾರೆ.
05028003a ಏವಮೇತಾವಾಪದಿ ಲಿಂಗಮೇತದ್
ಧರ್ಮಾಧರ್ಮೌ ವೃತ್ತಿನಿತ್ಯೌ ಭಜೇತಾಂ|
05028003c ಆದ್ಯಂ ಲಿಂಗಂ ಯಸ್ಯ ತಸ್ಯ ಪ್ರಮಾಣಂ
ಆಪದ್ಧರ್ಮಂ ಸಂಜಯ ತಂ ನಿಬೋಧ||
ಸಂಜಯ! ಆಪತ್ತಿನಲ್ಲಿ ನಿತ್ಯವೃತ್ತಿಗೆ ಸಂಬಂಧಿಸಿದಂತೆ ಧರ್ಮ-ಅಧರ್ಮಗಳೆರಡೂ ಒಂದೇ ಲಕ್ಷಣಗಳನ್ನು ಹೊಂದುತ್ತವೆ. ಹೀಗಿರುವಾಗ ಮೊದಲು ಅವನ ಜಾತಿಗೆ ತಕ್ಕಂತಹುದನ್ನು ಆರಿಸಿಕೊಳ್ಳಬೇಕು. ಇದೇ ಆಪದ್ಧರ್ಮವೆನ್ನುವುದನ್ನು ತಿಳಿದುಕೋ.
05028004a ಲುಪ್ತಾಯಾಂ ತು ಪ್ರಕೃತೌ ಯೇನ ಕರ್ಮ
ನಿಷ್ಪಾದಯೇತ್ತತ್ಪರೀಪ್ಸೇದ್ವಿಹೀನಃ|
05028004c ಪ್ರಕೃತಿಸ್ಥಶ್ಚಾಪದಿ ವರ್ತಮಾನ
ಉಭೌ ಗರ್ಹ್ಯೌ ಭವತಃ ಸಂಜಯೈತೌ||
ಜೀವನದ ಮಾರ್ಗಗಳನ್ನು ಸಂಪೂರ್ಣವಾಗಿ ಕಳೆದುಕೊಂಡವನು ತನ್ನದೇ ಜಾತಿಯು ವಿಹಿಸುವ ಬೇರೆ ಯಾವುದಾದರೂ ಮಾರ್ಗವನ್ನು ಹುಡುಕಿಕೊಳ್ಳಬೇಕು. ಸಂಜಯ! ವರ್ತಮಾನದಲ್ಲಿ ಆಪತ್ತಿನಲ್ಲಿ ಇಲ್ಲದಿರುವವನು ಮತ್ತು ಆಪತ್ತಿನಲ್ಲಿ ಇರುವವನು ಇಬ್ಬರನ್ನೂ ದೂರಲಾಗುತ್ತಿದೆ ಸಂಜಯ!
05028005a ಅವಿಲೋಪಮಿಚ್ಚತಾಂ ಬ್ರಾಹ್ಮಣಾನಾಂ
ಪ್ರಾಯಶ್ಚಿತ್ತಂ ವಿಹಿತಂ ಯದ್ವಿಧಾತ್ರಾ|
05028005c ಆಪದ್ಯಥಾಕರ್ಮಸು ವರ್ತಮಾನಾನ್
ವಿಕರ್ಮಸ್ಥಾನ್ಸಂಜಯ ಗರ್ಹಯೇತ||
ಆಪತ್ತಿನಲ್ಲಿ ತಮ್ಮ ನಾಶವನ್ನು ಬಯಸದೇ ತಮ್ಮ ಜಾತಿಗೆ ತಕ್ಕುದಾದುದಕಿಂತ ಬೇರೆಯ ಕರ್ಮವನ್ನು ಮಾಡುವ ಬ್ರಾಹ್ಮಣರಿಗೂ ವಿಧಾತನು ಪ್ರಾಯಶ್ಚಿತ್ತವನ್ನು ನೀಡಿದ್ದಾನೆ. ಇದರಲ್ಲಿ ದೂರುವುದು ಏನಿದೆ ಸಂಜಯ!
