ಉದ್ಯೋಗ ಪರ್ವ: ಯಾನಸಂಧಿ ಪರ್ವ
೬೧
ಕರ್ಣನ ಶಸ್ತ್ರನ್ಯಾಸ
ಪಾರ್ಥನ ಕುರಿತು ಇನ್ನೂ ಕೇಳತೊಡಗಿರುವ ಧೃತರಾಷ್ಟ್ರನನ್ನು ಕಡೆಗಣಿಸಿ ಕೌರವರ ಸಂಸದಿಯಲ್ಲಿ ದುರ್ಯೋಧನನನ್ನು ಹರ್ಷಗೊಳಿಸುತ್ತಾ ಕರ್ಣನು ತನ್ನ ಪರಾಕ್ರಮವನ್ನು ಕೊಚ್ಚಿಕೊಳ್ಳಲು (೧-೬), ಭೀಷ್ಮನು ಅವನನ್ನು ಹೀಯಾಳಿಸಿದುದು (೭-೧೧). ಅದಕ್ಕೆ ನೊಂದು ಕರ್ಣನು “ಶಸ್ತ್ರಗಳನ್ನು ಕೆಳಗಿಡುತ್ತೇನೆ. ಯುದ್ಧಕ್ಕೆ ಹೋಗುವುದಿಲ್ಲ. ಪಿತಾಮಹನು ನನ್ನನ್ನು ಸಭೆಗಳಲ್ಲಿ ಮಾತ್ರ ನೋಡುತ್ತಾನೆ. ನೀನು ಸುಮ್ಮನಾದಾಗ ಭೂಮಿಯಲ್ಲಿರುವ ಭೂಮಿಪಾಲರು ಎಲ್ಲರೂ ನನ್ನ ಪ್ರಭಾವವನ್ನು ನೋಡುತ್ತಾರೆ” ಎಂದು ಹೇಳಿ ಸಭಾತ್ಯಾಗ ಮಾಡಿದುದು (೧೨-೧೮).
05061001 ವೈಶಂಪಾಯನ ಉವಾಚ|
05061001a ತಥಾ ತು ಪೃಚ್ಚಂತಮತೀವ ಪಾರ್ಥಾನ್
ವೈಚಿತ್ರವೀರ್ಯಂ ತಮಚಿಂತಯಿತ್ವಾ|
05061001c ಉವಾಚ ಕರ್ಣೋ ಧೃತರಾಷ್ಟ್ರಪುತ್ರಂ
ಪ್ರಹರ್ಷಯನ್ಸಂಸದಿ ಕೌರವಾಣಾಂ||
ವೈಶಂಪಾಯನನು ಹೇಳಿದನು: “ಪಾರ್ಥನ ಕುರಿತು ಇನ್ನೂ ಕೇಳತೊಡಗಿದ ವೈಚಿತ್ರವೀರ್ಯನನ್ನು ಕಡೆಗಣಿಸಿ ಕೌರವರ ಸಂಸದಿಯಲ್ಲಿ ಧೃತರಾಷ್ಟ್ರಪುತ್ರನನ್ನು ಹರ್ಷಗೊಳಿಸುತ್ತಾ ಕರ್ಣನು ಹೇಳಿದನು.
05061002a ಮಿಥ್ಯಾ ಪ್ರತಿಜ್ಞಾಯ ಮಯಾ ಯದಸ್ತ್ರಂ
ರಾಮಾದ್ಧೃತಂ ಬ್ರಹ್ಮಪುರಂ ಪುರಸ್ತಾತ್|
05061002c ವಿಜ್ಞಾಯ ತೇನಾಸ್ಮಿ ತದೈವಮುಕ್ತಸ್-
ತವಾಂತಕಾಲೇಽಪ್ರತಿಭಾಸ್ಯತೀತಿ||
“ನಾನು ಸುಳ್ಳುಹೇಳಿ ಆ ಪುರಾತನ ಬ್ರಹ್ಮಪುರ ಅಸ್ತ್ರವನ್ನು ರಾಮನಿಂದ ಪಡೆದೆನೆಂದು ತಿಳಿದ ರಾಮನು “ನಿನ್ನ ಅಂತಕಾಲದಲ್ಲಿ ನಿನಗೆ ಇದನ್ನು ಪ್ರಯೋಗಿಸುವ ವಿಧಾನವು ಮರೆತುಹೋಗುತ್ತದೆ!” ಎಂದಿದ್ದನು.
