ಶಾಂತಿ ಪರ್ವ: ರಾಜಧರ್ಮ ಪರ್ವ
೪೧
12041001 ವೈಶಂಪಾಯನ ಉವಾಚ
12041001a ಪ್ರಕೃತೀನಾಂ ತು ತದ್ವಾಕ್ಯಂ ದೇಶಕಾಲೋಪಸಂಹಿತಮ್|
12041001c ಶ್ರುತ್ವಾ ಯುಧಿಷ್ಠಿರೋ ರಾಜಾಥೋತ್ತರಂ ಪ್ರತ್ಯಭಾಷತ||
ವೈಶಂಪಾಯನನು ಹೇಳಿದನು: “ಪ್ರಜೆಗಳ ದೇಶ-ಕಾಲೋಚಿತವಾದ ಆ ಮಾತುಗಳನ್ನು ಕೇಳಿ ರಾಜಾ ಯುಧಿಷ್ಠಿರನು ಉತ್ತರಪೂರ್ವಕವಾಗಿ ಈ ಮಾತನ್ನಾಡಿದನು:
12041002a ಧನ್ಯಾಃ ಪಾಂಡುಸುತಾ ಲೋಕೇ ಯೇಷಾಂ ಬ್ರಾಹ್ಮಣಪುಂಗವಾಃ|
12041002c ತಥ್ಯಾನ್ವಾಪ್ಯಥ ವಾತಥ್ಯಾನ್ಗುಣಾನಾಹುಃ ಸಮಾಗತಾಃ||
“ಇಲ್ಲಿ ಸೇರಿರುವ ಬ್ರಾಹ್ಮಣಪುಂಗವರು ನಮ್ಮಲ್ಲಿರುವ ಗುಣಾವಗುಣಗಳನ್ನು ಗಮನಿಸದೇ ಕೇವಲ ಪ್ರೀತಿಯಿಂದ ನಮ್ಮನ್ನು ಗುಣವಂತರೆಂದೇ ಪ್ರಶಂಸಿಸಿರುವುದರಿಂದ ಪಾಂಡುಪುತ್ರರಾದ ನಾವೇ ಈ ಲೋಕದಲ್ಲಿ ಧನ್ಯರು!
12041003a ಅನುಗ್ರಾಹ್ಯಾ ವಯಂ ನೂನಂ ಭವತಾಮಿತಿ ಮೇ ಮತಿಃ|
12041003c ಯತ್ರೈವಂ ಗುಣಸಂಪನ್ನಾನಸ್ಮಾನ್ಬ್ರೂಥ ವಿಮತ್ಸರಾಃ||
ನಾವು ನಿಮ್ಮೆಲ್ಲರ ಅನುಗ್ರಹಕ್ಕೆ ಪಾತ್ರರಾಗಿದ್ದೇವೆಂದು ನನ್ನ ಅಭಿಪ್ರಾಯವಾಗಿದೆ. ಅಸೂಯಾರಹಿತರಾದ ನೀವು ನಮ್ಮನ್ನು ಗುಣಸಂಪನ್ನರೆಂದು ಹೇಳಿದ್ದೀರಿ.
12041004a ಧೃತರಾಷ್ಟ್ರೋ ಮಹಾರಾಜಃ ಪಿತಾ ನೋ ದೈವತಂ ಪರಮ್|
12041004c ಸಾಶನೇಽಸ್ಯ ಪ್ರಿಯೇ ಚೈವ ಸ್ಥೇಯಂ ಮತ್ಪ್ರಿಯಕಾಂಕ್ಷಿಭಿಃ||
ಮಹಾರಾಜ ಧೃತರಾಷ್ಟ್ರನು ನನ್ನ ಪಿತನೂ ಪರಮ ದೈವವೂ ಆಗಿದ್ದಾನೆ. ನನಗೆ ಪ್ರಿಯವನ್ನುಂಟುಮಾಡಲು ಅಪೇಕ್ಷಿಸುವವರು ಅವನ ಶಾಸನದಂತೆಯೇ ನಡೆದುಕೊಳ್ಳಬೇಕು.