05028006a ಮನೀಷಿಣಾಂ ತತ್ತ್ವವಿಚ್ಚೇದನಾಯ
ವಿಧೀಯತೇ ಸತ್ಸು ವೃತ್ತಿಃ ಸದೈವ|
05028006c ಅಬ್ರಾಹ್ಮಣಾಃ ಸಂತಿ ತು ಯೇ ನ ವೈದ್ಯಾಃ
ಸರ್ವೋಚ್ಚೇದಂ ಸಾಧು ಮನ್ಯೇತ ತೇಭ್ಯಃ||
ಅಬ್ರಾಹ್ಮಣರಿಗೆ ಮತ್ತು ಅವೈದೀಕರಿಗೆ ಸದೈವವಾದ ವೃತ್ತಿಯನ್ನು ಮನೀಷಿಗಳು ತತ್ತ್ವವಿಚ್ಛೇದನೆ ಮಾಡಿ ವಿಧಿಸಿದ್ದಾರೆ. ಅವುಗಳನ್ನೇ ಸರ್ವೋಚ್ಛವೆಂದು ಮನ್ನಿಸುವುದು ಒಳ್ಳೆಯದು.
05028007a ತದರ್ಥಾ ನಃ ಪಿತರೋ ಯೇ ಚ ಪೂರ್ವೇ
ಪಿತಾಮಹಾ ಯೇ ಚ ತೇಭ್ಯಃ ಪರೇಽನ್ಯೇ|
05028007c ಪ್ರಜ್ಞೈಷಿಣೋ ಯೇ ಚ ಹಿ ಕರ್ಮ ಚಕ್ರುಃ
ನಾಸ್ತ್ಯಂತತೋ ನಾಸ್ತಿ ನಾಸ್ತೀತಿ ಮನ್ಯೇ||
ಇದೇ ಮಾರ್ಗದಲ್ಲಿ ನನ್ನ ತಂದೆಯಂದಿರು ಅವರ ಪೂರ್ವಜರು, ಪಿತಾಮಹರು ಮತ್ತು ಅವರ ಮೊದಲಿನವರು ಕೂಡ ಇದನ್ನೇ ಅರ್ಥೈಸಿದ್ದರು. ಪ್ರಜ್ಞೈಷಿಗಳಾಗಿ ಕರ್ಮಗಳನ್ನು ಮಾಡುವವರೂ ಕೂಡ ಕೊನೆಯಲ್ಲಿ ಇದು ಅಧರ್ಮವಲ್ಲ ಎಂದು ತಿಳಿಯುತ್ತಾರೆ.
05028008a ಯತ್ಕಿಂ ಚಿದೇತದ್ವಿತ್ತಮಸ್ಯಾಂ ಪೃಥಿವ್ಯಾಂ
ಯದ್ದೇವಾನಾಂ ತ್ರಿದಶಾನಾಂ ಪರತ್ರ|
05028008c ಪ್ರಾಜಾಪತ್ಯಂ ತ್ರಿದಿವಂ ಬ್ರಹ್ಮಲೋಕಂ
ನಾಧರ್ಮತಃ ಸಂಜಯ ಕಾಮಯೇ ತತ್||
ಸಂಜಯ! ಈ ಭೂಮಿಯ ಮೇಲೆ ಎಷ್ಟೇ ಸಂಪತ್ತಿದ್ದರೂ, ಅಥವಾ ತ್ರಿದಿವದಲ್ಲಿರುವ ದೇವ ತ್ರಿದಶರರಲ್ಲಿ, ಪ್ರಜಾಪತಿ ಬ್ರಹ್ಮಲೋಕದಲ್ಲಿ ಎಷ್ಟೇ ಸಂಪತ್ತಿರಲಿ ಅವನ್ನು ನಾನು ಅಧರ್ಮದಿಂದ ಮಾತ್ರ ಬಯಸುವವನಲ್ಲ.
