Ashvamedhika Parva: Chapter 59

ಅಶ್ವಮೇಧಿಕ ಪರ್ವ

೫೯

ಕೃಷ್ಣನು ತನ್ನ ತಂದೆ-ತಾಯಿಯರಿಗೆ ಕುರುವೀರರ ಸಂಗ್ರಾಮ-ನಿಧನಗಳ ಕುರಿತು ವರ್ಣಿಸಿದುದು (೧-೩೬).

Image result for dhritarashtra embraces bhima14059001 ವಸುದೇವ ಉವಾಚ

14059001a ಶ್ರುತವಾನಸ್ಮಿ ವಾರ್ಷ್ಣೇಯ ಸಂಗ್ರಾಮಂ ಪರಮಾದ್ಭುತಮ್|

14059001c ನರಾಣಾಂ ವದತಾಂ ಪುತ್ರ ಕಥೋದ್ಘಾತೇಷು ನಿತ್ಯಶಃ||

ವಸುದೇವನು ಹೇಳಿದನು: “ವಾರ್ಷ್ಣೇಯ! ಪರಮ ಅದ್ಭುತವಾದ ಆ ಸಂಗ್ರಾಮದ ಕುರಿತು ಜನರು ಮಾತನಾಡಿಕೊಳ್ಳುವುದನ್ನು ಕೇಳಿದ್ದೇನೆ. ಪುತ್ರ! ಅನುದಿನದ ಯುದ್ಧದ ಕುರಿತು ಹೇಳು!

14059002a ತ್ವಂ ತು ಪ್ರತ್ಯಕ್ಷದರ್ಶೀ ಚ ಕಾರ್ಯಜ್ಞಶ್ಚ ಮಹಾಭುಜ|

14059002c ತಸ್ಮಾತ್ಪ್ರಬ್ರೂಹಿ ಸಂಗ್ರಾಮಂ ಯಾಥಾತಥ್ಯೇನ ಮೇಽನಘ||

ಮಹಾಭುಜ! ನೀನಾದರೋ ಅದರ ಪ್ರತ್ಯಕ್ಷದರ್ಶಿಯೂ ಕಾರ್ಯಜ್ಞನೂ ಆಗಿರುವೆ. ಅನಘ! ಆದುದರಿಂದ ಆ ಸಂಗ್ರಾಮವು ಹೇಗೆ ನಡೆಯಿತೋ ಹಾಗೆ ಹೇಳು!

14059003a ಯಥಾ ತದಭವದ್ಯುದ್ಧಂ ಪಾಂಡವಾನಾಂ ಮಹಾತ್ಮನಾಮ್|

14059003c ಭೀಷ್ಮಕರ್ಣಕೃಪದ್ರೋಣಶಲ್ಯಾದಿಭಿರನುತ್ತಮಮ್||

14059004a ಅನ್ಯೇಷಾಂ ಕ್ಷತ್ರಿಯಾಣಾಂ ಚ ಕೃತಾಸ್ತ್ರಾಣಾಮನೇಕಶಃ|

14059004c ನಾನಾವೇಷಾಕೃತಿಮತಾಂ ನಾನಾದೇಶನಿವಾಸಿನಾಮ್||

ಮಹಾತ್ಮ ಪಾಂಡವರೊಡನೆ ನಡೆದ ಭೀಷ್ಮ-ಕರ್ಣ-ಕೃಪ-ದ್ರೋಣ-ಶಲ್ಯರೇ ಮೊದಲಾದವರ ಮತ್ತು ನಾನಾದೇಶ ನಿವಾಸಿಗಳ, ನಾನಾವೇಷ-ಆಕೃತಿ-ಬುದ್ಧಿಗಳಿದ್ದ ಅನೇಕ ಅಸ್ತ್ರಕೋವಿದ ಅನ್ಯ ಕ್ಷತ್ರಿಯರ ಆ ಯುದ್ಧವು ಹೇಗೆ ನಡೆಯಿತು?”

