Bhishma Parva: Chapter 27

ಭೀಷ್ಮ ಪರ್ವ:ಭಗವದ್ಗೀತಾ ಪರ್ವ

೨೭

ಕರ್ಮಸಂನ್ಯಾಸ ಯೋಗ

Image result for bhagavadgita06027001 ಅರ್ಜುನ ಉವಾಚ|

06027001a ಸಂನ್ಯಾಸಂ ಕರ್ಮಣಾಂ ಕೃಷ್ಣ ಪುನರ್ಯೋಗಂ ಚ ಶಂಸಸಿ|

06027001c ಯಚ್ಛ್ರೇಯ ಏತಯೋರೇಕಂ ತನ್ಮೇ ಬ್ರೂಹಿ ಸುನಿಶ್ಚಿತಂ||

ಅರ್ಜುನನು ಹೇಳಿದನು: “ಕೃಷ್ಣ! ಕರ್ಮಗಳ ಸಂನ್ಯಾಸವನ್ನೂ ಮತ್ತೆ ಪುನಃ ಯೋಗವನ್ನೂ ಹೊಗಳುತ್ತೀಯೆ. ಇವೆರಡರಲ್ಲಿ ಯಾವುದು ಶ್ರೇಯವೋ ಅದನ್ನು ಸುನಿಶ್ಚಿತವಾಗಿ ನನಗೆ ಹೇಳು.”

06027002 ಶ್ರೀಭಗವಾನುವಾಚ|

06027002a ಸಂನ್ಯಾಸಃ ಕರ್ಮಯೋಗಶ್ಚ ನಿಃಶ್ರೇಯಸಕರಾವುಭೌ|

06027002c ತಯೋಸ್ತು ಕರ್ಮಸಂನ್ಯಾಸಾತ್ಕರ್ಮಯೋಗೋ ವಿಶಿಷ್ಯತೇ||

ಶ್ರೀಭಗವಾನನು ಹೇಳಿದನು: “ಕರ್ಮ ಸಂನ್ಯಾಸ ಮತ್ತು ಕರ್ಮ ಯೋಗ ಇವೆರಡೂ ಶ್ರೇಯಸ್ಕರವಾದವುಗಳು. ಆದರೆ ಅವುಗಳಲ್ಲಿ ಕರ್ಮಸಂನ್ಯಾಸಕ್ಕಿಂತ ಕರ್ಮಯೋಗವೇ ಹೆಚ್ಚಿನದು.

06027003a ಜ್ಞೇಯಃ ಸ ನಿತ್ಯಸಂನ್ಯಾಸೀ ಯೋ ನ ದ್ವೇಷ್ಟಿ ನ ಕಾಂಕ್ಷತಿ|

06027003c ನಿರ್ದ್ವಂದ್ವೋ ಹಿ ಮಹಾಬಾಹೋ ಸುಖಂ ಬಂಧಾತ್ಪ್ರಮುಚ್ಯತೇ||

ಯಾರು ದ್ವೇಷಿಸುವುದಿಲ್ಲವೋ ಆಸೆಪಡುವುದಿಲ್ಲವೋ ಅವನೇ ನಿತ್ಯ ಸಂನ್ಯಾಸಿಯೆಂದು ತಿಳಿಯಬೇಕು. ಮಹಾಬಾಹೋ! ದ್ವಂದ್ವಗಳಿಲ್ಲದಿರುವವನೇ ನಿರಾಯಾಸವಾಗಿ ಬಂಧನದಿಂದ ಬಿಡುಗಡೆ ಹೊಂದುತ್ತಾನೆ.