05028009a ಧರ್ಮೇಶ್ವರಃ ಕುಶಲೋ ನೀತಿಮಾಂಶ್ಚಾಪಿ
ಉಪಾಸಿತಾ ಬ್ರಾಹ್ಮಣಾನಾಂ ಮನೀಷೀ|
05028009c ನಾನಾವಿಧಾಂಶ್ಚೈವ ಮಹಾಬಲಾಂಶ್ಚ
ರಾಜನ್ಯಭೋಜಾನನುಶಾಸ್ತಿ ಕೃಷ್ಣಃ||
ಧರ್ಮೇಶ್ವರ, ಕುಶಲ, ನೀತಿವಂತ, ಬ್ರಾಹ್ಮಣರನ್ನು ಉಪಾಸಿಸುವ, ಮನೀಷೀ ಕೃಷ್ಣನು ನಾನಾವಿಧದ ಮಹಾಬಲಶಾಲಿಗಳಾದ ರಾಜರಿಗೂ ಭೋಜರಿಗೂ ಸಲಹೆಗಾರನಾಗಿದ್ದಾನೆ.
05028010a ಯದಿ ಹ್ಯಹಂ ವಿಸೃಜನ್ಸ್ಯಾಮಗರ್ಹ್ಯೋ
ಯುಧ್ಯಮಾನೋ ಯದಿ ಜಹ್ಯಾಂ ಸ್ವಧರ್ಮಂ|
05028010c ಮಹಾಯಶಾಃ ಕೇಶವಸ್ತದ್ಬ್ರವೀತು
ವಾಸುದೇವಸ್ತೂಭಯೋರರ್ಥಕಾಮಃ||
ನಾನು ಯುದ್ಧವನ್ನು ಬಿಟ್ಟರೆ ತಪ್ಪಿತಸ್ತನಾಗುವುದಿಲ್ಲ ಅಥವಾ ಯುದ್ಧವನ್ನು ಮಾಡಿದರೆ ಸ್ವಧರ್ಮವನ್ನು ತೊರೆದಂತಾಗುವುದಿಲ್ಲ ಎನ್ನುವುದನ್ನು ಮಹಾಯಶಸ್ವಿ ಕೃಷ್ಣನೇ ಹೇಳಲಿ. ವಾಸುದೇವನು ಇಬ್ಬರ ಏಳಿಗೆಯನ್ನೂ ಬಯಸುತ್ತಾನೆ.
05028011a ಶೈನೇಯಾ ಹಿ ಚೈತ್ರಕಾಶ್ಚಾಂಧಕಾಶ್ಚ
ವಾರ್ಷ್ಣೇಯಭೋಜಾಃ ಕೌಕುರಾಃ ಸೃಂಜಯಾಶ್ಚ|
05028011c ಉಪಾಸೀನಾ ವಾಸುದೇವಸ್ಯ ಬುದ್ಧಿಂ
ನಿಗೃಹ್ಯ ಶತ್ರೂನ್ಸುಹೃದೋ ನಂದಯಂತಿ||
ಶೈನ್ಯರು, ಚೈತ್ರರು, ಅಂಧಕರು, ವಾರ್ಷ್ಣೇಯರು, ಭೋಜರು, ಕೌಕುರರು ಮತ್ತು ಸೃಂಜಯರು ವಾಸುದೇವನ ಬುದ್ಧಿಯನ್ನು ಬಳಸಿ ಶತ್ರುಗಳನ್ನು ನಿಗ್ರಹಿಸಿ ಸುಹೃದಯರನ್ನು ಆನಂದಿಸುತ್ತಿದ್ದಾರೆ.
