Drona Parva: Chapter 12

ದ್ರೋಣ ಪರ್ವ: ದ್ರೋಣಾಭಿಷೇಕ ಪರ್ವ

೧೨

ಹನ್ನೊಂದನೆಯ ದಿನದ ಯುದ್ಧ

ಅರ್ಜುನನಿಂದ ಯುಧಿಷ್ಠಿರನಿಗೆ ಆಶ್ವಾಸನೆ (೧-೧೩). ಹನ್ನೊಂದನೆಯ ದಿನದ ಯುದ್ಧಾರಂಭ (೧೪-೨೮).

07012001 ಸಂಜಯ ಉವಾಚ|

07012001a ತತಸ್ತೇ ಸೈನಿಕಾಃ ಶ್ರುತ್ವಾ ತಂ ಯುಧಿಷ್ಠಿರನಿಗ್ರಹಂ|

07012001c ಸಿಂಹನಾದರವಾಂಶ್ಚಕ್ರುರ್ಬಾಣಶಂಖರವೈಃ ಸಹ||

ಸಂಜಯನು ಹೇಳಿದನು: “ಯುಧಿಷ್ಠಿರನ ಸೆರೆಹಿಡಿಯುವುದರ ಕುರಿತು ಅದನ್ನು ಕೇಳಿದ ಸೈನಿಕರು ಸಿಂಹನಾದಗೈದರು. ಬಾಣ ಶಂಖಗಳಿಂದ ತುಮುಲ ಶಬ್ಧಮಾಡಿದರು.

07012002a ತತ್ತು ಸರ್ವಂ ಯಥಾವೃತ್ತಂ ಧರ್ಮರಾಜೇನ ಭಾರತ|

07012002c ಆಪ್ತೈರಾಶು ಪರಿಜ್ಞಾತಂ ಭಾರದ್ವಾಜಚಿಕೀರ್ಷಿತಂ||

ಭಾರತ! ಭಾರದ್ವಾಜನು ಮಾಡಿದ ಪ್ರತಿಜ್ಞೆಯನ್ನು ಸಂಪೂರ್ಣವಾಗಿ ನಡೆದಂತೆ ಆಪ್ತರಿಂದ ಧರ್ಮರಾಜನು ತಿಳಿದುಕೊಂಡನು.

07012003a ತತಃ ಸರ್ವಾನ್ಸಮಾನಾಯ್ಯ ಭ್ರಾತೄನ್ಸೈನ್ಯಾಂಶ್ಚ ಸರ್ವಶಃ|

07012003c ಅಬ್ರವೀದ್ಧರ್ಮರಾಜಸ್ತು ಧನಂಜಯಮಿದಂ ವಚಃ||

ಆಗ ಎಲ್ಲಕಡೆಗಳಿಂದ ತಮ್ಮಂದಿರನ್ನೂ ಸೇನೆಗಳನ್ನೂ ಕರೆಯಿಸಿಕೊಂಡು ಧರ್ಮರಾಜನು ಧನಂಜಯನಿಗೆ ಈ ಮಾತುಗಳನ್ನಾಡಿದನು.

07012004a ಶ್ರುತಂ ತೇ ಪುರುಷವ್ಯಾಘ್ರ ದ್ರೋಣಸ್ಯಾದ್ಯ ಚಿಕೀರ್ಷಿತಂ|

07012004c ಯಥಾ ತನ್ನ ಭವೇತ್ಸತ್ಯಂ ತಥಾ ನೀತಿರ್ವಿಧೀಯತಾಂ||

“ಪುರುಷವ್ಯಾಘ್ರ! ಇಂದು ದ್ರೋಣನು ಮಾಡಿದ ಪ್ರತಿಜ್ಞೆಯನ್ನು ನೀನೂ ಕೇಳಿದೆಯಲ್ಲವೇ? ಅದು ಸತ್ಯವಾಗದ ಹಾಗೆ ನೀತಿಯನ್ನು ರೂಪಿಸಬೇಕಾಗಿದೆ.

