ಛಾಂದೋಗ್ಯೋಪನಿಷತ್: ಷಷ್ಠೋಽಧ್ಯಾಯಃ ಷೋಡಶಃ ಖಂಡಃ
ಪುರುಷಗಂ ಸೋಮ್ಯೋತ ಹಸ್ತಗೃಹೀತಮಾನಯಂತ್ಯಪಹಾರ್ಷೀತ್ಸ್ತೇಯಮಕಾರ್ಷೀತ್ಪರಶುಮಸ್ಮೈ ತಪತೇತಿ ಸ ಯದಿ ತಸ್ಯ ಕರ್ತಾ ಭವತಿ ತತ ಏವಾನೃತಮಾತ್ಮಾನಂ ಕುರುತೇ ಸೋಽನೃತಾಭಿಸಂಧೋಽನೃತೇನಾತ್ಮಾನಮಂತರ್ಧಾಯ ಪರಶುಂ ತಪ್ತಂ ಪ್ರತಿಗೃಹ್ಣಾತಿ ಸ ದಹ್ಯತೇಽಥ ಹನ್ಯತೇ ।। 1 ।। ಅಥ ಯದಿ ತಸ್ಯಾಃ ಕರ್ತಾ ಭವತಿ ತತ ಏವ ಸತ್ಯಮಾತ್ಮಾನಂ ಕುರುತೇ ಸ ಸತ್ಯಾಭಿಸಂಧಃ ಸತ್ಯೇನಾತ್ಮಾನಮಂತರ್ಧಾಯ ಪರಶುಂ ತಪ್ತಂ ಪ್ರತಿಗೃಹ್ಣಾತಿ ಸನ ದಹ್ಯತೇಽಥ ಮುಚ್ಯತೇ ।। 2 ।। ಸ ಯಥಾ ತತ್ರ ನಾದಾಹ್ಯೇತೈತದಾತ್ಮ್ಯಮಿದಂ ಸರ್ವಂ ತತ್ಸತ್ಯಗಂ ಸ ಆತ್ಮಾ ತತ್ತ್ವಮಸಿ ಶ್ವೇತಕೇತೋ ಇತಿ ತದ್ಧಾಸ್ಯ ವಿಜಜ್ಞಾವಿತಿ ವಿಜಜ್ಞಾವಿತಿ ।। 3 ।।
“ಸೋಮ್ಯ! ಕೈಕಟ್ಟಿ ಪುರುಷನನ್ನು ತರುತ್ತಾರೆ. “ಇವನು ಧನಾಪಹಾರ ಮಾಡಿದ್ದಾನೆ. ಕದ್ದಿದ್ದಾನೆ. ಕೊಡಲಿಯನ್ನು ಕಾಯಿಸಿರಿ!” ಎನ್ನುತ್ತಾರೆ. ಅವನು ಆ ಕಳವನ್ನು ಮಾಡಿದ್ದರೆ ಮತ್ತು ನಾನು ಮಾಡಿಲ್ಲವೆಂದು ಸುಳ್ಳುಹೇಳಿದರೆ ಅವನು ತನ್ನನ್ನೇ ಸುಳ್ಳುಮಾಡಿಕೊಳ್ಳುತ್ತಾನೆ. ಅವನು ಸುಳ್ಳಿನಿಂದ ಆವೃತನಾಗಿ, ತಾನು ಸುಳ್ಳಿನ ನಡುವೆ ನಿಂತು, ಕಾಸಿದ ಕೊಡಲಿಯನ್ನು ಹಿಡಿಯುತ್ತಾನೆ. ಅವನ ಕೈ ಸುಡುತ್ತದೆ. ಹೀಗೆ ಅವನು ಕಳ್ಳನೆನ್ನುವುದು ಸಿದ್ಧವಾದ್ದರಿಂದ ಅವನನ್ನು ಕೊಲ್ಲುತ್ತಾರೆ. ಅವನು ಅದನ್ನು ಕಳವುಮಾಡದೇ ಇದ್ದಿದ್ದರೆ, ನಾನು ಮಾಡಿಲ್ಲ ಎಂದು ನಿಜವನ್ನು ಹೇಳಿ, ತಾನು ಸತ್ಯ ಎಂದು ಸಿದ್ಧಪಡಿಸುತ್ತಾನೆ. ಸತ್ಯದಿಂದ ಆವೃತನಾಗಿ ಸತ್ಯದ ನಡುವೆ ನಿಂತು ಕಾಸಿದ ಕೊಡಲಿಯನ್ನು ಹಿಡಿಯುತ್ತಾನೆ. ಅವನ ಕೈ ಸುಡದೇ ಹೋಗುತ್ತದೆ. ಅವನನ್ನು ಬಿಡುಗಡೆಮಾಡುತ್ತಾರೆ. ಸತ್ಯವಂತನು ಅಲ್ಲಿ ಸುಡದೇ ಇರುವಂತ ಸತ್ಯವನ್ನು ಅರಿತವನು ದುಃಖದಿಂದ ಅಲಿಪ್ತನಾಗಿರುತ್ತಾನೆ. ಇದೆಲ್ಲವೂ ಆತ್ಮಮಯವು. ಅದು ಸತ್ಯವು. ಅದು ಆತ್ಮವು. ಶ್ವೇತಕೇತೋ! ನೀನೂ ಅದೇ ಆಗಿರುವೆ!” ತಂದೆಯು ಹೇಳಿದ ಮಾತು ಮಗನಿಗೆ ತಿಳಿಯಿತು. ಸಂಪೂರ್ಣವಾಗಿ ತಿಳಿಯಿತು.
ಇತಿ ಷೋಡಶಃ ಖಂಡಃ ।।
ಇತಿ ಷಷ್ಠೋಽಧ್ಯಾಯಃ ।।