06027004a ಸಾಂಖ್ಯಯೋಗೌ ಪೃಥಗ್ಬಾಲಾಃ ಪ್ರವದಂತಿ ನ ಪಂಡಿತಾಃ|

06027004c ಏಕಮಪ್ಯಾಸ್ಥಿತಃ ಸಮ್ಯಗುಭಯೋರ್ವಿಂದತೇ ಫಲಂ||

ಸಾಂಖ್ಯ (ಕರ್ಮಸಂನ್ಯಾಸ) ಮತ್ತು ಯೋಗ (ಕರ್ಮಯೋಗ) ಇವೆರಡೂ ಬೇರೆ ಬೇರೆಯೆಂದು ಬಾಲಕರು ಹೇಳುತ್ತಾರೆಯೇ ಹೊರತು ಪಂಡಿತರಲ್ಲ. ಇವುಗಳಲ್ಲಿ ಒಂದರಲ್ಲಿ ಸರಿಯಾಗಿ ನೆಲಸಿರುವವನು ಎರಡರ ಫಲವನ್ನೂ ಪಡೆಯುತ್ತಾನೆ.

06027005a ಯತ್ಸಾಂಖ್ಯೈಃ ಪ್ರಾಪ್ಯತೇ ಸ್ಥಾನಂ ತದ್ಯೋಗೈರಪಿ ಗಮ್ಯತೇ|

06027005c ಏಕಂ ಸಾಂಖ್ಯಂ ಚ ಯೋಗಂ ಚ ಯಃ ಪಶ್ಯತಿ ಸ ಪಶ್ಯತಿ||

ಸಾಂಖ್ಯದಿಂದ ಯಾವ ಸ್ಥಾನವು ದೊರೆಯುತ್ತದೆಯೋ ಅದೇ ಸ್ಥಾನಕ್ಕೆ ಕರ್ಮಯೋಗಿಗಳೂ ಹೋಗುತ್ತಾರೆ. ಸಾಂಖ್ಯ ಮತ್ತು ಯೋಗಗಳು ಒಂದೇ ಎಂದು ಕಂಡುಕೊಂಡಿರುವವನೇ ನಿಜವಾಗಿ ಕಂಡುಕೊಂಡವನು.

06027006a ಸಂನ್ಯಾಸಸ್ತು ಮಹಾಬಾಹೋ ದುಃಖಮಾಪ್ತುಮಯೋಗತಃ|

06027006c ಯೋಗಯುಕ್ತೋ ಮುನಿರ್ಬ್ರಹ್ಮ ನಚಿರೇಣಾಧಿಗಚ್ಛತಿ||

ಆದರೆ ಮಹಾಬಾಹೋ! ಯೋಗದಲ್ಲಿ ಇಲ್ಲದಿರುವವನಿಗೆ ಸಂನ್ಯಾಸವನ್ನು ತಲುಪುವುದು ಬಹಳ ಕಷ್ಟ. ಯೋಗಯುಕ್ತನಾದ ಮುನಿಯು ಬೇಗನೇ ಬ್ರಹ್ಮನನ್ನು ಸೇರುತ್ತಾನೆ.

06027007a ಯೋಗಯುಕ್ತೋ ವಿಶುದ್ಧಾತ್ಮಾ ವಿಜಿತಾತ್ಮಾ ಜಿತೇಂದ್ರಿಯಃ|

06027007c ಸರ್ವಭೂತಾತ್ಮಭೂತಾತ್ಮಾ ಕುರ್ವನ್ನಪಿ ನ ಲಿಪ್ಯತೇ||

ಯೋಗಯುಕ್ತನು ವಿಶುದ್ಧಾತ್ಮನಾಗಿ, ವಿಜಿತಾತ್ಮನಾಗಿ, ಜಿತೇಂದ್ರಿಯನಾಗಿ, ಸರ್ವಭೂತಾತ್ಮನೇ ಆತ್ಮನೆಂದು ಕರ್ಮಗಳನ್ನು ಮಾಡಿದರೂ ಅದು ಅವನಿಗೆ ಅಂಟಿಕೊಳ್ಳುವುದಿಲ್ಲ.

