ಶಾಂತಿ ಪರ್ವ: ರಾಜಧರ್ಮ ಪರ್ವ

೬೪

ಇಂದ್ರ-ಮಾಂಧಾತ ಸಂವಾದ

12064001 ಭೀಷ್ಮ ಉವಾಚ

12064001a ಚಾತುರಾಶ್ರಮ್ಯಧರ್ಮಾಶ್ಚ ಜಾತಿಧರ್ಮಾಶ್ಚ ಪಾಂಡವ|

12064001c ಲೋಕಪಾಲೋತ್ತರಾಶ್ಚೈವ ಕ್ಷಾತ್ರೇ ಧರ್ಮೇ ವ್ಯವಸ್ಥಿತಾಃ||

ಭೀಷ್ಮನು ಹೇಳಿದನು: “ಪಾಂಡವ! ನಾಲ್ಕು ಆಶ್ರಮಧರ್ಮಗಳೂ, ಜಾತಿಧರ್ಮಗಳೂ, ಲೋಕಪಾಲಧರ್ಮಗಳೂ ಕ್ಷಾತ್ರಧರ್ಮದಲ್ಲಿಯೇ ಪ್ರತಿಷ್ಠಿತಗೊಂಡಿವೆ.

12064002a ಸರ್ವಾಣ್ಯೇತಾನಿ ಧರ್ಮಾಣಿ ಕ್ಷಾತ್ರೇ ಭರತಸತ್ತಮ|

12064002c ನಿರಾಶಿಷೋ ಜೀವಲೋಕೇ ಕ್ಷಾತ್ರೇ ಧರ್ಮೇ ವ್ಯವಸ್ಥಿತಾಃ[1]||

ಭರತಸತ್ತಮ! ಈ ಎಲ್ಲ ಧರ್ಮಗಳೂ ಕ್ಷಾತ್ರಧರ್ಮವನ್ನವಲಂಬಿಸಿವೆ. ಕ್ಷಾತ್ರಧರ್ಮವು ಅವ್ಯವಸ್ಥಿತವಾದರೆ ಜೀವಲೋಕಗಳು ನಿರಾಶೆಗೊಳ್ಳುತ್ತವೆ.

12064003a ಅಪ್ರತ್ಯಕ್ಷಂ ಬಹುದ್ವಾರಂ ಧರ್ಮಮಾಶ್ರಮವಾಸಿನಾಮ್|

12064003c ಪ್ರರೂಪಯಂತಿ ತದ್ಭಾವಮಾಗಮೈರೇವ ಶಾಶ್ವತಮ್||

ಆಶ್ರಮವಾಸಿಗಳ ಧರ್ಮಗಳು ಅಪ್ರತ್ಯಕ್ಷವಾಗಿವೆ ಮತ್ತು ಅವುಗಳಿಗೆ ಬಹುದ್ವಾರಗಳಿವೆ. ಆಗಮಗಳೇ ಅವುಗಳ ಶಾಶ್ವತ ಭಾವಗಳನ್ನು ರೂಪಿಸುತ್ತವೆ.

12064004a ಅಪರೇ ವಚನೈಃ ಪುಣ್ಯೈರ್ವಾದಿನೋ ಲೋಕನಿಶ್ಚಯಮ್|

12064004c ಅನಿಶ್ಚಯಜ್ಞಾ ಧರ್ಮಾಣಾಮದೃಷ್ಟಾಂತೇ ಪರೇ ರತಾಃ||

ಕೆಲವರು ಲೋಕನಿಶ್ಚಯವನ್ನು ಪುಣ್ಯವೇದವಚನಗಳ ಮೂಲಕ ಹೇಳುತ್ತಾರ. ಇತರರು ನಿಶ್ಚಯಗಳನ್ನು ತೆಗೆದುಕೊಳ್ಳಲಾರದೇ ಧರ್ಮಗಳನ್ನು ಕಂಡುಕೊಳ್ಳುವುದಿಲ್ಲ.

12064005a ಪ್ರತ್ಯಕ್ಷಸುಖಭೂಯಿಷ್ಠಮಾತ್ಮಸಾಕ್ಷಿಕಮಚ್ಚಲಮ್|

12064005c ಸರ್ವಲೋಕಹಿತಂ ಧರ್ಮಂ ಕ್ಷತ್ರಿಯೇಷು ಪ್ರತಿಷ್ಠಿತಮ್||

ಪ್ರತ್ಯಕ್ಷವೂ, ಅಧಿಕ ಸುಖಮಯವೂ, ಆತ್ಮಸಾಕ್ಷಿಕವೂ, ಕಪಟರಹಿತವೂ ಮತ್ತು ಸರ್ವಲೋಕಹಿತವೂ ಆಗಿರುವ ಧರ್ಮವು ಕ್ಷತ್ರಿಯರಲ್ಲಿ ಪ್ರತಿಷ್ಠಿತಗೊಂಡಿದೆ.