12041005a ಏತದರ್ಥಂ ಹಿ ಜೀವಾಮಿ ಕೃತ್ವಾ ಜ್ಞಾತಿವಧಂ ಮಹತ್|
12041005c ಅಸ್ಯ ಶುಶ್ರೂಷಣಂ ಕಾರ್ಯಂ ಮಯಾ ನಿತ್ಯಮತಂದ್ರಿಣಾ||
ಈ ಮಹಾ ಜ್ಞಾತಿವಧೆಯನ್ನು ಮಾಡಿ ನಾನು ಇವನ ಸಲುವಾಗಿಯೇ ಜೀವಿಸಿರುತ್ತೇನೆ. ಆಲಸನಾಗಿರದೇ ನಿತ್ಯವೂ ಇವನ ಶುಶ್ರೂಷಣೆಯನ್ನು ಮಾಡುವುದೇ ನನ್ನ ಕಾರ್ಯವಾಗಿದೆ.
12041006a ಯದಿ ಚಾಹಮನುಗ್ರಾಹ್ಯೋ ಭವತಾಂ ಸುಹೃದಾಂ ತತಃ|
12041006c ಧೃತರಾಷ್ಟ್ರೇ ಯಥಾಪೂರ್ವಂ ವೃತ್ತಿಂ ವರ್ತಿತುಮರ್ಹಥ||
ನಾನು ಸುಹೃದಯರಾದ ನಿಮ್ಮ ಅನುಗ್ರಹಕ್ಕೆ ಪಾತ್ರನಾಗಿರುವುದೇ ಆದರೆ ಧೃತರಾಷ್ಟ್ರನ ವಿಷಯದಲ್ಲಿ ನೀವು ಹಿಂದೆ ಹೇಗೆ ನಡೆದುಕೊಳ್ಳುತ್ತಿದ್ದರೋ ಈಗಲೂ ಹಾಗೆಯೇ ನಡೆದುಕೊಳ್ಳಬೇಕು.
12041007a ಏಷ ನಾಥೋ ಹಿ ಜಗತೋ ಭವತಾಂ ಚ ಮಯಾ ಸಹ|
12041007c ಅಸ್ಯೈವ ಪೃಥಿವೀ ಕೃತ್ಸ್ನಾ ಪಾಂಡವಾಃ ಸರ್ವ ಏವ ಚ|
12041007e ಏತನ್ಮನಸಿ ಕರ್ತವ್ಯಂ ಭವದ್ಭಿರ್ವಚನಂ ಮಮ||
ನನಗೆ, ನಿಮಗೆ ಮತ್ತು ಈ ಜಗತ್ತಿಗೆ ಇವನೇ ಒಡೆಯನು. ಈ ಇಡೀ ಪೃಥ್ವಿ, ಪಾಂಡವರೆಲ್ಲರೂ ಮತ್ತು ನೀವೂ ಇದನ್ನು ಮನಸ್ಸಿನಲ್ಲಿಟ್ಟುಕೊಂಡು ನಡೆದುಕೊಳ್ಳಬೇಕೆಂದು ನಾನು ಕೇಳಿಕೊಳ್ಳುತ್ತಿದ್ದೇನೆ.”
12041008a ಅನುಗಮ್ಯ ಚ ರಾಜಾನಂ ಯಥೇಷ್ಟಂ ಗಮ್ಯತಾಮಿತಿ|
12041008c ಪೌರಜಾನಪದಾನ್ಸರ್ವಾನ್ವಿಸೃಜ್ಯ ಕುರುನಂದನಃ|
12041008e ಯೌವರಾಜ್ಯೇನ ಕೌರವ್ಯೋ ಭೀಮಸೇನಮಯೋಜಯತ್||
ರಾಜರು ಮತ್ತು ಪೌರಜನಪದದ ಎಲ್ಲರೂ ಇಷ್ಟಬಂದಂತೆ ಹೋಗಬಹುದೆಂದು ಕುರುನಂದನನು ಅನುಮತಿಯನ್ನಿತ್ತನು. ಕೌರವ್ಯನು ಭೀಮಸೇನನನ್ನು ಯುವರಾಜನನ್ನಾಗಿ ನಿಯಮಿಸಿಕೊಂಡನು.
12041009a ಮಂತ್ರೇ ಚ ನಿಶ್ಚಯೇ ಚೈವ ಷಾಡ್ಗುಣ್ಯಸ್ಯ ಚ ಚಿಂತನೇ|
12041009c ವಿದುರಂ ಬುದ್ಧಿಸಂಪನ್ನಂ ಪ್ರೀತಿಮಾನ್ವೈ ಸಮಾದಿಶತ್||
ಗುಪ್ತಸಲಹೆಗಳಿಗೆ ಮತ್ತು ನಿರ್ಧಾರಗಳಿಗೆ ಮತ್ತು ಆರುಗುಣ[1]ಗಳ ವಿಷಯವಾಗಿ ಸಮಾಲೋಚಿಸಲು ಪ್ರೀತಿಪಾತ್ರನಾದ ಬುದ್ಧಿಸಂಪನ್ನ ವಿದುರನನ್ನು ನಿಯಮಿಸಿಕೊಂಡನು.