06027008a ನೈವ ಕಿಂ ಚಿತ್ಕರೋಮೀತಿ ಯುಕ್ತೋ ಮನ್ಯೇತ ತತ್ತ್ವವಿತ್|

06027008c ಪಶ್ಯಂ ಶೃಣ್ವನ್ಸ್ಪೃಶಂ ಜಿಘ್ರನ್ನಶ್ನನ್ಗಚ್ಛನ್ಸ್ವಪಂ ಶ್ವಸನ್||

06027009a ಪ್ರಲಪನ್ವಿಸೃಜನ್ಗೃಹ್ಣನ್ನುನ್ಮಿಷನ್ನಿಮಿಷನ್ನಪಿ|

06027009c ಇಂದ್ರಿಯಾಣೀಂದ್ರಿಯಾರ್ಥೇಷು ವರ್ತಂತ ಇತಿ ಧಾರಯನ್||

ಕರ್ಮಯೋಗಯುಕ್ತ ತತ್ವಜ್ಞಾನಿಯು ತಾನು ನೋಡುವಾಗ, ಕೇಳುವಾಗ, ಮುಟ್ಟುವಾಗ, ಮೂಸುವಾಗ, ತಿನ್ನುವಾಗ, ನಡೆಯುವಾಗ, ನಿದ್ರಿಸುವಾಗ, ಉಸಿರಾಡುವಾಗ, ಮಾತನಾಡುವಾಗ, ವಿಸರ್ಜಿಸುವಾಗ, ಹಿಡಿದುಕೊಳ್ಳುವಾಗ, ಕಣ್ಣು ತೆರೆಯುವಾಗ, ಮುಚ್ಚುವಾಗ ಇವು ಯಾವುದನ್ನೂ ನಾನು ಮಾಡುತ್ತಿಲ್ಲ. ಇಂದ್ರಿಯಗಳು ಇಂದ್ರಿಯ ವಿಷಯಗಳೊಂದಿಗೆ ವರ್ತಿಸುತ್ತಿವೆ ಎಂದು ತಿಳಿದಿರುತ್ತಾನೆ.

06027010a ಬ್ರಹ್ಮಣ್ಯಾಧಾಯ ಕರ್ಮಾಣಿ ಸಂಗಂ ತ್ಯಕ್ತ್ವಾ ಕರೋತಿ ಯಃ|

06027010c ಲಿಪ್ಯತೇ ನ ಸ ಪಾಪೇನ ಪದ್ಮಪತ್ರಮಿವಾಂಭಸಾ||

ಕರ್ಮಗಳನ್ನು ಬ್ರಹ್ಮನಿಗರ್ಪಿಸಿ, ಅದರ ಫಲದೊಂದಿಗಿನ ಸಂಗವನ್ನು ತೊರೆದು ಯಾರು ಕರ್ಮಗಳನ್ನು ಮಾಡುತ್ತಾನೋ ಅವನಿಗೆ ನೀರಿನಲ್ಲಿರುವ ತಾವರೆಯೆಲೆಗೆ ಹೇಗೆ ನೀರಿನ ಲೇಪವಿರುವುದಿಲ್ಲವೋ ಹಾಗೆ ಕರ್ಮಗಳು ಅಂಟಿಕೊಳ್ಳುವುದಿಲ್ಲ.

06027011a ಕಾಯೇನ ಮನಸಾ ಬುದ್ಧ್ಯಾ ಕೇವಲೈರಿಂದ್ರಿಯೈರಪಿ|

06027011c ಯೋಗಿನಃ ಕರ್ಮ ಕುರ್ವಂತಿ ಸಂಗಂ ತ್ಯಕ್ತ್ವಾತ್ಮಶುದ್ಧಯೇ||

ಕರ್ಮಯೋಗಿಗಳು ಆತ್ಮಶುದ್ಧಿಗೋಸ್ಕರ ಫಲದ ಸಂಗವನ್ನು ತ್ಯಜಿಸಿ ಪ್ರತ್ಯೇಕವಾಗಿ ಶರೀರ, ಮನಸ್ಸು, ಬುದ್ಧಿ ಮತ್ತು ಇಂದ್ರಿಯಗಳ ಮೂಲಕ ಕರ್ಮವನ್ನು ಮಾಡುತ್ತಾರೆ.