12064006a ಧರ್ಮಾಶ್ರಮವ್ಯವಸಿನಾಂ ಬ್ರಾಹ್ಮಣಾನಾಂ ಯುಧಿಷ್ಠಿರ|

12064006c ಯಥಾ ತ್ರಯಾಣಾಂ ವರ್ಣಾನಾಂ ಸಂಖ್ಯಾತೋಪಶ್ರುತಿಃ ಪುರಾ|

12064006e ರಾಜಧರ್ಮೇಷ್ವನುಪಮಾ ಲೋಕ್ಯಾ ಸುಚರಿತೈರಿಹ||

ಯುಧಿಷ್ಠಿರ! ಆಶ್ರಮಧರ್ಮಗಳನ್ನು ಆಚರಿಸುತ್ತಿರುವ ಬ್ರಾಹ್ಮಣರ ಪ್ರಕಾರ, ಹಿಂದೆ ಹೇಳಿದಂತೆ ಮೂರು ವರ್ಣಗಳು ಹೇಗೆ ರಾಜಧರ್ಮದಲ್ಲಿ ಲೀನವಾಗುತ್ತವೆಯೋ ಹಾಗೆ ಲೋಕದಲ್ಲಿರುವ ಸುಚರಿತ್ರಗಳೆಲ್ಲವೂ ರಾಜಧರ್ಮದಲ್ಲಿಯೇ ಇರುತ್ತವೆ.

12064007a ಉದಾಹೃತಂ ತೇ ರಾಜೇಂದ್ರ ಯಥಾ ವಿಷ್ಣುಂ ಮಹೌಜಸಮ್|

12064007c ಸರ್ವಭೂತೇಶ್ವರಂ ದೇವಂ ಪ್ರಭುಂ ನಾರಾಯಣಂ ಪುರಾ|

12064007e ಜಗ್ಮುಃ ಸುಬಹವಃ ಶೂರಾ ರಾಜಾನೋ ದಂಡನೀತಯೇ||

ರಾಜೇಂದ್ರ! ಇದರ ಕುರಿತು ಒಂದು ಉದಾಹರಣೆಯಿದೆ. ಹಿಂದೆ ದಂಡನೀತಿಗಾಗಿ ಅನೇಕ ಶೂರ ರಾಜರು ಸರ್ವಭೂತೇಶ್ವರ ದೇವ ಪ್ರಭು ನಾರಾಯಣನಲ್ಲಿಗೆ ಹೋದರು.

12064008a ಏಕೈಕಮಾತ್ಮನಃ ಕರ್ಮ ತುಲಯಿತ್ವಾಶ್ರಮೇ ಪುರಾ|

12064008c ರಾಜಾನಃ ಪರ್ಯುಪಾತಿಷ್ಠನ್ದೃಷ್ಟಾಂತವಚನೇ ಸ್ಥಿತಾಃ||

ಅದಕ್ಕೆ ಮೊದಲು ರಾಜರು ವರ್ಣಾಶ್ರಮ ಧರ್ಮಕ್ಕನುಗುಣವಾಗಿ ತಾವು ಮಾಡಿದ ಒಂದೊಂದು ಕರ್ಮವನ್ನೂ ದಂಡನೀತಿಯೊಡನೆ ತುಲನೆ ಮಾಡಿದ್ದರು. ಆದರೆ ಅವರ ಸಂಶಯವು ಪರಿಹಾರವಾಗಿರಲಿಲ್ಲ.