14059005a ಇತ್ಯುಕ್ತಃ ಪುಂಡರೀಕಾಕ್ಷಃ ಪಿತ್ರಾ ಮಾತುಸ್ತದಂತಿಕೇ|

14059005c ಶಶಂಸ ಕುರುವೀರಾಣಾಂ ಸಂಗ್ರಾಮೇ ನಿಧನಂ ಯಥಾ||

ಹೀಗೆ ಕೇಳಲು ಬಳಿಯಲ್ಲಿದ್ದ ತಂದೆ-ತಾಯಿಯರಿಗೆ ಪುಂಡರೀಕಾಕ್ಷನು ಕುರುವೀರರ ಸಂಗ್ರಾಮ-ನಿಧನಗಳ ಕುರಿತು ವರ್ಣಿಸಿದನು.

14059006 ವಾಸುದೇವ ಉವಾಚ

14059006a ಅತ್ಯದ್ಭುತಾನಿ ಕರ್ಮಾಣಿ ಕ್ಷತ್ರಿಯಾಣಾಂ ಮಹಾತ್ಮನಾಮ್|

14059006c ಬಹುಲತ್ವಾನ್ನ ಸಂಖ್ಯಾತುಂ ಶಕ್ಯಾನ್ಯಬ್ದಶತೈರಪಿ||

ವಾಸುದೇವನು ಹೇಳಿದನು: “ಮಹಾತ್ಮ ಕ್ಷತ್ರಿಯರ ಅತಿ ಅದ್ಭುತ ಕರ್ಮಗಳು ಬಹಳವಾಗಿದ್ದವು. ಅವುಗಳನ್ನು ವರ್ಣಿಸಲು ನೂರು ವರ್ಷಗಳೂ ಸಾಕಾಗುವುದಿಲ್ಲ.

14059007a ಪ್ರಾಧಾನ್ಯತಸ್ತು ಗದತಃ ಸಮಾಸೇನೈವ ಮೇ ಶೃಣು|

14059007c ಕರ್ಮಾಣಿ ಪೃಥಿವೀಶಾನಾಂ ಯಥಾವದಮರದ್ಯುತೇ||

ಅಮರದ್ಯುತೇ! ಪೃಥ್ವೀಶರ ಕರ್ಮಗಳಲ್ಲಿ ಪ್ರಧಾನವಾದವುಗಳನ್ನು ಸಂಕ್ಷಿಪ್ತವಾಗಿ ಹೇಳುತ್ತೇನೆ. ಕೇಳು.

14059008a ಭೀಷ್ಮಃ ಸೇನಾಪತಿರಭೂದೇಕಾದಶಚಮೂಪತಿಃ|

14059008c ಕೌರವ್ಯಃ ಕೌರವೇಯಾಣಾಂ ದೇವಾನಾಮಿವ ವಾಸವಃ||

ದೇವತೆಗಳಿಗೆ ವಾಸವ ಇಂದ್ರನು ಹೇಗೋ ಹಾಗೆ ಕೌರವರ ಹನ್ನೊಂದು ಅಕ್ಷೋಹಿಣೀ ಸೇನೆಗಳಿಗೆ ಕೌರವ್ಯ ಭೀಷ್ಮನು ಸೇನಾಪತಿಯಾಗಿದ್ದನು.

14059009a ಶಿಖಂಡೀ ಪಾಂಡುಪುತ್ರಾಣಾಂ ನೇತಾ ಸಪ್ತಚಮೂಪತಿಃ|

14059009c ಬಭೂವ ರಕ್ಷಿತೋ ಧೀಮಾನ್ಧೀಮತಾ ಸವ್ಯಸಾಚಿನಾ||

ಪಾಂಡುಪುತ್ರರ ಏಳು ಅಕ್ಷೋಹಿಣಿಗೆ ಧೀಮಾನ್ ಶಿಖಂಡಿಯು, ಧೀಮತ ಸವ್ಯಸಾಚಿಯಿಂದ ರಕ್ಷಣೆಯಡಿಯಲ್ಲಿ, ನೇತಾರನಾಗಿದ್ದನು[1].

