ಉದ್ಯೋಗ ಪರ್ವ: ಅಂಬೋಽಪಾಖ್ಯಾನ ಪರ್ವ
೧೮೩
ಪರಶುರಾಮನ ಬಾಣಗಳಿಂದ ಭೀಷ್ಮನು ಮೂರ್ಛಿತನಾದುದು (೧-೧೦). ವಸುಗಳು ಭೀಷ್ಮನನ್ನು ಉಪಚರಿಸಿದುದು, ಗಂಗೆಯು ಅವನ ರಥವನ್ನು ನಡೆಸಿದುದು (೧೧-೧೭). ರಾಮನು ಮೂರ್ಛಿತನಾದುದು, ನಾಲ್ಕನೆಯ ದಿನದ ಯುದ್ಧವು ಮುಗಿದು, ಹಾಗೆ ಒಟ್ಟು ೨೩ ದಿನಗಳ ಯುದ್ಧವು ನಡೆದುದು (೧೮-೨೭).
05183001 ಭೀಷ್ಮ ಉವಾಚ|
05183001a ತತಃ ಪ್ರಭಾತೇ ರಾಜೇಂದ್ರ ಸೂರ್ಯೇ ವಿಮಲ ಉದ್ಗತೇ|
05183001c ಭಾರ್ಗವಸ್ಯ ಮಯಾ ಸಾರ್ಧಂ ಪುನರ್ಯುದ್ಧಮವರ್ತತ||
ಭೀಷ್ಮನು ಹೇಳಿದನು: “ರಾಜೇಂದ್ರ! ಪ್ರಭಾತದಲ್ಲಿ ವಿಮಲ ಸೂರ್ಯನು ಉದಯವಾಗಲು ಪುನಃ ನನ್ನೊಡನೆ ಭಾರ್ಗವನ ಯುದ್ಧವು ನಡೆಯಿತು.
05183002a ತತೋ ಭ್ರಾಂತೇ ರಥೇ ತಿಷ್ಠನ್ರಾಮಃ ಪ್ರಹರತಾಂ ವರಃ|
05183002c ವವರ್ಷ ಶರವರ್ಷಾಣಿ ಮಯಿ ಶಕ್ರ ಇವಾಚಲೇ||
ಆಗ ಬೆಳಗುತ್ತಾ ನಿಂತಿದ್ದ ಪ್ರಹರಿಗಳಲ್ಲಿ ಶ್ರೇಷ್ಠ ರಾಮನು ನನ್ನ ಮೇಲೆ ಶಕ್ರನು ಪರ್ವತಗಳ ಮೇಲೆ ಹೇಗೋ ಹಾಗೆ ಶರವರ್ಷಗಳನ್ನು ಸುರಿಸಿದನು.
05183003a ತೇನ ಸೂತೋ ಮಮ ಸುಹೃಚ್ಚರವರ್ಷೇಣ ತಾಡಿತಃ|
05183003c ನಿಪಪಾತ ರಥೋಪಸ್ಥೇ ಮನೋ ಮಮ ವಿಷಾದಯನ್||
ಆ ಶರವರ್ಷದಿಂದ ಹೊಡೆಯಲ್ಪಟ್ಟ ನನ್ನ ಸೂತನು ರಥದಲ್ಲಿಯೇ ಕುಸಿದು ಬಿದ್ದು ನನ್ನ ಮನಸ್ಸನ್ನು ದುಃಖಗೊಳಿಸಿದನು.
05183004a ತತಃ ಸೂತಃ ಸ ಮೇಽತ್ಯರ್ಥಂ ಕಶ್ಮಲಂ ಪ್ರಾವಿಶನ್ಮಹತ್|
05183004c ಪೃಥಿವ್ಯಾಂ ಚ ಶರಾಘಾತಾನ್ನಿಪಪಾತ ಮುಮೋಹ ಚ||
ಆಗ ಅವನಲ್ಲಿ ಮಹಾ ಕಶ್ಮಲವು ಪ್ರವೇಶಿಸಿ ನನ್ನ ಸೂತನು ಶರಘಾತದಿಂದ ಮೂರ್ಛೆಗೊಂಡು ಭೂಮಿಯ ಮೇಲೆ ಬಿದ್ದನು.
