Sabha Parva: Chapter 12

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸಭಾ ಪರ್ವ: ಮಂತ್ರ ಪರ್ವ

೧೨

ರಾಜಸೂಯದ ಕುರಿತು ಯುಧಿಷ್ಠಿರನ ಸಮಾಲೋಚನೆ

ರಾಜಸೂಯದ ಕುರಿತು ಯುಧಿಷ್ಠಿರನು ಬಹಳಷ್ಟು ಚಿಂತಿಸಿದುದು ಮತ್ತು ಎಲ್ಲರೊಡನೆ ಸಮಾಲೋಚನೆ ಮಾಡಿದುದು (೧-೨೩). ಶ್ರೀಕೃಷ್ಣನನ್ನು ನೆನೆಯಿಸಿಕೊಂಡು ಅವನನ್ನು ಕರೆತರಿಸಿಕೊಂಡಿದ್ದುದು (೨೪-೨೯). ಶ್ರೀಕೃಷ್ಣನ ಆಗಮನ ಮತ್ತು ಅವನೊಂದಿಗೆ ಸಮಾಲೋಚನೆ (೩೦-೪೦).

02012001 ವೈಶಂಪಾಯನ ಉವಾಚ|

02012001a ಋಷೇಸ್ತದ್ವಚನಂ ಶ್ರುತ್ವಾ ನಿಶಶ್ವಾಸ ಯುಧಿಷ್ಠಿರಃ|

02012001c ಚಿಂತಯನ್ ರಾಜಸೂಯಾಪ್ತಿಂ ನ ಲೇಭೇ ಶರ್ಮ ಭಾರತ||

ವೈಶಂಪಾಯನನು ಹೇಳಿದನು: “ಭಾರತ! ಋಷಿಯ ಈ ಮಾತನ್ನು ಕೇಳಿ ಯುಧಿಷ್ಠಿರನು ನಿಟ್ಟುಸಿರೆಳೆದು, ರಾಜಸೂಯವನ್ನು ಹೇಗೆ ನೆರವೇರಿಸಬಹುದು ಎಂದು ಚಿಂತಿಸಿದನು ಮತ್ತು ಯಾವುದೇ ರೀತಿಯ ಸಾಂತ್ವನವನ್ನು ಪಡೆಯಲಿಲ್ಲ.

02012002a ರಾಜರ್ಷೀಣಾಂ ಹಿ ತಂ ಶ್ರುತ್ವಾ ಮಹಿಮಾನಂ ಮಹಾತ್ಮನಾಂ|

02012002c ಯಜ್ವನಾಂ ಕರ್ಮಭಿಃ ಪುಣ್ಯೈರ್ಲೋಕಪ್ರಾಪ್ತಿಂ ಸಮೀಕ್ಷ್ಯ ಚ||

02012003a ಹರಿಶ್ಚಂದ್ರಂ ಚ ರಾಜರ್ಷಿಂ ರೋಚಮಾನಂ ವಿಶೇಷತಃ|

02012003c ಯಜ್ವಾನಂ ಯಜ್ಞಮಾಹರ್ತುಂ ರಾಜಸೂಯಮಿಯೇಷ ಸಃ||

ಮಹಾತ್ಮ ರಾಜರ್ಷಿಗಳ ಮಹಿಮೆಗಳನ್ನು ಕೇಳಿ ಮತ್ತು ಈ ಯಾಗಕರ್ಮದಿಂದ ಅವರಿಗೆ ಪುಣ್ಯಲೋಕ ಪ್ರಾಪ್ತಿಯಾದುದನ್ನು ನೋಡಿ, ಅದರಲ್ಲೂ ವಿಶೇಷವಾಗಿ ರಾಜರ್ಷಿ ಹರಿಶ್ಚಂದ್ರನು ಯಜಿಸಿದ ರಾಜಸೂಯ ಯಜ್ಞವನ್ನು ಕೈಗೊಳ್ಳಲು ಬಯಸಿದನು.

02012004a ಯುಧಿಷ್ಠಿರಸ್ತತಃ ಸರ್ವಾನರ್ಚಯಿತ್ವಾ ಸಭಾಸದಃ|

02012004c ಪ್ರತ್ಯರ್ಚಿತಶ್ಚ ತೈಃ ಸರ್ವೈರ್ಯಜ್ಞಾಯೈವ ಮನೋ ದಧೇ||

ನಂತರ ಯುಧಿಷ್ಠಿರನು ಸಭಾಸದರೆಲ್ಲರನ್ನೂ ಅರ್ಚಿಸಿ, ತಿರುಗಿ ಅವರೆಲ್ಲರಿಂದ ಗೌರವವಿಸಲ್ಪಟ್ಟು, ಯಜ್ಞದ ಕುರಿತು ಯೋಚಿಸತೊಡಗಿದನು.

