Udyoga Parva: Chapter 5

ಉದ್ಯೋಗ ಪರ್ವ: ಸೇನೋದ್ಯೋಗ ಪರ್ವ

ಕೃಷ್ಣನು ದ್ವಾರಕೆಗೆ ತೆರಳಿದುದು

ಆಗ ಕೃಷ್ಣನು “ಅವರು ಪಾಂಡವರೊಂದಿಗೆ ವರ್ತಮಾನದಲ್ಲಿ ಹೇಗೆ ನಡೆದುಕೊಂಡರೂ ಕುರು ಮತ್ತು ಪಾಂಡವರೊಂದಿಗೆ ನಮ್ಮ ಸಂಬಂಧವು ಸಮನಾದುದು” ಮತ್ತು “ಒಂದುವೇಳೆ ಕುರುಗಳು ನ್ಯಾಯದಿಂದ ಶಾಂತಿಗಾಗಿ ನಡೆದುಕೊಂಡರೆ ಒಳ್ಳೆಯದು, ಇಲ್ಲವಾದರೆ ದುರ್ಯೋಧನನನು ಅಮಾತ್ಯ-ಬಾಂಧವರೊಡನೆ ಕೃದ್ಧ ಗಾಂಡೀವಧನುಸ್ಸಿನಿಂದ ಕೊನೆಯನ್ನು ಕಾಣುತ್ತಾನೆ” ಎಂದು ಹೇಳಿ ದ್ವಾರಕೆಗೆ ತೆರಳಿದುದು (೧-೧೧). ಉಳಿದ ರಾಜರೂ ಹಿಂದಿರುಗಿದುದು (೧೨-೧೮).

05005001 ವಾಸುದೇವ ಉವಾಚ|

05005001a ಉಪಪನ್ನಮಿದಂ ವಾಕ್ಯಂ ಸೋಮಕಾನಾಂ ಧುರಂಧರೇ|

05005001c ಅರ್ಥಸಿದ್ಧಿಕರಂ ರಾಜ್ಞಾಃ ಪಾಂಡವಸ್ಯ ಮಹೌಜಸಃ||

ವಾಸುದೇವನು ಹೇಳಿದನು: “ಸೋಮಕರ ಧುರಂಧರ! ರಾಜರಿಗೆ ತಕ್ಕುದಾದ ಮಾತಿದು. ಮಹೌಜಸ ಪಾಂಡವನ ಅರ್ಥಸಿದ್ಧಿಕರವಾದುದು.

05005002a ಏತಚ್ಚ ಪೂರ್ವಕಾರ್ಯಂ ನಃ ಸುನೀತಮಭಿಕಾಂಕ್ಷತಾಂ|

05005002c ಅನ್ಯಥಾ ಹ್ಯಾಚರನ್ಕರ್ಮ ಪುರುಷಃ ಸ್ಯಾತ್ಸುಬಾಲಿಶಃ||

ಸುನೀತಮಾರ್ಗವನ್ನು ಬಯಸುವವರಿಗೆ ಇದೇ ಮೊದಲು ಮಾಡಬೇಕಾದ ಕಾರ್ಯ. ಅನ್ಯಥಾ ನಡೆದುಕೊಳ್ಳುವ ಮತ್ತು ಮಾಡುವ ಪುರುಷನು ಬಾಲಿಶನೇ ಸರಿ.

05005003a ಕಿಂ ತು ಸಂಬಂಧಕಂ ತುಲ್ಯಮಸ್ಮಾಕಂ ಕುರುಪಾಂಡುಷು|

05005003c ಯಥೇಷ್ಟಂ ವರ್ತಮಾನೇಷು ಪಾಂಡವೇಷು ಚ ತೇಷು ಚ||

ಅವರು ಪಾಂಡವರೊಂದಿಗೆ ವರ್ತಮಾನದಲ್ಲಿ ಹೇಗೆ ನಡೆದುಕೊಂಡರೂ ಕುರು ಮತ್ತು ಪಾಂಡವರೊಂದಿಗೆ ನಮ್ಮ ಸಂಬಂಧವು ಸಮನಾದುದು.

