ಶಾಂತಿ ಪರ್ವ: ರಾಜಧರ್ಮ ಪರ್ವ
೧೦೫
ಕಾಲಕವೃಕ್ಷೀಯ
ರಾಜ್ಯದಿಂದಲೂ, ಸೈನಿಕರಿಂದಲೂ, ಸ್ವಜನರಿಂದಲೂ ವಂಚಿತನಾದ ಕ್ಷೇಮದರ್ಶಿಗೆ ಕಾಲಕವೃಕ್ಷೀಯನ ವೈರಾಗ್ಯೋಪದೇಶ (1-53).
12105001 ಯುಧಿಷ್ಠಿರ ಉವಾಚ|
12105001a ಧಾರ್ಮಿಕೋಽರ್ಥಾನಸಂಪ್ರಾಪ್ಯ ರಾಜಾಮಾತ್ಯೈಃ ಪ್ರಬಾಧಿತಃ|
12105001c ಚ್ಯುತಃ ಕೋಶಾಚ್ಚ ದಂಡಾಚ್ಚ ಸುಖಮಿಚ್ಚನ್ಕಥಂ ಚರೇತ್||
ಯುಧಿಷ್ಠಿರನು ಹೇಳಿದನು: “ಧಾರ್ಮಿಕನಾಗಿದ್ದರೂ ಸಂಪತ್ತನ್ನು ಕಳೆದುಕೊಂಡ, ಆಮಾತ್ಯರಿಂದ ಬಾಧಿತನಾದ, ಕೋಶ-ಸೈನ್ಯಗಳನ್ನು ಕಳೆದುಕೊಂಡ ರಾಜನು ಸುಖವನ್ನು ಬಯಸಿ ಏನು ಮಾಡಬೇಕು?”
12105002 ಭೀಷ್ಮ ಉವಾಚ|
12105002a ಅತ್ರಾಯಂ ಕ್ಷೇಮದರ್ಶೀಯಮಿತಿಹಾಸೋಽನುಗೀಯತೇ|
12105002c ತತ್ತೇಽಹಂ ಸಂಪ್ರವಕ್ಷ್ಯಾಮಿ ತನ್ನಿಬೋಧ ಯುಧಿಷ್ಠಿರ||
ಭೀಷ್ಮನು ಹೇಳಿದನು: “ಯುಧಿಷ್ಠಿರ! ಇದಕ್ಕೆ ಸಂಬಂಧಿಸಿದಂತೆ ಕ್ಷೇಮದರ್ಶೀಯ ಎಂಬ ಇತಿಹಾಸವನ್ನು ಹೇಳುತ್ತಾರೆ. ಅದನ್ನೇ ನಾನು ಹೇಳುತ್ತೇನೆ. ಕೇಳು.
12105003a ಕ್ಷೇಮದರ್ಶಂ ನೃಪಸುತಂ ಯತ್ರ ಕ್ಷೀಣಬಲಂ ಪುರಾ|
12105003c ಮುನಿಃ ಕಾಲಕವೃಕ್ಷೀಯ ಆಜಗಾಮೇತಿ ನಃ ಶ್ರುತಮ್|
12105003e ತಂ ಪಪ್ರಚ್ಚೋಪಸಂಗೃಹ್ಯ ಕೃಚ್ಚ್ರಾಮಾಪದಮಾಸ್ಥಿತಃ||
ಹಿಂದೆ ನೃಪಸುತ ಕ್ಷೇಮದರ್ಶೀ ಎನ್ನುವವನು ಕ್ಷೀಣಬಲನಾಗಿದ್ದನು. ಮಹಾ ಆಪತ್ತಿನಲ್ಲಿ ಸಿಲುಕಿದ್ದ ಅವನು ಮುನಿ ಕಾಲಕವೃಕ್ಷೀಯನ ಬಳಿ ಹೋಗಿ ಸಾಷ್ಟಾಂಗ ಪ್ರಣಾಮ ಮಾಡಿ ಅವನನ್ನು ಹೀಗೆ ಪ್ರಶ್ನಿಸಿದನು ಎಂದು ಕೇಳಿದ್ದೇವೆ.
12105004a ಅರ್ಥೇಷು ಭಾಗೀ ಪುರುಷ ಈಹಮಾನಃ ಪುನಃ ಪುನಃ|
12105004c ಅಲಬ್ಧ್ವಾ ಮದ್ವಿಧೋ ರಾಜ್ಯಂ ಬ್ರಹ್ಮನ್ಕಿಂ ಕರ್ತುಮರ್ಹತಿ||
“ಬ್ರಹ್ಮನ್! ಪುರುಷನು ಅರ್ಥಕ್ಕೆ ಭಾಗಿಯಾಗಿದ್ದಾನೆ. ಆದರೆ ಪುನಃ ಪುನಃ ಅರ್ಥವನ್ನು ಅಪೇಕ್ಷಿಸುತ್ತಿದ್ದರೂ ಅರ್ಥವನ್ನಾಗಲೀ ರಾಜ್ಯವನ್ನಾಗಲೀ ಪಡೆದುಕೊಳ್ಳಲು ಸಾಧ್ಯವಾಗದೇ ಇದ್ದ ನನ್ನಂಥವನು ಏನು ಮಾಡಬೇಕು?
12105005a ಅನ್ಯತ್ರ ಮರಣಾತ್ ಸ್ತೇಯಾದನ್ಯತ್ರ[1] ಪರಸಂಶ್ರಯಾತ್|
12105005c ಕ್ಷುದ್ರಾದನ್ಯತ್ರ ಚಾಚಾರಾತ್ತನ್ಮಮಾಚಕ್ಷ್ವ ಸತ್ತಮ||
ಸತ್ತಮ! ಆತ್ಮಹತ್ಯೆ, ಕಳ್ಳತನ, ಪರಾಶ್ರಯ ಮತ್ತು ಕ್ಷುದ್ರ ವ್ಯವಹಾರಗಳನ್ನು ಬಿಟ್ಟು ರಾಜ್ಯ-ಧನ ಸಂಪಾದನೆಗಳಿಗೆ ಬೇರೆ ಯಾವುದಾದರೂ ಉಪಾಯವಿದ್ದರೆ ಅದನ್ನು ನನಗೆ ತಿಳಿಸು.
12105006a ವ್ಯಾಧಿನಾ ಚಾಭಿಪನ್ನಸ್ಯ ಮಾನಸೇನೇತರೇಣ ವಾ|
12105006c ಬಹುಶ್ರುತಃ ಕೃತಪ್ರಜ್ಞಸ್ತ್ವದ್ವಿಧಃ ಶರಣಂ ಭವೇತ್||
ಮಾನಸಿಕ ಮತ್ತು ಇತರ ವ್ಯಾಧಿಗಳಿಂದ ಪೀಡಿತನಾಗಿರುವ ನನಗೆ ಬಹುಶ್ರುತನೂ ಕೃತಪ್ರಜ್ಞನೂ ಆಗಿರುವ ನಿನ್ನಂಥವರೇ ಶರಣ್ಯನಾಗಬೇಕು.