02012005a ಸ ರಾಜಸೂಯಂ ರಾಜೇಂದ್ರ ಕುರೂಣಾಂ ಋಷಭಃ ಕ್ರತುಂ|

02012005c ಆಹರ್ತುಂ ಪ್ರವಣಂ ಚಕ್ರೇ ಮನಃ ಸಂಚಿಂತ್ಯ ಸೋಽಸಕೃತ್||

ಬಹಳಷ್ಟು ಯೋಚನೆಮಾಡಿದ ನಂತರ ಆ ಕುರುವೃಷಭ ರಾಜೇಂದ್ರನು ರಾಜಸೂಯ ಕ್ರತುವನ್ನು ಕೈಗೊಳ್ಳಲು ಮನಸ್ಸು ಮಾಡಿದನು,

02012006a ಭೂಯಶ್ಚಾದ್ಭುತವೀರ್ಯೌಜಾ ಧರ್ಮಮೇವಾನುಪಾಲಯನ್|

02012006c ಕಿಂ ಹಿತಂ ಸರ್ವಲೋಕಾನಾಂ ಭವೇದಿತಿ ಮನೋ ದಧೇ||

ಪುನಃ ಧರ್ಮವನ್ನೇ ಅನುಪಾಲಿಸುತ್ತಿದ್ದ ಆ ಅದ್ಭುತವೀರ್ಯಜನು ಇದು ಸರ್ವಲೋಕಗಳಿಗೂ ಹಿತವಾದದ್ದುದೇ ಎಂದು ಯೋಚಿಸಿದನು.

02012007a ಅನುಗೃಹ್ಣನ್ಪ್ರಜಾಃ ಸರ್ವಾಃ ಸರ್ವಧರ್ಮವಿದಾಂ ವರಃ|

02012007c ಅವಿಶೇಷೇಣ ಸರ್ವೇಷಾಂ ಹಿತಂ ಚಕ್ರೇ ಯುಧಿಷ್ಠಿರಃ||

ಸರ್ವ ಧರ್ಮವಿದರಲ್ಲಿ ವರಿಷ್ಠ ಯುಧಿಷ್ಠಿರನು ಸರ್ವ ಪ್ರಜೆಗಳನ್ನೂ ಗಮನದಲ್ಲಿಟ್ಟುಕೊಂಡು ಯಾರನ್ನೂ ಬಿಡದೇ ಎಲ್ಲರಿಗೂ ಹಿತವಾದುದನ್ನು ಕೈಗೊಂಡನು.

02012008a ಏವಂ ಗತೇ ತತಸ್ತಸ್ಮಿನ್ಪಿತರೀವಾಶ್ವಸಂ ಜನಾಃ|

02012008c ನ ತಸ್ಯ ವಿದ್ಯತೇ ದ್ವೇಷ್ಟಾ ತತೋಽಸ್ಯಾಜಾತಶತ್ರುತಾ||

ಹೀಗೆ ಮುಂದುವರೆದು ಅವನು ತನ್ನ ಜನರಿಗೆ ತಂದೆಯಂತೆ ಆಶ್ವಾಸನೆಗಳನ್ನಿತ್ತನು ಮತ್ತು ಅವನನ್ನು ದ್ವೇಷಿಸುವವರು ಯಾರೂ ಇಲ್ಲದೇ ಹೋದುದರಿಂದ ಅವನು ಅಜಾತಶತ್ರು ಎಂದು ಕರೆಯಿಸಿಕೊಂಡನು.

02012009a ಸ ಮಂತ್ರಿಣಃ ಸಮಾನಾಯ್ಯ ಭ್ರಾತೄಂಶ್ಚ ವದತಾಂ ವರಃ|

02012009c ರಾಜಸೂಯಂ ಪ್ರತಿ ತದಾ ಪುನಃ ಪುನರಪೃಚ್ಛತ||

ಮಾತನಾಡುವವರಲ್ಲಿ ಶ್ರೇಷ್ಠ ಅವನು ತನ್ನ ಮಂತ್ರಿಗಳು ಮತ್ತು ಭ್ರಾತೃಗಳನ್ನು ಕರೆಯಿಸಿ ರಾಜಸೂಯದ ಕುರಿತು ಪುನಃ ಪುನಃ ಕೇಳುತ್ತಿದ್ದನು.

