ಉದ್ಯೋಗ ಪರ್ವ: ಕರ್ಣಉಪನಿವಾದ ಪರ್ವ
೧೪೨
ಕುಂತಿಯು ಕರ್ಣನನ್ನು ಭೇಟಿಮಾಡಿದುದು
ಕುರುಗಳ ವೀರನಾಶದ ಕುರಿತು ತನಗಿರುವ ಚಿಂತೆಯನ್ನು ವಿದುರನು ಕುಂತಿಯಲ್ಲಿ ಹೇಳಿಕೊಂಡಿದುದು (೧-೯). ಅವನ ಮಾತುಗಳನ್ನು ಕೇಳಿ ಚಿಂತಿತಳಾದ ಕುಂತಿಯು ತನ್ನ ಮಗ ಕರ್ಣನನ್ನು ನೆನಪಿಸಿಕೊಂಡು, ಅವನನ್ನು ಭೇಟಿಯಾಗಲು ಯೋಚಿಸಿದುದು (೧೦-೨೫). ಕುಂತಿಯು ಕರ್ಣನನ್ನು ಭೇಟಿಯಾದುದು (೨೬-೩೦).
05142001 ವೈಶಂಪಾಯನ ಉವಾಚ|
05142001a ಅಸಿದ್ಧಾನುನಯೇ ಕೃಷ್ಣೇ ಕುರುಭ್ಯಃ ಪಾಂಡವಾನ್ಗತೇ|
05142001c ಅಭಿಗಮ್ಯ ಪೃಥಾಂ ಕ್ಷತ್ತಾ ಶನೈಃ ಶೋಚನ್ನಿವಾಬ್ರವೀತ್||
ವೈಶಂಪಾಯನನು ಹೇಳಿದನು: “ಸಂಧಾನ ಪ್ರಯತ್ನವು ಯಶಸ್ವಿಯಾಗದೇ ಕೃಷ್ಣನು ಕುರುಗಳಿಂದ ಪಾಂಡವರ ಕಡೆ ಹೊರಟುಹೋದನಂತರ ಕ್ಷತ್ತನು ಪೃಥೆಯ ಬಳಿ ಹೋಗಿ ಶೋಕದಿಂದ ಮೆಲ್ಲನೇ ಹೀಗೆ ಹೇಳಿದನು:
05142002a ಜಾನಾಸಿ ಮೇ ಜೀವಪುತ್ರೇ ಭಾವಂ ನಿತ್ಯಮನುಗ್ರಹೇ|
05142002c ಕ್ರೋಶತೋ ನ ಚ ಗೃಹ್ಣೀತೇ ವಚನಂ ಮೇ ಸುಯೋಧನಃ||
“ಜೀವಪುತ್ರೇ! ನನ್ನ ಭಾವವು ನಿತ್ಯವೂ ಅನುಗ್ರಹವಾದುದು ಎಂದು ನಿನಗೆ ತಿಳಿದಿದೆ. ನಾನು ಕೂಗಿಕೊಂಡರೂ ಕೂಡ ಸುಯೋಧನನು ನನ್ನ ಮಾತನ್ನು ಸ್ವೀಕರಿಸುವುದಿಲ್ಲ.
05142003a ಉಪಪನ್ನೋ ಹ್ಯಸೌ ರಾಜಾ ಚೇದಿಪಾಂಚಾಲಕೇಕಯೈಃ|
05142003c ಭೀಮಾರ್ಜುನಾಭ್ಯಾಂ ಕೃಷ್ಣೇನ ಯುಯುಧಾನಯಮೈರಪಿ||
05142004a ಉಪಪ್ಲವ್ಯೇ ನಿವಿಷ್ಟೋಽಪಿ ಧರ್ಮಮೇವ ಯುಧಿಷ್ಠಿರಃ|
05142004c ಕಾಂಕ್ಷತೇ ಜ್ಞಾತಿಸೌಹಾರ್ದಾದ್ಬಲವಾನ್ದುರ್ಬಲೋ ಯಥಾ||
ಅಲ್ಲಿ ಚೇದಿ, ಪಾಂಚಾಲ, ಕೇಕಯ, ಭೀಮಾರ್ಜುನರು, ಕೃಷ್ಣ, ಯುಯುಧಾನರೊಡನೆ ಉಪಪ್ಲವದಲ್ಲಿ ನೆಲೆಸಿರುವ ರಾಜಾ ಯುಧಿಷ್ಠಿರನು ಜ್ಞಾತಿಸೌಹಾರ್ದತೆಯಿಂದ ಬಲವಂತನಾಗಿದ್ದರೂ ದುರ್ಬಲನಂತೆ ಧರ್ಮವನ್ನೇ ಬಯಸುತ್ತಿದ್ದಾನೆ.
