Ashramavasika Parva: Chapter 47

ಆಶ್ರಮವಾಸಿಕ ಪರ್ವ: ನಾರದಾಗಮನ ಪರ್ವ

೪೭

ಧೃತರಾಷ್ಟ್ರ ಶ್ರಾದ್ಧ ಕರಣ

ಯುಧಿಷ್ಠಿರನನ್ನು ನಾರದನು ಸಮಾಧಾನಗೊಳಿಸಿದುದು (೧-೯). ಧೃತರಾಷ್ಟ್ರ-ಗಾಂಧಾರೀ-ಕುಂತಿಯರ ಶ್ರಾದ್ಧಕರಣ (೧೦-೨೭).

15047001 ನಾರದ ಉವಾಚ|

15047001a ನಾಸೌ ವೃಥಾಗ್ನಿನಾ ದಗ್ಧೋ ಯಥಾ ತತ್ರ ಶ್ರುತಂ ಮಯಾ|

15047001c ವೈಚಿತ್ರವೀರ್ಯೋ ನೃಪತಿಸ್ತತ್ತೇ ವಕ್ಷ್ಯಾಮಿ ಭಾರತ||

ನಾರದನು ಹೇಳಿದನು: "ಭಾರತ! ನೃಪತಿ ವೈಚಿತ್ರವೀರ್ಯನು ಅಲ್ಲಿ ವೃಥಾ ಕಾಡ್ಗಿಚ್ಚಿನಲ್ಲಿ ಸುಟ್ಟುಹೋಗಲಿಲ್ಲ. ಅಲ್ಲಿ ನಾನು ಕೇಳಿದುದನ್ನು ಹೇಳುತ್ತೇನೆ. ಕೇಳು.

15047002a ವನಂ ಪ್ರವಿಶತಾ ತೇನ ವಾಯುಭಕ್ಷೇಣ ಧೀಮತಾ|

15047002c ಅಗ್ನಯಃ ಕಾರಯಿತ್ವೇಷ್ಟಿಮುತ್ಸೃಷ್ಟಾ ಇತಿ ನಃ ಶ್ರುತಮ್||

ವಾಯುವನ್ನೇ ಆಹಾರವನ್ನಾಗಿ ಸೇವಿಸುತ್ತಿದ್ದ ಆ ಧೀಮತ ಧೃತರಾಷ್ಟ್ರನು ವನವನ್ನು ಪ್ರವೇಶಿಸುವಾಗ ತನ್ನ ಅಗ್ನಿಯಲ್ಲಿ ಇಷ್ಟಿಯನ್ನು ಮಾಡಿಸಿ ವಿಸರ್ಜಿಸಿದನೆಂದು ನಾನು ಕೇಳಿದ್ದೇನೆ.

15047003a ಯಾಜಕಾಸ್ತು ತತಸ್ತಸ್ಯ ತಾನಗ್ನೀನ್ನಿರ್ಜನೇ ವನೇ|

15047003c ಸಮುತ್ಸೃಜ್ಯ ಯಥಾಕಾಮಂ ಜಗ್ಮುರ್ಭರತಸತ್ತಮ||

ಭರತಸತ್ತಮ! ಯಾಜಕರು ಆ ಅಗ್ನಿಯನ್ನು ನಿರ್ಜನ ವನದಲ್ಲಿ ವಿಸರ್ಜಿಸಿ, ಇಷ್ಟಬಂದಲ್ಲಿಗೆ ಹೊರಟುಹೋಗಿದ್ದರು.

15047004a ಸ ವಿವೃದ್ಧಸ್ತದಾ ವಹ್ನಿರ್ವನೇ ತಸ್ಮಿನ್ನಭೂತ್ಕಿಲ|

15047004c ತೇನ ತದ್ವನಮಾದೀಪ್ತಮಿತಿ ಮೇ ತಾಪಸಾಬ್ರುವನ್||

ಅದೇ ಅಗ್ನಿಯು ಆಗ ಗಾಳಿಗೆ ಸಿಲುಕಿ ಕಾಡ್ಗಿಚ್ಚಾಗಿ ಆ ವನದಲ್ಲಿ ಪಸರಿಸಿಕೊಂಡಿತು ಎಂದು ನನಗೆ ತಾಪಸರು ಹೇಳಿದರು.