06027012a ಯುಕ್ತಃ ಕರ್ಮಫಲಂ ತ್ಯಕ್ತ್ವಾ ಶಾಂತಿಮಾಪ್ನೋತಿ ನೈಷ್ಠಿಕೀಂ|

06027012c ಅಯುಕ್ತಃ ಕಾಮಕಾರೇಣ ಫಲೇ ಸಕ್ತೋ ನಿಬಧ್ಯತೇ||

ಕರ್ಮಯೋಗದಲ್ಲಿ ತೊಡಗಿರುವವನು ಕರ್ಮಫಲವನ್ನು ತ್ಯಜಿಸಿ ನಿಷ್ಠೆಯ ಶಾಂತಿಯನ್ನು ಹೊಂದುತ್ತಾನೆ. ಹೀಗೆ ಕರ್ಮಯೋಗದಲ್ಲಿ ತೊಡಗಿಲ್ಲದಿರುವವನು ಕಾಮಕಾರದಿಂದ ಫಲದಲ್ಲಿ ಆಸಕ್ತನಾಗಿ ಕಟ್ಟುಬೀಳುತ್ತಾನೆ.

06027013a ಸರ್ವಕರ್ಮಾಣಿ ಮನಸಾ ಸಂನ್ಯಸ್ಯಾಸ್ತೇ ಸುಖಂ ವಶೀ|

06027013c ನವದ್ವಾರೇ ಪುರೇ ದೇಹೀ ನೈವ ಕುರ್ವನ್ನ ಕಾರಯನ್||

ಕರ್ಮಯೋಗಿಯು ಸರ್ವ ಕರ್ಮಗಳನ್ನು ಮನಸ್ಸಿನಿಂದ ಸಂನ್ಯಾಸಮಾಡಿ ಇಂದ್ರಿಯಗಳನ್ನು ಗೆದ್ದು ನವದ್ವಾರಗಳ ಪುರ ದೇಹದಲ್ಲಿ ಏನನ್ನೂ ಮಾಡದೆಯೂ ಮಾಡಿಸದೆಯೂ ಸುಖವಾಗಿ ನೆಲೆಸಿರುತ್ತಾನೆ.

06027014a ನ ಕರ್ತೃತ್ವಂ ನ ಕರ್ಮಾಣಿ ಲೋಕಸ್ಯ ಸೃಜತಿ ಪ್ರಭುಃ|

06027014c ನ ಕರ್ಮಫಲಸಂಯೋಗಂ ಸ್ವಭಾವಸ್ತು ಪ್ರವರ್ತತೇ||

ಪ್ರಭುವು ಲೋಕದಲ್ಲಿ ಕತೃತ್ವವನ್ನೂ, ಕರ್ಮಗಳನ್ನೂ ಮತ್ತು ಕರ್ಮಫಲಸಂಯೋಗವನ್ನೂ ಸೃಷ್ಟಿಸಿಲ್ಲ. ಇವು ಸ್ವಭಾವತಃ ನಡೆಯುತ್ತವೆ.

06027015a ನಾದತ್ತೇ ಕಸ್ಯ ಚಿತ್ಪಾಪಂ ನ ಚೈವ ಸುಕೃತಂ ವಿಭುಃ|

06027015c ಅಜ್ಞಾನೇನಾವೃತಂ ಜ್ಞಾನಂ ತೇನ ಮುಹ್ಯಂತಿ ಜಂತವಃ||

ವಿಭುವು ಯಾರಿಗೂ ಪಾಪವನ್ನಾಗಲೀ ಪುಣ್ಯವನ್ನಾಗಲೀ ಕೊಡುವುದಿಲ್ಲ. ಅಜ್ಞಾನದಿಂದ ಆವೃತವಾದ ಜ್ಞಾನದಿಂದಲೇ ಜೀವಿಗಳು ಮೋಹಿತರಾಗುತ್ತಾರೆ.