14059010a ತೇಷಾಂ ತದಭವದ್ಯುದ್ಧಂ ದಶಾಹಾನಿ ಮಹಾತ್ಮನಾಮ್|

14059010c ಕುರೂಣಾಂ ಪಾಂಡವಾನಾಂ ಚ ಸುಮಹದ್ರೋಮಹರ್ಷಣಮ್||

ಮಹಾತ್ಮ ಕುರು-ಪಾಂಡವರ ನಡುವೆ ಹತ್ತು ದಿನಗಳು ರೋಮಾಂಚಕಾರೀ ಮಹಾ ಯುದ್ಧವು ನಡೆಯಿತು.

14059011a ತತಃ ಶಿಖಂಡೀ ಗಾಂಗೇಯಮಯುಧ್ಯಂತಂ ಮಹಾಹವೇ|

14059011c ಜಘಾನ ಬಹುಭಿರ್ಬಾಣೈಃ ಸಹ ಗಾಂಡೀವಧನ್ವನಾ||

ಅನಂತರ ಮಹಾರಣದಲ್ಲಿ ಯುದ್ಧಮಾಡುತ್ತಿದ್ದ ಗಾಂಗೇಯನನ್ನು ಗಾಂಡೀವಧನ್ವಿಯೊಡನೆ ಶಿಖಂಡಿಯು ಅನೇಕ ಬಾಣಗಳಿಂದ ಹೊಡೆದನು.

14059012a ಅಕರೋತ್ಸ ತತಃ ಕಾಲಂ ಶರತಲ್ಪಗತೋ ಮುನಿಃ|

14059012c ಅಯನಂ ದಕ್ಷಿಣಂ ಹಿತ್ವಾ ಸಂಪ್ರಾಪ್ತೇ ಚೋತ್ತರಾಯಣೇ||

ಆಗ ಶರತಲ್ಪಗತನಾದ ಆ ಮುನಿಯು ದಕ್ಷಿಣಾಯನವನ್ನು ಕಳೆದು ಉತ್ತರಾಯಣವು ಬಂದಾಗ ಕಾಲನ ವಶನಾದನು.

14059013a ತತಃ ಸೇನಾಪತಿರಭೂದ್ದ್ರೋಣೋಽಸ್ತ್ರವಿದುಷಾಂ ವರಃ|

14059013c ಪ್ರವೀರಃ ಕೌರವೇಂದ್ರಸ್ಯ ಕಾವ್ಯೋ ದೈತ್ಯಪತೇರಿವ||

ಅನಂತರ ದೈತ್ಯರಿಗೆ ಕಾವ್ಯನು ಹೇಗೋ ಹಾಗೆ ಕೌರವೇಂದ್ರನಿಗೆ ಅಸ್ತ್ರವಿದುಷರಲ್ಲಿ ಶ್ರೇಷ್ಠ ಪ್ರವೀರ ದ್ರೋಣನು ಸೇನಾಪತಿಯಾದನು.

14059014a ಅಕ್ಷೌಹಿಣೀಭಿಃ ಶಿಷ್ಟಾಭಿರ್ನವಭಿರ್ದ್ವಿಜಸತ್ತಮಃ|

14059014c ಸಂವೃತಃ ಸಮರಶ್ಲಾಘೀ ಗುಪ್ತಃ ಕೃಪವೃಷಾದಿಭಿಃ||

ದ್ವಿಜಸತ್ತಮ ಸಮರಶ್ಲಾಘೀ ದ್ರೋಣನು ಕೃಪ-ಕರ್ಣಾದಿಗಳಿಂದ ರಕ್ಷಿತಗೊಂಡಿದ್ದ ಕೌರವರ ಅಳಿದುಳಿದ ಒಂಭತ್ತು ಅಕ್ಷೋಹಿಣೀ ಸೇನೆಯ ನೇತಾರನಾಗಿದ್ದನು.