07012005a ಸಾಂತರಂ ಹಿ ಪ್ರತಿಜ್ಞಾತಂ ದ್ರೋಣೇನಾಮಿತ್ರಕರ್ಶನ|

07012005c ತಚ್ಚಾಂತರಮಮೋಘೇಷೌ ತ್ವಯಿ ತೇನ ಸಮಾಹಿತಂ||

ಅಮಿತ್ರಕರ್ಶನ! ದ್ರೋಣನ ಪ್ರತಿಜ್ಞೆಯಲ್ಲಿ ಒಂದು ಛಿದ್ರವನ್ನಿಟ್ಟಿದ್ದಾರೆಂದು ತಿಳಿದಿದೆ. ಆ ಛಿದ್ರವು ಯಶಸ್ವಿಯಾಗದೇ ಇರುವುದು ನಿನ್ನ ಮೇಲೆ ಅವಲಂಬಿಸಿದೆ.

07012006a ಸ ತ್ವಮದ್ಯ ಮಹಾಬಾಹೋ ಯುಧ್ಯಸ್ವ ಮದನಂತರಂ|

07012006c ಯಥಾ ದುರ್ಯೋಧನಃ ಕಾಮಂ ನೇಮಂ ದ್ರೋಣಾದವಾಪ್ನುಯಾತ್||

ಮಹಾಬಾಹೋ! ದ್ರೋಣನ ಪ್ರತಿಜ್ಞೆಯ ಮೂಲಕವಾಗಿ ದುರ್ಯೋಧನನು ತನ್ನ ಇಚ್ಛೆಯನ್ನು ಪೂರೈಸಿಕೊಳ್ಳದ ಹಾಗೆ ಇಂದು ನೀನು ನನ್ನ ಹತ್ತಿರವಿದ್ದೇ ಯುದ್ಧಮಾಡಬೇಕು!”

07012007 ಅರ್ಜುನ ಉವಾಚ|

07012007a ಯಥಾ ಮೇ ನ ವಧಃ ಕಾರ್ಯ ಆಚಾರ್ಯಸ್ಯ ಕಥಂ ಚನ|

07012007c ತಥಾ ತವ ಪರಿತ್ಯಾಗೋ ನ ಮೇ ರಾಜಂಶ್ಚಿಕೀರ್ಷಿತಃ||

ಅರ್ಜುನನು ಹೇಳಿದನು: “ರಾಜನ್! ಆಚಾರ್ಯರ ವಧೆಯು ಎಂದೂ ಹೇಗೆ ನನ್ನ ಕೆಲಸವಲ್ಲವೋ ಹಾಗೆ ನಿನ್ನನ್ನು ಪರಿತ್ಯಜಿಸುವುದೂ ನಾನು ಇಚ್ಛಿಸುವ ಕೆಲಸವಲ್ಲ.

07012008a ಅಪ್ಯೇವಂ ಪಾಂಡವ ಪ್ರಾಣಾನುತ್ಸೃಜೇಯಮಹಂ ಯುಧಿ|

07012008c ಪ್ರತೀಯಾಂ ನಾಹಮಾಚಾರ್ಯಂ ತ್ವಾಂ ನ ಜಹ್ಯಾಂ ಕಥಂ ಚನ||

ಪಾಂಡವ! ಯುದ್ಧದಲ್ಲಿ ನಾನು ಪ್ರಾಣಗಳನ್ನು ತ್ಯಜಿಸಿಯೇನು. ಆದರೆ ಆಚಾರ್ಯರ ಕುರಿತು ವಿರೋಧಭಾವನೆಯನ್ನು ಮಾತ್ರ ಖಂಡಿತವಾಗಿಯೂ ಇಟ್ಟುಕೊಳ್ಳುವುಲ್ಲ.

07012009a ತ್ವಾಂ ನಿಗೃಹ್ಯಾಹವೇ ರಾಜನ್ಧಾರ್ತರಾಷ್ಟ್ರೋ ಯಮಿಚ್ಚತಿ|

07012009c ನ ಸ ತಂ ಜೀವಲೋಕೇಽಸ್ಮಿನ್ಕಾಮಂ ಪ್ರಾಪ್ತಃ ಕಥಂ ಚನ||

ರಾಜನ್! ನಿನ್ನನ್ನು ಸಮರದಲ್ಲಿ ಬಂಧಿಸಲು ಧಾರ್ತರಾಷ್ಟ್ರನು ಏನು ಇಚ್ಛಿಸಿರುವನೋ ಆ ಬಯಕೆಯನ್ನು ಅವನು ಈ ಜೀವಲೋಕದಲ್ಲಿ ಎಂದೂ ಪೂರೈಸಿಕೊಳ್ಳಲಾರ.