15047005a ಸ ರಾಜಾ ಜಾಹ್ನವೀಕಚ್ಚೇ ಯಥಾ ತೇ ಕಥಿತಂ ಮಯಾ|

15047005c ತೇನಾಗ್ನಿನಾ ಸಮಾಯುಕ್ತಃ ಸ್ವೇನೈವ ಭರತರ್ಷಭ||

ಭರತರ್ಷಭ! ನಾನು ಈ ಮೊದಲೇ ಹೇಳಿದಂತೆ ಜಾಹ್ನವೀ ತೀರದಲ್ಲಿ ರಾಜಾ ಧೃತರಾಷ್ಟ್ರನು ಸ್ವ-ಇಚ್ಛೆಯಿಂದ ಅದೇ ಅಗ್ನಿಯಲ್ಲಿ ಸಮಾಯುಕ್ತನಾದನು.

15047006a ಏವಮಾವೇದಯಾಮಾಸುರ್ಮುನಯಸ್ತೇ ಮಮಾನಘ|

15047006c ಯೇ ತೇ ಭಾಗೀರಥೀತೀರೇ ಮಯಾ ದೃಷ್ಟಾ ಯುಧಿಷ್ಠಿರ||

ಅನಘ! ಯುಧಿಷ್ಠಿರ! ಹೀಗೆ ಭಾಗೀರಥೀ ತೀರದಲ್ಲಿ ನಾನು ಕಂಡ ಮುನಿಗಳು ನನ್ನಲ್ಲಿ ಹೇಳಿಕೊಂಡರು.

15047007a ಏವಂ ಸ್ವೇನಾಗ್ನಿನಾ ರಾಜಾ ಸಮಾಯುಕ್ತೋ ಮಹೀಪತೇ|

15047007c ಮಾ ಶೋಚಿಥಾಸ್ತ್ವಂ ನೃಪತಿಂ ಗತಃ ಸ ಪರಮಾಂ ಗತಿಮ್||

ಮಹೀಪತೇ! ಹೀಗೆ ರಾಜಾ ಧೃತರಾಷ್ಟ್ರನು ತನ್ನದೇ ಅಗ್ನಿಯಲ್ಲಿ ಸಮಾಯುಕ್ತನಾದನು. ರಾಜನು ಪರಮ ಗತಿಯನ್ನು ಹೊಂದಿದ್ದಾನೆ. ಅದರ ಕುರಿತು ನೀನು ಶೋಕಿಸಬೇಡ!

15047008a ಗುರುಶುಶ್ರೂಷಯಾ ಚೈವ ಜನನೀ ತವ ಪಾಂಡವ|

15047008c ಪ್ರಾಪ್ತಾ ಸುಮಹತೀಂ ಸಿದ್ಧಿಮಿತಿ ಮೇ ನಾತ್ರ ಸಂಶಯಃ||

ಪಾಂಡವ! ನಿನ್ನ ಜನನಿಯೂ ಕೂಡ ಗುರುಶುಶ್ರೂಷೆಗಳಿಂದ ಮಹಾ ಸಿದ್ಧಿಯನ್ನೇ ಪಡೆದಿದ್ದಾಳೆ ಎನ್ನುವುದರಲ್ಲಿ ನನಗೆ ಸಂಶಯವಿಲ್ಲ.

15047009a ಕರ್ತುಮರ್ಹಸಿ ಕೌರವ್ಯ ತೇಷಾಂ ತ್ವಮುದಕಕ್ರಿಯಾಮ್|

15047009c ಭ್ರಾತೃಭಿಃ ಸಹಿತಃ ಸರ್ವೈರೇತದತ್ರ ವಿಧೀಯತಾಮ್||

ಕೌರವ್ಯ! ಸಹೋದರರೊಡಗೂಡಿ ನೀನು ಅವರೆಲ್ಲರ ಉದಕಕ್ರಿಯೆಗಳನ್ನು ಮಾಡಬೇಕಾಗಿದೆ. ಇದನ್ನು ಈಗಲೇ ಮಾಡುವವನಾಗು!""

15047010 ವೈಶಂಪಾಯನ ಉವಾಚ|

15047010a ತತಃ ಸ ಪೃಥಿವೀಪಾಲಃ ಪಾಂಡವಾನಾಂ ಧುರಂಧರಃ|

15047010c ನಿರ್ಯಯೌ ಸಹ ಸೋದರ್ಯೈಃ ಸದಾರೋ ಭರತರ್ಷಭ||

ವೈಶಂಪಾಯನನು ಹೇಳಿದನು: "ಭರತರ್ಷಭ! ಆಗ ಪಾಂಡವರ ಧುರಂಧರ ಪೃಥಿವೀಪಾಲ ಯುಧಿಷ್ಠಿರನು ತನ್ನ ಸಹೋದರರೊಂದಿಗೆ ಹಸ್ತಿನಾಪುರದ ಹೊರ ಹೊರಟನು.