12064009a ಸಾಧ್ಯಾ ದೇವಾ ವಸವಶ್ಚಾಶ್ವಿನೌ ಚ| ರುದ್ರಾಶ್ಚ ವಿಶ್ವೇ ಮರುತಾಂ ಗಣಾಶ್ಚ|

12064009c ಸೃಷ್ಟಾಃ ಪುರಾ ಆದಿದೇವೇನ ದೇವಾ| ಕ್ಷಾತ್ರೇ ಧರ್ಮೇ ವರ್ತಯಂತೇ ಚ ಸಿದ್ಧಾಃ||

ಹಿಂದೆ ಆದಿದೇವ ವಿಷ್ಣುವಿನಿಂದ ಸೃಷ್ಟಿಸಲ್ಪಟ್ಟ ಸಾಧ್ಯರು, ದೇವತೆಗಳು, ವಸುಗಳು, ಅಶ್ವಿನರು, ರುದ್ರರು, ವಿಶ್ವೇದೇವರು, ಸಿದ್ಧರು ಮತ್ತು ಮರುದ್ಗಣಗಳು ಕ್ಷಾತ್ರಧರ್ಮದಂತೆಯೇ ನಡೆದುಕೊಳ್ಳುತ್ತಾರೆ.

12064010a ಅತ್ರ ತೇ ವರ್ತಯಿಷ್ಯಾಮಿ ಧರ್ಮಮರ್ಥವಿನಿಶ್ಚಯಮ್|

12064010c ನಿರ್ಮರ್ಯಾದೇ ವರ್ತಮಾನೇ ದಾನವೈಕಾಯನೇ ಕೃತೇ||

12064010e ಬಭೂವ ರಾಜಾ ರಾಜೇಂದ್ರ ಮಾಂಧಾತಾ ನಾಮ ವೀರ್ಯವಾನ್||

ರಾಜೇಂದ್ರ! ಅದರ ಕುರಿತಾದ ಧರ್ಮನಿಶ್ಚಯವನ್ನು ನಿನಗೆ ಹೇಳುತ್ತೇನೆ. ಕೃತಯುಗದಲ್ಲಿ ಈ ಅಖಂಡ ವಿಶ್ವವು ದಾನವರ ವಶವಾಗಿ ಮರ್ಯಾದೆಗಳಿಲ್ಲದೇ ನಡೆಯುತ್ತಿರಲು ಮಾಂಧಾತ ಎಂಬ ವೀರ್ಯವಾನ್ ರಾಜನಾದನು.

12064011a ಪುರಾ ವಸುಮತೀಪಾಲೋ ಯಜ್ಞಂ ಚಕ್ರೇ ದಿದೃಕ್ಷಯಾ|

12064011c ಅನಾದಿಮಧ್ಯನಿಧನಂ ದೇವಂ ನಾರಾಯಣಂ ಪ್ರತಿ||

ಹಿಂದೆ ಆ ವಸುಮತೀಪಾಲಕನು ಅನಾದಿಮಧ್ಯನಿಧನ ದೇವ ನಾರಾಯಣನನ್ನು ಕಾಣಲೋಸುಗ ಒಂದು ಯಜ್ಞವನ್ನು ನಡೆಸಿದನು.

12064012a ಸ ರಾಜಾ ರಾಜಶಾರ್ದೂಲ ಮಾಂಧಾತಾ ಪರಮೇಷ್ಠಿನಃ|

12064012c ಜಗ್ರಾಹ ಶಿರಸಾ ಪಾದೌ ಯಜ್ಞೇ ವಿಷ್ಣೋರ್ಮಹಾತ್ಮನಃ||

ರಾಜಶಾರ್ದೂಲ! ಆ ಯಜ್ಞದಲ್ಲಿ ರಾಜಾ ಮಾಂಧಾತನು ಪರಮೇಷ್ಠಿ ಮಹಾತ್ಮ ವಿಷ್ಣುವಿನ ಪಾದಗಳಲ್ಲಿ ತನ್ನ ಶಿರಸ್ಸನ್ನಿಟ್ಟನು.

12064013a ದರ್ಶಯಾಮಾಸ ತಂ ವಿಷ್ಣೂ ರೂಪಮಾಸ್ಥಾಯ ವಾಸವಮ್|

12064013c ಸ ಪಾರ್ಥಿವೈರ್ವೃತಃ ಸದ್ಭಿರರ್ಚಯಾಮಾಸ ತಂ ಪ್ರಭುಮ್||

ಆಗ ವಿಷ್ಣುವು ವಾಸವ ಇಂದ್ರನ ರೂಪವನ್ನು ಧರಿಸಿ ಆ ರಾಜನಿಗೆ ಕಾಣಿಸಿಕೊಂಡನು. ರಾಜನಾದರೋ ಪ್ರಭುವನ್ನು ಉತ್ತಮವಾಗಿ ಅರ್ಚಿಸಿದನು.