06027016a ಜ್ಞಾನೇನ ತು ತದಜ್ಞಾನಂ ಯೇಷಾಂ ನಾಶಿತಮಾತ್ಮನಃ|

06027016c ತೇಷಾಮಾದಿತ್ಯವಜ್ಜ್ಞಾನಂ ಪ್ರಕಾಶಯತಿ ತತ್ಪರಂ||

ಯಾರ ಆತ್ಮನ ಕುರಿತಾದ ಅಜ್ಞಾನವನ್ನು ಜ್ಞಾನವು ನಾಶಗೊಳಿಸುತ್ತದೆಯೋ ಅವರಿಗೆ ಆದಿತ್ಯನಂತೆ ಆ ಪರಮ ಜ್ಞಾನವು ಹೊಳೆಯುತ್ತದೆ.

06027017a ತದ್ಬುದ್ಧಯಸ್ತದಾತ್ಮಾನಸ್ತನ್ನಿಷ್ಠಾಸ್ತತ್ಪರಾಯಣಾಃ|

06027017c ಗಚ್ಛಂತ್ಯಪುನರಾವೃತ್ತಿಂ ಜ್ಞಾನನಿರ್ಧೂತಕಲ್ಮಷಾಃ||

ಆ ಬ್ರಹ್ಮನಲ್ಲಿಯೇ ಬುದ್ಧಿಯನ್ನಿಟ್ಟಿರುವ, ಅವನಲ್ಲಿಯೇ ಆತ್ಮವನ್ನಿಟ್ಟುರುವ, ಅವನಲ್ಲಿಯೇ ನಿಷ್ಠೆಯನ್ನಿಟ್ಟಿರುವ, ಅವನದೇ ಪರಾಯಣರಾಗಿರುವವರು ಜ್ಞಾನದಿಂದ ಕಲ್ಮಷಗಳನ್ನೆಲ್ಲ ತೊಳೆದುಕೊಂಡು ಅಪುನಾವೃತ್ತಿಯನ್ನು ಹೊಂದುತ್ತಾರೆ.

06027018a ವಿದ್ಯಾವಿನಯಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ|

06027018c ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ||

ಪಂಡಿತರು ವಿದ್ಯಾವಿನಯಸಂಪನ್ನ ಬ್ರಾಹ್ಮಣರಲ್ಲಿ, ಗೋವುಗಳಲ್ಲಿ, ಆನೆಗಳಲ್ಲಿ, ನಾಯಿಗಳಲ್ಲಿ ಮತ್ತು ಚಾಂಡಾಲರಲ್ಲಿ ಒಂದನ್ನೇ ಕಾಣುತ್ತಾರೆ.

06027019a ಇಹೈವ ತೈರ್ಜಿತಃ ಸರ್ಗೋ ಯೇಷಾಂ ಸಾಮ್ಯೇ ಸ್ಥಿತಂ ಮನಃ|

06027019c ನಿರ್ದೋಷಂ ಹಿ ಸಮಂ ಬ್ರಹ್ಮ ತಸ್ಮಾದ್ಬ್ರಹ್ಮಣಿ ತೇ ಸ್ಥಿತಾಃ||

ಯಾರ ಮನಸ್ಸು ಸಾಮ್ಯದಲ್ಲಿ ಸ್ಥಿತವಾಗಿರುತ್ತದೆಯೋ ಅವರು ಇಲ್ಲಿಯೇ ಸ್ವರ್ಗವನ್ನು ಗೆಲ್ಲುವರು. ಏಕೆಂದರೆ ದೋಷಗಳಿಲ್ಲದ ಬ್ರಹ್ಮನೂ ಸಮನೇ. ಆದುದರಿಂದ ಸಾಮ್ಯದಲ್ಲಿರುವವರು ಬ್ರಹ್ಮನಲ್ಲಿ ಸ್ಥಿತರಾಗಿದ್ದಂತೆ.