05061003a ಮಹಾಪರಾಧೇ ಹ್ಯಪಿ ಸಂನತೇನ
ಮಹರ್ಷಿಣಾಹಂ ಗುರುಣಾ ಚ ಶಪ್ತಃ|
05061003c ಶಕ್ತಃ ಪ್ರದಗ್ಧುಂ ಹ್ಯಪಿ ತಿಗ್ಮತೇಜಾಃ
ಸಸಾಗರಾಮಪ್ಯವನಿಂ ಮಹರ್ಷಿಃ||
ಅಷ್ಟೊಂದು ಮಹಾ ಅಪರಾಧವನ್ನೆಸಗಿದ್ದರೂ ನನ್ನ ಗುರು ಮಹರ್ಷಿಯಿಂದ ಲಘುವಾಗಿಯೇ ಶಪಿಸಲ್ಪಟ್ಟಿದ್ದೇನೆ. ಆ ತಿಗ್ಮತೇಜ ಮಹರ್ಷಿಯು ಸಾಗರಗಳಿಂದೊಡಗೂಡಿದ ಈ ಅವನಿಯನ್ನೂ ಭಸ್ಮಮಾಡಲು ಶಕ್ತ.
05061004a ಪ್ರಸಾದಿತಂ ಹ್ಯಸ್ಯ ಮಯಾ ಮನೋಽಭೂಚ್-
ಚುಶ್ರೂಷಯಾ ಸ್ವೇನ ಚ ಪೌರುಷೇಣ|
05061004c ತತಸ್ತದಸ್ತ್ರಂ ಮಮ ಸಾವಶೇಷಂ
ತಸ್ಮಾತ್ಸಮರ್ಥೋಽಸ್ಮಿ ಮಮೈಷ ಭಾರಃ||
ಮನಸ್ಥೈರ್ಯದಿಂದ ಮತ್ತು ಪೌರುಷದಿಂದ ನಾನು ಅವನ ಶುಶ್ರೂಷೆ ಮಾಡಿ ಮೆಚ್ಚಿಸಿದೆ. ಆ ಅಸ್ತ್ರವು ಇನ್ನೂ ನನ್ನಲ್ಲಿದೆ. ಮತ್ತು ನನ್ನ ಆಯಸ್ಸು ಇನ್ನೂ ಮುಗಿದಿಲ್ಲ! ಆದುದರಿಂದ ಸಮರ್ಥನಾಗಿದ್ದೇನೆ. ಆ ಭಾರವು ನನಗಿರಲಿ.
05061005a ನಿಮೇಷಮಾತ್ರಂ ತಮೃಷಿಪ್ರಸಾದಂ
ಅವಾಪ್ಯ ಪಾಂಚಾಲಕರೂಷಮತ್ಸ್ಯಾನ್|
05061005c ನಿಹತ್ಯ ಪಾರ್ಥಾಂಶ್ಚ ಸಪುತ್ರಪೌತ್ರಾಽಲ್-
ಲೋಕಾನಹಂ ಶಸ್ತ್ರಜಿತಾನ್ಪ್ರಪತ್ಸ್ಯೇ||
ಆ ಋಷಿಯ ಪ್ರಸಾದದಿಂದ, ಕಣ್ಣುಮುಚ್ಚಿತೆರೆಯುವುದರೊಳಗೆ ನಾನು ಶಸ್ತ್ರದಿಂದ ಪಾಂಚಾಲ, ಕರೂಷ, ಮತ್ಸ್ಯರನ್ನು, ಪಾರ್ಥರನ್ನು ಅವರ ಮಕ್ಕಳು ಮೊಮ್ಮಕ್ಕಳೊಂದಿಗೆ ಲೋಕಗಳನ್ನು ಜಯಿಸಿ ಒಪ್ಪಿಸುತ್ತೇನೆ.
