Adi Parva: Chapter 4

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ: ಪೌಲೋಮ ಪರ್ವ

ಉಗ್ರಶ್ರವನು ನೈಮಿಷಾರಣ್ಯದ ಋಷಿಗಳ ಮಧ್ಯದಲ್ಲಿ ಉಪಸ್ಥಿತನಾಗಿರಲು, ಋಷಿಗಳು ಕಥೆಗಳನ್ನು ಪ್ರಾರಂಭಿಸಲು ಶೌನಕನ ಬರವನ್ನು ಕಾಯಲು ಕೇಳಿಕೊಳ್ಳುವುದು (೧-೭). ಆಹ್ನೀಕಗಳನ್ನು ಮುಗಿಸಿ ಶೌನಕನು ಸಭೆಗೆ ಬರುವುದು (೮-೧೧).

01004001A ಲೋಮಹರ್ಷಣಪುತ್ರ ಉಗ್ರಶ್ರವಾಃ ಸೂತಃ ಪೌರಾಣಿಕೋ ನೈಮಿಷಾರಣ್ಯೇ ಶೌನಕಸ್ಯ ಕುಲಪತೇರ್ದ್ವಾದಶವಾರ್ಷಿಕೇ ಸತ್ರೇ ಋಷೀನಭ್ಯಾಗತಾನುಪತಸ್ಥೇ||

ಲೋಮಹರ್ಷಣ ಪುತ್ರ ಉಗ್ರಶ್ರವ ಸೌತಿ ಪುರಾಣಿಕನು ನೈಮಿಷಾರಣ್ಯದಲ್ಲಿ ಕುಲಪತಿ ಶೌನಕನ ಹನ್ನೆರಡು ವರ್ಷಗಳ ಸತ್ರದಲ್ಲಿ ಸೇರಿದ್ದ ಋಷಿಗಳ ಮಧ್ಯದಲ್ಲಿ ಉಪಸ್ಥಿತನಿದ್ದನು.

01004002A ಪೌರಾಣಿಕಃ ಪುರಾಣೇ ಕೃತಶ್ರಮಃ ಸ ತಾನ್ಕೃತಾಂಜಲಿರುವಾಚ|

01004002B ಕಿಂ ಭವಂತಃ ಶ್ರೋತುಮಿಚ್ಚಂತಿ|

01004002C ಕಿಮಹಂ ಬ್ರುವಾಣೀತಿ||

ಶ್ರಮಪಟ್ಟು ಪುರಾಣಗಳಲ್ಲಿ ಪಾಂಡಿತ್ಯವನ್ನು ಪಡೆದಿದ್ದ ಪೌರಾಣಿಕನು ಅಂಜಲೀಬದ್ಧನಾಗಿ ಕೇಳಿದನು: "ನೀವು ಏನನ್ನು ಕೇಳಲು ಬಯಸುತ್ತೀರಿ? ನಿಮಗೆ ಏನನ್ನು ಹೇಳಲಿ?"

01004003A ತಂ ಋಷಯ ಊಚುಃ|

01004003B ಪರಮಂ ಲೋಮಹರ್ಷಣೇ ಪ್ರಕ್ಷ್ಯಾಮಸ್ತ್ವಾಂ ವಕ್ಷ್ಯಸಿ ಚ ನಃ ಶುಶ್ರೂಷತಾಂ ಕಥಾಯೋಗಂ|

01004003C ತದ್ಭಗವಾಂಸ್ತು ತಾವಚ್ಛೌನಕೋಽಗ್ನಿಶರಣಮಧ್ಯಾಸ್ತೇ||

ಋಷಿಗಳು ಹೇಳಿದರು: “ಲೋಮಹರ್ಷಣ! ನೀನು ನಮಗೆ ಹೇಳುವ ಉತ್ತಮ ಕಥೆಗಳನ್ನು ಕೇಳಲು ಕಾತುರರಾಗಿದ್ದೇವೆ.  ಆದರೆ ಸದ್ಯ ಶೌನಕನು ಅಗ್ನಿಪೂಜೆಯಲ್ಲಿ ನಿರತನಾಗಿದ್ದಾನೆ.

