ದ್ರೋಣ ಪರ್ವ: ಜಯದ್ರಥವಧ ಪರ್ವ
೧೧೦
ಧೃತರಾಷ್ಟ್ರನ ಪಶ್ಚಾತ್ತಾಪ (೧-೨೩). ಭೀಮಸೇನನಿಂದ ಐವರು ಧಾರ್ತರಾಷ್ಟ್ರರ - ದುರ್ಮರ್ಷಣ, ದುಃಸ್ಸಹ, ದುರ್ಮದ, ದುರ್ಧರ ಮತ್ತು ಜಯ – ವಧೆ (೨೪-೩೯).
07110001 ಧೃತರಾಷ್ಟ್ರ ಉವಾಚ|
07110001a ದೈವಮೇವ ಪರಂ ಮನ್ಯೇ ಧಿಕ್ಪೌರುಷಮನರ್ಥಕಂ|
07110001c ಯತ್ರಾಧಿರಥಿರಾಯಸ್ತೋ ನಾತರತ್ಪಾಂಡವಂ ರಣೇ||
ಧೃತರಾಷ್ಟ್ರನು ಹೇಳಿದನು: “ಪ್ರಯತ್ನಪಟ್ಟು ಹೋರಾಡುತ್ತಿರುವ ಆಧಿರಥಿ ಕರ್ಣನೂ ರಣದಲ್ಲಿ ಪಾಂಡವ ಭೀಮನನ್ನು ಮೀರಿಸಲಾರನೆಂದರೆ ದೈವವೇ ಮೇಲೆಂದು ಸ್ವೀಕರಿಸಬೇಕು. ಅರ್ಥವಿಲ್ಲದ ಪೌರುಷಕ್ಕೆ ಧಿಕ್ಕಾರ!
07110002a ಕರ್ಣಃ ಪಾರ್ಥಾನ್ಸಗೋವಿಂದಾಂ ಜೇತುಮುತ್ಸಹತೇ ರಣೇ|
07110002c ನ ಚ ಕರ್ಣಸಮಂ ಯೋಧಂ ಲೋಕೇ ಪಶ್ಯಾಮಿ ಕಂ ಚನ|
07110002e ಇತಿ ದುರ್ಯೋಧನಸ್ಯಾಹಮಶ್ರೌಷಂ ಜಲ್ಪತೋ ಮುಹುಃ||
“ಕರ್ಣನು ಗೋವಿಂದನೊಡನೆ ಪಾರ್ಥರನ್ನು ರಣದಲ್ಲಿ ಗೆಲ್ಲುವ ಉತ್ಸಾಹದಿಂದ ಇದ್ದಾನೆ. ಲೋಕದಲ್ಲಿ ಕರ್ಣನ ಸಮನಾದ ಯೋಧನು ಯಾರನ್ನೂ ಕಾಣೆನು!” ಎಂದು ದುರ್ಬುದ್ಧಿ ದುರ್ಯೋಧನನು ಮತ್ತೆ ಮತ್ತೆ ಹೇಳುತ್ತಿದ್ದನು.
07110003a ಕರ್ಣೋ ಹಿ ಬಲವಾನ್ ಶೂರೋ ದೃಢಧನ್ವಾ ಜಿತಕ್ಲಮಃ|
07110003c ಇತಿ ಮಾಮಬ್ರವೀತ್ಸೂತ ಮಂದೋ ದುರ್ಯೋಧನಃ ಪುರಾ||
ಸೂತ! “ಕರ್ಣನು ಬಲವಂತ. ಶೂರ. ದೃಢಧನ್ವಿ. ಆಯಾಸಗೊಳ್ಳದವ.” ಎಂದೆಲ್ಲ ಹಿಂದೆ ನನಗೆ ಮಂದ ದುರ್ಯೋಧನನು ಹೇಳುತ್ತಿದ್ದನು.
07110004a ವಸುಷೇಣಸಹಾಯಂ ಮಾಂ ನಾಲಂ ದೇವಾಪಿ ಸಂಯುಗೇ|
07110004c ಕಿಮು ಪಾಂಡುಸುತಾ ರಾಜನ್ಗತಸತ್ತ್ವಾ ವಿಚೇತಸಃ||
“ರಾಜನ್! ವಸುಷೇಣನ ಸಹಾಯವೊಂದಿದ್ದರೆ ನನಗೆ ಯುದ್ಧದಲ್ಲಿ ದೇವತೆಗಳೂ ಸಮರಲ್ಲ. ಇನ್ನು ಸತ್ತ್ವವನ್ನು ಕಳೆದುಕೊಂಡಿರುವ ವಿಚೇತಸ ಪಾಂಡುಸುತರು ಯಾವ ಲೆಖ್ಕಕ್ಕೆ?”