05005004a ತೇ ವಿವಾಹಾರ್ಥಮಾನೀತಾ ವಯಂ ಸರ್ವೇ ಯಥಾ ಭವಾನ್|

05005004c ಕೃತೇ ವಿವಾಹೇ ಮುದಿತಾ ಗಮಿಷ್ಯಾಮೋ ಗೃಹಾನ್ಪ್ರತಿ||

ನಿನ್ನಂತೆ ನಾವೆಲ್ಲರೂ ಇಲ್ಲಿಗೆ ವಿವಾಹಾರ್ಥವಾಗಿ ಆಹ್ವಾನಿತರಾಗಿ ಬಂದಿದ್ದೇವೆ. ವಿವಾಹವು ಮುಗಿದು ಸಂತೋಷಗೊಂಡು ಮನೆಗಳಿಗೆ ಹೋಗೋಣ.

05005005a ಭವಾನ್ವೃದ್ಧತಮೋ ರಾಜ್ಞಂ ವಯಸಾ ಚ ಶ್ರುತೇನ ಚ|

05005005c ಶಿಷ್ಯವತ್ತೇ ವಯಂ ಸರ್ವೇ ಭವಾಮೇಹ ನ ಸಂಶಯಃ||

ನೀನಾದರೋ ವಯಸ್ಸಿನಲ್ಲಿ ಮತ್ತು ತಿಳುವಳಿಕೆಯಲ್ಲಿ ರಾಜರಲ್ಲೆಲ್ಲಾ ಹಿರಿಯವನು. ಆದುದರಿಂದ ಇಲ್ಲಿರುವ ನಾವೆಲ್ಲರೂ ನಿನ್ನ ಶಿಷ್ಯರಂತೆ ಎನ್ನುವುದರಲ್ಲಿ ಸಂಶಯವಿಲ್ಲ.

05005006a ಭವಂತಂ ಧೃತರಾಷ್ಟ್ರಶ್ಚ ಸತತಂ ಬಹು ಮನ್ಯತೇ|

05005006c ಆಚಾರ್ಯಯೋಃ ಸಖಾ ಚಾಸಿ ದ್ರೋಣಸ್ಯ ಚ ಕೃಪಸ್ಯ ಚ||

ಧೃತರಾಷ್ಟ್ರನು ನಿನ್ನನ್ನು ಸತತವಾಗಿ ಬಹಳಷ್ಟು ಗೌರವಿಸುತ್ತಾನೆ. ಆಚಾರ್ಯ ದ್ರೋಣ ಮತ್ತು ಕೃಪರ ಗೆಳೆಯನೂ ಆಗಿರುವೆ.

05005007a ಸ ಭವಾನ್ಪ್ರೇಷಯತ್ವದ್ಯ ಪಾಂಡವಾರ್ಥಕರಂ ವಚಃ|

05005007c ಸರ್ವೇಷಾಂ ನಿಶ್ಚಿತಂ ತನ್ನಃ ಪ್ರೇಷಯಿಷ್ಯತಿ ಯದ್ಭವಾನ್||

ಆದುದರಿಂದ ಇಂದು ಪಾಂಡವಾರ್ಥವಾಗಿ ಸಂದೇಶವನ್ನು ಅವರಿಗೆ ಕಳುಹಿಸಬೇಕೆಂದು ನಾನು ನಿನ್ನಲ್ಲಿ ಕೇಳಿಕೊಳ್ಳುತ್ತೇನೆ. ನೀನು ಸಂದೇಶವನ್ನು ಕಳುಹಿಸಬೇಕೆಂದು ನಮ್ಮೆಲ್ಲರ ನಿರ್ಧಾರ.

05005008a ಯದಿ ತಾವಚ್ಚಮಂ ಕುರ್ಯಾನ್ನ್ಯಾಯೇನ ಕುರುಪುಂಗವಃ|

05005008c ನ ಭವೇತ್ಕುರುಪಾಂಡೂನಾಂ ಸೌಭ್ರಾತ್ರೇಣ ಮಹಾನ್ ಕ್ಷಯಃ||

ಒಂದುವೇಳೆ ಕುರುಪುಂಗವರು ನ್ಯಾಯದಿಂದ ಶಾಂತಿಗಾಗಿ ನಡೆದುಕೊಂಡರೆ ಕುರು-ಪಾಂಡವರ ನಡುವಿನ ಸೌಭ್ರಾತೃತ್ವವು ಮಹಾ ಕ್ಷಯವನ್ನು ಹೊಂದುವುದಿಲ್ಲ.