12064014a ತಸ್ಯ ಪಾರ್ಥಿವಸಂಘಸ್ಯ ತಸ್ಯ ಚೈವ ಮಹಾತ್ಮನಃ|

12064014c ಸಂವಾದೋಽಯಂ ಮಹಾನಾಸೀದ್ವಿಷ್ಣುಂ ಪ್ರತಿ ಮಹಾದ್ಯುತೇ||

ಮಹಾದ್ಯುತೇ! ಆಗ ಆ ಪಾರ್ಥಿವಶ್ರೇಷ್ಠ ಮಾಂಧಾತನಿಗೂ ಮಹಾತ್ಮ ಇಂದ್ರನಿಗೂ ವಿಷ್ಣುವಿನ ಕುರಿತಾದ ಈ ಸಂವಾದವು ನಡೆಯಿತು.

12064015 ಇಂದ್ರ ಉವಾಚ

12064015a ಕಿಮಿಷ್ಯತೇ ಧರ್ಮಭೃತಾಂ ವರಿಷ್ಠ| ಯದ್ದ್ರಷ್ಟುಕಾಮೋಽಸಿ ತಮಪ್ರಮೇಯಮ್|

12064015c ಅನಂತಮಾಯಾಮಿತಸತ್ತ್ವವೀರ್ಯಂ| ನಾರಾಯಣಂ ಹ್ಯಾದಿದೇವಂ ಪುರಾಣಮ್||

ಇಂದ್ರನು ಹೇಳಿದನು: “ಧರ್ಮಭೃತರಲ್ಲಿ ವರಿಷ್ಠ! ಆದಿದೇವನೂ, ಪುರಾಣನೂ, ಅಮಿತ ಸತ್ತ್ವವೀರ್ಯನೂ, ಅನಂತಮಾಯೆಗಳುಳ್ಳವನೂ, ಅಪ್ರಮೇಯನೂ ಆದ ನಾರಾಯಣನನ್ನು ಕಾಣಲು ಏಕೆ ಬಯಸುತ್ತಿರುವೆ?

12064016a ನಾಸೌ ದೇವೋ ವಿಶ್ವರೂಪೋ ಮಯಾಪಿ| ಶಕ್ಯೋ ದ್ರಷ್ಟುಂ ಬ್ರಹ್ಮಣಾ ವಾಪಿ ಸಾಕ್ಷಾತ್|

12064016c ಯೇಽನ್ಯೇ ಕಾಮಾಸ್ತವ ರಾಜನ್ಹೃದಿಸ್ಥಾ| ದಾಸ್ಯಾಮಿ ತಾಂಸ್ತ್ವಂ ಹಿ ಮರ್ತ್ಯೇಷು ರಾಜಾ||

ಆ ದೇವ ವಿಶ್ವರೂಪನನ್ನು ನಾನಾಗಲೀ ಸಾಕ್ಷಾತ್ ಬ್ರಹ್ಮನೇ ಆಗಲಿ ನೋಡಲು ಶಕ್ಯರಿಲ್ಲ. ರಾಜನ್! ಮನುಷ್ಯರಲ್ಲಿ ರಾಜನಾಗಿರುವ ನಿನಗೆ ಅನ್ಯ ಕಾಮನೆಗಳು ಹೃದಯಸ್ಥವಾಗಿದ್ದರೆ ಅವುಗಳನ್ನು ನಾನೇ ದಯಪಾಲಿಸುತ್ತೇನೆ.

12064017a ಸತ್ಯೇ ಸ್ಥಿತೋ ಧರ್ಮಪರೋ ಜಿತೇಂದ್ರಿಯಃ| ಶೂರೋ ದೃಢಂ ಪ್ರೀತಿರತಃ ಸುರಾಣಾಮ್|

12064017c ಬುದ್ಧ್ಯಾ ಭಕ್ತ್ಯಾ ಚೋತ್ತಮಶ್ರದ್ಧಯಾ ಚ| ತತಸ್ತೇಽಹಂ ದದ್ಮಿ ವರಂ ಯಥೇಷ್ಟಮ್||

ಸತ್ಯನಿಷ್ಠನಾಗಿರುವ, ಧರ್ಮಪರನೂ ಜಿತೇಂದ್ರಿಯನೂ ಆಗಿರುವ, ಶೂರನೂ ದೃಢನೂ, ಸುರರ ಪ್ರೀತಿರತನೂ ಆಗಿರುವ, ಉತ್ತಮ ಬುದ್ಧಿ-ಭಕ್ತಿ-ಶ್ರದ್ಧೆಗಳಿರುವ ನಿನಗೆ ಇಷ್ಟವಾದ ವರವನ್ನು ನಾನೇ ನೀಡುತ್ತೇನೆ.”