05183005a ತತಃ ಸೂತೋಽಜಹಾತ್ಪ್ರಾಣಾನ್ರಾಮಬಾಣಪ್ರಪೀಡಿತಃ|
05183005c ಮುಹೂರ್ತಾದಿವ ರಾಜೇಂದ್ರ ಮಾಂ ಚ ಭೀರಾವಿಶತ್ತದಾ||
ರಾಮಬಾಣಪೀಡಿತನಾಗಿ ಅವನು ಅಸುವನ್ನು ನೀಗಿದನು. ರಾಜೇಂದ್ರ! ಒಂದು ಕ್ಷಣ ನನ್ನಲ್ಲಿ ಭೀತಿಯು ಆವೇಶಗೊಂಡಿತು.
05183006a ತತಃ ಸೂತೇ ಹತೇ ರಾಜನ್ ಕ್ಷಿಪತಸ್ತಸ್ಯ ಮೇ ಶರಾನ್|
05183006c ಪ್ರಮತ್ತಮನಸೋ ರಾಮಃ ಪ್ರಾಹಿಣೋನ್ಮೃತ್ಯುಸಮ್ಮಿತಾನ್||
ರಾಜನ್! ಸೂತನು ಹತನಾಗಲು ನಾನು ಪ್ರಮತ್ತಮನಸ್ಕನಾಗಿದ್ದಾಗ ರಾಮನು ನನ್ನ ಮೇಲೆ ಮೃತ್ಯುಸಮ್ಮಿತ ಶರಗಳನ್ನು ಎಸೆದನು.
05183007a ತತಃ ಸೂತವ್ಯಸನಿನಂ ವಿಪ್ಲುತಂ ಮಾಂ ಸ ಭಾರ್ಗವಃ|
05183007c ಶರೇಣಾಭ್ಯಹನದ್ಗಾಢಂ ವಿಕೃಷ್ಯ ಬಲವದ್ಧನುಃ||
ಸೂತನ ವ್ಯಸನದಿಂದ ತತ್ತರಿಸುತ್ತಿದ್ದ ನನ್ನ ಮೇಲೆ ಆ ಭಾರ್ಗವನು ಬಲವಾದ ಧನುಸ್ಸನ್ನು ಜೋರಾಗಿ ಎಳೆದು ಬಾಣಗಳಿಂದ ಹೊಡೆದನು.
05183008a ಸ ಮೇ ಜತ್ರ್ವಂತರೇ ರಾಜನ್ನಿಪತ್ಯ ರುಧಿರಾಶನಃ|
05183008c ಮಯೈವ ಸಹ ರಾಜೇಂದ್ರ ಜಗಾಮ ವಸುಧಾತಲಂ||
ರಾಜನ್! ರಾಜೇಂದ್ರ! ರಕ್ತಕುಡಿಯುವ ಆ ಶರವು ನನ್ನನ್ನು ಚುಚ್ಚಿ ಹೊರಬಂದು ನನ್ನೊಂದಿಗೇ ನೆಲದ ಮೇಲೆ ಬಿದ್ದಿತು.
05183009a ಮತ್ವಾ ತು ನಿಹತಂ ರಾಮಸ್ತತೋ ಮಾಂ ಭರತರ್ಷಭ|
05183009c ಮೇಘವದ್ವ್ಯನದಚ್ಚೋಚ್ಚೈರ್ಜಹೃಷೇ ಚ ಪುನಃ ಪುನಃ||
ಭರತರ್ಷಭ! ನಾನು ನಿಹತನಾದೆನೆಂದು ತಿಳಿದು ರಾಮನು ಮೇಘದಂತೆ ಜೋರಾಗಿ ಪುನಃ ಪುನಃ ಹರ್ಷೋದ್ಗಾರ ಮಾಡಿದನು.