15047011a ಪೌರಜಾನಪದಾಶ್ಚೈವ ರಾಜಭಕ್ತಿಪುರಸ್ಕೃತಾಃ|

15047011c ಗಂಗಾಂ ಪ್ರಜಗ್ಮುರಭಿತೋ ವಾಸಸೈಕೇನ ಸಂವೃತಾಃ||

ರಾಜಭಕ್ತಿಯಿಂದ ಪ್ರೇರಿತರಾದ ಗ್ರಾಮೀಣ-ಪೌರ ಜನರೂ ಕೂಡ ಒಂದೇ ವಸ್ತ್ರವನ್ನು ಸುತ್ತಿಕೊಂಡು ಗಂಗೆಯ ಮುಖವಾಗಿ ಹೊರಟರು.

15047012a ತತೋಽವಗಾಹ್ಯ ಸಲಿಲಂ ಸರ್ವೇ ತೇ ಕುರುಪುಂಗವಾಃ|

15047012c ಯುಯುತ್ಸುಮಗ್ರತಃ ಕೃತ್ವಾ ದದುಸ್ತೋಯಂ ಮಹಾತ್ಮನೇ||

ಆ ಕುರುಪುಂಗವರೆಲ್ಲರೂ ನದಿಯನ್ನು ಸೇರಿ ಯುಯುತ್ಸುವನ್ನು ಮುಂದೆಮಾಡಿಕೊಂಡು ಮಹಾತ್ಮ ಧೃತರಾಷ್ಟ್ರನಿಗೆ ತರ್ಪಣವನ್ನಿತ್ತರು.

15047013a ಗಾಂಧಾರ್ಯಾಶ್ಚ ಪೃಥಾಯಾಶ್ಚ ವಿಧಿವನ್ನಾಮಗೋತ್ರತಃ|

15047013c ಶೌಚಂ ನಿವರ್ತಯಂತಸ್ತೇ ತತ್ರೋಷುರ್ನಗರಾದ್ ಬಹಿಃ||

ವಿಧಿವತ್ತಾಗಿ ನಾಮ-ಗೋತ್ರಗಳನ್ನು ಹೇಳಿಕೊಂಡು ಗಾಂಧಾರಿಗೂ ಪೃಥೆಗೂ ತರ್ಪಣಗಳನ್ನಿತ್ತರು. ಶೌಚಕಾರ್ಯದಲ್ಲಿ ನಿರತರಾಗಿ ಅವರು ನಗರದ ಹೊರಗಡೆಯೇ ಉಳಿದುಕೊಂಡರು.

15047014a ಪ್ರೇಷಯಾಮಾಸ ಸ ನರಾನ್ವಿಧಿಜ್ಞಾನಾಪ್ತಕಾರಿಣಃ|

15047014c ಗಂಗಾದ್ವಾರಂ ಕುರುಶ್ರೇಷ್ಠೋ ಯತ್ರ ದಗ್ಧೋಽಭವನ್ನೃಪಃ||

ಅನಂತರ ನೃಪನು ವಿಧಿವಿಧಾನಗಳನ್ನು ತಿಳಿದಿದ್ದ ಆಪ್ತರನ್ನು ಕುರುಶ್ರೇಷ್ಠ ಧೃತರಾಷ್ಟ್ರನು ಸುಟ್ಟುಹೋಗಿದ್ದ ಗಂಗಾದ್ವಾರದ ಸ್ಥಳಕ್ಕೆ ಕಳುಹಿಸಿಕೊಟ್ಟನು.

15047015a ತತ್ರೈವ ತೇಷಾಂ ಕುಲ್ಯಾನಿ ಗಂಗಾದ್ವಾರೇಽನ್ವಶಾತ್ತದಾ|

15047015c ಕರ್ತವ್ಯಾನೀತಿ ಪುರುಷಾನ್ದತ್ತದೇಯಾನ್ಮಹೀಪತಿಃ||

ಅಲ್ಲಿಯೇ ಗಂಗಾದ್ವಾರದಲ್ಲಿ ಅವರ ಅಪರಕ್ರಿಯೆಗಳನ್ನು ಮಾಡಲು ಶಾಸನವನ್ನಿತ್ತನು. ಮಹೀಪತಿಯು ಆ ಪುರುಷರಿಗೆ ದಾನನೀಡಲು ಪದಾರ್ಥಗಳನ್ನಿತ್ತನು.