12064018 ಮಾಂಧಾತೋವಾಚ

12064018a ಅಸಂಶಯಂ ಭಗವನ್ನಾದಿದೇವಂ| ದ್ರಕ್ಷ್ಯಾಮ್ಯಹಂ ಶಿರಸಾಹಂ ಪ್ರಸಾದ್ಯ|

12064018c ತ್ಯಕ್ತ್ವಾ ಭೋಗಾನ್ಧರ್ಮಕಾಮೋ ಹ್ಯರಣ್ಯಮ್| ಇಚ್ಚೇ ಗಂತುಂ ಸತ್ಪಥಂ ಲೋಕಜುಷ್ಟಮ್||

ಮಾಂಧಾತನು ಹೇಳಿದನು: “ಭಗವನ್! ನಿನ್ನ ಅಡಿದಾವರೆಗಳಲ್ಲಿಯೇ ಶಿರಸ್ಸನ್ನಿಟ್ಟು ಪ್ರಸನ್ನಗೊಳಿಸಿ ನಾನು ಆದಿದೇವನನ್ನು ಕಾಣುತ್ತೇನೆ. ಇದರಲ್ಲಿ ಸಂದೇಹವಿಲ್ಲ. ಭೋಗಗಳನ್ನು ತ್ಯಜಿಸಿ ಧರ್ಮಕಾಮನಾಗಿ ನಾನು ಲೋಕದ ಸತ್ಪುರುಷರ ಅಂತಿಮ ಮಾರ್ಗವಾದ ಅರಣ್ಯವನ್ನು ಸೇರಲು ಬಯಸುತ್ತೇನೆ.

12064019a ಕ್ಷಾತ್ರಾದ್ಧರ್ಮಾದ್ವಿಪುಲಾದಪ್ರಮೇಯಾಲ್| ಲೋಕಾಃ ಪ್ರಾಪ್ತಾಃ ಸ್ಥಾಪಿತಂ ಸ್ವಂ ಯಶಶ್ಚ|

12064019c ಧರ್ಮೋ ಯೋಽಸಾವಾದಿದೇವಾತ್ಪ್ರವೃತ್ತೋ| ಲೋಕಜ್ಯೇಷ್ಠಸ್ತಂ ನ ಜಾನಾಮಿ ಕರ್ತುಮ್||

ಕ್ಷಾತ್ರಧರ್ಮದಿಂದ ವಿಪುಲ ಅಪ್ರಮೇಯ ಲೋಕಗಳನ್ನು ಪಡೆದುಕೊಂಡಿದ್ದೇನೆ ಮತ್ತು ನನ್ನ ಯಶಸ್ಸನ್ನೂ ಲೋಕಗಳಲ್ಲಿ ಸ್ಥಾಪಿಸಿದ್ದೇನೆ. ಆದರೆ ಆ ಲೋಕಜ್ಯೇಷ್ಠ ಆದಿದೇವನಿಂದ ಪ್ರವೃತ್ತವಾದ ಮೋಕ್ಷಧರ್ಮವನ್ನು ನಡೆಸಲು ನನಗೆ ತಿಳಿದಿಲ್ಲ.”

12064020 ಇಂದ್ರ ಉವಾಚ

12064020a ಅಸೈನಿಕೋಽಧರ್ಮಪರಶ್ಚರೇಥಾಃ| ಪರಾಂ ಗತಿಂ ಲಪ್ಸ್ಯಸೇ ಚಾಪ್ರಮತ್ತಃ|[2]

12064020c ಕ್ಷಾತ್ರೋ ಧರ್ಮೋ ಹ್ಯಾದಿದೇವಾತ್ಪ್ರವೃತ್ತಃ| ಪಶ್ಚಾದನ್ಯೇ ಶೇಷಭೂತಾಶ್ಚ ಧರ್ಮಾಃ||

ಇಂದ್ರನು ಹೇಳಿದನು: “ಕ್ಷಾತ್ರಧರ್ಮವು ಆದಿದೇವನಿಂದಲೇ ಪ್ರವೃತ್ತಗೊಂಡಿತು. ಅದರ ನಂತರವೇ ಉಳಿದ ಅನ್ಯ ಧರ್ಮಗಳು ಹುಟ್ಟಿಕೊಂಡವು.