02012010a ತೇ ಪೃಚ್ಛ್ಯಮಾನಾಃ ಸಹಿತಾ ವಚೋಽರ್ಥ್ಯಂ ಮಂತ್ರಿಣಸ್ತದಾ|

02012010c ಯುಧಿಷ್ಠಿರಂ ಮಹಾಪ್ರಾಜ್ಞಂ ಯಿಯಕ್ಷುಮಿದಮಬ್ರುವನ್||

ಈ ರೀತಿಯ ಪ್ರಶ್ನೆ ಬರಲು ಅಲ್ಲಿ ಸೇರಿದ್ದ ಮಂತ್ರಿಗಳು ಯಜ್ಞವನ್ನು ಕೈಗೊಳ್ಳಲು ಉತ್ಸುಕನಾಗಿದ್ದ ಮಹಾಪ್ರಾಜ್ಞ ಯುಧಿಷ್ಠಿರನಿಗೆ ಹೇಳಿದರು:

02012011a ಯೇನಾಭಿಷಿಕ್ತೋ ನೃಪತಿರ್ವಾರುಣಂ ಗುಣಮೃಚ್ಛತಿ|

02012011c ತೇನ ರಾಜಾಪಿ ಸನ್ ಕೃತ್ಸ್ನಂ ಸಮ್ರಾಡ್ಗುಣಮಭೀಪ್ಸತಿ||

“ಈ ರೀತಿ ಅಭಿಷಿಕ್ತನಾಗುವುದರಿಂದ ನೃಪತಿಯು ವರುಣನ ಸ್ಥಾನವನ್ನು ಪಡೆಯುತ್ತಾನೆ. ಅವನು ಆಗ ರಾಜನಾಗಿದ್ದರೂ ಸಂಪೂರ್ಣ ಸಮ್ರಾಟನ ಸ್ಥಾನವನ್ನು ಪಡೆಯುತ್ತಾನೆ.

02012012a ತಸ್ಯ ಸಮ್ರಾಡ್ಗುಣಾರ್ಹಸ್ಯ ಭವತಃ ಕುರುನಂದನ|

02012012c ರಾಜಸೂಯಸ್ಯ ಸಮಯಂ ಮನ್ಯಂತೇ ಸುಹೃದಸ್ತವ||

ಕುರುನಂದನ! ನೀನು ಅಂಥಹ ಸಮ್ರಾಟ ಸ್ಥಾನಕ್ಕೆ ಅರ್ಹನಾಗಿದ್ದುದರಿಂದ ರಾಜಸೂಯದ ಸಮಯ ಪ್ರಾಪ್ತವಾಗಿದೆ ಎಂದು ನಿನ್ನ ಸುಹೃದಯರು ಅಭಿಪ್ರಾಯ ಪಡುತ್ತಾರೆ.

02012013a ತಸ್ಯ ಯಜ್ಞಸ್ಯ ಸಮಯಃ ಸ್ವಾಧೀನಃ ಕ್ಷತ್ರಸಂಪದಾ|

02012013c ಸಾಮ್ನಾ ಷಡಗ್ನಯೋ ಯಸ್ಮಿಂಶ್ಚೀಯಂತೇ ಸಂಶಿತವ್ರತೈಃ||

ಸಂಶಿತವ್ರತರು ಸಾಮವೇದದ ಮೂಲಕ ಆರು ಅಗ್ನಿಗಳನ್ನು ಸ್ಥಾಪಿಸುವ ಈ ಯಜ್ಞಕ್ಕೆ ಕ್ಷತ್ರಿಯರ ಸಮ್ಮತವಿರಬೇಕಾಗಿದ್ದುದರಿಂದ ತನ್ನದೇ ಆದ ಸಮಯವೆಂದಿಲ್ಲ.

02012014a ದರ್ವೀಹೋಮಾನುಪಾದಾಯ ಸರ್ವಾನ್ಯಃ ಪ್ರಾಪ್ನುತೇ ಕ್ರತೂನ್|

02012014c ಅಭಿಷೇಕಂ ಚ ಯಜ್ಞಾಂತೇ ಸರ್ವಜಿತ್ತೇನ ಚೋಚ್ಯತೇ||

ಎಲ್ಲ ಕ್ರಮಗಳನ್ನೂ ಆಹುತಿಗಳನ್ನೂ ನಡೆಸಿ ಕ್ರತುವನ್ನು ಪೂರೈಸಿ ಅಭಿಷಿಕ್ತನಾದ ನಂತರವೇ ಅವನನ್ನು ಸರ್ವಜಿತುವೆಂದು ಕರೆಯಲಾಗುತ್ತದೆ.

02012015a ಸಮರ್ಥೋಽಸಿ ಮಹಾಬಾಹೋ ಸರ್ವೇ ತೇ ವಶಗಾ ವಯಂ|

02012015c ಅವಿಚಾರ್ಯ ಮಹಾರಾಜ ರಾಜಸೂಯೇ ಮನಃ ಕುರು||

ಮಹಾರಾಜ! ಮಹಾಬಾಹೋ! ನಾವೆಲ್ಲರೂ ನಿನ್ನ ವಶದಲ್ಲಿದ್ದೇವೆ. ನೀನು ಸಮರ್ಥನಾಗಿದ್ದೀಯೆ. ವಿಚಾರಮಾಡದೇ ರಾಜಸೂಯಕ್ಕೆ ಮನಸ್ಸು ಮಾಡು.”