01004004a ಯೋಽಸೌ ದಿವ್ಯಾಃ ಕಥಾ ವೇದ ದೇವತಾಸುರಸಂಕಥಾಃ|

01004004c ಮನುಷ್ಯೋರಗಗಂಧರ್ವಕಥಾ ವೇದ ಚ ಸರ್ವಶಃ||

ದೇವತೆ, ಅಸುರ, ಮನುಷ್ಯ, ಉರಗ, ಮತ್ತು ಗಂಧರ್ವರ ಸರ್ವ ದಿವ್ಯ ಕಥೆಗಳನ್ನೂ ಅವನು ತಿಳಿದಿದ್ದಾನೆ.

01004005a ಸ ಚಾಪ್ಯಸ್ಮಿನ್ಮಖೇ ಸೌತೇ ವಿದ್ವಾನ್ಕುಲಪತಿರ್ದ್ವಿಜಃ|

01004005c ದಕ್ಷೋ ಧೃತವ್ರತೋ ಧೀಮಾನ್ ಶಾಸ್ತ್ರೇ ಚಾರಣ್ಯಕೇ ಗುರುಃ||

01004006a ಸತ್ಯವಾದೀ ಶಮಪರಸ್ತಪಸ್ವೀ ನಿಯತವ್ರತಃ|

ಸೌತಿ! ಆ ವಿದ್ವಾನ್ ದ್ವಿಜನು ಈ ಯಜ್ಞದ ಕುಲಪತಿ. ದಕ್ಷನೂ, ಧೃತವ್ರತನೂ, ಧೀಮಂತನೂ ಮತ್ತು ಶಾಸ್ತ್ರ ಅರಣ್ಯಕಗಳ ಗುರುವೂ ಆದ ಅವನು ಸತ್ಯವಾದಿ, ತಾಳ್ಮಿ, ತಪಸ್ವಿ, ಮತ್ತು ನಿಯತವ್ರತ.

01004006c ಸರ್ವೇಷಾಮೇವ ನೋ ಮಾನ್ಯಃ ಸ ತಾವತ್ಪ್ರತಿಪಾಲ್ಯತಾಂ||

01004007a ತಸ್ಮಿನ್ನಧ್ಯಾಸತಿ ಗುರಾವಾಸನಂ ಪರಮಾರ್ಚಿತಂ|

01004007c ತತೋ ವಕ್ಷ್ಯಸಿ ಯತ್ತ್ವಾಂ ಸ ಪ್ರಕ್ಷ್ಯತಿ ದ್ವಿಜಸತ್ತಮಃ||

ನಮ್ಮೆಲ್ಲರಿಂದ ಗೌರವಿಸಲ್ಪಟ್ಟ ಅವನ ಬರವನ್ನು ಕಾಯಬೇಕು. ಯಾವಾಗ ಈ ಪರಮಾರ್ಚಿತ ಗುರುವಿನ ಆಸನದಲ್ಲಿ ಅವನು ಕುಳಿತುಕೊಳ್ಳುತ್ತಾನೋ ಮತ್ತು ಆ ದ್ವಿಜಸತ್ತಮನು ಏನನ್ನು ಕೇಳುತ್ತಾನೋ ಅದನ್ನೇ ಹೇಳು.”

01004008 ಸೂತ ಉವಾಚ

01004008a ಏವಮಸ್ತು ಗುರೌ ತಸ್ಮಿನ್ನುಪವಿಷ್ಟೇ ಮಹಾತ್ಮನಿ|

01004008c ತೇನ ಪೃಷ್ಟಃ ಕಥಾಃ ಪುಣ್ಯಾ ವಕ್ಷ್ಯಾಮಿ ವಿವಿಧಾಶ್ರಯಾಃ||

ಸೂತನು ಹೇಳಿದನು: “ಹಾಗೆಯೇ ಆಗಲಿ. ಈ ಗುರುಪೀಠದಲ್ಲಿ ಆ ಮಹಾತ್ಮನು ಕುಳಿತುಕೊಂಡ ನಂತರ ಅವನು ವಿವಿಧ ವಿಷಯಗಳ ಯಾವ ಪುಣ್ಯ ಕಥೆಯನ್ನು ಕೇಳಲು ಬಯಸುತ್ತಾನೋ ಅದನ್ನೇ ಹೇಳುತ್ತೇನೆ.”