12105007a ನಿರ್ವಿದ್ಯ ಹಿ ನರಃ ಕಾಮಾನ್ನಿಯಮ್ಯ[2] ಸುಖಮೇಧತೇ|
12105007c ತ್ಯಕ್ತ್ವಾ ಪ್ರೀತಿಂ ಚ ಶೋಕಂ ಚ ಲಬ್ಧ್ವಾಪ್ರೀತಿಮಯಂ ವಸು||
ಕಾಮಭೋಗಗಳಿಂದ ವೈರಾಗ್ಯವನ್ನು ಹೊಂದಿ ವಿರಕ್ತನಾದ ಮನುಷ್ಯನು ಪ್ರೀತಿ-ಶೋಕಗಳೆರಡನ್ನೂ ತ್ಯಜಿಸಿ ಜ್ಞಾನಮಯ ಐಶ್ವರ್ಯವನ್ನು ಪಡೆದುಕೊಂಡು ಸುಖಿಯಾಗುತ್ತಾನೆ.
12105008a ಸುಖಮರ್ಥಾಶ್ರಯಂ ಯೇಷಾಮನುಶೋಚಾಮಿ ತಾನಹಮ್|
12105008c ಮಮ ಹ್ಯರ್ಥಾಃ ಸುಬಹವೋ ನಷ್ಟಾಃ ಸ್ವಪ್ನ ಇವಾಗತಾಃ||
ಸುಖವು ಧನವನ್ನೇ ಆಶ್ರಯಿಸಿದೆಯೆಂದು ಭಾವಿಸಿರುವವವರ ವಿಷಯದಲ್ಲಿ ನನಗೆ ಅನುತಾಪವಿದೆ. ನನ್ನಲ್ಲಿದ್ದ ಅಪಾರ್ಯ ಐಶ್ವರ್ಯ-ಸಂಪತ್ತು ಸ್ವಪ್ನದಲ್ಲಿ ಕಂಡ ಸಂಪತ್ತಿನಂತೆ ನಷ್ಟವಾಗಿ ಹೋದವು.
12105009a ದುಷ್ಕರಂ ಬತ ಕುರ್ವಂತಿ ಮಹತೋಽರ್ಥಾಂಸ್ತ್ಯಜಂತಿ ಯೇ|
12105009c ವಯಂ ತ್ವೇನಾನ್ಪರಿತ್ಯಕ್ತುಮಸತೋಽಪಿ ನ ಶಕ್ನುಮಃ||
ತಮ್ಮಲ್ಲಿರುವ ಮಹಾಸಂಪತ್ತನ್ನು ತ್ಯಜಿಸುವವರು ನಿಶ್ಚಯವಾಗಿಯೂ ಅತ್ಯಂತ ದುಷ್ಕರಕಾರ್ಯವನ್ನೇ ಮಾಡುವವರು. ನನ್ನಲ್ಲಿ ಈಗ ಧನದ ಲೇಶವೂ ಉಳಿದಿಲ್ಲ. ಆದರೂ ಧನದ ಮೇಲಿನ ಮೋಹವು ಮಾತ್ರ ನನ್ನನ್ನು ಬಿಟ್ಟು ಹೋಗಿಲ್ಲ. ಧನವನ್ನು ತ್ಯಾಗಮಾಡಲೂ ನಾನು ಶಕ್ಯನಾಗಿಲ್ಲ.
12105010a ಇಮಾಮವಸ್ಥಾಂ ಸಂಪ್ರಾಪ್ತಂ ದೀನಮಾರ್ತಂ ಶ್ರಿಯಶ್ಚ್ಯುತಮ್|
12105010c ಯದನ್ಯತ್ಸುಖಮಸ್ತೀಹ ತದ್ಬ್ರಹ್ಮನ್ನನುಶಾಧಿ ಮಾಮ್||
ಬ್ರಹ್ಮನ್! ಸಂಪತ್ತಿನಿಂದ ಚ್ಯುತನಾಗಿ ಈ ಅವಸ್ಥೆಯನ್ನು ಪಡೆದು ನಾನು ದೀನನೂ ಆರ್ತನೂ ಆಗಿದ್ದೇನೆ. ಅನ್ಯ ರೀತಿಯಲ್ಲಿ ಸುಖವು ದೊರಕುವುದಿದ್ದರೆ ಅದನ್ನು ನನಗೆ ಉಪದೇಶಿಸು!”
12105011a ಕೌಸಲ್ಯೇನೈವಮುಕ್ತಸ್ತು ರಾಜಪುತ್ರೇಣ ಧೀಮತಾ|
12105011c ಮುನಿಃ ಕಾಲಕವೃಕ್ಷೀಯಃ ಪ್ರತ್ಯುವಾಚ ಮಹಾದ್ಯುತಿಃ||
ಧೀಮತ ಕೌಸಲ್ಯ ರಾಜಪುತ್ರನು ಹೀಗೆ ಹೇಳಲು ಮಹಾದ್ಯುತಿ ಮುನಿ ಕಾಲಕವೃಕ್ಷೀಯನು ಉತ್ತರಿಸಿದನು:
12105012a ಪುರಸ್ತಾದೇವ ತೇ ಬುದ್ಧಿರಿಯಂ ಕಾರ್ಯಾ ವಿಜಾನತಃ|
12105012c ಅನಿತ್ಯಂ ಸರ್ವಮೇವೇದಮಹಂ ಚ ಮಮ ಚಾಸ್ತಿ ಯತ್||
“ನಿನ್ನ ಈ ಬುದ್ಧಿಯು ಮೊದಲೇ “ಇವೆಲ್ಲವೂ ಅನಿತ್ಯವಾದವು ಮತ್ತು ಇವುಗಳಲ್ಲಿ ನನ್ನದು ಎನ್ನುವುದು ಯಾವುದೂ ಇಲ್ಲ” ಎನ್ನುವ ವಿಷಯವನ್ನು ತಿಳಿದುಕೊಳ್ಳಬೇಕಾಗಿತ್ತು.
12105013a ಯತ್ಕಿಂಚಿನ್ಮನ್ಯಸೇಽಸ್ತೀತಿ ಸರ್ವಂ ನಾಸ್ತೀತಿ ವಿದ್ಧಿ ತತ್|
12105013c ಏವಂ ನ ವ್ಯಥತೇ ಪ್ರಾಜ್ಞಃ ಕೃಚ್ಚ್ರಾಮಪ್ಯಾಪದಂ ಗತಃ||
ಯಾವುದನ್ನು ನೀನು ಇದೆ ಎಂದು ತಿಳಿದುಕೊಂಡಿರುವೆಯೋ ಅವು ಎಲ್ಲವೂ ಇಲ್ಲ ಎಂದು ತಿಳಿದುಕೋ. ಹೀಗೆ ತಿಳಿದುಕೊಂಡಿರುವವನು ಕಷ್ಟತಮ ಆಪತ್ತಿನಲ್ಲಿ ಸಿಕ್ಕಿಕೊಂಡರೂ ವ್ಯಥಿತನಾಗುವುದಿಲ್ಲ.