07012010a ಪ್ರಪತೇದ್ದೌಃ ಸನಕ್ಷತ್ರಾ ಪೃಥಿವೀ ಶಕಲೀಭವೇತ್|

07012010c ನ ತ್ವಾಂ ದ್ರೋಣೋ ನಿಗೃಹ್ಣೀಯಾಜ್ಜೀವಮಾನೇ ಮಯಿ ಧ್ರುವಂ||

ನಕ್ಷತ್ರಸಹಿತವಾಗಿ ಆಕಾಶವೇ ಕೆಳಗೆ ಬೀಳಬಹುದು. ಭೂಮಿಯು ಚೂರುಚೂರಾಗಬಹುದು. ಆದರೆ ನಾನು ಜೀವಿಸಿರುವಾಗ ದ್ರೋಣರು ನಿನ್ನನ್ನು ಸೆರೆಹಿಡಿಯಲಾರರು. ಇದು ಖಂಡಿತ.

07012011a ಯದಿ ತಸ್ಯ ರಣೇ ಸಾಹ್ಯಂ ಕುರುತೇ ವಜ್ರಭೃತ್ಸ್ವಯಂ|

07012011c ದೇವೈರ್ವಾ ಸಹಿತೋ ದೈತ್ಯೈರ್ನ ತ್ವಾಂ ಪ್ರಾಪ್ಸ್ಯತ್ಯಸೌ ಮೃಧೇ||

ಒಂದುವೇಳೆ ಅವನಿಗೆ ರಣದಲ್ಲಿ ಸಹಾಯವಾಗಿ ಸ್ವಯಂ ವಜ್ರಭೃತುವು ದೇವ ಅಥವಾ ದೈತ್ಯರೊಂದಿಗೆ ಬಂದರೂ ಕೂಡ ಅವನು ನಿನ್ನನ್ನು ಯುದ್ಧದಲ್ಲಿ ಬಂಧಿಸಲಾರನು.

07012012a ಮಯಿ ಜೀವತಿ ರಾಜೇಂದ್ರ ನ ಭಯಂ ಕರ್ತುಮರ್ಹಸಿ|

07012012c ದ್ರೋಣಾದಸ್ತ್ರಭೃತಾಂ ಶ್ರೇಷ್ಠಾತ್ಸರ್ವಶಸ್ತ್ರಭೃತಾಮಪಿ||

ರಾಜೇಂದ್ರ! ನಾನು ಜೀವಿಸಿರುವಾಗ ನೀನು ಅಸ್ತ್ರಭೃತರಲ್ಲಿ ಶ್ರೇಷ್ಠ ದ್ರೋಣರಿಗಾಗಲೀ ಸರ್ವ ಶಸ್ತ್ರಭೃತರಿಗಾಗಲೀ ಭಯಪಡಬಾರದು.

07012013a ನ ಸ್ಮರಾಮ್ಯನೃತಾಂ ವಾಚಂ ನ ಸ್ಮರಾಮಿ ಪರಾಜಯಂ|

07012013c ನ ಸ್ಮರಾಮಿ ಪ್ರತಿಶ್ರುತ್ಯ ಕಿಂ ಚಿದಪ್ಯನಪಾಕೃತಂ||

ಸುಳ್ಳುಹೇಳಿರುವುದು ನೆನಪಿಲ್ಲ. ಪರಾಜಯಗೊಂಡಿದುದು ನೆನಪಿಲ್ಲ. ಎಂದಾದರೂ ಪ್ರತಿಜ್ಞೆಯನ್ನು ಸುಳ್ಳಾಗಿಸಿ ನಡೆದುಕೊಂಡಿದುದರ ನೆನಪಿಲ್ಲ.””

07012014 ಸಂಜಯ ಉವಾಚ|

07012014a ತತಃ ಶಂಖಾಶ್ಚ ಭೇರ್ಯಶ್ಚ ಮೃದಂಗಾಶ್ಚಾನಕೈಃ ಸಹ|

07012014c ಪ್ರಾವಾದ್ಯಂತ ಮಹಾರಾಜ ಪಾಂಡವಾನಾಂ ನಿವೇಶನೇ||

ಸಂಜಯನು ಹೇಳಿದನು: “ಮಹಾರಾಜ! ಆಗ ಪಾಂಡವರ ಶಿಬಿರದಲ್ಲಿ ಶಂಖ, ಭೇರಿ, ಮೃದಂಗ, ಅನಕಗಳನ್ನು ಒಟ್ಟಿಗೇ ಬಾರಿಸಲಾಯಿತು.