05183010a ತಥಾ ತು ಪತಿತೇ ರಾಜನ್ಮಯಿ ರಾಮೋ ಮುದಾ ಯುತಃ|
05183010c ಉದಕ್ರೋಶನ್ಮಹಾನಾದಂ ಸಹ ತೈರನುಯಾಯಿಭಿಃ||
ರಾಜನ್! ನಾನು ಹಾಗೆ ಬೀಳಲು ರಾಮನು ಸಂತೋಷಗೊಂಡು ಅವನ ಅನುಯಾಯಿಗಳೊಂದಿಗೆ ಮಹಾನಾದವನ್ನು ಕೂಗಿದನು.
05183011a ಮಮ ತತ್ರಾಭವನ್ಯೇ ತು ಕೌರವಾಃ ಪಾರ್ಶ್ವತಃ ಸ್ಥಿತಾಃ|
05183011c ಆಗತಾ ಯೇ ಚ ಯುದ್ಧಂ ತಜ್ಜನಾಸ್ತತ್ರ ದಿದೃಕ್ಷವಃ||
05183011e ಆರ್ತಿಂ ಪರಮಿಕಾಂ ಜಗ್ಮುಸ್ತೇ ತದಾ ಮಯಿ ಪಾತಿತೇ||
ಆದರೆ ಯುದ್ಧವನ್ನು ನೋಡಲು ಬಂದಿದ್ದ ಕೌರವರು ನನ್ನ ಪಕ್ಕದಲ್ಲಿ ನಿಂತು ನಾನು ಬಿದ್ದುದನ್ನು ನೋಡಿ ಆರ್ತರಾದರು.
05183012a ತತೋಽಪಶ್ಯಂ ಪಾತಿತೋ ರಾಜಸಿಂಹ
ದ್ವಿಜಾನಷ್ಟೌ ಸೂರ್ಯಹುತಾಶನಾಭಾನ್|
05183012c ತೇ ಮಾಂ ಸಮಂತಾತ್ಪರಿವಾರ್ಯ ತಸ್ಥುಃ
ಸ್ವಬಾಹುಭಿಃ ಪರಿಗೃಹ್ಯಾಜಿಮಧ್ಯೇ||
ರಾಜಸಿಂಹ! ಅಲ್ಲಿ ಬಿದ್ದಾಗ ಸೂರ್ಯ-ಹುತಾಶನರಂತೆ ಹೊಳೆಯುತ್ತಿದ್ದ ಎಂಟು ದ್ವಿಜರನ್ನು ನೋಡಿದೆನು. ಅವರು ನನ್ನನ್ನು ರಣದ ಮಧ್ಯದಲ್ಲಿ ತಮ್ಮ ಬಾಹುಗಳಿಂದ ಮೇಲೆತ್ತಿ ಹಿಡಿದು ನಿಲ್ಲಿಸಿದರು.
05183013a ರಕ್ಷ್ಯಮಾಣಶ್ಚ ತೈರ್ವಿಪ್ರೈರ್ನಾಹಂ ಭೂಮಿಮುಪಾಸ್ಪೃಶಂ|
05183013c ಅಂತರಿಕ್ಷೇ ಸ್ಥಿತೋ ಹ್ಯಸ್ಮಿ ತೈರ್ವಿಪ್ರೈರ್ಬಾಂಧವೈರಿವ|
05183013e ಸ್ವಪನ್ನಿವಾಂತರಿಕ್ಷೇ ಚ ಜಲಬಿಂದುಭಿರುಕ್ಷಿತಃ||
ಆ ವಿಪ್ರರಿಂದ ಹಿಡಿಯಲ್ಪಟ್ಟ ನಾನು ನೆಲವನ್ನು ಮುಟ್ಟಲಿಲ್ಲ. ಆ ವಿಪ್ರ ಬಾಂಧವರ ಬೆಂಬಲದಿಂದ ಅಂತರಿಕ್ಷದಲ್ಲಿಯೇ ನಿಂತಿದ್ದೆನು. ಅವರು ಅಂತರಿಕ್ಷದಿಂದ ನೀರಿನ ಹನಿಗಳನ್ನು ಚುಮುಕಿಸಿದರು.