12105014a ಯದ್ಧಿ ಭೂತಂ ಭವಿಷ್ಯಚ್ಚ ಧ್ರುವಂ ತನ್ನ ಭವಿಷ್ಯತಿ|
12105014c ಏವಂ ವಿದಿತವೇದ್ಯಸ್ತ್ವಮಧರ್ಮೇಭ್ಯಃ ಪ್ರಮೋಕ್ಷ್ಯಸೇ||
ಹಿಂದೆ ಇದ್ದುದು ಈಗ ಇಲ್ಲ; ಮುಂದೆ ಆಗುವುದೂ ಯಾವುದೂ ಇರುವುದಿಲ್ಲ ಎಂದು ತಿಳಿದುಕೊಂಡಿರಬೇಕಾದುದನ್ನು ತಿಳಿದುಕೊಂಡರೆ ನೀನು ಎಲ್ಲ ವಿಧದ ಅಧರ್ಮಗಳಿಂದಲೂ ಮುಕ್ತನಾಗುವೆ.
12105015a ಯಚ್ಚ ಪೂರ್ವೇ ಸಮಾಹಾರೇ ಯಚ್ಚ ಪೂರ್ವತರೇ ಪರೇ|
12105015c ಸರ್ವಂ ತನ್ನಾಸ್ತಿ ತಚ್ಚೈವ ತಜ್ಞಾತ್ವಾ ಕೋಽನುಸಂಜ್ವರೇತ್||
ಹಿಂದೆ ನಡೆದುಹೋದುದು, ಪರಂಪರಾಗತವಾಗಿ ಬಂದುದು ಎಲ್ಲವೂ ಈಗ ಇಲ್ಲ ಎಂದು ತಿಳಿದುಕೊಂಡವ ಯಾರು ತಾನೇ ಇಂದು ಇಲ್ಲದಿರುವುದಕ್ಕೆ ಚಿಂತಿಸುತ್ತಾನೆ?
12105016a ಭೂತ್ವಾ ಚ ನ ಭವತ್ಯೇತದಭೂತ್ವಾ ಚ ಭವತ್ಯಪಿ|
12105016c ಶೋಕೇ ನ ಹ್ಯಸ್ತಿ ಸಾಮರ್ಥ್ಯಂ ಶೋಕಂ ಕುರ್ಯಾತ್ಕಥಂ ನರಃ||
ಹಿಂದೆ ಇದ್ದುದು ಈಗ ಇಲ್ಲ. ಯಾರಲ್ಲಿ ಇಲ್ಲವೋ ಅವರಿಗೆ ದೊರಕುತ್ತದೆ. ಕಳೆದುಹೋದುದನ್ನು ಹಿಂದೆ ತಂದು ಕೊಡಲು ಶೋಕಕ್ಕೆ ಸಾಮರ್ಥ್ಯವಿಲ್ಲ. ಆದುದರಿಂದ ನರನು ಹೇಗೆ ಶೋಕಪಡುತ್ತಾನೆ?
12105017a ಕ್ವ ನು ತೇಽದ್ಯ ಪಿತಾ ರಾಜನ್ಕ್ವ ನು ತೇಽದ್ಯ ಪಿತಾಮಹಃ|
12105017c ನ ತ್ವಂ ಪಶ್ಯಸಿ ತಾನದ್ಯ ನ ತ್ವಾ ಪಶ್ಯಂತಿ ತೇಽಪಿ ಚ||
ರಾಜನ್! ಇಂದು ನಿನ್ನ ತಂದೆಯೆಲ್ಲಿದ್ದಾನೆ? ಪಿತಾಮಹನೆಲ್ಲಿದ್ದಾನೆ? ನೀನು ಅವರನ್ನು ಈಗ ನೋಡುತ್ತಿಲ್ಲ. ಅವರೂ ನಿನ್ನನ್ನು ನೋಡುತ್ತಿಲ್ಲ ಅಲ್ಲವೇ?
12105018a ಆತ್ಮನೋಽಧ್ರುವತಾಂ ಪಶ್ಯಂಸ್ತಾಂಸ್ತ್ವಂ ಕಿಮನುಶೋಚಸಿ|
12105018c ಬುದ್ಧ್ಯಾ ಚೈವಾನುಬುಧ್ಯಸ್ವ ಧ್ರುವಂ ಹಿ ನ ಭವಿಷ್ಯಸಿ||
ನೀನೇ ಅನಿತ್ಯನು ಎಂದು ನೋಡಿಯೂ ನೀನು ಏಕೆ ಶೋಕಿಸುತ್ತಿರುವೆ? ನಿಶ್ಚಯವಾಗಿಯೂ ನೀನು ಭವಿಷ್ಯದಲ್ಲಿ ಇರುವುದಿಲ್ಲ. ಬುದ್ಧಿಯಿಂದ ಇದನ್ನು ಯೋಚಿಸಿ ತಿಳಿದುಕೋ.
12105019a ಅಹಂ ಚ ತ್ವಂ ಚ ನೃಪತೇ ಶತ್ರವಃ ಸುಹೃದಶ್ಚ ತೇ|
12105019c ಅವಶ್ಯಂ ನ ಭವಿಷ್ಯಾಮಃ ಸರ್ವಂ ಚ ನ ಭವಿಷ್ಯತಿ||
ನೃಪತೇ! ನಾನು, ನೀನು, ಶತ್ರುಗಳು ಮತ್ತು ಸ್ನೇಹಿತರು ಎಲ್ಲರೂ ಅವಶ್ಯವಾಗಿ ಭವಿಷ್ಯದಲ್ಲಿ ಇಲ್ಲವಾಗುತ್ತೇವೆ.
12105020a ಯೇ ತು ವಿಂಶತಿವರ್ಷಾ ವೈ ತ್ರಿಂಶದ್ವರ್ಷಾಶ್ಚ ಮಾನವಾಃ|
12105020c ಅರ್ವಾಗೇವ ಹಿ ತೇ ಸರ್ವೇ ಮರಿಷ್ಯಂತಿ ಶರಚ್ಚತಾತ್||
ಈಗ ಇಪ್ಪತ್ತು ಮತ್ತು ಮೂವತ್ತು ವರ್ಷದ ಮನುಷ್ಯರು ಎಲ್ಲರೂ ಮುಂದಿನ ನೂರು ವರ್ಷಗಳೊಳಗೆಯೇ ಮೃತರಾಗುತ್ತಾರೆ.
12105021a ಅಪಿ ಚೇನ್ಮಹತೋ ವಿತ್ತಾದ್ವಿಪ್ರಮುಚ್ಯೇತ ಪೂರುಷಃ|
12105021c ನೈತನ್ಮಮೇತಿ ತನ್ಮತ್ವಾ ಕುರ್ವೀತ ಪ್ರಿಯಮಾತ್ಮನಃ||
ಹೀಗಿರುವಾಗ ಅಪಾರ ಐಶ್ವರ್ಯವನ್ನು ಪಡೆದುಕೊಂಡರೂ ಇದು ನನ್ನದಲ್ಲ ಎಂದು ತಿಳಿದುಕೊಂಡು ಆತ್ಮಕಲ್ಯಾಣವನ್ನು ಮಾಡಿಕೊಳ್ಳಬೇಕು.