07110005a ತತ್ರ ತಂ ನಿರ್ಜಿತಂ ದೃಷ್ಟ್ವಾ ಭುಜಂಗಮಿವ ನಿರ್ವಿಷಂ|
07110005c ಯುದ್ಧಾತ್ಕರ್ಣಮಪಕ್ರಾಂತಂ ಕಿಂ ಸ್ವಿದ್ದುರ್ಯೋಧನೋಽಬ್ರವೀತ್||
ಅಲ್ಲಿ ಸೋತು ವಿಷವಿಲ್ಲದ ಸರ್ಪದಂತೆ ಯುದ್ಧದಿಂದ ನುಸುಳಿಕೊಂಡು ಹೋದ ಕರ್ಣನನ್ನು ನೋಡಿ ದುರ್ಯೋಧನನು ಏನನ್ನಾದರೂ ಹೇಳಿದನೇ?
07110006a ಅಹೋ ದುರ್ಮುಖಮೇವೈಕಂ ಯುದ್ಧಾನಾಮವಿಶಾರದಂ|
07110006c ಪ್ರಾವೇಶಯದ್ಧುತವಹಂ ಪತಂಗಮಿವ ಮೋಹಿತಃ||
ಅಯ್ಯೋ! ಮೋಹಿತ ದುರ್ಯೋಧನನು ಯುದ್ಧದಲ್ಲಿ ಹೆಚ್ಚು ಪಳಗಿರದ ದುರ್ಮುಖನೊಬ್ಬನನ್ನೇ ಪತಂಗವನ್ನು ಬೆಂಕಿಯಲ್ಲಿ ಹಾಕುವಂತೆ ಭೀಮನೊಡನೆ ಯುದ್ಧಮಾಡಲು ಕಳುಹಿಸಿದನು.
07110007a ಅಶ್ವತ್ಥಾಮಾ ಮದ್ರರಾಜಃ ಕೃಪಃ ಕರ್ಣಶ್ಚ ಸಂಗತಾಃ|
07110007c ನ ಶಕ್ತಾಃ ಪ್ರಮುಖೇ ಸ್ಥಾತುಂ ನೂನಂ ಭೀಮಸ್ಯ ಸಂಜಯ||
ಸಂಜಯ! ಭೀಮನ ಮುಂದೆ ಅಶ್ವತ್ಥಾಮ, ಮದ್ರರಾಜ, ಕೃಪ ಮತ್ತು ಕರ್ಣರು ಒಂದಾಗಿಯೂ ನಿಲ್ಲಲು ಶಕ್ಯರಾಗಲಿಲ್ಲ.
07110008a ತೇಽಪಿ ಚಾಸ್ಯ ಮಹಾಘೋರಂ ಬಲಂ ನಾಗಾಯುತೋಪಮಂ|
07110008c ಜಾನಂತೋ ವ್ಯವಸಾಯಂ ಚ ಕ್ರೂರಂ ಮಾರುತತೇಜಸಃ||
ಅವರೂ ಕೂಡ ಈ ಮಾರುತತೇಜಸ್ವಿಯ ಸಾವಿರ ಆನೆಗಳ ಸಮನಾದ ಮಹಾಘೋರ ಬಲವನ್ನೂ, ಅವನ ಕ್ರೂರ ಕಸರತ್ತುಗಳನ್ನೂ ಬಲ್ಲರು.
07110009a ಕಿಮರ್ಥಂ ಕ್ರೂರಕರ್ಮಾಣಂ ಯಮಕಾಲಾಂತಕೋಪಮಂ|
07110009c ಬಲಸಂರಂಭವೀರ್ಯಜ್ಞಾಃ ಕೋಪಯಿಷ್ಯಂತಿ ಸಂಯುಗೇ||
ಆ ಕ್ರೂರಕರ್ಮಿ, ಪ್ರಳಯಕಾಲದ ಯಮನಂತಿರುವವನನ್ನು ಅವನ ಬಲ-ಉತ್ಸಾಹ-ವೀರ್ಯಗಳನ್ನು ತಿಳಿದವರೂ ರಣದಲ್ಲಿ ಏಕೆ ಕೆರಳಿಸಿದರು?