05028012a ವೃಷ್ಣ್ಯಂಧಕಾ ಹ್ಯುಗ್ರಸೇನಾದಯೋ ವೈ
ಕೃಷ್ಣಪ್ರಣೀತಾಃ ಸರ್ವ ಏವೇಂದ್ರಕಲ್ಪಾಃ|
05028012c ಮನಸ್ವಿನಃ ಸತ್ಯಪರಾಕ್ರಮಾಶ್ಚ
ಮಹಾಬಲಾ ಯಾದವಾ ಭೋಗವಂತಃ||
ಇಂದ್ರಕಲ್ಪರಾದ ವೃಷ್ಣಿ, ಅಂಧಕ, ಉಗ್ರಸೇನಾದಿಗಳು ಎಲ್ಲರೂ ಕೃಷ್ಣನ ಮಾರ್ಗದರ್ಶನದಂತೆ ನಡೆಯುತ್ತಾರೆ. ಮಹಾಬಲಿ ಯಾದವರು ಮನಸ್ವಿಗಳು, ಸತ್ಯಪರಾಕ್ರಮಿಗಳು ಮತ್ತು ಭೋಗವಂತರು.
05028013a ಕಾಶ್ಯೋ ಬಭ್ರುಃ ಶ್ರಿಯಮುತ್ತಮಾಂ ಗತೋ
ಲಬ್ಧ್ವಾ ಕೃಷ್ಣಂ ಭ್ರಾತರಮೀಶಿತಾರಂ|
05028013c ಯಸ್ಮೈ ಕಾಮಾನ್ವರ್ಷತಿ ವಾಸುದೇವೋ
ಗ್ರೀಷ್ಮಾತ್ಯಯೇ ಮೇಘ ಇವ ಪ್ರಜಾಭ್ಯಃ||
ಕೃಷ್ಣನನ್ನು ಭ್ರಾತನನ್ನಾಗಿ ಮಾರ್ಗದರ್ಶಕನನ್ನಾಗಿ ಪಡೆದ ಕಾಶಿರಾಜ ಬಭ್ರುವು ಉತ್ತಮ ಶ್ರೀಯನ್ನು ಪಡೆದಿದ್ದಾನೆ. ಬೇಸಗೆಯ ಕೊನೆಯಲ್ಲಿ ಮೋಡಗಳು ಪ್ರಜೆಗಳ ಮೇಲೆ ಮಳೆಸುರಿಸುವಂತೆ ವಾಸುದೇವನು ಅವನ ಆಸೆಗಳನ್ನು ಪೂರೈಸಿದ್ದಾನೆ.
05028014a ಈದೃಶೋಽಯಂ ಕೇಶವಸ್ತಾತ ಭೂಯೋ
ವಿದ್ಮೋ ಹ್ಯೇನಂ ಕರ್ಮಣಾಂ ನಿಶ್ಚಯಜ್ಞಾಂ|
05028014c ಪ್ರಿಯಶ್ಚ ನಃ ಸಾಧುತಮಶ್ಚ ಕೃಷ್ಣೋ
ನಾತಿಕ್ರಮೇ ವಚನಂ ಕೇಶವಸ್ಯ||
ತಾತ! ಕೇಶವನು ಇಂಥವನು! ಅವನಿಗೆ ಕರ್ಮಗಳನ್ನು ನಿಶ್ಚಯಿಸಲು ಗೊತ್ತು ಎನ್ನುವುದು ನಮಗೆ ತಿಳಿದಿದೆ. ಅತ್ಯಂತ ಸಾಧುವಾದ ಕೃಷ್ಣನು ನಮ್ಮೆಲ್ಲರ ಪ್ರಿಯ. ಕೇಶವನ ಮಾತನ್ನು ಮೀರುವುದಿಲ್ಲ.”
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸಂಜಯಯಾನ ಪರ್ವಣಿ ಯುಧಿಷ್ಠಿರವಾಕ್ಯೇ ಅಷ್ಟಾವಿಂಶೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸಂಜಯಯಾನ ಪರ್ವದಲ್ಲಿ ಯುಧಿಷ್ಠಿರವಾಕ್ಯದಲ್ಲಿ ಇಪ್ಪತ್ತೆಂಟನೆಯ ಅಧ್ಯಾಯವು.