01004009a ಸೋಽಥ ವಿಪ್ರರ್ಷಭಃ ಕಾರ್ಯಂ ಕೃತ್ವಾ ಸರ್ವಂ ಯಥಾಕ್ರಮಂ|

01004009c ದೇವಾನ್ವಾಗ್ಭಿಃ ಪಿತೄನದ್ಭಿಸ್ತರ್ಪಯಿತ್ವಾಜಗಾಮ ಹ||

01004010a ಯತ್ರ ಬ್ರಹ್ಮರ್ಷಯಃ ಸಿದ್ಧಾಸ್ತ ಆಸೀನಾ ಯತವ್ರತಾಃ|

01004010c ಯಜ್ಮಾಯತನಮಾಶ್ರಿತ್ಯ ಸೂತಪುತ್ರಪುರಃಸ್ಸರಾಃ||

01004011a ಋತ್ವಿಕ್ಷ್ವಥ ಸದಸ್ಯೇಷು ಸ ವೈ ಗೃಹಪತಿಸ್ತತಃ|

01004011c ಉಪವಿಷ್ಟೇಷೂಪವಿಷ್ಟಃ ಶೌನಕೋಽಥಾಬ್ರವೀದಿದಂ||

ಅದೇ ಸಮಯಕ್ಕೆ ವಿಪ್ರರ್ಷಭನು ಯಥಾಕ್ರಮವಾಗಿ ಸರ್ವ ಕಾರ್ಯಗಳನ್ನು ಪೂರೈಸಿ, ದೇವತೆಗಳನ್ನು ಸ್ತುತಿಸಿ, ಪಿತೃಗಳಿಗೆ ತರ್ಪಣವನ್ನಿತ್ತು, ಸೂತಪುತ್ರನೊಂದಿಗೆ ಬ್ರಹ್ಮರ್ಷಿ ಸಿದ್ಧರು ಕುಳಿತಿದ್ದ ಯಜ್ಞ ಶಾಲೆಗೆ ಬಂದನು. ಕುಳಿತಿದ್ದ ಋತ್ವಿಕರು ಮತ್ತು ಸದಸ್ಯರ ಮಧ್ಯದಲ್ಲಿ ಕುಳಿತ ಗೃಹಪತಿ ಶೌನಕನು ಈ ರೀತಿ ಹೇಳಿದನು.

ಇತಿ ಶ್ರೀ ಮಹಾಭಾರತೇ ಆದಿ ಪರ್ವಣಿ ಪೌಲೋಮ ಪರ್ವಣಿ ಕಥಾಪ್ರವೇಶೋ ನಾಮ ಚತುರ್ಥೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಆದಿ ಪರ್ವದಲ್ಲಿ ಪೌಲೋಮ ಪರ್ವದಲ್ಲಿ ಕಥಾಪ್ರವೇಶ ಎನ್ನುವ ನಾಲ್ಕನೆಯ ಅಧ್ಯಾಯವು.

2 Comments

  1. ಚಿದಂಬರ ಎಸ್ ಏಚ್, ಶೆಟ್ಟಿಸರ, ಸಾಗರ

    ತುಂಬಾ ಚೆನ್ನಾಗಿದೆ

  2. ಚಿದಂಬರ ಎಸ್ ಏಚ್, ಶೆಟ್ಟಿಸರ, ಸಾಗರ (ಸಿದ್ಧವನ, ಉಜಿರೆ)

    ತುಂಬಾ ಚೆನ್ನಾಗಿದೆ

Leave a Reply

Your email address will not be published. Required fields are marked *