Ashvamedhika Parva: Chapter 91

ಅಶ್ವಮೇಧಿಕ ಪರ್ವ

೯೧

ಅಶ್ವದ ಆಲಂಭನ (೧-೫). ಯುಧಿಷ್ಠಿರನ ದಾನ (೬-೨೮). ಯಜ್ಞಸಮಾಪ್ತಿ (೨೯-೪೧).

14091001 ವೈಶಂಪಾಯನ ಉವಾಚ

14091001a ಶಮಯಿತ್ವಾ ಪಶೂನನ್ಯಾನ್ವಿಧಿವದ್ದ್ವಿಜಸತ್ತಮಾಃ|

14091001c ತುರಗಂ ತಂ ಯಥಾಶಾಸ್ತ್ರಮಾಲಭಂತ ದ್ವಿಜಾತಯಃ||

ವೈಶಂಪಾಯನನು ಹೇಳಿದನು: “ ದ್ವಿಜಾತಿಯ ದ್ವಿಜಸತ್ತಮರು ಅನ್ಯ ಪಶುಗಳನ್ನು ವಿಧಿವತ್ತಾಗಿ ಹೋಮಮಾಡಿದ ನಂತರ ಆ ತುರಗವನ್ನು ಆಲಂಭನ ಮಾಡಿದರು.

14091002a ತತಃ ಸಂಜ್ಞಾಪ್ಯ ತುರಗಂ ವಿಧಿವದ್ಯಾಜಕರ್ಷಭಾಃ|

14091002c ಉಪಸಂವೇಶಯನ್ರಾಜಂಸ್ತತಸ್ತಾಂ ದ್ರುಪದಾತ್ಮಜಾಮ್|

14091002e ಕಲಾಭಿಸ್ತಿಸೃಭೀ ರಾಜನ್ಯಥಾವಿಧಿ ಮನಸ್ವಿನೀಮ್||

ರಾಜನ್! ಅನಂತರ ಯಾಜಕರ್ಷಭರು ವಿಧಿವತ್ತಾಗಿ ತುರಗವನ್ನು ಸಂಜ್ಞಾಪಿಸಿ ಅದರ ಬಳಿ ಮೂರು ಕಲೆಗಳಿಂದ ಯುಕ್ತಳಾದ ಮನಸ್ವಿನೀ ದ್ರುಪದಾತ್ಮಜೆಯನ್ನು ಕುಳ್ಳಿರಿಸಿದರು.

14091003a ಉದ್ಧೃತ್ಯ ತು ವಪಾಂ ತಸ್ಯ ಯಥಾಶಾಸ್ತ್ರಂ ದ್ವಿಜರ್ಷಭಾಃ|

14091003c ಶ್ರಪಯಾಮಾಸುರವ್ಯಗ್ರಾಃ ಶಾಸ್ತ್ರವದ್ಭರತರ್ಷಭ||

ಭರತರ್ಷಭ! ಶಾಸ್ತ್ರೋಕ್ತವಾಗಿ ಕುದುರೆಯ ವಪೆಯನ್ನು ತೆಗೆದು ಅವ್ಯಗ್ರ ದ್ವಿಜರ್ಷಭರು ಶಾಸ್ತ್ರಾನುಸಾರವಾಗಿ ಬೇಯಿಸಿದರು.

14091004a ತಂ ವಪಾಧೂಮಗಂಧಂ ತು ಧರ್ಮರಾಜಃ ಸಹಾನುಜಃ|

14091004c ಉಪಾಜಿಘ್ರದ್ಯಥಾನ್ಯಾಯಂ ಸರ್ವಪಾಪ್ಮಾಪಹಂ ತದಾ||

ಅನಂತರ ಸಮಸ್ತ ಪಾಪಗಳನ್ನೂ ಕಳೆಯುವ ಆ ವಪೆಯ ಹೊಗೆಯ ವಾಸನೆಯನ್ನು ಅನುಜರೊಂದಿಗೆ ಧರ್ಮರಾಜನು ಆಘ್ರಾಣಿಸಿದನು.

14091005a ಶಿಷ್ಟಾನ್ಯಂಗಾನಿ ಯಾನ್ಯಾಸಂಸ್ತಸ್ಯಾಶ್ವಸ್ಯ ನರಾಧಿಪ|

14091005c ತಾನ್ಯಗ್ನೌ ಜುಹುವುರ್ಧೀರಾಃ ಸಮಸ್ತಾಃ ಷೋಡಶರ್ತ್ವಿಜಃ||

ನರಾಧಿಪ! ಕುದುರೆಯ ಉಳಿದ ಅಂಗಗಳನ್ನು ಎಲ್ಲವನ್ನೂ ಹದಿನಾರು ಧೀರ ಋತ್ವಿಜರು ಅಗ್ನಿಯಲ್ಲಿ ಹೋಮಮಾಡಿದರು.