02012016a ಇತ್ಯೇವಂ ಸುಹೃದಃ ಸರ್ವೇ ಪೃಥಕ್ಚ ಸಹ ಚಾಬ್ರುವನ್|

02012016c ಸ ಧರ್ಮ್ಯಂ ಪಾಂಡವಸ್ತೇಷಾಂ ವಚಃ ಶ್ರುತ್ವಾ ವಿಶಾಂ ಪತೇ|

02012016e ಧೃಷ್ಟಮಿಷ್ಟಂ ವರಿಷ್ಠಂ ಚ ಜಗ್ರಾಹ ಮನಸಾರಿಹಾ||

ಹೀಗೆ ಅವನ ಸರ್ವ ಸುಹೃದಯರೂ ಪುನಃ ಪುನಃ ಹೇಳಿದರು. ಅಂಥಹ ಧಾರ್ಮಿಕ, ಧೃಷ್ಟ, ಇಷ್ಟ, ಮತ್ತು ವರಿಷ್ಠ ಮಾತುಗಳನ್ನು ಅವರಿಂದ ಕೇಳಿದ ವಿಶಾಂಪತಿ ಪಾಂಡವನು ಅದನ್ನು ಸ್ವೀಕರಿಸಿದನು.

02012017a ಶ್ರುತ್ವಾ ಸುಹೃದ್ವಚಸ್ತಚ್ಚ ಜಾನಂಶ್ಚಾಪ್ಯಾತ್ಮನಃ ಕ್ಷಮಂ|

02012017c ಪುನಃ ಪುನರ್ಮನೋ ದಧ್ರೇ ರಾಜಸೂಯಾಯ ಭಾರತ||

ಭಾರತ! ಸುಹೃದಯರ ಮಾತುಗಳನ್ನು ಕೇಳಿ ಮತ್ತು ತಾನು ಸಮರ್ಥನೆಂದು ತಿಳಿದ ಅವನು ಪುನಃ ಪುನಃ ಮನಸ್ಸಿನಲ್ಲಿಯೇ ರಾಜಸೂಯದ ಕುರಿತು ಯೋಚಿಸಿದನು.

02012018a ಸ ಭ್ರಾತೃಭಿಃ ಪುನರ್ಧೀಮಾನೃತ್ವಿಗ್ಭಿಶ್ಚ ಮಹಾತ್ಮಭಿಃ|

02012018c ಧೌಮ್ಯದ್ವೈಪಾಯನಾದ್ಯೈಶ್ಚ ಮಂತ್ರಯಾಮಾಸ ಮಂತ್ರಿಭಿಃ||

ಆ ಮಹಾತ್ಮನು ಪುನಃ ಪುನಃ ಭ್ರಾತೃಗಳೊಡನೆ, ಧೌಮ್ಯ-ದ್ವೈಪಾಯನರಂಥಹ ಧೀಮಂತ ಋತ್ವಿಗರೊಡನೆ, ಮತ್ತು ಮಂತಿಗಳೊಡನೆ ಮಂತ್ರಾಲೋಚನೆ ಮಾಡಿದನು.

02012019 ಯುಧಿಷ್ಠಿರ ಉವಾಚ|

02012019a ಇಯಂ ಯಾ ರಾಜಸೂಯಸ್ಯ ಸಮ್ರಾಡರ್ಹಸ್ಯ ಸುಕ್ರತೋಃ|

02012019c ಶ್ರದ್ದಧಾನಸ್ಯ ವದತಃ ಸ್ಪೃಹಾ ಮೇ ಸಾ ಕಥಂ ಭವೇತ್||

ಯುಧಿಷ್ಠಿರನು ಹೇಳಿದನು: “ಶ್ರದ್ಧೆಯಿಂದ ಹೇಳುತ್ತಿರುವ ಈ ಸಮ್ರಾಟಸ್ಥಾನವನ್ನು ನೀಡುವ ಸುಕ್ರತು ರಾಜಸೂಯವು ಹೇಗೆ ನಡೆಯಬಹುದು?””

