Ashramavasika Parva: Chapter 20

ಆಶ್ರಮವಾಸಿಕ ಪರ್ವ: ಆಶ್ರಮವಾಸ ಪರ್ವ

೨೦

ಧೃತರಾಷ್ಟ್ರನ ಶ್ರಾದ್ಧಯಜ್ಞ (೧-೧೭).

15020001 ವೈಶಂಪಾಯನ ಉವಾಚ|

15020001a ವಿದುರೇಣೈವಮುಕ್ತಸ್ತು ಧೃತರಾಷ್ಟ್ರೋ ಜನಾಧಿಪಃ|

15020001c ಪ್ರೀತಿಮಾನಭವದ್ರಾಜಾ ರಾಜ್ಞೋ ಜಿಷ್ಣೋಶ್ಚ ಕರ್ಮಣಾ||

ವೈಶಂಪಾಯನನು ಹೇಳಿದನು: “ವಿದುರನು ಹೀಗೆ ಹೇಳಲು ಜನಾಧಿಪ ಧೃತರಾಷ್ಟ್ರನು ರಾಜ ಮತ್ತು ಜಿಷ್ಣುವಿನ ಕೃತ್ಯಗಳಿಂದ ಅತ್ಯಂತ ಪ್ರಸನ್ನನಾದನು.

15020002a ತತೋಽಭಿರೂಪಾನ್ಭೀಷ್ಮಾಯ ಬ್ರಾಹ್ಮಣಾನೃಷಿಸತ್ತಮಾನ್|

15020002c ಪುತ್ರಾರ್ಥೇ ಸುಹೃದಾಂ ಚೈವ ಸ ಸಮೀಕ್ಷ್ಯ ಸಹಸ್ರಶಃ||

ಅನಂತರ ಅವನು ಭೀಷ್ಮನ ಮತ್ತು ತನ್ನ ಮಕ್ಕಳು, ಸುಹೃದಯರ ಶ್ರಾದ್ಧದ ಸಲುವಾಗಿ ಸಹಸ್ರಾರು ಯೋಗ್ಯ ಬ್ರಾಹ್ಮಣರನ್ನೂ ಋಷಿಸತ್ತಮರನ್ನೂ ಆಮಂತ್ರಿಸಿದನು.

15020003a ಕಾರಯಿತ್ವಾನ್ನಪಾನಾನಿ ಯಾನಾನ್ಯಾಚ್ಚಾದನಾನಿ ಚ|

15020003c ಸುವರ್ಣಮಣಿರತ್ನಾನಿ ದಾಸೀದಾಸಪರಿಚ್ಚದಾನ್||

15020004a ಕಂಬಲಾಜಿನರತ್ನಾನಿ ಗ್ರಾಮಾನ್ ಕ್ಷೇತ್ರಾನಜಾವಿಕಮ್|

15020004c ಅಲಂಕಾರಾನ್ಗಜಾನಶ್ವಾನ್ಕನ್ಯಾಶ್ಚೈವ ವರಸ್ತ್ರಿಯಃ|

15020004e ಆದಿಶ್ಯಾದಿಶ್ಯ ವಿಪ್ರೇಭ್ಯೋ ದದೌ ಸ ನೃಪಸತ್ತಮಃ||

15020005a ದ್ರೋಣಂ ಸಂಕೀರ್ತ್ಯ ಭೀಷ್ಮಂ ಚ ಸೋಮದತ್ತಂ ಚ ಬಾಹ್ಲಿಕಮ್|

15020005c ದುರ್ಯೋಧನಂ ಚ ರಾಜಾನಂ ಪುತ್ರಾಂಶ್ಚೈವ ಪೃಥಕ್ ಪೃಥಕ್|

15020005e ಜಯದ್ರಥಪುರೋಗಾಂಶ್ಚ ಸುಹೃದಶ್ಚೈವ ಸರ್ವಶಃ||

ಅನ್ನ-ಪಾನಾದಿಗಳು, ಯಾನಗಳು, ಹೊದಿಕೆಗಳು, ಸುವರ್ಣ-ಮಣಿ-ರತ್ನಗಳು, ದಾಸ-ದಾಸಿಯರು, ಕಂಬಳಿ-ಜಿನಗಳ ಹೊದಿಕೆಗಳು, ರತ್ನಗಳು, ಗ್ರಾಮಗಳು, ಕ್ಷೇತ್ರಗಳು, ಆಡು-ಕುರಿಗಳು, ಅಲಂಕರಿಸಲ್ಪಟ್ಟ ಆನೆ-ಕುದುರೆಗಳು, ಸುಂದರ ರಾಜಕನ್ಯೆಯರು ಇವುಗಳೆಲ್ಲವನ್ನೂ ನೃಪಸತ್ತಮನು ದ್ರೋಣ, ಭೀಷ್ಮ, ಸೋಮದತ್ತ, ಬಾಹ್ಲೀಕ, ದುರ್ಯೋಧನ ಮತ್ತು ಅವನ ಅನುಜರು, ಜಯದ್ರಥನೇ ಮೊದಲಾದ ಸುಹೃದಯರು ಇವರನ್ನು ಉದ್ದೇಶಿಸಿ ಪ್ರತ್ಯೇಕ ಪ್ರತ್ಯೇಕವಾಗಿ ಬ್ರಾಹ್ಮಣರಿಗೆ ದಾನಮಾಡಿದನು.