05005009a ಅಥ ದರ್ಪಾನ್ವಿತೋ ಮೋಹಾನ್ನ ಕುರ್ಯಾದ್ಧೃತರಾಷ್ಟ್ರಜಃ|

05005009c ಅನ್ಯೇಷಾಂ ಪ್ರೇಷಯಿತ್ವಾ ಚ ಪಶ್ಚಾದಸ್ಮಾನ್ಸಮಾಹ್ವಯೇಃ||

 05005010a ತತೋ ದುರ್ಯೋಧನೋ ಮಂದಃ ಸಹಾಮಾತ್ಯಃ ಸಬಾಂಧವಃ|

05005010c ನಿಷ್ಠಾಮಾಪತ್ಸ್ಯತೇ ಮೂಢಃ ಕ್ರುದ್ಧೇ ಗಾಂಡೀವಧನ್ವನಿ||

ಇಲ್ಲವಾದರೆ ಆ ಮಂದಬುದ್ಧಿ ಮೂಢ ದುರ್ಯೋಧನನನು ಅಮಾತ್ಯ-ಬಾಂಧವರೊಡನೆ ಕೃದ್ಧ ಗಾಂಡೀವಧನುಸ್ಸಿನಿಂದ ಕೊನೆಯನ್ನು ಕಾಣುತ್ತಾನೆ.””

05005011 ವೈಶಂಪಾಯನ ಉವಾಚ|

05005011a ತತಃ ಸತ್ಕೃತ್ಯ ವಾರ್ಷ್ಣೇಯಂ ವಿರಾಟಃ ಪೃಥಿವೀಪತಿಃ|

05005011c ಗೃಹಾನ್ಪ್ರಸ್ಥಾಪಯಾಮಾಸ ಸಗಣಂ ಸಹಬಾಂಧವಂ||

ವೈಶಂಪಾಯನನು ಹೇಳಿದನು: “ಅನಂತರ ರಾಜ ವಿರಾಟನು ವಾರ್ಷ್ಣೇಯನನ್ನು ಸತ್ಕರಿಸಿ ಅವನ ಗಣ ಬಾಂಧವರೊಡನೆ ಮನೆಗಳಿಗೆ ಕಳುಹಿಸಿಕೊಟ್ಟನು.

05005012a ದ್ವಾರಕಾಂ ತು ಗತೇ ಕೃಷ್ಣೇ ಯುಧಿಷ್ಠಿರಪುರೋಗಮಾಃ|

05005012c ಚಕ್ರುಃ ಸಾಂಗ್ರಾಮಿಕಂ ಸರ್ವಂ ವಿರಾಟಶ್ಚ ಮಹೀಪತಿಃ||

ಕೃಷ್ಣನು ದ್ವಾರಕೆಗೆ ಹೋದ ನಂತರ ಯುಧಿಷ್ಠಿರನು ತನ್ನ ಅನುಯಾಯಿಗಳೊಂದಿಗೆ ಮತ್ತು ರಾಜ ವಿರಾಟನೊಂದಿಗೆ ಯುದ್ಧದ ಎಲ್ಲ ತಯಾರಿಗಳನ್ನೂ ನಡೆಸಿದನು.

05005013a ತತಃ ಸಂಪ್ರೇಷಯಾಮಾಸ ವಿರಾಟಃ ಸಹ ಬಾಂಧವೈಃ|

05005013c ಸರ್ವೇಷಾಂ ಭೂಮಿಪಾಲಾನಾಂ ದ್ರುಪದಶ್ಚ ಮಹೀಪತಿಃ||

ಅನಂತರ ವಿರಾಟನು ಎಲ್ಲ ಭೂಮಿಪಾಲರನ್ನೂ ಮಹೀಪತಿ ದ್ರುಪದನನ್ನೂ ಬಾಂಧವರೊಂದಿಗೆ ಕಳುಹಿಸಿಕೊಟ್ಟನು.