12064021a ಶೇಷಾಃ ಸೃಷ್ಟಾ ಹ್ಯಂತವಂತೋ ಹ್ಯನಂತಾಃ| ಸುಪ್ರಸ್ಥಾನಾಃ ಕ್ಷತ್ರಧರ್ಮಾವಿಶಿಷ್ಟಾಃ|

12064021c ಅಸ್ಮಿನ್ಧರ್ಮೇ ಸರ್ವಧರ್ಮಾಃ ಪ್ರವಿಷ್ಟಾಸ್| ತಸ್ಮಾದ್ಧರ್ಮಂ ಶ್ರೇಷ್ಠಮಿಮಂ ವದಂತಿ||

ಅನಂತರ ಹುಟ್ಟಿದ ಶೇಷಧರ್ಮಗಳು ಕಾಲಾನುಗುಣವಾಗಿ ಕ್ಷಯಿಸುತ್ತವೆ. ಉತ್ತಮ ಸಂಪ್ರದಾಯಗಳಿರುವ ಕ್ಷತ್ರಧರ್ಮವೇ ವಿಶಿಷ್ಠವಾದುದು. ಈ ಧರ್ಮದಲ್ಲಿ ಸರ್ವಧರ್ಮಗಳೂ ಸೇರಿಕೊಂಡಿವೆ. ಆದುದರಿಂದ ಇದನ್ನು ಶ್ರೇಷ್ಠಧರ್ಮವೆಂದು ಹೇಳುತ್ತಾರೆ.

12064022a ಕರ್ಮಣಾ ವೈ ಪುರಾ ದೇವಾ ಋಷಯಶ್ಚಾಮಿತೌಜಸಃ|

12064022c ತ್ರಾತಾಃ ಸರ್ವೇ ಪ್ರಮಥ್ಯಾರೀನ್ಕ್ಷತ್ರಧರ್ಮೇಣ ವಿಷ್ಣುನಾ||

ಹಿಂದೆ ಅಮಿತೌಜಸ ವಿಷ್ಣುವು ಕ್ಷತ್ರಧರ್ಮವನ್ನನುಸರಿಸಿಯೇ ಅರಿಗಳನ್ನು ಸದೆಬಡಿದು ಸರ್ವ ದೇವತೆಗಳನ್ನೂ ಋಷಿಗಳನ್ನೂ ಸಂರಕ್ಷಿಸುವ ಕಾರ್ಯವನ್ನೆಸಗಿದನು.

12064023a ಯದಿ ಹ್ಯಸೌ ಭಗವಾನ್ನಾಹನಿಷ್ಯದ್| ರಿಪೂನ್ಸರ್ವಾನ್ವಸುಮಾನಪ್ರಮೇಯಃ|

12064023c ನ ಬ್ರಾಹ್ಮಣಾ ನ ಚ ಲೋಕಾದಿಕರ್ತಾ| ನ ಸದ್ಧರ್ಮಾ ನಾದಿಧರ್ಮಾ ಭವೇಯುಃ||

ಒಂದುವೇಳೆ ಆ ವಸುಮಾನ ಅಪ್ರಮೇಯ ಭಗವಂತನು ರಿಪುಗಳೆಲ್ಲರನ್ನೂ ಸಂಹರಿಸದೇ ಇದ್ದಿದ್ದರೆ ಲೋಕದ ಆದಿಕರ್ತ ಬ್ರಹ್ಮನಾಗಲೀ, ಬ್ರಾಹ್ಮಣರಾಗಲೀ, ಸದ್ಧರ್ಮವಾಗಲೀ ಆದಿಧರ್ಮವಾಗಲೀ ಇರುತ್ತಿರಲಿಲ್ಲ.

12064024a ಇಮಾಮುರ್ವೀಂ ನ ಜಯೇದ್ವಿಕ್ರಮೇಣ| ದೇವಶ್ರೇಷ್ಠೋಽಸೌ ಪುರಾ ಚೇದಮೇಯಃ|

12064024c ಚಾತುರ್ವರ್ಣ್ಯಂ ಚಾತುರಾಶ್ರಮ್ಯಧರ್ಮಾಃ| ಸರ್ವೇ ನ ಸ್ಯುರ್ಬ್ರಹ್ಮಣೋ ವೈ ವಿನಾಶಾತ್||

ದೇವಶ್ರೇಷ್ಠನು ಹಿಂದೆ ತನ್ನ ವಿಕ್ರಮದಿಂದ ಈ ಉರ್ವಿಯನ್ನು ಗೆಲ್ಲದೇ ಇದ್ದಿದ್ದರೆ ಬ್ರಾಹ್ಮಣರ ವಿನಾಶದಿಂದಾಗಿ ಚಾತುರ್ವರ್ಣ ಧರ್ಮಗಳಾಗಲೀ ಚತುರಾಶ್ರಮ ಧರ್ಮಗಳಾಗಲೀ ಯಾವುದೂ ಇರುತ್ತಿರಲಿಲ್ಲ.