02012020 ವೈಶಂಪಾಯನ ಉವಾಚ|

02012020a ಏವಮುಕ್ತಾಸ್ತು ತೇ ತೇನ ರಾಜ್ಞಾ ರಾಜೀವಲೋಚನ|

02012020c ಇದಮೂಚುರ್ವಚಃ ಕಾಲೇ ಧರ್ಮಾತ್ಮಾನಂ ಯುಧಿಷ್ಠಿರಂ|

02012020e ಅರ್ಹಸ್ತ್ವಮಸಿ ಧರ್ಮಜ್ಞ ರಾಜಸೂಯಂ ಮಹಾಕ್ರತುಂ||

ವೈಶಂಪಾಯನನು ಹೇಳಿದನು: “ರಾಜೀವಲೋಚನ! ಆ ರಾಜನು ಹೀಗೆ ಹೇಳಲು ಧರ್ಮಾತ್ಮ ಯುಧಿಷ್ಠಿರನಿಗೆ ಪ್ರತಿಸಲವೂ “ಧರ್ಮಜ್ಞ! ರಾಜಸೂಯ ಮಹಾಕ್ರತುವಿಗೆ ನೀನು ಅರ್ಹ!” ಎಂದು ಹೇಳುತ್ತಿದ್ದರು.

02012021a ಅಥೈವಮುಕ್ತೇ ನೃಪತಾವೃತ್ವಿಗ್ಭಿರೃಷಿಭಿಸ್ತಥಾ|

02012021c ಮಂತ್ರಿಣೋ ಭ್ರಾತರಶ್ಚಾಸ್ಯ ತದ್ವಚಃ ಪ್ರತ್ಯಪೂಜಯನ್||

02012022a ಸ ತು ರಾಜಾ ಮಹಾಪ್ರಾಜ್ಞಃ ಪುನರೇವಾತ್ಮನಾತ್ಮವಾನ್|

02012022c ಭೂಯೋ ವಿಮಮೃಶೇ ಪಾರ್ಥೋ ಲೋಕಾನಾಂ ಹಿತಕಾಮ್ಯಯಾ||

ಋತ್ವಿಗ ಋಷಿಗಳು ಈ ರೀತಿ ನೃಪತಿಗೆ ಹೇಳಲು ಮಂತ್ರಿಗಳು ಮತ್ತು ಸಹೋದರರು ಆ ಮಾತನ್ನು ಸನ್ಮಾನಿಸಿ ಸ್ವಾಗತಿಸಿದರು. ಮಹಾಪ್ರಜ್ಞ ರಾಜ ಪಾರ್ಥನಾದರೂ ಲೋಕಗಳ ಹಿತವನ್ನೇ ಬಯಸಿ ಪುನಃ ತನ್ನ ಮನಸ್ಸಿನಲ್ಲಿಯೇ ವಿಮರ್ಶಿಸಿದನು.

02012023a ಸಾಮರ್ಥ್ಯಯೋಗಂ ಸಂಪ್ರೇಕ್ಷ್ಯ ದೇಶಕಾಲೌ ವ್ಯಯಾಗಮೌ|

02012023c ವಿಮೃಶ್ಯ ಸಮ್ಯಕ್ಚ ಧಿಯಾ ಕುರ್ವನ್ಪ್ರಾಜ್ಞೋ ನ ಸೀದತಿ||

ತನ್ನ ಸಾಮರ್ಥ್ಯವನ್ನು ಪರಿಗಣಿಸಿ, ದೇಶ ಕಾಲಗಳನ್ನು ತುಲನೆ ಮಾಡಿ, ಆದಾಯ ವ್ಯಯಗಳನ್ನು ಪರಿಶೀಲಿಸಿ ಕಾರ್ಯವನ್ನು ಕೈಗೊಳ್ಳುವ ಪ್ರಾಜ್ಞನು ಎಂದೂ ನಾಶವಾಗುವುದಿಲ್ಲ.

02012024a ನ ಹಿ ಯಜ್ಞಸಮಾರಂಭಃ ಕೇವಲಾತ್ಮವಿಪತ್ತಯೇ|

02012024c ಭವತೀತಿ ಸಮಾಜ್ಞಾಯ ಯತ್ನತಃ ಕಾರ್ಯಮುದ್ವಹನ್||

02012025a ಸ ನಿಶ್ಚಯಾರ್ಥಂ ಕಾರ್ಯಸ್ಯ ಕೃಷ್ಣಮೇವ ಜನಾರ್ದನಂ|

02012025c ಸರ್ವಲೋಕಾತ್ಪರಂ ಮತ್ವಾ ಜಗಾಮ ಮನಸಾ ಹರಿಂ||

ತನ್ನನ್ನು ಆಪತ್ತಿನಲ್ಲಿ ತಂದುಕೊಳ್ಳಲು ಯಜ್ಞ ಸಮಾರಂಭವನ್ನು ಕೈಗೊಳ್ಳಬಾರದು ಮತ್ತು ಈ ಕಾರ್ಯದಲ್ಲಿ ಪ್ರಯತ್ನ ಬೇಕು ಎಂದು ತಿಳಿದ ಅವನು ಆ ಕಾರ್ಯದ ನಿಶ್ಚಿತಾರ್ಥಕ್ಕಾಗಿ ಮನಸ್ಸಿನಲ್ಲಿಯೇ ಸರ್ವಲೋಕಗಳಲ್ಲಿ ಶ್ರೇಷ್ಠನೆಂದು ತಿಳಿದ ಜನಾರ್ದನ ಹರಿ ಕೃಷ್ಣನಲ್ಲಿಗೆ ಹೋದನು.