07110010a ಕರ್ಣಸ್ತ್ವೇಕೋ ಮಹಾಬಾಹುಃ ಸ್ವಬಾಹುಬಲಮಾಶ್ರಿತಃ|
07110010c ಭೀಮಸೇನಮನಾದೃತ್ಯ ರಣೇಽಯುಧ್ಯತ ಸೂತಜಃ||
ಸೂತಜ! ಮಹಾಬಾಹು ಕರ್ಣನು ಭೀಮಸೇನನ ಬಲವನ್ನು ಲೆಕ್ಕಿಸದೇ ತಾನೊಬ್ಬನೇ ತನ್ನ ಬಲವನ್ನು ಮಾತ್ರ ಅವಲಂಬಿಸಿಕೊಂಡು ರಣದಲ್ಲಿ ಯುದ್ಧಮಾಡಿದನು.
07110011a ಯೋಽಜಯತ್ಸಮರೇ ಕರ್ಣಂ ಪುರಂದರ ಇವಾಸುರಂ|
07110011c ನ ಸ ಪಾಂಡುಸುತೋ ಜೇತುಂ ಶಕ್ಯಃ ಕೇನ ಚಿದಾಹವೇ||
ಸಮರದಲ್ಲಿ ಪುರಂದರನು ಅಸುರನನ್ನು ಹೇಗೋ ಹಾಗೆ ಕರ್ಣನನ್ನು ಗೆದ್ದ ಆ ಪಾಂಡುಸುತನನ್ನು ಯುದ್ಧದಲ್ಲಿ ಗೆಲ್ಲಲು ಯಾರಿಗೂ ಸಾಧ್ಯವಿಲ್ಲ.
07110012a ದ್ರೋಣಂ ಯಃ ಸಂಪ್ರಮಥ್ಯೈಕಃ ಪ್ರವಿಷ್ಟೋ ಮಮ ವಾಹಿನೀಂ|
07110012c ಭೀಮೋ ಧನಂಜಯಾನ್ವೇಷೀ ಕಸ್ತಮರ್ಚೇಜ್ಜಿಜೀವಿಷುಃ||
ಧನಂಜಯನನ್ನು ಹುಡುಕುತ್ತಾ ದ್ರೋಣನನ್ನೇ ಸದೆಬಡಿದು ಏಕಾಂಗಿಯಾಗಿ ನನ್ನ ಸೇನೆಗಳನ್ನು ಹೊಕ್ಕಿದ ಆ ಭೀಮನನ್ನು ಜೀವಿಸಲು ಬಯಸಿದ ಯಾರುತಾನೇ ಎದುರಿಸಿಯಾರು?
07110013a ಕೋ ಹಿ ಸಂಜಯ ಭೀಮಸ್ಯ ಸ್ಥಾತುಮುತ್ಸಹತೇಽಗ್ರತಃ|
07110013c ಉದ್ಯತಾಶನಿವಜ್ರಸ್ಯ ಮಹೇಂದ್ರಸ್ಯೇವ ದಾನವಃ||
ಸಂಜಯ! ಭೀಮನ ಎದಿರು ನಿಲ್ಲಲು ಯಾರು ತಾನೇ ಉತ್ಸಾಹಿತರಾಗಿದ್ದಾರೆ? ವಜ್ರವನ್ನು ಎತ್ತಿ ಹಿಡಿದಿರುವ ಮಹೇಂದ್ರನನ್ನು ಯಾವ ದಾನವನು ಎದುರಿಸಿಯಾನು?
07110014a ಪ್ರೇತರಾಜಪುರಂ ಪ್ರಾಪ್ಯ ನಿವರ್ತೇತಾಪಿ ಮಾನವಃ|
07110014c ನ ಭೀಮಸೇನಂ ಸಂಪ್ರಾಪ್ಯ ನಿವರ್ತೇತ ಕದಾ ಚನ||
ಯುಮರಾಜನ ಪುರವನ್ನು ಸೇರಿದ ಮನುಷ್ಯರೂ ಹಿಂದಿರುಗಿ ಬಂದು ಬಿಡಬಹುದು. ಆದರೆ ಭೀಮಸೇನನನ್ನು ಎದುರಿಸಿ ಯಾರೂ ಹಿಂದಿರುಗುವುದಿಲ್ಲ.