05005014a ವಚನಾತ್ಕುರುಸಿಂಹಾನಾಂ ಮತ್ಸ್ಯಪಾಂಚಾಲಯೋಶ್ಚ ತೇ|

05005014c ಸಮಾಜಗ್ಮುರ್ಮಹೀಪಾಲಾಃ ಸಂಪ್ರಹೃಷ್ಟಾ ಮಹಾಬಲಾಃ||

ಕುರುಸಿಂಹರ ಮತ್ತು ಮತ್ಸ್ಯ-ಪಾಂಚಾಲರ ಮಾತಿನಂತೆ ಸಂತೋಷಗೊಂಡು ಮಹಾಬಲ ಮಹೀಪಾಲರು ಬಂದು ಸೇರಿದರು.

05005015a ತಚ್ಚ್ರುತ್ವಾ ಪಾಂಡುಪುತ್ರಾಣಾಂ ಸಮಾಗಚ್ಚನ್ಮಹದ್ಬಲಂ|

05005015c ಧೃತರಾಷ್ಟ್ರಸುತಶ್ಚಾಪಿ ಸಮಾನಿನ್ಯೇ ಮಹೀಪತೀನ್||

ಪಾಂಡುಪುತ್ರರು ಮಹಾಬಲವನ್ನು ಒಟ್ಟುಗೂಡಿಸಿದ್ದಾರೆ ಎಂದು ಕೇಳಿದ ಧೃತರಾಷ್ಟ್ರಪುತ್ರನೂ ಕೂಡ ಮಹೀಪತಿಗಳನ್ನು ಒಟ್ಟುಗೂಡಿಸಿದನು.

05005016a ಸಮಾಕುಲಾ ಮಹೀ ರಾಜನ್ಕುರುಪಾಂಡವಕಾರಣಾತ್|

05005016c ತದಾ ಸಮಭವತ್ಕೃತ್ಸ್ನಾ ಸಂಪ್ರಯಾಣೇ ಮಹೀಕ್ಷಿತಾಂ||

ರಾಜನ್! ಆಗ ಕುರು-ಪಾಂಡವರ ಕಾರಣದಿಂದ ಪ್ರಯಾಣಿಸುತ್ತಿದ್ದ ಮಹೀಕ್ಷಿತರಿಂದ ಇಡೀ ಭೂಮಿಯು ತುಂಬಿಹೋಯಿತು.

05005017a ಬಲಾನಿ ತೇಷಾಂ ವೀರಾಣಾಮಾಗಚ್ಚಂತಿ ತತಸ್ತತಃ|

05005017c ಚಾಲಯಂತೀವ ಗಾಂ ದೇವೀಂ ಸಪರ್ವತವನಾಮಿಮಾಂ||

ಎಲ್ಲೆಡೆಯಿಂದ ಬರುತ್ತಿರುವ ಆ ವೀರರ ನಡುಗೆಯಿಂದ ಪರ್ವತ ವನಗಳಿಂದ ಕೂಡಿದ ಇಡೀ ಭೂಮಿದೇವಿಯು ನಡುಗುತ್ತಿರುವಂತೆ ತೋರಿತು.

05005018a ತತಃ ಪ್ರಜ್ಞಾವಯೋವೃದ್ಧಂ ಪಾಂಚಾಲ್ಯಃ ಸ್ವಪುರೋಹಿತಂ|

05005018c ಕುರುಭ್ಯಃ ಪ್ರೇಷಯಾಮಾಸ ಯುಧಿಷ್ಠಿರಮತೇ ತದಾ||

ಅನಂತರ ಯುಧಿಷ್ಠಿರನ ಮತದಂತೆ ಪಾಂಚಾಲನು ಪ್ರಜ್ಞಾವಂತನೂ ವಯೋವೃದ್ಧನೂ ಆದ ತನ್ನ ಪುರೋಹಿತನನ್ನು ಕುರುಗಳಲ್ಲಿಗೆ ಕಳುಹಿಸಿದನು.

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸೇನೋದ್ಯೋಗ ಪರ್ವಣಿ ಪುರೋಹಿತಯಾನೇ ಪಂಚಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸೇನೋದ್ಯೋಗ ಪರ್ವದಲ್ಲಿ ಪುರೋಹಿತಯಾನ ಎನ್ನುವ ಐದನೆಯ ಅಧ್ಯಾಯವು|

Related image

Comments are closed.