14059015a ಧೃಷ್ಟದ್ಯುಮ್ನಸ್ತ್ವಭೂನ್ನೇತಾ ಪಾಂಡವಾನಾಂ ಮಹಾಸ್ತ್ರವಿತ್|

14059015c ಗುಪ್ತೋ ಭೀಮೇನ ತೇಜಸ್ವೀ ಮಿತ್ರೇಣ ವರುಣೋ ಯಥಾ||

ಮಿತ್ರನಿಂದ ವರುಣನು ಹೇಗೋ ಹಾಗೆ ತೇಜಸ್ವೀ ಭೀಮನಿಂದ ರಕ್ಷಿಸಲ್ಪಟ್ಟ ಮಹಾಸ್ತ್ರವಿದು ಧೃಷ್ಟದ್ಯುಮ್ನನು ಪಾಂಡವರ ನೇತಾರನಾದನು.

14059016a ಪಂಚಸೇನಾಪರಿವೃತೋ ದ್ರೋಣಪ್ರೇಪ್ಸುರ್ಮಹಾಮನಾಃ|

14059016c ಪಿತುರ್ನಿಕಾರಾನ್ಸಂಸ್ಮೃತ್ಯ ರಣೇ ಕರ್ಮಾಕರೋನ್ಮಹತ್||

ಐದು ಅಕ್ಷೋಹಿಣೀ ಸೇನೆಗಳಿಂದ ಪರಿವೃತನಾದ ಆ ಮಹಾಮನಸ್ವೀ ಧೃಷ್ಟದ್ಯುಮ್ನನು ದ್ರೋಣನಿಂದ ತನ್ನ ತಂದೆಗಾದ ಅಪಮಾನವನ್ನು ಸ್ಮರಿಸಿಕೊಳ್ಳುತ್ತಾ ರಣದಲ್ಲಿ ಮಹಾಕರ್ಮಗಳನ್ನೆಸಗಿದನು.

14059017a ತಸ್ಮಿಂಸ್ತೇ ಪೃಥಿವೀಪಾಲಾ ದ್ರೋಣಪಾರ್ಷತಸಂಗರೇ|

14059017c ನಾನಾದಿಗಾಗತಾ ವೀರಾಃ ಪ್ರಾಯಶೋ ನಿಧನಂ ಗತಾಃ||

ದ್ರೋಣ-ಪಾರ್ಷತರ ಆ ಸಂಗ್ರಾಮದಲ್ಲಿ ನಾನಾ ದಿಕ್ಕುಗಳಿಂದ ಆಗಮಿಸಿದ್ದ ಪ್ರಾಯಶಃ ಎಲ್ಲ ವೀರ ಪೃಥ್ವೀಪಾಲರ ನಿಧನವಾಯಿತು.

14059018a ದಿನಾನಿ ಪಂಚ ತದ್ಯುದ್ಧಮಭೂತ್ಪರಮದಾರುಣಮ್|

14059018c ತತೋ ದ್ರೋಣಃ ಪರಿಶ್ರಾಂತೋ ಧೃಷ್ಟದ್ಯುಮ್ನವಶಂ ಗತಃ||

ಆ ಪರಮದಾರುಣ ಯುದ್ಧವು ಐದು ದಿನಗಳು ನಡೆಯಿತು. ನಂತರ ಪರಿಶ್ರಾಂತನಾದ ದ್ರೋಣನು ಧೃಷ್ಟದ್ಯುಮ್ನನ ವಶನಾದನು.

14059019a ತತಃ ಸೇನಾಪತಿರಭೂತ್ಕರ್ಣೋ ದೌರ್ಯೋಧನೇ ಬಲೇ|

14059019c ಅಕ್ಷೌಹಿಣೀಭಿಃ ಶಿಷ್ಟಾಭಿರ್ವೃತಃ ಪಂಚಭಿರಾಹವೇ||

ಅನಂತರ ದುರ್ಯೋಧನನ ಸೇನೆಯಲ್ಲಿ ಯುದ್ಧದಲ್ಲಿ ಅಳಿದುಳಿದಿದ್ದ ಐದು ಅಕ್ಷೋಹಿಣೀ ಸೇನೆಗೆ ಕರ್ಣನು ಸೇನಾಪತಿಯಾದನು.