07110015a ಪತಂಗಾ ಇವ ವಹ್ನಿಂ ತೇ ಪ್ರಾವಿಶನ್ನಲ್ಪಚೇತಸಃ|
07110015c ಯೇ ಭೀಮಸೇನಂ ಸಂಕ್ರುದ್ಧಮಭ್ಯಧಾವನ್ವಿಮೋಹಿತಾಃ||
ಸಂಕ್ರುದ್ಧ ಭೀಮಸೇನನನ್ನು ಅಲ್ಪಚೇತಸ ವಿಮೋಹಿತ ಯಾರು ಆಕ್ರಮಣಿಸುತ್ತಾರೋ ಅವರು ಅಗ್ನಿಯನ್ನು ಪ್ರವೇಶಿಸುವ ಪತಂಗಗಳಂತೆ.
07110016a ಯತ್ತತ್ಸಭಾಯಾಂ ಭೀಮೇನ ಮಮ ಪುತ್ರವಧಾಶ್ರಯಂ|
07110016c ಶಪ್ತಂ ಸಂರಂಭಿಣೋಗ್ರೇಣ ಕುರೂಣಾಂ ಶೃಣ್ವತಾಂ ತದಾ||
07110017a ತನ್ನೂನಮಭಿಸಂಚಿಂತ್ಯ ದೃಷ್ಟ್ವಾ ಕರ್ಣಂ ಚ ನಿರ್ಜಿತಂ|
07110017c ದುಃಶಾಸನಃ ಸಹ ಭ್ರಾತ್ರಾ ಭಯಾದ್ಭೀಮಾದುಪಾರಮತ್||
ಅಂದು ಸಭೆಯಲ್ಲಿ ಕೋಪದಿಂದ ಉಗ್ರನಾಗಿದ್ದ ಭೀಮನು ಕುರುಗಳು ಕೇಳಿಸಿಕೊಳ್ಳುವಂತೆ ನನ್ನ ಮಕ್ಕಳ ವಧೆಯ ಕುರಿತು ಮಾಡಿದ ಶಪಥವನ್ನು ನೆನಪಿಸಿಕೊಂಡೇ ಮತ್ತು ಕರ್ಣನೂ ಅವನಿಂದ ಸೋತಿರುವುದನ್ನು ನೋಡಿ ಹೆದರಿಯೇ ಸಹೋದರರೊಂದಿಗೆ ದುಃಶಾಸನನು ಅವನಿಂದ ದೂರವಿದ್ದಿರಬೇಕು.
07110018a ಯಶ್ಚ ಸಂಜಯ ದುರ್ಬುದ್ಧಿರಬ್ರವೀತ್ಸಮಿತೌ ಮುಹುಃ|
07110018c ಕರ್ಣೋ ದುಃಶಾಸನೋಽಹಂ ಚ ಜೇಷ್ಯಾಮೋ ಯುಧಿ ಪಾಂಡವಾನ್||
ಸಂಜಯ! “ಯುದ್ಧದಲ್ಲಿ ಕರ್ಣ, ದುಃಶಾಸನ ಮತ್ತು ನಾನು ಪಾಂಡವರನ್ನು ಗೆಲ್ಲುತ್ತೇವೆ!” ಎಂದು ಸಮಿತಿಯಲ್ಲಿ ಆ ದುರ್ಬುದ್ಧಿ ದುರ್ಯೋಧನನು ಮತ್ತೆ ಮತ್ತೆ ಹೇಳುತ್ತಿದ್ದನು.
07110019a ಸ ನೂನಂ ವಿರಥಂ ದೃಷ್ಟ್ವಾ ಕರ್ಣಂ ಭೀಮೇನ ನಿರ್ಜಿತಂ|
07110019c ಪ್ರತ್ಯಾಖ್ಯಾನಾಚ್ಚ ಕೃಷ್ಣಸ್ಯ ಭೃಶಂ ತಪ್ಯತಿ ಸಂಜಯ||
ಸಂಜಯ! ಕರ್ಣನು ಭೀಮನಿಂದ ಸೋತು ವಿರಥನಾದುದನ್ನು ನೋಡಿ ದುರ್ಯೋಧನನು ಕೃಷ್ಣನಿಗೆ ಹೇಳಿದುದರ ಕುರಿತು ಪಶ್ಚಾತ್ತಾಪಪಡುತ್ತಿರಬಹುದು.