12041010a ಕೃತಾಕೃತಪರಿಜ್ಞಾನೇ ತಥಾಯವ್ಯಯಚಿಂತನೇ|
12041010c ಸಂಜಯಂ ಯೋಜಯಾಮಾಸ ಋದ್ಧಮೃದ್ಧೈರ್ಗುಣೈರ್ಯುತಮ್||
ಮಾಡಬೇಕಾದ ಮತ್ತು ಮಾಡಬಾರದ ಕಾರ್ಯಗಳ ಕುರಿತು ಪರಿಜ್ಞಾನವನ್ನು ನೀಡಲು ಮತ್ತು ಆದಾಯ-ವೆಚ್ಚಗಳ ಕುರಿತು ಸಮಾಲೋಚಿಸಲು ವೃದ್ಧ-ಪ್ರಾಮಾಣಿಕ ಗುಣ ಸಂಪನ್ನನಾದ ಸಂಜಯನನ್ನು ನಿಯೋಜಿಸಿದನು.
12041011a ಬಲಸ್ಯ ಪರಿಮಾಣೇ ಚ ಭಕ್ತವೇತನಯೋಸ್ತಥಾ|
12041011c ನಕುಲಂ ವ್ಯಾದಿಶದ್ರಾಜಾ ಕರ್ಮಿಣಾಮನ್ವವೇಕ್ಷಣೇ||
ಬಲದ ಅಳತೆಗೂ, ಭತ್ಯ-ವೇತನಗಳ ವಿತರಣೆಗೂ ಮತ್ತು ಕಾರ್ಮಿಕರ ಮೇಲ್ವಿಚಾರಣೆಗೂ ರಾಜನು ನಕುಲನನ್ನು ನಿಯಮಿಸಿಕೊಂಡನು.
12041012a ಪರಚಕ್ರೋಪರೋಧೇ ಚ ದೃಪ್ತಾನಾಂ ಚಾವಮರ್ದನೇ|
12041012c ಯುಧಿಷ್ಠಿರೋ ಮಹಾರಾಜಃ ಫಲ್ಗುನಂ ವ್ಯಾದಿದೇಶ ಹ||
ಶತ್ರುಗಳ ಆಕ್ರಮಣಕ್ಕೂ ದರ್ಪದಲ್ಲಿರುವವರನ್ನು ಮರ್ದಿಸುವುದಕ್ಕೂ ಮಹಾರಾಜ ಯುಧಿಷ್ಠಿರನು ಫಲ್ಗುನನನ್ನು ನಿಯೋಜಿಸಿದನು.
12041013a ದ್ವಿಜಾನಾಂ ವೇದಕಾರ್ಯೇಷು ಕಾರ್ಯೇಷ್ವನ್ಯೇಷು ಚೈವ ಹಿ|
12041013c ಧೌಮ್ಯಂ ಪುರೋಧಸಾಂ ಶ್ರೇಷ್ಠಂ ವ್ಯಾದಿದೇಶ ಪರಂತಪಃ||
ದ್ವಿಜರ ವೇದಕಾರ್ಯಗಳಿಗೆ ಮತ್ತು ಅನ್ಯ ಕಾರ್ಯಗಳಿಗೆ ಪುರೋಹಿತ ಧೌಮ್ಯನನ್ನು ಆ ಪರಂತಪನು ನಿಯಮಿಸಿಕೊಂಡನು.
12041014a ಸಹದೇವಂ ಸಮೀಪಸ್ಥಂ ನಿತ್ಯಮೇವ ಸಮಾದಿಶತ್|
12041014c ತೇನ ಗೋಪ್ಯೋ ಹಿ ನೃಪತಿಃ ಸರ್ವಾವಸ್ಥೋ ವಿಶಾಂ ಪತೇ||
ವಿಶಾಂಪತೇ! ನೃಪತಿಯು ಸಹದೇವನನ್ನು ನಿತ್ಯವೂ ಸಮೀಪದಲ್ಲಿದ್ದುಕೊಂಡು ತನ್ನನ್ನು ರಕ್ಷಿಸುವ ಕಾರ್ಯವನ್ನು ವಹಿಸಿದನು.