05142005a ರಾಜಾ ತು ಧೃತರಾಷ್ಟ್ರೋಽಯಂ ವಯೋವೃದ್ಧೋ ನ ಶಾಮ್ಯತಿ|
05142005c ಮತ್ತಃ ಪುತ್ರಮದೇನೈವ ವಿಧರ್ಮೇ ಪಥಿ ವರ್ತತೇ||
ಇಲ್ಲಿ ರಾಜಾ ಧೃತರಾಷ್ಟ್ರನು ವಯೋವೃದ್ಧನಾದರೂ ಶಾಂತಿಯನ್ನು ತರುತ್ತಿಲ್ಲ. ಪುತ್ರಮದದಿಂದ ಮತ್ತನಾಗಿ ವಿಧರ್ಮದ ಮಾರ್ಗದಲ್ಲಿ ನಡೆಯುತ್ತಿದ್ದಾನೆ.
05142006a ಜಯದ್ರಥಸ್ಯ ಕರ್ಣಸ್ಯ ತಥಾ ದುಃಶಾಸನಸ್ಯ ಚ|
05142006c ಸೌಬಲಸ್ಯ ಚ ದುರ್ಬುದ್ಧ್ಯಾ ಮಿಥೋಭೇದಃ ಪ್ರವರ್ತತೇ||
ಜಯದ್ರಥ, ಕರ್ಣ, ದುಃಶಾಸನ ಮತ್ತು ಸೌಬಲರ ದುರ್ಬುದ್ಧಿಯಿಂದ ಮಿಥೋಭೇದವು ಮುಂದುವರೆಯುತ್ತಿದೆ.
05142007a ಅಧರ್ಮೇಣ ಹಿ ಧರ್ಮಿಷ್ಠಂ ಹೃತಂ ವೈ ರಾಜ್ಯಮೀದೃಶಂ|
05142007c ಯೇಷಾಂ ತೇಷಾಮಯಂ ಧರ್ಮಃ ಸಾನುಬಂಧೋ ಭವಿಷ್ಯತಿ||
ಆದರೆ ಅಧರ್ಮದಿಂದ ಆ ಧರ್ಮಿಷ್ಠನ ರಾಜ್ಯವನ್ನು ಈ ರೀತಿ ಅಪಹರಿಸಿದವರನ್ನು ಧರ್ಮವು ಹಿಂದೆ ಹಾಕುತ್ತದೆ.
05142008a ಹ್ರಿಯಮಾಣೇ ಬಲಾದ್ಧರ್ಮೇ ಕುರುಭಿಃ ಕೋ ನ ಸಂಜ್ವರೇತ್|
05142008c ಅಸಾಮ್ನಾ ಕೇಶವೇ ಯಾತೇ ಸಮುದ್ಯೋಕ್ಷ್ಯಂತಿ ಪಾಂಡವಾಃ||
ಕುರುಗಳು ಬಲಾತ್ಕಾರವಾಗಿ ಧರ್ಮವನ್ನು ಅಪಹರಿಸಿದಾಗ ಯಾರು ತಾನೆ ಕೋಪಗೊಳ್ಳುವುದಿಲ್ಲ? ಕೇಶವನನ್ನು ಸೇರಿಕೊಂಡು ಪಾಂಡವರು ಬಂದು ಸದೆಬಡಿಯುತ್ತಾರೆ.