07110020a ದೃಷ್ಟ್ವಾ ಭ್ರಾತೄನ್ಹತಾನ್ಯುದ್ಧೇ ಭೀಮಸೇನೇನ ದಂಶಿತಾನ್|
07110020c ಆತ್ಮಾಪರಾಧಾತ್ಸುಮಹನ್ನೂನಂ ತಪ್ಯತಿ ಪುತ್ರಕಃ||
ತನ್ನ ಕವಚಧಾರಿ ಸಹೋದರರು ಯುದ್ಧದಲ್ಲಿ ಭೀಮಸೇನನಿಂದ ಹತರಾದುದನ್ನು ನೋಡಿ ನನ್ನ ಮಗನು ತನ್ನ ಅಪರಾಧದಿಂದ ಬಹಳವಾಗಿ ಪರಿತಪಿಸುತ್ತಿರಬಹುದು.
07110021a ಕೋ ಹಿ ಜೀವಿತಮನ್ವಿಚ್ಚನ್ಪ್ರತೀಪಂ ಪಾಂಡವಂ ವ್ರಜೇತ್|
07110021c ಭೀಮಂ ಭೀಮಾಯುಧಂ ಕ್ರುದ್ಧಂ ಸಾಕ್ಷಾತ್ಕಾಲಮಿವ ಸ್ಥಿತಂ||
ಜೀವಂತವಾಗಿರಲು ಬಯಸಿದ ಯಾರು ತಾನೇ ಕ್ರುದ್ಧನಾಗಿ ಉರಿಯುತ್ತಿರುವ ಸಾಕ್ಷಾತ್ ಅಂತಕನಂತೆ ನಿಂತಿರುವ ಭೀಮಾಯುಧ ಪಾಂಡವ ಭೀಮನನ್ನು ಕೆರಳಿಸುತ್ತಾರೆ?
07110022a ವಡವಾಮುಖಮಧ್ಯಸ್ಥೋ ಮುಚ್ಯೇತಾಪಿ ಹಿ ಮಾನವಃ|
07110022c ನ ಭೀಮಮುಖಸಂಪ್ರಾಪ್ತೋ ಮುಚ್ಯೇತೇತಿ ಮತಿರ್ಮಮ||
ವಡವ ಅಗ್ನಿಯ ಮಧ್ಯದಿಂದಲಾದರೂ ಮನುಷ್ಯನು ಹೊರಬರಬಹುದು. ಆದರೆ ಭೀಮನ ಎದುರಿನಿಂದ ಬಿಡುಗಡೆಯಿಲ್ಲ ಎಂದು ನನ್ನ ಅಭಿಪ್ರಾಯ.
07110023a ನ ಪಾಂಡವಾ ನ ಪಾಂಚಾಲಾ ನ ಚ ಕೇಶವಸಾತ್ಯಕೀ|
07110023c ಜಾನಂತಿ ಯುಧಿ ಸಂರಬ್ಧಾ ಜೀವಿತಂ ಪರಿರಕ್ಷಿತುಂ||
ಯುದ್ಧದಲ್ಲಿ ಕ್ರುದ್ಧ ಪಾಂಡವರಾಗಲೀ, ಪಾಂಚಲರಾಗಲೀ, ಕೇಶವ-ಸಾತ್ಯಕಿಯರಾಗಲೀ, ತಮ್ಮ ಜೀವವನ್ನು ರಕ್ಷಿಸಿಕೊಳ್ಳಲು ನೋಡುವುದಿಲ್ಲ.”
07110024 ಸಂಜಯ ಉವಾಚ|
07110024a ಯತ್ಸಂಶೋಚಸಿ ಕೌರವ್ಯ ವರ್ತಮಾನೇ ಜನಕ್ಷಯೇ|
07110024c ತ್ವಮಸ್ಯ ಜಗತೋ ಮೂಲಂ ವಿನಾಶಸ್ಯ ನ ಸಂಶಯಃ||
ಸಂಜಯನು ಹೇಳಿದನು: “ಕೌರವ್ಯ! ನಡೆಯುತ್ತಿರುವ ಈ ಜನಕ್ಷಯವನ್ನೇನು ನೀನು ಶೋಕಿಸುತ್ತಿರುವೆಯೋ ಆ ಜಗತ್ತಿನ ವಿನಾಶಕ್ಕೆ ಮೂಲಕಾರಣನು ನೀನೇ ಎನ್ನುವುದರಲ್ಲಿ ಸಂಶಯವಿಲ್ಲ.