05061006a ಪಿತಾಮಹಸ್ತಿಷ್ಠತು ತೇ ಸಮೀಪೇ
ದ್ರೋಣಶ್ಚ ಸರ್ವೇ ಚ ನರೇಂದ್ರಮುಖ್ಯಾಃ|
05061006c ಯಥಾಪ್ರಧಾನೇನ ಬಲೇನ ಯಾತ್ವಾ
ಪಾರ್ಥಾನ್ ಹನಿಷ್ಯಾಮಿ ಮಮೈಷ ಭಾರಃ||
ಪಿತಾಮಹ, ದ್ರೋಣ ಮತ್ತು ನರೇಂದ್ರಮುಖ್ಯರೆಲ್ಲರೂ ನಿನ್ನ ಸಮೀಪದಲ್ಲಿಯೇ ಇರಲಿ. ಪ್ರಧಾನ ಸೇನೆಯನ್ನು ತೆಗೆದುಕೊಂಡು ಹೋಗಿ ಪಾಂಡವರನ್ನು ಸಂಹರಿಸುತ್ತೇನೆ. ಆ ಭಾರವು ನನಗಿರಲಿ.”
05061007a ಏವಂ ಬ್ರುವಾಣಂ ತಮುವಾಚ ಭೀಷ್ಮಃ
ಕಿಂ ಕತ್ಥಸೇ ಕಾಲಪರೀತಬುದ್ಧೇ|
05061007c ನ ಕರ್ಣ ಜಾನಾಸಿ ಯಥಾ ಪ್ರಧಾನೇ
ಹತೇ ಹತಾಃ ಸ್ಯುರ್ಧೃತರಾಷ್ಟ್ರಪುತ್ರಾಃ||
ಹೀಗೆ ಹೇಳುತ್ತಿದ್ದ ಅವನಿಗೆ ಭೀಷ್ಮನು ಹೇಳಿದನು: “ಏನು ಹೇಳುತ್ತಿರುವೆ? ನಿನ್ನ ಅಂತ್ಯವು ಬಂದು ಬುದ್ಧಿ ಕೆಟ್ಟಿದೆ. ಪ್ರಧಾನನು ಹತನಾದರೆ ಎಲ್ಲ ಧೃತರಾಷ್ಟ್ರಪುತ್ರರೂ ಹತರಾಗುತ್ತಾರೆ ಎಂದು ನಿನಗೆ ತಿಳಿದಿಲ್ಲವೇ?
05061008a ಯತ್ಖಾಂಡವಂ ದಾಹಯತಾ ಕೃತಂ ಹಿ
ಕೃಷ್ಣದ್ವಿತೀಯೇನ ಧನಂಜಯೇನ|
05061008c ಶ್ರುತ್ವೈವ ತತ್ಕರ್ಮ ನಿಯಂತುಮಾತ್ಮಾ
ಶಕ್ಯಸ್ತ್ವಯಾ ವೈ ಸಹ ಬಾಂಧವೇನ||
ಖಾಂಡವವನ್ನು ಸುಡುವಾಗ ಕೃಷ್ಣನೊಬ್ಬನ ಸಹಾಯದಿಂದಲೇ ಧನಂಜಯನು ಮಾಡಿದುದನ್ನು ಕೇಳಿಯೂ ಕೂಡ, ಬಾಂಧವರೊಂದಿಗೆ ನಿನ್ನನ್ನು ನೀನು ನಿಯಂತ್ರಿಸಿಕೊಳ್ಳುವುದು ಒಳ್ಳೆಯದು.