06027020a ನ ಪ್ರಹೃಷ್ಯೇತ್ಪ್ರಿಯಂ ಪ್ರಾಪ್ಯ ನೋದ್ವಿಜೇತ್ಪ್ರಾಪ್ಯ ಚಾಪ್ರಿಯಂ|

06027020c ಸ್ಥಿರಬುದ್ಧಿರಸಮ್ಮೂಢೋ ಬ್ರಹ್ಮವಿದ್ಬ್ರಹ್ಮಣಿ ಸ್ಥಿತಃ||

ಪ್ರಿಯವಾದುದನ್ನು ಪಡೆದು ಹರ್ಷಿಸದ, ಅಪ್ರಿಯವಾದುದನ್ನು ಪಡೆದು ದುಃಖಿಸದ, ಸ್ಥಿರಬುದ್ಧಿಯ, ಅಸಮ್ಮೂಢ, ಬ್ರಹ್ಮವಿದುವು ಬ್ರಹ್ಮನಲ್ಲಿ ಸ್ಥಿತನಾಗಿರುತ್ತಾನೆ.

06027021a ಬಾಹ್ಯಸ್ಪರ್ಶೇಷ್ವಸಕ್ತಾತ್ಮಾ ವಿಂದತ್ಯಾತ್ಮನಿ ಯತ್ಸುಖಂ|

06027021c ಸ ಬ್ರಹ್ಮಯೋಗಯುಕ್ತಾತ್ಮಾ ಸುಖಮಕ್ಷಯಮಶ್ನುತೇ||

ಬಾಹ್ಯಸ್ಪರ್ಷಗಳಲ್ಲಿ ಅನಾಸಕ್ತನಾಗಿ, ಆತ್ಮವನ್ನು ತಿಳಿದುಕೊಂಡು ಆತ್ಮನಲ್ಲಿಯೇ ಸುಖವನ್ನು ಪಡೆದುಕೊಳ್ಳುವ ಬ್ರಹ್ಮಯೋಗಯುಕ್ತಾತ್ಮನು ಅಕ್ಷಯ ಸುಖವನ್ನು ಪಡೆಯುತ್ತಾನೆ.

06027022a ಯೇ ಹಿ ಸಂಸ್ಪರ್ಶಜಾ ಭೋಗಾ ದುಃಖಯೋನಯ ಏವ ತೇ|

06027022c ಆದ್ಯಂತವಂತಃ ಕೌಂತೇಯ ನ ತೇಷು ರಮತೇ ಬುಧಃ||

ಕೌಂತೇಯ! ಏಕೆಂದರೆ ಸಂಸ್ಪರ್ಷದಿಂದ ಹುಟ್ಟುವ ಭೋಗಗಳು ದುಃಖವನ್ನೂ ಹುಟ್ಟಿಸುವವು. ಪ್ರಾರಂಭ ಮತ್ತು ಕೊನೆಗೊಳ್ಳುವ ಅವುಗಳಲ್ಲಿ ತಿಳಿದವರು ಸಂತೋಷಪಡುವುದಿಲ್ಲ.

06027023a ಶಕ್ನೋತೀಹೈವ ಯಃ ಸೋಢುಂ ಪ್ರಾಕ್ಶರೀರವಿಮೋಕ್ಷಣಾತ್|

06027023c ಕಾಮಕ್ರೋಧೋದ್ಭವಂ ವೇಗಂ ಸ ಯುಕ್ತಃ ಸ ಸುಖೀ ನರಃ||

ಶರೀರವನ್ನು ಬಿಡುವ (ಸಾಯುವ) ಮೊದಲೇ ಕಾಮ-ಕ್ರೋಧಗಳಿಂದ ಹುಟ್ಟುವ ವೇಗವನ್ನು ಇಲ್ಲಿಯೇ (ಬದುಕಿರುವಾಗಲೇ) ಸಹಿಸಿಕೊಳ್ಳಲು ಶಕ್ತನಾದವನು ಯುಕ್ತ. ಆ ನರನು ಸುಖಿಯು.