07110025a ಸ್ವಯಂ ವೈರಂ ಮಹತ್ಕೃತ್ವಾ ಪುತ್ರಾಣಾಂ ವಚನೇ ಸ್ಥಿತಃ|
07110025c ಉಚ್ಯಮಾನೋ ನ ಗೃಹ್ಣೀಷೇ ಮರ್ತ್ಯಃ ಪಥ್ಯಮಿವೌಷಧಂ||
ಮಕ್ಕಳ ಮಾತಿಗೆ ಬಂದು ಸ್ವಯಂ ನೀನೇ ಈ ಮಹಾ ವೈರವನ್ನು ಕಟ್ಟಿಕೊಂಡಿದ್ದೀಯೆ. ಹಿತವಾದುದನ್ನು ಒತ್ತಿ ಹೇಳಿದರೂ ಸಾಯುವವನು ಒತ್ತಾಯವಾಗಿ ಕುಡಿಸುವ ಔಷಧವನ್ನು ಹೇಗೋ ಹಾಗೆ ನೀನು ಅದನ್ನು ಸ್ವೀಕರಿಸಲಿಲ್ಲ.
07110026a ಸ್ವಯಂ ಪೀತ್ವಾ ಮಹಾರಾಜ ಕಾಲಕೂಟಂ ಸುದುರ್ಜರಂ|
07110026c ತಸ್ಯೇದಾನೀಂ ಫಲಂ ಕೃತ್ಸ್ನಮವಾಪ್ನುಹಿ ನರೋತ್ತಮ||
ನರೋತ್ತಮ! ಮಹಾರಾಜ! ಜೀರ್ಣಿಸಿಕೊಳ್ಳಲು ಅಸಾಧ್ಯವಾದ ಕಾಲಕೂಟ ವಿಷವನ್ನು ಸ್ವಯಂ ನೀನೇ ಕುಡಿದು ಅದರ ಈ ಪರಿಣಾಮಗಳನ್ನು ಅನುಭವಿಸುತ್ತಿದ್ದೀಯೆ.
07110027a ಯತ್ತು ಕುತ್ಸಯಸೇ ಯೋಧಾನ್ಯುಧ್ಯಮಾನಾನ್ಯಥಾಬಲಂ|
07110027c ಅತ್ರ ತೇ ವರ್ಣಯಿಷ್ಯಾಮಿ ಯಥಾ ಯುದ್ಧಮವರ್ತತ||
ಅವರಿಗೆ ಬಲವಿದ್ದಷ್ಟೂ ಯೋಧರು ಯುದ್ಧಮಾಡುತ್ತಿದ್ದರೂ ನೀನು ಅವರ ಕುರಿತು ಕೆಟ್ಟದಾಗಿ ಮಾತನಾಡುತ್ತಿದ್ದೀಯೆ. ಅಲ್ಲಿ ಹೇಗೆ ಯುದ್ಧವು ನಡೆಯಿತೋ ಹಾಗೆ ನಿನಗೆ ವರ್ಣಿಸುತ್ತೇನೆ.
07110028a ದೃಷ್ಟ್ವಾ ಕರ್ಣಂ ತು ಪುತ್ರಾಸ್ತೇ ಭೀಮಸೇನಪರಾಜಿತಂ|
07110028c ನಾಮೃಷ್ಯಂತ ಮಹೇಷ್ವಾಸಾಃ ಸೋದರ್ಯಾಃ ಪಂಚ ಮಾರಿಷ||
ಮಾರಿಷ! ಭೀಮಸೇನನಿಂದ ಕರ್ಣನು ಸೋತುದನ್ನು ನೋಡಿ ಐವರು ಮಹೇಷ್ವಾಸ ಸೋದರರು ಸಹಿಸಿಕೊಳ್ಳಲಿಲ್ಲ.
07110029a ದುರ್ಮರ್ಷಣೋ ದುಃಸ್ಸಹಶ್ಚ ದುರ್ಮದೋ ದುರ್ಧರೋ ಜಯಃ|
07110029c ಪಾಂಡವಂ ಚಿತ್ರಸನ್ನಾಹಾಸ್ತಂ ಪ್ರತೀಪಮುಪಾದ್ರವನ್||
ಬಣ್ಣದ ಕವಚಗಳನ್ನು ಧರಿಸಿದ ದುರ್ಮರ್ಷಣ, ದುಃಸ್ಸಹ, ದುರ್ಮದ, ದುರ್ಧರ ಮತ್ತು ಜಯ ಇವರು ಬೆಳಗುತ್ತಿರುವ ಪಾಂಡವನನ್ನು ಆಕ್ರಮಣಿಸಿದರು.