05142009a ತತಃ ಕುರೂಣಾಮನಯೋ ಭವಿತಾ ವೀರನಾಶನಃ|
05142009c ಚಿಂತಯನ್ನ ಲಭೇ ನಿದ್ರಾಮಹಃಸ್ಸು ಚ ನಿಶಾಸು ಚ||
ಆಗ ಈ ಕುರುಗಳ ವೀರನಾಶನವಾಗುತ್ತದೆ. ಇದನ್ನು ಚಿಂತಿಸಿ ನನಗೆ ಹಗಲಾಗಲೀ ರಾತ್ರಿಯಾಗಲೀ ನಿದ್ದೆಯೇ ಬರುವುದಿಲ್ಲ.”
05142010a ಶ್ರುತ್ವಾ ತು ಕುಂತೀ ತದ್ವಾಕ್ಯಮರ್ಥಕಾಮೇನ ಭಾಷಿತಂ|
05142010c ಅನಿಷ್ಟನಂತೀ ದುಃಖಾರ್ತಾ ಮನಸಾ ವಿಮಮರ್ಶ ಹ||
ಒಳ್ಳೆಯದನ್ನೇ ಬಯಸಿ ಅವನಾಡಿದ ಮಾತನ್ನು ಕೇಳಿದ ಕುಂತಿಯು ಏನನ್ನೋ ಕಳೆದುಕೊಳ್ಳುವಳಂತೆ ದುಃಖಾರ್ತಳಾಗಿ ಮನಸ್ಸಿನಲ್ಲಿಯೇ ವಿಮರ್ಶಿಸಿದಳು:
05142011a ಧಿಗಸ್ತ್ವರ್ಥಂ ಯತ್ಕೃತೇಽಯಂ ಮಹಾಂ ಜ್ಞಾತಿವಧೇ ಕ್ಷಯಃ|
05142011c ವರ್ತ್ಸ್ಯತೇ ಸುಹೃದಾಂ ಹ್ಯೇಷಾಂ ಯುದ್ಧೇಽಸ್ಮಿನ್ವೈ ಪರಾಭವಃ||
“ಯಾವುದಕ್ಕಾಗಿ ಈ ಮಹಾ ಕ್ಷಯಕಾರಕ ಜ್ಞಾತಿವಧೆಯು ನಡೆಯುತ್ತದೆಯೋ ಆ ಸಂಪತ್ತಿಗೆ ಧಿಕ್ಕಾರ! ಈ ಯುದ್ಧದಲ್ಲಿ ಸುಹೃದಯರ ವಧೆಯಾಗುತ್ತದೆ ಮತ್ತು ಪರಾಭವವೇ ದೊರೆಯುತ್ತದೆ.
05142012a ಪಾಂಡವಾಶ್ಚೇದಿಪಾಂಚಾಲಾ ಯಾದವಾಶ್ಚ ಸಮಾಗತಾಃ|
05142012c ಭಾರತೈರ್ಯದಿ ಯೋತ್ಸ್ಯಂತಿ ಕಿಂ ನು ದುಃಖಮತಃ ಪರಂ||
ಪಾಂಡವರು ಚೇದಿ, ಪಾಂಚಾಲ ಮತ್ತು ಯಾದವರೊಂದಿಗೆ ಸೇರಿಕೊಂಡು ಭಾರತರೊಂದಿಗೆ ಹೋರಾಡುತ್ತಾರೆ ಎಂದರೆ ಇದಕ್ಕಿಂತಲೂ ಹೆಚ್ಚಿನ ದುಃಖವು ಯಾವುದಿದೆ?
