Anushasana Parva: Chapter 88

ಅನುಶಾಸನ ಪರ್ವ: ದಾನಧರ್ಮ ಪರ್ವ

೮೮

ಶ್ರಾದ್ಧದಲ್ಲಿ ಪಿತೃಗಳು ಯಾವುದರಿಂದ ತೃಪ್ತಿಹೊಂದುವರೆನ್ನುವುದರ ನಿರೂಪಣೆ (೧-೧೫).

13088001 ಯುಧಿಷ್ಠಿರ ಉವಾಚ|

13088001a ಕಿಂ ಸ್ವಿದ್ದತ್ತಂ ಪಿತೃಭ್ಯೋ ವೈ ಭವತ್ಯಕ್ಷಯಮೀಶ್ವರ|

13088001c ಕಿಂ ಹವಿಶ್ಚಿರರಾತ್ರಾಯ ಕಿಮಾನಂತ್ಯಾಯ ಕಲ್ಪತೇ||

ಯುಧಿಷ್ಠಿರನು ಹೇಳಿದನು: “ಈಶ್ವರ! ಪಿತೃಗಳಿಗೆ ನೀಡುವ ಯಾವ ವಸ್ತುಗಳು ಅಕ್ಷಯವಾಗುತ್ತವೆ? ಯಾವ ವಸ್ತುಗಳ ದಾನಮಾಡುವುದರೀಂದ ಪಿತೃಗಳು ಅಧಿಕ ಕಾಲದವರೆಗೆ ಮತ್ತು ಯಾವುದರ ದಾನದಿಂದ ಅನಂತಕಾಲದ ವರೆಗೆ ತೃಪ್ತರಾಗಿರುತ್ತಾರೆ?”

13088002 ಭೀಷ್ಮ ಉವಾಚ|

13088002a ಹವೀಂಷಿ ಶ್ರಾದ್ಧಕಲ್ಪೇ ತು ಯಾನಿ ಶ್ರಾದ್ಧವಿದೋ ವಿದುಃ|

13088002c ತಾನಿ ಮೇ ಶೃಣು ಕಾಮ್ಯಾನಿ ಫಲಂ ಚೈಷಾಂ ಯುಧಿಷ್ಠಿರ||

ಭೀಷ್ಮನು ಹೇಳಿದನು: “ಯುಧಿಷ್ಠಿರ! ಶ್ರಾದ್ಧವನ್ನು ತಿಳಿದವರು ಶ್ರಾದ್ಧದಲ್ಲಿ ಯಾವ ಹವಿಸ್ಸುಗಳನ್ನು ವಿಧಿಸಿದ್ದಾರೋ ಅವುಗಳ ಕಾಮ್ಯ ಫಲಗಳನ್ನು ಕೇಳು.

13088003a ತಿಲೈರ್ವ್ರೀಹಿಯವೈರ್ಮಾಷೈರದ್ಭಿರ್ಮೂಲಫಲೈಸ್ತಥಾ|

13088003c ದತ್ತೇನ ಮಾಸಂ ಪ್ರೀಯಂತೇ ಶ್ರಾದ್ಧೇನ ಪಿತರೋ ನೃಪ||

ನೃಪ! ತಿಲ, ವ್ರೀಹಿ[1], ಜವೆ, ಉದ್ದು, ನೀರು, ಗೆಡ್ಡೆಗಳು ಮತ್ತು ಹಣ್ಣುಗಳನ್ನು ನೀಡಿ ಮಾಡಿದ ಶ್ರಾದ್ಧದಿಂದ ಪಿತೃಗಳು ಒಂದು ತಿಂಗಳವರೆಗೆ ತೃಪ್ತರಾಗಿರುತ್ತಾರೆ.

13088004a ವರ್ಧಮಾನತಿಲಂ ಶ್ರಾದ್ಧಮಕ್ಷಯಂ ಮನುರಬ್ರವೀತ್|

13088004c ಸರ್ವೇಷ್ವೇವ ತು ಭೋಜ್ಯೇಷು ತಿಲಾಃ ಪ್ರಾಧಾನ್ಯತಃ ಸ್ಮೃತಾಃ||

ತಿಲವು ಹೆಚ್ಚಾಗಿರುವ ಶ್ರಾದ್ಧವು ಅಕ್ಷಯವೆಂದು ಮನುವು ಹೇಳಿದ್ದಾನೆ. ಶ್ರಾದ್ಧದಲ್ಲಿನ ಭೋಜ್ಯವಸ್ತುಗಳಲ್ಲಿ ತಿಲವೇ ಪ್ರಧಾನವಾಗಿರಬೇಕೆಂದು ಸ್ಮೃತಿಯಿದೆ.