14091006a ಸಂಸ್ಥಾಪ್ಯೈವಂ ತಸ್ಯ ರಾಜ್ಞಸ್ತಂ ಕ್ರತುಂ ಶಕ್ರತೇಜಸಃ|

14091006c ವ್ಯಾಸಃ ಸಶಿಷ್ಯೋ ಭಗವಾನ್ವರ್ಧಯಾಮಾಸ ತಂ ನೃಪಮ್||

ಶಕ್ರತೇಜಸ್ಸಿನಿಂದ ಕೂಡಿದ್ದ ರಾಜನ ಆ ಯಜ್ಞವನ್ನು ಸಂಸ್ಥಾಪಿಸಿ ಶಿಷ್ಯರೊಂದಿಗೆ ಭಗವಾನ್ ವ್ಯಾಸನು ನೃಪನಿಗೆ ಅಭ್ಯುದಯಪೂರ್ವಕ ಆಶೀರ್ವಾದಗಳನ್ನು ನೀಡಿದನು.

14091007a ತತೋ ಯುಧಿಷ್ಠಿರಃ ಪ್ರಾದಾತ್ಸದಸ್ಯೇಭ್ಯೋ ಯಥಾವಿಧಿ|

14091007c ಕೋಟೀಸಹಸ್ರಂ ನಿಷ್ಕಾಣಾಂ ವ್ಯಾಸಾಯ ತು ವಸುಂಧರಾಮ್||

ಆಗ ಯುಧಿಷ್ಠಿರನು ಯಥಾವಿಧಿಯಾಗಿ ಸದಸ್ಯರಿಗೆ ಸಹಸ್ರ ಕೋಟಿ ಸುವರ್ಣನಾಣ್ಯಗಳನ್ನು ಮತ್ತು ವ್ಯಾಸನಿಗೆ ಇಡೀ ವಸುಂಧರೆಯನ್ನು ದಾನಮಾಡಿದನು.

14091008a ಪ್ರತಿಗೃಹ್ಯ ಧರಾಂ ರಾಜನ್ವ್ಯಾಸಃ ಸತ್ಯವತೀಸುತಃ|

14091008c ಅಬ್ರವೀದ್ಭರತಶ್ರೇಷ್ಠಂ ಧರ್ಮಾತ್ಮಾನಂ ಯುಧಿಷ್ಠಿರಮ್||

ರಾಜನ್! ಧರೆಯನ್ನು ಸ್ವೀಕರಿಸಿ ಸತ್ಯವತೀಸುತ ವ್ಯಾಸನು ಭರತಶ್ರೇಷ್ಠ ಧರ್ಮಾತ್ಮ ಯುಧಿಷ್ಠಿರನಿಗೆ ಇಂತೆಂದನು:

14091009a ಪೃಥಿವೀ ಭವತಸ್ತ್ವೇಷಾ ಸಂನ್ಯಸ್ತಾ ರಾಜಸತ್ತಮ|

14091009c ನಿಷ್ಕ್ರಯೋ ದೀಯತಾಂ ಮಹ್ಯಂ ಬ್ರಾಹ್ಮಣಾ ಹಿ ಧನಾರ್ಥಿನಃ||

“ರಾಜಸತ್ತಮ! ನಿನ್ನ ಈ ಪೃಥ್ವಿಯನ್ನು ನಿನ್ನಲ್ಲಿಯೇ ಇಡುತ್ತೇನೆ. ಇದರ ಬೆಲೆಯನ್ನು ನೀನು ನನಗೆ ಕೊಡು. ಬ್ರಾಹ್ಮಣರು ಧನಾರ್ಥಿಗಳಲ್ಲವೇ?”

14091010a ಯುಧಿಷ್ಠಿರಸ್ತು ತಾನ್ವಿಪ್ರಾನ್ಪ್ರತ್ಯುವಾಚ ಮಹಾಮನಾಃ|

14091010c ಭ್ರಾತೃಭಿಃ ಸಹಿತೋ ಧೀಮಾನ್ಮಧ್ಯೇ ರಾಜ್ಞಾಂ ಮಹಾತ್ಮನಾಮ್||

ಮಹಾತ್ಮ ರಾಜರ ಮಧ್ಯದಲ್ಲಿ ಸಹೋದರರೊಂದಿಗಿದ್ದ ಧೀಮಾನ್ ಮಹಾಮನಸ್ವಿ ಯುಧಿಷ್ಠಿರನು ಆ ವಿಪ್ರರಿಗೆ ಉತ್ತರಿಸಿದನು:

14091011a ಅಶ್ವಮೇಧೇ ಮಹಾಯಜ್ಞೇ ಪೃಥಿವೀ ದಕ್ಷಿಣಾ ಸ್ಮೃತಾ|

14091011c ಅರ್ಜುನೇನ ಜಿತಾ ಸೇಯಮೃತ್ವಿಗ್ಭ್ಯಃ ಪ್ರಾಪಿತಾ ಮಯಾ||

“ಅಶ್ವಮೇಧ ಮಹಾಯಜ್ಞದಲ್ಲಿ ಪೃಥ್ವಿಯನ್ನೇ ದಕ್ಷಿಣೆಯನ್ನಾಗಿ ಕೊಡಬೇಕೆಂಬ ವಿಧಿಯಿದೆ. ಅರ್ಜುನನು ಗೆದ್ದ ಇದನ್ನು ನಾನು ಋತ್ವಿಜರಿಗೆ ನೀಡುತ್ತಿದ್ದೇನೆ.