12105022a ಅನಾಗತಂ ಯನ್ನ ಮಮೇತಿ ವಿದ್ಯಾದ್
ಅತಿಕ್ರಾಂತಂ ಯನ್ನ ಮಮೇತಿ ವಿದ್ಯಾತ್|
12105022c ದಿಷ್ಟಂ ಬಲೀಯ ಇತಿ ಮನ್ಯಮಾನಾಸ್
ತೇ ಪಂಡಿತಾಸ್ತತ್ಸತಾಂ ಸ್ಥಾನಮಾಹುಃ||
ಮುಂದೆ ದೊರೆಯುವುದನ್ನೂ ಅದು ನನ್ನದಲ್ಲ ಎಂದು ತಿಳಿಯಬೇಕು. ಕಳೆದುಹೋದುದೂ ನನ್ನದಲ್ಲ ಎಂದು ಭಾವಿಸಬೇಕು. ಅದೃಷ್ಟವೇ ಬಲಿಷ್ಠವಾದುದು ಎಂದು ತಿಳಿದವರು ವಿದ್ವಾಂಸರೇ ಸರಿ. ಅದೇ ಸತ್ಪುರುಷರ ಸ್ಥಾನ ಎಂದು ಹೇಳುತ್ತಾರೆ.
12105023a ಅನಾಢ್ಯಾಶ್ಚಾಪಿ ಜೀವಂತಿ ರಾಜ್ಯಂ ಚಾಪ್ಯನುಶಾಸತೇ|
12105023c ಬುದ್ಧಿಪೌರುಷಸಂಪನ್ನಾಸ್ತ್ವಯಾ ತುಲ್ಯಾಧಿಕಾ ಜನಾಃ||
ಧನಾಡ್ಯರಲ್ಲದವರೂ ಜೀವಿಸುತ್ತಾರೆ. ರಾಜ್ಯವನ್ನೂ ಆಳುತ್ತಾರೆ. ಬುದ್ಧಿ ಪೌರುಷಗಳಲ್ಲಿ ನಿನ್ನ ಸಮನಾದವರೂ ಇದ್ದಾರೆ. ನಿನಗೆ ಮಿಗಿಲಾದವರೂ ಇದ್ದಾರೆ.
12105024a ನ ಚ ತ್ವಮಿವ ಶೋಚಂತಿ ತಸ್ಮಾತ್ತ್ವಮಪಿ ಮಾ ಶುಚಃ|
12105024c ಕಿಂ ನು ತ್ವಂ ತೈರ್ನ ವೈ ಶ್ರೇಯಾಂಸ್ತುಲ್ಯೋ ವಾ ಬುದ್ಧಿಪೌರುಷೈಃ||
ಆದರೆ ಅವರು ನಿನ್ನಂತೆ ಶೋಕಿಸುವುದಿಲ್ಲ. ಆದುದರಿಂದ ನೀನೂ ಶೋಕಿಸಬೇಡ. ಬುದ್ಧಿ-ಪೌರುಷಗಳಲ್ಲಿ ನೀನು ಅವರಿಗಿಂತಲೂ ಅಧಿಕ ಅಥವಾ ಸಮಾನನಾಗಿಲ್ಲವೇ?”
12105025 ರಾಜಪುತ್ರ ಉವಾಚ|
12105025a ಯಾದೃಚ್ಚಿಕಂ ಮಮಾಸೀತ್ತದ್ರಾಜ್ಯಮಿತ್ಯೇವ ಚಿಂತಯೇ|
12105025c ಹ್ರಿಯತೇ ಸರ್ವಮೇವೇದಂ ಕಾಲೇನ ಮಹತಾ ದ್ವಿಜ||
ರಾಜಪುತ್ರನು ಹೇಳಿದನು: “ದ್ವಿಜ! ಅನಾಯಾಸವಾಗಿ ನನ್ನ ವಶವಾಗಿದ್ದ ಅಖಂಡ ಸಾಮ್ರಾಜ್ಯ ಸರ್ವವನ್ನೂ ಮಹಾ ಕಾಲನು ಅಪಹರಿಸಿದನೆಂದು ಭಾವಿಸುತ್ತೇನೆ.
12105026a ತಸ್ಯೈವಂ ಹ್ರಿಯಮಾಣಸ್ಯ ಸ್ರೋತಸೇವ ತಪೋಧನ|
12105026c ಫಲಮೇತತ್ ಪ್ರಪಶ್ಯಾಮಿ ಯಥಾಲಬ್ಧೇನ ವರ್ತಯೇ||
ತಪೋಧನ! ಪ್ರವಾಹವು ಎಲ್ಲವನ್ನೂ ಕೊಚ್ಚಿಕೊಂಡು ಹೋಗುವಂತೆ ನನ್ನ ಎಲ್ಲವೂ ಹೊರಟು ಹೋಗಿವೆ. ಯಾವುದು ಯಾವಾಗ ದೊರಕುವುದೋ ಅದರಿಂದಲೇ ಜೀವನ ನಿರ್ವಹಣೆಯನ್ನು ಮಾಡುತ್ತಿದ್ದೇನೆ.”
12105027 ಮುನಿರುವಾಚ|
12105027a ಅನಾಗತಮತೀತಂ ಚ ಯಥಾ ತಥ್ಯವಿನಿಶ್ಚಯಾತ್|
12105027c ನಾನುಶೋಚಸಿ ಕೌಸಲ್ಯ ಸರ್ವಾರ್ಥೇಷು ತಥಾ ಭವ||
ಮುನಿಯು ಹೇಳಿದನು: “ಕೌಸಲ್ಯ! ಯಥಾತಥ್ಯವನ್ನು ನಿಶ್ಚಯಿಸಿಯಾದಮೇಲೆ ಮುಂದಾಗುವುದಕ್ಕೆ ಮತ್ತು ಆಗಿಹೋದುದಕ್ಕೆ ಶೋಕಿಸಬಾರದು. ಎಲ್ಲ ವಿಷಯಗಳಲ್ಲಿಯೂ ನೀನು ಹಾಗಾಗಬೇಕು.
12105028a ಅವಾಪ್ಯಾನ್ಕಾಮಯಸ್ವಾರ್ಥಾನ್ನಾನವಾಪ್ಯಾನ್ಕದಾ ಚನ|
12105028c ಪ್ರತ್ಯುತ್ಪನ್ನಾನನುಭವನ್ಮಾ ಶುಚಸ್ತ್ವಮನಾಗತಾನ್||
ಪಡೆಯಬಹುದಾದುದನ್ನು ಬಯಸು. ಪಡೆಯಲಸಾಧ್ಯವಾದುದನ್ನು ಎಂದೂ ಬಯಸಬೇಡ. ನೀನು ಪಡೆದಿರುವುದನ್ನು ಉಪಭೋಗಿಸು ಮತ್ತು ಅಲಭ್ಯವಾದವುಗಳಿಗೆ ಶೋಕಿಸಬೇಡ.