07110030a ತೇ ಸಮಂತಾನ್ಮಹಾಬಾಹುಂ ಪರಿವಾರ್ಯ ವೃಕೋದರಂ|
07110030c ದಿಶಃ ಶರೈಃ ಸಮಾವೃಣ್ವಂ ಶಲಭಾನಾಮಿವ ವ್ರಜೈಃ||
ಅವರು ಮಹಾಬಾಹು ವೃಕೋದರನನ್ನು ಎಲ್ಲಕಡೆಗಳಿಂದ ಸುತ್ತುವರೆದು ಹಾರಾಡುವ ಮಿಡಿತೆಗಳಂತಿದ್ದ ಶರಗಳಿಂದ ದಿಕ್ಕುಗಳನ್ನೇ ತುಂಬಿಬಿಟ್ಟರು.
07110031a ಆಗಚ್ಚತಸ್ತಾನ್ಸಹಸಾ ಕುಮಾರಾನ್ದೇವರೂಪಿಣಃ|
07110031c ಪ್ರತಿಜಗ್ರಾಹ ಸಮರೇ ಭೀಮಸೇನೋ ಹಸನ್ನಿವ||
ಸಮರದಲ್ಲಿ ಒಮ್ಮಿಂದೊಮ್ಮೆಲೇ ಮೇಲೆ ಎರಗಿದ ಆ ದೇವರೂಪೀ ಕುಮಾರರನ್ನು ಭೀಮಸೇನನು ನಗುತ್ತಲೇ ಎದುರಿಸಿದನು.
07110032a ತವ ದೃಷ್ಟ್ವಾ ತು ತನಯಾನ್ಭೀಮಸೇನಸಮೀಪಗಾನ್|
07110032c ಅಭ್ಯವರ್ತತ ರಾಧೇಯೋ ಭೀಮಸೇನಂ ಮಹಾಬಲಂ||
ನಿನ್ನ ಮಕ್ಕಳು ಭೀಮಸೇನನ ಸಮೀಪಹೋದುದನ್ನು ನೋಡಿ ರಾಧೇಯನು ಮಹಾಬಲ ಭೀಮಸೇನನನ್ನು ಆಕ್ರಮಣಿಸಿದನು.
07110033a ವಿಸೃಜನ್ವಿಶಿಖಾನ್ರಾಜನ್ಸ್ವರ್ಣಪುಂಖಾಂ ಶಿಲಾಶಿತಾನ್|
07110033c ತಂ ತು ಭೀಮೋಽಭ್ಯಯಾತ್ತೂರ್ಣಂ ವಾರ್ಯಮಾಣಃ ಸುತೈಸ್ತವ||
ರಾಜನ್! ಸ್ವರ್ಣಪುಂಖಗಳ ಶಿಲಾಶಿತ ವಿಶಿಖಗಳನ್ನು ಬಿಡುತ್ತಾ ಅವನು ನಿನ್ನ ಮಕ್ಕಳು ತಡೆಯುತ್ತಿದ್ದ ಭೀಮಸೇನನನ್ನು ಬೇಗನೆ ಆಕ್ರಮಣಿಸಿದನು.
07110034a ಕುರವಸ್ತು ತತಃ ಕರ್ಣಂ ಪರಿವಾರ್ಯ ಸಮಂತತಃ|
07110034c ಅವಾಕಿರನ್ಭೀಮಸೇನಂ ಶರೈಃ ಸನ್ನತಪರ್ವಭಿಃ||
ಆಗ ಕುರುಗಳು ಕರ್ಣನನ್ನು ಎಲ್ಲಕಡೆಗಳಿಂದ ಸುತ್ತುವರೆದು ಭೀಮಸೇನನನ್ನು ಸನ್ನತಪರ್ವ ಶರಗಳಿಂದ ಮುಚ್ಚಿದರು.