02012026a ಅಪ್ರಮೇಯಂ ಮಹಾಬಾಹುಂ ಕಾಮಾಜ್ಜಾತಮಜಂ ನೃಷು|

02012026c ಪಾಂಡವಸ್ತರ್ಕಯಾಮಾಸ ಕರ್ಮಭಿರ್ದೇವಸಮ್ಮಿತೈಃ||

ಪಾಂಡವನು ದೇವಕರ್ಮಗಳಿಗೆ ಸಮ ಕಾರ್ಯಗಳನ್ನೆಸಗಿದ ಆ ಮಹಾಬಾಹು, ಹುಟ್ಟಿಲ್ಲದ ಆದರೂ ಸ್ವ ಇಚ್ಛೆಯಿಂದ ಮನುಷ್ಯರಲ್ಲಿ ಜನ್ಮ ತಾಳಿದ ಅಪ್ರಮೇಯನನ್ನು ನೆನೆದನು.

02012027a ನಾಸ್ಯ ಕಿಂ ಚಿದವಿಜ್ಞಾತಂ ನಾಸ್ಯ ಕಿಂ ಚಿದಕರ್ಮಜಂ|

02012027c ನ ಸ ಕಿಂ ಚಿನ್ನ ವಿಷಹೇದಿತಿ ಕೃಷ್ಣಮಮನ್ಯತ||

ಅವನಿಗೆ ತಿಳಿಯದೇ ಇದ್ದದ್ದು ಏನೂ ಇಲ್ಲ. ಅವನ ಕರ್ಮದಿಂದ ಹುಟ್ಟದೇ ಇರುವಂಥಹುದು ಏನೂ ಇಲ್ಲ. ಅವನು ಸಹಿಸದೇ ಇರುವಂಥಹುದು ಯಾವುದೂ ಇಲ್ಲ ಎಂದು ಕೃಷ್ಣನ ಕುರಿತು ಅವನು ಯೋಚಿಸಿದನು.

02012028a ಸ ತು ತಾಂ ನೈಷ್ಠಿಕೀಂ ಬುದ್ಧಿಂ ಕೃತ್ವಾ ಪಾರ್ಥೋ ಯುಧಿಷ್ಠಿರಃ|

02012028c ಗುರುವದ್ಭೂತಗುರವೇ ಪ್ರಾಹಿಣೋದ್ದೂತಮಂಜಸಾ||

ಅಂತಿಮ ನಿರ್ಧಾರಕ್ಕೆ ಬಂದ ನಂತರ ಪಾರ್ಥ ಯುಧಿಷ್ಠಿರನು ಬೇಗನೆ ಗುರುವಿಗೆ ಕಳುಹಿಸುವಂತೆ ದೂತನನ್ನು ಆ ಸರ್ವ ಭೂತಗಳ ಗುರುವಿಗೆ ಕಳುಹಿಸಿದನು.

02012029a ಶೀಘ್ರಗೇನ ರಥೇನಾಶು ಸ ದೂತಃ ಪ್ರಾಪ್ಯ ಯಾದವಾನ್|

02012029c ದ್ವಾರಕಾವಾಸಿನಂ ಕೃಷ್ಣಂ ದ್ವಾರವತ್ಯಾಂ ಸಮಾಸದತ್||

ಶೀಘ್ರರಥದಲ್ಲಿ ಬೇಗನೇ ಯಾದವರನ್ನು ತಲುಪಿದ ದೂತನು ದ್ವಾರಕಾವಾಸಿ ಕೃಷ್ಣನನ್ನು ದ್ವಾರವತಿಯ ಮನೆಯಲ್ಲಿ ಕಂಡನು.

02012030a ದರ್ಶನಾಕಾಂಕ್ಷಿಣಂ ಪಾರ್ಥಂ ದರ್ಶನಾಕಾಂಕ್ಷಯಾಚ್ಯುತಃ|

02012030c ಇಂದ್ರಸೇನೇನ ಸಹಿತ ಇಂದ್ರಪ್ರಸ್ಥಂ ಯಯೌ ತದಾ||

ತನ್ನನ್ನು ನೋಡಲು ಬಯಸಿದ ಪಾರ್ಥನನ್ನು ನೋಡುವ ಆಸೆಯಿಂದ ಅಚ್ಯುತನು ಇಂದ್ರಸೇನನನ್ನೊಡಗೊಂಡು ಇಂದ್ರಪ್ರಸ್ಥಕ್ಕೆ ಹೊರಟನು.