14059020a ತಿಸ್ರಸ್ತು ಪಾಂಡುಪುತ್ರಾಣಾಂ ಚಮ್ವೋ ಬೀಭತ್ಸುಪಾಲಿತಾಃ|

14059020c ಹತಪ್ರವೀರಭೂಯಿಷ್ಠಾ ಬಭೂವುಃ ಸಮವಸ್ಥಿತಾಃ||

ಆಗ ಪಾಂಡುಪುತ್ರರ ಮೂರು ಅಕ್ಷೋಹಿಣೀ ಸೇನೆಯನ್ನು ಬೀಭತ್ಸುವು ರಕ್ಷಿಸುತ್ತಿದ್ದನು. ಬಹಳಷ್ಟು ಪ್ರವೀರರು ಹತರಾಗಿದ್ದರೂ ಅದು ಯುದ್ಧಸನ್ನದ್ಧವಾಗಿತ್ತು.

14059021a ತತಃ ಪಾರ್ಥಂ ಸಮಾಸಾದ್ಯ ಪತಂಗ ಇವ ಪಾವಕಮ್|

14059021c ಪಂಚತ್ವಮಗಮತ್ಸೌತಿರ್ದ್ವಿತೀಯೇಽಹನಿ ದಾರುಣೇ||

ಅನಂತರ ಎರಡನೆಯ ದಿನದ ದಾರುಣ ಯುದ್ಧದಲ್ಲಿ ಪತಂಗವು ಪಾವಕದ ಕಡೆ ಹಾರಿ ಹೋಗುವಂತೆ ಪಾರ್ಥನನ್ನು ಎದುರಿಸಿ ಸೌತಿಯು ಪಂಚತ್ವವನ್ನು ಹೊಂದಿದನು.

14059022a ಹತೇ ಕರ್ಣೇ ತು ಕೌರವ್ಯಾ ನಿರುತ್ಸಾಹಾ ಹತೌಜಸಃ|

14059022c ಅಕ್ಷೌಹಿಣೀಭಿಸ್ತಿಸೃಭಿರ್ಮದ್ರೇಶಂ ಪರ್ಯವಾರಯನ್||

ಕರ್ಣನು ಹತನಾಗಲು ನಿರುತ್ಸಾಹಗೊಂಡ ಹತೌಜಸ ಕೌರವ್ಯರ ಮೂರು ಅಕ್ಷೋಹಿಣೀ ಸೇನೆಗೆ ಮದ್ರೇಶನು ನಾಯಕನಾದನು.

14059023a ಹತವಾಹನಭೂಯಿಷ್ಠಾಃ ಪಾಂಡವಾಸ್ತು ಯುಧಿಷ್ಠಿರಮ್|

14059023c ಅಕ್ಷೌಹಿಣ್ಯಾ ನಿರುತ್ಸಾಹಾಃ ಶಿಷ್ಟಯಾ ಪರ್ಯವಾರಯನ್||

ಅನೇಕ ವಾಹನಗಳನ್ನು ಕಳೆದುಕೊಂಡು ನಿರುತ್ಸಾಹಗೊಂಡಿದ್ದ ಅಳಿದುಳಿದ ಪಾಂಡವರ ಒಂದು ಅಕ್ಷೋಹಿಣೀ ಸೇನೆಗೆ ಯುಧಿಷ್ಠಿರನು ನಾಯಕನಾದನು.

14059024a ಅವಧೀನ್ಮದ್ರರಾಜಾನಂ ಕುರುರಾಜೋ ಯುಧಿಷ್ಠಿರಃ|

14059024c ತಸ್ಮಿಂಸ್ತಥಾರ್ಧದಿವಸೇ ಕರ್ಮ ಕೃತ್ವಾ ಸುದುಷ್ಕರಮ್||

ಅಂದಿನ ಅರ್ಧ ದಿನದಲ್ಲಿಯೇ ಮದ್ರರಾಜನನ್ನು ಸಂಹರಿಸಿ ಕುರುರಾಜ ಯುಧಿಷ್ಠಿರನು ದುಷ್ಕರ ಕರ್ಮವನ್ನೆಸಗಿದನು.