06027024a ಯೋಽಂತಃಸುಖೋಽಂತರಾರಾಮಸ್ತಥಾಂತರ್ಜ್ಯೋತಿರೇವ ಯಃ|

06027024c ಸ ಯೋಗೀ ಬ್ರಹ್ಮನಿರ್ವಾಣಂ ಬ್ರಹ್ಮಭೂತೋಽಧಿಗಚ್ಛತಿ||

ಯಾರು ಒಳಗಿನಿಂದ ಸುಖಿಯಾಗಿರುವನೋ, ಒಳಗಿನಿಂದ ಆರಾಮಾಗಿರುವನೋ, ಒಳಗಿನ ಬೆಳಕನ್ನು ಹೊಂದಿರುವನೋ ಆ ಯೋಗಿಯು ಬ್ರಹ್ಮಭೂತನಾಗಿ ಬ್ರಹ್ಮನಿರ್ವಾಣವನ್ನು ಪಡೆಯುತ್ತಾನೆ.

06027025a ಲಭಂತೇ ಬ್ರಹ್ಮನಿರ್ವಾಣಂ ಋಷಯಃ ಕ್ಷೀಣಕಲ್ಮಷಾಃ|

06027025c ಚಿನ್ನದ್ವೈಧಾ ಯತಾತ್ಮಾನಃ ಸರ್ವಭೂತಹಿತೇ ರತಾಃ||

ಕಲ್ಮಷಗಳನ್ನು ಕಳೆದುಕೊಂಡಿರುವ, ಸಂಶಯ-ದ್ವಂದ್ವಗಳನ್ನು ಕಳೆದುಕೊಂಡಿರುವ, ಇಂದ್ರಿಯಗಳನ್ನು ನಿಗ್ರಹಿಸಿಕೊಂಡಿರುವ, ಇರುವ ಎಲ್ಲವುಗಳ ಹಿತದಲ್ಲಿ ಆಸಕ್ತನಾಗಿರುವ ಋಷಿಗಳು ಬ್ರಹ್ಮನಿರ್ವಾಣವನ್ನು ಹೊಂದುತ್ತಾರೆ.

06027026a ಕಾಮಕ್ರೋಧವಿಯುಕ್ತಾನಾಂ ಯತೀನಾಂ ಯತಚೇತಸಾಂ|

06027026c ಅಭಿತೋ ಬ್ರಹ್ಮನಿರ್ವಾಣಂ ವರ್ತತೇ ವಿದಿತಾತ್ಮನಾಂ||

ಕಾಮಕ್ರೋಧಗಳನ್ನು ತೊರೆದ, ಚೇತಸವನ್ನು ನಿಯಂತ್ರಿಸಿಕೊಂಡು ಸಂಯತಾಂತಃಕರಣರಾದ, ಆತ್ಮವನ್ನು ಅರಿತುಕೊಂಡ ಯತಿ ಸಂನ್ಯಾಸಿಗಳಿಗೆ ಜೀವ ಮತ್ತು ಮೃತ್ಯು ಎರಡರಲ್ಲಿಯೂ ಬ್ರಹ್ಮನಿರ್ವಾಣವಾಗುತ್ತದೆ.