12105029a ಯಥಾ ಲಬ್ಧೋಪಪನ್ನಾರ್ಥಸ್ತಥಾ ಕೌಸಲ್ಯ ರಂಸ್ಯಸೇ|
12105029c ಕಚ್ಚಿಚ್ಚುದ್ಧಸ್ವಭಾವೇನ ಶ್ರಿಯಾ ಹೀನೋ ನ ಶೋಚಸಿ||
ಕೌಸಲ್ಯ! ಆಗ ನೀನು ಹೇಗೆ ಉಪಲಬ್ಧವಾದವುಗಳಿಂದ ಸಂತುಷ್ಟನಾಗಿದ್ದೆಯೋ ಹಾಗೆ ಈಗಲೂ ಲಭ್ಯವಾದವುಗಳಿಂದ ಸಂತುಷ್ಟನಾಗು. ಶುದ್ಧಸ್ವಭಾವದವನಾದ ನೀನು ರಾಜ್ಯನಾಶಕ್ಕಾಗಿ ಶೋಕಿಸುತ್ತಿಲ್ಲ ತಾನೇ?
12105030a ಪುರಸ್ತಾದ್ಭೂತಪೂರ್ವತ್ವಾದ್ಧೀನಭಾಗ್ಯೋ ಹಿ ದುರ್ಮತಿಃ|
12105030c ಧಾತಾರಂ ಗರ್ಹತೇ ನಿತ್ಯಂ ಲಬ್ಧಾರ್ಥಾಂಶ್ಚ ನ ಮೃಷ್ಯತೇ||
ದುರ್ಮತಿಯಾದವನು ಹಿಂದೆ ಪಡೆದಿದ್ದ ಸಂಪತ್ತು ನಷ್ಟವಾಗಿ ಹೋದರೆ ತಾನು ಭಾಗ್ಯಹೀನನೆಂದು ಭಾವಿಸಿ ನಿತ್ಯವೂ ಧಾತಾರನನ್ನು ನಿಂದಿಸುತ್ತಿರುತ್ತಾನೆ. ಆದರೆ ಐಶ್ವರ್ಯವು ಬಂದರೆ ಅದು ದೈವಲಬ್ಧವೆಂದು ಭಾವಿಸುದಿಲ್ಲ. ಅದು ಸ್ವಪ್ರಯತ್ನದಿಂದಲೇ ಬಂದಿತೆಂದು ಭಾವಿಸುತ್ತಾನೆ.
12105031a ಅನರ್ಹಾನಪಿ ಚೈವಾನ್ಯಾನ್ಮನ್ಯತೇ ಶ್ರೀಮತೋ ಜನಾನ್|
12105031c ಏತಸ್ಮಾತ್ಕಾರಣಾದೇತದ್ದುಃಖಂ ಭೂಯೋಽನುವರ್ತತೇ||
ಶ್ರೀಮಂತ ಜನರನ್ನು ನೋಡಿ ಅವರು ಐಶ್ವರ್ಯಕ್ಕೆ ಅನರ್ಹರೆಂದು ಭಾವಿಸುತ್ತಾನೆ. ಈರ್ಷ್ಯೆಯಿಂದ ಹುಟ್ಟಿದ ಆ ದುಃಖವು ಸದಾ ಅವನನ್ನು ಹಿಂಬಾಲಿಸುತ್ತದೆ.
12105032a ಈರ್ಷ್ಯಾತಿಚ್ಚೇದಸಂಪನ್ನಾ ರಾಜನ್ ಪುರುಷಮಾನಿನಃ|
12105032c ಕಚ್ಚಿತ್ತ್ವಂ ನ ತಥಾ ಪ್ರಾಜ್ಞ ಮತ್ಸರೀ ಕೋಸಲಾಧಿಪ||
ರಾಜನ್! ಕೋಸಲಾಧಿಪ! ಪೌರುಷಮಾನಿನಿಗಳಾದವರು ಈ ಈರ್ಷ್ಯೆಯಿಂದ ಕೂಡಿರುತ್ತಾರೆ. ಪ್ರಾಜ್ಞ! ನೀನು ಹಾಗೆ ಮತ್ಸರಿಯಾಗಿಲ್ಲ ತಾನೇ?
12105033a ಸಹಸ್ವ ಶ್ರಿಯಮನ್ಯೇಷಾಂ ಯದ್ಯಪಿ ತ್ವಯಿ ನಾಸ್ತಿ ಸಾ|
12105033c ಅನ್ಯತ್ರಾಪಿ ಸತೀಂ ಲಕ್ಷ್ಮೀಂ ಕುಶಲಾ ಭುಂಜತೇ ಜನಾಃ[3]|
12105033e ಅಭಿವಿಷ್ಯಂದತೇ ಶ್ರೀರ್ಹಿ ಸತ್ಯಪಿ ದ್ವಿಷತೋ ಜನಾತ್||
ನಿನ್ನಲ್ಲಿ ಸಂಪತ್ತಿಲ್ಲದಿದ್ದರೂ ಅದು ಬೇರೆಯವರ ಬಳಿಯಲ್ಲಿರುವುದನ್ನು ಸಹನೆಯಿಂದ ಕಾಣು. ಕುಶಲ ಜನರು ಬೇರೆಯವರಲ್ಲಿರುವ ಸಂಪತ್ತನ್ನೂ ಭೋಗಿಸುತ್ತಾರೆ. ಅಸೂಯೆಯಿಂದ ಇತರನ್ನು ದ್ವೇಷಿಸುವವರು ಶ್ರೀಮಂತರಾಗಿದ್ದರೂ ಬಹು ಬೇಗ ನಾಶಹೊಂದುತ್ತಾರೆ.
12105034a ಶ್ರಿಯಂ ಚ ಪುತ್ರಪೌತ್ರಂ ಚ ಮನುಷ್ಯಾ ಧರ್ಮಚಾರಿಣಃ|
12105034c ತ್ಯಾಗಧರ್ಮವಿದೋ[4] ವೀರಾಃ ಸ್ವಯಮೇವ ತ್ಯಜಂತ್ಯುತ||
ತ್ಯಾಗಧರ್ಮವನ್ನು ತಿಳಿದಿರುವ ವೀರರು ಮತ್ತು ಧರ್ಮಚಾರೀ ಮನುಷ್ಯರು ಸಂಪತ್ತು ಮತ್ತು ಪುತ್ರ-ಪೌತ್ರರನ್ನು ತಾವಾಗಿಯೇ ತ್ಯಜಿಸುತ್ತಾರೆ.
12105035a ಬಹು ಸಂಕಸುಕಂ ದೃಷ್ಟ್ವಾ ವಿವಿತ್ಸಾಸಾಧನೇನ[5] ಚ|
12105035c ತಥಾನ್ಯೇ ಸಂತ್ಯಜಂತ್ಯೇನಂ ಮತ್ವಾ ಪರಮದುರ್ಲಭಮ್||
ನಿರಂತರ ಪ್ರಯತ್ನದಿಂದ ಸಂಪಾದಿಸಿದ ಧನವೂ ಅಸ್ಥಿರವಾಗಿರುತ್ತದೆ ಎನ್ನುವುದನ್ನು ತಿಳಿದು ಧನವು ಪರಮ ದುರ್ಲಭವಾದುದೆಂದು ಭಾವಿಸಿ ಅನ್ಯ ಜನರು ಧನವನ್ನೇ ತ್ಯಜಿಸುತ್ತಾರೆ.