05142013a ಪಶ್ಯೇ ದೋಷಂ ಧ್ರುವಂ ಯುದ್ಧೇ ತಥಾ ಯುದ್ಧೇ ಪರಾಭವಂ|
05142013c ಅಧನಸ್ಯ ಮೃತಂ ಶ್ರೇಯೋ ನ ಹಿ ಜ್ಞಾತಿಕ್ಷಯೇ ಜಯಃ||
ಯುದ್ಧದಲ್ಲಿಯ ಪರಾಭವದಂತೆ ಯುದ್ಧದಲ್ಲಿಯೇ ದೋಷವನ್ನು ಕಾಣುತ್ತಿದ್ದೇನೆ. ಜ್ಞಾತಿಕ್ಷಯದಲ್ಲಿ ಜಯವನ್ನು ಪಡೆಯುವುದಕ್ಕಿಂತ ಧನವಿಲ್ಲದೇ ಸಾಯುವುದೇ ಶ್ರೇಯಸ್ಕರವು.
05142014a ಪಿತಾಮಹಃ ಶಾಂತನವ ಆಚಾರ್ಯಶ್ಚ ಯುಧಾಂ ಪತಿಃ|
05142014c ಕರ್ಣಶ್ಚ ಧಾರ್ತರಾಷ್ಟ್ರಾರ್ಥಂ ವರ್ಧಯಂತಿ ಭಯಂ ಮಮ||
ಧಾರ್ತರಾಷ್ಟ್ರರ ಕಡೆಯಿರುವ ಪಿತಾಮಹ ಶಾಂತನವ, ಯೋಧರ ನಾಯಕ ಆಚಾರ್ಯ, ಮತ್ತು ಕರ್ಣ ಇವರು ನನ್ನ ಭಯವನ್ನು ಹೆಚ್ಚಿಸುತ್ತಿದ್ದಾರೆ.
05142015a ನಾಚಾರ್ಯಃ ಕಾಮವಾಂ ಶಿಷ್ಯೈರ್ದ್ರೋಣೋ ಯುಧ್ಯೇತ ಜಾತು ಚಿತ್|
05142015c ಪಾಂಡವೇಷು ಕಥಂ ಹಾರ್ದಂ ಕುರ್ಯಾನ್ನ ಚ ಪಿತಾಮಹಃ||
ಆಚಾರ್ಯ ದ್ರೋಣನು ಶಿಷ್ಯರ ಮೇಲಿನ ಪ್ರೀತಿಯಿಂದ ಯುದ್ಧವನ್ನು ಮಾಡದೇ ಇರಬಹುದು. ಪಿತಾಮಹನೂ ಕೂಡ ಪಾಂಡವರೊಂದಿಗೆ ಯುದ್ಧಮಾಡಲು ಹೇಗೆ ಮನಸ್ಸು ಮಾಡುತ್ತಾನೆ?
05142016a ಅಯಂ ತ್ವೇಕೋ ವೃಥಾದೃಷ್ಟಿರ್ಧಾರ್ತರಾಷ್ಟ್ರಸ್ಯ ದುರ್ಮತೇಃ|
05142016c ಮೋಹಾನುವರ್ತೀ ಸತತಂ ಪಾಪೋ ದ್ವೇಷ್ಟಿ ಚ ಪಾಂಡವಾನ್||
ತಿಳಿಯದೇ ದುರ್ಮತಿ ಧಾರ್ತರಾಷ್ಟ್ರನನ್ನು ಅನುಸರಿಸಿ ಪಾಂಡವರನ್ನು ಸತತವಾಗಿ ಪಾಪದಿಂದ ದ್ವೇಷಿಸುವವನು ಇವ (ಕರ್ಣ) ನು ಒಬ್ಬನೇ!
05142017a ಮಹತ್ಯನರ್ಥೇ ನಿರ್ಬಂಧೀ ಬಲವಾಂಶ್ಚ ವಿಶೇಷತಃ|
05142017c ಕರ್ಣಃ ಸದಾ ಪಾಂಡವಾನಾಂ ತನ್ಮೇ ದಹತಿ ಸಾಂಪ್ರತಂ||
ಪಾಂಡವರಿಗೆ ಸದಾ ಮಹಾ ಕೆಡುಕನ್ನು ಮಾಡಲು ಬದ್ಧನಾಗಿರುವ ವಿಶೇಷವಾಗಿ ಬಲವಂತನಾಗಿರುವ ಕರ್ಣನು ನನ್ನನ್ನು ಸುಡುತ್ತಿದ್ದಾನೆ.