14091012a ವನಂ ಪ್ರವೇಕ್ಷ್ಯೇ ವಿಪ್ರೇಂದ್ರಾ ವಿಭಜಧ್ವಂ ಮಹೀಮಿಮಾಮ್|

14091012c ಚತುರ್ಧಾ ಪೃಥಿವೀಂ ಕೃತ್ವಾ ಚಾತುರ್ಹೋತ್ರಪ್ರಮಾಣತಃ||

ವಿಪ್ರೇಂದ್ರರೇ! ನಾನಿನ್ನು ವನವನ್ನು ಪ್ರವೇಶಿಸುತ್ತೇನೆ. ಈ ಮಹಿಯನ್ನು ನೀವು ವಿಭಜಿಸಿಕೊಳ್ಳಿರಿ. ಚಾತುರ್ಹೋತ್ರ[1]ದ ಪ್ರಮಾಣದಂತೆ ಪೃಥ್ವಿಯನ್ನು ನಾಲ್ಕು ಭಾಗಗಳನ್ನಾಗಿ ಮಾಡಿಕೊಳ್ಳಿ.

14091013a ನಾಹಮಾದಾತುಮಿಚ್ಚಾಮಿ ಬ್ರಹ್ಮಸ್ವಂ ಮುನಿಸತ್ತಮಾಃ|

14091013c ಇದಂ ಹಿ ಮೇ ಮತಂ ನಿತ್ಯಂ ಭ್ರಾತೄಣಾಂ ಚ ಮಮಾನಘಾಃ||

ಮುನಿಸತ್ತಮರೇ! ಅನಘರೇ! ಬ್ರಾಹ್ಮಣರಾದ ನಿಮ್ಮ ಸ್ವತ್ತನ್ನು ತೆಗೆದುಕೊಳ್ಳಲು ನಾನು ಇಷ್ಟಪಡುವುದಿಲ್ಲ. ನನ್ನ ಸಹೋದರರ ಮತವೂ ನಿತ್ಯವೂ ಇದೇ ಆಗಿದೆ.”

14091014a ಇತ್ಯುಕ್ತವತಿ ತಸ್ಮಿಂಸ್ತೇ ಭ್ರಾತರೋ ದ್ರೌಪದೀ ಚ ಸಾ|

14091014c ಏವಮೇತದಿತಿ ಪ್ರಾಹುಸ್ತದಭೂದ್ರೋಮಹರ್ಷಣಮ್||

ಅವನು ಹೀಗೆ ಹೇಳಲು ಸಹೋದರರು ಮತ್ತು ದ್ರೌಪದಿಯೂ “ಇದು ಹೀಗೆಯೇ ಸರಿ” ಎಂದು ಹೇಳಿದರು. ಅದು ರೋಮಾಂಚಕಾರಿಯಾಗಿತ್ತು!

14091015a ತತೋಽಂತರಿಕ್ಷೇ ವಾಗಾಸೀತ್ಸಾಧು ಸಾಧ್ವಿತಿ ಭಾರತ|

14091015c ತಥೈವ ದ್ವಿಜಸಂಘಾನಾಂ ಶಂಸತಾಂ ವಿಬಭೌ ಸ್ವನಃ||

ಭಾರತ! ಆಗ ಅಂತರಿಕ್ಷದಲ್ಲಿ “ಸಾಧು! ಸಾಧು!” ಎಂಬ ಮಾತೂ ಕೇಳಿಬಂದಿತು. ಹಾಗೆಯೇ ದ್ವಿಜಸಂಘಗಳ ಪ್ರಶಂಸೆಯ ಧ್ವನಿಗಳೂ ಕೇಳಿಬಂದವು.

