ಆರಣ್ಯಕ ಪರ್ವ: ಅರಣ್ಯ ಪರ್ವ
Contents
Toggle೧೦
ತಾನು ದುರ್ಯೋಧನನನ್ನು ಪರಿತ್ಯಜಿಸಲು ಶಕ್ತನಿಲ್ಲವೆಂದು ಹೇಳಿದ ಧೃತರಾಷ್ಟ್ರನಿಗೆ ವ್ಯಾಸನು ಪುತ್ರವಾತ್ಸಲ್ಯದ ಕುರಿತು ಇಂದ್ರ ಮತ್ತು ಸುರಭಿಯರ ನಡುವೆ ನಡೆದ ಸಂವಾದವನ್ನು ಉದಾಹರಿಸುವುದು (೧-೧೮). “ನಿನ್ನ ಮಕ್ಕಳಲ್ಲಿ ಎಲ್ಲರೂ ಸಮನಾಗಿದ್ದರೂ ದೀನರ ಮೇಲೆ ಅಧಿಕ ಕೃಪೆಯಿರಲಿ” ಎಂದೂ, ದುರ್ಯೋಧನನು ಪಾಂಡವರೊಂದಿಗೆ ಸಂಧಿಮಾಡಿಕೊಳ್ಳಲೆಂದೂ ವ್ಯಾಸನು ಧೃತರಾಷ್ಟ್ರನಿಗೆ ಸಲಹೆ ನೀಡುವುದು (೧೯-೨೩).
03010001 ಧೃತರಾಷ್ಟ್ರ ಉವಾಚ|
03010001a ಭಗವನ್ನಾಹಮಪ್ಯೇತದ್ರೋಚಯೇ ದ್ಯೂತಸಂಸ್ತವಂ|
03010001c ಮನ್ಯೇ ತದ್ವಿಧಿನಾಕ್ರಮ್ಯ ಕಾರಿತೋಽಸ್ಮೀತಿ ವೈ ಮುನೇ||
ಧೃತರಾಷ್ಟ್ರನು ಹೇಳಿದನು: “ಭಗವನ್! ಈ ದ್ಯೂತದ ಮಾತು ನನಗೂ ಇಷ್ಟವಾಗಲಿಲ್ಲ. ಮುನೇ! ಆದರೆ ವಿಧಿಯು ನನ್ನನ್ನೂ ಮೀರಿ ನನ್ನಿಂದ ಇದು ನಡೆಯುವ ಹಾಗೆ ಮಾಡಿತು ಎಂದು ನನಗನ್ನಿಸುತ್ತದೆ.
03010002a ನೈತದ್ರೋಚಯತೇ ಭೀಷ್ಮೋ ನ ದ್ರೋಣೋ ವಿದುರೋ ನ ಚ|
03010002c ಗಾಂಧಾರೀ ನೇಚ್ಚತಿ ದ್ಯೂತಂ ತಚ್ಚ ಮೋಹಾತ್ಪ್ರವರ್ತಿತಂ||
ಇದು ಭೀಷ್ಮನಿಗೂ, ದ್ರೋಣ ಮತ್ತು ವಿದುರರಿಗೂ ಇಷ್ಟವಾಗಿರಲಿಲ್ಲ. ಗಾಂಧಾರಿಯೂ ಇದನ್ನು ಬಯಸಿರಲಿಲ್ಲ. ಆದರೂ ಮೋಹದಿಂದ ದ್ಯೂತವು ನಡೆದುಹೋಯಿತು!
03010003a ಪರಿತ್ಯಕ್ತುಂ ನ ಶಕ್ನೋಮಿ ದುರ್ಯೋಧನಮಚೇತನಂ|
03010003c ಪುತ್ರಸ್ನೇಹೇನ ಭಗವನ್ಜಾನನ್ನಪಿ ಯತವ್ರತ||
ಭಗವನ್! ಯತವ್ರತ! ತಿಳಿದಿದ್ದರೂ ಕೂಡ ಪುತ್ರಸ್ನೇಹದಿಂದಾಗಿ ನಾನು ಆ ಅಚೇತನ ದುರ್ಯೋಧನನನ್ನು ಪರಿತ್ಯಜಿಸಲು ಶಕ್ತನಾಗಿಲ್ಲ!”