02012031a ವ್ಯತೀತ್ಯ ವಿವಿಧಾನ್ದೇಶಾಂಸ್ತ್ವರಾವಾನ್ ಕ್ಷಿಪ್ರವಾಹನಃ|

02012031c ಇಂದ್ರಪ್ರಸ್ಥಗತಂ ಪಾರ್ಥಮಭ್ಯಗಚ್ಛಜ್ಜನಾರ್ದನಃ||

ಕ್ಷಿಪ್ರವಾಹನವನ್ನೇರಿ ವಿವಿಧದೇಶಗಳನ್ನು ವೇಗವಾಗಿ ದಾಟಿ ಜನಾರ್ದನನು ಇಂದ್ರಪ್ರಸ್ಥವನ್ನು ಸೇರಿ ಪಾರ್ಥನನ್ನು ಭೇಟಿಯಾದನು.

02012032a ಸ ಗೃಹೇ ಭ್ರಾತೃವದ್ಭ್ರಾತ್ರಾ ಧರ್ಮರಾಜೇನ ಪೂಜಿತಃ|

02012032c ಭೀಮೇನ ಚ ತತೋಽಪಶ್ಯತ್ಸ್ವಸಾರಂ ಪ್ರೀತಿಮಾನ್ಪಿತುಃ||

ಭ್ರಾತೃವಿನ ಮನೆಗೆ ಭ್ರಾತೃವನ್ನು ಸ್ವಾಗತಿಸುವಂತೆ ಧರ್ಮರಾಜ- ಭೀಮಸೇನರು ಸ್ವಾಗತಿಸಲು ಅವನು ತನ್ನ ತಂದೆಯ ತಂಗಿಯನ್ನು ಪ್ರೀತಿಯಿಂದ ಕಂಡನು.

02012033a ಪ್ರೀತಃ ಪ್ರಿಯೇಣ ಸುಹೃದಾ ರೇಮೇ ಸ ಸಹಿತಸ್ತದಾ|

02012033c ಅರ್ಜುನೇನ ಯಮಾಭ್ಯಾಂ ಚ ಗುರುವತ್ಪರ್ಯುಪಸ್ಥಿತಃ||

ತನ್ನ ಪ್ರೀತಿಯ ಸುಹೃದ ಅರ್ಜುನನೊಡನೆ ರಮಿಸಿದನು ಮತ್ತು ಯಮಳರಿಂದ ಗುರುವಿಗೆ ತಕ್ಕ ಗೌರವವನ್ನು ಪಡೆದನು.

02012034a ತಂ ವಿಶ್ರಾಂತಂ ಶುಭೇ ದೇಶೇ ಕ್ಷಣಿನಂ ಕಲ್ಯಮಚ್ಯುತಂ|

02012034c ಧರ್ಮರಾಜಃ ಸಮಾಗಮ್ಯ ಜ್ಞಾಪಯತ್ಸ್ವಂ ಪ್ರಯೋಜನಂ||

ಅವನು ವಿಶ್ರಾಂತಿಯನ್ನು ಹೊಂದ ನಂತರ ಸಮಯ ಮಾಡಿಕೊಂಡು ಶುಭದೇಶದಲ್ಲಿ ಧರ್ಮರಾಜನು ಅವನನ್ನು ಬೇಟಿಮಾಡಿ ತನ್ನ ಯೋಜನೆಯ ಕುರಿತು ಹೇಳಿಕೊಂಡನು.

02012035 ಯುಧಿಷ್ಠಿರ ಉವಾಚ|

02012035a ಪ್ರಾರ್ಥಿತೋ ರಾಜಸೂಯೋ ಮೇ ನ ಚಾಸೌ ಕೇವಲೇಪ್ಸಯಾ|

02012035c ಪ್ರಾಪ್ಯತೇ ಯೇನ ತತ್ತೇ ಹ ವಿದಿತಂ ಕೃಷ್ಣ ಸರ್ವಶಃ||

ಯುಧಿಷ್ಠಿರನು ಹೇಳಿದನು: “ರಾಜಸೂಯವನ್ನು ಕೈಗೊಳ್ಳುವ ಮನಸ್ಸಾಗಿದೆ. ಆದರೆ ಕೃಷ್ಣ! ನಿನಗೆ ತಿಳಿದಿದೆ ಇದನ್ನು ಕೇವಲ ಇಚ್ಛಿಸುವುದರಿಂದ ಮಾತ್ರ ನೆರವೇರಿಸಿದಂತಾಗುವುದಿಲ್ಲ.