05142018a ಆಶಂಸೇ ತ್ವದ್ಯ ಕರ್ಣಸ್ಯ ಮನೋಽಹಂ ಪಾಂಡವಾನ್ಪ್ರತಿ|
05142018c ಪ್ರಸಾದಯಿತುಮಾಸಾದ್ಯ ದರ್ಶಯಂತೀ ಯಥಾತಥಂ||
ಇಂದು ಕರ್ಣನ ಕರುಣೆಯನ್ನು ಬೇಡಿ ಬಳಿಹೋಗಿ ನಡೆದುದನ್ನು ತೋರಿಸಿಕೊಟ್ಟು ಅವನ ಮನಸ್ಸನ್ನು ಪಾಂಡವರ ಕಡೆ ಸೆಳೆಯುತ್ತೇನೆ.
05142019a ತೋಷಿತೋ ಭಗವಾನ್ಯತ್ರ ದುರ್ವಾಸಾ ಮೇ ವರಂ ದದೌ|
05142019c ಆಹ್ವಾನಂ ದೇವಸಂಯುಕ್ತಂ ವಸಂತ್ಯಾಃ ಪಿತೃವೇಶ್ಮನಿ||
ಒಂದು ವಸಂತದಲ್ಲಿ ತಂದೆಯ ಮನೆಯಲ್ಲಿರುವಾಗ ಭಗವಾನ್ ದುರ್ವಾಸನು ಸಂತೃಪ್ತನಾಗಿ ದೇವತೆಗಳನ್ನು ಆಹ್ವಾನಿಸಬಲ್ಲ ವರವನ್ನು ನನಗೆ ನೀಡಿದ್ದನು.
05142020a ಸಾಹಮಂತಃಪುರೇ ರಾಜ್ಞಾಃ ಕುಂತಿಭೋಜಪುರಸ್ಕೃತಾ|
05142020c ಚಿಂತಯಂತೀ ಬಹುವಿಧಂ ಹೃದಯೇನ ವಿದೂಯತಾ||
ಆಗ ರಾಜಾ ಕುಂತಿಭೋಜನಿಂದ ಪುರಸ್ಕೃತಳಾದ ನಾನು ಅಂತಃಪುರದಲ್ಲಿ ಹೃದಯದ ನೋವಿನಿಂದ ಬಹುವಿಧವಾಗಿ ಚಿಂತಿಸುತ್ತಿದ್ದೆ.
05142021a ಬಲಾಬಲಂ ಚ ಮಂತ್ರಾಣಾಂ ಬ್ರಾಹ್ಮಣಸ್ಯ ಚ ವಾಗ್ಬಲಂ|
05142021c ಸ್ತ್ರೀಭಾವಾದ್ಬಾಲಭಾವಾಚ್ಚ ಚಿಂತಯಂತೀ ಪುನಃ ಪುನಃ||
ಮಂತ್ರಗಳ ಬಲಾಬಲವನ್ನೂ ಬ್ರಾಹ್ಮಣನ ವಾಗ್ಬಲವನ್ನೂ ಸ್ತ್ರೀಭಾವದಿಂದ ಮತ್ತು ಬಾಲಭಾವದಿಂದ ಪುನಃ ಪುನಃ ಚಿಂತಿಸತೊಡಗಿದೆನು.