14059025a ಹತೇ ಶಲ್ಯೇ ತು ಶಕುನಿಂ ಸಹದೇವೋ ಮಹಾಮನಾಃ|

14059025c ಆಹರ್ತಾರಂ ಕಲೇಸ್ತಸ್ಯ ಜಘಾನಾಮಿತವಿಕ್ರಮಃ||

ಶಲ್ಯನು ಹತನಾಗಲು ಮಹಾಮನಸ್ವಿ ಅಮಿತವಿಕ್ರಮಿ ಸಹದೇವನು ಆ ಕಲಹಕ್ಕೆ ಮೂಲಕಾರಣನಾಗಿದ್ದ ಶಕುನಿಯನ್ನು ಸಂಹರಿಸಿದನು.

14059026a ನಿಹತೇ ಶಕುನೌ ರಾಜಾ ಧಾರ್ತರಾಷ್ಟ್ರಃ ಸುದುರ್ಮನಾಃ|

14059026c ಅಪಾಕ್ರಾಮದ್ಗದಾಪಾಣಿರ್ಹತಭೂಯಿಷ್ಠಸೈನಿಕಃ||

ಶಕುನಿಯು ಹತನಾದ ನಂತರ ಧಾರ್ತರಾಷ್ಟ್ರ ದುರ್ಮನಸ್ವಿ ರಾಜ ದುರ್ಯೋಧನನು ಗದಾಪಾಣಿಯಾಗಿ ಹತರಾಗದೇ ಉಳಿದಿದ್ದ ಸೈನಿಕರನ್ನು ಬಿಟ್ಟು ಹೊರಟುಹೋದನು.

14059027a ತಮನ್ವಧಾವತ್ಸಂಕ್ರುದ್ಧೋ ಭೀಮಸೇನಃ ಪ್ರತಾಪವಾನ್|

14059027c ಹ್ರದೇ ದ್ವೈಪಾಯನೇ ಚಾಪಿ ಸಲಿಲಸ್ಥಂ ದದರ್ಶ ತಮ್||

ಸಂಕ್ರುದ್ಧನಾದ ಪ್ರತಾಪವಾನ್ ಭೀಮಸೇನನು ಅವನನ್ನೇ ಹಿಂಬಾಲಿಸಿ ಹೋಗಿ ದ್ವೈಪಾಯನ ಸರೋವರದಲ್ಲಿ ನೀರಿನೊಳಗೆ ಕುಳಿತಿದ್ದ ಅವನನ್ನು ನೋಡಿದನು.

14059028a ತತಃ ಶಿಷ್ಟೇನ ಸೈನ್ಯೇನ ಸಮಂತಾತ್ಪರಿವಾರ್ಯ ತಮ್|

14059028c ಉಪೋಪವಿವಿಶುರ್ಹೃಷ್ಟಾ ಹ್ರದಸ್ಥಂ ಪಂಚ ಪಾಂಡವಾಃ||

ಆಗ ಪಂಚ ಪಾಂಡವರು ಹೃಷ್ಟರಾಗಿ ಉಳಿದ ಸೇನೆಗಳಿಂದ ಸರೋವರದಲ್ಲಿದ್ದ ಅವನನ್ನು ಸುತ್ತುವರೆದು ನಿಂತರು.