02012036a ಯಸ್ಮಿನ್ಸರ್ವಂ ಸಂಭವತಿ ಯಶ್ಚ ಸರ್ವತ್ರ ಪೂಜ್ಯತೇ|

02012036c ಯಶ್ಚ ಸರ್ವೇಶ್ವರೋ ರಾಜಾ ರಾಜಸೂಯಂ ಸ ವಿಂದತಿ||

ಯಾವುದರಿಂದ ಎಲ್ಲವೂ ಸಂಭವಿಸುತ್ತವೆಯೋ ಯಾವುದನ್ನು ಎಲ್ಲೆಡೆಯೂ ಪೂಜಿಸುತ್ತಾರೋ ಮತ್ತು ಯಾವ ರಾಜನನ್ನು ಸರ್ವೇಶ್ವರನೆಂದು ಪರಿಗಣಿಸುತ್ತಾರೋ ಅದೇ ರಾಜಸೂಯ.

02012037a ತಂ ರಾಜಸೂಯಂ ಸುಹೃದಃ ಕಾರ್ಯಮಾಹುಃ ಸಮೇತ್ಯ ಮೇ|

02012037c ತತ್ರ ಮೇ ನಿಶ್ಚಿತತಮಂ ತವ ಕೃಷ್ಣ ಗಿರಾ ಭವೇತ್||

ಸಭೆಯಲ್ಲಿ ನನ್ನ ಮಿತ್ರರು ನಾನು ರಾಜಸೂಯವನ್ನು ಮಾಡಲು ಅರ್ಹ ಎಂದಿದ್ದಾರೆ. ಆದರೆ ಕೃಷ್ಣ! ಇದರ ಕುರಿತು ನಿನ್ನ ಮಾತುಗಳನ್ನು ಕೇಳಿಯೇ ನಿಶ್ಚಯಿಸಬೇಕೆಂದಿದ್ದೇನೆ.

02012038a ಕೇ ಚಿದ್ಧಿ ಸೌಹೃದಾದೇವ ದೋಷಂ ನ ಪರಿಚಕ್ಷತೇ|

02012038c ಅರ್ಥಹೇತೋಸ್ತಥೈವಾನ್ಯೇ ಪ್ರಿಯಮೇವ ವದಂತ್ಯುತ||

02012039a ಪ್ರಿಯಮೇವ ಪರೀಪ್ಸಂತೇ ಕೇ ಚಿದಾತ್ಮನಿ ಯದ್ಧಿತಂ|

02012039c ಏವಂಪ್ರಾಯಾಶ್ಚ ದೃಶ್ಯಂತೇ ಜನವಾದಾಃ ಪ್ರಯೋಜನೇ||

ಕೆಲವರು ಮಿತ್ರತ್ವದಿಂದಾಗಿ ದೋಷವನ್ನು ಪರಿಗಣಿಸುವುದಿಲ್ಲ. ಇನ್ನು ಕೆಲವರು ಲಾಭದ ಪ್ರತೀಕ್ಷೆಯಿಂದ ಪ್ರಿಯ ಮಾತುಗಳನ್ನೇ ಆಡುತ್ತಾರೆ. ಹಾಗಾಗಿ ಜನರ ಅಭಿಪ್ರಾಯಗಳು ಅಷ್ಟೇ ಪ್ರಯೋಜನವಾಗಿರುತ್ತವೆ.

02012040a ತ್ವಂ ತು ಹೇತೂನತೀತ್ಯೈತಾನ್ಕಾಮಕ್ರೋಧೌ ವ್ಯತೀತ್ಯ ಚ|

02012040c ಪರಮಂ ನಃ ಕ್ಷಮಂ ಲೋಕೇ ಯಥಾವದ್ವಕ್ತುಮರ್ಹಸಿ||

ಆದರೆ ನೀನು ಕಾಮ ಕ್ರೋಧಗಳನ್ನು ತೊರೆದು ಈ ಎಲ್ಲ ಆಕಾಂಕ್ಷೆಗಳನ್ನೂ ಮೀರಿದ್ದೀಯೆ. ಈ ಲೋಕಕ್ಕೆ ಶ್ರೇಷ್ಠವಾದುದು ಏನು ಎನ್ನುವುದನ್ನು ನೀನು ಹೇಳಬೇಕು.”

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಮಂತ್ರಪರ್ವಣಿ ವಾಸುದೇವಾಗಮನೇ ದ್ವಾದಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಸಭಾಪರ್ವದಲ್ಲಿ ಮಂತ್ರಪರ್ವದಲ್ಲಿ ವಾಸುದೇವನ ಆಗಮನ ಎನ್ನುವ ಹನ್ನೆರಡನೆಯ ಅಧ್ಯಾಯವು.

Image result for indian motifs

Comments are closed.