03010004 ವ್ಯಾಸ ಉವಾಚ|
03010004a ವೈಚಿತ್ರವೀರ್ಯ ನೃಪತೇ ಸತ್ಯಮಾಹ ಯಥಾ ಭವಾನ್|
03010004c ದೃಢಂ ವೇದ್ಮಿ ಪರಂ ಪುತ್ರಂ ಪರಂ ಪುತ್ರಾನ್ನ ವಿದ್ಯತೇ||
ವ್ಯಾಸನು ಹೇಳಿದನು: “ನೃಪತೇ ವೈಚಿತ್ರವೀರ್ಯ! ನೀನು ಹೇಳುತ್ತಿರುವುದು ಸತ್ಯ. ಮಗನೇ ಶ್ರೇಷ್ಠ. ಮಗನನ್ನು ಮೀರಿ ಇನ್ನೊಂದಿಲ್ಲ ಎನ್ನುವುದನ್ನು ನಾನೂ ಕೂಡ ಧೃಢವಾಗಿ ತಿಳಿದುಕೊಂಡಿದ್ದೇನೆ.
03010005a ಇಂದ್ರೋಽಪ್ಯಶ್ರುನಿಪಾತೇನ ಸುರಭ್ಯಾ ಪ್ರತಿಬೋಧಿತಃ|
03010005c ಅನ್ಯೈಃ ಸಮೃದ್ಧೈರಪ್ಯರ್ಥೈರ್ನ ಸುತಾದ್ವಿದ್ಯತೇ ಪರಂ||
ಇಂದ್ರನೂ ಕೂಡ, ಎಷ್ಟೇ ಬೆಲೆಬಾಳುವಂಥಹದಾಗಿದ್ದರೂ ಮಗನಿಂತ ಶ್ರೇಷ್ಠವಾದ ಸಂಪತ್ತು ಬೇರೊಂದಿಲ್ಲ ಎನ್ನುವ ಸತ್ಯವನ್ನು ಸುರಭಿಯ ಕಣ್ಣೀರಿನಿಂದ ಕಂಡುಕೊಂಡಿದ್ದನು.
03010006a ಅತ್ರ ತೇ ವರ್ತಯಿಷ್ಯಾಮಿ ಮಹದಾಖ್ಯಾನಮುತ್ತಮಂ|
03010006c ಸುರಭ್ಯಾಶ್ಚೈವ ಸಂವಾದಮಿಂದ್ರಸ್ಯ ಚ ವಿಶಾಂ ಪತೇ||
ವಿಶಾಂಪತೇ! ಇದಕ್ಕೆ ಸಂಬಂಧಿಸಿದ ಸುರಭಿ ಮತ್ತು ಇಂದ್ರರ ನಡುವೆ ನಡೆದ ಸಂವಾದದ ಒಂದು ಉತ್ತಮ ಮಹದಾಖ್ಯಾನವನ್ನು ಹೇಳುತ್ತೇನೆ.
03010007a ತ್ರಿವಿಷ್ಟಪಗತಾ ರಾಜನ್ಸುರಭಿಃ ಪ್ರಾರುದತ್ಕಿಲ|
03010007c ಗವಾಂ ಮಾತ ಪುರಾ ತಾತ ತಾಮಿಂದ್ರೋಽನ್ವಕೃಪಾಯತ||
ರಾಜನ್! ಮಗೂ! ಹಿಂದೆ ಗೋವುಗಳ ಮಾತೆ ಸುರಭಿಯು ಸ್ವರ್ಗಕ್ಕೆ ಹೋಗಿ ತುಂಬಾ ರೋದಿಸಿದಳು. ಅದನ್ನು ನೋಡಿದ ಇಂದ್ರನಿಗೆ ಅನುಕಂಪವುಂಟಾಯಿತು.
03010008 ಇಂದ್ರ ಉವಾಚ|
03010008a ಕಿಮಿದಂ ರೋದಿಷಿ ಶುಭೇ ಕಚ್ಚಿತ್ ಕ್ಷೇಮಂ ದಿವೌಕಸಾಂ|
03010008c ಮಾನುಷೇಷ್ವಥ ವಾ ಗೋಷು ನೈತದಲ್ಪಂ ಭವಿಷ್ಯತಿ||
ಇಂದ್ರನು ಹೇಳಿದನು: “ಶುಭೇ! ಯಾವ ಕಾರಣಕ್ಕಾಗಿ ನೀನು ಈ ರೀತಿ ರೋದಿಸುತ್ತಿರುವೆ? ದಿವೌಕಸರು, ಮನುಷ್ಯರು ಮತ್ತು ಗೋವುಗಳು ಕ್ಷೇಮದಿಂದಿದ್ದಾರೆ ತಾನೆ? ಇದು ಸಣ್ಣ ವಿಷಯವಾಗಿರಲಿಕ್ಕಿಲ್ಲ!”