14091016a ದ್ವೈಪಾಯನಸ್ತಥೋಕ್ತಸ್ತು ಪುನರೇವ ಯುಧಿಷ್ಠಿರಮ್|

14091016c ಉವಾಚ ಮಧ್ಯೇ ವಿಪ್ರಾಣಾಮಿದಂ ಸಂಪೂಜಯನ್ ಮುನಿಃ||

ಅದನ್ನು ಗೌರವಿಸಿ ವಿಪ್ರರ ಮಧ್ಯದಲ್ಲಿ ಮುನಿ ದ್ವೈಪಾಯನನು ಪುನಃ ಯುಧಿಷ್ಠಿರನಿಗೆ ಹೀಗೆ ಹೇಳಿದನು:

14091017a ದತ್ತೈಷಾ ಭವತಾ ಮಹ್ಯಂ ತಾಂ ತೇ ಪ್ರತಿದದಾಮ್ಯಹಮ್|

14091017c ಹಿರಣ್ಯಂ ದೀಯತಾಮೇಭ್ಯೋ ದ್ವಿಜಾತಿಭ್ಯೋ ಧರಾಸ್ತು ತೇ||

“ನನಗೆ ನೀನು ಭೂಮಿಯನ್ನು ಕೊಟ್ಟಿರುವೆ. ಅದನ್ನೇ ನಾನು ನಿನಗೆ ವಹಿಸಿಕೊಡುತ್ತಿದ್ದೇನೆ. ದ್ವಿಜಾತಿಯರಿಗೆ ಭೂಮಿಯ ಪ್ರತ್ಯಾಮ್ನಾಯವಾಗಿ ಸುವರ್ಣವನ್ನು ನೀಡು. ಭೂಮಿಯು ನಿನ್ನ ಅಧಿಕಾರದಲ್ಲಿಯೇ ಇರಲಿ!”

14091018a ತತೋಽಬ್ರವೀದ್ವಾಸುದೇವೋ ಧರ್ಮರಾಜಂ ಯುಧಿಷ್ಠಿರಮ್|

14091018c ಯಥಾಹ ಭಗವಾನ್ವ್ಯಾಸಸ್ತಥಾ ತತ್ಕರ್ತುಮರ್ಹಸಿ||

ಆಗ ವಾಸುದೇವನು ಧರ್ಮರಾಜ ಯುಧಿಷ್ಠಿರನಿಗೆ “ಭಗವಾನ್ ವ್ಯಾಸನು ಹೇಳಿದಂತೆಯೇ ಮಾಡಬೇಕು!” ಎಂದು ಹೇಳಿದನು.

14091019a ಇತ್ಯುಕ್ತಃ ಸ ಕುರುಶ್ರೇಷ್ಠಃ ಪ್ರೀತಾತ್ಮಾ ಭ್ರಾತೃಭಿಃ ಸಹ|

14091019c ಕೋಟಿಕೋಟಿಕೃತಾಂ ಪ್ರಾದಾದ್ದಕ್ಷಿಣಾಂ ತ್ರಿಗುಣಾಂ ಕ್ರತೋಃ||

ಕೃಷ್ಣನು ಹೀಗೆ ಹೇಳಲು ಕುರುಶ್ರೇಷ್ಠ ಯುಧಿಷ್ಠಿರನು ಪ್ರೀತಾತ್ಮನಾಗಿ ಸಹೋದರರೊಂದಿಗೆ ಮೂರು ಕ್ರತುಗಳಿಗೆ ಆಗುವಷ್ಟು ಕೋಟಿ ಕೋಟಿಗಟ್ಟಲೆ ದಕ್ಷಿಣೆಗಳನ್ನು ನೀಡಿದನು.

14091020a ನ ಕರಿಷ್ಯತಿ ತಲ್ಲೋಕೇ ಕಶ್ಚಿದನ್ಯೋ ನರಾಧಿಪಃ|

14091020c ಯತ್ಕೃತಂ ಕುರುಸಿಂಹೇನ ಮರುತ್ತಸ್ಯಾನುಕುರ್ವತಾ||

“ಮರುತ್ತನನ್ನೇ ಅನುಸರಿಸಿ ನರಾಧಿಪ ಕುರುಸಿಂಹನು ಮಾಡಿದುದನ್ನು ಈ ಲೋಕದಲ್ಲಿ ಬೇರೆ ಯಾರೂ ಮಾಡುವುದಿಲ್ಲ!”

14091021a ಪ್ರತಿಗೃಹ್ಯ ತು ತದ್ದ್ರವ್ಯಂ ಕೃಷ್ಣದ್ವೈಪಾಯನಃ ಪ್ರಭುಃ|

14091021c ಋತ್ವಿಗ್ಭ್ಯಃ ಪ್ರದದೌ ವಿದ್ವಾಂಶ್ಚತುರ್ಧಾ ವ್ಯಭಜಂಶ್ಚ ತೇ||

ಆ ದ್ರವ್ಯವನ್ನು ಸ್ವೀಕರಿಸಿದ ಪ್ರಭು ಕೃಷ್ಣದ್ವೈಪಾಯನನು ಅದನ್ನು ಋತ್ವಿಜರಿಗೆ ನೀಡಿದರು. ಆ ವಿದ್ವಾನರು ಅದನ್ನು ನಾಲ್ಕು ಭಾಗಗಳನ್ನಾಗಿ ವಿಭಾಗಿಸಿಕೊಂಡರು.