15047016a ದ್ವಾದಶೇಽಹನಿ ತೇಭ್ಯಃ ಸ ಕೃತಶೌಚೋ ನರಾಧಿಪಃ|

15047016c ದದೌ ಶ್ರಾದ್ಧಾನಿ ವಿಧಿವದ್ದಕ್ಷಿಣಾವಂತಿ ಪಾಂಡವಃ||

ಹನ್ನೆರಡನೆಯ ದಿನ ಅವರ ಶೌಚಕರ್ಮಗಳನ್ನೂ ಶ್ರಾದ್ಧಗಳನ್ನೂ ಮುಗಿಸಿ ಪಾಂಡವ ನರಾಧಿಪನು ವಿಧಿವತ್ತಾಗಿ ದಕ್ಷಿಣೆಗಳನ್ನಿತ್ತನು.

15047017a ಧೃತರಾಷ್ಟ್ರಂ ಸಮುದ್ದಿಶ್ಯ ದದೌ ಸ ಪೃಥಿವೀಪತಿಃ|

15047017c ಸುವರ್ಣಂ ರಜತಂ ಗಾಶ್ಚ ಶಯ್ಯಾಶ್ಚ ಸುಮಹಾಧನಾಃ||

15047018a ಗಾಂಧಾರ್ಯಾಶ್ಚೈವ ತೇಜಸ್ವೀ ಪೃಥಾಯಾಶ್ಚ ಪೃಥಕ್ ಪೃಥಕ್|

15047018c ಸಂಕೀರ್ತ್ಯ ನಾಮನೀ ರಾಜಾ ದದೌ ದಾನಮನುತ್ತಮಮ್||

ತೇಜಸ್ವೀ ರಾಜಾ ಪೃಥಿವೀಪತಿಯು ಧೃತರಾಷ್ಟ್ರ, ಗಾಂಧಾರೀ ಮತ್ತು ಪೃಥೆಯರನ್ನು ಪ್ರತ್ಯೇಕ-ಪ್ರತ್ಯೇಕವಾಗಿ ಉದ್ದೇಶಿಸಿ ಅವರವರ ಹೆಸರುಗಳನ್ನು ಹೇಳಿಕೊಳ್ಳುತ್ತಾ ಚಿನ್ನ, ಬೆಳ್ಳಿ, ಹಾಸಿಗೆಗಳು ಮತ್ತು ಅನುತ್ತಮ ಮಹಾಧನವನ್ನು ದಾನವನ್ನಾಗಿತ್ತನು.

15047019a ಯೋ ಯದಿಚ್ಚತಿ ಯಾವಚ್ಚ ತಾವತ್ಸ ಲಭತೇ ದ್ವಿಜಃ|

15047019c ಶಯನಂ ಭೋಜನಂ ಯಾನಂ ಮಣಿರತ್ನಮಥೋ ಧನಮ್||

15047020a ಯಾನಮಾಚ್ಚಾದನಂ ಭೋಗಾನ್ದಾಸೀಶ್ಚ ಪರಿಚಾರಿಕಾಃ|

15047020c ದದೌ ರಾಜಾ ಸಮುದ್ದಿಶ್ಯ ತಯೋರ್ಮಾತ್ರೋರ್ಮಹೀಪತಿಃ||

ಯಾವ ದ್ವಿಜನು ಏನನ್ನು ಬಯಸಿದನೋ ಅವನ್ನು - ಶಯನ, ಭೋಜನ, ವಾಹನ, ಮಣಿ-ರತ್ನ-ಧನ, ಹೊದಿಕೆಗಳು, ಭೋಗಗಳು, ದಾಸೀ-ಪರಿಚಾರಕರು - ಇವನ್ನು ರಾಜ ಮಹೀಪತಿಯು ತನ್ನ ಇಬ್ಬರು ತಾಯಿಯರ ಸಲುವಾಗಿ ದಾನಮಾಡಿದನು.