[2]13088005a ದ್ವೌ ಮಾಸೌ ತು ಭವೇತ್ತೃಪ್ತಿರ್ಮತ್ಸ್ಯೈಃ ಪಿತೃಗಣಸ್ಯ ಹ|

13088005c ತ್ರೀನ್ಮಾಸಾನಾವಿಕೇನಾಹುಶ್ಚಾತುರ್ಮಾಸ್ಯಂ ಶಶೇನ ತು||

ಮತ್ಸ್ಯಗಳಿಂದ ಪಿತೃಗಳು ಎರಡು ಮಾಸಗಳು ತೃಪ್ತರಾಗಿರುತ್ತಾರೆ. ಕುರಿಯ ಮಾಂಸದಿಂದ ಮೂರು ಮಾಸಗಳು ಮತ್ತು ಮೊಲದ ಮಾಂಸದಿಂದ ನಾಲ್ಕುಮಾಸಗಳು ತೃಪ್ತರಾಗಿರುತ್ತಾರೆ.

13088006a ಆಜೇನ ಮಾಸಾನ್ ಪ್ರೀಯಂತೇ ಪಂಚೈವ ಪಿತರೋ ನೃಪ|

13088006c ವಾರಾಹೇಣ ತು ಷಣ್ಮಾಸಾನ್ಸಪ್ತ ವೈ ಶಾಕುನೇನ[3] ತು||

ನೃಪ! ಆಡಿನ ಮಾಂಸದಿಂದ ಪಿತೃಗಳು ಐದು ತಿಂಗಳು ತೃಪ್ತರಾಗಿರುತ್ತಾರೆ. ಹಂದಿಯ ಮಾಂಸದಿಂದ ಆರು ಮಾಸಗಳೂ, ಪಕ್ಷಿಯ ಮಾಂಸದಿಂದ ಏಳು ಮಾಸಗಳೂ ತೃಪ್ತರಾಗಿರುತ್ತಾರೆ.

13088007a ಮಾಸಾನಷ್ಟೌ ಪಾರ್ಷತೇನ ರೌರವೇಣ ನವೈವ ತು|

13088007c ಗವಯಸ್ಯ ತು ಮಾಂಸೇನ ತೃಪ್ತಿಃ ಸ್ಯಾದ್ದಶಮಾಸಿಕೀ||

ಚಿತ್ರಮೃಗದ ಮಾಂಸದಿಂದ ಎಂಟು ಮಾಸಗಳೂ, ರುರುಮೃಗದ ಮಾಂಸದಿಂದ ಒಂಭತ್ತು ಮಾಸಗಳೂ ಗವಯ[4]ದ ಮಾಂಸದಿಂದ ಹತ್ತುಮಾಸಗಳ ವರೆಗೂ ತೃಪ್ತರಾಗಿರುತ್ತಾರೆ.

13088008a ಮಾಸಾನೇಕಾದಶ ಪ್ರೀತಿಃ ಪಿತೄಣಾಂ ಮಾಹಿಷೇಣ ತು|

13088008c ಗವ್ಯೇನ ದತ್ತೇ ಶ್ರಾದ್ಧೇ ತು ಸಂವತ್ಸರಮಿಹೋಚ್ಯತೇ||

13088009a ಯಥಾ ಗವ್ಯಂ ತಥಾ ಯುಕ್ತಂ ಪಾಯಸಂ ಸರ್ಪಿಷಾ ಸಹ|

ಎಮ್ಮೆಯ ಮಾಂಸದಿಂದ ಪಿತೃಗಳು ಹನ್ನೊಂದು ತಿಂಗಳು ಪ್ರೀತರಾಗಿರುತ್ತಾರೆ. ಗವ್ಯ[5]ವನ್ನು ನೀಡಿದ ಶ್ರಾದ್ಧದಿಂದ ಪಿತೃಗಳು ಒಂದು ಸಂವತ್ಸರದ ವರೆಗೆ ತೃಪ್ತರಾಗಿರುತ್ತಾರೆಂದು ಹೇಳುತ್ತಾರೆ. ಗವ್ಯದಿಂದ ಹೇಗೋ ಹಾಗೆ ತುಪ್ಪದಿಂದ ಕೂಡಿದ ಪಾಯಸದಿಂದಲೂ ಪಿತೃಗಳು ಒಂದು ಸಂವತ್ಸರಕಾಲ ತೃಪ್ತರಾಗಿರುತ್ತಾರೆ.