03010009 ಸುರಭಿರುವಾಚ|
03010009a ವಿನಿಪಾತೋ ನ ವಃ ಕಶ್ಚಿದ್ದೃಶ್ಯತೇ ತ್ರಿದಶಾಧಿಪ|
03010009c ಅಹಂ ತು ಪುತ್ರಂ ಶೋಚಾಮಿ ತೇನ ರೋದಿಮಿ ಕೌಶಿಕ||
ಸುರಭಿಯು ಹೇಳಿದಳು: “ತ್ರಿದಶಾಧಿಪ! ನಿಮಗೆಲ್ಲರಿಗೂ ಯಾವುದೇ ರೀತಿಯ ಆಪತ್ತೂ ಬಂದೊದಗಿಲ್ಲ! ಕೌಶಿಕ! ನಾನು ನನ್ನ ಪುತ್ರನಿಗೋಸ್ಕರ ಶೋಕಿಸಿ ಅಳುತ್ತಿದ್ದೇನೆ.
03010010a ಪಶ್ಯೈನಂ ಕರ್ಷಕಂ ರೌದ್ರಂ ದುರ್ಬಲಂ ಮಮ ಪುತ್ರಕಂ|
03010010c ಪ್ರತೋದೇನಾಭಿನಿಘ್ನಂತಂ ಲಾಂಗಲೇನ ನಿಪೀಡಿತಂ||
ನೇಗಿಲ ಭಾರದಡಿಯಲ್ಲಿ ನನ್ನ ದುರ್ಬಲ ಪುತ್ರನನ್ನು ಭಯಂಕರ ಬಾರಿಕೋಲಿನಿಂದ ಆ ರೈತನು ಹೊಡೆಯುತ್ತಿರುವುದನ್ನು ನೋಡು!
03010011a ಏತಂ ದೃಷ್ಟ್ವಾ ಭೃಶಂ ಶ್ರಂತಂ ವಧ್ಯಮಾನಂ ಸುರಾಧಿಪ|
03010011c ಕೃಪಾವಿಷ್ಟಾಸ್ಮಿ ದೇವೇಂದ್ರ ಮನಶ್ಚೋದ್ವಿಜತೇ ಮಮ||
ಸುರಾಧಿಪ! ಬಹಳಷ್ಟು ಆಯಾಸಗೊಂಡಿರುವವನನ್ನು ಚೆನ್ನಾಗಿ ಹೊಡೆಯುತ್ತಿರುವುದನ್ನು ನೋಡಿ ಕೃಪಾವಿಷ್ಟಳಾಗಿದ್ದೇನೆ. ದೇವೇಂದ್ರ! ನನ್ನ ಮನಸ್ಸಿನಲ್ಲಿ ಶೋಕವು ಹುಟ್ಟಿದೆ.
03010012a ಏಕಸ್ತತ್ರ ಬಲೋಪೇತೋ ಧುರಮುದ್ವಹತೇಽಧಿಕಾಂ|
03010012c ಅಪರೋಽಲ್ಪಬಲಪ್ರಾಣಃ ಕೃಶೋ ಧಮನಿಸಂತತಃ|
03010012e ಕೃಚ್ಚ್ರಾದುದ್ವಹತೇ ಭಾರಂ ತಂ ವೈ ಶೋಚಾಮಿ ವಾಸವ||
ಅಲ್ಲಿ ಒಬ್ಬ ಬಲವಂತನು ಅಧಿಕ ಭಾರವನ್ನು ಹೊತ್ತಿದ್ದಾನೆ. ಇನ್ನೊಬ್ಬನು ಕಡಿಮೆ ಬಲವುಳ್ಳವನು ಕೃಶನಾದವನು ಕಡಿವಾಣದ ನಿಯಂತ್ರಣದಲ್ಲಿದ್ದಾನೆ. ವಾಸವ! ಅವನು ಹೇಗೆ ಭಾರವನ್ನು ಹೊರಬಲ್ಲ ಎನ್ನುವುದರ ಕುರಿತೇ ಚಿಂತಿಸುತ್ತಿದ್ದೇನೆ.
03010013a ವಧ್ಯಮಾನಃ ಪ್ರತೋದೇನ ತುದ್ಯಮಾನಃ ಪುನಃ ಪುನಃ|
03010013c ನೈವ ಶಕ್ನೋತಿ ತಂ ಭಾರಮುದ್ವೋಢುಂ ಪಶ್ಯ ವಾಸವ||
ವಾಸವ! ಒಂದೇ ಸಮನೆ ಅವನನ್ನು ಹೊಡೆಯುತ್ತಿದ್ದರೂ, ತಿವಿಯುತ್ತಿದ್ದರೂ ಅವನು ಆ ಭಾರವನ್ನು ಎಳೆಯಲು ಶಕ್ಯನಿಲ್ಲ. ನೋಡು!