15020006a ಸ ಶ್ರಾದ್ಧಯಜ್ಞೋ ವವೃಧೇ ಬಹುಗೋಧನದಕ್ಷಿಣಃ|

15020006c ಅನೇಕಧನರತ್ನೌಘೋ ಯುಧಿಷ್ಠಿರಮತೇ ತದಾ||

ಯುಧಿಷ್ಠಿರನ ಅಭಿಪ್ರಾಯದಂತೆ ಆ ಶ್ರಾದ್ಧಯಜ್ಞವು ಅನೇಕ ಗೋಧನ ದಕ್ಷಿಣೆಗಳಿಂದ ಅನೇಕ ಧನರತ್ನಗಳಿಂದ ಸುಶೋಭಿಸುತ್ತಿತ್ತು.

15020007a ಅನಿಶಂ ಯತ್ರ ಪುರುಷಾ ಗಣಕಾ ಲೇಖಕಾಸ್ತಥಾ|

15020007c ಯುಧಿಷ್ಠಿರಸ್ಯ ವಚನಾತ್ತದಾಪೃಚ್ಚಂತಿ ತಂ ನೃಪಮ್||

ಯುಧಿಷ್ಠಿರನ ಶಾಸನದಂತೆ ಅನೇಕ ಗಣಕ-ಲೇಖಕ ಪುರುಷರು ನಿರಂತರವಾಗಿ ನೃಪನನ್ನು ಈ ರೀತಿ ಕೇಳುತ್ತಿದ್ದರು:

15020008a ಆಜ್ಞಾಪಯ ಕಿಮೇತೇಭ್ಯಃ ಪ್ರದೇಯಂ ದೀಯತಾಮಿತಿ|

15020008c ತದುಪಸ್ಥಿತಮೇವಾತ್ರ ವಚನಾಂತೇ ಪ್ರದೃಶ್ಯತೇ||

“ಇವರಿಗೆ ಏನನ್ನು ದಾನಮಾಡಬೇಕು ಎಂದು ಆಜ್ಞಾಪಿಸು! ಎಲ್ಲ ವಸ್ತುಗಳೂ ಇಲ್ಲಿ ಸಿದ್ಧವಾಗಿವೆ. ಯಾವುದನ್ನು ಬೇಕಾದರೂ ಕೊಡಬಹುದು!”

15020009a ಶತೇ ದೇಯೇ ದಶಶತಂ ಸಹಸ್ರೇ ಚಾಯುತಂ ತಥಾ|

15020009c ದೀಯತೇ ವಚನಾದ್ರಾಜ್ಞಃ ಕುಂತೀಪುತ್ರಸ್ಯ ಧೀಮತಃ||

ಧೀಮಂತ ಕುಂತೀಪುತ್ರನ ವಚನದಂತೆ ರಾಜನು ಆಗ ನೂರು ನಾಣ್ಯಗಳನ್ನು ಕೊಡಲು ಹೇಳಿದರೆ ಗಣಕರು ಸಾವಿರ ನಾಣ್ಯಗಳನ್ನು ಕೊಡುತ್ತಿದ್ದರು.

15020010a ಏವಂ ಸ ವಸುಧಾರಾಭಿರ್ವರ್ಷಮಾಣೋ ನೃಪಾಂಬುದಃ|

15020010c ತರ್ಪಯಾಮಾಸ ವಿಪ್ರಾಂಸ್ತಾನ್ವರ್ಷನ್ಭೂಮಿಮಿವಾಂಬುದಃ||

ಮೋಡವು ಮಳೆಸುರಿಸಿ ಭೂಮಿಯನ್ನು ತೃಪ್ತಿಗೊಳಿಸುವಂತೆ ಮೋಡದ ರೂಪದಲ್ಲಿದ್ದ ಧೃತರಾಷ್ಟ್ರನು ಭೂಮಿಯ ಮೇಲೆ ಧನದ ಮಳೆಯನ್ನೇ ಸುರಿಸಿ ವಿಪ್ರರನ್ನು ತೃಪ್ತಿಗೊಳಿಸಿದನು.

15020011a ತತೋಽನಂತರಮೇವಾತ್ರ ಸರ್ವವರ್ಣಾನ್ಮಹೀಪತಿಃ|

15020011c ಅನ್ನಪಾನರಸೌಘೇನ ಪ್ಲಾವಯಾಮಾಸ ಪಾರ್ಥಿವಃ||

ಅನಂತರ ಪಾರ್ಥಿವ ಮಹೀಪತಿಯು ಸರ್ವ ವರ್ಣದವರನ್ನೂ ಅನ್ನ-ಪಾನ-ರಸಗಳ ಪ್ರವಾಹದಲ್ಲಿ ತೇಲಿಸಿಬಿಟ್ಟನು.