07012015a ಸಿಂಹನಾದಶ್ಚ ಸಂಜಜ್ಞೇ ಪಾಂಡವಾನಾಂ ಮಹಾತ್ಮನಾಂ|

07012015c ಧನುರ್ಜ್ಯಾತಲಶಬ್ದಶ್ಚ ಗಗನಸ್ಪೃಕ್ಸುಭೈರವಃ||

ಮಹಾತ್ಮ ಪಾಂಡವರ ಸಿಂಹನಾದವೂ ಸೇರಿಕೊಂಡು ಕೇಳಿಬಂದಿತು. ಧನುಸ್ಸಿನ ಭಯಂಕರ ಟೇಂಕಾರ ಶಬ್ಧವು ಗಗನದಲ್ಲಿ ಮೊಳಗಿತು.

07012016a ತಂ ಶ್ರುತ್ವಾ ಶಂಖನಿರ್ಘೋಷಂ ಪಾಂಡವಸ್ಯ ಮಹಾತ್ಮನಃ|

07012016c ತ್ವದೀಯೇಷ್ವಪ್ಯನೀಕೇಷು ವಾದಿತ್ರಾಣ್ಯಭಿಜಘ್ನಿರೇ||

ಮಹಾತ್ಮ ಪಾಂಡವರ ಶಂಖನಿರ್ಘೋಷವನ್ನು ಕೇಳಿ ನಿನ್ನವರ ಸೇನೆಗಳಲ್ಲಿಯೂ ಕೂಡ ವಾದಿತ್ರಾದಿ ವಾದ್ಯಗಳನ್ನು ಬಾರಿಸಲಾಯಿತು.

07012017a ತತೋ ವ್ಯೂಢಾನ್ಯನೀಕಾನಿ ತವ ತೇಷಾಂ ಚ ಭಾರತ|

07012017c ಶನೈರುಪೇಯುರನ್ಯೋನ್ಯಂ ಯೋತ್ಸ್ಯಮಾನಾನಿ ಸಂಯುಗೇ||

ಭಾರತ! ಆಗ ನಿನ್ನ ಮತ್ತು ಅವರ ಸೇನೆಗಳನ್ನು ವ್ಯೂಹಗಳಲ್ಲಿ ರಚಿಸಲಾಯಿತು. ಮೆಲ್ಲ ಮೆಲ್ಲನೆ ರಣರಂಗದಲ್ಲಿ ಅನ್ಯೋನ್ಯರೊಡನೆ ಯುದ್ಧಮಾಡತೊಡಗಿದರು.

07012018a ತತಃ ಪ್ರವವೃತೇ ಯುದ್ಧಂ ತುಮುಲಂ ಲೋಮಹರ್ಷಣ|

07012018c ಪಾಂಡವಾನಾಂ ಕುರೂಣಾಂ ಚ ದ್ರೋಣಪಾಂಚಾಲ್ಯಯೋರಪಿ||

ಆಗ ಪಾಂಡವ-ಕೌರವರ ಮತ್ತು ದ್ರೋಣ-ಪಾಂಚಾಲ್ಯರ ರೋಮಾಂಚಕಾರಿ ತುಮುಲ ಯುದ್ಧವು ನಡೆಯಿತು.

07012019a ಯತಮಾನಾಃ ಪ್ರಯತ್ನೇನ ದ್ರೋಣಾನೀಕವಿಶಾತನೇ|

07012019c ನ ಶೇಕುಃ ಸೃಂಜಯಾ ರಾಜಂಸ್ತದ್ಧಿ ದ್ರೋಣೇನ ಪಾಲಿತಂ||

ರಾಜನ್! ದ್ರೋಣನ ಸೇನೆಯನ್ನು ನಾಶಗೊಳಿಸಲು ಪ್ರಯತ್ನಿಸಿದರೂ ದ್ರೋಣನಿಂದ ಪಾಲಿತವಾದ ಸೇನೆಯನ್ನು ವಿನಾಶಗೊಳಿಸಲು ಸೃಂಜಯರು ಶಕ್ಯರಾಗಲಿಲ್ಲ.