14059029a ವಿಗಾಹ್ಯ ಸಲಿಲಂ ತ್ವಾಶು ವಾಗ್ಬಾಣೈರ್ಭೃಶವಿಕ್ಷತಃ|

14059029c ಉತ್ಥಾಯ ಸ ಗದಾಪಾಣಿರ್ಯುದ್ಧಾಯ ಸಮುಪಸ್ಥಿತಃ||

ನೀರಿನೊಳಗಿದ್ದ ದುರ್ಯೋಧನನು ಪಾಂಡವರ ವಾಗ್ಬಾಣಗಳಿಂದ ಅತ್ಯಂತ ಗಾಸಿಯಾಗಿ ಯುದ್ಧಮಾಡಲು ಗದಾಪಾಣಿಯಾಗಿ ನೀರಿನಿಂದ ಮೇಲೆದ್ದನು.

14059030a ತತಃ ಸ ನಿಹತೋ ರಾಜಾ ಧಾರ್ತರಾಷ್ಟ್ರೋ ಮಹಾಮೃಧೇ|

14059030c ಭೀಮಸೇನೇನ ವಿಕ್ರಮ್ಯ ಪಶ್ಯತಾಂ ಪೃಥಿವೀಕ್ಷಿತಾಮ್||

ಆಗ ಪೃಥ್ವೀಪಾಲರು ನೋಡುತ್ತಿದ್ದಂತೆಯೇ ನಡೆದ ಮಹಾ ಯುದ್ಧದಲ್ಲಿ ರಾಜಾ ಧಾರ್ತರಾಷ್ಟ್ರನು ಭೀಮಸೇನನ ವಿಕ್ರಮದಿಂದ ಹತನಾದನು.

14059031a ತತಸ್ತತ್ಪಾಂಡವಂ ಸೈನ್ಯಂ ಸಂಸುಪ್ತಂ ಶಿಬಿರೇ ನಿಶಿ|

14059031c ನಿಹತಂ ದ್ರೋಣಪುತ್ರೇಣ ಪಿತುರ್ವಧಮಮೃಷ್ಯತಾ||

ಅನಂತರ ಪಿತುರ್ವಧೆಯನ್ನು ಸಹಿಸಿಕೊಳ್ಳಲಾರದ ದ್ರೋಣಪುತ್ರನು ರಾತ್ರಿ ಶಿಬಿರದಲ್ಲಿ ಮಲಗಿದ್ದ ಪಾಂಡವ ಸೇನೆಯನ್ನು ಸಂಹರಿಸಿದನು.

14059032a ಹತಪುತ್ರಾ ಹತಬಲಾ ಹತಮಿತ್ರಾ ಮಯಾ ಸಹ|

14059032c ಯುಯುಧಾನದ್ವಿತೀಯೇನ ಪಂಚ ಶಿಷ್ಟಾಃ ಸ್ಮ ಪಾಂಡವಾಃ||

ನಾನು, ಎರಡನೆಯವನಾಗಿ ಯುಯುಧಾನ ಸಾತ್ಯಕಿ ಮತ್ತು ಐವರು ಪಾಂಡವರು ಇವರನ್ನು ಬಿಟ್ಟು ಸೇನೆಗಳೆಲ್ಲವೂ ನಾಶವಾದವು, ಪುತ್ರರು ಹತರಾದರು ಮತ್ತು ಮಿತ್ರರೂ ಹತರಾದರು.

14059033a ಸಹೈವ ಕೃಪಭೋಜಾಭ್ಯಾಂ ದ್ರೌಣಿರ್ಯುದ್ಧಾದಮುಚ್ಯತ|

14059033c ಯುಯುತ್ಸುಶ್ಚಾಪಿ ಕೌರವ್ಯೋ ಮುಕ್ತಃ ಪಾಂಡವಸಂಶ್ರಯಾತ್||

ಅವರ ಕಡೆಯಲ್ಲಿ ಕೃಪ-ಭೋಜ ಕೃತವರ್ಮರೊಂದಿಗೆ ದ್ರೌಣಿಯು ಯುದ್ಧದಿಂದ ಮುಕ್ತರಾಗಿ ಬದುಕುಳಿದರು. ಕೌರವ್ಯ ಯುಯುತ್ಸುವೂ ಕೂಡ ಪಾಂಡವರ ಆಶ್ರಯವನ್ನು ಪಡೆದುದರಿಂದ ಉಳಿದುಕೊಂಡನು.