05183014a ತತಸ್ತೇ ಬ್ರಾಹ್ಮಣಾ ರಾಜನ್ನಬ್ರುವನ್ಪರಿಗೃಹ್ಯ ಮಾಂ|
05183014c ಮಾ ಭೈರಿತಿ ಸಮಂ ಸರ್ವೇ ಸ್ವಸ್ತಿ ತೇಽಸ್ತ್ವಿತಿ ಚಾಸಕೃತ್||
ರಾಜನ್! ಆಗ ಆ ಬ್ರಾಹ್ಮಣರು ನನ್ನನ್ನು ಹಿಡಿದು “ಹೆದರಬೇಡ! ಎಲ್ಲವೂ ಸರಿಯಾಗುತ್ತದೆ!” ಎಂದು ಉಪಚರಿಸಿದರು.
05183015a ತತಸ್ತೇಷಾಮಹಂ ವಾಗ್ಭಿಸ್ತರ್ಪಿತಃ ಸಹಸೋತ್ಥಿತಃ|
05183015c ಮಾತರಂ ಸರಿತಾಂ ಶ್ರೇಷ್ಠಾಮಪಶ್ಯಂ ರಥಮಾಸ್ಥಿತಾಂ||
ಆಗ ಅವರ ಮಾತುಗಳಿಂದ ತೃಪ್ತನಾಗಿ ನಾನು ಒಮ್ಮೆಲೇ ಮೇಲೆದ್ದೆನು. ರಥದಲ್ಲಿದ್ದ ಮಾತೆ ಶ್ರೇಷ್ಠ ಸರಿತೆಯನ್ನು ನೋಡಿದೆನು.
05183016a ಹಯಾಶ್ಚ ಮೇ ಸಂಗೃಹೀತಾಸ್ತಯಾ ವೈ
ಮಹಾನದ್ಯಾ ಸಮ್ಯತಿ ಕೌರವೇಂದ್ರ|
05183016c ಪಾದೌ ಜನನ್ಯಾಃ ಪ್ರತಿಪೂಜ್ಯ ಚಾಹಂ
ತಥಾರ್ಷ್ಟಿಷೇಣಂ ರಥಮಭ್ಯರೋಹಂ||
ಕೌರವೇಂದ್ರ! ಯುದ್ಧದಲ್ಲಿ ಆ ಮಹಾನದಿಯೇ ನನ್ನ ಕುದುರೆಗಳ ಕಡಿವಾಣಗಳನ್ನು ಹಿಡಿದು ನಡೆಸುತ್ತಿದ್ದಳು. ನಾನಾದರೋ ಅರ್ಷ್ಟಿಷೇಣನನ್ನು ಹೇಗೋ ಹಾಗೆ ಜನನಿಯ ಪಾದಗಳನ್ನು ಪೂಜಿಸಿ ರಥವನ್ನೇರಿದೆನು.
05183017a ರರಕ್ಷ ಸಾ ಮಮ ರಥಂ ಹಯಾಂಶ್ಚೋಪಸ್ಕರಾಣಿ ಚ|
05183017c ತಾಮಹಂ ಪ್ರಾಂಜಲಿರ್ಭೂತ್ವಾ ಪುನರೇವ ವ್ಯಸರ್ಜಯಂ||
ಅವಳು ನನ್ನ ರಥವನ್ನೂ ಕುದುರೆಗಳನ್ನೂ ಉಪಕರಣಗಳನ್ನೂ ರಕ್ಷಿಸಿದ್ದಳು. ಕೈಮುಗಿದು ನಮಸ್ಕರಿಸಿ ಪುನಃ ಅವಳನ್ನು ಕಳುಹಿಸಿಕೊಟ್ಟೆನು.
05183018a ತತೋಽಹಂ ಸ್ವಯಮುದ್ಯಮ್ಯ ಹಯಾಂಸ್ತಾನ್ವಾತರಂಹಸಃ|
05183018c ಅಯುಧ್ಯಂ ಜಾಮದಗ್ನ್ಯೇನ ನಿವೃತ್ತೇಽಹನಿ ಭಾರತ||
ಭಾರತ! ಆಗ ನಾನು ಆ ಗಾಳಿಯ ವೇಗವುಳ್ಳ ಕುದುರೆಗಳನ್ನು ಸ್ವಯಂ ನಿಯಂತ್ರಿಸುತ್ತಾ ದಿನವು ಕಳೆಯುವವರೆಗೆ ಜಾಮದಗ್ನಿಯೊಂದಿಗೆ ಯುದ್ಧ ಮಾಡಿದೆನು.