15020012a ಸವಸ್ತ್ರಫೇನರತ್ನೌಘೋ ಮೃದಂಗನಿನದಸ್ವನಃ|

15020012c ಗವಾಶ್ವಮಕರಾವರ್ತೋ ನಾರೀರತ್ನಮಹಾಕರಃ||

15020013a ಗ್ರಾಮಾಗ್ರಹಾರಕುಲ್ಯಾಢ್ಯೋ ಮಣಿಹೇಮಜಲಾರ್ಣವಃ|

15020013c ಜಗತ್ಸಂಪ್ಲಾವಯಾಮಾಸ ಧೃತರಾಷ್ಟ್ರದಯಾಂಬುಧಿಃ||

ವಸ್ತ್ರ-ರತ್ನಗಳ ರಾಶಿಗಳು ಅಲೆಗಳಂತೆಯೂ, ಮೃದಂಗದ ಸ್ವರಗಳು ಭೋರ್ಗರೆಯಂತೆಯೂ, ಗೋವು-ಅಶ್ವಗಳು ಮೊಸಳೆಗಳಂತೆಯೂ, ನಾರಿಯರು ರತ್ನಗಳಂತೆಯೂ, ಗ್ರಾಮ-ಅಗ್ರಹಾರಗಳು ದ್ವೀಪಗಳಂತೆಯೂ, ಮಣಿ-ಚಿನ್ನಗಳು ನೀರಿನಂತೆಯೂ ತುಂಬಿದ್ದ ಆ ಧೃತರಾಷ್ಟ್ರನ ದಯಾಸಾಗರದಲ್ಲಿ ಜಗತ್ತೇ ತೇಲುತ್ತಿತ್ತು.

15020014a ಏವಂ ಸ ಪುತ್ರಪೌತ್ರಾಣಾಂ ಪಿತೄಣಾಮಾತ್ಮನಸ್ತಥಾ|

15020014c ಗಾಂಧಾರ್ಯಾಶ್ಚ ಮಹಾರಾಜ ಪ್ರದದಾವೌರ್ಧ್ವದೇಹಿಕಮ್||

ಹೀಗೆ ಮಹಾರಾಜನು ತನ್ನ ಪುತ್ರ-ಪೌತ್ರರಿಗೂ, ಪಿತೃಗಳಿಗೂ ಹಾಗೆಯೇ ತನಗೂ ಮತ್ತು ಗಾಂಧಾರಿಗೂ ಔರ್ಧ್ವದೇಹಿಕ ಕರ್ಮಗಳನ್ನು ನೆರವೇರಿಸಿದನು.

15020015a ಪರಿಶ್ರಾಂತೋ ಯದಾಸೀತ್ಸ ದದದ್ದಾನಾನ್ಯನೇಕಶಃ|

15020015c ತತೋ ನಿರ್ವರ್ತಯಾಮಾಸ ದಾನಯಜ್ಞಂ ಕುರೂದ್ವಹಃ||

ಅನೇಕ ದಾನಗಳನ್ನು ಕೊಟ್ಟು ಆಯಾಸಗೊಂಡ ಆ ಕುರೂದ್ವಹನು ದಾನಯಜ್ಞವನ್ನು ಮುಗಿಸಿದನು.

15020016a ಏವಂ ಸ ರಾಜಾ ಕೌರವ್ಯಶ್ಚಕ್ರೇ ದಾನಮಹೋತ್ಸವಮ್|

15020016c ನಟನರ್ತಕಲಾಸ್ಯಾಢ್ಯಂ ಬಹ್ವನ್ನರಸದಕ್ಷಿಣಮ್||

ಹೀಗೆ ಆ ರಾಜಾ ಕೌರವ್ಯನು ಬಹಳ ಅನ್ನ-ರಸ-ದಕ್ಷಿಣೆಗಳಿಂದ ಕೂಡಿದ್ದ, ನಟ-ನರ್ತಕರ ಕಲೆಗಳಿಂದ ಕೂಡಿದ್ದ ಆ ದಾನಮಹೋತ್ಸವವನ್ನು ನಡೆಸಿದನು.

15020017a ದಶಾಹಮೇವಂ ದಾನಾನಿ ದತ್ತ್ವಾ ರಾಜಾಂಬಿಕಾಸುತಃ|

15020017c ಬಭೂವ ಪುತ್ರಪೌತ್ರಾಣಾಮನೃಣೋ ಭರತರ್ಷಭ||

ಭರತರ್ಷಭ! ರಾಜಾ ಅಂಬಿಕಾಸುತನು ಈ ರೀತಿ ಹತ್ತುದಿನಗಳು ದಾನಗಳನ್ನಿತ್ತು ಪುತ್ರ-ಪೌತ್ರರ ಋಣಗಳಿಂದ ಮುಕ್ತನಾದನು.”

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ದಾನಯಜ್ಞೇ ವಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ದಾನಯಜ್ಞ ಎನ್ನುವ ಇಪ್ಪತ್ತನೇ ಅಧ್ಯಾಯವು.

Related image

Comments are closed.