14059034a ನಿಹತೇ ಕೌರವೇಂದ್ರೇ ಚ ಸಾನುಬಂಧೇ ಸುಯೋಧನೇ|

14059034c ವಿದುರಃ ಸಂಜಯಶ್ಚೈವ ಧರ್ಮರಾಜಮುಪಸ್ಥಿತೌ||

ಅನುಯಾಯಿಗಳೊಂದಿಗೆ ಕೌರವೇಂದ್ರ ಸುಯೋಧನನು ಹತನಾಗಲು ವಿದುರ-ಸಂಜಯರು ಧರ್ಮರಾಜನನ್ನೇ ಆಶ್ರಯಿಸಿದರು.

14059035a ಏವಂ ತದಭವದ್ಯುದ್ಧಮಹಾನ್ಯಷ್ಟಾದಶ ಪ್ರಭೋ|

14059035c ಯತ್ರ ತೇ ಪೃಥಿವೀಪಾಲಾ ನಿಹತಾಃ ಸ್ವರ್ಗಮಾವಸನ್||

ಪ್ರಭೋ! ಹದಿನೆಂಟು ಅಕ್ಷೋಹಿಣೀ ಸೇನೆಗಳು ಮತ್ತು ಪೃಥ್ವೀಪಾಲರು ಹತರಾಗಿ ಸ್ವರ್ಗವನ್ನು ಸೇರಿದ ಆ ಮಹಾಯುದ್ಧವು ಈ ರೀತಿ ನಡೆಯಿತು.””

14059036 ವೈಶಂಪಾಯನ ಉವಾಚ

14059036a ಶೃಣ್ವತಾಂ ತು ಮಹಾರಾಜ ಕಥಾಂ ತಾಂ ರೋಮಹರ್ಷಣೀಮ್|

14059036c ದುಃಖಹರ್ಷಪರಿಕ್ಲೇಶಾ ವೃಷ್ಣೀನಾಮಭವಂಸ್ತದಾ||

ವೈಶಂಪಾಯನನು ಹೇಳಿದನು: “ಮಹಾರಾಜ! ಆ ರೋಮಹರ್ಷಣ ಕಥೆಯನ್ನು ಕೇಳಿದ ವೃಷ್ಣಿಗಳು ದುಃಖ-ಹರ್ಷಗಳಿಂದ ಪೀಡಿತರಾದರು.”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ವಾಸುದೇವವಾಕ್ಯೇ ಏಕೋನಷಷ್ಟಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ವಾಸುದೇವವಾಕ್ಯ ಎನ್ನುವ ಐವತ್ತೊಂಭತ್ತನೇ ಅಧ್ಯಾಯವು.

[1] ಸಂಜಯನು ಧೃತರಾಷ್ಟ್ರನಿಗೆ ನೀಡಿದ ಯುದ್ಧವಿವರಣೆಯ ಪ್ರಕಾರ ಮಹಾಭಾರತ ಯುದ್ಧದ ಮೊದಲಿನಿಂದ ಕಡೆಯವರೆಗೂ ಧೃಷ್ಟದ್ಯುಮ್ನನೇ ಪಾಂಡವರ ಸೇನಾನಾಯಕನಾಗಿದ್ದನು. ಆದರೆ ಭೀಷ್ಮನನ್ನು ಸಂಹರಿಸಲು ಶಿಖಂಡಿಯನ್ನು ಅವನ ಎದಿರು ನಿಲ್ಲಿಸಲು ಪಾಂಡವರು ಪ್ರಯತ್ನಪಟ್ಟಿದ್ದುದರಿಂದ ಕೃಷ್ಣನು ಭೀಷ್ಮನ ವಧೆಯ ಪ್ರಸಂಗದಲ್ಲಿ ಶಿಖಂಡಿಯೇ ಪಾಂಡವರ ನಾಯಕನಾಗಿದ್ದನೆಂದು ಹೇಳುತ್ತಾನೆ.

Comments are closed.