06027027a ಸ್ಪರ್ಶಾನ್ಕೃತ್ವಾ ಬಹಿರ್ಬಾಹ್ಯಾಂಶ್ಚಕ್ಷುಶ್ಚೈವಾಂತರೇ ಭ್ರುವೋಃ|

06027027c ಪ್ರಾಣಾಪಾನೌ ಸಮೌ ಕೃತ್ವಾ ನಾಸಾಭ್ಯಂತರಚಾರಿಣೌ||

06027028a ಯತೇಂದ್ರಿಯಮನೋಬುದ್ಧಿರ್ಮುನಿರ್ಮೋಕ್ಷಪರಾಯಣಃ|

06027028c ವಿಗತೇಚ್ಛಾಭಯಕ್ರೋಧೋ ಯಃ ಸದಾ ಮುಕ್ತ ಏವ ಸಃ||

ಹೊರಗಿನ ಸ್ಪರ್ಷ ಮೊದಲಾದವುಗಳನ್ನು ಹೊರಗೆ ಹಾಕಿ, ದೃಷ್ಟಿಯನ್ನು ಹುಬ್ಬುಗಳ ನಡುವೆ ಇರಿಸಿ, ಮೂಗಿನ ಒಳ ಮತ್ತು ಹೊರ ಸಂಚರಿಸುವ ಪ್ರಾಣ-ಅಪಾನಗಳನ್ನು ಸಮನಾಗಿ ಮಾಡಿಕೊಂಡು, ಇಂದ್ರಿಯಗಳು-ಮನಸ್ಸು-ಬುದ್ಧಿಗಳನ್ನು ನಿಯಂತ್ರಿಸಿಕೊಂಡು, ಮೋಕ್ಷಪರಾಯಣನಾಗಿ, ಇಚ್ಛೆ-ಭಯ-ಕ್ರೋಧಗಳನ್ನು ಇಲ್ಲವಾಗಿಸಿಕೊಂಡು ಸದಾ ಯಾರಿರುತ್ತಾರೋ ಅವರೇ ಮುಕ್ತರು.

06027029a ಭೋಕ್ತಾರಂ ಯಜ್ಞತಪಸಾಂ ಸರ್ವಲೋಕಮಹೇಶ್ವರಂ|

06027029c ಸುಹೃದಂ ಸರ್ವಭೂತಾನಾಂ ಜ್ಞಾತ್ವಾ ಮಾಂ ಶಾಂತಿಮೃಚ್ಛತಿ||

ನಾನು ಯಜ್ಞ-ತಪಸ್ಸುಗಳ ಭೋಕ್ತಾರ, ಸರ್ವಲೋಕಗಳ ಮಹೇಶ್ವರ, ಸರ್ವಭೂತಗಳ ಸುಹೃದ ಎಂದು ತಿಳಿದು ಶಾಂತಿಯನ್ನು ಹೊಂದುತ್ತಾನೆ."

ಇತಿ ಶ್ರೀ ಮಹಾಭಾರತೇ ಭೀಷ್ಮಪರ್ವಣಿ ಭಗವದ್ಗೀತಾಪರ್ವಣಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ಕರ್ಮಸಂನ್ಯಾಸಯೋಗೋ ನಾಮ ಪಂಚಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮಪರ್ವದಲ್ಲಿ ಭಗವದ್ಗೀತಾಪರ್ವದಲ್ಲಿ ಶ್ರೀಮದ್ಭಗವದ್ಗೀತಾ ಉಪನಿಷತ್ತಿನಲ್ಲಿ ಬ್ರಹ್ಮವಿದ್ಯೆಯ ಯೋಗಶಾಸ್ತ್ರದಲ್ಲಿ ಶ್ರೀಕೃಷ್ಣಾರ್ಜುನಸಂವಾದದಲ್ಲಿ ಕರ್ಮಸಂನ್ಯಾಸಯೋಗವೆಂಬ ಐದನೇ ಅಧ್ಯಾಯವು.

ಭೀಷ್ಮಪರ್ವಣಿ ಸಪ್ತವಿಂಶೋಽಧ್ಯಾಯಃ||

ಭೀಷ್ಮಪರ್ವದಲ್ಲಿ ಇಪ್ಪತ್ತೇಳನೇ ಅಧ್ಯಾಯವು.

Related image

Comments are closed.