07012020a ತಥೈವ ತವ ಪುತ್ರಸ್ಯ ರಥೋದಾರಾಃ ಪ್ರಹಾರಿಣಃ|

07012020c ನ ಶೇಕುಃ ಪಾಂಡವೀಂ ಸೇನಾಂ ಪಾಲ್ಯಮಾನಾಂ ಕಿರೀಟಿನಾ||

ಹಾಗೆಯೇ ನಿನ್ನ ಮಗನ ರಥೋದಾರ ಪ್ರಹಾರಿಗಳೂ ಕೂಡ ಕಿರೀಟಿಯಿಂದ ಪಾಲಿತಗೊಂಡ ಪಾಂಡವರ ಸೇನೆಯನ್ನು ನಾಶಗೊಳಿಸಲು ಶಕ್ಯರಾಗಲಿಲ್ಲ.

07012021a ಆಸ್ತಾಂ ತೇ ಸ್ತಿಮಿತೇ ಸೇನೇ ರಕ್ಷ್ಯಮಾಣೇ ಪರಸ್ಪರಂ|

07012021c ಸಂಪ್ರಸುಪ್ತೇ ಯಥಾ ನಕ್ತಂ ವನರಾಜ್ಯೌ ಸುಪುಷ್ಪಿತೇ||

ರಾತ್ರಿವೇಳೆ ಸುಪುಷ್ಪಿತ ವನರಾಜಿಗಳು ಹಂದಾಡದೇ ನಿದ್ರಿಸುತ್ತಿರುವಂತೆ ಪರಸ್ಪರರಿಂದ ರಕ್ಷಿಸಲ್ಪಟ್ಟ ಆ ಸೇನೆಗಳು ಸ್ತಿಮಿತವಾಗಿಬಿಟ್ಟಿದ್ದವು.

07012022a ತತೋ ರುಕ್ಮರಥೋ ರಾಜನ್ನರ್ಕೇಣೇವ ವಿರಾಜತಾ|

07012022c ವರೂಥಿನಾ ವಿನಿಷ್ಪತ್ಯ ವ್ಯಚರತ್ಪೃತನಾಂತರೇ||

ಆಗ ರಾಜನ್! ರುಕ್ಮರಥ ದ್ರೋಣನು ಸೂರ್ಯನಂತೆ ವಿರಾಜಿಸುತ್ತಾ ಸೈನ್ಯದ ಗುಂಪಿನಿಂದ ಹೊರಬಂದು ಸೇನಾವಿಭಾಗಗಳ ಮುಂಭಾಗದಲ್ಲಿ ಸಂಚರಿಸತೊಡಗಿದನು.

07012023a ತಮುದ್ಯತಂ ರಥೇನೈಕಮಾಶುಕಾರಿಣಮಾಹವೇ|

07012023c ಅನೇಕಮಿವ ಸಂತ್ರಾಸಾನ್ಮೇನಿರೇ ಪಾಂಡುಸೃಂಜಯಾಃ||

ಆಹವದಲ್ಲಿ ಒಂದೇರಥದಲ್ಲಿ ಕುಳಿತು ಬಾಣಗಳ ಮಳೆಯನ್ನು ಅವ್ಯಾಹತವಾಗಿ ಸುರಿಸಲು ಅನೇಕ ದ್ರೋಣರು ತಮ್ಮೊಡನೆ ಹೋರಾಡುತ್ತಿರುವರೋ ಏನೋ ಎಂದು ಪಾಂಡು-ಸೃಂಜಯರು ಅಂದುಕೊಂಡರು.

07012024a ತೇನ ಮುಕ್ತಾಃ ಶರಾ ಘೋರಾ ವಿಚೇರುಃ ಸರ್ವತೋದಿಶಂ|

07012024c ತ್ರಾಸಯಂತೋ ಮಹಾರಾಜ ಪಾಂಡವೇಯಸ್ಯ ವಾಹಿನೀಂ||

ಮಹಾರಾಜ! ಅವನು ಬಿಟ್ಟ ಘೋರ ಶರಗಳು ಎಲ್ಲ ದಿಕ್ಕುಗಳಲ್ಲಿ ಹರಡಿ ಪಾಂಡವೇಯನ ಸೇನೆಯನ್ನು ಬಹುವಾಗಿ ಭಯಪಡಿಸಿದವು.