12064025a ದೃಷ್ಟಾ ಧರ್ಮಾಃ ಶತಧಾ ಶಾಶ್ವತೇನ| ಕ್ಷಾತ್ರೇಣ ಧರ್ಮೇಣ ಪುನಃ ಪ್ರವೃತ್ತಾಃ|[3]

12064025c ಯುಗೇ ಯುಗೇ ಹ್ಯಾದಿಧರ್ಮಾಃ ಪ್ರವೃತ್ತಾ| ಲೋಕಜ್ಯೇಷ್ಠಂ ಕ್ಷತ್ರಧರ್ಮಂ ವದಂತಿ||

ನೂರಾರು ಚೂರುಗಳಾಗಿ ಹೋಗಿದ್ದ ಧರ್ಮಗಳು ಶಾಶ್ವತ ಕ್ಷಾತ್ರಧರ್ಮದಿಂದ ಪುನಃ ಪ್ರವೃತ್ತಗೊಂಡಿರುವುದನ್ನು ನೋಡಿದ್ದೇವೆ. ಯುಗಯುಗಗಳಲ್ಲಿಯೂ ಈ ಆದಿಧರ್ಮ ಕ್ಷತ್ರಿಯಧರ್ಮವು ಹುಟ್ಟುತ್ತದೆ. ಆದುದರಿಂದ ಲೋಕದಲ್ಲಿ ಕ್ಷತ್ರಧರ್ಮವೇ ಜ್ಯೇಷ್ಠವೆಂದು ಹೇಳುತ್ತಾರೆ.

12064026a ಆತ್ಮತ್ಯಾಗಃ ಸರ್ವಭೂತಾನುಕಂಪಾ| ಲೋಕಜ್ಞಾನಂ ಮೋಕ್ಷಣಂ ಪಾಲನಂ ಚ|

12064026c ವಿಷಣ್ಣಾನಾಂ ಮೋಕ್ಷಣಂ ಪೀಡಿತಾನಾಂ| ಕ್ಷಾತ್ರೇ ಧರ್ಮೇ ವಿದ್ಯತೇ ಪಾರ್ಥಿವಾನಾಮ್||

ಆತ್ಮತ್ಯಾಗ, ಸರ್ವಭೂತಗಳ ಮೇಲಿನ ಅನುಕಂಪ, ಲೋಕಜ್ಞಾನ, ಪೀಡಿತರನ್ನು ಪೀಡೆಯಿಂದ ಬಿಡುಗಡೆಗೊಳಿಸುವುದು, ಇವು ಪಾರ್ಥಿವರ ಕ್ಷಾತ್ರಧರ್ಮವೆಂದು ತಿಳಿಯಲ್ಪಟ್ಟಿವೆ.

12064027a ನಿರ್ಮರ್ಯಾದಾಃ ಕಾಮಮನ್ಯುಪ್ರವೃತ್ತಾ| ಭೀತಾ ರಾಜ್ಞೋ ನಾಧಿಗಚ್ಚಂತಿ ಪಾಪಮ್|

12064027c ಶಿಷ್ಟಾಶ್ಚಾನ್ಯೇ ಸರ್ವಧರ್ಮೋಪಪನ್ನಾಃ| ಸಾಧ್ವಾಚಾರಾಃ ಸಾಧು ಧರ್ಮಂ ಚರಂತಿ||

ಮರ್ಯಾದೆಯಿಲ್ಲದಿರುವವರು ಮತ್ತು ಕಾಮ-ಕೋಪ ಪ್ರವೃತ್ತರಾದವರು ರಾಜನ ಭೀತಿಯಿಂದ ಪಾಪವನ್ನೆಸಗುವುದಿಲ್ಲ. ಅನ್ಯ ಶಿಷ್ಟಾಚಾರಿಗಳು ಸರ್ವಧರ್ಮ ಸಂಪನ್ನರಾಗಿ ಉತ್ತಮ ಆಚಾರ, ಸಾಧುಧರ್ಮಗಳನ್ನು ನಡೆಸುತ್ತಾರೆ.