14091022a ಪೃಥಿವ್ಯಾ ನಿಷ್ಕ್ರಯಂ ದತ್ತ್ವಾ ತದ್ಧಿರಣ್ಯಂ ಯುಧಿಷ್ಠಿರಃ|

14091022c ಧೂತಪಾಪ್ಮಾ ಜಿತಸ್ವರ್ಗೋ ಮುಮುದೇ ಭ್ರಾತೃಭಿಃ ಸಹ||

ಪೃಥ್ವಿಯ ಬೆಲೆಯನ್ನು ಹಿರಣ್ಯರೂಪದಲ್ಲಿ ನೀಡಿ ಸಹೋದರರೊಂದಿಗೆ ಯುಧಿಷ್ಠಿರನು ಪಾಪಗಳನ್ನು ತೊಳೆದುಕೊಂಡು ಸ್ವರ್ಗವನ್ನೇ ಜಯಿಸಿ ಆನಂದಿಸಿದನು.

14091023a ಋತ್ವಿಜಸ್ತಮಪರ್ಯಂತಂ ಸುವರ್ಣನಿಚಯಂ ತದಾ|

14091023c ವ್ಯಭಜಂತ ದ್ವಿಜಾತಿಭ್ಯೋ ಯಥೋತ್ಸಾಹಂ ಯಥಾಬಲಮ್||

ಋತ್ವಿಜರು ಆ ಸುವರ್ಣರಾಶಿಯನ್ನು ಪಡೆದು ಉತ್ಸಾಹವಿದ್ದಂತೆ ಯಥಾಬಲವಾಗಿ ದ್ವಿಜಾತಿಯರಲ್ಲಿ ಹಂಚಿಕೊಂಡರು.

14091024a ಯಜ್ಞವಾಟೇ ತು ಯತ್ಕಿಂ ಚಿದ್ಧಿರಣ್ಯಮಪಿ ಭೂಷಣಮ್|

14091024c ತೋರಣಾನಿ ಚ ಯೂಪಾಂಶ್ಚ ಘಟಾಃ ಪಾತ್ರೀಸ್ತಥೇಷ್ಟಕಾಃ|

14091024e ಯುಧಿಷ್ಠಿರಾಭ್ಯನುಜ್ಞಾತಾಃ ಸರ್ವಂ ತದ್ವ್ಯಭಜನ್ದ್ವಿಜಾಃ||

ಯಜ್ಞವಾಟಿಯಲ್ಲಿ ಇದ್ದ ಏನೆಲ್ಲ ಹಿರಣ್ಯ, ಭೂಷಣ, ತೋರಣ, ಯೂಪ, ಘಟ, ಪಾತ್ರೆ ಮತ್ತು ಎಲ್ಲವನ್ನೂ ಯಥೇಷ್ಟವಾಗಿ ದ್ವಿಜರು, ಯುಧಿಷ್ಠಿರನ ಅಪ್ಪಣೆಯಂತೆ, ತಮ್ಮಲ್ಲಿ ವಿಭಜಿಸಿಕೊಂಡರು.

14091025a ಅನಂತರಂ ಬ್ರಾಹ್ಮಣೇಭ್ಯಃ ಕ್ಷತ್ರಿಯಾ ಜಹ್ರಿರೇ ವಸು|

14091025c ತಥಾ ವಿಟ್ಶೂದ್ರಸಂಘಾಶ್ಚ ತಥಾನ್ಯೇ ಮ್ಲೇಚ್ಚಜಾತಯಃ|

14091025e ಕಾಲೇನ ಮಹತಾ ಜಹ್ರುಸ್ತತ್ಸುವರ್ಣಂ ತತಸ್ತತಃ||

ಅನಂತರ ಹಾಗೆಯೇ ಅಲ್ಲಿದ್ದ ಕ್ಷತ್ರಿಯರು, ವೈಶ್ಯರು, ಶೂದ್ರರು ಮತ್ತು ಅನ್ಯ ಮ್ಲೇಚ್ಛಜಾತಿಯವರು ಬ್ರಾಹ್ಮಣರಿಗೆ ಧನವನ್ನಿತ್ತರು. ಆ ಸಮಯದಲ್ಲಿ ಆಗಾಗ ಮಹಾ ಸುವರ್ಣವನ್ನು ದಾನಮಾಡಲಾಯಿತು.

14091026a ತತಸ್ತೇ ಬ್ರಾಹ್ಮಣಾಃ ಸರ್ವೇ ಮುದಿತಾ ಜಗ್ಮುರಾಲಯಾನ್|

14091026c ತರ್ಪಿತಾ ವಸುನಾ ತೇನ ಧರ್ಮರಾಜ್ಞಾ ಮಹಾತ್ಮನಾ||

ಮಹಾತ್ಮ ಧರ್ಮರಾಜನ ಆ ಐಶ್ವರ್ಯದಿಂದ ತೃಪ್ತರಾದ ಬ್ರಾಹ್ಮಣರೆಲ್ಲರೂ ಮುದಿತರಾಗಿ ತಮ್ಮ ತಮ್ಮ ಮನೆಗಳಿಗೆ ತೆರಳಿದರು.