12105036a ತ್ವಂ ಪುನಃ ಪ್ರಾಜ್ಞರೂಪಃ ಸನ್ ಕೃಪಣಂ ಪರಿತಪ್ಯಸೇ|
12105036c ಅಕಾಮ್ಯಾನ್ಕಾಮಯಾನೋಽರ್ಥಾನ್ಪರಾಚೀನಾನುಪದ್ರುತಾನ್||
ನೀನಾದರೋ ಪ್ರಾಜ್ಞನಂತೆ ಕಾಣುವೆ. ಸುಖೋಪಭೋಗಗಳು ದೈವಾಧೀನವೆಂಬುದು ನಿನಗೆ ತಿಳಿದಿದೆ. ಐಶ್ವರ್ಯವು ಅಸ್ಥಿರ ಎನ್ನುವುದೂ ನಿನಗೆ ತಿಳಿದಿದೆ. ಆದರೂ ಅಪೇಕ್ಷಿಸಲು ಅಯೋಗ್ಯವಾದವುಗಳನ್ನು ನೀನು ಅಪೇಕ್ಷಿಸುತ್ತಿರುವೆ. ಕೃಪಣನಾಗಿ ಪರಿತಪಿಸುತ್ತಿದ್ದೀಯೆ.
12105037a ತಾಂ ಬುದ್ಧಿಮುಪಜಿಜ್ಞಾಸುಸ್ತ್ವಮೇವೈನಾನ್ ಪರಿತ್ಯಜ|
12105037c ಅನರ್ಥಾಂಶ್ಚಾರ್ಥರೂಪೇಣ ಅರ್ಥಾಂಶ್ಚಾನರ್ಥರೂಪತಃ||
ಈ ಬುದ್ಧಿವಾದವನ್ನು ಗ್ರಹಿಸಿ ಮನನಮಾಡಿಕೊಳ್ಳಲು ಪ್ರಯತ್ನಿಸು. ಭೋಗೇಚ್ಛೆಯನ್ನು ಬಿಟ್ಟುಬಿಡು. ನಿನಗೆ ಅರ್ಥರೂಪದಲ್ಲಿ ಕಾಣುತ್ತಿರುವುದೆಲ್ಲವೂ ಅನರ್ಥಗಳೇ ಆಗಿವೆ. ಏಕೆಂದರೆ ಸಮಸ್ತ ಭೋಗಗಲೂ ಅನರ್ಥರೂಪಗಳೇ ಆಗಿವೆ.
12105038a ಅರ್ಥಾಯೈವ ಹಿ ಕೇಷಾಂ ಚಿದ್ಧನನಾಶೋ ಭವತ್ಯುತ|
12105038c ಅನಂತ್ಯಂ ತಂ ಸುಖಂ ಮತ್ವಾ ಶ್ರಿಯಮನ್ಯಃ ಪರೀಕ್ಷತೇ||
ಅರ್ಥಸಂಪಾದನೆಯ ಸಲುವಾಗಿಯೇ ಕೆಲವರ ಧನವು ನಾಶವಾಗುತ್ತದೆ. ಇನ್ನು ಕೆಲವರು ಸಂಪತ್ತಿನಿಂದಲೇ ಅಕ್ಷಯ ಸುಖವು ದೊರೆಯುವುದೆಂದು ತಿಳಿದು ಐಶ್ವರ್ಯದ ಹಿಂದೆ ಓಡುತ್ತಿರುತ್ತಾರೆ.
12105039a ರಮಮಾಣಃ ಶ್ರಿಯಾ ಕಶ್ಚಿನ್ನಾನ್ಯಚ್ಚ್ರೇಯೋಽಭಿಮನ್ಯತೇ|
12105039c ತಥಾ ತಸ್ಯೇಹಮಾನಸ್ಯ ಸಮಾರಂಭೋ ವಿನಶ್ಯತಿ||
ಸಂಪತ್ತಿನಿಂದ ಆನಂದಿಸುತ್ತಿರುವವನು ಸಂಪತ್ತಿಗಿಂತಲೂ ಬೇರೆ ಸುಖಸಾಧನವ್ಯಾವುದೂ ಇಲ್ಲವೆಂದೇ ಭಾವಿಸುತ್ತಾನೆ. ಹಾಗೆಯೇ ಧನವನ್ನು ಬಯಸುವವರ ಪ್ರಯತ್ನಗಳು ಪ್ರಾರಂಭದಲ್ಲಿಯೇ ನಾಶವಾಗಬಲ್ಲವು.
12105040a ಕೃಚ್ಚ್ರಾಲ್ಲಬ್ಧಮಭಿಪ್ರೇತಂ ಯದಾ ಕೌಸಲ್ಯ ನಶ್ಯತಿ|
12105040c ತದಾ ನಿರ್ವಿದ್ಯತೇ ಸೋಽರ್ಥಾತ್ ಪರಿಭಗ್ನಕ್ರಮೋ ನರಃ||
ಕೌಸಲ್ಯ! ಅತ್ಯಂತ ಕಷ್ಟದಿಂದ ಸಂಗ್ರಹಿಸಿದ್ದ ಧನವು ವಿನಾಶಹೊಂದಿದರೆ ಪ್ರಯತ್ನಗಳು ಭಗ್ನಗೊಂಡ ಮನುಷ್ಯನು ಧನದಿಂದ ವಿರಕ್ತನಾಗುತ್ತಾನೆ.
12105041a ಧರ್ಮಮೇಕೇಽಭಿಪದ್ಯಂತೇ ಕಲ್ಯಾಣಾಭಿಜನಾ ನರಾಃ|
12105041c ಪರತ್ರ ಸುಖಮಿಚ್ಚಂತೋ ನಿರ್ವಿದ್ಯೇಯುಶ್ಚ ಲೌಕಿಕಾತ್||
ಮರಣಾನಂತರದ ಸುಖವನ್ನು ಬಯಸುವ ಕಲ್ಯಾಣ ಕುಲದ ಜನರು ಧರ್ಮವನ್ನು ಮಾತ್ರ ಅವಲಂಬಿಸುತ್ತಾರೆ ಮತ್ತು ಲೌಕಿಕ ವ್ಯವಹಾರಗಳಿಂದ ವಿರಕ್ತರಾಗುತ್ತಾರೆ.
12105042a ಜೀವಿತಂ ಸಂತ್ಯಜಂತ್ಯೇಕೇ ಧನಲೋಭಪರಾ ನರಾಃ|
12105042c ನ ಜೀವಿತಾರ್ಥಂ ಮನ್ಯಂತೇ ಪುರುಷಾ ಹಿ ಧನಾದೃತೇ||
ಧನಲೋಭಪರರಾದವರು ಧನಕ್ಕಾಗಿ ಜೀವಿತವನ್ನೂ ತ್ಯಜಿಸಲು ಸಿದ್ಧರಾಗಿರುತ್ತಾರೆ. ಅಂಥವರು ಧನವಿಲ್ಲದೇ ಜೀವಿತದಲ್ಲಿ ಅರ್ಥವಿಲ್ಲ ಎಂದು ಭಾವಿಸುತ್ತಾರೆ.