07012025a ಮಧ್ಯಂ ದಿನಮನುಪ್ರಾಪ್ತೋ ಗಭಸ್ತಿಶತಸಂವೃತಃ|

07012025c ಯಥಾದೃಶ್ಯತ ಘರ್ಮಾಂಶುಸ್ತಥಾ ದ್ರೋಣೋಽಪ್ಯದೃಶ್ಯತ||

ನೂರಾರು ಕಿರಣಗಳ ಸೂರ್ಯನು ಮಧ್ಯಾಹ್ನದ ಹೊತ್ತು ತನ್ನ ಉಷ್ಣತೆಯಿಂದ ಸುಡುವಂತೆ ದ್ರೋಣನು ಕಂಡನು.

07012026a ನ ಚೈನಂ ಪಾಂಡವೇಯಾನಾಂ ಕಶ್ಚಿಚ್ಚಕ್ನೋತಿ ಮಾರಿಷ|

07012026c ವೀಕ್ಷಿತುಂ ಸಮರೇ ಕ್ರುದ್ಧಂ ಮಹೇಂದ್ರಮಿವ ದಾನವಾಃ||

ಮಾರಿಷ! ಸಮರದಲ್ಲಿ ಕ್ರುದ್ಧನಾದ ಮಹೇಂದ್ರನನ್ನು ದಾನವರು ಹೇಗೋ ಹಾಗೆ ಅವನನ್ನು ನೋಡಲು ಪಾಂಡವರು ಯಾರೂ ಶಕ್ಯರಾಗಿರಲಿಲ್ಲ.

07012027a ಮೋಹಯಿತ್ವಾ ತತಃ ಸೈನ್ಯಂ ಭಾರದ್ವಾಜಃ ಪ್ರತಾಪವಾನ್|

07012027c ಧೃಷ್ಟದ್ಯುಮ್ನಬಲಂ ತೂರ್ಣಂ ವ್ಯಧಮನ್ನಿಶಿತೈಃ ಶರೈಃ||

ಪ್ರತಾಪವಾನ್ ಭಾರದ್ವಾಜನು ಬೇಗನೇ ಸೇನೆಗಳನ್ನು ಮೂರ್ಛೆಗೊಳಿಸಿ ಧೃಷ್ಟದ್ಯುಮ್ನನ ಸೇನೆಯನ್ನು ನಿಶಿತ ಶರಗಳಿಂದ ವಧಿಸಿದನು.

07012028a ಸ ದಿಶಃ ಸರ್ವತೋ ರುದ್ಧ್ವಾ ಸಂವೃತ್ಯ ಖಮಜಿಹ್ಮಗೈಃ|

07012028c ಪಾರ್ಷತೋ ಯತ್ರ ತತ್ರೈವ ಮಮೃದೇ ಪಾಂಡುವಾಹಿನೀಂ||

ಜಿಹ್ಮಗಗಳಿಂದ ಅವನು ಎಲ್ಲ ದಿಕ್ಕುಗಳನ್ನೂ ಆಕಾಶವನ್ನೂ ತುಂಬಿಸಿಬಿಟ್ಟನು. ಪಾರ್ಷತನು ಎಲ್ಲಿದ್ದನೋ ಅಲ್ಲಲ್ಲಿಯೇ ಪಾಂಡವ ವಾಹಿನಿಯನ್ನು ಮರ್ದಿಸಿದನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ದ್ರೋಣಾಭಿಷೇಕ ಪರ್ವಣಿ ಅರ್ಜುನಕೃತಯುಧಿಷ್ಠಿರಾಶ್ವಾಸನೇ ದ್ವಾದಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ದ್ರೋಣಾಭಿಷೇಕ ಪರ್ವದಲ್ಲಿ ಅರ್ಜುನಕೃತಯುಧಿಷ್ಠಿರಾಶ್ವಾಸನ ಎನ್ನುವ ಹನ್ನೆರಡನೇ ಅಧ್ಯಾಯವು.

Image result for indian motifs against white background

Comments are closed.