13088009c ವಾಧ್ರೀಣಸಸ್ಯ ಮಾಂಸೇನ ತೃಪ್ತಿರ್ದ್ವಾದಶವಾರ್ಷಿಕೀ||

13088010a ಆನಂತ್ಯಾಯ ಭವೇದ್ದತ್ತಂ ಖಡ್ಗಮಾಂಸಂ ಪಿತೃಕ್ಷಯೇ|

13088010c ಕಾಲಶಾಕಂ ಚ ಲೌಹಂ ಚಾಪ್ಯಾನಂತ್ಯಂ ಚಾಗ ಉಚ್ಯತೇ||

ಘೇಂಡಾಮೃಗದಿಂದ ಪಿತೃಗಳು ಹನ್ನೆರಡು ವರ್ಷಗಳು ತೃಪ್ತರಾಗಿರುತ್ತಾರೆ. ಪಿತೃಕ್ಷಯ[6]ದಲ್ಲಿ ಖಡ್ಗಮೃಗದ ಮಾಂಸವನ್ನು ನೀಡಿದರೆ ಅವರು ಅನಂತಕಾಲದವರೆಗೆ ತೃಪ್ತರಾಗಿರುತ್ತಾರೆ. ಕರಿಬೇವು, ಕಾಂಚನ ವೃಕ್ಷದ ಹೂವು ಮತ್ತು ಆಡಿನ ಮಾಂಸ ಇವು ಪಿತೃಗಳಿಗೆ ಅನಂತ ತೃಪ್ತಿಯನ್ನು ನೀಡುತ್ತವೆಯೆಂದು ಹೇಳುತ್ತಾರೆ.

13088011a ಗಾಥಾಶ್ಚಾಪ್ಯತ್ರ ಗಾಯಂತಿ ಪಿತೃಗೀತಾ ಯುಧಿಷ್ಠಿರ|

13088011c ಸನತ್ಕುಮಾರೋ ಭಗವಾನ್ ಪುರಾ ಮಯ್ಯಭ್ಯಭಾಷತ||

ಯುಧಿಷ್ಠಿರ! ಇದಕ್ಕೆ ಸಂಬಂಧಿಸಿದಂತೆ ಪಿತೃಗೀತೆಯನ್ನು ಉದಾಹರಿಸುತ್ತಾರೆ. ಇದನ್ನು ಹಿಂದೆ ಭಗವಾನ್ ಸನತ್ಕುಮಾರನು ನನಗೆ ಹೇಳಿದ್ದನು[7]:

13088012a ಅಪಿ ನಃ ಸ ಕುಲೇ ಜಾಯಾದ್ಯೋ ನೋ ದದ್ಯಾತ್ತ್ರಯೋದಶೀಮ್|

13088012c ಮಘಾಸು ಸರ್ಪಿಷಾ ಯುಕ್ತಂ ಪಾಯಸಂ ದಕ್ಷಿಣಾಯನೇ||

“ನಮ್ಮ ಕುಲದಲ್ಲಿ ನಮ್ಮ ಪ್ರೀತ್ಯರ್ಥವಾಗಿ ದಕ್ಷಿಣಾಯನದಲ್ಲಿ ಭಾದ್ರಪದ ಬಹುಳದಲ್ಲಿ ಮಖಾನಕ್ಷತ್ರದಿಂದ ಯುಕ್ತವಾಗಿರುವ ತ್ರಯೋದಶಿಯಂದು ಘೃತಯುಕ್ತವಾದ ಪಾಯಸವನ್ನು ಕೊಡುವವನು ಹುಟ್ಟುವನೇ?

13088013a ಆಜೇನ ವಾಪಿ ಲೌಹೇನ ಮಘಾಸ್ವೇವ ಯತವ್ರತಃ|

13088013c ಹಸ್ತಿಚ್ಚಾಯಾಸು ವಿಧಿವತ್ಕರ್ಣವ್ಯಜನವೀಜಿತಮ್||

ಮಖಾನಕ್ಷತ್ರಯುಕ್ತವಾದ ದಿನದಲ್ಲಿ ಗಜಚ್ಛಾಯಾಪುಣ್ಯಕಾಲ[8]ದಲ್ಲಿ ವ್ಯಜನರೂಪವಾದ ಆನೆಯ ಕಿವಿಗಳಿಂದ ಗಾಳಿಯು ಬೀಸಲ್ಪಡುತ್ತಿರುವಾಗ ಆಡಿನ ಕೆಂಪು ಮಾಂಸವನ್ನು ನಮ್ಮ ಪ್ರೀತ್ಯರ್ಥವಾಗಿ ಅರ್ಪಿಸುವವನು ಹುಟ್ಟುವನೇ?

13088014a ಏಷ್ಟವ್ಯಾ ಬಹವಃ ಪುತ್ರಾ ಯದ್ಯೇಕೋಽಪಿ ಗಯಾಂ ವ್ರಜೇತ್|

13088014c ಯತ್ರಾಸೌ ಪ್ರಥಿತೋ ಲೋಕೇಷ್ವಕ್ಷಯ್ಯಕರಣೋ ವಟಃ||

ಒಬ್ಬನಾದರೂ ಗಯೆಗೆ ಹೋಗಿಯಾನು ಎಂದು ಅನೇಕ ಪುತ್ರರನ್ನು ಬಯಸಬೇಕು. ಅಲ್ಲಿ ಲೋಕಗಳಲ್ಲಿಯೇ ಪ್ರಥಿತವಾದ ಶ್ರಾದ್ಧವನ್ನು ಅಕ್ಷಯವನ್ನಾಗಿ ಮಾಡಿಸುವ ವಟವೃಕ್ಷವಿದೆ.