05183019a ತತೋಽಹಂ ಭರತಶ್ರೇಷ್ಠ ವೇಗವಂತಂ ಮಹಾಬಲಂ|
05183019c ಅಮುಂಚಂ ಸಮರೇ ಬಾಣಂ ರಾಮಾಯ ಹೃದಯಚ್ಚಿದಂ||
ಭರತಶ್ರೇಷ್ಠ! ಆಗ ನಾನು ಸಮರದಲ್ಲಿ ವೇಗವಂತ ಮಹಾಬಲಶಾಲಿ ಬಾಣವನ್ನು ಬಿಟ್ಟು ರಾಮನ ಹೃದಯವನ್ನು ಚುಚ್ಚಿದೆನು.
05183020a ತತೋ ಜಗಾಮ ವಸುಧಾಂ ಬಾಣವೇಗಪ್ರಪೀಡಿತಃ|
05183020c ಜಾನುಭ್ಯಾಂ ಧನುರುತ್ಸೃಜ್ಯ ರಾಮೋ ಮೋಹವಶಂ ಗತಃ||
ಆಗ ಬಾಣದ ವೇಗದಿಂದ ಪೀಡಿತನಾದ ರಾಮನು ಧನುವನ್ನು ಬಿಟ್ಟು ತೊಡೆಗಳನ್ನೂರಿ ನೆಲದ ಮೇಲೆ ಬಿದ್ದು ಮೋಹವಶನಾದನು.
05183021a ತತಸ್ತಸ್ಮಿನ್ನಿಪತಿತೇ ರಾಮೇ ಭೂರಿಸಹಸ್ರದೇ|
05183021c ಆವವ್ರುರ್ಜಲದಾ ವ್ಯೋಮ ಕ್ಷರಂತೋ ರುಧಿರಂ ಬಹು||
ಸಹಸ್ರಭೂರಿಗಳನ್ನಿತ್ತ ರಾಮನು ಹಾಗೆ ಬೀಳಲು ಮೋಡಗಳು ಆಕಾಶವನ್ನು ಕವಿದು ರಕ್ತದ ಮಳೆಯನ್ನು ಸುರಿಸಿದವು.
05183022a ಉಲ್ಕಾಶ್ಚ ಶತಶಃ ಪೇತುಃ ಸನಿರ್ಘಾತಾಃ ಸಕಂಪನಾಃ|
05183022c ಅರ್ಕಂ ಚ ಸಹಸಾ ದೀಪ್ತಂ ಸ್ವರ್ಭಾನುರಭಿಸಂವೃಣೋತ್||
ಭಿರುಗಾಳಿ ಮತ್ತು ಭೂಕಂಪಗಳೊಡನೆ ನೂರಾರು ಉಲ್ಕೆಗಳು ಬಿದ್ದವು. ಒಮ್ಮಿಂದೊಮ್ಮೆಲೇ ಸ್ವರ್ಭಾನುವು ಉರಿಯುತ್ತಿರುವ ಸೂರ್ಯನನ್ನು ಮುಚ್ಚಿದನು.
05183023a ವವುಶ್ಚ ವಾತಾಃ ಪರುಷಾಶ್ಚಲಿತಾ ಚ ವಸುಂಧರಾ|
05183023c ಗೃಧ್ರಾ ಬಡಾಶ್ಚ ಕಂಕಾಶ್ಚ ಪರಿಪೇತುರ್ಮುದಾ ಯುತಾಃ||
ಚಂಡಮಾರುತವು ಬೀಸಿತು. ಭೂಮಿಯು ನಡುಗಿತು. ಹದ್ದು, ಕಾಗೆಗಳು ಮತ್ತು ಬಕಪಕ್ಷಿಗಳು ಗುಂಪಾಗಿ ಸಂತೋಷದಿಂದ ಹಾರಾಡತೊಡಗಿದವು.