05142022a ಧಾತ್ರ್ಯಾ ವಿಶ್ರಬ್ಧಯಾ ಗುಪ್ತಾ ಸಖೀಜನವೃತಾ ತದಾ|
05142022c ದೋಷಂ ಪರಿಹರಂತೀ ಚ ಪಿತುಶ್ಚಾರಿತ್ರರಕ್ಷಿಣೀ||
05142023a ಕಥಂ ನು ಸುಕೃತಂ ಮೇ ಸ್ಯಾನ್ನಾಪರಾಧವತೀ ಕಥಂ|
05142023c ಭವೇಯಮಿತಿ ಸಂಚಿಂತ್ಯ ಬ್ರಾಹ್ಮಣಂ ತಂ ನಮಸ್ಯ ಚ||
05142024a ಕೌತೂಹಲಾತ್ತು ತಂ ಲಬ್ಧ್ವಾ ಬಾಲಿಶ್ಯಾದಾಚರಂ ತದಾ|
05142024c ಕನ್ಯಾ ಸತೀ ದೇವಮರ್ಕಮಾಸಾದಯಮಹಂ ತತಃ||
ಆಗ ನಂಬಿಕೆಯಿರುವ ಧಾತ್ರಿಕೆ ಮತ್ತು ಗುಪ್ತ ಸಖೀಜನರೊಂದಿಗೆ ಆವೃತಳಾದ ನಾನು, ದೂಷಿತಳಾಗಬಾರದೆಂದು, ತಂದೆಯ ಚಾರಿತ್ರವನ್ನು ರಕ್ಷಿಸಬೇಕೆಂದು, ನನಗೆ ಒಳ್ಳೆಯದಾಗುವ ಹಾಗೆ ಹೇಗೆ ನಡೆದುಕೊಳ್ಳಲಿ, ನನ್ನಿಂದ ಹೇಗೆ ಅಪರಾಧವಾಗದೇ ಇರಲಿ ಎಂದು ಯೋಚಿಸುತ್ತಾ, ಆ ಬ್ರಾಹ್ಮಣನನ್ನು ನಮಸ್ಕರಿಸಿ, ಬಾಲಿಕೆಯ ಕುತೂಹಲದಿಂದ ಕನ್ಯೆ ಸತೀ ನಾನು ದೇವ ಅರ್ಕನನ್ನು ಹತ್ತಿರ ಕರೆದೆನು.
05142025a ಯೋಽಸೌ ಕಾನೀನಗರ್ಭೋ ಮೇ ಪುತ್ರವತ್ಪರಿವರ್ತಿತಃ|
05142025c ಕಸ್ಮಾನ್ನ ಕುರ್ಯಾದ್ವಚನಂ ಪಥ್ಯಂ ಭ್ರಾತೃಹಿತಂ ತಥಾ||
ಕನ್ಯೆಯಾಗಿದ್ದಾಗ ನನ್ನ ಗರ್ಭದಲ್ಲಿದ್ದ, ಪುತ್ರನಂತೆ ಪರಿವರ್ತಿತನಾದ ಅವನು ಈಗ ಏಕೆ ನನ್ನ ಮಾತಿನಂತೆ ಭ್ರಾತೃಹಿತನಾಗಿ ಬೇಕಾದುದನ್ನು ಮಾಡುವುದಿಲ್ಲ?”
05142026a ಇತಿ ಕುಂತೀ ವಿನಿಶ್ಚಿತ್ಯ ಕಾರ್ಯಂ ನಿಶ್ಚಿತಮುತ್ತಮಂ|
05142026c ಕಾರ್ಯಾರ್ಥಮಭಿನಿರ್ಯಾಯ ಯಯೌ ಭಾಗೀರಥೀಂ ಪ್ರತಿ||
ಕುಂತಿಯು ಈ ರೀತಿ ಯೋಚಿಸಿ ಆ ಉತ್ತಮ ಕಾರ್ಯವನ್ನು ಮಾಡಲು ನಿಶ್ಚಯಿಸಿದಳು. ಕಾರ್ಯಾರ್ಥಕ್ಕಾಗಿ ಯಾರಿಗೂ ತಿಳಿಯದಂತೆ ಭಾಗೀರಥಿಯ ಕಡೆ ನಡೆದಳು.
05142027a ಆತ್ಮಜಸ್ಯ ತತಸ್ತಸ್ಯ ಘೃಣಿನಃ ಸತ್ಯಸಂಗಿನಃ|
05142027c ಗಂಗಾತೀರೇ ಪೃಥಾಶೃಣ್ವದುಪಾಧ್ಯಯನನಿಸ್ವನಂ||
ಗಂಗಾತೀರದಲ್ಲಿ ಪೃಥೆಯು ದಯಾಳು, ಸತ್ಯಸಂಗಿ ಮಗನು ಪಠಿಸುತ್ತಿರುವ ಮಂತ್ರಗಳ ಸದ್ದನ್ನು ಕೇಳಿದಳು.