03010014a ತತೋಽಹಂ ತಸ್ಯ ದುಃಖಾರ್ತಾ ವಿರೌಮಿ ಭೃಶದುಃಖಿತಾ|
03010014c ಅಶ್ರೂಣ್ಯಾವರ್ತಯಂತೀ ಚ ನೇತ್ರಾಭ್ಯಾಂ ಕರುಣಾಯತೀ||
ಆದುದರಿಂದಲೇ ಅವನಿಗಾಗಿ ದುಃಖಾರ್ತಳಾಗಿ ದುಃಖದಿಂದ ತುಂಬಾ ರೋದಿಸುತ್ತಿದ್ದೇನೆ. ಕರುಣೆಯಿಂದ ಕಣ್ಣುಗಳಿಂದ ಕಣ್ಣೀರು ಹರಿಯುತ್ತಿದೆ.”
03010015 ಇಂದ್ರ ಉವಾಚ|
03010015a ತವ ಪುತ್ರಸಹಸ್ರೇಷು ಪೀಡ್ಯಮಾನೇಷು ಶೋಭನೇ|
03010015c ಕಿಂ ಕೃಪಾಯಿತಮಸ್ತ್ಯತ್ರ ಪುತ್ರ ಏಕೋಽತ್ರ ಪೀಡ್ಯತೇ||
ಇಂದ್ರನು ಹೇಳಿದನು: “ಶೋಭನೇ! ನಿನ್ನ ಸಹಸ್ರಾರು ಪುತ್ರರು ಪೀಡನೆಗೊಳಗಾಗುತ್ತಿದ್ದಾರೆ. ಈ ಒಬ್ಬನೇ ಪುತ್ರನ ಪೀಡನೆಯಿಂದ ನೀನು ಏಕೆ ಕೃಪಾವಿಷ್ಟಳಾಗಿದ್ದೀಯೆ?”
03010016 ಸುರಭಿರುವಾಚ|
03010016a ಯದಿ ಪುತ್ರಸಹಸ್ರಂ ಮೇ ಸರ್ವತ್ರ ಸಮಮೇವ ಮೇ|
03010016c ದೀನಸ್ಯ ತು ಸತಃ ಶಕ್ರ ಪುತ್ರಸ್ಯಾಭ್ಯಧಿಕಾ ಕೃಪಾ||
ಸುರಭಿಯು ಹೇಳಿದಳು: “ಶಕ್ರ! ನನಗೆ ಸಹಸ್ರಾರು ಪುತ್ರರಿದ್ದರೂ ಸರ್ವರೂ ನನಗೆ ಸಮನಾಗಿದ್ದಾರೆ. ಆದರೆ ದೀನನಾದ ಸುತನ ಮೇಲೆ ಕೃಪೆಯು ಅಧಿಕ!””
03010017 ವ್ಯಾಸ ಉವಾಚ|
03010017a ತದಿಂದ್ರಃ ಸುರಭೀವಾಕ್ಯಂ ನಿಶಮ್ಯ ಭೃಶವಿಸ್ಮಿತಃ|
03010017c ಜೀವಿತೇನಾಪಿ ಕೌರವ್ಯ ಮೇನೇಽಭ್ಯಧಿಕಮಾತ್ಮಜಂ||
ವ್ಯಾಸನು ಹೇಳಿದನು: “ಕೌರವ್ಯ! ಸುರಭಿಯ ಮಾತುಗಳನ್ನು ಕೇಳಿದ ಇಂದ್ರನು ಅತ್ಯಂತ ವಿಸ್ಮಿತನಾದನು ಮತ್ತು ಆತ್ಮಜನು ಜೀವಕ್ಕಿಂತಲೂ ಅಧಿಕವೆಂದು ತನ್ನಲ್ಲಿಯೇ ಯೋಚಿಸಿದನು.
03010018a ಪ್ರವವರ್ಷ ಚ ತತ್ರೈವ ಸಹಸಾ ತೋಯಮುಲ್ಬಣಂ|
03010018c ಕರ್ಷಕಸ್ಯಾಚರನ್ವಿಘ್ನಂ ಭಗವಾನ್ಪಾಕಶಾಸನಃ||
ಆಗ ಭಗವಾನ್ ಪಾಕಶಾಸನನು ಅಲ್ಲಿ ತಕ್ಷಣವೇ ಅತಿ ಮಳೆಯನ್ನು ಸುರಿಸಿ ಕೃಷಿಕನ ಹೂಳುವಿಕೆಗೆ ವಿಘ್ನವನ್ನುಂಟುಮಾಡಿದನು.