05061009a ಯಾಂ ಚಾಪಿ ಶಕ್ತಿಂ ತ್ರಿದಶಾಧಿಪಸ್ತೇ
ದದೌ ಮಹಾತ್ಮಾ ಭಗವಾನ್ಮಹೇಂದ್ರಃ|
05061009c ಭಸ್ಮೀಕೃತಾಂ ತಾಂ ಪತಿತಾಂ ವಿಶೀರ್ಣಾಂ
ಚಕ್ರಾಹತಾಂ ದ್ರಕ್ಷ್ಯಸಿ ಕೇಶವೇನ||
ಯಾವ ಶಕ್ತಿಯನ್ನು ನಿನಗೆ ತ್ರಿದಶಾಧಿಪ ಮಹಾತ್ಮ ಭಗವಾನ್ ಮಹೇಂದ್ರನು ಕೊಟ್ಟಿದ್ದನೋ ಅದನ್ನೂ ಕೂಡ ಕೇಶವನು ಚಕ್ರದಿಂದ ಹೊಡೆದು ಚೂರಾಗಿ ಭಸ್ಮೀಕೃತವಾಗಿ ಕೆಳಗೆ ಬೀಳಿಸುವುದನ್ನು ನೋಡುವಿಯಂತೆ!
05061010a ಯಸ್ತೇ ಶರಃ ಸರ್ಪಮುಖೋ ವಿಭಾತಿ
ಸದಾಗ್ರ್ಯಮಾಲ್ಯೈರ್ಮಹಿತಃ ಪ್ರಯತ್ನಾತ್|
05061010c ಸ ಪಾಂಡುಪುತ್ರಾಭಿಹತಃ ಶರೌಘೈಃ
ಸಹ ತ್ವಯಾ ಯಾಸ್ಯತಿ ಕರ್ಣ ನಾಶಂ||
ಕರ್ಣ! ಯಾವ ಶರವು ಸರ್ಪಮುಖದಲ್ಲಿ ಹೊಳೆಯುತ್ತಿರುವುದೋ, ಪ್ರಯತ್ನ ಪಟ್ಟು ನೀನು ಯಾವುದನ್ನು ಮಾಲೆಗಳನ್ನು ಹಾಕಿ ಪೂಜಿಸುತ್ತಿರುವೆಯೋ ಅದನ್ನು ಕೂಡ ಪಾಂಡುಪುತ್ರನು ಹರಿತ ಶರಗಳಿಂದ ಹೊಡೆದು ನಿನ್ನೊಂದಿಗೆ ಅದೂ ನಾಶವಾಗುತ್ತದೆ.
05061011a ಬಾಣಸ್ಯ ಭೌಮಸ್ಯ ಚ ಕರ್ಣ ಹಂತಾ
ಕಿರೀಟಿನಂ ರಕ್ಷತಿ ವಾಸುದೇವಃ|
05061011c ಯಸ್ತ್ವಾದೃಶಾನಾಂ ಚ ಗರೀಯಸಾಂ ಚ
ಹಂತಾ ರಿಪೂಣಾಂ ತುಮುಲೇ ಪ್ರಗಾಢೇ||
ಕರ್ಣ! ಬಾಣ ಮತ್ತು ಭೌಮ (ನರಕ) ರ ಹಂತಕ ವಾಸುದೇವನು ಕಿರೀಟಿಯನ್ನು ರಕ್ಷಿಸುತ್ತಾನೆ. ಪ್ರಗಾಢ ತುಮುಲದಲ್ಲಿ ಅವನು ನಿನ್ನಂಥಹ ಮತ್ತು ನಿನಗಿಂಥಲೂ ಹೆಚ್ಚಿನ ಶತ್ರುಗಳನ್ನು ಹತಗೊಳಿಸುತ್ತಾನೆ.”
05061012 ಕರ್ಣ ಉವಾಚ|
05061012a ಅಸಂಶಯಂ ವೃಷ್ಣಿಪತಿರ್ಯಥೋಕ್ತಸ್-
ತಥಾ ಚ ಭೂಯಶ್ಚ ತತೋ ಮಹಾತ್ಮಾ|
05061012c ಅಹಂ ಯದುಕ್ತಃ ಪರುಷಂ ತು ಕಿಂ ಚಿತ್
ಪಿತಾಮಹಸ್ತಸ್ಯ ಫಲಂ ಶೃಣೋತು||
ಕರ್ಣನು ಹೇಳಿದನು: “ವೃಷ್ಣಿಪತಿಯು ಹೇಳಿದಂತೆಯೇ ಇದ್ದಾನೆ ಎನ್ನುವುದರಲ್ಲಿ ಸಂಶಯವಿಲ್ಲ. ಆ ಮಹಾತ್ಮನು ಅದಕ್ಕಿಂತಲೂ ಹೆಚ್ಚಿನವನು. ಆದರೆ ಪಿತಾಮಹನಾಡಿದ ಈ ಕಠೋರ ಮಾತುಗಳ ಪರಿಣಾಮವನ್ನು ಕೇಳಿ.