14091027a ಸ್ವಮಂಶಂ ಭಗವಾನ್ವ್ಯಾಸಃ ಕುಂತ್ಯೈ ಪಾದಾಭಿವಾದನಾತ್|

14091027c ಪ್ರದದೌ ತಸ್ಯ ಮಹತೋ ಹಿರಣ್ಯಸ್ಯ ಮಹಾದ್ಯುತಿಃ||

ಮಹಾದ್ಯುತಿ ಭಗವಾನ್ ವ್ಯಾಸನು ತನ್ನ ಭಾಗಕ್ಕೆ ಬಂದಿದ್ದ ಮಹಾ ಹಿರಣ್ಯರಾಶಿಯನ್ನು ಆದರದಿಂದ ಕುಂತಿಗೆ ನೀಡಿದನು.

14091028a ಶ್ವಶುರಾತ್ಪ್ರೀತಿದಾಯಂ ತಂ ಪ್ರಾಪ್ಯ ಸಾ ಪ್ರೀತಮಾನಸಾ|

14091028c ಚಕಾರ ಪುಣ್ಯಂ ಲೋಕೇ ತು ಸುಮಹಾಂತಂ ಪೃಥಾ ತದಾ||

ಮಾವನಿಂದ ಪ್ರೀತಿಪೂರ್ವಕವಾಗಿ ಪಡೆದ ಆ ಮಹಾಧನವನ್ನು ಪೃಥೆಯು ಪ್ರೀತಿಮನಸ್ಸಿನಿಂದ ಜನರಿಗೆ ಪುಣ್ಯವಾಗುವ ಕಾರ್ಯಗಳನ್ನು ಮಾಡಿದಳು.

14091029a ಗತ್ವಾ ತ್ವವಭೃಥಂ ರಾಜಾ ವಿಪಾಪ್ಮಾ ಭ್ರಾತೃಭಿಃ ಸಹ|

14091029c ಸಭಾಜ್ಯಮಾನಃ ಶುಶುಭೇ ಮಹೇಂದ್ರೋ ದೈವತೈರಿವ||

ಅವಭೃತಸ್ನಾನಗೈದು ಪಾಪಗಳನ್ನು ಕಳೆದುಕೊಂಡು ಸಹೋದರರೊಂದಿಗೆ ರಾಜಾ ಯುಧಿಷ್ಠಿರನು ದೇವತೆಗಳಿಂದ ಸೇವಿಸಲ್ಪಟ್ಟ ಮಹೇಂದ್ರನಂತೆ ಶೋಭಿಸಿದನು.

14091030a ಪಾಂಡವಾಶ್ಚ ಮಹೀಪಾಲೈಃ ಸಮೇತೈಃ ಸಂವೃತಾಸ್ತದಾ|

14091030c ಅಶೋಭಂತ ಮಹಾರಾಜ ಗ್ರಹಾಸ್ತಾರಾಗಣೈರಿವ||

ಮಹಾರಾಜ! ಬಂದು ಸೇರಿದ್ದ ಮಹೀಪಾಲರಿಂದ ಸುತ್ತುವರೆಯಲ್ಪಟ್ಟ ಪಾಂಡವರೂ ಕೂಡ ಗ್ರಹಗಳಿಂದ ಸುತ್ತುವರೆಯಲ್ಪಟ್ಟ ತಾರಾಗಣಗಳಂತೆ ಶೋಭಿಸಿದರು.

14091031a ರಾಜಭ್ಯೋಽಪಿ ತತಃ ಪ್ರಾದಾದ್ರತ್ನಾನಿ ವಿವಿಧಾನಿ ಚ|

14091031c ಗಜಾನಶ್ವಾನಲಂಕಾರಾನ್ ಸ್ತ್ರಿಯೋ ವಸ್ತ್ರಾಣಿ ಕಾಂಚನಮ್||

ಆಗ ಯುಧಿಷ್ಠಿರನು ರಾಜರಿಗೆ ಕೂಡ ವಿವಿಧ ರತ್ನಗಳನ್ನೂ, ಆನೆ-ಕುದುರೆಗಳ ಅಲಂಕಾರಗಳನ್ನೂ, ಸ್ತ್ರೀಯರನ್ನೂ, ಕಾಂಚನ-ವಸ್ತ್ರಗಳನ್ನೂ ನೀಡಿದನು.