03010019a ತದ್ಯಥಾ ಸುರಭಿಃ ಪ್ರಾಹ ಸಮಮೇವಾಸ್ತು ತೇ ತಥಾ|
03010019c ಸುತೇಷು ರಾಜನ್ಸರ್ವೇಷು ದೀನೇಷ್ವಭ್ಯಧಿಕಾ ಕೃಪಾ||
ರಾಜನ್! ಸುರಭಿಯು ಹೇಳಿದಂತೆ ನಿನ್ನ ಮಕ್ಕಳಲ್ಲಿ ಎಲ್ಲರೂ ಸಮನಾಗಿದ್ದರೂ ದೀನರ ಮೇಲೆ ಅಧಿಕ ಕೃಪೆಯಿರಲಿ.
03010020a ಯಾದೃಶೋ ಮೇ ಸುತಃ ಪಂಡುಸ್ತಾದೃಶೋ ಮೇಽಸಿ ಪುತ್ರಕ|
03010020c ವಿದುರಶ್ಚ ಮಹಾಪ್ರಾಜ್ಞಃ ಸ್ನೇಹಾದೇತದ್ಬ್ರವೀಮ್ಯಹಂ||
ನೀನು ಹೇಗೆ ನನ್ನ ಮಗನೋ ಹಾಗೆಯೇ ಪಾಂಡುವೂ ನನ್ನದೇ ಮಗ. ಮಹಾಪ್ರಾಜ್ಞ ವಿದುರನೂ ಕೂಡ. ಸ್ನೇಹದಿಂದ ನಿನಗೆ ಇದನ್ನು ಹೇಳುತ್ತಿದ್ದೇನೆ.
03010021a ಚಿರಾಯ ತವ ಪುತ್ರಾಣಾಂ ಶತಮೇಕಶ್ಚ ಪಾರ್ಥಿವ|
03010021c ಪಾಂಡೋಃ ಪಂಚೈವ ಲಕ್ಷ್ಯಂತೇ ತೇಽಪಿ ಮಂದಾಃ ಸುದುಃಖಿತಾಃ||
ಪಾರ್ಥಿವ! ನಿನಗೆ ನೂರಾಒಂದು ಮಕ್ಕಳಿದ್ದಾರೆ. ಆದರೆ ಪಾಂಡುವಿಗೆ ಐವರೇ ಇದ್ದರೂ ಅವರು ಸರಳರಾಗಿದ್ದು ತುಂಬಾ ದುಃಖಿತರಾಗಿರುವಂತೆ ಕಾಣುತ್ತಿದ್ದಾರೆ.
03010022a ಕಥಂ ಜೀವೇಯುರತ್ಯಂತಂ ಕಥಂ ವರ್ಧೇಯುರಿತ್ಯಪಿ|
03010022c ಇತಿ ದೀನೇಷು ಪಾರ್ಥೇಷು ಮನೋ ಮೇ ಪರಿತಪ್ಯತೇ||
ಅವರು ಹೇಗೆ ಕೊನೆಯವರೆಗೆ ಉಳಿಯುತ್ತಾರೆ ಮತ್ತು ಹೇಗೆ ವೃದ್ಧಿಸುತ್ತಾರೆ ಎಂದು ಆ ದೀನ ಪಾರ್ಥರ ಕುರಿತು ನನ್ನ ಮನಸ್ಸು ಪರಿತಪಿಸುತ್ತಿದೆ.
03010023a ಯದಿ ಪಾರ್ಥಿವ ಕೌರವ್ಯಾಂ ಜೀವಮಾನಾನಿಹೇಚ್ಚಸಿ|
03010023c ದುರ್ಯೋಧನಸ್ತವ ಸುತಃ ಶಮಂ ಗಚ್ಚತು ಪಾಂಡವೈಃ||
ಪಾರ್ಥಿವ! ಕೌರವ್ಯರು ಜೀವಂತರಾಗಿರಬೇಕೆಂದು ಬಯಸುವೆಯಾದರೆ ನಿನ್ನ ಸುತ ದುರ್ಯೋಧನನು ಪಾಂಡವರಲ್ಲಿ ಹೋಗಿ ಸಂಧಿಮಾಡಿಕೊಳ್ಳಲಿ.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಅರಣ್ಯಪರ್ವಣಿ ಸುರಭ್ಯುಪಾಖ್ಯಾನೇ ದಶಮೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಅರಣ್ಯಪರ್ವದಲ್ಲಿ ಸುರಭಿಯ ಕಥೆ ಎನ್ನುವ ಹತ್ತನೆಯು ಅಧ್ಯಾಯವು.