13088015a ಆಪೋ ಮೂಲಂ ಫಲಂ ಮಾಂಸಮನ್ನಂ ವಾಪಿ ಪಿತೃಕ್ಷಯೇ|

13088015c ಯತ್ಕಿಂ ಚಿನ್ಮಧುಸಂಮಿಶ್ರಂ ತದಾನಂತ್ಯಾಯ ಕಲ್ಪತೇ||

ಪಿತೃಕ್ಷಯದಲ್ಲಿ ನೀರು, ಗೆಡ್ಡೆ-ಗೆಣಸುಗಳು, ಫಲ, ಮಾಂಸ, ಅನ್ನ ಇವುಗಳಲ್ಲಿಯಾವುದನಾದರೂ ಜೇನುತುಪ್ಪದೊಂಡನೆ ಸೇರಿಸಿ ಪಿತೃಗಳ ತೃಪ್ಯರ್ಥವಾಗಿ ಸಮರ್ಪಿಸಿದರೆ ಅದು ಅವರಿಗೆ ಅನಂತಕಾಲದವರೆಗೂ ತೃಪ್ತಿಯನ್ನು ನೀಡುತ್ತದೆ.””

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಶ್ರಾದ್ಧಕಲ್ಪೇ ಅಷ್ಟಾಶೀತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಶ್ರಾದ್ಧಕಲ್ಪ ಎನ್ನುವ ಎಂಭತ್ತೆಂಟನೇ ಅಧ್ಯಾಯವು.

Top View Of Purple Lupine Flowers In Vase Isolated On White Background... Stock Photo, Picture And Royalty Free Image. Image 57319617.

[1] ಕೆಂಬತ್ತ (ಭಾರತ ದರ್ಶನ).

2] ಈ ಶ್ಲೋಕವನ್ನೂ ಸೇರಿಸಿ ಮುಂದಿನ ಐದು ಶ್ಲೋಕಗಳು ಗೀತಾ ಪ್ರೆಸ್ ಪ್ರಕಾಶನದಲ್ಲಿ ಇಲ್ಲ. ಆದರೆ ಇವು ಭಾರತ ದರ್ಶನ ಪ್ರಕಾಶನದಲ್ಲಿದೆ.[3] ಪಕ್ಷಿಯ ಮಾಂಸ ಎಂದರ್ಥ. ಭಾರತ ದರ್ಶನದಲ್ಲಿ ಶಾಕುಲೇನ ಅರ್ಥಾತ್ ಕೆಂಪುಮೀನು ಎಂಬ ಪಾಠಾಂತರವಿದೆ.

[4] ಕಾಡು ಹಸು

[5] ಗೋಸಂಬಂಧವಾದ ಹಾಲು-ಮೊಸರು-ತುಪ್ಪಗಳು (ಭಾರತ ದರ್ಶನ).

[6] ಪಿತೃಗಳು ಮರಣಹೊಂದಿದ ತಿಥಿ (ಭಾರತ ದರ್ಶನ).

[7] ಭೀಷ್ಮ ಮತ್ತು ಸನತ್ಕುಮಾರರ ಸಂಭಾಷಣೆಯು ಮುಂದೆ ಹರಿವಂಶದ ಹರಿವಂಶಪರ್ವದಲ್ಲಿ ಶ್ರಾದ್ಧಕಲ್ಪದಲ್ಲಿ ಪುನಃ ಬರುತ್ತದೆ.

[8] ಪ್ರೇತಪಕ್ಷೇ ತ್ರಯೋದಶ್ಯಾಂ ಮಘಾಸ್ವಿಂದುಃ ಕರೇ ರವಿಃ| ಪ್ರೇತಪಕ್ಷ (ಭಾದ್ರಪದ ಕೃಷ್ಣಪಕ್ಷ) ದ ತ್ರಯೋದಶಿಯಲ್ಲಿ ಚಂದ್ರನು ಮಖಾ ನಕ್ಷತ್ರದಲ್ಲಿಯೂ ಸೂರ್ಯನು ಹಸ್ತಾನಕ್ಷತ್ರದಲ್ಲಿಯೂ ಇರುವಾಗ ಗಜಚ್ಛಾಯಾ ಎಂಬ ಪುಣ್ಯಕಾಲವು ಉದಯವಾಗುತ್ತದೆ (ಭಾರತ ದರ್ಶನ).

Comments are closed.