12041015a ಯಾನ್ಯಾನಮನ್ಯದ್ಯೋಗ್ಯಾಂಶ್ಚ ಯೇಷು ಯೇಷ್ವಿಹ ಕರ್ಮಸು|
12041015c ತಾಂಸ್ತಾಂಸ್ತೇಷ್ವೇವ ಯುಯುಜೇ ಪ್ರೀಯಮಾಣೋ ಮಹೀಪತಿಃ||
ಅನಂತರ ಪ್ರಸನ್ನಚಿತ್ತನಾದ ಮಹೀಪತಿಯು ಯಾರ್ಯಾರು ಯಾವ್ಯಾವ ಕರ್ಮಗಳಲ್ಲಿ ಸಮರ್ಥರೆಂದು ತಿಳಿದು ಅದರಂತೆಯೇ ಕಾರ್ಯಗಳನ್ನು ವಹಿಸಿಕೊಟ್ಟನು.
12041016a ವಿದುರಂ ಸಂಜಯಂ ಚೈವ ಯುಯುತ್ಸುಂ ಚ ಮಹಾಮತಿಮ್|
12041016c ಅಬ್ರವೀತ್ಪರವೀರಘ್ನೋ ಧರ್ಮಾತ್ಮಾ ಧರ್ಮವತ್ಸಲಃ||
ಪರವೀರಘ್ನ ಧರ್ಮಾತ್ಮಾ ಧರ್ಮವತ್ಸಲ ಯುಧಿಷ್ಠಿರನು ವಿದುರ-ಸಂಜಯ ಮತ್ತು ಮಹಾಮತಿ ಯುಯುತ್ಸುವಿಗೆ ಈ ರೀತಿ ಹೇಳಿದನು:
12041017a ಉತ್ಥಾಯೋತ್ಥಾಯ ಯತ್ಕಾರ್ಯಮಸ್ಯ ರಾಜ್ಞಃ ಪಿತುರ್ಮಮ|
12041017c ಸರ್ವಂ ಭವದ್ಭಿಃ ಕರ್ತವ್ಯಮಪ್ರಮತ್ತೈರ್ಯಥಾತಥಮ್||
“ಬೆಳಗಾದೊಡನೆಯೇ ಎದ್ದು ಈ ನನ್ನ ತಂದೆ ರಾಜನ ಕಾರ್ಯವೆಲ್ಲವನ್ನೂ ಯಥಾವತ್ತಾಗಿ ಮಾಡಿಕೊಡಬೇಕಾಗಿರುವುದು ನಿಮ್ಮೆಲ್ಲರ ಕರ್ತವ್ಯವಾಗಿರುತ್ತದೆ.
12041018a ಪೌರಜಾನಪದಾನಾಂ ಚ ಯಾನಿ ಕಾರ್ಯಾಣಿ ನಿತ್ಯಶಃ|
12041018c ರಾಜಾನಂ ಸಮನುಜ್ಞಾಪ್ಯ ತಾನಿ ಕಾರ್ಯಾಣಿ ಧರ್ಮತಃ||
ಪೌರ-ಜನಪದರ ಎಲ್ಲ ಕಾರ್ಯಗಳನ್ನೂ ರಾಜನ ಅಪ್ಪಣೆಯಂತೆ ನಿತ್ಯವೂ ಪೂರ್ಣಗೊಳಿಸುವುದೂ ನಿಮ್ಮ ಕರ್ತವ್ಯವಾಗಿರುತ್ತದೆ.””
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಭೀಮಾದಿಕರ್ಮನಿಯೋಗೇ ಏಕಚತ್ವಾರಿಂಶೋಽಧ್ಯಾಯಃ||
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಭೀಮಾದಿಕರ್ಮನಿಯೋಗ ಎನ್ನುವ ನಲ್ವತ್ತೊಂದನೇ ಅಧ್ಯಾಯವು.
[1] ಸಂಧಿ-ವಿಗ್ರಹ-ಯಾನ-ಆಸನ-ದ್ವೈಧೀಭಾವ-ಸಮಾಶ್ರಯಗಳೆಂಬ ದೇಶಕ್ಕೆ ಸಂಬಂಧಿಸಿದ ಆರು ಗುಣಗಳು.