12105043a ಪಶ್ಯ ತೇಷಾಂ ಕೃಪಣತಾಂ ಪಶ್ಯ ತೇಷಾಮಬುದ್ಧಿತಾಮ್|
12105043c ಅಧ್ರುವೇ ಜೀವಿತೇ ಮೋಹಾದರ್ಥತೃಷ್ಣಾಮುಪಾಶ್ರಿತಾಃ||
ಅವರ ಕೃಪಣತೆಯನ್ನು ನೋಡು. ಅವರ ಮೂಢತನವನ್ನು ನೋಡು. ನಿಶ್ಚಿತವಾಗಿರದ ಜೀವಿತಕ್ಕಾಗಿ ಮೋಹದಿಂದ ಅರ್ಥತೃಷ್ಣೆಯನ್ನು ಅವರು ಆಶ್ರಯಿಸುತ್ತಾರೆ.
12105044a ಸಂಚಯೇ ಚ ವಿನಾಶಾಂತೇ ಮರಣಾಂತೇ ಚ ಜೀವಿತೇ|
12105044c ಸಂಯೋಗೇ ವಿಪ್ರಯೋಗಾಂತೇ ಕೋ ನು ವಿಪ್ರಣಯೇನ್ಮನಃ||
ಸಂಗ್ರಹವು ವಿನಾಶದಲ್ಲಿ ಅಂತ್ಯವಾಗುತ್ತದೆ. ಜೀವಿತವು ಮರಣದಲ್ಲಿ ಕೊನೆಗೊಳ್ಳುತ್ತದೆ. ಸೇರುವಿಕೆಯು ವಿಯೋಗದಲ್ಲಿ ಕೊನೆಗೊಳ್ಳುತ್ತದೆ. ಹೀಗಿರುವಾಗ ಯಾರುತಾನೇ ಅವುಗಳ ಕುರಿತು ಮನಸ್ಸನ್ನು ಕೆಡಿಸಿಕೊಳ್ಳುತ್ತಾರೆ?
12105045a ಧನಂ ವಾ ಪುರುಷಂ ರಾಜನ್ಪುರುಷೋ ವಾ ಪುನರ್ಧನಮ್|
12105045c ಅವಶ್ಯಂ ಪ್ರಜಹಾತ್ಯೇತತ್ತದ್ವಿದ್ವಾನ್ ಕೋಽನುಸಂಜ್ವರೇತ್||
ರಾಜನ್! ಮನುಷ್ಯನು ಧನವನ್ನು ಬಿಡಬಹುದು ಅಥವಾ ಧನವೂ ಮನುಷ್ಯನನ್ನು ಬಿಡಬಹುದು. ಹೀಗಿರುವಾಗ ಅದರ ಕುರಿತು ಯಾವ ವಿದ್ವಾಂಸನು ತಾನೇ ಚಿಂತಿಸುತ್ತಾನೆ?
12105046a ಅನ್ಯೇಷಾಮಪಿ ನಶ್ಯಂತಿ ಸುಹೃದಶ್ಚ ಧನಾನಿ ಚ|
12105046c ಪಶ್ಯ ಬುದ್ಧ್ಯಾ ಮನುಷ್ಯಾಣಾಂ ರಾಜನ್ನಾಪದಮಾತ್ಮನಃ|
12105046e ನಿಯಚ್ಚ ಯಚ್ಚ ಸಂಯಚ್ಚ ಇಂದ್ರಿಯಾಣಿ ಮನೋ ಗಿರಮ್||
ನಿನ್ನದು ಮಾತ್ರವೇ ಅಲ್ಲ. ಬೇರೆಯವರ ಸುಹೃದರೂ ಧನಗಳೂ ನಾಶವಾಗುತ್ತವೆ. ರಾಜನ್! ಎಲ್ಲ ಮನುಷ್ಯರಿಗೂ ಒದಗಿಬರುವಂಥಹ ಆಪತ್ತೇ ನಿನಗೂ ಒದಗಿ ಬಂದಿದೆ ಎನ್ನುವುದನ್ನು ಬುದ್ಧಿಪೂರ್ವಕವಾಗಿ ವಿಚಾರಿಸಿ ನೋಡು. ಇಂದ್ರಿಯಗಳನ್ನು ಸಂಯಮದಲ್ಲಿಡು. ಮನಸ್ಸನ್ನು ವಶದಲ್ಲಿಟ್ಟುಕೋ. ಮಾತನ್ನು ಕಡಿಮೆಮಾಡಿ ಮೌನಿಯಾಗು.
12105047a ಪ್ರತಿಷಿದ್ಧಾನವಾಪ್ಯೇಷು[6] ದುರ್ಲಭೇಷ್ವಹಿತೇಷು ಚ|
12105047c ಪ್ರತಿಕೃಷ್ಟೇಷು ಭಾವೇಷು ವ್ಯತಿಕೃಷ್ಟೇಷ್ವಸಂಭವೇ|
12105047e ಪ್ರಜ್ಞಾನತೃಪ್ತೋ ವಿಕ್ರಾಂತಸ್ತ್ವದ್ವಿಧೋ ನಾನುಶೋಚತಿ||
ದುರ್ಬಲರು ಇಂದ್ರಿಯಗಳು, ಮನಸ್ಸು ಮತ್ತು ಮಾತುಗಳು ಅಹಿತವಾಗಿದ್ದರೂ ಅವುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದಿಲ್ಲ. ನಿಕಟ ಸಂಪರ್ಕದಿಂದ ಎಲ್ಲ ವಸ್ತುಗಳೂ ದೃಷ್ಟಿಗೋಚರವಾಗುತ್ತವೆ. ದೂರವಾದನಂತರ ದೃಷ್ಟಿಗೆ ಸಿಲುಕುವುದಿಲ್ಲ. ನಾಶವಾದನಂತರ ವಸ್ತುವನ್ನು ನೋಡಲಿಕ್ಕಾಗುವುದಿಲ್ಲ. ಪ್ರಜ್ಞಾನತೃಪ್ತ ವಿಕ್ರಮಿಯು ದೃಷ್ಟಿಗೆ ಗೋಚರವಾಗದೇ ಇರುವ ಅರ್ಥಕ್ಕಾಗಿ ಶೋಕಿಸವುದಿಲ್ಲ.
12105048a ಅಲ್ಪಮಿಚ್ಚನ್ನಚಪಲೋ ಮೃದುರ್ದಾಂತಃ ಸುಸಂಶಿತಃ|
12105048c ಬ್ರಹ್ಮಚರ್ಯೋಪಪನ್ನಶ್ಚ ತ್ವದ್ವಿಧೋ ನೈವ ಮುಹ್ಯತಿ||
ನಿನ್ನಂತೆ ಅಲ್ಪತೃಪ್ತ[7], ಅಚಪಲ, ಮೃದು, ದಾಂತ, ಸುಸಂಶಿತ, ಬ್ರಹ್ಮಚಾರಿಯು ಶೋಕಪಡುವುದಿಲ್ಲ.