05061013a ನ್ಯಸ್ಯಾಮಿ ಶಸ್ತ್ರಾಣಿ ನ ಜಾತು ಸಂಖ್ಯೇ
ಪಿತಾಮಹೋ ದ್ರಕ್ಷ್ಯತಿ ಮಾಂ ಸಭಾಯಾಂ|
05061013c ತ್ವಯಿ ಪ್ರಶಾಂತೇ ತು ಮಮ ಪ್ರಭಾವಂ
ದ್ರಕ್ಷ್ಯಂತಿ ಸರ್ವೇ ಭುವಿ ಭೂಮಿಪಾಲಾಃ||
ಶಸ್ತ್ರಗಳನ್ನು ಕೆಳಗಿಡುತ್ತೇನೆ. ಯುದ್ಧಕ್ಕೆ ಹೋಗುವುದಿಲ್ಲ. ಪಿತಾಮಹನು ನನ್ನನ್ನು ಸಭೆಗಳಲ್ಲಿ ಮಾತ್ರ ನೋಡುತ್ತಾನೆ. ನೀನು ಸುಮ್ಮನಾದಾಗ ಭೂಮಿಯಲ್ಲಿರುವ ಭೂಮಿಪಾಲರು ಎಲ್ಲರೂ ನನ್ನ ಪ್ರಭಾವವನ್ನು ನೋಡುತ್ತಾರೆ.””
05061014 ವೈಶಂಪಾಯನ ಉವಾಚ|
05061014a ಇತ್ಯೇವಮುಕ್ತ್ವಾ ಸ ಮಹಾಧನುಷ್ಮಾನ್
ಹಿತ್ವಾ ಸಭಾಂ ಸ್ವಂ ಭವನಂ ಜಗಾಮ|
05061014c ಭೀಷ್ಮಸ್ತು ದುರ್ಯೋಧನಮೇವ ರಾಜನ್
ಮಧ್ಯೇ ಕುರೂಣಾಂ ಪ್ರಹಸನ್ನುವಾಚ||
ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಆ ಮಹಾಧನುಷ್ಮಂತನು ಸಭೆಯನ್ನು ತೊರೆದು ಸ್ವ-ಭವನಕ್ಕೆ ತೆರಳಿದನು. ರಾಜನ್! ಭೀಷ್ಮನಾದರೋ ಕುರುಗಳ ಮಧ್ಯದಲ್ಲಿ ಜೋರಾಗಿ ನಕ್ಕು ದುರ್ಯೋಧನನಿಗೆ ಹೇಳಿದನು.