15047021a ತತಃ ಸ ಪೃಥಿವೀಪಾಲೋ ದತ್ತ್ವಾ ಶ್ರಾದ್ಧಾನ್ಯನೇಕಶಃ|

15047021c ಪ್ರವಿವೇಶ ಪುನರ್ಧೀಮಾನ್ನಗರಂ ವಾರಣಾಹ್ವಯಮ್||

ಧೀಮಾನ್ ಪೃಥಿವೀಪಾಲನು ಅನೇಕ ಶ್ರಾದ್ಧ-ದಾನಗಳನ್ನು ಮಾಡಿ ಪುನಃ ಹಸ್ತಿನಾಪುರ ನಗರವನ್ನು ಪ್ರವೇಶಿಸಿದನು.

15047022a ತೇ ಚಾಪಿ ರಾಜವಚನಾತ್ಪುರುಷಾ ಯೇ ಗತಾಭವನ್|

15047022c ಸಂಕಲ್ಪ್ಯ ತೇಷಾಂ ಕುಲ್ಯಾನಿ ಪುನಃ ಪ್ರತ್ಯಾಗಮಂಸ್ತತಃ||

ರಾಜನ ವಚನದಂತೆ ಹೋಗಿದ್ದ ಪುರುಷರು ಧೃತರಾಷ್ಟ್ರ-ಗಾಂಧಾರೀ-ಕುಂತಿಯರ ಅಸ್ಥಿಗಳನ್ನು ಸಂಗ್ರಹಿಸಿಕೊಂಡು ಪುನಃ ಅಲ್ಲಿಗೆ ಆಗಮಿಸಿದರು.

15047023a ಮಾಲ್ಯೈರ್ಗಂಧೈಶ್ಚ ವಿವಿಧೈಃ ಪೂಜಯಿತ್ವಾ ಯಥಾವಿಧಿ|

15047023c ಕುಲ್ಯಾನಿ ತೇಷಾಂ ಸಂಯೋಜ್ಯ ತದಾಚಖ್ಯುರ್ಮಹೀಪತೇಃ||

ವಿವಿಧ ಮಾಲೆ-ಗಂಧಗಳಿಂದ ಯಥಾವಿಧಿಯಾಗಿ ಪೂಜಿಸಿ ಅವರು ಆ ಅಸ್ಥಿಗಳನ್ನು ಗಂಗೆಯಲ್ಲಿ ವಿಸರ್ಜಿಸಿ ಮಹೀಪತಿಗೆ ವರದಿಮಾಡಿದರು.

15047024a ಸಮಾಶ್ವಾಸ್ಯ ಚ ರಾಜಾನಂ ಧರ್ಮಾತ್ಮಾನಂ ಯುಧಿಷ್ಠಿರಮ್|

15047024c ನಾರದೋಽಪ್ಯಗಮದ್ರಾಜನ್ಪರಮರ್ಷಿರ್ಯಥೇಪ್ಸಿತಮ್||

ರಾಜನ್! ಧರ್ಮಾತ್ಮ ರಾಜಾ ಯುಧಿಷ್ಠಿರನನ್ನು ಸಮಾಧಾನಗೊಳಿಸಿ ಪರಮ ಋಷಿ ನಾರದನು ಇಷ್ಟಬಂದ ಕಡೆ ಹೊರಟುಹೋದನು.

15047025a ಏವಂ ವರ್ಷಾಣ್ಯತೀತಾನಿ ಧೃತರಾಷ್ಟ್ರಸ್ಯ ಧೀಮತಃ|

15047025c ವನವಾಸೇ ತದಾ ತ್ರೀಣಿ ನಗರೇ ದಶ ಪಂಚ ಚ||

15047026a ಹತಪುತ್ರಸ್ಯ ಸಂಗ್ರಾಮೇ ದಾನಾನಿ ದದತಃ ಸದಾ|

15047026c ಜ್ಞಾತಿಸಂಬಂಧಿಮಿತ್ರಾಣಾಂ ಭ್ರಾತೄಣಾಂ ಸ್ವಜನಸ್ಯ ಚ||

ಈ ರೀತಿ ಸಂಗ್ರಾಮದಲ್ಲಿ ಪುತ್ರರನ್ನು ಕಳೆದುಕೊಂಡಿದ್ದ ಧೀಮಂತ ಧೃತರಾಷ್ಟ್ರನು ಸದಾ ಮಕ್ಕಳ, ಸಂಬಂಧಿಗಳ, ಮಿತ್ರರ, ಸಹೋದರರ ಮತ್ತು ಸ್ವಜನರ ಸಲುವಾಗಿ ದಾನಗಳನ್ನು ನೀಡುತ್ತಾ ಹಸ್ತಿನಾಪುರದಲ್ಲಿ ಹದಿನೈದು ವರ್ಷಗಳನ್ನೂ ವನವಾಸದಲ್ಲಿ ಮೂರು ವರ್ಷಗಳನ್ನು ಕಳೆದಿದ್ದನು.