05142028a ಪ್ರಾಙ್ಮುಖಸ್ಯೋರ್ಧ್ವಬಾಹೋಃ ಸಾ ಪರ್ಯತಿಷ್ಠತ ಪೃಷ್ಠತಃ|
05142028c ಜಪ್ಯಾವಸಾನಂ ಕಾರ್ಯಾರ್ಥಂ ಪ್ರತೀಕ್ಷಂತೀ ತಪಸ್ವಿನೀ||
ಅವನು ಬಾಹುಗಳನ್ನು ಮೇಲೆತ್ತಿ ಪೂರ್ವಾಭಿಮುಖವಾಗಿ ನಿಂತಿರಲು ಆ ತಪಸ್ವಿನಿಯು ಅವನ ಹಿಂದೆ ಹೋಗಿ ಅವನ ಜಪವು ಮುಗಿಯುವುದಕ್ಕೆ ಮತ್ತು ತನ್ನ ಕಾರ್ಯವು ಸಿದ್ಧಿಯಾಗಲು ಕಾದು ನಿಂತಳು.
05142029a ಅತಿಷ್ಠತ್ಸೂರ್ಯತಾಪಾರ್ತಾ ಕರ್ಣಸ್ಯೋತ್ತರವಾಸಸಿ|
05142029c ಕೌರವ್ಯಪತ್ನೀ ವಾರ್ಷ್ಣೇಯೀ ಪದ್ಮಮಾಲೇವ ಶುಷ್ಯತೀ||
ಕರ್ಣನ ಉತ್ತರೀಯದ ನೆರಳಲ್ಲಿ ನಿಂತಿದ್ದ ಆ ಕೌರವಪತ್ನಿ ವಾರ್ಷ್ಣೇಯಿಯು ಸೂರ್ಯನ ತಾಪದಿಂದ ಬಳಲಿ ಒಣಗಿದ್ದ ಪದ್ಮಮಾಲೆಯಂತೆ ತೋರಿದಳು.
05142030a ಆ ಪೃಷ್ಠತಾಪಾಜ್ಜಪ್ತ್ವಾ ಸ ಪರಿವೃತ್ಯ ಯತವ್ರತಃ|
05142030c ದೃಷ್ಟ್ವಾ ಕುಂತೀಮುಪಾತಿಷ್ಠದಭಿವಾದ್ಯ ಕೃತಾಂಜಲಿಃ|
05142030e ಯಥಾನ್ಯಾಯಂ ಮಹಾತೇಜಾ ಮಾನೀ ಧರ್ಮಭೃತಾಂ ವರಃ||
ಸೂರ್ಯನ ಕಿರಣಗಳು ಬೆನ್ನನ್ನು ಸುಡುವವರೆಗೆ ಆ ಯತವ್ರತನು ಜಪಿಸುತಿದ್ದನು. ಹಿಂದೆ ನಿಂತಿದ್ದ ಕುಂತಿಯನ್ನು ನೋಡಿ ಯಥಾನ್ಯಾಯವಾಗಿ ಆ ಮಹಾತೇಜಸ್ವಿ ಮಾನಿನೀ ಧರ್ಮಭೃತರಲ್ಲಿ ಶ್ರೇಷ್ಠನು ಕೈಮುಗಿದು ನಮಸ್ಕರಿಸಿದನು.
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಕರ್ಣಉಪನಿವಾದ ಪರ್ವಣಿ ಕುಂತೀಕರ್ಣಸಮಾಗಮೇ ದ್ವಿಚತ್ವಾರಿಂಶದಧಿಕಶತತಮೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಕರ್ಣಉಪನಿವಾದ ಪರ್ವದಲ್ಲಿ ಕುಂತೀಕರ್ಣಸಮಾಗಮದಲ್ಲಿ ನೂರಾನಲ್ವತ್ತೆರಡನೆಯ ಅಧ್ಯಾಯವು.