14091032a ತದ್ಧನೌಘಮಪರ್ಯಂತಂ ಪಾರ್ಥಃ ಪಾರ್ಥಿವಮಂಡಲೇ|

14091032c ವಿಸೃಜನ್ಶುಶುಭೇ ರಾಜಾ ಯಥಾ ವೈಶ್ರವಣಸ್ತಥಾ||

ಕೊನೆಯಿಲ್ಲದ ಆ ಧನರಾಶಿಯನ್ನು ದಾನವನ್ನಾಗಿತ್ತ ರಾಜಾ ಪಾರ್ಥನು ಪಾರ್ಥಿವಮಂಡಲದಲ್ಲಿ ವೈಶ್ರವಣ ಕುಬೇರನಂತೆ ಶೋಭಿಸಿದನು.

14091033a ಆನಾಯ್ಯ ಚ ತಥಾ ವೀರಂ ರಾಜಾನಂ ಬಭ್ರುವಾಹನಮ್|

14091033c ಪ್ರದಾಯ ವಿಪುಲಂ ವಿತ್ತಂ ಗೃಹಾನ್ಪ್ರಾಸ್ಥಾಪಯತ್ತದಾ||

ಹಾಗೆಯೇ ವೀರ ರಾಜ ಬಭ್ರುವಾಹನನನ್ನು ಕರೆಯಿಸಿ ಅವನಿಗೆ ವಿಪುಲ ವಿತ್ತವನ್ನಿತ್ತನು. ಆಗ ಅವನು ತನ್ನ ಮನೆಗೆ ತೆರಳಿದನು.

14091034a ದುಃಶಲಾಯಾಶ್ಚ ತಂ ಪೌತ್ರಂ ಬಾಲಕಂ ಪಾರ್ಥಿವರ್ಷಭ|

14091034c ಸ್ವರಾಜ್ಯೇ ಪಿತೃಭಿರ್ಗುಪ್ತೇ ಪ್ರೀತ್ಯಾ ಸಮಭಿಷೇಚಯತ್||

ಪಾರ್ಥಿವರ್ಷಭ! ದುಃಶಲೆಯ ಮೊಮ್ಮಗ ಆ ಬಾಲಕನನ್ನು ಅವನ ತಂದೆಯ ಸ್ವರಾಜ್ಯಕ್ಕೇ ರಾಜನನ್ನಾಗಿ ಅಭಿಷೇಕಿಸಿದನು.

14091035a ರಾಜ್ಞಶ್ಚೈವಾಪಿ ತಾನ್ಸರ್ವಾನ್ಸುವಿಭಕ್ತಾನ್ಸುಪೂಜಿತಾನ್|

14091035c ಪ್ರಸ್ಥಾಪಯಾಮಾಸ ವಶೀ ಕುರುರಾಜೋ ಯುಧಿಷ್ಠಿರಃ||

ಸಂಯಮಿ ಕುರುರಾಜ ಯುಧಿಷ್ಠಿರನು ಆ ಎಲ್ಲ ರಾಜರನ್ನೂ ಪ್ರತ್ಯೇಕವಾಗಿ ಪೂಜಿಸಿ ಕಳುಹಿಸಿಕೊಟ್ಟನು.

14091036a ಏವಂ ಬಭೂವ ಯಜ್ಞಃ ಸ ಧರ್ಮರಾಜಸ್ಯ ಧೀಮತಃ|

14091036c ಬಹ್ವನ್ನಧನರತ್ನೌಘಃ ಸುರಾಮೈರೇಯಸಾಗರಃ||

ಹೀಗೆ ಬಹಳ ಅನ್ನ-ಧನ-ರತ್ನಗಳ ರಾಶಿಗಳಿದ್ದ ಮತ್ತು ಸುರೆ-ಮೈರೇಯಗಳ ಸಾಗರಗಳಿದ್ದ ಆ ಯಜ್ಞವು ನಡೆಯಿತು.

14091037a ಸರ್ಪಿಃಪಂಕಾ ಹ್ರದಾ ಯತ್ರ ಬಹವಶ್ಚಾನ್ನಪರ್ವತಾಃ|

14091037c ರಸಾಲಾಕರ್ದಮಾಃ ಕುಲ್ಯಾ ಬಭೂವುರ್ಭರತರ್ಷಭ||

ಭರತರ್ಷಭ! ಅಲ್ಲಿ ತುಪ್ಪವೇ ಕೆಸರಾದ ಸರೋವರಗಳೂ, ಅನೇಕ ಪರ್ವತಗಳಂತಿದ್ದ ಅನ್ನಗಳ ರಾಶಿಗಳೂ, ಕೆಸರಿಲ್ಲದ ರಸಗಳ ಕಾಲುವೆಗಳೂ ಇದ್ದವು.

14091038a ಭಕ್ಷ್ಯಷಾಂಡವರಾಗಾಣಾಂ ಕ್ರಿಯತಾಂ ಭುಜ್ಯತಾಮಿತಿ|

14091038c ಪಶೂನಾಂ ವಧ್ಯತಾಂ ಚಾಪಿ ನಾಂತಸ್ತತ್ರ ಸ್ಮ ದೃಶ್ಯತೇ||

ಅಲ್ಲಿ ಭಕ್ಷ್ಯ-ಭೋಜ್ಯಗಳನ್ನು ಮಾಡುವವರ, ಊಟಮಾಡಿ ಎಂದು ಹೇಳುವವರ, ಮತ್ತು ಪಶುಗಳನ್ನು ವಧಿಸುತ್ತಿದ್ದವರ ಕೊನೆಯೇ ಕಾಣುತ್ತಿರಲಿಲ್ಲ.