12105049a ನ ತ್ವೇವ ಜಾಲ್ಮೀಂ ಕಾಪಾಲೀಂ ವೃತ್ತಿಮೇಷಿತುಮರ್ಹಸಿ|
12105049c ನೃಶಂಸವೃತ್ತಿಂ ಪಾಪಿಷ್ಠಾಂ ದುಃಖಾಂ ಕಾಪುರುಷೋಚಿತಾಮ್||
ಅಂತಹ ಸರ್ವಗುಣಸಂಪನ್ನನಾದ ನಿನಗೆ ತುಚ್ಛವೂ ಕ್ರೂರವೂ ಪಾಪಿಷ್ಠವೂ, ದುಷ್ಟವೂ, ಕಾಪುರುಷರಿಗೆ ಉಚಿತವೂ ಆದ ಕಾಪಾಲೀ[8] ವೃತ್ತಿಯೂ ಯೋಗ್ಯವಲ್ಲ.
12105050a ಅಪಿ ಮೂಲಫಲಾಜೀವೋ ರಮಸ್ವೈಕೋ ಮಹಾವನೇ|
12105050c ವಾಗ್ಯತಃ ಸಂಗೃಹೀತಾತ್ಮಾ ಸರ್ವಭೂತದಯಾನ್ವಿತಃ||
ನೀನು ಕಂದಮೂಲಫಲಗಳನ್ನೇ ತಿಂದು ಜೀವಿಸುತ್ತಾ ವಿಶಾಲ ಅರಣ್ಯದಲ್ಲಿ ಏಕಾಕಿಯಾಗಿ ಸಂಚರಿಸು. ಮಾತು, ಮನಸ್ಸು, ಇಂದ್ರಿಯಗಳನ್ನು ಸಂಯಮದಲ್ಲಿಟ್ಟುಕೊಂಡು ಸರ್ವಪ್ರಾಣಿಗಳ ವಿಷಯದಿಂದಲೂ ದಯಾಭಾವದಿಂದಿರು.
12105051a ಸದೃಶಂ ಪಂಡಿತಸ್ಯೈತದೀಷಾದಂತೇನ ದಂತಿನಾ|
12105051c ಯದೇಕೋ ರಮತೇಽರಣ್ಯೇ ಯಚ್ಚಾಪ್ಯಲ್ಪೇನ ತುಷ್ಯತಿ||
ಪಂಡಿತನಂತೆ ನೀನೂ ಕೂಡ ಗಾಡಿಯ ಮೂಕಿಯ ಮರದ ದಂಡಕ್ಕೆ ಸಮಾನ ದಂತವನ್ನು ಹೊಂದಿರುವ ಮಹಾಗಜದಂತೆ ಏಕಾಕಿಯಾಗಿ ಸಂಚರಿಸುತ್ತಾ ಅರಣ್ಯದಲ್ಲಿ ಸಿಗುವ ಕಂದಮೂಲಫಲಗಳಿಂದಲೇ ತೃಪ್ತನಾಗಿರು.
12105052a ಮಹಾಹ್ರದಃ ಸಂಕ್ಷುಭಿತ ಆತ್ಮನೈವ ಪ್ರಸೀದತಿ|
12105052c ಏತದೇವಂಗತಸ್ಯಾಹಂ ಸುಖಂ ಪಶ್ಯಾಮಿ ಕೇವಲಮ್||
ಕೆಲವೊಮ್ಮೆ ಕ್ಷೋಭೆಗೊಂಡ ಸರೋವರವು ತಾನಾಗಿಯೇ ಶಾಂತವಾಗುವಂತೆ ಕಡಡಿದ ಮನಸ್ಸೂ ಕೂಡ ತಾನಾಗಿಯೇ ಶಾಂತವಾಗುತ್ತದೆ. ಈ ತರಹದ ಜೀವನವೇ ಸುಖಮಯವೆಂದು ನಾನು ಭಾವಿಸುತ್ತೇನೆ.
12105053a ಅಸಂಭವೇ ಶ್ರಿಯೋ ರಾಜನ್ ಹೀನಸ್ಯ ಸಚಿವಾದಿಭಿಃ|
12105053c ದೈವೇ ಪ್ರತಿನಿವಿಷ್ಟೇ ಚ ಕಿಂ ಶ್ರೇಯೋ ಮನ್ಯತೇ ಭವಾನ್||
ರಾಜನ್! ಈಗ ನಿನ್ನ ಸಂಪತ್ತು ಇಲ್ಲವಾಗಿದೆ. ಸಚಿವಾದಿಗಳಿಂದಲೂ ನೀನು ಹೀನನಾಗಿರುವೆ. ಇದರ ಜೊತೆಗೆ ದೈವವೂ ನಿನಗೆ ಪ್ರತಿಕೂಲವಾಗಿದೆ. ಇಂತಹ ಅವಸ್ಥೆಯಲ್ಲಿರುವ ನೀನು ನಾನು ಹೇಳಿದುದಕ್ಕಿಂತಲೂ ಬೇರೆ ಯಾವುದನ್ನು ಶ್ರೇಯಸ್ಕರವೆಂದು ಭಾವಿಸುತ್ತೀಯೆ?”
ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಕಾಲಕವೃಕ್ಷೀಯೇ ಪಂಚಾಧಿಕಶತತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ಕಾಲಕವೃಕ್ಷೀಯ ಎನ್ನುವ ನೂರಾಐದನೇ ಅಧ್ಯಾಯವು.
[1] ಮರಣಾದ್ದೈನ್ಯಾದನ್ಯತ್ರ ಎಂಬ ಪಾಠಾಂತರವಿದೆ (ಭಾರತ ದರ್ಶನ).
[2] ಕಾಮಾನ್ನಿರ್ವಿದ್ಯ ಎಂಬ ಪಾಠಾಂತರವಿದೆ (ಭಾರತ ದರ್ಶನ).
[3] ಸದಾ ಎಂಬ ಪಾಠಾಂತರವಿದೆ (ಭಾರತ ದರ್ಶನ).
[4] ಯೋಗಧರ್ಮವಿದೋ ಎಂಬ ಪಾಠಾಂತರವಿದೆ (ಭಾರತ ದರ್ಶನ).
[5] ವಿಧಿತ್ಸಾಸಾಧನೇನ ಎಂಬ ಪಾಠಾಂತರವಿದೆ (ಭಾರತ ದರ್ಶನ).
[6] ಪ್ರತಿಷೇದ್ಧಾ ನ ಚಾಪ್ಯೇಷು ಎಂಬ ಪಾಠಾಂತರವಿದೆ (ಭಾರತ ದರ್ಶನ).
[7] ಸ್ವಲ್ಪದರಲ್ಲಿಯೇ ತೃಪ್ತನಾಗುವವನು.
[8] ಭಿಕ್ಷೆಬೇಡುವುದು.