12064028a ಪುತ್ರವತ್ಪರಿಪಾಲ್ಯಾನಿ ಲಿಂಗಧರ್ಮೇಣ[4] ಪಾರ್ಥಿವೈಃ|

12064028c ಲೋಕೇ ಭೂತಾನಿ ಸರ್ವಾಣಿ ವಿಚರಂತಿ ನ ಸಂಶಯಃ||

ಪಾರ್ಥಿವರು ಅವರ ಲಿಂಗಧರ್ಮದಿಂದ ಪ್ರಜೆಗಳನ್ನು ಪುತ್ರರಂತೆ ಪಾಲಿಸುತ್ತಾರೆ. ಆದುದರಿಂದಲೇ ಲೋಕದಲ್ಲಿ ಪ್ರಾಣಿಗಳೆಲ್ಲವೂ ನಿರ್ಭಯದಿಂದ ಸಂಚರಿಸುತ್ತವೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

12064029a ಸರ್ವಧರ್ಮಪರಂ ಕ್ಷತ್ರಂ ಲೋಕಜ್ಯೇಷ್ಠಂ ಸನಾತನಮ್|

12064029c ಶಶ್ವದಕ್ಷರಪರ್ಯಂತಮಕ್ಷರಂ ಸರ್ವತೋಮುಖಮ್||

ಸರ್ವಧರ್ಮಗಳಿಗೂ ಶ್ರೇಷ್ಠವಾದುದು ಕ್ಷತ್ರಿಯಧರ್ಮ. ಇದು ಲೋಕದಲ್ಲಿಯೇ ಹಿರಿಯದು. ಸನಾತನವು. ಇದು ನಿತ್ಯ, ಅವಿನಾಶಿ, ಮೋಕ್ಷದಾಯಕ ಮತ್ತು ಸರ್ವತೋಮುಖ ಧರ್ಮ.”

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ವರ್ಣಾಶ್ರಮಧರ್ಮಕಥನೇ ಚತುಃಷಷ್ಠಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ವರ್ಣಾಶ್ರಮಧರ್ಮಕಥನ ಎನ್ನುವ ಅರವತ್ನಾಲ್ಕನೇ ಅಧ್ಯಾಯವು.

[1] ನಿರಾಶಿಷೋ ಜೀವಲೋಕಾಃ ಕ್ಷತ್ರಧರ್ಮೇಽವ್ಯವಸ್ಥಿತೇ| ಎಂಬ ಪಾಠಾಂತರವಿದೆ (ಭಾರತ ದರ್ಶನ).

[2] ಅಸೈನಿಕಾ ಧರ್ಮಪರಾಶ್ಚ ಧರ್ಮೇ ಪರಾಂ ಗತಿಂ ನ ನಯಂತೇ ಹ್ಯಯುಕ್ತಮ್| ಅರ್ಥಾತ್ ಸೈನ್ಯಗಳಿಲ್ಲದ ವಾನಪ್ರಸ್ಥಾಶ್ರಮ ಧರ್ಮವನ್ನು ಅನುಸರಿಸುವ ಕ್ಷತ್ರಿಯನು ಪರಮ ಗತಿಯನ್ನು ಹೊಂದುವುದಿಲ್ಲ ಎನ್ನುವುದು ಯುಕ್ತವಲ್ಲ ಎಂಬ ಪಾಠಾಂತರವಿದೆ.

[3] ನಷ್ಟಾ ಧರ್ಮಾಃ ಶತಧಾ ಶಾಶ್ವತಾಸ್ತೇ ಕ್ಷಾತ್ರೇಣ ಧರ್ಮೇಣ ಪುನಃ ಪ್ರವೃದ್ಧಾಃ| ಅರ್ಥಾತ್ ಧರ್ಮಗಳು ನೂರಾರು ಬಾರಿ ವಿನಷ್ಟವಾಗಿವೆ. ಆದರೆ ಕ್ಷಾತ್ರಧರ್ಮದಿಂದ ಅವುಗಳ ಪುನರುದ್ಧಾರವೂ ಆಗಿದೆ ಎಂಬ ಪಾಠಾಂತರವಿದೆ.

[4] ರಾಜಧರ್ಮೇಣ ಎಂಬ ಪಾಠಾಂತರವಿದೆ.

Comments are closed.