05183024a ದೀಪ್ತಾಯಾಂ ದಿಶಿ ಗೋಮಾಯುರ್ದಾರುಣಂ ಮುಹುರುನ್ನದತ್|
05183024c ಅನಾಹತಾ ದುಂದುಭಯೋ ವಿನೇದುರ್ಭೃಶನಿಸ್ವನಾಃ||
ಕೆಂಪಾಗಿದ್ದ ದಿಗಂತದಲ್ಲಿ ನರಿಗಳು ದಾರುಣವಾಗಿ ಮತ್ತೆ ಮತ್ತೆ ಕೂಗಿದವು. ಬಾರಿಸದೆಯೇ ದುಂದುಭಿಗಳು ಅತಿ ಜೋರಾಗಿ ಶಬ್ಧಮಾಡಿದವು.
05183025a ಏತದೌತ್ಪಾತಿಕಂ ಘೋರಮಾಸೀದ್ಭರತಸತ್ತಮ|
05183025c ವಿಸಂಜ್ಞಾಕಲ್ಪೇ ಧರಣೀಂ ಗತೇ ರಾಮೇ ಮಹಾತ್ಮನಿ||
ಭರತಸತ್ತಮ! ಮಹಾತ್ಮ ರಾಮನು ಮೂರ್ಛಿತನಾಗಿ ನೆಲದ ಮೇಲೆ ಬೀಳಲು ಈ ಘೋರ ಉತ್ಪಾತಗಳು ನಡೆದವು.
05183026a ತತೋ ರವಿರ್ಮಂದಮರೀಚಿಮಂಡಲೋ
ಜಗಾಮಾಸ್ತಂ ಪಾಂಸುಪುಂಜಾವಗಾಢಃ|
05183026c ನಿಶಾ ವ್ಯಗಾಹತ್ಸುಖಶೀತಮಾರುತಾ
ತತೋ ಯುದ್ಧಂ ಪ್ರತ್ಯವಹಾರಯಾವಃ||
ಕೋಮಲ ಕಿರಣಗಳು ಮುಸುಕಿದ ರವಿಯು ಮರೀಚಿಮಂಡಲದಲ್ಲಿ ಅಸ್ತನಾದನು. ಸುಖ ಶೀತ ಮಾರುತಗಳೊಂದಿಗೆ ರಾತ್ರಿಯು ಪಸರಿಸಿತು. ಆಗ ನಾವು ಯುದ್ಧದಿಂದ ಹಿಂದೆ ಸರಿದೆವು.
05183027a ಏವಂ ರಾಜನ್ನವಹಾರೋ ಬಭೂವ
ತತಃ ಪುನರ್ವಿಮಲೇಽಭೂತ್ಸುಘೋರಂ|
05183027c ಕಾಲ್ಯಂ ಕಾಲ್ಯಂ ವಿಂಶತಿಂ ವೈ ದಿನಾನಿ
ತಥೈವ ಚಾನ್ಯಾನಿ ದಿನಾನಿ ತ್ರೀಣಿ||
ರಾಜನ್! ಹೀಗೆ ಯುದ್ಧಕ್ಕೆ ವಿರಾಮವಾಯಿತು. ಬೆಳಗಾಗಲು ಪುನಃ ಘೋರಯುದ್ಧವು ನಡೆಯಿತು. ಹೀಗೆ ಕಾಲ ಕಾಲದಲ್ಲಿ ಇಪ್ಪತ್ತು ಮತ್ತು ಅನ್ಯ ಮೂರು ದಿನಗಳು ಯುದ್ಧವು ನಡೆಯಿತು.”
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನಪರ್ವಣಿ ರಾಮಭೀಷ್ಮಯುದ್ಧೇ ತ್ರ್ಯಶೀತ್ಯಧಿಕಶತತಮೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ರಾಮಭೀಷ್ಮಯುದ್ಧದಲ್ಲಿ ನೂರಾಎಂಭತ್ಮೂರನೆಯ ಅಧ್ಯಾಯವು.