14091039a ಮತ್ತೋನ್ಮತ್ತಪ್ರಮುದಿತಂ ಪ್ರಗೀತಯುವತೀಜನಮ್|

14091039c ಮೃದಂಗಶಂಖಶಬ್ದೈಶ್ಚ ಮನೋರಮಮಭೂತ್ತದಾ||

ಮತ್ತೋನ್ಮತ್ತರಾಗಿ ಆನಂದಿಸುತ್ತಿದ್ದ, ಹಾಡುತ್ತಿದ್ದ ಯುವತೀ ಜನರಿಂದ, ಮೃದಂಗ-ಶಂಖ ಶಬ್ಧಗಳಿಂದ ಅದು ಮನೋರಮವಾಗಿತ್ತು.

14091040a ದೀಯತಾಂ ಭುಜ್ಯತಾಂ ಚೇತಿ ದಿವಾರಾತ್ರಮವಾರಿತಮ್|

14091040c ತಂ ಮಹೋತ್ಸವಸಂಕಾಶಮತಿಹೃಷ್ಟಜನಾಕುಲಮ್|

14091040e ಕಥಯಂತಿ ಸ್ಮ ಪುರುಷಾ ನಾನಾದೇಶನಿವಾಸಿನಃ||

“ಕೊಡಿ! ಭೋಜನ ಮಾಡಿ!” ಎಂಬ ಕೂಗುಗಳು ಹಗಲು-ರಾತ್ರಿಗಳೂ ಅಲ್ಲಿ ಕೇಳಿಬರುತ್ತಿದ್ದವು. ಆ ಮಹೋತ್ಸವಕ್ಕೆ ಬಂದಿದ್ದ ನಾನಾ ದೇಶನಿವಾಸಿ ಜನರು ಅತ್ಯಂತ ಹರ್ಷಿತರಾಗಿ ಅದರ ಕುರಿತೇ ಮಾತನಾಡಿಕೊಳ್ಳುತ್ತಿದ್ದರು.

14091041a ವರ್ಷಿತ್ವಾ ಧನಧಾರಾಭಿಃ ಕಾಮೈ ರತ್ನೈರ್ಧನೈಸ್ತಥಾ|

14091041c ವಿಪಾಪ್ಮಾ ಭರತಶ್ರೇಷ್ಠಃ ಕೃತಾರ್ಥಃ ಪ್ರಾವಿಶತ್ ಪುರಮ್||

ಧನ ಮತ್ತು ಬಯಸಿದ ರತ್ನಧನಗಳ ಧಾರೆಗಳನ್ನೇ ಮಳೆಯಾಗಿ ಸುರಿಸಿದ ಆ ಭರತಶ್ರೇಷ್ಠನು ಪಾಪಗಳನ್ನು ಕಳೆದುಕೊಂಡು ಕೃತಾರ್ಥನಾಗಿ ಪುರವನ್ನು ಪ್ರವೇಶಿಸಿದನು.”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅಶ್ವಮೇಧಸಮಾಪ್ತೌ ಏಕನವತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅಶ್ವಮೇಧಸಮಾಪ್ತಿ ಎನ್ನುವ ತೊಂಭತ್ತೊಂದನೇ ಅಧ್ಯಾಯವು.

[1] ಅಧ್ವರ್ಯು, ಉದ್ಗಾತ್ರ, ಹೋತೃ ಮತ್ತು ಬ್ರಹ್ಮರೂಪವಾದ ನಾಲ್ಕರಿಂದ ನಡೆಯುವ ಯಾಗವೇ ಚಾತುರ್ಹೋತ್ರ ಯಜ್ಞ. ಒಂದೊಂದು ಗುಂಪಿನಲ್ಲಿ ನಾಲ್ಕು ನಾಲ್ಕು ಜನ ಋತ್ವಿಜರು. ಒಟ್ಟು ಹದಿನಾರು ಮಂದಿ. ಅವರಲ್ಲಿ ಪ್ರಧಾನರು ಬ್ರಹ್ಮಾ, ಅಧ್ವರ್ಯು, ಹೋತೃ, ಮತ್ತು ಉದ್ಗಾತ್ರ. ಇವರಲ್ಲಿ ದಕ್ಷಿಣೆಯ ವಿಭಜನಕ್ರಮದ ವರ್ಣನೆಯು ವೇದದಲ್ಲಿ ಹೇಳಲ್ಪಟ್ಟಿದೆ.

Comments are closed.