15047027a ಯುಧಿಷ್ಠಿರಸ್ತು ನೃಪತಿರ್ನಾತಿಪ್ರೀತಮನಾಸ್ತದಾ|

15047027c ಧಾರಯಾಮಾಸ ತದ್ರಾಜ್ಯಂ ನಿಹತಜ್ಞಾತಿಬಾಂಧವಃ||

ನೃಪತಿ ಯುಧಿಷ್ಠಿರನಾದರೋ ಜ್ಞಾತಿ-ಬಾಂಧವರನ್ನು ಕಳಿದುಕೊಂಡು ಅಷ್ಟೊಂದು ಸಂತೋಷದಿಂದಿರದಿದ್ದರೂ ರಾಜ್ಯಾಡಳಿತವನ್ನು ಮಾಡುತ್ತಿದ್ದನು."

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ನಾರದಾಗಮನಪರ್ವಣಿ ಶ್ರಾದ್ಧದಾನೇ ಸಪ್ತಚತ್ವಾರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ನರದಾಗಮನಪರ್ವದಲ್ಲಿ ಶ್ರಾದ್ಧದಾನ ಎನ್ನುವ ನಲ್ವತ್ತೇಳನೇ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಆಶ್ರಮವಾಸಿಕ ಪರ್ವಣಿ ನಾರದಾಗಮನಪರ್ವಃ|

ಇದು ಶ್ರೀ ಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ನಾರದಾಗಮನಪರ್ವವು|

ಇತಿ ಶ್ರೀ ಮಹಾಭಾರತೇ ಆಶ್ರಮವಾಸಿಕಪರ್ವಃ||

ಇದು ಶ್ರೀ ಮಹಾಭಾರತದಲ್ಲಿ ಆಶ್ರಮವಾಸಿಕಪರ್ವವು||

ಇದೂವರೆಗಿನ ಒಟ್ಟು ಮಹಾಪರ್ವಗಳು – ೧೫/೧೮, ಉಪಪರ್ವಗಳು-೯೨/೧೦೦, ಅಧ್ಯಾಯಗಳು-೧೯೭೮/೧೯೯೫, ಶ್ಲೋಕಗಳು-೭೩೨೧೧/೭೩೭೮೪

Related image

ಸ್ವಸ್ತಿಪ್ರಜಾಭ್ಯಃ ಪರಿಪಾಲಯಂತಾಮ್

ನ್ಯಾಯೇನ ಮಾರ್ಗೇಣ ಮಹೀಂ ಮಹೀಶಾಃ|

ಗೋಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ

ಲೋಕಾಃ ಸಮಸ್ತಾಃ ಸುಖಿನೋ ಭವಂತು||

ಕಾಲೇ ವರ್ಷತು ಪರ್ಜನ್ಯಃ ಪೃಥಿವೀ ಸಸ್ಯಶಾಲಿನೀ|

ದೇಶೋಽಯಂ ಕ್ಷೋಭರಹಿತೋ ಬ್ರಾಹ್ಮಣಾಃ ಸಂತು ನಿರ್ಭಯಾಃ||

ಅಪುತ್ರಾಃ ಪುತ್ರಿಣಃ ಸಂತು ಪುತ್ರಿಣಃ ಸಂತು ಪೌತ್ರಿಣಃ|

ಅಧನಾಃ ಸಧನಾಃ ಸಂತು ಜೀವಂತು ಶರದಾಂ ಶತಮ್||

ಕಾಯೇನ ವಾಚಾ ಮನಸೇಂದ್ರಿಯೈರ್ವಾ

ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್|

ಕರೋಮಿ ಯದ್ಯತ್ಸಕಲಂ ಪರಸ್ಮೈ

ನಾರಾಯಣಾಯೇತಿ ಸಮರ್ಪಯಾಮಿ||

ಯದಕ್ಷರಪದಭ್ರಷ್ಟಂ ಮಾತ್ರಾಹೀನಂ ತು ಯದ್ಭವೇತ್|

ತತ್ಸರ್ವಂ ಕ್ಷಮ್ಯತಾಂ ದೇವ ನಾರಾಯಣ ನಮೋಽಸ್ತು ತೇ||

|| ಹರಿಃ ಓಂ ಕೃಷ್ಣಾರ್ಪಣಮಸ್ತು ||

Comments are closed.