05061015a ಸತ್ಯಪ್ರತಿಜ್ಞಾಃ ಕಿಲ ಸೂತಪುತ್ರಸ್-
ತಥಾ ಸ ಭಾರಂ ವಿಷಹೇತ ಕಸ್ಮಾತ್|
05061015c ವ್ಯೂಹಂ ಪ್ರತಿವ್ಯೂಹ್ಯ ಶಿರಾಂಸಿ ಭಿತ್ತ್ವಾ
ಲೋಕಕ್ಷಯಂ ಪಶ್ಯತ ಭೀಮಸೇನಾತ್||
05061016a ಆವಂತ್ಯಕಾಲಿಂಗಜಯದ್ರಥೇಷು
ವೇದಿಧ್ವಜೇ ತಿಷ್ಠತಿ ಬಾಹ್ಲಿಕೇ ಚ|
05061016c ಅಹಂ ಹನಿಷ್ಯಾಮಿ ಸದಾ ಪರೇಷಾಂ
ಸಹಸ್ರಶಶ್ಚಾಯುತಶಶ್ಚ ಯೋಧಾನ್||
“ಸೂತಪುತ್ರನು ತನ್ನ ಪ್ರತಿಜ್ಞೆಯನ್ನು ಸತ್ಯವಾಗಿಸುತ್ತಾನಲ್ಲವೇ? ಭೀಮಸೇನನು ನೋಡುತ್ತಿದ್ದಂತೆ ವ್ಯೂಹ-ಪ್ರತಿವ್ಯೂಹಗಳ ಶಿರಗಳನ್ನು ಕತ್ತರಿಸಿ ಲೋಕಕ್ಷಯವನ್ನುಂಟುಮಾಡುತ್ತೇನೆ ಮತ್ತು ಅವಂತಿ, ಕಲಿಂಗ, ಜಯದ್ರಥರ ಧ್ವಜಗಳ ಮಧ್ಯದಲ್ಲಿ ಬಾಹ್ಲೀಕನನ್ನು ನಿಲ್ಲಿಸಿ ನಾನು ಸದಾ ಶತ್ರುಗಳ ಹತ್ತುಸಾವಿರ ಯೋಧರನ್ನು ಸಂಹರಿಸುತ್ತೇನೆ ಎಂದು ಹೇಳಿದ ಅವನು ತನ್ನ ಆ ಜವಾಬ್ಧಾರಿಯನ್ನು ಹೇಗೆ ನಿರ್ವಹಿಸುತ್ತಾನೆ?
05061017a ಯದೈವ ರಾಮೇ ಭಗವತ್ಯನಿಂದ್ಯೇ
ಬ್ರಹ್ಮ ಬ್ರುವಾಣಃ ಕೃತವಾಂಸ್ತದಸ್ತ್ರಂ|
05061017c ತದೈವ ಧರ್ಮಶ್ಚ ತಪಶ್ಚ ನಷ್ಟಂ
ವೈಕರ್ತನಸ್ಯಾಧಮಪೂರುಷಸ್ಯ||
ಅನಿಂದ್ಯ, ಭಗವಂತ ರಾಮನನಿಗೆ ಬ್ರಾಹ್ಮಣನೆಂದು ಹೇಳಿ ಆ ಅಸ್ತ್ರವನ್ನು ಪಡೆದಾಗಲೇ ಆ ಅಧಮ ಪುರುಷ ವೈಕರ್ತನನ ಧರ್ಮ ತಪಸ್ಸುಗಳು ನಷ್ಟವಾಗಿ ಹೋಗಿದ್ದವು.”
05061018a ಅಥೋಕ್ತವಾಕ್ಯೇ ನೃಪತೌ ತು ಭೀಷ್ಮೇ
ನಿಕ್ಷಿಪ್ಯ ಶಸ್ತ್ರಾಣಿ ಗತೇ ಚ ಕರ್ಣೇ|
05061018c ವೈಚಿತ್ರವೀರ್ಯಸ್ಯ ಸುತೋಽಲ್ಪಬುದ್ಧಿರ್-
ದುರ್ಯೋಧನಃ ಶಾಂತನವಂ ಬಭಾಷೇ||
ಶಸ್ತ್ರಗಳನ್ನು ಬಿಸುಟು ಹೊರಟುಹೋದ ಕರ್ಣನ ಕುರಿತು ಭೀಷ್ಮನು ನೃಪತಿಗಳಿಗೆ ಹೇಳಲು ಬುದ್ಧಿಯಿಲ್ಲದ, ವೈಚಿತ್ರವೀರ್ಯನ ಮಗ ದುರ್ಯೋಧನನು ಶಾಂತನವನಿಗೆ ಹೇಳಿದನು.
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ಕರ್ಣಭೀಷ್ಮವಾಕ್ಯೇ ಏಕಷಷ್ಟಿತಮೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ಕರ್ಣಭೀಷ್ಮವಾಕ್ಯದಲ್ಲಿ ಅರವತ್ತೊಂದನೆಯ ಅಧ್ಯಾಯವು.