07110035a ತಾನ್ಬಾಣೈಃ ಪಂಚವಿಂಶತ್ಯಾ ಸಾಶ್ವಾನ್ರಾಜನ್ನರರ್ಷಭಾನ್|
07110035c ಸಸೂತಾನ್ಭೀಮಧನುಷೋ ಭೀಮೋ ನಿನ್ಯೇ ಯಮಕ್ಷಯಂ||
ರಾಜನ್! ಭೀಮಧನುಷೀ ಭೀಮನು ಇಪ್ಪತ್ತೈದು ಬಾಣಗಳಿಂದ ಆ ನರರ್ಷಭರನ್ನು ಅವರ ಕುದುರೆ-ಸಾರಥಿಯರೊಂದಿಗೆ ಯಮಲೋಕಕ್ಕೆ ಕಳುಹಿಸಿದನು.
07110036a ಪ್ರಾಪತನ್ಸ್ಯಂದನೇಭ್ಯಸ್ತೇ ಸಾರ್ಧಂ ಸೂತೈರ್ಗತಾಸವಃ|
07110036c ಚಿತ್ರಪುಷ್ಪಧರಾ ಭಗ್ನಾ ವಾತೇನೇವ ಮಹಾದ್ರುಮಾಃ||
ರಥದ ಮೇಲಿಂದ ಅಸುನೀಗಿ ಅವರು ಸೂತರೊಂದಿಗೆ ರಥದ ಮೇಲಿಂದ ಬೀಳುವಾಗ ಅವರು ಬಣ್ಣ ಬಣ್ಣದ ಹೂಗಳು ತುಂಬಿದ್ದ ಮಹಾವೃಕ್ಷವು ಭಿರುಗಾಳಿಗೆ ತುಂಡಾಗಿ ಬಿದ್ದಂತೆ ತೋರಿದರು.
07110037a ತತ್ರಾದ್ಭುತಮಪಶ್ಯಾಮ ಭೀಮಸೇನಸ್ಯ ವಿಕ್ರಮಂ|
07110037c ಸಂವಾರ್ಯಾಧಿರಥಿಂ ಬಾಣೈರ್ಯಜ್ಜಘಾನ ತವಾತ್ಮಜಾನ್||
ಆಧಿರಥಿ ಕರ್ಣನ ಸುತ್ತಲೂ ಇದ್ದ ನಿನ್ನ ಮಕ್ಕಳನ್ನು ಬಾಣಗಳಿಂದ ಸಂಹರಿಸಿದ ಭೀಮಸೇನನ ವಿಕ್ರಮವನ್ನು ಅಲ್ಲಿ ನೋಡಿದೆವು.
07110038a ಸ ವಾರ್ಯಮಾಣೋ ಭೀಮೇನ ಶಿತೈರ್ಬಾಣೈಃ ಸಮಂತತಃ|
07110038c ಸೂತಪುತ್ರೋ ಮಹಾರಾಜ ಭೀಮಸೇನಮವೈಕ್ಷತ||
ಮಹಾರಾಜ! ಭೀಮನ ನಿಶಿತ ಬಾಣಗಳಿಂದ ಎಲ್ಲ ಕಡೆಗಳಿಂದಲೂ ತಡೆಯಲ್ಪಟ್ಟ ಸೂತಪುತ್ರನು ಭೀಮಸೇನನನ್ನು ನೋಡುತ್ತ ನಿಂತುಬಿಟ್ಟನು.
07110039a ತಂ ಭೀಮಸೇನಃ ಸಂರಂಭಾತ್ಕ್ರೋಧಸಂರಕ್ತಲೋಚನಃ|
07110039c ವಿಸ್ಫಾರ್ಯ ಸುಮಹಚ್ಚಾಪಂ ಮುಹುಃ ಕರ್ಣಮವೈಕ್ಷತ||
ಭೀಮಸೇನನೂ ಕೂಡ ಕ್ರೋಧದಿಂದ ಕಣ್ಣುಗಳನ್ನು ಕೆಂಪುಮಾಡಿಕೊಂಡು ಮಹಾ ಚಾಪವನ್ನು ಮತ್ತೆ ಮತ್ತೆ ಟೇಂಕರಿಸುತ್ತಾ ಕರ್ಣನನ್ನು ದುರುಗುಟ್ಟಿ ನೋಡಿದನು.”
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಭೀಮಸೇನಪರಾಕ್ರಮೇ ದಶಾಧಿಕಶತತಮೋಽಧ್ಯಾಯಃ ||
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಭೀಮಸೇನಪರಾಕ್ರಮ ಎನ್ನುವ ನೂರಾಹತ್ತನೇ ಅಧ್ಯಾಯವು.